Wednesday, January 31, 2018

ರಾಮನಂತಹ ಮಗನಿದ್ದಾಗಲೇ ದುಃಖ ತಪ್ಪಲಿಲ್ಲ...

ಸ್ವಾಮಿ ಅನುಭವಾನಂದ ಸರಸ್ವತಿಗಳು ಆಗಾಗ ಹೇಳುತ್ತಿರುತ್ತಾರೆ. ಅವರ ಪ್ರವಚನಗಳನ್ನು ಕೇಳಲು ಬರುವ ಜನ ಸದಾ ಹೇಳಿಕೊಳ್ಳುವ ಕಿರಿಕಿರಿ, ತೋಡಿಕೊಳ್ಳುವ ದುಃಖ ಯಾರ ಬಗ್ಗೆ ಅಂದರೆ - ಮಕ್ಕಳ ಬಗ್ಗೆ! ಮಕ್ಕಳು ಅಂದರೆ ಮಗ, ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳು ಎಲ್ಲರೂ ಬಂದರು ಅದರೊಳಗೆ.

ಮಕ್ಕಳು ಅದೆಷ್ಟೇ ವಯಸ್ಸಿನವರಿರಲಿ, ಅದೆಷ್ಟೇ ಒಳ್ಳೆಯವರಿರಲಿ ಅಥವಾ ಕೆಟ್ಟವರಿರಲಿ, ತಂದೆತಾಯಿಗಳ ಆಕ್ಷೇಪಣೆಗಳೇ ಮುಗಿಯುವದಿಲ್ಲ. ಮಕ್ಕಳ ಬಗ್ಗೆ ಹೇಳಿಕೊಂಡು, ‘ಸ್ವಾಮೀಜಿ, ಮಕ್ಕಳು ಹೀಗಿದ್ದಾರೆ. ಹಾಗಿದ್ದಾರೆ. ಹಾಗೆ ಮಾಡುತ್ತಾರೆ. ಹೀಗೆ ಮಾಡುತ್ತಾರೆ. ಮನಸ್ಸಿಗೆ ನೆಮ್ಮದಿಯಿಲ್ಲ. ಪರಿಹಾರ ಸೂಚಿಸಿ,’ ಎಂದು ದುಃಖಿಸಿ, ಪರಿಹಾರ ಬಯಸುತ್ತಾರಂತೆ.

ಸ್ವಾಮೀಜಿ ಅಂತಹ ಭಕ್ತಾದಿಗಳಿಗೆ ಒಂದು ಕಥೆ ಹೇಳುತ್ತಾರೆ. ಅದರ ಮೂಲಕ ನೀತಿಪಾಠ ಮಾಡುತ್ತಾರೆ.

ರಾಮಾಯಣದ ದಶರಥ ಮಹಾರಾಜನಿಗೆ ಮಕ್ಕಳಿರಲಿಲ್ಲ. ಆದರೆ ಆತ ಸುಮ್ಮನೆ ಕೂಡಲಿಲ್ಲ. ಇಲ್ಲದ ಇರುವೆ ಬಿಟ್ಟುಕೊಂಡ. ಕಂಡಕಂಡ ಋಷಿಮುನಿಗಳನ್ನು ನೋಡಿದ. ಅವರನ್ನು ಕಾಡಿದ, ಬೇಡಿದ. ಅವರು ಹೇಳಿದರು - 'ಹೋಗಿ ಪುತ್ರಕಾಮೇಷ್ಟಿ ಯಾಗ ಮಾಡು. ಮಕ್ಕಳಾಗುತ್ತವೆ.' ಏನೇನೋ ತೊಂದರೆ ತೆಗೆದುಕೊಂಡು ಪುತ್ರಕಾಮೇಷ್ಟಿ ಯಾಗ ಮಾಡಿದ. ಅದರಂತೆ ಮೂವರು ಪತ್ನಿಯರಿಗೂ ಮಕ್ಕಳಾದವು. ಅವೂ ಎಂತಹ ಮಕ್ಕಳು ಅಂತೀರಿ? ದೈವಸ್ವರೂಪಿ ಮಕ್ಕಳು. ಹಿರಿಯ ಮಗನಾದ ರಾಮನಂತೂ ದೇವರ ಅವತಾರ. ಅದು ದಶರಥನಿಗೆ ಆಗ ಗೊತ್ತಿರಲಿಕ್ಕಿಲ್ಲ. ಆದರೆ ಭಗವಾನ್ ವಿಷ್ಣು ಖುದ್ದಾಗಿ ರಾಮನ ಅವತಾರದಲ್ಲಿ ಧರೆಗಿಳಿದಿದ್ದ. ದಶರಥನ ಮಗನಾಗಿ ಜನಿಸಿದ್ದ.

ಮುಂದೇನಾಯಿತು ಅಂತ ಗೊತ್ತೇ ಇದೆ. ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ದಶರಥ ನಿರ್ಧರಿಸಿದ. ಪಟ್ಟಾಭಿಷೇಕದ ಹಿಂದಿನ ದಿನ ಕಿರಿಯ ಪತ್ನಿ ಕೈಕೇಯಿ ರಗಳೆ ತೆಗೆದಳು. ಅವಳ ಮಗನಾದ ಭರತನಿಗೆ ಪಟ್ಟ ಕಟ್ಟುವಂತೆ ಮತ್ತು ರಾಮನನ್ನು ಕಾಡಿಗೆ ಅಟ್ಟುವಂತೆ ದಶರಥನಿಗೆ ಗಂಟು ಬಿದ್ದಳು. ದಶರಥ ಹಿಂದೊಮ್ಮೆ ಆಕೆಗೆ ಒಂದು ಭಾಷೆ ಕೊಟ್ಟಿದ್ದ. ಅದನ್ನು ನೆನಪು ಮಾಡಿಕೊಟ್ಟಳು. ದಶರಥ ಮಾನಸಿಕವಾಗಿ ಜರ್ಜರಿತನಾಗಿಹೋದ. ಹಾಸಿಗೆ ಹಿಡಿದುಬಿಟ್ಟ. ಒಂದು ಕಡೆ ಹಿರಿಯ ಮತ್ತು ಪ್ರೀತಿಪಾತ್ರನಾದ ಮಗನಿಗೆ ಪಟ್ಟಕಟ್ಟುವಾಸೆ. ಇನ್ನೊಂದು ಕಡೆ ಕೈಕೇಯಿಗೆ ವಚನ ಕೊಟ್ಟಿದ್ದಾನೆ. ವಚನ ಪಾಲಿಸಲಿಲ್ಲ ಅಂದರೆ ವಚನಭ್ರಷ್ಟನಾಗುವ ಆತಂಕ. ಅನಾರೋಗ್ಯಕ್ಕೆ ಮತ್ತೇನು ಕಾರಣಬೇಕು?

ರಾಮನಿಗೆ ವಿಷಯ ತಿಳಿಯಿತು. ತಂದೆ ಚಿಕ್ಕಮ್ಮನಿಗೆ ಕೊಟ್ಟಿದ್ದ ವಚನವನ್ನು ಈಡೇರಿಸಲು ಮುಂದಾದ. ಪಟ್ಟವನ್ನು ತ್ಯಜಿಸಿದ. ಕಾಡಿಗೆ ಹೋಗಲು ಸಿದ್ಧನಾದ. ದಶರಥ ಮಹಾರಾಜ ಮತ್ತೂ ದುಃಖಿತನಾದ. ತಾನು ವಚನಭ್ರಷ್ಟನಾದರೂ ಚಿಂತೆಯಿಲ್ಲ, ರಾಮ ಮಾತ್ರ ಕಾಡಿಗೆ ಹೋಗಬಾರದು ಎಂದು ಪರಿಪರಿಯಾಗಿ ರಾಮನನ್ನು ವಿನಂತಿಸಿಕೊಂಡ. ರಾಮ ತಂದೆಗೆ ಏನೋ ಒಂದು ರೀತಿ ಸಮಾಧಾನ ಹೇಳಿ ವನವಾಸಕ್ಕೆ ಹೋಗೇಬಿಟ್ಟ. ಪುತ್ರನ ಅಗಲುವಿಕೆಯಿಂದ ಮತ್ತೂ ದುಃಖಿತನಾದ ದಶರಥನ ಆರೋಗ್ಯ ಜಾಸ್ತಿ ಹಾಳಾಗಿ ಆತ ದೇವರಪಾದ ಸೇರಿಕೊಂಡ.

ಹೀಗೆ ಕೊನೆಗೆ ಪುತ್ರನ ಮೇಲಿನ ಅತಿಯಾದ ಪಾಶದಿಂದಲೇ ದಶರಥ ಮರಣ ಹೊಂದಿದ. ಅದೆಷ್ಟು ಹಂಬಲಿಸಿ, ಅದೆಷ್ಟು ಕಷ್ಟಪಟ್ಟು, ಅದೇನೇನೋ ಯಾಗ ಮಾಡಿ ರಾಮನಂತಹ ಮಗನನ್ನು ದಶರಥ ಪಡೆದಿದ್ದ. ಆದರೆ ಕೊನೆಗೆ ಅತ್ಯಂತ ಹೆಚ್ಚಿನ ದುಃಖ ರಾಮನ ಮೂಲಕವೇ ಬಂದಿದ್ದು ವಿಪರ್ಯಾಸ. ರಾಮ ಬೇಕಂತಲೇ ದುಃಖ ಕೊಟ್ಟ ಅಂತಲ್ಲ. ದಶರಥನ ಭಾಗ್ಯದಲ್ಲಿರುವ ದುಃಖ ರಾಮನ ಮೂಲಕ ಬಂತು. ರಾಮ ಕಾರಣನಿಮಿತ್ತ ಮಾತ್ರ.

ದಶರಥ ಹೇಳಿದಂತೆ ಕೇಳಿ ರಾಮ ವನವಾಸಕ್ಕೆ ಹೋಗುವ ನಿರ್ಧಾರ ಬದಲಿಸಿ ರಾಜ್ಯದಲ್ಲೇ ಉಳಿದಿದ್ದರೆ ಏನಾಗುತ್ತಿತ್ತು? ತಾತ್ಕಾಲಿಕವಾಗಿ ದಶರಥನ ಸಂಕಟ ಕಮ್ಮಿಯಾಗುತ್ತಿತ್ತು. ಮಗ ಕಣ್ಣೆದುರೇ ಇದ್ದಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತಿದ್ದನೇನೋ. ಆದರೆ ಕೈಕೇಯಿಗೆ ಕೊಟ್ಟ ವಚನಕ್ಕೆ ಕೈಯೆತ್ತಿ ವಚನಭ್ರಷ್ಟನಾದ ಪಾಪಪ್ರಜ್ಞೆ ಕಾಡುತ್ತಿತ್ತು. ಅದರ ಕೊರಗು ಹೆಚ್ಚಾಗಿ ಮತ್ತೇನೋ ಆಗುತ್ತಿತ್ತು. ತಂದೆ ದಶರಥ ವಚನಭ್ರಷ್ಟನಾಗುವ ಮಹಾಪಾಪದಿಂದ ಪಾರಾಗಲಿ ಎಂದು ಆಶಿಸಿ ವನವಾಸಕ್ಕೆ ಹೋಗುವದೇ ಸರಿಯಾದ ನಿರ್ಧಾರವೆಂದುಕೊಂಡ ಪುರುಷೋತ್ತಮ ರಾಮ ತಂದೆ ಅದೆಷ್ಟೇ ಗೋಗರೆದರೂ ಹಿಂತಿರುಗಿ ನೋಡದೇ ಕಾಡಿಗೆ ಹೋಗಿಬಿಟ್ಟ.

ದೇವರಾದ ರಾಮನಂತಹ ಮಗನಿದ್ದಾಗಲೂ ತಂದೆಯಾದ ದಶರಥನಿಗೆ ಮಗನಿಂದ ದುಃಖ ತಪ್ಪಲಿಲ್ಲ. ದೇವರ ಅವತಾರವಾದ ಮಗನ ಮೂಲಕವೇ ವಿಧಿ ಕರ್ಮಫಲವನ್ನು ಉಣ್ಣಿಸಿತು.

ಇನ್ನು ನಿಮ್ಮ ಮಕ್ಕಳು. ಸಾಧಾರಣ ಹುಲುಮಾನವರು. ದೇವರಲ್ಲ. ಅವರಿಂದ ದುಃಖ ಬಂದರೆ ನೀವೇಕೆ ಕೊರಗುವಿರಿ? ನಿಮ್ಮ ಕರ್ಮದಲ್ಲಿ ಹಾಗಾಗಬೇಕೆಂದಿದ್ದರೆ ತಪ್ಪಿಸಲಾಗುವದಿಲ್ಲ. ಮಕ್ಕಳು ನಿಮಿತ್ತ ಮಾತ್ರ. ಹಾಗಾಗಿ ಮಕ್ಕಳ ಮೇಲೆ ಅದೆಷ್ಟೇ ವ್ಯಾಮೋಹವಿದ್ದರೂ, ಮುಂದೊಂದು ದಿನ ಅವರ ಕಾರಣದಿಂದ ದುಃಖ ಉಂಟಾದರೆ ದಶರಥನ ಕಥೆ ನೆನಪುಮಾಡಿಕೊಳ್ಳಿ. ಮಕ್ಕಳನ್ನು ಪಡೆಯಲು ನೀವೂ ಅಷ್ಟೇ ಕಸರತ್ತು ಮಾಡಿರಬಹುದು. ಇವತ್ತಿನ ಚಿತ್ರವಿಚಿತ್ರ ರೀತಿಯಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ವಿಧಾನಗಳು ಯಾವ ಪುತ್ರಕಾಮೇಷ್ಟಿ ಯಾಗಕ್ಕೂ ಕಮ್ಮಿಯಿಲ್ಲ. ನಂತರ ೨೦-೨೫ ವರ್ಷಗಳ ಕಾಲ ಏನೇನೋ ತೊಂದರೆಯನ್ನು ಅನುಭವಿಸಿ ಮಕ್ಕಳನ್ನು ಪೋಷಿಸಿರಬಹುದು. ಇಷ್ಟೆಲ್ಲಾ ಆದ ಮೇಲೂ ಮಕ್ಕಳಿಂದ ದುಃಖ ಉಂಟಾದರೆ ‘ದೇವರನ್ನೇ ಮಗನಾಗಿ ಪಡೆದ ದಶರಥನ ಕೊನೆಯ ದುಃಖ ಮಗನ ಮೂಲಕವೇ ಬಂತು. ನಮ್ಮದೇನು ಮಹಾ?’ ಅಂದುಕೊಂಡು ಸಮಾಧಾನ ಮಾಡಿಕೊಳ್ಳಿ.

ಆಧಾರ: ಶ್ರೀ ಅನುಭವಾನಂದ ಸರಸ್ವತಿಗಳ ಪ್ರವಚನ.

2 comments:

sunaath said...

ಸರಿಯಾದ ಮಾತು. ಯಾರಿಂದ ದುಃಖ ಬರಬೇಕೆಂದು, ಸಾವು ಬರಬೇಕೆಂದು ನಮ್ಮ ನಶೀಬದಲ್ಲಿ ಇರುತ್ತದೆಯೋ, ಅದನ್ನು ತಪ್ಪಿಸಲಾಗುವುದಿಲ್ಲ. ಯಾದವರ ಸಾವು ಒನಕೆಯಿಂದ ಆಯಿತು ಎಂದು ಕೇಳುತ್ತೇವೆಯಲ್ಲವೆ?

Mahesh Hegade said...

ಧನ್ಯವಾದಗಳು ಸುನಾಥ್ ಸರ್.