Sunday, October 14, 2018

ಒಂದು ಡೆಬಿಟ್ ಕಾರ್ಡ್ ಕಥೆ

ಭಾರತ ದೇಶ ತುಂಬಾ ವೇಗವಾಗಿ ಮುಂದುವರೆಯುತ್ತಿದೆ. ಇಪ್ಪತ್ತು ವರ್ಷಕ್ಕೂ ಹಿಂದೆ ದೇಶ ಬಿಟ್ಟು ಬಂದಂತಹ ನಮ್ಮಂತಹ ಬುಡ್ಡಾ NRI  ಮಂದಿ ಅಲ್ಲಿನ ವೇಗಕ್ಕೆ, ಬದಲಾವಣೆಗಳಿಗೆ ಕರೆಂಟ್ ಹೊಡೆದ ಕಬ್ಬೆಕ್ಕಿನಂತೆ ಕಂಗಾಲಾಗಿಬಿಡುತ್ತೇವೆ. ಅಲ್ಲೆಲ್ಲ ಈಗ ತುಂಬಾ ಫಾಸ್ಟ್ ಲೈಫ್. ಕೈಯಲ್ಲೊಂದು ಸ್ಮಾರ್ಟ್ ಫೋನ್, ಕಿಸೆಯಲ್ಲಿ ಡೆಬಿಟ್ ಕಾರ್ಡ್, online banking ಇರಲಿಲ್ಲ ಅಂದರೆ ಭಾರತದಲ್ಲಿ ಇಳಿದಾಕ್ಷಣ ನೀವು ಥೇಟ್ ಕರೆಂಟ್ ಹೊಡೆದ ಕಬ್ಬೇಕ್ಕೆ. ಖರೇ ಮಂಗ್ಯಾ.

ಡೆಬಿಟ್ ಕಾರ್ಡ್ ಮತ್ತು online banking ಅವಶ್ಯಕತೆ ಎರಡು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ನಮ್ಮ ಅನೇಕ ಸ್ಥಳೀಯ, ಅಂದರೆ ಅಮೇರಿಕಾ ಮೂಲದ, ಕ್ರೆಡಿಟ್ ಕಾರ್ಡುಗಳು ಭಾರತದ ವ್ಯವಹಾರಗಳಿಗೆ ಪಾಸ್ ಆಗುತ್ತಲೇ ಇರಲಿಲ್ಲ. ಪಾಸಾದರೂ ಎಲ್ಲಿಯಾದರೋ fraud ವ್ಯವಹಾರ ಇರಬಹುದೇನೋ ಅಂತ ಇಲ್ಲಿನ ಬ್ಯಾಂಕುಗಳು ಕೊಕ್ಕೆ ಹಾಕಿಟ್ಟಿರುತ್ತಿದ್ದವು. ಇಲ್ಲಿನ ಬ್ಯಾಂಕುಗಳಿಗೆ ಫೋನ್ ಮಾಡಿ, 'ಸ್ವಾಮೀ, ಭಾರತದಲ್ಲಿ ಕೊಂಚ ಖರ್ಚಿದೆ. ನೀವು ಹಾಕಿಟ್ಟಿರುವ ಕೊಕ್ಕೆ ಕೊಂಚ ಸರಿಸಿ, ವ್ಯವಹಾರಕ್ಕೆ ಅನುವು ಮಾಡಿಕೊಟ್ಟರೆ ಆಭಾರಿ,' ಅಂದು ಕೊಕ್ಕೆ ತೆಗೆಸಿಕೊಳ್ಳಬೇಕು. ಇವರು ಇಲ್ಲಿ ಕೊಕ್ಕೆ ತೆಗಿಯುವ ತನಕ ಅಲ್ಲಿರುವ ಡೀಲ್ ಮುಗಿದಿರುತ್ತವೆ. ವಿಮಾನ ದರಗಳು ಏರಿರುತ್ತವೆ, ಬೇಕಾದ ಪುಸ್ತಕಗಳ ಸ್ಟಾಕ್ ಮುಗಿದಿರುತ್ತದೆ. ಇಷ್ಟಾದ ಮೇಲೂ ವಿದೇಶಿ ವಿನಿಮಯದ ದರ ಬ್ಯಾಂಕಿಗೆ ಅನುಕೂಲವಾಗಿರುವಂತೆ ನೋಡಿಕೊಂಡು ನಮಗೆ ಟೊಪ್ಪಿಗೆ ಹಾಕಿರುತ್ತಾರೆ. ಮೇಲಿಂದ ವಿದೇಶಿ ವ್ಯವಹಾರ ಎಂದು ಹೆಚ್ಚಿನ ಶುಲ್ಕ ಬೇರೆ. ಅದು ಈಗ ಎಷ್ಟೋ ಕಮ್ಮಿಯಾಗಿದೆ. ಎಷ್ಟೋ ವರ್ಷಗಳ ಕಾಲ ಇಲ್ಲಿಂದ ರೈಲ್ವೆ ಟಿಕೆಟ್ ಬುಕ್ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಭಾರತದ ಸಂಬಂಧಿಗಳನ್ನು ಹಿಡಿದು, ಅವರಿಗೆ ತ್ರಾಸು ಕೊಟ್ಟು ಬುಕ್ ಮಾಡಿಸಿಕೊಳ್ಳಬೇಕಾಗುತ್ತಿತ್ತು.

ಇದೆಲ್ಲಾ ಅನುಭವಿಸಿದ ಮೇಲೆ ಅನ್ನಿಸಿದ್ದು ನಾವೂ ಒಂದು ಭಾರತೀಯ ಡೆಬಿಟ್ ಕಾರ್ಡ್ ಮತ್ತು online banking ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು. ಸ್ಥಳೀಯ ಖರ್ಚುಗಳಿಗೆ ಅನುಕೂಲವಾಗುತ್ತದೆ ಎನ್ನುವ ವಿಚಾರ.

ಹಿಂದಿನ ವರ್ಷ ಡೆಬಿಟ್ ಕಾರ್ಡ್ ಮಾಡಿಸಿಕೊಂಡೆ. ನಾನು ಜೀವನದಲ್ಲಿ ಕಂಡ ಮೊತ್ತ ಮೊದಲ ಬ್ಯಾಂಕ್ ಅಂದರೆ ಧಾರವಾಡದ ಮಾಳಮಡ್ಡಿಯ ಕೆನರಾ ಬ್ಯಾಂಕ್. ಅಲ್ಲಿಯೇ ಹೋದೆ. ಜೊತೆಗೆ ತಂದೆಯವರೂ ಇದ್ದರು. ಅವರು ಆ ಬ್ಯಾಂಕಿನ ಶಾಖೆಯ ಅತಿ ಹಿರಿಯ ಗ್ರಾಹಕ ಇರಬಹುದೇನೋ. ಅವರಿಗೆ ಈಗ ೮೪ ವರ್ಷ. ಸರಿ ಸುಮಾರು ಅರವತ್ನಾಲ್ಕು ವರ್ಷಗಳಿಂದ ಧಾರವಾಡದಲ್ಲಿ ಇದ್ದಾರೆ. ಮಾಳಮಡ್ಡಿಯ ಕೆನರಾ ಬ್ಯಾಂಕ್ ತೆರದಾಗಿನಿಂದ ಅದರ ಖಾಯಂ ಗ್ರಾಹಕರು. ಮಾಳಮಡ್ಡಿಯ ಕೆನರಾ ಬ್ಯಾಂಕ್ ಮಂದಿ ಸಹ ಅವರನ್ನೂ ಅಷ್ಟೇ ಒಳ್ಳೆ ರೀತಿಯಲ್ಲಿ ನೋಡಿಕೊಂಡು preferred customer ಅನ್ನುವ ಹಾಗೆ ನಡೆಸಿಕೊಂಡಿದ್ದಾರೆ. ಹಾಗಾಗಿ ಮಾಳಮಡ್ಡಿ ಕೆನರಾ ಬ್ಯಾಂಕ್ ಜೊತೆ ಅದೇನೋ ಅವಿನಾಭಾವ ಸಂಬಂಧ.

ಹೋದೆ. ಮ್ಯಾನೇಜರ್ ಮೇಡಂ ಸೀದಾ ಚೇಂಬರಿನಲ್ಲೇ ಕೂಡಿಸಿಕೊಂಡು, ತಾವೇ ಎಲ್ಲ ಅರ್ಜಿ ತುಂಬಿ, ಸಹಿ ತೆಗೆದುಕೊಂಡು, ಟೇಬಲ್ ಮೇಲಿರುವ ಬೆಲ್ ಕಿರ್ರನೆ ಬಾರಿಸಿ, ಚಪರಾಸಿಯನ್ನು ಕರೆದು, 'ಡೆಬಿಟ್ ಕಾರ್ಡ್. ಹೆಗಡೆ ಸರ್ ಅಕೌಂಟಿಗೆ. ಅರ್ಜೆಂಟ್ ಮಾಡಲಿಕ್ಕೆ ಹೇಳು,' ಎಂದು ಹೇಳಿ, 'ಹೇಳಿ ಸರ್. ಮತ್ತೇನು ಮಾಡಿಕೊಡೋಣ?' ಅಂದಾಗ ತಂದೆಯವರು ನನ್ನ ಕಡೆ ನೋಡಿ, 'ಹೆಂಗೆ? ನೋಡು ಹೇಗಿದೆ ನಮಗೆ ಸಿಗುವ customer service??' ಎಂದು ಹೆಮ್ಮೆಯಿಂದ ಕೇಳಿದಂತಾಯಿತು. 'ಶಭಾಷ್!' ಅಂದುಕೊಂಡೆ. ನಾವು ಮ್ಯಾನೇಜರ್ ರೂಮಿನ ತಣ್ಣನೆ AC ಕೋಣೆಯಲ್ಲಿ ಕುಳಿತು ಮ್ಯಾನೇಜರ್ ಜೊತೆ ಮಾತಾಡುತ್ತ ಕುಳಿತಾಗ ನಮ್ಮ ಡೆಬಿಟ್ ಕಾರ್ಡ್ ತಯಾರಾಗುತ್ತಿತ್ತು. ಉಳಿದ ಎಷ್ಟೋ ಗ್ರಾಹಕರು ವಿವಿಧ ಸೇವೆಗಳಿಗಾಗಿ ಅತ್ತಿಂದಿತ್ತ ಓಡಾಡುತ್ತ, ಬೈಯುತ್ತ, ಬೈಸಿಕೊಳ್ಳುತ್ತ, ಬೆವರು ಸುರಿಸುತ್ತ ಹೈರಾಣಾಗುತ್ತಿದ್ದರು. ನಮ್ಮ ನಸೀಬ್ ಒಳ್ಳೆದಿತ್ತು.

ಡೆಬಿಟ್ ಕಾರ್ಡ್ ಬಂತು. online banking ಸಹ activate ಮಾಡಿದ್ದೇವೆ. ಮನೆಗೆ ಹೋಗಿ ಸೆಟಪ್ ಮಾಡಿಕೊಳ್ಳಿ ಅಂದರು. ಧನ್ಯವಾದ ಅರ್ಪಿಸಿ ಬಂದೆವು.

ರೈಲ್ವೆ ಸ್ಟೇಷನ್ ಮುಂದಿರುವ ಏಟಿಎಂ ನಲ್ಲಿ ರೊಕ್ಕ ತೆಗೆದು ಡೆಬಿಟ್ ಕಾರ್ಡಿನ ಶುಭಾರಂಭ ಮಾಡಿಯಾಯಿತು. ಆನ್ಲೈನ್ ಬ್ಯಾಂಕಿಂಗ್ ಕೂಡ ಕೆಲಸ ಮಾಡಿತು. ಆದರೆ transaction enable ಆಗಿರಲಿಲ್ಲ. ಎಷ್ಟು ರೊಕ್ಕ ಇದೆ ಎಂದು ತೋರಿಸುತ್ತಿತ್ತೇ ವಿನಃ ರೊಕ್ಕವನ್ನು transfer ಮಾಡಲಿಕ್ಕೆ ಆಗುತಿರಲಿಲ್ಲ. ಅರ್ಧಂಬರ್ಧ ಮಾಡಿದ್ದರು ಅಂತ ಕಾಣುತ್ತದೆ. ನಮ್ಮ ಧಾರವಾಡ ಗೋಕರ್ಣಕ್ಕೆ ಜಾಸ್ತಿ ದೂರವಿಲ್ಲ ನೋಡಿ. ಹಾಗಾಗಿ ಹೆಚ್ಚಿನ ಕೆಲಸಗಳೆಲ್ಲ ಗೋಕರ್ಣ ಹಜಾಮತಿ ತರಹದ ಕಾಮಗಾರಿಗಳೇ. ಮೊದಲನೇ ಸಲವೇ ಎಲ್ಲವೂ ಸುಸೂತ್ರವಾಗಿ ಕೆಲಸ ಮಾಡುವದು ಬಹಳ ಕಮ್ಮಿ.

ನಂತರ ಎಲ್ಲೂ ಡೆಬಿಟ್ ಕಾರ್ಡ್ ಉಪಯೋಗಿಸಲಿಲ್ಲ. ವಾಪಸ್ ಬಂದೆ. ಬಂದು ಎಷ್ಟೋ ತಿಂಗಳುಗಳ ಬಳಿಕ ಮತ್ತೆ ಭಾರತದ ಪ್ರವಾಸದ ತಯಾರಿ ಶುರುವಾಯಿತು. ಡೆಬಿಟ್ ಕಾರ್ಡ್ ಉಪಯೋಗಿಸೋಣ ಅಂತ ವಿಚಾರ ಮಾಡಿದೆ. ಆನ್ಲೈನ್ ಬ್ಯಾಂಕಿಂಗ್ ಅಂತೂ ವರ್ಕ್ ಮಾಡುತ್ತಿರಲಿಲ್ಲ. ಮತ್ತೆ ಬ್ಯಾಂಕಿಗೆ ಹೋಗಿ ಸರಿ ಮಾಡಿಸಿಕೊಂಡಿರಲಿಲ್ಲ. ಹೇಗೂ ಡೆಬಿಟ್ ಕಾರ್ಡ್ ಇದೆಯಲ್ಲ. ಸಾಕು. ಅದನ್ನೇ ಉಪಯೋಗಿಸಿಕೊಂಡಿರೋಣ ಅಂತ ಬಿಟ್ಟಿದ್ದೆ.

online shopping ಮಾಡುವದಿತ್ತು. ಡೆಬಿಟ್ ಕಾರ್ಡ್ ವಿವರ ತುಂಬಿ online ವ್ಯವಹಾರ ಮಾಡಿದೆ. OTP ಹಾಕಿ ಎಂದಿತು. OTP !!?? ಏನೂ?? one time password. ನೋಡಿದರೆ OTP ತಂದೆಯವರ ಮೊಬೈಲಿಗೆ ಹೋಗಿತ್ತು. ಅವರೇ ಫೋನ್ ಮಾಡುತ್ತಿದ್ದರೇನೋ. ನನಗೆ ಗಡಿಬಿಡಿ. ಫೋನ್ ಮಾಡಿ, 'OTP ಹೇಳ್ರಿ. ಲಗೂ ಹೇಳ್ರಿ!' ಎಂದು ಗಡಿಬಿಡಿ ಮಾಡಿದೆ. ನಾನೆಷ್ಟೇ ಆತುರಗೇಡಿ ತರಹ ವರ್ತಿಸಿದರೂ ಅವರು ತಣ್ಣಗೇ OTP ಹೇಳಿದರು. ಹಾಕಿದೆ. ಅಬ್ಬಾ! ವರ್ಕ್ ಆಯಿತು.

ಇದೊಳ್ಳೆ ಕಿರಿಕಿರಿ ಆಯಿತಲ್ಲ ಮಾರಾಯರೆ. ನಾನು ಅಮೇರಿಕಾದಲ್ಲಿ ಕುಳಿತು ಡೆಬಿಟ್ ಕಾರ್ಡ್ ಉಪಯೋಗಿಸಿದರೆ OTP ಭಾರತದಲ್ಲಿರುವ ತಂದೆಯವರ ಮೊಬೈಲಿಗೆ ಹೋಗುತ್ತದೆ. ಅದು ಸಹಜವಿತ್ತು ಬಿಡಿ. ಅದು ಜಂಟಿ ಖಾತೆ. ಅವರ ಖಾತೆಗೆ ನಾನು ತಗಲಾಕಿಕೊಂಡಿದ್ದೆ. ಹಾಗಾಗಿ ಮೊಬೈಲ್ ವಿವರ ಎಲ್ಲ ಅವರದ್ದೇ ಇತ್ತು.

'ರೀ, ಪಿತಾಜಿ, ಆ ಮಾಳಮಡ್ಡಿ ಬ್ಯಾಂಕಿಗೆ ಹೋಗಿ ಒಟಿಪಿ ನನ್ನ USA ನಂಬರಿಗೆ ಬರುವ ಹಾಗೆ ಮಾಡಿಸಿಕೊಂಡು ಬನ್ನಿ,' ಎಂದು ಒಂದು ರಿಕ್ವೆಸ್ಟ್ ಇಟ್ಟೆ. ರಿಕ್ವೆಸ್ಟ್ ಕಮ್ಮಿ ಆಜ್ಞೆ ಜಾಸ್ತಿ ಎನ್ನಿ.

ಮುಂದಿನ ಸಲ ಬ್ಯಾಂಕಿಗೆ ಹೋದಾಗ ಮ್ಯಾನೇಜರ್ ಹತ್ತಿರ ವಿನಂತಿ ಮಾಡಿದ್ದಾರೆ. ನನ್ನ USA ನಂಬರಿಗೆ OTP ಬರುವ ಹಾಗೆ ಮಾಡಿಕೊಡಲು ಕೇಳಿದ್ದಾರೆ.

ಅದಕ್ಕೊಂದು ತೊಡಕು. ಅದೇನು ಅಂದರೆ  ಅದು ಡೊಮೆಸ್ಟಿಕ್ ಖಾತೆ. ಭಾರತೀಯ ಪೌರರಿಗೆ ಮಾತ್ರ. ಹಾಗಾಗಿ ಕೇವಲ ಭಾರತದ ನಂಬರುಗಳಿಗೆ ಮಾತ್ರ OTP ಕಳಿಸಬಹುದಂತೆ. NRI ಖಾತೆ ಮಾಡಿಸಿಕೊಂಡರೆ ಮಾತ್ರ ಇಂಟರ್ನ್ಯಾಷನಲ್ ನಂಬರುಗಳಿಗೆ OTP ಕಳಿಸಬಹುದಂತೆ. ಭಾರಿ ಲಾಜಿಕ್. ಆದರೆ ಬರೋಬ್ಬರಿ ಲಾಜಿಕ್.

NRI ಗಳು ಭಾರತೀಯ ಪೌರತ್ವ ಹೊಂದಿರುವ ಜನರೊಂದಿಗೆ ಜಂಟಿಯಾಗಿ ಡೊಮೆಸ್ಟಿಕ್ ಖಾತೆ ಮಾಡಿಕೊಳ್ಳಬಹುದು. ಹಾಗಾಗಿಯೇ ನನಗೆ ತಂದೆಯವರೊಂದಿಗೆ ಜಂಟಿ ಖಾತೆ ಕೊಟ್ಟಿದ್ದು ಮತ್ತು ಡೆಬಿಟ್ ಕಾರ್ಡ್ ಕೊಟ್ಟಿದ್ದು. ಆದರೆ OTP ಮಾತ್ರ ನನ್ನ ನಂಬರಿಗೆ ಕಳಿಸಲಾಗುವದಿಲ್ಲ.

ವಿವರವಂತೂ ತಿಳಿಯಿತು. ಪರಿಹಾರ ಸಿಗಲಿಲ್ಲ.

ಮುಂದಿನ ಎಲ್ಲ ವ್ಯವಹಾರಗಳನ್ನು ಅದೇ ಮಾದರಿಯಲ್ಲಿ ಮಾಡಿದೆ. ಆ ಪ್ರವಾಸದ ಲೋಕಲ್ ವಿಮಾನಯಾನ, ನಾನು ಧಾರವಾಡ ತಲುಪುವ ಸಮಯಕ್ಕೆ ಸರಿಯಾಗಿ ಬಂದು ಬಿದ್ದಿರಬೇಕಾದ ಡಜನ್ ಪುಸ್ತಕಗಳು, ಪ್ಲೇನ್ ಹಾರದಿದ್ದರೆ ಬ್ಯಾಕಪ್ ಅಂತ ಟ್ರೈನ್ ಟಿಕೆಟ್ ಎಲ್ಲವನ್ನೂ ಡೆಬಿಟ್ ಕಾರ್ಡ್ ಉಪಯೋಗಿಸಿಯೇ ಬುಕ್ ಮಾಡಿದೆ. ಇಲ್ಲಿಂದ ಕಂಪ್ಯೂಟರ್ನಲ್ಲಿ ಹಾಕುವದು. ಭಾರತಕ್ಕೆ ಫೋನ್ ಮಾಡಿ, 'OTP ಬಂದಿರಬೇಕು ನೋಡಿ. ಬೇಗ ಹೇಳಿ,' ಎಂದು OTP ಪಡೆದು ಕೆಲಸ ಮುಗಿಸಿಕೊಂಡಿದ್ದು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಮಾದರಿಯಾದರೂ ಕೆಲಸವಾಯಿತು.

ಇಷ್ಟಕ್ಕೇ ಬ್ಯಾಂಕಿಂಗ್ ಕಥೆ ಮುಗಿಯಲಿಲ್ಲ. ಮುಂದೊಂದು ದಿವಸ ನನ್ನ USA ನಂಬರಿಗೇ  OTP ಬರುವ ಹಾಗೆ ಮಾಡಿಕೊಂಡೆ. ಅದೊಂದು ಮಹಾ ಸಂಗ್ರಾಮವೇ ಆಯಿತೆನ್ನಿ. ದೊಡ್ಡ comedy of errors. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ.

Tuesday, July 17, 2018

ಉಳಿದವರು ಕಂಡಂತೆ...

ವಿಶ್ವಾದ್ಯಂತ ಜನರಲ್ಲಿ ಖಿನ್ನತೆ (depression) ಜಾಸ್ತಿಯಾಗುತ್ತಿದೆಯಂತೆ. ಸಾಮಾಜಿಕ ಜಾಲತಾಣಗಳಾದಂತಹ Facebook, Instagram, Twitter, WhatsApp ಇತ್ಯಾದಿಗಳ ವ್ಯಾಪಕ ಬಳಕೆ (ದುರ್ಬಳಕೆ) ಕೂಡ ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಕೆಲ ಸಂಶೋಧಕರು. ಅವರು ಕೊಡುವ ಕಾರಣ ಏನೆಂದರೆ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜನರು ತಮ್ಮ ನಿಜ ಜೀವನವನ್ನು ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಅದೇ ಖಿನ್ನತೆಗೆ ಗುರಿಮಾಡುತ್ತದೆ. ಇಂದೊಂದು ತರಹದ self-inflicted injury. ತಮ್ಮ ಕಾಲ ಮೇಲೆ ತಾವೇ ಕೊಡಲಿಯಿಂದ ಹೊಡೆದುಕೊಂಡಂತೆ.

ಎಲ್ಲರ ಜೀವನದಲ್ಲೂ ಏಳುಬೀಳುಗಳು ಇದ್ದೇ ಇರುತ್ತವೆ. ಸಂಸಾರದಲ್ಲಿ ಇರುವ ಕಾರಣದಿಂದ ಕಿರಿಕಿರಿ, ಲಫಡಾ ಎಲ್ಲ ಇದ್ದೇ ಇರುತ್ತವೆ. ಆದರೆ ಇವನ್ನೆಲ್ಲ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುವದಿಲ್ಲ. ಏನಿದ್ದರೂ ತಮ್ಮ ಜೀವನ ಏಕ್ದಂ ಸೂಪರ್ ಇದೆ ಅನ್ನುವ ಹಾಗೆ ಪೋಸ್ಟ್, ಫೋಟೋ ಹಾಕಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. Always best face and best foot forward. ಒಳಗೆ ಹರಿದು ಜಾಳಿಜಾಳಿಯಾಗಿರುವ ಅಂಡರ್ವೇರ್ ಮತ್ತು ಬನಿಯನ್ ಹಾಕಿದ್ದರೂ ಮೇಲಿಂದ ದುಬಾರಿ ಅರ್ಮಾನಿ ಸೂಟ್ ಹಾಕಿಕೊಂಡ ಮಾದರಿ.

ಉದಾಹರಣೆಗೆ, ಪ್ರೊಫೈಲ್ ಫೋಟೋಗಳ ಮಿಥ್ಯೆ. ಫ್ಯಾಮಿಲಿ ಪ್ಯಾಕ್ ಹೊಟ್ಟೆ ಬಂದಿರುವ ಪುಣ್ಯಾತ್ಮ ಉಸಿರುಗಟ್ಟಿ ಸತ್ತೇಹೋಗುವಂತಾದರೂ ಹೊಟ್ಟೆ ಒಳಗೆಳೆದುಕೊಂಡು ಸಿಕ್ಸ್ ಪ್ಯಾಕ್ ಇದೆಯೇನೋ ಎಂಬಂತೆ ಬಿಂಬಿಸಿಕೊಳ್ಳುವ ವಿಫಲ ಯತ್ನ ಮಾಡುತ್ತಾನೆ. ಬೋಳು ತಲೆ ಬೋಡ ಮತ್ತೇನೋ ಮಾಡುತ್ತಾನೆ. ಕೆಲ ಹೆಂಗಸರು ಇಡೀ ಮುಖ ಮುಚ್ಚುವ ಗಾಗಲ್ ಹಾಕಿರುತ್ತಾರೆ. ಅದರ ಬದಲಿ ಬುರ್ಕಾ ಬೆಟರ್. ಫಿಗರ್ ಕೆಟ್ಟುಹೋದವರು ಮುಖದ ಫೋಟೋ ಹಾಕುತ್ತಾರೆ. ಮುಖ ಸುಟ್ಟುಹೋದವರು ಫಿಗರ್ ಫೋಟೋ ಹಾಕಿಕೊಳ್ಳುತ್ತಾರೆ. ಫೋಟೋ ಶಾಪ್ ಮಾಡುತ್ತಾರೆ. ಒಟ್ಟಿನಲ್ಲಿ ಪೂರ್ತಿ ಮೇಕ್ಅಪ್ ಮಾಡಿಯೇ ಫೇಸ್ಬುಕ್ ಮೇಲೆ ಬಿಟ್ಟಿರುತ್ತಾರೆ.

ಗಂಡ ಹೆಂಡತಿ ಸಂಬಂಧ ಎಕ್ಕುಟ್ಟಿಹೋಗಿರುತ್ತದೆ. ಆದರೂ 20 years of togetherness ಅಂತ ಹಾಕಿಕೊಂಡು ಸಂಭ್ರಮಿಸುತ್ತಾರೆ. ಎಂತಾ ಆದರ್ಶ ದಂಪತಿಗಳು ಎಂದು ನೋಡಿದವರು ಅಂದುಕೊಳ್ಳಬೇಕು. ನೋಡಿದವರು ಹಾಗೇ ಕಲ್ಪಿಸಿಕೊಂಡು ಕೊರಗುತ್ತಾರೆ ಕೂಡ. ಇವರೂ ಅಷ್ಟೇ. ಇನ್ನೊಬ್ಬರನ್ನು ನೋಡಿ ಒಂದೋ ಕೊರಗುತ್ತಾರೆ ಇಲ್ಲ ಕರುಬುತ್ತಾರೆ. ಕೊರಗುವದು (brooding) ಮತ್ತು ಕರುಬುವದು (jealousy) ಎರಡೂ ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿಕಾರಕ.

ಹೀಗೆ ನಮ್ಮ ನಿಜಜೀವನವನ್ನು (ನಾವೇ ಕಲ್ಪಿಸಿಕೊಂಡ) ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಕೆ ಮಾಡಿಕೊಂಡು ಖಿನ್ನತೆಗೊಳಗಾಗುತ್ತೇವೆ.

ನನಗೇ ಆದ ಒಂದು ವಿಚಿತ್ರ ಅನುಭವ ಕೇಳಿ.

ಆ ದಿನ ರವೀಂದ್ರನಾಥ ಟಾಗೋರರ ಬಗ್ಗೆ ಇಂಟರ್ನೆಟ್ ಮೇಲೆ ಏನೋ ಹುಡುಕುತ್ತಿದ್ದೆ. ಯಾಕೋ ಗೊತ್ತಿಲ್ಲ, ಅಂಜಲಿ ಎಂಬ ಹೆಸರು ನೆನಪಾಗಬೇಕೇ?

ಯಾವ ಅಂಜಲಿ?

ಯಾವ ಅಂಜಲಿ ಅಂತ ನನಗೂ ಗೊತ್ತಿಲ್ಲ. ಈಗ ಸುಮಾರು ಮೂರು ವರ್ಷದ ಹಿಂದೆ ಫೇಸ್ಬುಕ್ ಮೇಲೆ ಕಣ್ಣಿಗೆ ಬಿದ್ದ ಹೆಸರು ಅದು. ಅದು ಯಾವ ಆಧಾರದ ಮೇಲೆ ಫೇಸ್ಬುಕ್ ಆಕೆಯ ಪ್ರೊಫೈಲ್ ನನಗೆ ತೋರಿಸುತ್ತಿತ್ತೋ ಗೊತ್ತಿಲ್ಲ. ನಮಗಿಬ್ಬರಿಗೆ ಯಾವ ಸಾಮಾನ್ಯ ಸ್ನೇಹಿತರೂ ಇರಲಿಲ್ಲ. ಯಾವುದೇ ಸಾಮ್ಯತೆ ಇರಲಿಲ್ಲ. ಆದರೂ ಫೇಸ್ಬುಕ್ ಮಾತ್ರ ಆಗಾಗ ಅಂಜಲಿಯ ಪ್ರೊಫೈಲ್ ತೋರಿಸುತ್ತಿತ್ತು. ಬಲಭಾಗದ ಅಂಚಿನಲ್ಲಿ You may know this person ಅಂತ ಬಿಟ್ಟಿ ಸಲಹೆ ಕೊಡುತ್ತದಲ್ಲ? ಆ ಜಾಗದಲ್ಲಿ.

ಕಂಪ್ಯೂಟರ್ ಮುಂದೆ ಸದಾ ಸ್ಥಾಪಿತರಾಗಿರುವ ಜನರಿಗೆ ಇರುವ (ಕೆಟ್ಟ) ಚಾಳಿ ನಮಗೂ ಇತ್ತು. ಅದೇನೆಂದರೆ ಕಂಡಿದ್ದನ್ನೆಲ್ಲ ಗೂಗಲ್ ಒಳಗೆ ತುರುಕಿ ಏನು ಹೊರಬರುತ್ತದೆ ಎಂದು ನೋಡುವದು.

ಈ ಅಂಜಲಿಯ ಪೂರ್ಣ ಹೆಸರನ್ನೂ ಗೂಗಲ್ ಒಳಗೆ ಹಾಕಿ ನೋಡಿದೆ. ಬಂದವಲ್ಲ ಢಾಳಾಗಿ ಒಂದಿಷ್ಟು ಲಿಂಕುಗಳು. ನೋಡಿದರೆ ಆಕೆ ದೊಡ್ಡ ವೃತ್ತಿಪರೆ. ತನ್ನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ವೃತ್ತಿ ಮಾಡಿಕೊಂಡಿರುವಾಕೆ. ಒಳ್ಳೇದು. ಮತ್ತೊಂದಿಷ್ಟು ಲಿಂಕುಗಳು ಎಲ್ಲೋ ಶಾದಿ.ಕಾಂ, ಬರ್ಬಾದಿ.ಕಾಂ ಮಾದರಿಯ ವೈವಾಹಿಕ ವೆಬ್ ಸೈಟುಗಳಾಗಿದ್ದವು. ಅಲ್ಲಿ ಕ್ಲಿಕ್ ಮಾಡಿದರೆ ಮೊದಲು ನೋಂದಣಿ ಮಾಡಿಕೊಳ್ಳಿ ನಂತರ ಆಕೆಯ ವಿವರ ತೋರಿಸುತ್ತೇವೆ ಅಂದರು. ಅದು ಕಾಮನ್. ನಾವು ಅದೆಷ್ಟೇ ಬೇಕಾರ್ (ನಿರುದ್ಯೋಗಿ) ಇದ್ದರೂ ಅಷ್ಟೆಲ್ಲ ಬೇಕಾರ್ ಅಲ್ಲ ತೊಗೊಳ್ಳಿ. ಕೆಟ್ಟ ಕುತೂಹಲಕ್ಕೆ ಎಂದು ಶಾದಿ. ಕಾಂ ನಲ್ಲಿ ರಿಜಿಸ್ಟರ್ ಮಾಡಲೇ? ನಮಗೇನು ಹುಚ್ಚೇ? ಅಷ್ಟೆಲ್ಲಾ ಹಾಪರಲ್ಲ ಬಿಡಿ ನಾವು.

'ಓಹೋ! ಈ ಅಂಜಲಿ ಮೇಡಂ ಇನ್ನೂ ವಿವಾಹವಾಗಿರದ ಮಹಿಳೆ. ಆಗಲೇ expiration date ಸಮೀಪಿಸುತ್ತಿದೆ. ತುರ್ತಾಗಿ ವಿವಾಹವಾಗಬೇಕು ಎಂದು ಹಲವಾರು ವೈವಾಹಿಕ ಜಾಲತಾಣಗಳಲ್ಲಿ ಪ್ರೊಫೈಲ್ ಹಾಕಿದ್ದಾರೆ. ಒಳ್ಳೆದಾಗಲಿ,' ಎಂದು ತಿಳಿದು, ಶುಭ ಹಾರೈಸಿ ಅಷ್ಟಕ್ಕೇ ಬಿಟ್ಟೆ. ಆದರೆ ಫೇಸ್ಬುಕ್ ಮೇಲೆ ಕಂಡಾಗೊಮ್ಮೆ ಪ್ರೊಫೈಲ್ ನೋಡುತ್ತಿದ್ದೆ. ಆಕೆಯೇನೂ ಜಾಸ್ತಿ update ಮಾಡುತ್ತಿರಲಿಲ್ಲ. ಅಥವಾ ನಾನು ಆಕೆಯ  ಫ್ರೆಂಡ್ ಇರದ ಕಾರಣ ನನಗೆ ಆವು ಕಾಣಿಸುತ್ತಿರಲಿಲ್ಲವೋ ಏನೋ. ಯಾರಿಗೆ ಗೊತ್ತು?

೨೦೧೬ ರ ಮಧ್ಯಭಾಗದಲ್ಲಿ ನಾನು ಫೇಸ್ಬುಕ್ಕಿಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಸೋಶಿಯಲ್ ಮೀಡಿಯಾ ಬೋರಾಗಿತ್ತು. ಮೊದಲಿನ ಆಸಕ್ತಿ ಇರಲಿಲ್ಲ. ಎಷ್ಟೋ ದಿನ ಲಾಗಿನ್ ಮಾಡಲಿಲ್ಲ. ಫೇಸ್ಬುಕ್ ಮೇಲೆ ಸದಾ ಸಂಪರ್ಕದಲ್ಲಿರುತ್ತಿದ್ದ ಮಿತ್ರರು ಅವರ ಸಂದೇಶಗಳಿಗೆ ನನ್ನಿಂದ ಉತ್ತರ ಬಾರದಿದ್ದಾಗ ಕಳವಳಪಟ್ಟುಕೊಂಡು ಫೋನ್ ಮಾಡಿದರು. ಇಮೇಲ್ ಮಾಡಿದರು. ಕಾಳಜಿಯಿಂದ ವಿಚಾರಿಸಿಕೊಂಡರು. ಫೇಸ್ಬುಕ್ ಪ್ರೊಫೈಲ್ ಇಟ್ಟುಕೊಂಡು ಆಗಾಗ ನೋಡಲಿಲ್ಲ ಅಂದರೆ ಉಳಿದವರಿಗೆ ವಿನಾಕಾರಣ ಆತಂಕ ಮತ್ತು ತೊಂದರೆ ಎಂದುಕೊಂಡು ಪ್ರೊಫೈಲ್ ನಿಷ್ಕ್ರಿಯಗೊಳಿಸಿದೆ. ಕೆಲವು ತಿಂಗಳ ನಂತರ ಯಾವುದೋ ಕಾರಣಕ್ಕೆ ತಾತ್ಕಾಲಿಕವಾಗಿ ಮತ್ತೆ activate ಮಾಡಿದೆ. ಕೊಂಚ ಅತ್ತಿತ್ತ ನೋಡುವಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಈ ಅಂಜಲಿಯೇ ಕಾಣಬೇಕೇ!? ಆಕೆಯ ಪ್ರೊಫೈಲ್ ಕ್ಲಿಕ್ ಮಾಡಿದರೆ ದೊಡ್ಡ ಮಟ್ಟದ ಅಪ್ಡೇಟ್ ಕಾಣುತ್ತಿತ್ತು.

ಹೊಸ ಪ್ರೊಫೈಲ್ ಫೋಟೋ ರಾರಾಜಿಸುತ್ತಿತ್ತು. ಪಕ್ಕದಲ್ಲಿ ಜೊತೆಗೊಬ್ಬ ಸರ್ದಾರ್ಜೀ, ಸಿಖ್ಖರ ಪೇಟ ಧರಿಸಿ ಸ್ಮೈಲ್ ಕೊಟ್ಟು ನಿಂತಿದ್ದ. ಇಬ್ಬರ ಬೆರಳುಗಳಲ್ಲೂ ಉಂಗುರ ಫಳಫಳ. engagement ring, wedding ring ಬಂದಾಗಿತ್ತು. ಶಿವಾಯ ನಮಃ! ಮದುವೆಯಾಗಿತ್ತು. ಪಕ್ಕದಲ್ಲಿದ್ದ ಸರ್ದಾರ್ಜಿ ಪ್ರೊಫೈಲ್ ಟ್ಯಾಗ್ ಆಗಿತ್ತು. ಕ್ಲಿಕ್ ಮಾಡಿದರೆ ಯಾರೋ ಹರ್ಮಿನ್ದರ್ ಸಿಂಗ್ ಅನ್ನುವವನ ಪ್ರೊಫೈಲ್ ಗೆ ಹೋಯಿತು. ಅಲ್ಲಿ ನೋಡಿದರೆ ಕ್ಲೀನ್ ಕಿಟ್ಟಪ್ಪ ಸರ್ದಾರ್ಜೀ. ತಲೆ ಅದಾಗೇ ಬೋಳಾಗಿಬಿಟ್ಟಿದೆ. ಗಡ್ಡ ಇವನು ಬೋಳಿಸಿದ್ದಾನೆ. ಮದುವೆಗಾಗಿ ಫುಲ್ ರೂಪಾಂತರ. ಬೋಳು ತಲೆ ಮೇಲೆ ಪಗಡಿ ಕಟ್ಟಿದ್ದ. ಗಡ್ಡ ಬಿಟ್ಟಿದ್ದನೋ ಅಥವಾ ಅದೂ ನಕಲಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಗಾಗಿ ಸಿಖ್ ಆಗಿದ್ದ. ಈ ಅಂಜಲಿಯೇನೂ ಜಾಸ್ತಿ ಬದಲಾಗಿರಲಿಲ್ಲ. ಕನ್ನಡಕ ಹೋಗಿತ್ತು. ಮೇಕ್ಅಪ್ ಭರ್ಜರಿಯಾಗಿತ್ತು. ಒಳ್ಳೆ ಜೋಡಿ. ಒಳ್ಳೆದಾಗಲಿ ಎಂದು ಹಾರೈಸಿ ಬಂದೆ.

ಮುಂದೆ ಕೆಲವೇ ದಿವಸಗಳ ನಂತರ ಫೇಸ್ಬುಕ್ ಪ್ರೊಫೈಲ್ ಫುಲ್ ಡಿಲೀಟ್ ಮಾಡಿಬಿಟ್ಟೆ. ಶಾಶ್ವತವಾಗಿ ಡಿಲೀಟ್.  ಅಲ್ಲಿಗೆ ಐದು ವರ್ಷಗಳ ಫೇಸ್ಬುಕ್ ಸಾಂಗತ್ಯಕ್ಕೆ ಅಂತಿಮ ಮಂಗಳ ಹಾಡಿದೆ. ಬೋರಾಗಿತ್ತು. ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಬಹಳ ಮೊದಲೇ ತ್ಯಜಿಸಬೇಕು ಎಂದಿತ್ತು. ಅದೇನೋ ಅಂತಾರಲ್ಲ...ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಒಟ್ಟಿನಲ್ಲಿ ಫೇಸ್ಬುಕ್ ಎನ್ನುವ ಸಂಸ್ಕಾರ ಮುಗಿದಾಕ್ಷಣ ಆ ವ್ಯಸನ ತಂತಾನೇ ಬಿಟ್ಟುಹೋಯಿತು. ಎಲ್ಲ ವ್ಯಸನಗಳಿಗೂ ಜನ್ಮಾದಿಜನ್ಮಗಳಿಂದ ಸಂಚಿತವಾಗಿರುವ ಕರ್ಮಸಂಸ್ಕಾರಗಳೇ ಕಾರಣ. ಅವು ಖರ್ಚಾದಂತೆ ವ್ಯಸನಗಳೂ ಕಳಚಿಕೊಳ್ಳುತ್ತವೆ.

Fast forward. ಅದಾದ ಎರಡು ವರ್ಷಗಳ ನಂತರ. ಮೊನ್ನೆ ರವೀಂದ್ರನಾಥ ಟಾಗೋರರ ಬಗ್ಗೆ ಏನೋ ಹುಡುಕುತ್ತಿದ್ದಾಗ ಮತ್ತೆ ಅಂಜಲಿ ನೆನಪಾದಳು. ನೋಡೋಣ ಅಂದರೆ ಈಗ ಫೇಸ್ಬುಕ್ ಅಕೌಂಟ್ ಇಲ್ಲ. ಗೂಗಲ್ ಸರ್ಚ್ ಕೊಟ್ಟರೆ ಮತ್ತೆ ಅವೇ ಹಳೇ ಮಾಹಿತಿ.

ಆಗ ತುಂಬಾ ವಿಚಿತ್ರವೆನ್ನಿಸುವಂತೆ ಒಂದು ಐಡಿಯಾ ಬಂತು. ಆಕೆ ಮತ್ತು ಆಕೆಯ ಪತಿ ಇಬ್ಬರ ಹೆಸರನ್ನೂ ಕೂಡಿ ಗೂಗಲ್ ಒಳಗೆ ಸರ್ಚ್ ಕೊಟ್ಟೆ ನೋಡಿ. ಆಶ್ಚರ್ಯ! ಪರಮಾಶ್ಚರ್ಯ! ಒಂದು ಲಿಂಕ್ ಇಲ್ಲಿನ ಕೋರ್ಟ್ ಒಂದರ ಜಾಲತಾಣಕ್ಕೆ ಕರೆದೊಯ್ಯಿತು. ಅಲ್ಲಿ ನೋಡಿದರೆ ಅದೊಂದು ಡೈವೋರ್ಸ್ ಕೇಸ್. ಕುತೂಹಲದಿಂದ ನೋಡಿದರೆ ಇವರದ್ದೇ ಕೇಸ್. ಡೌಟೇ ಇಲ್ಲ. ಮದುವೆಯಾದ ಎರಡೇ ತಿಂಗಳಿಗೆ ಡೈವೋರ್ಸ್. ಶಿವಾಯ ನಮಃ. ಡೈವೋರ್ಸ್ ಕೊಟ್ಟವ ಗಂಡ. ಮತ್ತೆ ಹೆಚ್ಚಿನ ಗಲಾಟೆಯಿಲ್ಲದ ಕಾರಣ ಕೆಲವೇ ತಿಂಗಳುಗಳಲ್ಲಿ ಡೈವೋರ್ಸ್ ಮಂಜೂರ್ ಕೂಡ ಆಗಿಬಿಟ್ಟಿದೆ.

ಮೊನ್ನೆ ಎರಡು ವರ್ಷಗಳ ಬಳಿಕ ಅಂಜಲಿ ನೆನಪಾದಾಗ ನನ್ನ ಕಲ್ಪನೆ ಹೇಗಿತ್ತು? ಎರಡು ವರ್ಷದ ಹಿಂದಿನ ಕಲ್ಪನೆಯೇ ಇತ್ತು. ಮಕ್ಕಳು ಮರಿ ಕೂಡ ಆಗಿರಬಹುದೇ ಎನ್ನುವ ಒಂದಿಷ್ಟು ಹೆಚ್ಚಿನ ಕಲ್ಪನೆ, ಕುತೂಹಲ. ಎಲ್ಲ ಧನಾತ್ಮಕ ಕಲ್ಪನೆ. ನೀವೇ ನೋಡಿ. ಬೇರೋಬ್ಬರ ಕಲ್ಪಿತ ಜೀವನದ ಬಗ್ಗೆ ಧನಾತ್ಮಕ ಕಲ್ಪನೆಗಳೇ ಇರುತ್ತವೆ. ನಮ್ಮ ಜೀವನದ ಬಗ್ಗೆ ಮಾತ್ರ ಋಣಾತ್ಮಕ ಕಲ್ಪನೆಗಳು, ಕೊರತೆಗಳು ಗೋಚರಿಸುತ್ತವೆ. ಆದರೆ ವಾಸ್ತವಿಕತೆ ಬೇರೆಯೇ ಇತ್ತು. ಈಗ ಮೊದಲಿನ ಹಾಗೆ ನಾನು ಗೂಗಲ್ ಮೇಲೆ ಅಷ್ಟೆಲ್ಲ ಹುಡುಕಲು ಹೋಗುವದಿಲ್ಲ. ಆದಿನ  ಅದೇನು ಪಾಠ ಕಲಿಸಬೇಕೆಂದುಕೊಂಡಿತ್ತೋ ವಿಧಿ. ವಿಚಿತ್ರ ರೀತಿಯಲ್ಲಿ ಗೂಗಲ್ ಸರ್ಚ್ ಮಾಡಿಸಿತು. ಡೈವೋರ್ಸ್ ನ್ಯಾಯಾಲಯದ ಜಾಲತಾಣಕ್ಕೆ ಕರೆದೊಯ್ಯಿತು. ವಿಷಯ ತಿಳಿಯಿತು. ಕಲ್ಪನೆ ನುಚ್ಚುನೂರಾಗಿ ವಾಸ್ತವಿಕತೆ ತಿಳಿಯಿತು.

ಅಂಜಲಿಯ ಅದೆಷ್ಟು ಜನ ಪರಿಚಿತರು ಆಕೆಯ ಫೇಸ್ಬುಕ್ ಪ್ರೊಫೈಲ್ ನೋಡಿ ಏನೇನೋ ಕಲ್ಪಿಸಿಕೊಂಡು ಅದೆಷ್ಟು ಕರುಬಿ ಅದೆಷ್ಟು ಖಿನ್ನತೆಗೆ ಒಳಗಾಗಿದ್ದರೋ.

www.unicourt.com - ಇಲ್ಲಿ ಸರ್ಚ್ ಮಾಡಿಬಿಟ್ಟರೆ ಅಮೇರಿಕಾದಲ್ಲಿ ಯಾರ ಮೇಲೆ ಯಾವ ಕೇಸಿದ್ದರೂ ಮಾಹಿತಿ ಸಿಕ್ಕಿಬಿಡುತ್ತದೆ. ನಂತರ ಆ ಆ ಕೋರ್ಟುಗಳ ಜಾಲತಾಣಗಳಿಗೆ ಹೋಗಿಬಿಟ್ಟರೆ ಎಲ್ಲರ ಜನ್ಮಕುಂಡಲಿ ಬೆರಳತುದಿಯಲ್ಲಿ. ಹಾಗೆಂದ ಮಾತ್ರಕ್ಕೆ ಎಲ್ಲರ ವೈಯಕ್ತಿಕ ಜೀವನದ ರಾಮರಾಡಿಯೆಲ್ಲವನ್ನೂ ಹಾಕಿಬಿಟ್ಟಿರುತ್ತಾರೆ ಎಂದಲ್ಲ. ಸಾರ್ವಜನಿಕವಾಗಿ ಏನೆಲ್ಲಾ ಮಾಹಿತಿ ಹಾಕಬಹುದೋ ಅದನ್ನೆಲ್ಲ ಹಾಕಿರುತ್ತಾರೆ. ಕೆಲವೊಂದು ಹೆಚ್ಚಿನ ಮಾಹಿತಿಯನ್ನು ಶುಲ್ಕ ಕೊಟ್ಟು ಪಡೆಯಬಹುದು. ಆದರೆ ಗಂಡಹೆಂಡಿರ ಮಧ್ಯದ ಬೆಡ್ರೂಮ್ ಬೊಗಳೆ, ರಗಳೆ, ಕಿಚೆನ್ ಕಹಳೆ, ನಗ್ನ ನಗಾರಿ ಇತ್ಯಾದಿಗಳ ಮಾಹಿತಿ ಸಿಗುವದಿಲ್ಲ. ಅವೆಲ್ಲ ಕೋರ್ಟಿಗೆ ಬೇಕಾಗೂ ಇಲ್ಲ. ನಿಮ್ಮ ಮಾಹಿತಿಗೆ ಹೇಳಿದೆ ಅಷ್ಟೇ! :)

ನನ್ನ ಹೆಸರನ್ನೂ ಸರ್ಚ್ ಕೊಟ್ಟು ನೋಡಿದೆ. ಏನೂ ಮಾಹಿತಿ ಬರಲಿಲ್ಲ. ನಂದೂ ಒಂದು ಕೇಸ್ ಇತ್ತಲ್ಲ. ಹಳೆಯ ಕೇಸು. ಅಯ್ಯೋ! ಆ ತರಹದ ಕೇಸ್ ಅಲ್ಲ ಮಾರಾಯರೇ. ಚಿಂತೆ ಬೇಡ. ಈಗ ಇಪ್ಪತ್ತು ವರ್ಷಗಳ ಹಿಂದೆ ವಿಮಾನದ ಟಿಕೆಟ್ ವಿಷಯದಲ್ಲಿ ಗಾಂಚಾಲಿ ಮಾಡಿದ್ದ ಟ್ರಾವೆಲ್ ಏಜೆಂಟ್ ಒಬ್ಬಾಕೆಯನ್ನು small claims ಕೋರ್ಟಿಗೆ ಎಳೆದು, ನಾನೇ ವಕೀಲಿಕೆಯನ್ನೂ ಮಾಡಿ, ಪರಿಹಾರ ವಸೂಲಿ ಮಾಡಿದ್ದೆ. ಮತ್ತೆಲ್ಲಾದರೂ ಆ ಕೇಸ್ ಕೂಡ ಇಂಟರ್ನೆಟ್ ಮೇಲೆ ಬಂದಿದೆಯೋ ಎನ್ನುವ ಕುತೂಹಲ ಇತ್ತು. ಬಂದಿಲ್ಲ. ಅಂತದ್ದೆಲ್ಲಾ ಚುಲ್ಟು ಕೇಸ್ ಮಾಹಿತಿ ಅಲ್ಲಿ ಇರುವದಿಲ್ಲ ಎಂದು ಕಾಣಿಸುತ್ತದೆ. ಆ ಕೇಸು, ನನ್ನ ಕಾನೂನು ಹೋರಾಟ, ಇತ್ಯಾದಿಗಳ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ. ಬರೋಬ್ಬರಿ ಕಾನೂನಿನ ಗೂಟ ಜಡಿದಿದ್ದೆ ಆ ಹರಾಮಿ ಟ್ರಾವೆಲ್ ಏಜೆಂಟ್ ಗೆ!

ಅವೆಲ್ಲ ಇರಲಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಅವುಗಳಿಂದ ಆಗುತ್ತಿರುವ ಹಾನಿಗಳ ಬಗ್ಗೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದವರು ಪ್ರೊಫೆಸರ್  ಕ್ಯಾಲ್ ನ್ಯೂಪೋರ್ಟ್. ಅದ್ಭುತ ಚಿಂತಕ. Original thinker.

ಈ ಸಾಮಾಜಿಕ ಜಾಲತಾಣಗಳ ವಿವೇಚನಾರಹಿತ ದುರ್ಬಳಕೆ ನಿಲ್ಲದೇ ಹೋದರೆ ಒಂದು ಮಾತ್ರ ಗ್ಯಾರಂಟಿ - we will be a society of smart phones but dumb people. Guided missiles in the hands of misguided people.

ಪ್ರೊಫೆಸರ್ ನ್ಯೂಪೋರ್ಟ್ ಅವರ ಒಂದು ಅದ್ಭುತ ಭಾಷಣ - Why you should quit social media

ಸಾಮಾಜಿಕ ಜಾಲತಾಣಗಳಿಂದ ಉಪಯೋಗಗಳೂ ಇವೆ. ಆದರೆ ಹಾನಿಗಳೇ ಜಾಸ್ತಿ. ಹಾಗಾಗಿ ಸೋಶಿಯಲ್ ಮೀಡಿಯಾ ಉಪಯೋಗಿಸಲೇಬೇಕು ಅಂತಾದರೆ ವಿವೇಕ ಇರಲಿ. ಪ್ರಜ್ಞೆ ಕಳೆದುಹೋಗದಿರಲಿ.

ಹಿಂದೊಮ್ಮೆ ಬರೆದಿದ್ದ ಲೇಖನ. ಧಾರವಾಡ ಮಂದಿ ಭಾಳ ಮೆಚ್ಚಿದ್ದರು! :)

ಆನೆಯ ಮೇಲೆ ಅಂಬಾರಿ ಕಂಡೆ. ಅಂಬಾರಿ ಒಳಗೆ ಕುಂಬಾರಿ ಕಂಡೆ.....ಫೇಸ್ಬುಕ್ ಪ್ರೊಫೈಲ್ ಫೋಟೋ ಪುರಾಣ

Monday, July 16, 2018

ನಮ್ಮ ಜೀವನವೇ ಬೆಸ್ಟ್... ನಮಗೆ ನಮ್ಮ ಜೀವನವೇ ಬೆಸ್ಟ್

ಎಲ್ಲೋ ಓದಿದ ನೆನಪು. ಅದರ ತಿರುಳೇನೆಂದರೆ -  ನಾವು ನಮ್ಮ ನಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ತಲೆಬಿಸಿ ಮಾಡಿಕೊಂಡರೂ ಇನ್ನೊಬ್ಬರ ಸಮಸ್ಯೆಯ ಆಳ ತಿಳಿದರೆ, 'ಅವರ ಸಮಸ್ಯೆಗೆ ಹೋಲಿಸಿಕೊಂಡರೆ ನಮ್ಮದೇ ಎಷ್ಟೋ ಮೇಲು,' ಅಂದುಕೊಳ್ಳುತ್ತೇವೆ.

ನಾವೆಲ್ಲಾ ನಮ್ಮ ನಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಕಾಗದದ ಚೀಟಿಗಳ ಮೇಲೆ ಬರೆದು ಒಂದು ಪಾತ್ರೆಯಲ್ಲಿ ಹಾಕಿದೆವು ಎಂದಿಟ್ಟುಕೊಳ್ಳಿ. ನಂತರ random ಆಗಿ ಕೈಗೆ ಬಂದ ಚೀಟಿ ಎತ್ತಿಕೊಳ್ಳಿ. ಅದರಲ್ಲಿ ಬರೆದಿರುವ ಸಮಸ್ಯೆ ಓದಿ. ನಂತರ ನಿರ್ಧರಿಸಿ - ಸದ್ಯಕ್ಕೆ ನಿಮಗಿರುವ ಸಮಸ್ಯೆ 'ಒಳ್ಳೆಯದೋ' ಅಥವಾ ಬೇರೊಬ್ಬರ ಸಮಸ್ಯೆ ಒಳ್ಳೆಯದೋ? ಶತಪ್ರತಿಶತ ಖಾತ್ರಿ, ನೀವು ಕೈಗೆ ಬಂದ ಚೀಟಿಯನ್ನು ಮರಳಿಸುತ್ತೀರಿ. ನಿಮ್ಮದೇ ಸಮಸ್ಯೆ ಬರೆದ ಚೀಟಿ ಸಿಗುವವರೆಗೂ ಒಂದಾದಮೇಲೊಂದು ಚೀಟಿಯನ್ನು ತೆಗೆದು, ಓದಿ, ಮತ್ತೆ ವಾಪಸ್ ಮಾಡುತ್ತಲೇ ಇರುತ್ತೀರಿ. ಬೇರೋಬ್ಬರ ಸಮಸ್ಯೆಗಳನ್ನು ತಿಳಿದಾಗ ನಮ್ಮ ಸಮಸ್ಯೆಗಳೇ ಎಷ್ಟೋ ಮೇಲು ಎಂದೆನಿಸಿಬಿಡುತ್ತವೆ.

ಬೇರೆಯವರ ಬದುಕನ್ನು ನೋಡಿ ಒಮ್ಮೊಮ್ಮೆ ಅಂದುಕೊಂಡಿರುತ್ತೇವೆ, 'ಆಹಾ! ಎಷ್ಟು ಅದೃಷ್ಟಶಾಲಿಗಳು!' ಎಂದು. ಅವರ ಬಾಹ್ಯ ಜೀವನವೊಂದೇ ನಮಗೆ ಕಂಡಿರುತ್ತದೆ. ಅವರ ಜೀವನ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂದು ಅನ್ನಿಸುತ್ತದೆ.

ಆದರೆ...

ಕೆಳಗಿನ ಕಥೆ ಓದಿ.

ಸತ್ಯ ನಾಡೆಲ್ಲಾ. ಹೆಚ್ಚಾಗಿ ಎಲ್ಲರೂ ಇವರ ಹೆಸರು ಕೇಳಿರುತ್ತಾರೆ. ಕೊಂಚ ತಿಳಿದಿರುತ್ತಾರೆ ಕೂಡ. ಜಗತ್ತಿನ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ (CEO). ವಯಸ್ಸು ಐವತ್ತು ವರ್ಷಗಳು ಮಾತ್ರ. ವಾರ್ಷಿಕ ವೇತನ ಇಪ್ಪತ್ತು ಮಿಲಿಯನ್ ಡಾಲರ್. ಅಂದರೆ ಸುಮಾರು ೧೪೦ ಕೋಟಿ ರೂಪಾಯಿಗಳು. ಒಟ್ಟು ಆಸ್ತಿ ಸಾವಿರಾರು ಕೋಟಿ. ತುಂಬಾ ಯಶಸ್ವಿಯಾಗಿರುವ  ಮುಖ್ಯ ನಿರ್ವಾಹಣಾಧಿಕಾರಿ ಎಂದೆನಿಸಿಕೊಂಡಿದ್ದಾರೆ. ಮಣಿಪಾಲ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಯಗಳಲ್ಲಿ ಓದಿ, ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಂತಹಂತವಾಗಿ ಮೇಲೆ ಬಂದು, ವಿಪರೀತ ಸ್ಪರ್ಧೆಯ ನಡುವೆಯೂ CEO ಎಂದು ಆಯ್ಕೆಯಾದ ಮಹಾನ್ ಪ್ರತಿಭಾವಂತ. ಭಾರತೀಯ ಸಂಜಾತರಾದ್ದರಿಂದ, ಎಲ್ಲ ರೀತಿಯ ಪಕ್ಷಪಾತಗಳ ನಡುವೆಯೂ, ಈ ಮಟ್ಟದ ಯಶಸ್ಸನ್ನು ಗಳಿಸಲು ಪಟ್ಟಿರಬಹುದಾದ ಪರಿಶ್ರಮ ಅಗಾಧ.

ಇವರದು ಸುಖೀ ಸಂಸಾರ. ಕುಟುಂಬಸ್ನೇಹಿತರ ಪುತ್ರಿ, ಬಾಲ್ಯಸ್ನೇಹಿತೆ ಅನುಪಮಾ ಇವರ ಪತ್ನಿ. ಮೂರು ಮಕ್ಕಳು. ಅಮೇರಿಕಾದ ಸಿಯಾಟಲ್ ನಗರದಲ್ಲಿ ಅರಮನೆಯಂತಹ ಬಂಗಲೆಯಲ್ಲಿ ವಾಸವಾಗಿದ್ದಾರೆ.

ಇಷ್ಟೇ ಮಾಹಿತಿ ತಿಳಿದರೆ 'ಲೈಫ್ ಅಂದರೆ ಹೀಗಿರಬೇಕು. ಅವರ ಲೈಫ್ ನಮಗಿರಬಾರದಿತ್ತೇ?' ಎಂದು ಜನ ಅಂದುಕೊಳ್ಳಬಹುದು.

'ಸತ್ಯ ನಾಡೆಲ್ಲಾ ತರಹದ ಜನರಿಗೆ ಎಂತಹ ಸಮಸ್ಯೆಗಳು ಮಾರಾಯ್ರೇ? ಸಮಸ್ಯೆಗಳೆಲ್ಲ ನಮ್ಮಂತವರಿಗೇ ನೋಡಿ. ಎಲ್ಲಾ ಪಡೆದುಕೊಂಡು ಬಂದಿರಬೇಕು,' ಎಂದು ನಿಡುಸುಯ್ಯಬಹುದು.

ಈಗ ಕೇಳಿ...

ಸತ್ಯರ ಹಿರಿಯ ಮಗನಿಗೆ ಈಗ ೨೧ ವರ್ಷ. ಅವನು ವಿಕಲಾಂಗ. ಗಾಲಿಚಕ್ರದ ಖುರ್ಚಿಯಲ್ಲೇ ಅವನ ಜೀವನ. ಅವನು ಎಲ್ಲ ಅಂಗಾಂಗಳ ಸ್ವಾಧೀನ ಕಳೆದುಕೊಂಡಿರುವ Quadriplegic.

ಸತ್ಯರ ಪುತ್ರಿಯೊಬ್ಬಳಿಗೆ ಏನೋ ಬೌದ್ಧಿಕ ಸಮಸ್ಯೆ. Learning disability.

ಈಗ ವಿಚಾರ ಮಾಡಿ. ವರ್ಷಕ್ಕೆ ೧೪೦ ಕೋಟಿ ಸಂಬಳದ ದೊಡ್ಡ ಹುದ್ದೆ, ಸಾವಿರಾರು ಕೋಟಿಯ ಅಸ್ತಿ ಎಲ್ಲ ಸಿಗುತ್ತದೆ. ಆದರೆ ಪ್ಯಾಕೇಜ್ ಡೀಲ್ ಎಂಬಂತೆ ಇವೆಲ್ಲಾ ಸಮಸ್ಯೆಗಳೂ ಜೊತೆಗೆ ಬರುತ್ತವೆ ಎಂತಾದರೆ ನಿಮ್ಮ ಸದ್ಯದ ಜೀವನವನ್ನು ಬದಲಾಯಿಸಿಕೊಳ್ಳುವಿರೇ???

ಸತ್ಯರ ಜೀವನದ ಬಗ್ಗೆ ನನಗೂ ಜಾಸ್ತಿ ಗೊತ್ತಿರಲಿಲ್ಲ. ಸತ್ಯ ನಾಡೆಲ್ಲಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದು ಕಮ್ಮಿ. ಅವರು ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುತ್ತಾರೆ. ಉಳಿದವರೂ ಗೌರವಿಸಬೇಕು. ಆದರೆ ತಮ್ಮ ಜೀವನದ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಎದುರಿಸಿ ಗೆದ್ದ ಹಾದಿಯ ಬಗ್ಗೆ ಮಾಹಿತಿ ಹಂಚಿಕೊಂಡರೆ ಬೇರೆಯವರಿಗೂ ಕೂಡ ಜೀವನವನ್ನು ಎದುರಿಸಲು ಬೇಕಾಗುವ ಧೈರ್ಯ, ಸ್ಥೈರ್ಯ ಸಿಗಬಹುದು ಎನ್ನುವ ಸದುದ್ದೇಶದಿಂದ ಸತ್ಯ ಮತ್ತು ಅವರ ಪತ್ನಿ ಅನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡಿದ್ದಾರೆ. ಅದಕ್ಕೊಂದು ಸಲಾಂ! ಪೂರ್ತಿ ಲೇಖನ ಕೆಳಗಿನ ಲಿಂಕಿನಲ್ಲಿದೆ. ತುಂಬಾ ಸ್ಪೂರ್ತಿದಾಯಕವಾಗಿದೆ. ಜೀವನ್ಮುಖಿಯಾಗಿದೆ. ಓದಿ.

Satya and Anu Nadella Open Up About Their Family Life 

For the first time ever, the Microsoft CEO and his wife share honest truths about raising three kids with unexpected challenges and lots of joy.

ಸತ್ಯರಂತಹ ಜನ ಯಾವುದನ್ನೂ ಸಮಸ್ಯೆ ಎಂದು ಭಾವಿಸುವದೇ ಇಲ್ಲ. ಎಲ್ಲವನ್ನೂ ಅವಕಾಶ ಅಥವಾ ಸವಾಲು ಎಂದು ಸ್ವೀಕರಿಸಿ ಯಶಸ್ವಿಯಾಗುತ್ತಾರೆ. ಅದೇ ಅವರ ಖಾಸಿಯತ್ತು.

ಸತ್ಯ ನಾಡೆಲ್ಲಾ  'Hit Refresh' ಎನ್ನುವ ತಮ್ಮ ಜೀವನಾನುಭವಗಳ ಪುಸ್ತಕವನ್ನು ಬರೆದುಕೊಂಡಿದ್ದಾರೆ. ಇನ್ನೂ ಓದಿಲ್ಲ. ಮುಂದೆ ಓದಬೇಕು.

ಒಟ್ಟಿನಲ್ಲಿ ನಮ್ಮ ನಮ್ಮ ಲೈಫ್ ನಮಗೇ ಹೇಳಿಮಾಡಿಸಿದ್ದು ನೋಡಿ.

Nobody's burden is even one gram more than they can carry but not one gram less either.

Tuesday, July 03, 2018

ಕಾಮಧೇನು

ಭಕ್ತನೊಬ್ಬ ದೇವರಿಗೆ ಅದನ್ನು ಕರುಣಿಸು, ಇದನ್ನು ಕರುಣಿಸು ಎಂದು ತುಂಬಾ ಕಾಡುತ್ತಿದ್ದ. ಭಕ್ತನ ಕಿರಿಕಿರಿ ತಾಳಲಾಗದ ಭಗವಂತ ಸಕಲ ಇಷ್ಟಾರ್ಥಗಳನ್ನೂ ಪೂರೈಸಬಲ್ಲ ಪೂಜ್ಯ ಕಾಮಧೇನುವನ್ನೇ ಭಕ್ತನಿಗೆ ಕರುಣಿಸಿಬಿಟ್ಟ. ಕಾಮಧೇನು ದೊರಕಿದ ಮೇಲಾದರೂ ಭಕ್ತನ ಕಿರಿಕಿರಿ ತಪ್ಪಬಹುದು ಎಂದು ದೇವರ ನಿರೀಕ್ಷೆ.

ಭಕ್ತನಿಗೆ ಆ ಪೂಜ್ಯ ಗೋವು ಕಾಮಧೇನು ಎಂದಾದರೂ ತಿಳಿಯಿತೋ ಇಲ್ಲವೋ ಗೊತ್ತಿಲ್ಲ. ದೇವರು ಕೊಟ್ಟ 'ದನ' ಎಂದು ಭೂಮಿಗೆ ಕರೆತಂದ. ಮನೆಗೆ ಬಂದರೆ ಒಂದು ಕೊರತೆ ತುರ್ತಾಗಿ ಕಾಡುತ್ತಿತ್ತು. ಅದೇನೆಂದರೆ ಗದ್ದೆ ಊಳಲು (ಸಾಗುವಳಿ ಮಾಡಲು) ಎತ್ತು ಇರಲಿಲ್ಲ. ಅರ್ಜೆಂಟಾಗಿ ಗದ್ದೆ ಊಳಿ, ಬೀಜ ಬಿತ್ತಬೇಕಿತ್ತು.

ಎತ್ತಿಗಾಗಿ ಏನು ಮಾಡಲಿ? ಎಂದು ಯೋಚಿಸಿದ ಭಕ್ತ. ಎದುರಲ್ಲೇ ಕಂಡಿತು ಭವ್ಯ ಕಾಮಧೇನು. ಮತ್ತೇನೂ ವಿಚಾರ ಮಾಡಲಿಲ್ಲ. ಕಾಮಧೇನುವನ್ನು ಎಳೆದೊಯ್ದವನೇ ನೇಗಿಲಿಗೆ ಕಟ್ಟಿಬಿಟ್ಟ. ತಬ್ಬಿಬ್ಬಾದ ಪುಣ್ಯಕೋಟಿ ಕಾಮಧೇನುವಿಗೆ ಬಾರಕೋಲಿನಲ್ಲಿ ಚಟಾರ್ ಎಂದು ಎರಡು ಬಿಟ್ಟವನೇ ಹೊಲಕ್ಕೆ ಕರೆದೊಯ್ದ.

ಅದು ಹೇಳಿಕೇಳಿ ಕಾಮಧೇನು. ಆಕಳು. ಹಸು. ಎತ್ತಂತೂ ಅಲ್ಲವೇ ಅಲ್ಲ. ಅದರಲ್ಲೂ ದೇವಲೋಕದ ಆಕಳು. ಇಂತಹ ಆಕಳಿಗೆ ಗದ್ದೆ ಊಳುವ ಕರ್ಮ.

ಕಾಮಧೇನುವನ್ನು ಗದ್ದೆ ಊಳಲು ಬಳಸುವದೇ? ಎಲ್ಲಾದರೂ ಉಂಟೇ? ಗದ್ದೆ ಊಳಲು ತುರ್ತಾಗಿ ಎತ್ತು ಬೇಕಾಗಿತ್ತು ಅಂತಲೇ ಅಂದುಕೊಳ್ಳೋಣ. ಕಾಮಧೇನುವನ್ನು ಕೇಳಿದ್ದರೆ ಸಕಲವನ್ನೂ ಕರುಣಿಸುವ ಶಕ್ತಿಯುಳ್ಳ ಅದು ಒಂದು ಎತ್ತಲ್ಲ ಬದಲಿಗೆ ಒಂದು ಜೋಡಿ ಎತ್ತುಗಳನ್ನೇ ಕರುಣಿಸುತ್ತಿತ್ತು. ಅವನ್ನು ಉಪಯೋಗಿಸಿ ಉಳುಮೆ ಮಾಡಬಹುದಿತ್ತು. ಅದರ ಬದಲಿಗೆ ಕಾಮಧೇನುವನ್ನೇ ಬಳಸಿ, ಅದನ್ನು ಹಿಂಸಿಸಿ ಉಳುಮೆ ಮಾಡಿಬಿಟ್ಟಿದ್ದ ಭಕ್ತ ಭೂಪ.

ಕಥೆ ಬಾಲಿಶ ಅನಿಸಿದರೂ ಯೋಚಿಸಿ ನೋಡಿ. ಅಜ್ಞಾನದಲ್ಲಿ ನಾವು ಹೆಚ್ಚಿನವರು ಮಾಡುತ್ತಿರುವದು ಇದೇ ಅಲ್ಲವೇ? ಮಾನವಜನ್ಮವೆಂಬ ಅಮೂಲ್ಯ ಕಾಮಧೇನುವನ್ನು ಜೀವನವೆಂಬ ಹೊಲವನ್ನು ಊಳಿ, ಲೌಕಿಕ ಸುಖವೆಂಬ ಬೆಳೆ (ಕಳೆ) ತೆಗೆಯಲು ಉಪಯೋಗಿಸುತ್ತಿದ್ದೇವೆ. ಮೇಲಿಂದ ಕಾಮಧೇನುವಿಗೆ ಬಾರಕೋಲಿನ 'ಪೂಜೆ' ಬೇರೆ! ಆಹಾ ನಮ್ಮ (ಅ)ಜ್ಞಾನವೇ!

ತುಂಬಾ ಯೋಚಿಸಲು ಹಚ್ಚಿದ ಚಿಕ್ಕ  ಕಥೆ.

ವಿ.ಸೂ: ಓದಿದ್ದು ಚೆನ್ನಾಗಿ ನೆನಪಿರಬೇಕು ಅಂದರೆ ಓದಿದ್ದನ್ನು ಬರೆದು ತೆಗೆಯಬೇಕು ಎಂದು ಗುರುಗಳು ಹೇಳುತ್ತಿದ್ದರು. ಅದನ್ನೇ ಮಾಡುತ್ತಿರುವದು. ಅಷ್ಟೇ ವಿನಃ ಬೇರೆ ಏನೂ ಇಲ್ಲ. 

Wednesday, June 27, 2018

ಬಂಧ & ಸಂಬಂಧ

ಜಗತ್ತನ್ನು ಸೃಷ್ಟಿಸಿದ ಬ್ರಹ್ಮ ಸಕಲ ಜೀವಿಗಳಿಗೆ ಎಲ್ಲವನ್ನೂ ಕರುಣಿಸಿದ.

ಒಂದು ಜೀವಿಗೆ ಸ್ವಲ್ಪ ತೊಂದರೆಯಾಯಿತು. ಆ ಜೀವಿಯ ಹೆಸರು 'ಬಂಧ' (bond).

ಬಂಧನಿಗೆ ಎಲ್ಲೂ ಆಶ್ರಯ ಸಿಗಲಿಲ್ಲ. ಯಾರೂ ಅವನನ್ನು ಹತ್ತಿರ ಸೇರಿಸುತ್ತಲೇ ಇರಲಿಲ್ಲ. ಅವನ ಹೆಸರೇ ಬಂಧ. ಸಕಲ ಬಂಧನಗಳು (bondage) ಇವನಿಂದಲೇ ಉಂಟಾಗುತ್ತವೆ ಎಂದು ತಿಳಿದು ಅವನಿಗೆ ಯಾರೂ ಆಶ್ರಯ ಕೊಡುತ್ತಿರಲಿಲ್ಲ.

ಬಂಧ ವಾಪಸ್ ಬ್ರಹ್ಮದೇವನ ಬಳಿಗೆ ಬಂದು ತನ್ನ ಕಷ್ಟ ಹೇಳಿಕೊಂಡ.

ಸ್ವಲ್ಪ ವಿಚಾರ ಮಾಡಿದ ಬ್ರಹ್ಮ ಹೇಳಿದ, 'ವೇಷ ಬದಲಾಯಿಸಿಕೊಂಡು, ರೂಪಾಂತರ ಮಾಡಿಕೊಂಡು, ಬೇರೆ ಹೆಸರಿನಲ್ಲಿ ಹೋಗಿ ಆಶ್ರಯ ಕೇಳು.'

'ಏನಂತ ರೂಪಾಂತರ ಮಾಡಿಕೊಳ್ಳಲಿ? ಯಾವ ಹೊಸ ಹೆಸರಲ್ಲಿ ಹೋಗಲಿ?' ಎಂದು ಕೇಳಿದ ಬಂಧ.

'ಬಂಧ ಎಂದು ಪರಿಚಯ ಮಾಡಿಕೊಳ್ಳಬೇಡ. ಸಂಬಂಧ ಅಂತ ಹೇಳಿಕೊಂಡು ಹೋಗು. ಆಗ ನೋಡು ನಿನ್ನ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು. ಹೋಗಿ ಬಾ. ಶುಭವಾಗಲಿ,' ಎಂದು ಹೇಳಿ ಕಳಿಸಿಕೊಟ್ಟ ಬ್ರಹ್ಮದೇವ.

ಸಂಪೂರ್ಣವಾಗಿ ಗೆಟಪ್ ಬದಲಾಯಿಸಿಕೊಂಡ ಬಂಧ ಮತ್ತೆ ಭೂಮಿಗೆ ಎಂಟ್ರಿ ಕೊಟ್ಟ. ಮನೆಯೊಂದರ ಬಾಗಿಲು ತಟ್ಟಿದ.

'ಯಾರು ನೀವು?' ಎಂದು ಕೇಳಿದ ಮನೆಯಾತ.

'ನಾನು ಸಂಬಂಧ,' ಎಂದು ನೈಸಾಗಿ ಉಲಿದ ಬಂಧ.

ಸಂಬಂಧ ಅಂತ ಕೇಳಿದ್ದೇ ತಡ ಉಪಚಾರ ಆರಂಭವಾಯಿತು.

'ಒಳಗೆ ಬನ್ನಿ. ಕುಳಿತುಕೊಳ್ಳಿ. ನೀವು ಹೇಗೆ ಸಂಬಂಧ ಎಂದು ಕೇಳಬಹುದೇ?' ಎಂದು ವಿನಯ ಗೌರವದಿಂದ ಕೇಳಿದ ಮನೆಯಾತ.

ಸಂಬಂಧಗಳೇನು ಒಂದೇ ಎರಡೇ? ಒಬ್ಬನಿಗೆ ಅಪ್ಪನೆಂದ, ಇನ್ನೊಬ್ಬನಿಗೆ ಚಿಕ್ಕಪ್ಪನೆಂದ. ವೇಷದೊಂದಿಗೆ ಲಿಂಗವೂ ಬದಲಾದಾಗ ಅಮ್ಮ, ಚಿಕ್ಕಮ್ಮ, ಹೆಂಡತಿ, ಉಪಹೆಂಡತಿ....ಹೀಗೆ ಬಂಧನೊಬ್ಬ ನಾಮ ಹಲವು ಮಾದರಿಯಲ್ಲಿ ಎಲ್ಲರನ್ನೂ ಬೇರೆ ಬೇರೆ ಸಂಬಂಧಗಳ ಪಾಶದಲ್ಲಿ ಆವರಿಸಿಕೊಂಡುಬಿಟ್ಟ.

ಮೊದಲು ಬಂದಿದ್ದ ಬಂಧನೆಂಬ ಖತರ್ನಾಕ್ ಜೀವಿಯೇ ಸಂಬಂಧದ ರೂಪದಲ್ಲಿ ಬಂದು ವಕ್ಕರಿಸಿಕೊಂಡಿದೆ ಎಂದು ಮನುಷ್ಯರಿಗೆ ತಿಳಿಯಲೇ ಇಲ್ಲ. ತಮಗೆ ಗೊತ್ತಿಲ್ಲದಂತೆಯೇ ಸಂಬಂಧಗಳ ರೂಪದಲ್ಲಿ ಬಂದ ಬಂಧನಿಂದ ಬೇರೆ ಬೇರೆ ಬಂಧನಗಳಲ್ಲಿ (bondage) ಸಿಲುಕಿಕೊಂಡರು. ವಿವಾಹಬಂಧನ, ವಾತ್ಸಲ್ಯಬಂಧನ, ಪ್ರೇಮಬಂಧನ, ಪುತ್ರಪಾಶ, ಪುತ್ರಿ ಪ್ರೀತಿ, ನಾಯಿ ಪ್ರೀತಿ, ಕೋತಿ ಪ್ರೀತಿ, ಗೋಪ್ರೀತಿ...ಬಂಧನಗಳು ಒಂದೇ ಎರಡೇ?

ಸಂಬಂಧ ಎಂದರೇ Some ಬಂಧ ಅಂತರ್ಥ.

ಸಂಬಂಧಗಳಿಂದ ಬಂಧನಗಳು (bondage) ಮತ್ತು ಆ ಬಂಧನಗಳಿಂದ ತರಹತರಹದ ಸುಖ(!) ಮತ್ತು  ದುಃಖಗಳು ಉಂಟಾಗುತ್ತವೆ ಅಂದ ಮಾತ್ರಕ್ಕೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ಜೀವಿಸಲು ಸಾಧ್ಯವೇ? ಅದರ ಅವಶ್ಯಕತೆ ಇಲ್ಲ. ಸಂಬಂಧಗಳು ಬಂಧಗಳು ಎಂದು ಅರಿವಿಗೆ ಬಂದರೆ ಸಾಕು. ಅವುಗಳ ಮೇಲಿನ selfish attachment ಮತ್ತು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಬಂಧನಗಳು ಮತ್ತು ಅವುಗಳ ಪರಿಣಾಮಗಳು ಅಷ್ಟರಮಟ್ಟಿಗೆ ಕಮ್ಮಿಯಾದಂತೆಯೇ. ಆ ವಿವೇಕ ನಮಗೆ ಬರಬೇಕು ಅಷ್ಟೇ.

ಸ್ಪೂರ್ತಿ: ಯೋಗ ವಾಸಿಷ್ಠದ ಮೇಲೆ ಸ್ವಾಮಿ ತೇಜೋಮಯಾನಂದರು ಬರೆದ ಪುಸ್ತಕದಲ್ಲಿ ಸಿಕ್ಕ ಮಾಹಿತಿ. A Glimpse into Yogavasistha

Sunday, June 24, 2018

ಕರ್ಮ ಕರ್ಮ ಕರ್ಮ

ಕರ್ಮದಲ್ಲಿ ಮೂರು ಬಗೆ. ಸಂಚಿತ, ಆಗಾಮಿ ಮತ್ತು ಪ್ರಾರಬ್ಧ. ಸಂಚಿತ ಮತ್ತು ಆಗಾಮಿ ಕರ್ಮಗಳ ಫಲ ಮುಂದಿನ ಜನ್ಮಗಳಲ್ಲಿ ಬರುತ್ತದೆ. ಪ್ರಾರಬ್ಧ ಕರ್ಮದ ಫಲದಿಂದಲೇ ಈ ಜನ್ಮ ಮತ್ತು ಈ ಜನ್ಮದ ಆಗುಹೋಗುಗಳು. ಇದು ಕರ್ಮ ಸಿದ್ಧಾಂತ.

ಸಂಚಿತ ಮತ್ತು ಆಗಾಮಿ ಕರ್ಮಗಳು ಬತ್ತಳಿಕೆಯಲ್ಲಿರುವ ಬಾಣಗಳಿದ್ದಂತೆ. ಪ್ರಾರಬ್ಧವೆಂಬುವದು ಬಿಲ್ಲಿನಿಂದ ಹೊರಬಿದ್ದ ಬಾಣದಂತೆ. ಬಾಣವನ್ನು ಒಮ್ಮೆ ಬಿಟ್ಟ ಮೇಲೆ ಮುಗಿಯಿತು. ವಾಪಸ್ ಕರೆಯಲಾಗುವದಿಲ್ಲ. ಆದರೆ ಬತ್ತಳಿಕೆಯಲ್ಲಿರುವ ಬಾಣಗಳ ಬಗ್ಗೆ ವಿಚಾರ ಮಾಡಬಹುದು.

ಒಮ್ಮೆ ಜ್ಞಾನೋದಯವಾದ ಮೇಲೆ ಸಂಚಿತ ಮತ್ತು ಆಗಾಮಿ ಕರ್ಮಗಳು ನಶಿಸಿ ಹೋಗುತ್ತವೆ. ಜ್ಞಾನದ ಜ್ವಾಲೆಯಲ್ಲಿ ಹುರಿದುಹೋಗುತ್ತವೆ. ಹುರಿದ ಬೀಜದಿಂದ ಹೇಗೆ ಮೊಳಕೆಯೊಡೆಯುವದಿಲ್ಲವೋ ಹಾಗೆಯೇ ನಶಿಸಿದ ಕರ್ಮದ ಬೀಜಗಳಿಂದ ಕರ್ಮಫಲ ದೊರೆಯುವದಿಲ್ಲ. ಹಾಗಾಗಿ ಜ್ಞಾನಿಗಳಿಗೆ ಮರುಜನ್ಮವಿಲ್ಲ. ಆದರೆ ಜ್ಞಾನಿಗಳೂ ಸಹ ಪ್ರಾರಬ್ಧವನ್ನು ಅನುಭವಿಸಲೇಬೇಕು. ಹಾಗಾಗಿ ಜ್ಞಾನೋದಯದ ನಂತರವೂ ಜ್ಞಾನಿಗಳೂ ಸಹ ಇದ್ದ ದೇಹದಲ್ಲೇ ಮುಂದುವರೆಯುತ್ತಾರೆ. ಏನೇನು ಅನುಭವಿಸಬೇಕೋ ಅದನ್ನೆಲ್ಲ ಅನುಭವಿಸುತ್ತಾರೆ. ಪ್ರಾರಬ್ಧ ಮುಗಿದ ನಂತರ ದೇಹ ತಂತಾನೇ ಬೀಳುತ್ತದೆ. ಕುಂಬಾರ ಮಡಿಕೆ ಮಾಡುವದನ್ನು ನಿಲ್ಲಿಸಿದ ಬಳಿಕವೂ ಕುಂಬಾರನ ಚಕ್ರ ಕೆಲಕಾಲ ತಿರುಗುತ್ತಲೇ ಇರುತ್ತದೆ. ಹಾಗೇ ಜ್ಞಾನಿಗಳ ದೈಹಿಕ ಜೀವನ ಕೂಡ. ಪ್ರಾರಬ್ಧ ಕರ್ಮಕ್ಕೆ ಮತ್ತೊಂದು ಉಪಮೆ ಇದು.

ಭಕ್ತನೊಬ್ಬ ರಮಣ ಮಹರ್ಷಿಗಳ ಬಳಿ ಕೇಳಿದನಂತೆ. 'ಜ್ಞಾನೋದಯದ ನಂತರ ಆಗಾಮಿ, ಸಂಚಿತ ಕರ್ಮಗಳನ್ನು ಗೆದ್ದರೂ ಪ್ರಾರಬ್ಧವನ್ನೇಕೆ ಗೆಲ್ಲಲಾಗುವದಿಲ್ಲ?'

ರಮಣರು ಒಂದು ಸಣ್ಣ ಕಥೆ ಹೇಳಿದರು.

'ಒಬ್ಬನಿಗೆ ಮೂವರು ಪತ್ನಿಯರಿದ್ದರು. ಆ ಮನುಷ್ಯ ಸತ್ತುಹೋದ. ಆ ಮನುಷ್ಯ ಸತ್ತುಹೋದ ಮೇಲೆ ಅವನ ಪತ್ನಿಯರೇನಾಗುತ್ತಾರೆ?'

'ವಿಧವೆಯರಾಗುತ್ತಾರೆ,' ಅಂದ ಭಕ್ತ.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೋ ಅಥವಾ ಕೇವಲ ಒಬ್ಬಳು ಅಥವಾ ಇಬ್ಬರು ಪತ್ನಿಯರು ಮಾತ್ರ ವಿಧವೆಯರಾಗುತ್ತಾರೋ?' ಎಂದು ಕೇಳಿದರು ರಮಣರು.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೆ ಸ್ವಾಮೀ,' ಅಂದ ಭಕ್ತ.

'ಆಗಾಮಿ, ಸಂಚಿತ, ಪ್ರಾರಬ್ಧ ಈ ಮೂರೂ ಬಗೆಯ ಕರ್ಮಗಳು ಮೂವರು ಪತ್ನಿಯರಿದ್ದಂತೆ. ಸತ್ತ ಮೇಲೆ ಮೂವರೂ ವಿಧವೆಯರೇ,' ಎಂದು ಕ್ಲುಪ್ತವಾಗಿ ಹೇಳಿದ ರಮಣರು ಎದ್ದು ನಡೆದರು. ಅವರು ಇಷ್ಟು ಮಾತಾಡಿದ್ದೇ ಜಾಸ್ತಿ. ಅವರ ಬಳಿ ಮಾತೇ ಇಲ್ಲ. ಎಲ್ಲ ಮೌನ. ಉತ್ತರ ಕೇಳಿ ಬಂದವರ ಪ್ರಶ್ನೆಗಳೇ ಅನಾವಶ್ಯಕವಾಗಿಬಿಡುತ್ತಿದ್ದವು ಅವರ ಮುಂದೆ ಕುಳಿತಾಗ. ಅಂತಹ ತೇಜಸ್ಸು ಮತ್ತು ಮಹಿಮೆ ಅವರದ್ದು. ಆದರೆ ಕರ್ಮ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆ ಗಹನವಾಗಿತ್ತು ಮತ್ತು ಪ್ರಸ್ತುತವಾಗಿತ್ತು ಎಂಬ ಕಾರಣಕ್ಕೆ ಕೊಂಚ ಮಾತಾಡಿದ್ದರು ರಮಣರು.

ಈ ಎರಡು ವಿರೋಧಾತ್ಮಕ (contradictory) ತತ್ವಗಳನ್ನು ಸಮನ್ವಯ (reconcile) ಮಾಡುವದು ಹೇಗೆ?

ಜ್ಞಾನೋದಯದ ನಂತರ ಆಗಾಮಿ ಮತ್ತು ಸಂಚಿತ ಕರ್ಮಗಳು ಮಾತ್ರ ನಾಶವಾಗುತ್ತವೆ. ಪ್ರಾರಬ್ಧ ಕರ್ಮದ ಫಲ, ಜ್ಞಾನಿಯಾದರೂ ಸರಿ, ಅನುಭವಿಸಲೇಬೇಕು ಎನ್ನುತ್ತದೆ ಕರ್ಮ ಸಿದ್ಧಾಂತ. ಗಂಡ ಸತ್ತ ನಂತರ ಎಲ್ಲ ಪತ್ನಿಯರೂ ವಿಧವೆಯರೇ ಅರ್ಥಾತ್ ಜ್ಞಾನೋದಯದ ನಂತರ ಯಾವ ಕರ್ಮವೂ ಉಳಿಯುವದಿಲ್ಲ ಅನ್ನುತ್ತಾರೆ ರಮಣರು.

ಸಮನ್ವಯ ಮಾಡುವ ಜರೂರತ್ತೇ ಇಲ್ಲ. ಭಕ್ತ ಅವನ frame of  reference ನಿಂದ ಕೇಳಿದ್ದ. ಭಕ್ತನ ಲೌಕಿಕ frame of reference ಅಂದರೆ ಈ ಜೀವನ, ಜಗತ್ತು. ಅದೆಲ್ಲ ಮಾಯೆ. ಮಾಯೆಯೊಳಗೆ ಇದ್ದಾಗ ಮಾತ್ರ ಕರ್ಮ ಸಿದ್ಧಾಂತಕ್ಕೆ ಅರ್ಥ. ರಮಣರು ಹೇಳಿದ್ದು ಅವರ ಉನ್ನತವಾದ frame of reference ನಿಂದ. ಅವರದ್ದು ಪಾರಮಾರ್ಥಿಕ ಸತ್ಯದ reference point. ಅವರ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಪರಬ್ರಹ್ಮ.

ಎಲ್ಲವೂ ನೋಡುವ ದೃಷ್ಟಿ ಮೇಲೆ ಅವಲಂಬಿತ. ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದಂತೆ.

ಇದು ಮೊನ್ನಿತ್ತಲಾಗೆ ಏನೋ ಓದುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕು ಸಣ್ಣ ಮಟ್ಟದ ಜ್ಞಾನೋದಯಕ್ಕೆ (epiphany) ಕಾರಣವಾದ golden nugget! :)

Tuesday, May 29, 2018

ನೆರಳು

ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಒಮ್ಮೆಲೇ ಸಿಂಹದ ಗರ್ಜನೆ ಕೇಳಿಸಿತು. ಭೀತನಾದ ಮನುಷ್ಯ ಅತ್ತಿತ್ತ ನೋಡುವಷ್ಟರಲ್ಲಿ ಭೀಕರ ಸಿಂಹವೊಂದು ಅಟ್ಟಿಸಿಕೊಂಡು ಬಂದಿತು. ಜೀವ ರಕ್ಷಿಸಿಕೊಳ್ಳಲು ಓಡಿದ. ಇನ್ನೇನು ಸಿಂಹ ಮೈಮೇಲೆ ಎರಗುತ್ತದೆ ಅನ್ನುವಷ್ಟರಲ್ಲಿ ಸಿಕ್ಕ ಮರವೊಂದನ್ನೇರಿ ಬಚಾವಾದ. ಸಿಂಹ ಮರದ ಕೆಳಗೇ ನಿಂತು ರೋಷದಿಂದ ಗರ್ಜಿಸುತ್ತಿತ್ತು.

ಅದೇ ಮರದ ಮೇಲೆ ಕೋತಿಯೊಂದು ಸಹ ಇತ್ತು. ಅದು ಕೂಡ ಸಿಂಹ ಬಂದಿದ್ದರಿಂದ ತುಂಬಾ ಹೆದರಿತ್ತು. ಸಿಂಹ ಕೋತಿಯನ್ನು ಗಮನಿಸಿತು. ಮೊದಲು ಒಂದೇ ಬೇಟೆ ಎಂದುಕೊಂಡರೆ ಈಗ ಎರಡು ಬೇಟೆ ಇವೆ ಮರದ ಮೇಲೆ. ಒಂದನ್ನಾದರೂ ಬೇಟೆಯಾಡಲೇಬೇಕು. ಆದರೇನು ಮಾಡುವದು? ಎರಡೂ ಮರದ ಮೇಲೆ ಕೂತಿವೆ. ಕೆರಳಿದ ಸಿಂಹ ಮತ್ತೂ ಜೋರಾಗಿ ಗರ್ಜಿಸತೊಡಗಿತು. ಸಿಂಹಕ್ಕೆ ಅದೇನೆನ್ನಿಸಿತೋ ಏನೋ. ನೆಲದ ಮೇಲೆ ಮೂಡಿದ್ದ ಕೋತಿಯ ನೆರಳಿನ ಮೇಲೆ ಪಂಜಾದಿಂದ ಆಕ್ರಮಣ ಮಾಡುತ್ತ ಮತ್ತೂ ಭೀಕರವಾಗಿ ಗರ್ಜಿಸತೊಡಗಿತು.

ಕೋತಿ ಮತ್ತೂ ಭೀತಗೊಂಡಿತು. ಸಿಂಹ ಭೀಕರವಾಗಿ ಗರ್ಜಿಸಿ, ಕೋತಿಯ ನೆರಳಿನ ಮೇಲೆ ಪಂಜಾದಿಂದ ಹೊಡೆದಾಗೊಮ್ಮೆ ಕೋತಿ ಎಲ್ಲಿ ತನ್ನ ಮೇಲೆಯೇ ಸಿಂಹ ಆಕ್ರಮಣ ಮಾಡಿತೋ ಎಂಬಂತೆ ಪ್ರಾಣಭಯದಿಂದ ಸಿಕ್ಕಾಪಟ್ಟೆ ಕಿರುಚಾಡುತ್ತ, ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರುತ್ತಿತ್ತು. ಕೂತ ಕಡೆ ಕೂಡಲಿಲ್ಲ. ಅಷ್ಟು ಭಯ, ಗಾಬರಿ ಕೋತಿಗೆ.

ಸುಮಾರು ಹೊತ್ತು ಹೀಗೇ ನಡೆಯಿತು. ಕೋತಿಯ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡುವದು. ಅದಕ್ಕೆ ಪ್ರತಿಯಾಗಿ ಕೋತಿ ಕಿರುಚಾಡುತ್ತ ಭೀತಿಯಿಂದ ಆಕಡೆಯಿಂದ ಈಕಡೆಗೆ ನೆಗೆದಾಡುವದು. ಕೋತಿಯ ನಸೀಬ್ ಕೆಟ್ಟಿತ್ತು. ಒಮ್ಮೆ ಕೊಂಬೆಯಿಂದ ಕೊಂಬೆಗೆ ಹಾರುವಾಗ ಪೊರಪಾಟಿನಲ್ಲಿ ಆಯತಪ್ಪಿ ಕೆಳಗೆ ಬಿತ್ತು. ಮುಂದೇನು? ಅದಕ್ಕೇ ಕಾದಿದ್ದ ಸಿಂಹ ಒಂದೇ ಏಟಿನಲ್ಲಿ ಕೋತಿಯನ್ನು ಮುಗಿಸಿ ಸ್ವಾಹಾ ಮಾಡಿತು. ಪೆದ್ದು ಕೋತಿ! ಮರದ ಮೇಲೆ ಸುಮ್ಮನೆ ಕೂತಿದ್ದರೆ ಬದುಕುಳಿಯುತ್ತಿತ್ತು. ಸಿಂಹದ ಗರ್ಜನೆಗೆ ಹೆದರಿ, ಗಾಬರಿಗೊಂಡು, ತನ್ನ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡಿದಾಗೊಮ್ಮೆ ಅತ್ತಿಂದಿತ್ತ ಹಾರಾಡಿ, ಆಯತಪ್ಪಿ ಬಿದ್ದು, ಸಿಂಹಕ್ಕೆ ಆಹಾರವಾಗಿತ್ತು.

ಕೋತಿಯನ್ನು ಹೀಗೆ ಬೇಟೆಯಾಡಿದ ಸಿಂಹ ಏನೋ ಪಾಠ ಕಲಿತಿತು. ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದರೆ ಮರದ ಮೇಲಿಂದ ಕೋತಿ ಉದುರಿ ಬಿತ್ತು. ಹಾಗಾದರೆ ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದರೆ ಮೇಲಿರುವ ಮನುಷ್ಯನೂ ಕೆಳಗೆ ಉರುಳಿ ಬಿದ್ದರೂ ಬೀಳಬಹುದು. ಹೊಟ್ಟೆ ಇನ್ನೂ ತುಂಬಿಲ್ಲ. ಮನುಷ್ಯನನ್ನೂ ಬೇಟೆಯಾಡಿಬಿಡಬೇಕು ಎಂದುಕೊಂಡಿತು.

ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದಂತೆಯೇ ಮನುಷ್ಯನ ನೆರಳಿನ ಮೇಲೂ ಆಕ್ರಮಣ ಮಾಡಿ ಭೀಕರವಾಗಿ ಗರ್ಜನೆ ಮಾಡಿತು. ಅದೆಷ್ಟೇ ಬಾರಿ ಮನುಷ್ಯನ ನೆರಳಿನ ಮೇಲೆ ಆಕ್ರಮಣ ಮಾಡಿದರೂ ಮನುಷ್ಯ ಕೆಳಗೆ ಬೀಳಲಿಲ್ಲ. ತಲೆಯೆತ್ತಿ ನೋಡಿದರೆ ಕೂತಲ್ಲೇ ಕೂತಿದ್ದಾನೆ. ಕೋತಿಯಂತೆ ಅತ್ತಿತ್ತ ಹಾರಾಡುತ್ತಿಲ್ಲ. ಭೀತನಾಗುತ್ತಿಲ್ಲ. ಪ್ರತಿಕ್ರಿಯೆ ತೋರುತ್ತಿಲ್ಲ.

ಸುಮಾರು ಹೊತ್ತು ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದ ಸಿಂಹ ಆ ಮನುಷ್ಯ ಕೆಳಗೆ ಬೀಳುವದಿಲ್ಲ ಎಂದು ಖಾತ್ರಿಯಾದ ಮೇಲೆ ಅಲ್ಲಿಂದ ಹೊರಟುಹೋಯಿತು. ಸಿಂಹ ಹೋಯಿತು ಎಂದು ಖಾತ್ರಿಯಾದ ಮೇಲೆ ಮರದ ಮೇಲಿಂದ ಕೆಳಗಿಳಿದು ಬಂದ ಮನುಷ್ಯ ತನ್ನ ಮನೆ ಸೇರಿಕೊಂಡ.

ನೀತಿ: ನಮ್ಮ ಜೀವನದಲ್ಲಿ ಆಗುತ್ತಿರುವ ಎಲ್ಲ ಘಟನೆಗಳು, ಅನುಭವಗಳು ಎಲ್ಲ ನಮ್ಮ ನೆರಳಿನ ಮೇಲೆ ಆಗುತ್ತಿವೆ ಎಂದು ತಿಳಿಯಬೇಕು. ಸುಖವಿರಲಿ, ದುಃಖವಿರಲಿ, ನಲಿವಿರಲಿ, ನೋವಿರಲಿ, ಲಾಭವಿರಲಿ, ನಷ್ಟವಿರಲಿ, ಆರೋಗ್ಯವಿರಲಿ, ರೋಗವಿರಲಿ  - ಇದ್ಯಾವುದೂ "ನಮಗೆ" ಆಗುತ್ತಿಲ್ಲ. ನಮ್ಮ ನೆರಳಿಗೆ ಆಗುತ್ತಿವೆ ಎಂದು ತಿಳಿಯಬೇಕು. ಹಾಗೆ ತಿಳಿದಾಗ ಮಾತ್ರ ನಿರ್ಲಿಪ್ತತೆಯಿಂದ ಸಂಸಾರದ ಸಾಗರವನ್ನು ದಾಟಬಹುದು. ಅದನ್ನು ಬಿಟ್ಟು ಮೂಢ ಕೋತಿಯಂತೆ ಸಿಂಹ ನೆರಳಿನ ಮೇಲೆ ದಾಳಿ ಮಾಡಿದಾಗ ವಿನಾಕಾರಣ ಗಾಬರಿಗೊಂಡು ಅತ್ತಿಂದಿತ್ತ ಹಾರಾಡಿ ಪೊರಪಾಟಿನಲ್ಲಿ ಕೆಳಗೆ ಬಿದ್ದು ಸಿಂಹದ ಪಾಲಾಗಬಾರದು. ಮರದ ಮೇಲಿರುವ ಕೋತಿ ಅಜ್ಞಾನದಿಂದ ಕೂಡಿರುವ ಜೀವಾತ್ಮ. ಸಿಂಹ ವಿಧಿ. ಸಿಂಹದ ಆಕ್ರಮಣ ಕರ್ಮಫಲ. ಸಿಂಹ ಅದೆಷ್ಟೇ ರೋಷದಿಂದ ಗರ್ಜಿಸಿ ನೆರಳಿನ ಮೇಲೆ ಆಕ್ರಮಣ ಮಾಡಿದರೂ ವಿಚಲಿತನಾಗದೇ ಸ್ಥಿತಪ್ರಜ್ಞನಾಗಿ ಕುಳಿತ ಮನುಷ್ಯನೂ ಜೀವಾತ್ಮನೇ. ಅಷ್ಟೇ ಅವನಿಗೆ ಜ್ಞಾನೋದಯವಾಗಿದೆ. ತಾನು ಪರಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂದು ಮನವರಿಕೆಯಾಗಿದೆ. ಸಂಸಾರದ ಪ್ರಕ್ರಿಯೆಗಳೆಲ್ಲ ತನ್ನದೇ ನೆರಳಾದ ಜೀವಾತ್ಮದ ಮೇಲೆ ಎಂದು ತಿಳಿದಿರುವ ಕಾರಣ ಆತ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. ಬಂದದ್ದನ್ನೆಲ್ಲಾ ಎದುರಿಸುತ್ತಾನೆ. ಫಲಾಫಲಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸುತ್ತಾನೆ. ಸ್ಥಿತಪ್ರಜ್ಞನಾಗಿ ಇರುತ್ತಾನೆ.

ಮಹಾರಾಷ್ಟ್ರದಲ್ಲಿ ಆಗಿಹೋದ ಶ್ರೇಷ್ಠ ಸಂತರಾದ ಸಂತ ಜ್ಞಾನೇಶ್ವರರು ಬರೆದ 'ಜ್ಞಾನೇಶ್ವರಿ' ಎಂಬ ಪುಸ್ತಕದಲ್ಲಿ ಬರುವ ನೀತಿಕಥೆ.

ಇಂತಹ ನೀತಿಕಥೆಗಳಿಂದ ಏನುಪಯೋಗ?  ಬದುಕಿನ ಬಾಣಲೆಯಲ್ಲಿ ವಿಧಿ ಹೊತ್ತಿಸಿದ ಬೆಂಕಿಯಲ್ಲಿ ಬರೋಬ್ಬರಿ ಹುರಿದು / ಉರಿದು ಹೋಗುತ್ತಿರುವಾಗ ಇವೆಲ್ಲ ನೆನಪಾಗುತ್ತವೆಯೇ? ಉಪಯೋಗವಾಗುತ್ತವೆಯೇ? ಎಂದು ಕೇಳಿದರೆ ಅಂತಹ ಸಂದರ್ಭಗಳಲ್ಲೇ ಇಂತಹ ನೀತಿಕಥೆಗಳ ಗರಿಷ್ಠ ಮೌಲ್ಯ ಮತ್ತು ಉಪಯೋಗ. ಇಲ್ಲವಾದರೆ ಕ್ರೂರ ವಿಧಿ ಬಹು ಬೇಗ ಹಣಿದುಬಿಟ್ಟೀತು. 

Sunday, May 13, 2018

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ.

ಅವನು ಡಾನ್ ಛೋಟಾ ಶಕೀಲ್. ಪರಮಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ. ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಅಲ್ಲಿಂದಲೇ ಭೂಗತಲೋಕದ ವ್ಯವಹಾರ ಸಂಬಾಳಿಸುತ್ತಾನೆ. ಸೇಠುಗಳಿಗೆ ಧಮ್ಕಿ ಹಾಕಿ, ಅವರಿಂದ ಝಣಝಣ ರೊಕ್ಕ ಉದುರಿಸಲು ಆಗಾಗ ಫೋನ್ ಮಾಡುತ್ತಿರುತ್ತಾನೆ. ಅದು ಆತನ ವೃತ್ತಿ. ಆದರೆ ಡಾನ್ ಛೋಟಾ ಶಕೀಲನಿಗೆ ಒಮ್ಮೊಮ್ಮೆ ಪತ್ರಕರ್ತರೊಂದಿಗೆ ಹರಟೆ ಹೊಡೆಯಬೇಕು ಎನ್ನಿಸಿಬಿಡುತ್ತದೆ. ಆಗ ಒಂದು ನಂಬರಿಗೆ ಡಯಲ್ ಮಾಡುತ್ತಾನೆ. ಭಾರತದಲ್ಲಿರುವ ಒಬ್ಬ ಮಹಿಳಾ ಪತ್ರಕರ್ತೆ ಫೋನೆತ್ತಿ, 'ಹೇಳಿ ಶಕೀಲ್ ಭಾಯ್,' ಎಂದು ಪಕ್ಕಾ ವೃತ್ತಿಪರ ಪತ್ರಕರ್ತೆಯೊಬ್ಬಳ ನಿರ್ಭಾವುಕ ದನಿಯಲ್ಲಿ ತಮ್ಮ ಎಲ್ಲ ಮಾಹಿತಿದಾರರೊಂದಿಗೆ ಮಾತಾಡಿದಂತೆ ನಿರುದ್ವೇಗದಿಂದ ಮಾತಾಡುತ್ತಾರೆ.  ಆಕಡೆಯಿಂದ ಛೋಟಾ ಶಕೀಲ್, 'ಶೀಲಾಜೀ, ಹೇಗಿದ್ದೀರಿ ನೀವು?' ಎಂದು ಕುಶಲ ವಿಚಾರಿಸುತ್ತಾನೆ. ಮುಂದೆ ಘಂಟೆಗಟ್ಟಲೆ ಹರಟೆ ಹೊಡೆಯುತ್ತಾನೆ. ನಡುನಡುವೆ ಭೂಗತಲೋಕಕ್ಕೆ ಸಂಬಂಧಪಟ್ಟ ಬ್ರೇಕಿಂಗ್ ನ್ಯೂಸ್ ಅನ್ನಿಸುವಂತಹ ಮಾಹಿತಿಗಳನ್ನು ಹರಿಬಿಡುತ್ತಾನೆ. ಆಗ ಆ ಮಹಿಳಾ ಪತ್ರಕರ್ತೆ ಮೈಯೆಲ್ಲಾ ಕಿವಿಯಾಗಿ ಬರೋಬ್ಬರಿ ನೋಟ್ ಮಾಡಿಕೊಳ್ಳುತ್ತಾರೆ. ಶಕೀಲ್ ಮಾತುಕತೆ ಮುಗಿಸಿದಾಗ ಮಾಧ್ಯಮ ಲೋಕ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿಗೆ ಅಣಿಯಾಗಿರುತ್ತದೆ. ಶೀಲಾ ರಾವಲ್ ಎಂಬ ದಿಟ್ಟ ಕ್ರೈಂ ಪತ್ರಕರ್ತೆ ತುಂಬಾ ರೋಚಕ ಅನ್ನಿಸುವಂತಹ ಮತ್ತೊಂದು ಸುದ್ದಿಯನ್ನು ಬ್ರೇಕ್ ಮಾಡಿರುತ್ತಾರೆ. ಕ್ರೈಂ ಮಾಧ್ಯಮಲೋಕದ ಅನಭಿಷಿಕ್ತ ಮಹಾರಾಣಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿರುತ್ತದೆ.

ಶೀಲಾ ರಾವಲ್ ಮತ್ತು ಅವರು ಬರೆದಿರುವ ಪುಸ್ತಕ 

ಅವರು ಶೀಲಾ ರಾವಲ್. ಮೊದಲು ಶೀಲಾ ಭಟ್ ಆಗಿದ್ದರು. ವಿವಾಹದ ನಂತರ ಶೀಲಾ ರಾವಲ್ ಎಂದು ಚಾಲ್ತಿಯಲ್ಲಿದ್ದಾರೆ. ನಿಜವಾದ ಕ್ರೈಂ ಪತ್ರಕರ್ತರೇ ಕಮ್ಮಿ. ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾಹೇಳಿಕೆಗಳಿಗೇ ಮಸಾಲೆ ಹಾಕಿ, ಅದನ್ನೇ ಹಿಂದೆ ಮುಂದೆ ಮಾಡಿ ಬರೆದು ಕ್ರೈಂ ಪತ್ರಕರ್ತ ಎಂದು ಸ್ಕೋಪ್ ತೆಗೆದುಕೊಳ್ಳುವವರೇ ಜಾಸ್ತಿ. ಅದರಲ್ಲೂ ಕ್ರೈಂ ವರದಿ ಮಾಡುವ ಪತ್ರಕರ್ತರಲ್ಲಿ ಹೆಚ್ಚಿನವರು ಗಂಡಸರು. ಆ ಫೀಲ್ಡ್ ಮಹಿಳೆಯರಿಗೆ ಸರಿಯಾದದ್ದಲ್ಲ ಎಂದು ಮಹಿಳಾ ಪತ್ರಕರ್ತೆಯರು ಹೆಚ್ಚಾಗಿ ಕ್ರೈಂ ರಿಪೋರ್ಟಿಂಗ್ ಮಾಡಲು ಹೋಗುವದಿಲ್ಲ. ಅಂತಹ ಪುರುಷಪ್ರಧಾನ ಲೋಕದ ಗಾಜಿನ ಛಾವಣಿಯನ್ನು (glass ceiling) ಛಿದ್ರಮಾಡಿ ಯಶಸ್ವಿಯಾದವರು ಶೀಲಾ ರಾವಲ್.

ಸಾಂಪ್ರದಾಯಿಕ ಗುಜರಾತಿ ಬ್ರಾಹ್ಮಣ ಸಮಾಜದಲ್ಲಿ ಹುಡುಗಿಯರು ನೌಕರಿ ಚಾಕರಿಗೆ ಬರುವದೇ ಕಮ್ಮಿ. ಅದರಲ್ಲೂ ಪತ್ರಿಕೋದ್ಯಮಕ್ಕೆ ಅದರಲ್ಲೂ ಕ್ರೈಂ ಪತ್ರಿಕೋದ್ಯಮಕ್ಕೆ ಬರುವದು ದೂರದ ಮಾತು. ಇಂತಹ ಲೋಕಕ್ಕೆ ಶೀಲಾ ರಾವಲ್ ಎಂಬ ಗುಜರಾತಿ ಬ್ರಾಹ್ಮಣ ಹುಡುಗಿ ಎಂಟ್ರಿ ಕೊಟ್ಟಿದ್ದೊಂದೇ ಅಲ್ಲ, ದೊಡ್ಡ ಮಟ್ಟದ ಎಲ್ಲ ಭೂಗತ ಪಾತಕಿಗಳನ್ನು ಮುಖತಃ ಭೆಟ್ಟಿಯಾದ ಹೆಗ್ಗಳಿಕೆ ಯಾರಿಗಾದರೂ ಇದ್ದರೆ ಅದು ಶೀಲಾ ರಾವಲ್ ಅವರಿಗೆ ಮಾತ್ರ. ಮಹಿಳಾ ಪತ್ರಕರ್ತೆಯರು ಹೋಗಲಿ ಘಟಾನುಘಟಿ ಪುರುಷ ಪತ್ರಕರ್ತರೇ ಇವರು ಭೇಟಿಯಾದಷ್ಟು ಭೂಗತ ಪಾತಕಿಗಳನ್ನು ಖುದ್ದಾಗಿ ಭೇಟಿಯಾಗಿಲ್ಲ.

ಮೊದಲು ಶೀಲಾ ಭಟ್ ರಾವಲ್ ಹೆಚ್ಚಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಈಗಿತ್ತಲಾಗೆ ಅವರೂ ದೃಶ್ಯಮಾಧ್ಯಮಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲೂ ಭೂಗತಲೋಕದ ಬಗ್ಗೆ ಲೇಟೆಸ್ಟ್ ಸುದ್ದಿಗಳನ್ನು ಬ್ರೇಕ್ ಮಾಡುತ್ತಲೇ ಇರುತ್ತಾರೆ.

ನೆನಪಿರಲಿ. ಈ ಖಡಕ್ ಕ್ರೈಂ ರಿಪೋರ್ಟಿಂಗ್ ಎಂಬುದು ಕತ್ತಿಯ ಅಲುಗಿನ ಮೇಲೆ ಸರ್ಕಸ್ ಮಾಡಿದ ಹಾಗೆ. ಅಷ್ಟು ಅಪಾಯಕಾರಿ. ಭೂಗತಲೋಕದ ಸಂಕೀರ್ಣ ಸಮೀಕರಣಗಳನ್ನು ಸರಿಯಾಗಿ  ಅರ್ಥಮಾಡಿಕೊಳ್ಳದ ಪತ್ರಕರ್ತರು ಚಿತ್ರವಿಚಿತ್ರವಾಗಿ ಸತ್ತುಹೋಗಿದ್ದಾರೆ. ೩೦೧೧ ರಲ್ಲಿ ಜ್ಯೋತಿರ್ಮಯ್ ಡೇ ಎಂಬ ಮುಂಬೈನ ಖ್ಯಾತ  ಕ್ರೈಂ ಪತ್ರಕರ್ತರು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ನಡುವಿನ ವೈರತ್ವಕ್ಕೆ ಮತ್ತು ಮತ್ತೊಬ್ಬ ಪತ್ರಕರ್ತೆಯ ಕಾರಸ್ಥಾನಕ್ಕೆ ಜೀವವನ್ನೇ ಕಳೆದುಕೊಂಡರು. ಹಂತಕರ ಗುಂಡಿಗೆ ದಾರುಣವಾಗಿ ಬಲಿಯಾದರು. ೧೯೮೦ ರ ದಶಕದಲ್ಲಿ ಅಯ್ಯರ್ ಎಂಬ ಪತ್ರಕರ್ತರೂ ಹೀಗೇ ಭೂಗತಲೋಕದ ಗುಂಡಿಗೆ ಬಲಿಯಾಗಿದ್ದರು. ದೇಶಿ ಡಾನ್  ಅರುಣ್ ಗೌಳಿಯನ್ನು ಸರಿಯಾಗಿ ಇಂಟರ್ವ್ಯೂ ಮಾಡಲಿಲ್ಲ ಎಂದು ಗೌಳಿಯ ಬಂಟರು ಮತ್ತೊಬ್ಬ ಪತ್ರಕರ್ತೆ ಮೇಲೆ ಹಲ್ಲೆ ಮಾಡಿದ್ದರು. ಭೂಗತಲೋಕದ ನೈಜವಾದ ರಿಯಲ್ ರಿಪೋರ್ಟಿಂಗ್ ಮಾಡುವದು ಅಂದರೆ ಸುಲಭದ ಮಾತಲ್ಲ. ಭೂಗತ ಲೋಕದ ಮಂದಿಯ ಬಗ್ಗೆ ತಮಗೆ ಸರಿಯೆನ್ನಿಸಿದ್ದನ್ನು ಬರೆದು ಅರಗಿಸಿಕೊಳ್ಳುವದು ಸುಲಭವೂ ಅಲ್ಲ. ಆದರೆ ಅದನ್ನೆಲ್ಲ ಸಾಧಿಸಿ ತೋರಿಸಿದ್ದಷ್ಟೇ ಅಲ್ಲ ಭೂಗತಲೋಕವೇ ಎದ್ದು ನಿಂತು ಇವರ ನಿಯತ್ತನ್ನು, ವೃತ್ತಿಪರತೆಯನ್ನು ಗೌರವಿಸಬೇಕು ಎನ್ನುವಂತಹ ವ್ಯಕ್ತಿತ್ವವನ್ನು ಸದಾ ಕಾಪಾಡಿಕೊಂಡು ಬಂದವರು ಶೀಲಾ ರಾವಲ್.

ಅದು ಇಸ್ವಿ ೨೦೦೫. ದಾವೂದ್ ಇಬ್ರಾಹಿಂ ತುಂಬಾ ಖುಷಿಯಾಗಿದ್ದ. ಪಾಕಿಸ್ತಾನದ ಖ್ಯಾತ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಜೊತೆ ಸಂಬಂಧ ಬೆಳೆಸಿದ್ದ. ಅವರಿಬ್ಬರ ಕುಟುಂಬಗಳ ಮಧ್ಯೆ ಗೆಳೆತನ ಮೊದಲಿಂದಲೂ ಇತ್ತು. ತನ್ನ ಮಗಳನ್ನು ಜಾವೇದ್ ಮಿಯಾಂದಾದನ ಮಗನಿಗೆ ಮದುವೆ ಮಾಡಿಕೊಟ್ಟ ದಾವೂದ್ ಕ್ರಿಕೆಟಿಗನ ಬೀಗನಾಗಿ ಬದಲಾಗಿದ್ದ. ಈ ಐತಿಹಾಸಿಕ ಮದುವೆ ಭಯಂಕರ ವಿಜೃಂಭಣೆಯಿಂದ ಜರುಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ, ಸೌದಿಯ ಮೆಕ್ಕಾದಲ್ಲಿ ವೈಭವೋಪೇತ ಸಮಾರಂಭಗಳು ನಡೆದಿದ್ದವು. ಅಲ್ಲೆಲ್ಲ ದಾವೂದ್ ಹಾಜರಿದ್ದ. ಅಲ್ಲೆಲ್ಲ ಅವನಿಗೆ ಬರೋಬ್ಬರಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ದುಬೈನಲ್ಲಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕೆ ಮಾತ್ರ ದಾವೂದ್ ಬರಲೇ ಇಲ್ಲ ಎಂದು ಗುಲ್ಲಾಗಿತ್ತು. ದುಬೈಗೆ ಬರಲಿರುವ ದಾವೂದನ್ನು ಉಡಾಯಿಸಿಬಿಡುವ ಖತರ್ನಾಕ್ ಸ್ಕೀಮ್ ಒಂದನ್ನು ಭಾರತೀಯ ಬೇಹುಗಾರರು ಹಾಕಿದ್ದಾರೆ ಎಂದು ಮೊದಲೇ ಮಾಹಿತಿ ಪಡೆದುಕೊಂಡ ದಾವೂದ್ ಅದೆಲ್ಲ ರಿಸ್ಕ್ ಬೇಡವೇ ಬೇಡ ಎಂದು ದುಬಾಯಿಗೆ ಬರಲೇ ಇಲ್ಲ. ಅವನ ಅನುಪಸ್ಥಿತಿಯಲ್ಲಿಯೇ ಅವನ ಮಗಳ ಆರತಕ್ಷತೆ ನಡೆದುಹೋಯಿತು. ಇಂತಹ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಬಂದಿತ್ತು. ಅದನ್ನೇ ಇಲ್ಲಿಯವರೆಗೆ ನಾವೂ ಕೂಡ ನಂಬಿದ್ದೆವು.

ಆದರೆ ಮೊತ್ತಮೊದಲಬಾರಿಗೆ ಶೀಲಾ ರಾವಲ್ ತಮ್ಮ ಪುಸ್ತಕದಲ್ಲಿ  Godfathers of Crime (Face-to-Face with India's most wanted) ಹೊಚ್ಚ ಹೊಸ ಖತರ್ನಾಕ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಬೆಚ್ಚಿಬೀಳಿಸುವ ಮಾಹಿತಿ ಎಂದರೆ - ದುಬೈನಲ್ಲಿ ನಡೆದ ಮಗಳ ಆರತಕ್ಷತೆಗೆ ಖುದ್ದು ದಾವೂದ್ ಮುದ್ದಾಂ ಬಂದಿದ್ದ. ತನ್ನ ಹಿತೈಷಿಗಳ ಸಲಹೆ ಪ್ರಕಾರ ಕೊಂಚ low profile ಕಾದುಕೊಂಡಿದ್ದ. ಪ್ರಚಾರದಿಂದ ದೂರವಿದ್ದ. ಆದರೆ ಯಾರ್ಯಾರನ್ನು ತನ್ನ ಪುತ್ರಿಯ ಮದುವೆಯ ಆರತಕ್ಷತೆಯಲ್ಲಿ ಸ್ವಾಗತಿಸಬೇಕಿತ್ತೋ, ಯಾರ್ಯಾರ ಖಾತಿರ್ದಾರಿ ಮಾಡಬೇಕಿತ್ತೋ ಅವೆಲ್ಲವನ್ನೂ ದಾವೂದ್ ಬರೋಬ್ಬರಿ ನಿಭಾಯಿಸಿದ್ದ. ಭಾರತಕ್ಕೆ, ಪಾಕಿಸ್ತಾನಕ್ಕೆ, ಅರಬ್ ಸಂಯುಕ್ತ ಸಂಸ್ಥಾನಕ್ಕೆ ಮುಜುಗರವಾಗದಿರಲಿ, ಅಲ್ಲಿನ ಸರ್ಕಾರಗಳಿಗೆ ಮುಖಭಂಗವಾಗದೇ ಇರಲಿ ಅನ್ನುವ ಕಾರಣಕ್ಕೆ ಅವನಿಗೆ ಕಡ್ಡಾಯವಾಗಿ low profile ಕಾದುಕೊಳ್ಳಲು ಕಟ್ಟುನಿಟ್ಟಾಗಿ ಹೇಳಲಾಗಿತ್ತು. ಹಾಗಾಗಿಯೇ ದಾವೂದ್ ದುಬೈಗೆ ಬರಲೇ ಇಲ್ಲ. ಅವನಿಗೆ ಇಲ್ಲಿ ಪ್ರವೇಶವಿಲ್ಲ ಎಂದು ನಂತರ ಹೇಳಿಕೊಳ್ಳಲು ಸಾಧ್ಯವಾಗಿದ್ದು.

ಆದರೆ ದಾವೂದ್ ಪುತ್ರಿಯ ಆರತಕ್ಷತೆಗೆ ಹರಸಾಹಸ ಮಾಡಿ ಆಮಂತ್ರಣ ಗಿಟ್ಟಿಸಿದ್ದ ಶೀಲಾ ರಾವಲ್ ದಾವೂದನನ್ನು ನೋಡಿದ್ದೊಂದೇ ಅಲ್ಲ, ದಾವೂದ್ ತಮಗೆ ಗೌರವದಿಂದ ಸಲಾಂ ಕೂಡ ಮಾಡಿದ್ದ ಎನ್ನುವ ಬ್ರೇಕಿಂಗ್ ನ್ಯೂಸ್ ನೀಡಿ ಎಲ್ಲ ಸರ್ಕಾರಗಳು ನೀಡಿದ ಹೇಳಿಕೆಗಳು ಶುದ್ಧ ಭೋಂಗು ಎಂದು ತಿಳಿಯುವಂತೆ ಮಾಡಿದ್ದಾರೆ.

'ಅಲ್ಲ ಶೀಲಾ ಅವರೇ, ದಾವೂದನ ಪುತ್ರಿಯ ವಿವಾಹದ ಆರತಕ್ಷತೆ ಆಗಿದ್ದು ೨೦೦೫ ರಲ್ಲಿ. ದಾವೂದ್ ದುಬೈಗೆ ಬರಲೇ ಇಲ್ಲ ಎನ್ನುವ ಸುದ್ದಿಯೇ ಅಂದಿನಿಂದಲೂ ಚಾಲ್ತಿಯಲ್ಲಿತ್ತು. ಈಗ ೨೦೧೫ ರಲ್ಲಿ ನೀವು ನಿಮ್ಮ ಪುಸ್ತಕದಲ್ಲಿ ದಾವೂದ್ ಖುದ್ದಾಗಿ ಅಲ್ಲಿ ಹಾಜರಿದ್ದ ಎಂದರೆ ಹೇಗೆ ನಂಬೋದು?' ಎಂದು ಕೇಳಿದರೆ ಅದಕ್ಕೂ ಸಮರ್ಪಕ ವಿವರಣೆ ಕೊಡುತ್ತಾರೆ ಲೇಖಕಿ ಪತ್ರಕರ್ತೆ ಶೀಲಾ. 'ಆಗಲೇ ಆ ಸುದ್ದಿಯನ್ನು ಬ್ರೇಕ್ ಮಾಡಲು ಕೆಲವು ಅನಿವಾರ್ಯತೆಗಳು ಇದ್ದವು. ಸರ್ಕಾರಗಳಿಂದ ವಿನಂತಿಭರಿತ ಒತ್ತಡವಿತ್ತು. ಬೇರೆಬೇರೆ ದೇಶಗಳ ಸರ್ಕಾರಗಳಿಗೆ ಅವರದೇ ಆದ ಕಾರಣಗಳಿಗಾಗಿ ದಾವೂದ್ ದುಬೈಗೆ ಬರಲೇ ಇಲ್ಲ ಎಂದು ಹೇಳಿಕೊಳ್ಳಬೇಕಾಗಿತ್ತು. ಹಾಗಾಗಿ ನಿಜ ಸುದ್ದಿ ತಿಳಿದಿದ್ದ ನಮ್ಮಂತವರೂ ಕೂಡ ಅಂತಹ ವಿನಂತಿ ಮತ್ತು ಒತ್ತಡಗಳ ಕಾರಣಗಳಿಂದ ಆಗ ಆ ಸ್ಟೋರಿಯನ್ನು ಬ್ರೇಕಿಂಗ್ ನ್ಯೂಸ್ ಮಾಡಲಾಗಲಿಲ್ಲ.'

ಇದು ನಂಬಲಾಗದ ವಿವರಣೆ ಏನಲ್ಲ. ಎಂತಹ ದಿಟ್ಟ ಪತ್ರಕರ್ತರೇ ಆಗಲಿ, ಒಮ್ಮೊಮ್ಮೆ ಅತಿ ದೊಡ್ಡಮಟ್ಟದಿಂದ ವಿನಯಪೂರ್ವಕ ವಿನಂತಿಗಳು ಬಂದಾಗ ಒಪ್ಪಲೇಬೇಕಾಗುತ್ತದೆ. ದೇಶದ ಹಿತದ ಪ್ರಶ್ನೆ, ಮಾನದ ಪ್ರಶ್ನೆ ಅಂತೆಲ್ಲ ಫಿಟ್ಟಿಂಗ್ ಇಟ್ಟುಬಿಡುತ್ತಾರೆ. ಮತ್ತೆ ಪತ್ರಕರ್ತರಿಗೆ ಅಮೂಲ್ಯ ಸಂಪರ್ಕಗಳನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಸುದ್ದಿ ಗೊತ್ತಾದ ತಕ್ಷಣ ಬರೆದು ಬಿಸಾಡಲು ಆಗುವದಿಲ್ಲ. ವೃತ್ತಿಪರರ ಅನಿವಾರ್ಯತೆಗಳು ಅವರಿಗೇ ಗೊತ್ತು.

ಡಾನ್ ಛೋಟಾ ಶಕೀಲನನ್ನು ತುಂಬಾ ಕಾಡಿ ಬೇಡಿ ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭಕ್ಕೆ ಆಮಂತ್ರಣ ಗಿಟ್ಟಿಸಿದ್ದರು ಶೀಲಾ. ಆಮಂತ್ರಣ ಸಿಕ್ಕಿತು ಅಂದಾಕ್ಷಣ ಕೈಬೀಸಿಕೊಂಡು, ಬೇಕಾದರೆ ಲಕೋಟೆಯಲ್ಲಿ ನೂರು ರೂಪಾಯಿ ನೋಟಿನ ಆಹೇರು ಇಟ್ಟುಕೊಂಡು, ಹೋಗಿಬಿಡಲು ಅದೇನು ಸಾಮಾನ್ಯನ ಮಗಳ ಮದುವೆಯೇ? ಅಂತರರಾಷ್ಟ್ರೀಯ ಉಗ್ರವಾದಿ ಎಂದು ಎಲ್ಲ ಕಡೆ ನೋಟೆಡ್ ಆದ ಭೂಗತಪಾತಕಿಯ ಖಾಸಗಿ ಸಮಾರಂಭ ಅದು. ದುಬೈನ ಪರಮ ದುಬಾರಿ ಐಷಾರಾಮಿ ಹಿಲ್ಟನ್ ಹೋಟೆಲ್ ಅಂದು ಅಕ್ಷರಶಃ ಕೋಟೆಯಾಗಿತ್ತು. ಆ ಮಟ್ಟದ ರಕ್ಷಣಾ ವ್ಯವಸ್ಥೆಯಿತ್ತು. ಸಾರ್ವಜನಿಕವಾಗಿ ದಾವೂದ್ ಇಬ್ರಾಹಿಂನನ್ನು ಟೆರರಿಸ್ಟ್, ಡಾನ್, ಪಾತಕಿ ಏನೇ ಅನ್ನಿ ಆದರೆ ಒಂದು ಖತರ್ನಾಕ್ ಓಪನ್ ಸೀಕ್ರೆಟ್ ಅಂದರೆ ಅನೇಕ ದೇಶಗಳ ಬೇಹುಗಾರಿಕೆ ಸಂಸ್ಥೆಗಳಿಗೆ ಆತನ ಅವಶ್ಯಕತೆ ತುಂಬಾ ಇದೆ. ಅದಕ್ಕೆ ಮುಖ್ಯ ಕಾರಣ ಆತನ ಹತೋಟಿಯಲ್ಲಿರುವ ದಕ್ಷ ಹವಾಲಾ ವ್ಯವಸ್ಥೆ. ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಆತ ನಿಮಿಷಾರ್ಧದಲ್ಲಿ ಕೋಟಿ ಕೋಟಿ ಡಾಲರುಗಳನ್ನು ಬೇಕಾದ ಕರೆನ್ಸಿಯಲ್ಲಿ ನೀಟಾಗಿ ತಲುಪಿಸಬಲ್ಲ. ಅದೇ ಅವನ ಸ್ಪೆಷಾಲಿಟಿ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮತ್ತು ಪರ್ಯಾಯ ದೊರೆ ಬರದ ಹೊರತೂ ದಾವೂದನ ಕೂದಲು ಕೂಡ ಕೊಂಕುವದಿಲ್ಲ. ಕೊಂಕಲು ಕೆಲವೊಂದು ಜಾಗತಿಕ ಹಿತಾಸಕ್ತಿಗಳು ಬಿಡುವದೂ ಇಲ್ಲ. ಈ ಕಡೆ ಭಾರತ ಮತ್ತು ಪಾಕಿಸ್ತಾನ ಅದೆಷ್ಟೇ ಗಜುಮ್ ಹಾಕಿದರೂ ಸರಿ, ಅದೇನೇ ಲಗಾಟಿ ಹೊಡೆದರೂ ಸರಿ, ಏನೂ ಆಗುವದಿಲ್ಲ. ಆಕಡೆ ಗಹಗಹಿಸಿ ರಕ್ಕಸನಗೆ ನಗುತ್ತ ದಾವೂದ್ ಆರಾಮಾಗಿ ಇರುತ್ತಾನೆ. ಶೀಲಾ ರಾವಲ್ ಕೂಡ ಅದನ್ನೇ ಬರೆಯುತ್ತಾರೆ.

ಬ್ಯಾಕ್ ಟು ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭ...ವಧುವರರು ಸ್ಥಾಪಿತರಾಗಿದ್ದ ಮಂಟಪದಿಂದ ಕೊಂಚ ದೂರದಲ್ಲಿ, ಕೊಂಚ ಕತ್ತಲಿರುವ ಜಾಗದಲ್ಲಿ, ಮೃದು ದಪ್ಪನೆ ಚರ್ಮದ ದುಬಾರಿ ಖುರ್ಚಿ ಮೇಲೆ ಡಾನ್ ದಾವೂದ್ ಇಬ್ರಾಹಿಂ ಕಾಲ ಮೇಲೆ ಕಾಲು ಹಾಕಿಕೊಂಡು ವಿರಾಜಮಾನನಾಗಿದ್ದ. ಮಿರಿಮಿರಿ ಮಿಂಚುತ್ತಿರುವ ದುಬಾರಿ ಸೂಟ್ ಧರಿಸಿದ್ದ ಆತ ಚಮಕಾಯಿಸುತ್ತಿದ್ದ. ವಧುವರರಿಗೆ ಶುಭಕೋರಲು ಬಂದು ಹೋಗುತ್ತಿದ್ದ ಎಲ್ಲರೂ ಆತನಿಗೆ ಬರೋಬ್ಬರಿ ಕಾಣುತ್ತಿದ್ದರು. ಆದರೆ ಆತ ಎಲ್ಲರಿಗೂ ಅಷ್ಟು ಸುಲಭವಾಗಿ ಕಾಣುತ್ತಿರಲಿಲ್ಲ. ನನಗೆ ಕಂಡ. ದೊಡ್ಡ ಮೀಸೆಯ ಅವನನ್ನು ನಾನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ಕೊಂಚ ತಲೆ ತಗ್ಗಿಸಿ, ಕಣ್ಣಲ್ಲೇ ವಂದಿಸಿದೆ. ಗೌರವ ಸೂಚಿಸಿದೆ. ಅದಕ್ಕೆ ಪ್ರತಿಯಾಗಿ ದಾವೂದ್ ಸಹ ಗೌರವ ಸಲ್ಲಿಸಿದ. ಸಲಾಂ ಮಾಡಿದ. ಹೀಗೆ ತಮ್ಮ ಅತಿ ದುರ್ಲಭ 'ದಾವೂದ್ ದರ್ಶನ'ದ ಬಗ್ಗೆ ಬರೆದುಕೊಂಡಿದ್ದಾರೆ ಶೀಲಾ ರಾವಲ್.

ದಾವೂದ್ ಇಬ್ರಾಹಿಂ ಬಿಟ್ಟರೆ ಮತ್ತೊಬ್ಬ ದೊಡ್ಡ ಡಾನ್ ಅಂದರೆ ದಾವೂದನ ಕಡುವೈರಿ ಛೋಟಾ ರಾಜನ್. ಸೆಪ್ಟೆಂಬರ್ ೨೦೦೦ ನಲ್ಲಿ ಥೈಲಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಕಳಿಸಿದ್ದ ಶಾರ್ಪ್ ಶೂಟರ್ಸ್ ಮಾರಣಾಂತಿಕ ಹಲ್ಲೆ ಮಾಡಿದರು. ನಾಲ್ಕಾರು ಗುಂಡೇಟು ತಿಂದಿದ್ದ ಛೋಟಾ ರಾಜನ್ ಬಚಾವಾಗಿದ್ದೇ ಒಂದು ದೊಡ್ಡ ಪವಾಡ. ಛೋಟಾ ರಾಜನ್ನನ ಅತ್ಯಾಪ್ತರಿಗೆ ಇನ್ನಿಲ್ಲದ ಆಮಿಷ ತೋರಿಸಿ ಅವರ ನಿಯತ್ತನ್ನು ಖರಾಬ್ ಮಾಡಿದ್ದ D ಕಂಪನಿ ಅವರ ಮೂಲಕ ಛೋಟಾ ರಾಜನ್ ಇರುವ ರಹಸ್ಯ ಸ್ಥಳದ ಮಾಹಿತಿ ತೆಗೆದಿತ್ತು. ಮಾಹಿತಿ ಸಿಕ್ಕಿದ್ದೇ ತಡ, ಛೋಟಾ ಶಕೀಲ್ ಹಂತಕರ ಒಂದು ಟೀಮ್ ತಯಾರು ಮಾಡಿ ಬ್ಯಾಂಕಾಕಿಗೆ ಕಳುಹಿಸಿಬಿಟ್ಟ. ರಾಜನ್ನನಿಗೆ ಮರಾಮೋಸ ಮಾಡಿದ್ದ ಅವನ ಮನುಷ್ಯನೊಬ್ಬ ಬಂದು ರಾಜನ್ ಇದ್ದ ಮನೆಯ ಬಾಗಿಲು ಬಡಿದಿದ್ದ. ಯಾರು ಎಂದು ಬಾಗಿಲಲ್ಲಿರುವ ಸಣ್ಣ ಪೀಪ್ ಹೋಲ್ ಮೂಲಕ ನೋಡಿದ ರಾಜನ್ನನ ಖಾಸ್ ಆದ್ಮಿ ರೋಹಿತ್  ವರ್ಮಾ. ಇವನು ನಮ್ಮವನೇ ತಾನೇ ಎಂದು ಬಾಗಿಲು ತೆಗೆದುಬಿಟ್ಟ. ಅದೇ ಅವನು ಮಾಡಿದ ದೊಡ್ಡ ತಪ್ಪು. ದೊಡ್ಡ ಪೊರಪಾಟಾಗಿಬಿಟ್ಟಿತು. ಗದ್ದಾರಿ ಮಾಡಿದ್ದ ಮನುಷ್ಯ ಸರಕ್ ಎಂದು ಪಕ್ಕಕ್ಕೆ ಸರಿದುಬಿಟ್ಟ. ಅವನ ಬೆನ್ನ ಹಿಂದೆ ಅವಿತುಕೊಂಡಿದ್ದರು ಛೋಟಾ ಶಕೀಲ್ ಕಳಿಸಿದ್ದ ಹಂತಕರು. ಮೊದಲು ಒಳಗೆ ನುಗ್ಗಿದವ ಛೋಟಾ ಶಕೀಲನ ಖಾಸ್ ಬಂಟ ಮುಂಬೈ ಜೋಗೇಶ್ವರಿ ಮೂಲದ ಮುನ್ನಾ ಜಿಂಗಾಡಾ. ಹಿಂದೆಯೇ ಮೊರೆದವು ಹಂತಕರ ಬಂದೂಕುಗಳು. ಹಲವಾರು ಗುಂಡೇಟು ತಿಂದ ರೋಹಿತ್  ವರ್ಮಾ ಅಲ್ಲೇ ಜರಡಿ ಜರಡಿಯಾಗಿ ರಕ್ತ ಸುರಿಸುತ್ತ ಸತ್ತ. ಅವನ ನೇಪಾಳಿ ಹೆಂಡತಿ ಕೂಡ ಹಂತಕರ ಗುಂಡಿಗೆ ಬಲಿಯಾದಳು. ಬಾಗಿಲು ಹಾಕಿದ್ದ ಕೋಣೆಯೊಂದರಲ್ಲಿ ಇದ್ದ ಎನ್ನುವ ಒಂದೇ ಕಾರಣಕ್ಕೆ ರಾಜನ್ ಬಚಾವಾದ. ಬಾಗಿಲ ಮೂಲಕವೇ rapid ಫೈರಿಂಗ್ ಮಾಡಿದ್ದರು. ನಾಲ್ಕಾರು ಗುಂಡು ರಾಜನ್ನನಿಗೆ ಬಿತ್ತು ಕೂಡ. ಅಂತಹ ಪರಿಸ್ಥಿತಿಯಲ್ಲೂ ಬಾಲ್ಕನಿ ಜಿಗಿದು ಕೆಳಕ್ಕೆ ಹಾರಿ ಫುಟ್ ಪಾತ್ ಮೇಲೆ ಬಿದ್ದಿದ್ದ ಛೋಟಾ ರಾಜನ್ನನನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಾಗಾಗಿ ಬದುಕಿಕೊಂಡ.

ಛೋಟಾ ರಾಜನ್ ಮೇಲೆ ದಾಳಿಯಾಗಿದೆ ಎಂದು ಸರಕಾರ ಖಾತ್ರಿ ಪಡಿಸುವ  ಮೊದಲೇ ತಮ್ಮ ಮಾಹಿತಿದಾರರ ಮೂಲಕ ಎಲ್ಲ ಮಾಹಿತಿ ತೆಗೆದಿದ್ದ ಖತರ್ನಾಕ ಪತ್ರಕರ್ತೆ ಶೀಲಾ ಭಟ್ ತುರಂತವಾಗಿ ಥೈಲ್ಯಾಂಡಿಗೆ ಹಾರಿದ್ದರು. ಅದೆಂತಹ ಪರ್ಫೆಕ್ಟ್ ಮಾಹಿತಿಜಾಲ ಅವರದ್ದು ನೋಡಿ. ವಿಮಾನ ಇಳಿದವರೇ ಸೀದಾ ಹೋಗಿದ್ದು ಛೋಟಾ ರಾಜನ್ ದಾಖಲಾಗಿದ್ದ ಆಸ್ಪತ್ರೆಗೆ. ರಾಜನ್ ಕೊಂಚ ಚೇತರಿಸಿಕೊಂಡಿದ್ದ. ಅವನನ್ನು ಮತ್ತು ಅವನ ಸಹಚರರನ್ನು ಸಂದರ್ಶಿಸಿ ವಾರಗಳ ಕಾಲ ಒಂದರಮೇಲೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟವರು ಶೀಲಾ ಭಟ್. ಆಗ ಟೆಲಿವಿಷನ್ ಚಾನೆಲ್ಲುಗಳು ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಥೈಲಾಂಡಿನಲ್ಲಿ ಕೂತು ಹಾಟ್ ನ್ಯೂಸ್ ವರದಿಗಳನ್ನು ಫಟಾಫಟ್ ಅಂತ ಬರೆದು ಬರೆದು ರೋಚಕ ಸಂಚಲನ ಸೃಷ್ಟಿಸಿದವರು ಶೀಲಾ ರಾವಲ್.

ಮುಂದೆ ೨೦೦೩ ರ ಹೊತ್ತಿಗೆ ಡಾನ್ ಅಬು ಸಲೇಂನನ್ನು ಅಮೇರಿಕಾದ FBI ಪೋರ್ಚುಗಲ್ ದೇಶದ ಸಹಕಾರದೊಂದಿಗೆ ಲಿಸ್ಬನ್ ಶಹರದಲ್ಲಿ ಅಟ್ಟಾಡಿಸಿ ಬಂಧಿಸಿತು. ಜೊತೆಗೆ ಸೆರೆ ಸಿಕ್ಕಾಕೆ ಅವನ ಪ್ರೇಯಸಿ ಬಾಲಿವುಡ್ ನಟಿ ಮೋನಿಕಾ ಬೇಡಿ. ಶೀಲಾ ರಾವಲ್ ಎಲ್ಲರಿಗಿಂತ ಭಿನ್ನ. ಅವರು ಬೇರೆ ಮಾಹಿತಿಯನ್ನು ಹುಡುಕುತ್ತ ಅಮೇರಿಕಾದ ಅಟ್ಲಾಂಟಾ ನಗರಕ್ಕೆ ಹಾರಿದ್ದರು. ಅವರಿಗೆ ಗೊತ್ತಿತ್ತು ಡಾನ್ ಅಬು ಸಲೇಂನ ಅಧಿಕೃತ ಪತ್ನಿ ಸಮೀರಾ ಜುಮಾನಿ ಅಟ್ಲಾಂಟಾ ನಗರದಲ್ಲೆಲ್ಲೋ ನೆಲೆಸಿದ್ದಾಳೆ ಎಂದು. ನಿಖರವಾಗಿ ಎಲ್ಲಿ ಎಂದು ಗೊತ್ತಿರಲಿಲ್ಲ. ಮತ್ತೆ ತಮ್ಮ ಮಾಹಿತಿದಾರರ ಜಾಲವನ್ನು ಜಾಲಾಡಿದ ಶೀಲಾ ರಾವಲ್ ಹುಲ್ಲಿನ ರಾಶಿಯಲ್ಲಿ ಸೂಜಿ ಹುಡುಕಿದಂತೆ ಸಮೀರಾ ಜುಮಾನಿಯ ವಿಳಾಸ ಕಂಡುಹಿಡಿದಿದ್ದು ಮಾತ್ರವಲ್ಲ ಆಕೆಯನ್ನು ಕಾಡಿ ಬೇಡಿ, ಏನೇನೋ ಮಾಡಿ, ಸಂದರ್ಶನ ಕೂಡ ಮಾಡಿದ್ದರು. ಅಮೇರಿಕಾದ ಅಟ್ಲಾಂಟಾ ನಗರದಿಂದ ಅಬು ಸಲೇಂನ ಯಾರಿಗೂ ಗೊತ್ತಿಲ್ಲದ ಅಮೇರಿಕಾದಲ್ಲಿನ ಜೀವನದ ಬಗ್ಗೆ ಕರಾರುವಕ್ಕಾಗಿ ವರದಿ ಮಾಡಿದ್ದರು. ದೊಡ್ಡ ಸ್ಕೂಪ್ ಕೊಟ್ಟಿದ್ದರು.

ಶೀಲಾ ರಾವಲ್ ಅವರ ಲೇಟೆಸ್ಟ್ ಸ್ಕೂಪ್ ಅಂದರೆ ಬಾಲಿವುಡ್ಡಿನ ಪುರಾತನ ಮಾದಕ ನಟಿ ಮಮತಾ ಕುಲಕರ್ಣಿಯನ್ನು ಕೀನ್ಯಾ ದೇಶದ ಮೊಂಬಾಸಾ ಶಹರದಲ್ಲಿ ಸಂದರ್ಶನ ಮಾಡಿದ್ದು. ಅದೇನು ಕರ್ಮವೋ ಏನೋ. ಎಲ್ಲರೂ ಆ ಪುಣ್ಯಾತಗಿತ್ತಿ ಮಮತಾ ಕುಲಕರ್ಣಿಯನ್ನು ಮಾದಕ ನಟಿ ಮಾದಕ ನಟಿ ಅಂದಿದ್ದೇ ಅಂದಿದ್ದು ಅವಳು ಹೋಗಿ ಹೋಗಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಜಾಲದಲ್ಲಿ ಸಿಕ್ಕಾಕಿಕೊಂಡುಬಿಡಬೇಕೇ!? ಆಕೆಯ ಪತಿ ವಿಕಿ ಗೋಸ್ವಾಮಿ ಕುಖ್ಯಾತ ಡ್ರಗ್ ಸ್ಮಗ್ಲರ್ ಎಂದು ಆಪಾದನೆ. ತನಿಖಾ ಸಂಸ್ಥೆಗಳಿಂದ ಬಚಾವಾಗಲು ವಿಕಿ ಗೋಸ್ವಾಮಿ ಮತ್ತು ಬಾಲಿವುಡ್ಡಿನಲ್ಲಿ ಕಿರಿಕ್ ಮಾಡಿಕೊಂಡು ಸವಕಲು ನಾಣ್ಯವಾಗಿದ್ದ ಮಮತಾ ಕುಲಕರ್ಣಿ ದುಬೈನಲ್ಲಿ ನೆಲೆಸಿದ್ದರು. ವಿಕಿ ಗೋಸ್ವಾಮಿಯ ನಸೀಬ್ ಖರಾಬಾಗಿತ್ತು. ದುಬೈ ಸರ್ಕಾರ ಅವನನ್ನು ಬಂಧಿಸಿ ಸೆರೆಮನೆಗೆ ಕಳಿಸಿತ್ತು. ಅಂದಿನ ಪ್ರೇಯಸಿ ಮಮತಾ ಕುಲಕರ್ಣಿ ಅವನ ಬಿಡುಗಡೆಗಾಗಿ ಕಾದು ಕೂತಿದ್ದಳು. ಗೆಳೆಯ ಗೋಸ್ವಾಮಿ ಜೈಲಿನಲ್ಲಿದ್ದಾಗ ನೀನು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಅದೇ ಸಮಯದಲ್ಲಿ ಹಿಮಾಲಯದಲ್ಲಿ ಅಧ್ಯಾತ್ಮ ಸಾಧನೆ ಮಾಡಿ ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡೆ ಅನ್ನುತ್ತಾಳೆ. ಎಲ್ಲಿಂದ ನಗಬೇಕೋ ತಿಳಿಯುವದಿಲ್ಲ. ವಿಕಿ ಗೋಸ್ವಾಮಿಯ ಬಿಡುಗಡೆ ನಂತರ ಮದುವೆಯಾಗಿ ಗಂಡ ಹೆಂಡತಿ ಇಬ್ಬರೂ ಕೀನ್ಯಾ ದೇಶದಲ್ಲಿ ನೆಲೆಸಿದರು. ಅವರ ಪ್ರಕಾರ ಕಾನೂನುಬದ್ಧ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ ಅವರು ಕುಖ್ಯಾತ ಡ್ರಗ್ ಕಳ್ಳಸಾಗಾಣಿಕೆದಾರರು. ಮುಂಬೈ ಪೊಲೀಸರು, ಅಮೇರಿಕಾದ drug enforcement  agency (DEA) ಎಲ್ಲ ಅವರ ಹಿಂದೆ ಬಿದ್ದಿದ್ದಾರೆ. ಈಗ ಎರಡು ಮೂರು ವರ್ಷಗಳ ಹಿಂದೆ ವಿಕಿ ಗೋಸ್ವಾಮಿ ಮತ್ತು ಕೀನ್ಯಾದ ಕುಖ್ಯಾತ ಆಕಾಶಾ ಸಹೋದರರನ್ನು DEA ಬಂಧಿಸಿದಾಗ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿಯನ್ನೂ ಸಹ ಬಂಧಿಸಲಾಗಿದೆ ಎನ್ನುವ ಸುದ್ಧಿ ಹಬ್ಬಿತ್ತು. ಬಾಕಿ ಪತ್ರಕರ್ತರೆಲ್ಲ ಇಲ್ಲೇ ಕೂತು ಪುಂಖಾನುಪುಂಖವಾಗಿ ಕಲರ್ ಕಲರ್ ಗಾಳಿಪಟ ಹಾರಿಸಿದರೆ ಶೀಲಾ ರಾವಲ್ ಎಂದಿನಂತೆ ತಮ್ಮ ವಿಭಿನ್ನ ದಾರಿ ಹಿಡಿದರು. ಮೇಜರ್ ಸ್ಕೂಪ್ ಎಂಬಂತೆ ಸೀದಾ ಕೀನ್ಯಾಕ್ಕೆ ಹೋಗಿ ಮಮತಾ ಕುಲಕರ್ಣಿಯ ಸಂದರ್ಶನವನ್ನೇ ಸಂಪಾದಿಸಿಬಿಟ್ಟರು. ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಸಾಧ್ವಿಯಾಗಿರುವೆ ಎನ್ನುವ ಮಮತಾ ಕುಲಕರ್ಣಿಯ ಸಂದರ್ಶನ ತುಂಬಾ ಕುತೂಹಲಭರಿತವಾಗಿದೆ ಮತ್ತು ಮಜವಾಗಿದೆ.

ಇಸ್ರೇಲಿ ಮಹಿಳೆ ಎಷ್ಟು ಸಬಲವಾಗಿದ್ದಾಳೆ ಎನ್ನುವ ಕುರಿತು ಇಸ್ರೇಲಿನ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಗೋಲ್ಡಾ ಮೀರ್ ಒಂದು ಮಾತು ಹೇಳಿದ್ದರು. ಅದೇನೆಂದರೆ - In Israel, women don't break the glass ceiling, they shatter it. ದಿಟ್ಟ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ಇದು ಬರೋಬ್ಬರಿಯಾಗಿ ಒಪ್ಪುತ್ತದೆ. ಪುರುಷಪ್ರಾಧಾನ್ಯವಾದ ಕ್ರೈಂ ಪತ್ರಿಕೋದ್ಯಮದ ಗಾಜಿನ ಛಾವಣಿಯನ್ನು ಮುಟ್ಟಿದ್ದೊಂದೇ ಅಲ್ಲ ಅದನ್ನು ಚೂರುಚೂರಾಗಿ ಛಿದ್ರ ಮಾಡಿದ ಮೊದಲ ಮಹಿಳಾ ಪತ್ರಕರ್ತೆ ಶೀಲಾ ರಾವಲ್ ಅವರೇ ಇರಬೇಕು ಅನ್ನಿಸುತ್ತದೆ. ಅವರ ದಿಟ್ಟತನಕ್ಕೆ ಮತ್ತು ಅವರು ಸದಾ ಕೊಡುವ ರೋಚಕ ವರದಿಗಳಿಗೆ ಒಂದು ಸಲಾಂ.

ಇನ್ನೂ ಹೆಚ್ಚಿನ ರೋಚಕ ವಿವರಗಳಿಗೆ ಅವರ ಪುಸ್ತಕ ಮುದ್ದಾಂ ಓದಿರಿ. ಪೂರ್ತಿ ಓದಿ ಮುಗಿಸುವ ಮುನ್ನ ನೀವು ಅದನ್ನು ಕೆಳಗಿಡುವದಿಲ್ಲ. ಅದು ಗ್ಯಾರಂಟಿ!

ಶೀಲಾ ರಾವಲ್ ಮಾಡಿದ ಮಮತಾ ಕುಲಕರ್ಣಿಯ ಸಂದರ್ಶನ. youtube ಮೇಲೆ ಇತರೆ ವಿಡಿಯೋಗಳು ಸಿಗುತ್ತವೆ.



* ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ - ಈ ಬ್ಲಾಗ್ ಪೋಸ್ಟಿನ ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಎಂದುಕೊಂಡರೆ ವಿವರಣೆ ಇಷ್ಟೇ, ಅದು ಪುಸ್ತಕದ ಇಂಗ್ಲೀಷ್ ಹೆಸರನ್ನು ಕನ್ನಡೀಕರಿಸುವ ಪ್ರಯತ್ನ. Godfathers of Crime (Face-to-Face with India's most wanted). Godfather ಗೆ ದೇವಪಿತೃ ಸರಿಹೊಂದುತ್ತದೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಬೇರೇನಾದರೂ ಸಮಂಜಸ ಪದವಿದೆಯೇ? ಹಾಗೆಯೇ Most wanted ಗೆ ಏನೆನ್ನಬಹುದು?

Sunday, May 06, 2018

ಕಾನೂನು ಪಂಡಿತ ಸುಬ್ರಮಣಿಯನ್ ಸ್ವಾಮಿ

ಪ್ರತಿಷ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಮೇಲೆ ಜಡಿದಿರುವ ಮೊಕದ್ದಮೆಗಳಿಂದ ಸುಬ್ರಮಣಿಯನ್ ಸ್ವಾಮಿ ಸುದ್ದಿಯಲ್ಲಿರುತ್ತಾರೆ. ತಮ್ಮ ಮೊಕದ್ದಮೆಗಳನ್ನು ಹೆಚ್ಚಾಗಿ ತಾವೇ ವಾದಿಸುತ್ತಾರಾದ್ದರಿಂದ ಬಹಳ ಜನ ಸ್ವಾಮಿಯವರು ಖುದ್ದು ವಕೀಲರು ಎಂದು ತಿಳಿದಿದ್ದಾರೆ. ಸ್ವಾಮಿ ವಕೀಲರಲ್ಲ. ಆದರೆ ೯೯% ವಕೀಲರಿಗಿಂತ ಹೆಚ್ಚಿನ ಕಾನೂನು ಜ್ಞಾನ ಅವರಿಗಿದೆ. ಹಾಗಾಗಿಯೇ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಾಗ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ನ್ಯಾಯಾಧೀಶರು ಸ್ವಾಮಿಯವರಿಗೆ ವಾದ ಮಂಡಿಸಲು ಅನುಮತಿ ಕೊಡುತ್ತಾರೆ. ಹೈಕೋಟ್, ಸುಪ್ರೀಂ ಕೋರ್ಟ್ ಕೂಡ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ವಾದ ಮಾಡಲು ಅನುವು ಮಾಡಿಕೊಡುತ್ತದೆ ಅಂದರೆ ಸ್ವಾಮಿಯವರ ಕಾನೂನು ಜ್ಞಾನ ಎಷ್ಟು ಉತ್ಕೃಷ್ಟವಾದದ್ದು ಎಂದು ತಿಳಿಯುತ್ತದೆ.

ಸ್ವಾಮಿಯವರಲ್ಲಿರುವ ಒಂದು ಗಮನಾರ್ಹ ಮತ್ತು ಪ್ರಶಂಸಾರ್ಹ ಗುಣ ಎಂದರೆ ಹೊಸ ವಿಷಯಗಳನ್ನು ತ್ವರಿತವಾಗಿ ಕಲಿಯುವ ಆಸಕ್ತಿ ಮತ್ತು ಹೊಸ ವಿಷಯಗಳ ಮೇಲೆ ದಾಖಲೆ ಸಮಯದಲ್ಲಿ ಪರಿಣಿತಿ ಸಾಧಿಸುವದು. ಸ್ವಾಮಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ PhD ವಿದ್ಯಾರ್ಥಿಯಿದ್ದಾಗ ಚೀನಾ ದೇಶದ ಆರ್ಥಿಕತೆ ಬಗ್ಗೆ ಅಭ್ಯಸಿಸತೊಡಗಿದರು. ಅದಕ್ಕಾಗಿ ಮ್ಯಾಂಡ್ರಿನ್ ಭಾಷೆ ಕಲಿತು ಕೆಲವೇ ತಿಂಗಳುಗಳಲ್ಲಿ ಆ ಭಾಷೆಯಲ್ಲಿ ಪ್ರಬುದ್ಧವಾಗಿ ಓದು ಬರೆದು ಮಾತಾಡಬಲ್ಲವರಾದರು. ಮುಂದೆ ಮುರಾರ್ಜಿ ದೇಸಾಯಿ ಪ್ರಧಾನಿಯಾದಾಗ ಚೀನಾ ದೇಶಕ್ಕೆ ಹೋಗಿ, ಚೀನಿಯರೊಂದಿಗೆ ಅವರದ್ದೇ ಭಾಷೆಯಲ್ಲಿ ಸರಾಗವಾಗಿ ಮಾತಾಡಿ, ಭಾರತದ ಕೆಲಸ ಮಾಡಿಕೊಂಡು ಬಂದರು ಸ್ವಾಮಿ. ಅದನ್ನು ನೋಡಿ ಅಂದಿನ ವಿದೇಶಾಂಗ ಮಂತ್ರಿಯಾಗಿದ್ದ ವಾಜಪೇಯಿಯವರು ಕೊಂಚ ಕಸಿವಿಸಿ ಅನುಭವಿಸಿದರಂತೆ. ತಾವು ವಿದೇಶಾಂಗ ಮಂತ್ರಿಯಾಗಿದ್ದರೂ ಈ ಮಹಾತ್ಮ ಸ್ವಾಮಿ ಹೋಗಿ ತಮ್ಮಿಂದಾಗದ ಕೆಲಸ ಮಾಡಿಕೊಂಡುಬಂದುಬಿಟ್ಟನಲ್ಲ ಎಂಬ ಈರ್ಷ್ಯೆ.

ಅದೆಲ್ಲ ಇರಲಿ. ಸ್ವಾಮಿ ಕಾನೂನು ಪಂಡಿತರಾಗಿದ್ದೇ ದೊಡ್ಡ ಕಥೆ. ಅವರ ಕುಟುಂಬದಲ್ಲಿ ಮೊದಲು ಕಾನೂನು ಕಲಿತವರು ಅವರ ಪತ್ನಿ ರೋಕ್ಸ್ನಾ. ರೋಕ್ಸ್ನಾಕೂಡ ಹಾರ್ವರ್ಡ್ PhD ಪದವೀಧರೆ. ಅವರು ಓದಿದ್ದು ಗಣಿತಶಾಸ್ತ್ರ. ಅಮೇರಿಕಾದಲ್ಲೇ ಇದ್ದರೆ ಅವರ ಗಣಿತದಲ್ಲಿ ಅವರು ಸಾಧಿಸಿದ್ದ ಸ್ಪೆಷಾಲಿಟಿಗೆ ಸ್ಕೋಪ್ ಇತ್ತೋ ಏನೋ. ಆದರೆ ಭಾರತದಲ್ಲಿ ಅವರಿಗೆ ಕಾಲೇಜಿನಲ್ಲಿ ಗಣಿತದ ಮಾಸ್ತರಿಣಿ ಕೆಲಸ ಬಿಟ್ಟರೆ ಬೇರೆ ಕೆಲಸ ಸಿಗುತ್ತಿರಲಿಲ್ಲ. ಮೇಲಿಂದ ಮಕ್ಕಳೂ ಚಿಕ್ಕವರಿದ್ದರು. ಹಾಗಾಗಿ ರೋಕ್ಸ್ನಾಕೆಲಸ ಮಾಡಲು ಹೋಗಲಿಲ್ಲ. ಕಾನೂನು ಕಲಿಯಲೇಬೇಕು ಎಂಬ ಪರಿಸ್ಥಿತಿ ಉದ್ಭವವಾದದ್ದು ತುರ್ತುಪರಿಸ್ಥಿತಿ ಸಮಯದಲ್ಲಿ. ಇಂದಿರಾ ಗಾಂಧಿ ವಿರುದ್ಧ ಹೋರಾಡುತ್ತಿದ್ದ ಸ್ವಾಮಿ ಭೂಗತರಾಗಿದ್ದರು. ಸರ್ಕಾರ ಅವರನ್ನು ಎಲ್ಲ ಕಡೆ ಹುಡುಕುತ್ತಿತ್ತು. ಸಿಕ್ಕಿದ್ದರೆ ಎನ್ಕೌಂಟರ್ ಮಾಡಿ ಒಗೆಯುತ್ತಿತ್ತೇನೋ. ಅಷ್ಟು ಆಕ್ರೋಶವಿತ್ತು ಅವರ ಮೇಲೆ. ತುರ್ತುಪರಿಸ್ಥಿತಿ ಕಾಲದಲ್ಲಿ ತಮ್ಮ ಅಂಕುಶವನ್ನು ಉಪಯೋಗಿಸಿ ಇಂದಿರಾ ಗಾಂಧಿ ಎಂತೆಂತಹ ಮದಗಜಗಳನ್ನೇ ಮೆತ್ತಗೆ ಮಾಡಿದ್ದರು. ಆದರೆ ಸ್ವಾಮಿಯವರನ್ನು ಮಟ್ಟ ಹಾಕಲು ಆಗಿರಲಿಲ್ಲ.

ಸ್ವಾಮಿ ಸಿಗದಿದ್ದಾಗ ಇಂದಿರಾ ಗಾಂಧಿಯವರ ಕರಾಳ ವ್ಯವಸ್ಥೆ ಮುರಕೊಂಡು ಬಿದ್ದಿದ್ದು ಸ್ವಾಮಿಯವರ ಪರಿವಾರದ ಮೇಲೆ. ರಾತ್ರೋರಾತ್ರಿ ಅವರ ಮನೆ ಖಾಲಿ ಮಾಡಿಸಲಾಯಿತು. ಇಬ್ಬರು ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಸಂಬಾಳಿಸಿಕೊಂಡಿದ್ದ ರೋಕ್ಸ್ನಾ ಅರ್ಧರಾತ್ರಿಯಲ್ಲಿ ಬೀದಿಗೆ ತಳ್ಳಲ್ಪಟ್ಟರು. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಫುಟ್ಪಾತ್ ಮೇಲೆ ಎರಡು ಚಿಕ್ಕಮಕ್ಕಳೊಂದಿಗೆ ನಿರ್ಗತಿಕರಂತೆ ರಾತ್ರಿ ಕಳೆದ ರೋಕ್ಸ್ನಾಕಾನೂನು ಅಭ್ಯಾಸ ಮಾಡುವ ನಿರ್ಧಾರ ಮಾಡಿದ್ದರು. ಮುಂದೆ ಕಾನೂನು ಪದವಿ ಗಳಿಸಿದ ಅವರು ವಕೀಲೆಯಾಗಿ ಆದಾಯ ಗಳಿಸತೊಡಗಿದರು. ಸ್ವಾಮಿಯವರ ನೌಕರಿಯನ್ನು ಸರ್ಕಾರ ಸ್ವಾಹಾ ಮಾಡಿತ್ತು. ಪತ್ನಿ ರೋಕ್ಸ್ನಾಗಳಿಸುತ್ತಿದ್ದ ಆದಾಯದಿಂದ ಸಂಸಾರ ಹೇಗೋ ನಡೆದಿತ್ತು.

ಖುದ್ದು ಸ್ವಾಮಿಯವರು ಕಾನೂನು ಕಲಿಯಬೇಕೆಂದು  ತೀರ್ಮಾನ ಮಾಡುವಂತಹ ಸಂದರ್ಭ ಕೊಂಚ ಸಮಯದ ನಂತರ ಬಂತು. ಸ್ವಾಮಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ತಮಗೆ ಸರಿಯೆನ್ನಿಸಿದ್ದನ್ನು ಮಾಡುವವರೇ. ತಮ್ಮ ಖಡಕ್ ನಿರ್ಧಾರಗಳಿಂದ ಅವರ ಪಕ್ಷಕ್ಕೇ ಮುಜುಗರ ಮಾಡಿಬಿಡುತ್ತಿದ್ದರು. ಸತ್ಯದ ಪರವಾಗಿದ್ದಾಗ ಯಾರನ್ನೂ ಕೇರ್ ಮಾಡುವ ಅವಶ್ಯಕತೆಯಿಲ್ಲ ಎಂಬುದು ಅವರ ಖಡಕ್ ನಂಬಿಕೆ.

ಹೀಗೆ ಹಲವರಿಗೆ ಮಗ್ಗುಲಮುಳ್ಳಾಗಿದ್ದ ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಮಾನನಷ್ಟ ಮೊಕದ್ದಮೆ ಎಂಬ ಅಸ್ತ್ರ. ಆದರಲ್ಲೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎಂಬ ಕರಾಳ ಅಸ್ತ್ರ. ಎಷ್ಟೋ ದೇಶಗಳು ಮಹಾ ಅನಿಷ್ಟ ಕಾನೂನಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ತೆಗೆದುಹಾಕಿವೆ. ಭಾರತ ಮಾತ್ರ ಆಂಗ್ಲರ ಆಳ್ವಿಕೆಯ ಪಳೆಯುಳಿಕೆಯಂತಹ ಶಿಲಾಯುಗದ ಜನವಿರೋಧಿ ಕಾನೂನುಗಳನ್ನೇ ಪಾಲಿಸಿಕೊಂಡು ಬರುತ್ತಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅದೇ ಜಾತಿಗೆ ಸೇರಿದ್ದು. ಯಾರ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬೀಳುತ್ತದೋ ಅವರು ಗಾಣಕ್ಕೆ ಸಿಕ್ಕ ಕಬ್ಬಿನ ಜಲ್ಲೆಯಂತೆ ಪೂರ್ತಿಯಾಗಿ ಹಿಂಡಿಹಿಪ್ಪೆಯಾಗಿಹೋಗುತ್ತಾರೆ.

ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಇದನ್ನೇ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಪ್ರತಿವಾದಿ ಪ್ರತಿಸಲ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಸ್ವಾಮಿಯವರು ಇದ್ದಿದ್ದು ದೆಹಲಿಯಲ್ಲಿ. ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದು ಮುಂಬೈನಲ್ಲಿ. ತುರ್ತುಪರಿಸ್ಥಿತಿಯಲ್ಲಿ ಆಡಳಿತಶಾಹಿಯ ಕುತಂತ್ರಕ್ಕೆ ನೌಕರಿ ಕಳೆದುಕೊಂಡಿದ್ದ ಸ್ವಾಮಿಯವರ ಆರ್ಥಿಕ ಪರಿಸ್ಥಿತಿನಾಜೂಕಾಗಿತ್ತು. ಮೇಲಿಂದ ಮುಂಬೈನಲ್ಲಿ ವಕೀಲರ ಖರ್ಚು. ತಿಂಗಳಿಗೆ ನಾಲ್ಕಾರು ಬಾರಿ ಮುಂಬೈಗೆ ಬಂದುಹೋಗುವ ಖರ್ಚು. ಮುಂಬೈನಲ್ಲಿ ಉಳಿಯಲು ಮತ್ತು ಓಡಾಡಲು ಮತ್ತೊಂದಿಷ್ಟು ಖರ್ಚು. ಹೀಗೆ ಸ್ವಾಮಿಯವರನ್ನು ಎಲ್ಲ ರೀತಿಯಿಂದ ಹಿಂಡಿ ಹಿಪ್ಪೆ ಮಾಡಿಬಿಡುವಂತಹ ಸ್ಕೀಮ್ ಹಾಕಲಾಗಿತ್ತು. ಈ ಷಡ್ಯಂತ್ರವನ್ನು ಖ್ಯಾತ ವಕೀಲ ರಾಮ್ ಜೇಠಮಲಾನಿ ರೂಪಿಸಿದ್ದರು. ಸೂತ್ರದಾರು ಬೇರೆ ಯಾರೋ ಇದ್ದರು.

ಯಾವಾಗ ತಮ್ಮ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬಿತ್ತೋ ಮೊದಲಬಾರಿಗೆ ಸ್ವಾಮಿ ಕಾನೂನು ಪುಸ್ತಕ ತೆರೆದು ಕೂತರು. ವಕೀಲೆ ಪತ್ನಿ ರೋಕ್ಸ್ನಾತಕ್ಕಮಟ್ಟಿನ ಸಹಾಯ ಮತ್ತು ಮಾರ್ಗದರ್ಶನ ಮಾಡಿದರು. ಸ್ವಾಮಿಯವರ ಬುದ್ಧಿಮತ್ತೆ ಮತ್ತು ಏಕಾಗ್ರತೆಯ ಬಗ್ಗೆ ದೂಸರಾ ಮಾತೇ ಇಲ್ಲ. ಒಂದು ವಿಷಯವನ್ನು ಎತ್ತಿಕೊಂಡರು ಅಂದರೆ ಅಷ್ಟೇ ಮತ್ತೆ. ಅದರಲ್ಲಿ ಪರಿಣಿತರಾಗಿಯೇ ಬಿಡುತ್ತಿದ್ದರು. ಕಾನೂನಿನ ವಿಷಯದಲ್ಲೂ ಅದೇ ಆಯಿತು.

ಕಾನೂನನ್ನು ಅಧ್ಯಯನ ಮಾಡುತ್ತಿದ್ದಾಗ ಸ್ವಾಮಿ ಒಂದು ವಿಷಯವನ್ನು ಗಮನಿಸಿದರು. ನೋಟ್ ಮಾಡಿಕೊಂಡರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದವನ ಜನ್ಮಜಾಲಾಡಿಬಿಡುವ ಅವಕಾಶವನ್ನು ಕಾನೂನು ಪ್ರತಿವಾದಿಗೆ ಕಲ್ಪಿಸುತ್ತದೆ. ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ತಮ್ಮ ಮೇಲೆ ಕೇಸ್ ಹಾಕಿದವನನ್ನು ಹಣಿಯಬೇಕು ಎಂದು ನಿರ್ಧರಿಸಿದರು ಸ್ವಾಮಿ. ತಮ್ಮ ಮೇಲೆ ಬೇರೆ ಯಾರದ್ದೋ ಇಶಾರೆಯಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದವನ ಪೂರ್ವಾಪರ ತೆಗೆದುಕೊಂಡು ಕೂತರು ಸ್ವಾಮಿ.

ಸ್ವಾಮಿಯವರ ಮೇಲೆ ಕೇಸ್ ಹಾಕಿದವನೇನೂ ಸುಬಗನಲ್ಲ. ಶುದ್ಧ ತಲೆಹಿಡುಕ. ಅನೈತಿಕ ವ್ಯವಹಾರಗಳಿಗೆ ಮಹಿಳೆಯರನ್ನು ಸರಬರಾಜು ಮಾಡಿದ ಆರೋಪ ಅವನ ಮೇಲಿತ್ತು. ವೃತ್ತಿಪರ ರಾಜಕಾರಣಿಯಾಗಿದ್ದ ಅವನು ಸ್ವಕಾರ್ಯಸಿದ್ಧಿಗಾಗಿ ಪಿಂಪ್ ಕೆಲಸ ಮಾಡಿ ಸಿಕ್ಕಿಬಿದ್ದಿದ್ದ.

ತೆರೆದ ನ್ಯಾಯಾಲಯದಲ್ಲಿ ಸ್ವಾಮಿ ಖುದ್ದಾಗಿ ಅವನ ಜನ್ಮಜಾಲಾಡತೊಡಗಿದರು. ಆತ ಉದಯೋನ್ಮುಖ ರಾಜಕಾರಣಿ. ಅವನಿಗೆ ಮುಂದೆ ಏನೇನೋ ಸಾಧಿಸಬೇಕಾಗಿತ್ತು. ಹಾಗಿರುವಾಗ ಯಾರದ್ದೋ ಇಶಾರೆ ಮೇಲೆ ಸುಳ್ಳು ಕೇಸು ಹಾಕಿದ್ದ. ಅದಕ್ಕೆ ಅವನಿಗೆ ಕಾಣಿಕೆ ಸಂದಾಯವಾಗಿತ್ತು. ಕೋರ್ಟಿಗೆ ಬಂದು ಸ್ವಾಮಿಯವರಿಗೆ ಕಾಟ ಕೊಟ್ಟರೆ ತನ್ನ ಕೆಲಸ ಮುಗಿಯಿತು ಎಂದುಕೊಂಡಿದ್ದ.

ಸ್ವಾಮಿ ಅವನನ್ನು ಕಟಕಟೆಗೆ ಕರೆಯಲು ನ್ಯಾಯಾಲಯದ ಅನುಮತಿ ಕೋರಿದರು. ಕೋರಿಕೆ ನ್ಯಾಯಸಮ್ಮತವಾಗಿದ್ದರಿಂದ ನ್ಯಾಯಾಲಯ ಅನುಮತಿ ಕೊಟ್ಟಿತು. ಕೇಸ್ ಜಡಿದವ ಕಟಕಟೆಗೆ ಬಂದು ನಿಂತ ನೋಡಿ. ಮುಂದೆ ಅಷ್ಟೇ ಮತ್ತೆ. ಅವನನ್ನು ಪೂರ್ತಿಯಾಗಿ ತೊಳೆದುಬಿಟ್ಟರು ಸ್ವಾಮಿ. ಅವನ ತಲೆಹಿಡುಕತನ, ಮಹಿಳೆಯರನ್ನು ಸರಬರಾಜು ಮಾಡಿದ ಕಾರ್ನಾಮೆಗಳನ್ನು ಎಳೆಎಳೆಯಾಗಿ, ರಂಗುರಂಗೀನಾಗಿ ಬಿಚ್ಚಿಡತೊಡಗಿದರು. ಮೊದಮೊದಲು ಮುಜುಗರದಿಂದ ನಸುಗುನ್ನಿಯಂತೆ ಒಳೊಳಗೇ ಮಿಸುಕಾಡಿದ ಆ ಕೊರಮ ಪೂರ್ತಿ ಬತ್ತಲೆಯಾಗುವ ಮೊದಲೇ ಎರಡೂ ಕೈಯೆತ್ತಿ ಅಂಬೋ ಅಂದುಬಿಟ್ಟ. ಸ್ವಾಮಿಯವರ ಮೇಲೆ ನಡೆದ ಕಾರಸ್ಥಾನವನ್ನು ಎಲ್ಲ ವಿವರಗಳೊಂದಿಗೆ ಹೇಳಿಬಿಟ್ಟ.

'ನ್ಯಾಯಾಧೀಶರೇ, ಈ ಸುಬ್ರಮಣಿಯನ್ ಸ್ವಾಮಿ ಯಾರು ಅಂತಲೇ ನನಗೆ ಗೊತ್ತಿರಲಿಲ್ಲ. ಯಾರ್ಯಾರೋ ಏನೇನೋ ಪಂಪ್ ಹೊಡೆದು ನನ್ನಿಂದ ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿಸಿದರು. ನನಗೆ ಏನೂ ಬೇಕಿಲ್ಲ. ಪರಿಹಾರ ಗಿರಿಹಾರ ಏನೂ ಬೇಡ ಸರ್. ಈ ಮೊಕದ್ದಮೆಯನ್ನು ಹಿಂದೆ ತೆಗೆದುಕೊಳ್ಳಲು ಅನುಮತಿ ಕೊಡಿ. ಮುಕ್ತಿ ಕೊಡಿ ಸ್ವಾಮಿ!' ಎಂದೋ ಕೋರ್ಟಿನಲ್ಲೇ ಕಣ್ಣೀರು ಸುರಿಸುತ್ತ ಅಡ್ಡಡ್ಡ ನಮಸ್ಕಾರ ಹಾಕಿಬಿಟ್ಟ.

ಅಲ್ಲಿಗೆ ಎಲ್ಲ ದೂದ್ ಕಾ ದೂದ್ ಪಾನಿ ಕಾ ಪಾನಿ ಆಗಿಹೋಯಿತಲ್ಲ!? ಮೊಕದ್ದಮೆ ವಜಾ ಆಗಿಹೋಯಿತು. ಸುಳ್ಳು ಕೇಸ್ ಹಾಕಿದ್ದಕ್ಕೆ ನ್ಯಾಯಾಲಯ stricture ಪಾಸ್ ಮಾಡಿ ಸ್ವಾಮಿಯವರನ್ನು ದೋಷಮುಕ್ತ ಮಾಡಿತು.

ಅತ್ಯಂತ ಶ್ರೇಷ್ಠ ವಕೀಲ ರಾಮ್ ಜೇಠಮಲಾನಿಗೇ ನೀರು ಕುಡಿಸಿದ್ದರು ಸ್ವಾಮಿ. ಸ್ವಾಮಿಯ ಖದರ್ ಅಂದರೆ ಅದು. ಅದೇ ಕೊನೆ. ನಂತರ ರಾಮ್ ಜೇಠಮಲಾನಿ ಆದಿಯಾಗಿ ಎಲ್ಲ ವಕೀಲರು ತಮ್ಮ ಕಕ್ಷಿದಾರಿಗೆ ಹೇಳುತ್ತಿದ್ದುದು ಒಂದೇ ಮಾತು - ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವ ಮೊದಲು ಜೋಕೆ. ನೀವೇ ಬೆತ್ತಲೆಯಾಗಿ ಹೋದೀರಿ. ಸುಬ್ರಮಣಿಯನ್ ಸ್ವಾಮಿಯ ವಿರುದ್ಧ ಮಾತ್ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲೇಬೇಡಿ. ಕೇವಲ ಸಿವಿಲ್ ಮಾನನಷ್ಟ ಮೊಕದ್ದಮೆ ಮಾತ್ರ ಹೂಡಿ. ಸುಬ್ರಮಣ್ಯ ಸ್ವಾಮಿ ಎಲ್ಲಿ ಹೇಗೆ ಬತ್ತಿ ಇಟ್ಟು ಬ್ಲಾಸ್ಟ್ ಮಾಡುತ್ತಾನೆ ಎಂದು ಹೇಳಲಾಗುವದಿಲ್ಲ!!

ಹೀಗೆ ಘಟಾನುಘಟಿ ವಕೀಲರಿಗೆ ಅವರದ್ದೇ ಆಟದಲ್ಲಿ ಅವರಿಗೇ ನೀರು ಕುಡಿಸಿದ್ದ ಭೂಪ ಸುಬ್ರಮಣಿಯನ್ ಸ್ವಾಮಿ.

ಮುಂದೆ ಸ್ವಾಮಿಯವರನ್ನು ಕೋರ್ಟಿನಲ್ಲಿ ತಡವಿಕೊಳ್ಳಲು ಹೋಗಿ  ತಾರಾಮಾರಾ ಬಾರಿಸಿಕೊಂಡವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

೧೯೮೩ ರಲ್ಲಿ ತುಂಬಾ ಅನಿರೀಕ್ಷಿತವಾಗಿ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಯಾದರು. ದೇವೇಗೌಡರೋ, ಬಂಗಾರಪ್ಪನವರೋ ಅಥವಾ ಬೊಮ್ಮಾಯಿಯವರೋ ಆಗಬಹುದು ಎಂದುಕೊಂಡಿದ್ದರೆ ರಾಜ್ಯಸಭಾ ಸದಸ್ಯರಾಗಿದ್ದ ಹೆಗಡೆ ತಮ್ಮ ಚಾಣಾಕ್ಷ ದಾಳ ಉರುಳಿಸಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು.

ಮುಖ್ಯಮಂತ್ರಿಯಾದ ಮೇಲೆ ಜನತಾ ಪರಿವಾರದ ಮೇಲೆ ರಾಷ್ಟ್ರಮಟ್ಟದಲ್ಲಿ ಕೂಡ ಸಂಪೂರ್ಣ ಹಿಡಿತ ಸಾಧಿಸಲು ಯತ್ನಿಸಿದರು ಹೆಗಡೆ. ಆದರೆ ಜನತಾ ಪರಿವಾರದ ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಚಂದ್ರಶೇಖರ್ ಅದಕ್ಕೆ ಪರೋಕ್ಷವಾಗಿ ಅಡ್ಡಗಾಲು ಹಾಕಿದರು. ಹೊರಗಿಂದ ಹೆಗಡೆ ಜೊತೆ ಭಾಯಿ ಭಾಯಿ ವರ್ತನೆ ತೋರಿದರೂ ಹೆಗಡೆಯವರನ್ನು ಮಟ್ಟಹಾಕುವ ಸುಪಾರಿಯನ್ನು ಸುಬ್ರಮಣ್ಯ ಸ್ವಾಮಿಗೆ ಕೊಟ್ಟರು. ವೃತ್ತಿಪರ ಭಾಡಿಗೆ ಸೈನಿಕನಂತೆ (mercenary) ಸುಪಾರಿ ತೆಗೆದುಕೊಂಡ ಸ್ವಾಮಿ ಹೆಗಡೆಗೆ ಸ್ಕೆಚ್ ಹಾಕಲು ಕುಳಿತರು.

ಹೆಗಡೆಯವರ ಬಗ್ಗೆ ಆಗ ಒಂದು ಗುಸುಗುಸು ಚಾಲ್ತಿಯಲ್ಲಿತ್ತು. ಅದೇನೆಂದರೆ ಹೆಗಡೆ ಸರ್ಕಾರ ವಿರೋಧಪಕ್ಷಗಳ ನಾಯಕರುಗಳ ಫೋನಿಗೆ ಕಳ್ಳಗಿವಿ ಹಚ್ಚಿ ಕೂತಿದೆ. ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಸಂಭಾಷಣೆಗಳನ್ನು ಕದ್ದಾಲಿಸುತ್ತದೆ. ಸ್ವಾಮಿ ಇದನ್ನೇ ದೊಡ್ಡ ಇಶ್ಯೂ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಸರ್ಕಾರವಿತ್ತು. ಅವರಿಗೂ ಹೆಗಡೆಯವರನ್ನು ಹಣಿಯಬೇಕಾಗಿತ್ತು. ಮತ್ತೆ ರಾಜೀವ್ ಗಾಂಧಿ ಸ್ವಾಮಿಯವರಿಗೆ ತುಂಬಾ ಆಪ್ತಮಿತ್ರರೂ ಕೂಡ. ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳು ಸ್ವಾಮಿಯವರ ತೋಪನ್ನು ಹೆಗಡೆ ವಿರುದ್ಧ ಸಂಗ್ರಹಿಸಿದ್ದ ಮಾಹಿತಿಯೆಂಬ ಮದ್ದಿನಿಂದ ತುಂಬಿದರು. ಹೀಗೆ ತುಪಾಕಿ ತುಂಬಿಕೊಂಡ ಸ್ವಾಮಿ ಹೆಗಡೆ ವಿರುದ್ಧ ಒಂದಾದಮೇಲೊಂದು ಗುಂಡು ಹಾರಿಸತೊಡಗಿದರು. ಪ್ರಹಾರ ಮಾಡತೊಡಗಿದರು. ಮಾಸ್ಟರ್ ಸ್ಟ್ರೋಕ್ ಎಂಬಂತೆ ಯಾರ್ಯಾರ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿಬಿಟ್ಟರು ಸ್ವಾಮಿ. ಅಲ್ಲಿಗೆ ದೊಡ್ಡ ಹಗರಣವಾಯಿತು. ಅದೇ ಟೆಲಿಫೋನ್ ಕದ್ದಾಲಿಕೆ ಪ್ರಕರಣ.

ಹೆಗಡೆ ತಪ್ಪೊಪ್ಪಿಕೊಳ್ಳಲಿಲ್ಲ. ಆದರೂ ತಮ್ಮ ಇಮೇಜನ್ನು ರಕ್ಷಿಕೊಳ್ಳಲು ಮತ್ತು ಮೌಲ್ಯಾಧಾರಿತ ರಾಜಕಾರಣಿ ಎಂದು ಬಿಂಬಿಸಿಕೊಳ್ಳಲು ತಾವು ತಪ್ಪು ಮಾಡಿಲ್ಲ ಆದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಪುಂಗಿದವರೇ ರಾಜೀನಾಮೆ ಎಸೆದು ಕೂತರು. ಆ ಹಿಂದೆ ಕೂಡ ಎರಡೋ ಮೂರೋ ಬಾರಿಯೋ ಬಾಟ್ಲಿಂಗ್ ಹಗರಣ ಇತ್ಯಾದಿ ಆದಾಗಲೂ ಹೀಗೇ ರಾಜೀನಾಮೆ ಕೊಟ್ಟಿದ್ದರು. ಅವರನ್ನು ಆರಾಧಿಸುತ್ತಿದ್ದ ಶಾಸಕರು ಅವರ ಮನವೊಲಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದರು. ಹೆಗಡೆಯವರಿಗೂ ಅದೇ ಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ವಾಪಸ್ ಬನ್ನಿ ಎಂದು ಯಾರೂ ಹೆಗಡೆಯವರನ್ನು ಕರೆಯಲೇ ಇಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಹೆಗಡೆ ನೇಪಥ್ಯಕ್ಕೆ ಸರಿದರು. ತಮಗೆ ಗಾದಿ ತಪ್ಪಿದ್ದಕ್ಕೆ ಸಿಟ್ಟಿಗೆದ್ದ ದೇವೇಗೌಡ ಭಿನ್ನಮತ ಶುರುವಿಟ್ಟುಕೊಂಡರು. ಒಟ್ಟಿನಲ್ಲಿ ಹೆಗಡೆಯವರ ಬುಡಕ್ಕೆ ಬರೋಬ್ಬರಿ ಬಿಸಿನೀರು ಕಾಸಿದ್ದರು ಸ್ವಾಮಿ.

ಸ್ವಾಮಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿದ್ದ ಫೋನ್ ಕದ್ದಾಲಿಸಲ್ಪಟ್ಟ ಮಂದಿಯ ಪೈಕಿಯಲ್ಲಿ ಕೇವಲ ರಾಜಕಾರಣಿಗಳು ಮಾತ್ರ ಇರಲಿಲ್ಲ. ಸುಮಾರು ಜನ ಹೈಫೈ ಮಹಿಳಾಮಣಿಗಳೂ ಇದ್ದರು. ಹೆಗಡೆಯವರ ರಸಿಕತೆ ಬಗ್ಗೆ, ಶೃಂಗಾರಲೀಲೆಗಳ ಅಲ್ಲಲ್ಲಿ ಗುಸುಗುಸು ಇತ್ತು. ಈಗ ಅದೆಲ್ಲ ಬಹಿರಂಗವಾಗಿ ಹೆಗಡೆಯವರಿಗೆ ಮತ್ತು expose ಆದ ಮಹಿಳಾಮಣಿಗಳಿಗೆ ದೊಡ್ಡ ಮಟ್ಟದ ಮುಜುಗರ. ಯಾವುದೋ ಹುತ್ತದ ಮುಂದೆ ಕುಂತು ಪುಂಗಿಯೂದಿದರೆ ಹಾವೊಂದೇ ಅಲ್ಲ ಹಾವುರಾಣಿಯರು ಸಹ ಪ್ರತ್ಯಕ್ಷವಾಗಿ ಭುಸ್ ಅನ್ನಬೇಕೇ!?

ಖುರ್ಚಿ ಕಳೆದುಕೊಂಡು ಖಾಲಿ ಕುಳಿತಿದ್ದ ಹೆಗಡೆ ಸ್ವಾಮಿಯವರನ್ನು ತಡವಿಕೊಳ್ಳುವ ವಿಚಾರ ಮಾಡಿದರು. ಮತ್ತೆ ರಾಮ ಜೇಠಮಲಾನಿ ಸಲಹೆ ಕೊಟ್ಟರು. ಮತ್ತೊಬ್ಬ ರಾಮ ಅದೇ ರಾಮನಾಥ ಗೋಯೆಂಕಾ ತಮ್ಮ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಅದರ ಖಡಕ್ ಸಂಪಾದಕ ಅರುಣ್ ಶೌರಿ ಮೂಲಕ ಹೆಗಡೆಯವರಿಗೆ ಎಲ್ಲ ಬೆಂಬಲ ಕೊಡುವದಾಗಿ ಆಶ್ವಾಸನೆ ಕೊಟ್ಟರು. ಅಂದು ರಾಮಕೃಷ್ಣ ಹೆಗಡೆ, ರಾಮ್ ಜೇಠಮಲಾನಿ ಮತ್ತು ರಾಮನಾಥ ಗೋಯೆಂಕಾ 'ರಾಮತ್ರಯ'ರೆಂದೇ ಖ್ಯಾತರಾಗಿದ್ದರು.

ಹಿಂದೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದಾಗ ಆದ ಲಫಡಾದಿಂದ ಪಾಠ ಕಲಿತಿದ್ದ ರಾಮ್ ಜೇಠಮಲಾನಿ ಮುಂಬೈನಲ್ಲಿ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವಂತೆ ಸಲಹೆ ಕೊಟ್ಟರು. ಅದರಂತೆ ಮುಂಬೈ ಕೋರ್ಟಿನಲ್ಲಿ ಸ್ವಾಮಿ ವಿರುದ್ಧ ಮೊಕದ್ದಮೆ ಹಾಕಿದರು ಹೆಗಡೆ.

ಸ್ವಾಮಿ ಮತ್ತೊಮ್ಮೆ ವಕೀಲರ ಅವತಾರ ಎತ್ತಿದರು. ಅಷ್ಟೊತ್ತಿಗಾಗಲೇ ಅನೇಕ ಕೇಸುಗಳನ್ನು ಸ್ವಂತ ಬಡಿದಾಡಿ ಸಾಕಷ್ಟು ನೈಜ ಅನುಭವ ಮತ್ತು ಪಾಂಡಿತ್ಯ ಗಳಿಸಿದ್ದರು.

ಸ್ವಾಮಿ ಕೊಟ್ಟ ಮೊದಲನೇ ಏಟಿಗೇ ರಾಮಕೃಷ್ಣ ಹೆಗಡೆ ಮತ್ತು ಅವರ ವಕೀಲ ರಾಮ್ ಜೇಠಮಲಾನಿ ರಾಮಾ! ಕೃಷ್ಣಾ! ಮುರಾರಿ! ಕಾಪಾಡೋ! ಎನ್ನುತ್ತ ಮಕಾಡೆ ಮಲಗಿಬಿಟ್ಟರು. ಅಂತಹ ಮಾಸ್ಟರ್ ಸ್ಟ್ರೋಕ್ ಬಾರಿಸಿದ್ದರು ಸುಬ್ರಮಣ್ಯ ಸ್ವಾಮಿ.

ಮುಂಬೈ ಕೋರ್ಟಿನ ಮುಂದೆ ಒಂದೇ ಒಂದು ಸಿಂಪಲ್ ಮನವಿ ಮಾಡಿಕೊಂಡರು ಸ್ವಾಮಿ - 'ಈ ಮನುಷ್ಯ ಹೆಗಡೆ ಕಾನೂನುಬದ್ಧವಾಗಿ ಅವರ ವಾಸಸ್ಥಾನವಾದ ಬೆಂಗಳೂರಿನಲ್ಲಿ ಮೊಕದ್ದಮೆ ಹೂಡಬೇಕು. ಕಾನೂನಿನಲ್ಲಿರುವ ಒಂದು ಸಣ್ಣ ದೋಷವನ್ನು (loophole) ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲು ಮುಂಬೈನಲ್ಲಿ ದಾವೆ ಹೂಡಿದ್ದಾರೆ. ಈ ದಾವೆಯನ್ನು ತಿರಸ್ಕರಿಬೇಕು ಮತ್ತು ದಾವೆ ಹೂಡುವದಾದರೆ ಬೆಂಗಳೂರಿನಲ್ಲಿ ಹೂಡಲು ಆಜ್ಞೆ ಮಾಡಬೇಕು.'

ಹೆಗಡೆ ಉಪಯೋಗಿಸಲು ನೋಡಿದ್ದ ಕಾನೂನಿನ loophole ಯಾವುದಾಗಿತ್ತು ಅಂದರೆ.....ಮಾನನಷ್ಟ ಮೊಕದ್ದಮೆ ಹೂಡುವಾಗ ನಿರೀಕ್ಷಿತ ಪರಿಹಾರದ ಮೊತ್ತವನ್ನು ನಮೂದಿಸಬೇಕಾಗುತ್ತದೆ. ಅದರ ಒಂದು ಶೇಕಡಾ ಮೊತ್ತವನ್ನು ಠೇವಣಿ ಅಂತ ಇಡಬೇಕಾಗುತ್ತದೆ. ೧೦ ರಿಂದ ೨೦% ಠೇವಣಿ ಇಡಬೇಕಾಗುತ್ತದೆ. ಉದಾಹರಣೆಗೆ ನೀವು ಒಬ್ಬರ ಮೇಲೆ ಎರಡು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕಿದರೆ ಅದರ ೧೦% ಅಂದರೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ಸುಖಾಸುಮ್ಮನೆ ಇನ್ನೊಬ್ಬರಿಗೆ ವಿನಾಕಾರಣ ತೊಂದರೆ ಕೊಡಲು frivolous ಸುಳ್ಳು ಮೊಕದ್ದಮೆಗಳನ್ನು ಹೂಡದೇ ಇರಲಿ ಎನ್ನುವ ಸದುದ್ದೇಶದಿಂದ ಠೇವಣಿಯನ್ನು ನಿರ್ಧರಿಸಿರುತ್ತಾರೆ. ಆದರೆ ಮುಂಬೈನಲ್ಲಿ ಒಂದು advantage ಇತ್ತು. ನೀವು ಎಷ್ಟೇ ದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿ. ಠೇವಣಿ ಮಾತ್ರ ಕೇವಲ ಹತ್ತೇ ಸಾವಿರ ರೂಪಾಯಿ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ದುರುಪಯೋಗ ಮಾಡಲು ಹೇಳಿಮಾಡಿಸಿಟ್ಟಂತಹ loophole ಇದಾಗಿತ್ತು. ಹಾಗಾಗಿಯೇ ರಾ. ಕೃ. ಹೆಗಡೆ ಮುಂಬೈನಲ್ಲಿ ಕೇಸ್ ಹಾಕುವ ಸ್ಕೀಮ್ ಹಾಕಿದ್ದರು. ಆದರೆ ಉದ್ದಾಮ ಪಂಡಿತ ಸುಬ್ರಮಣಿಯನ್ ಸ್ವಾಮಿ ಅದಕ್ಕೆ ತಣ್ಣೀರೆರೆಚಿದ್ದರು.

ಮುಂಬೈ ಕೋರ್ಟ್ ಅವರ ಕೇಸನ್ನು ಹೊರಗೆಸೆದಾಗ ಹೆಗಡೆ ಮುಖಭಂಗ ಅನುಭವಿಸಿದರೇನೋ ನಿಜ. ಜಟ್ಟಿ ಮಕಾಡೆ ಬಿದ್ದರೂ ಮೀಸೆ ಮಣ್ಣಾಗಬಾರದು ನೋಡಿ. ಹಾಗಾಗಿ ಏನೇನೋ ತಿಪ್ಪರಲಾಗ ಹಾಕಿ ಬೆಂಗಳೂರಿನಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ದೊಡ್ಡ ಪ್ರಮಾಣದ ಠೇವಣಿಯನ್ನು ಎಲ್ಲಿಂದಲೋ ಜುಗಾಡ್ ಮಾಡಿ ತಂದರು. ಹೆಗಡೆಯವರು ರೊಕ್ಕ ಮಾಡಿಕೊಂಡಿರಲಿಲ್ಲ. ಹಾಗಾಗಿ ಅಷ್ಟು ದೊಡ್ಡ ಪ್ರಮಾಣದ ಠೇವಣಿ ಹೊಂದಿಸಲು ಸಾಕಷ್ಟು ಪರಿಶ್ರಮ ಪಟ್ಟಿರಬೇಕು.

ಹೆಗಡೆಯವರಿಗೆ ಮತ್ತು ಜನತಾ ಪರಿವಾರದ ಅನೇಕರಿಗೆ ತುರ್ತುಪರಿಸ್ಥಿತಿ ಕಾಲದಿಂದ ಆಪ್ತರಾಗಿದ್ದ ದೊಡ್ಡ ವಕೀಲ ಸಂತೋಷ್ ಹೆಗಡೆ ರಾಮಕೃಷ್ಣ ಹೆಗಡೆಯವರ ಪರವಾಗಿ ಕೇಸ್ ನಡೆಸಿದರು. ಸಿವಿಲ್ ಕೇಸ್. ವರ್ಷಾನುಗಟ್ಟಲೆ ನಡೆದರೂ ತೀರ್ಮಾನ ಬರಲಿಲ್ಲ. ಮತ್ತೆ ಸಿವಿಲ್ ಕೇಸ್ ಆದ ಕಾರಣ ಸ್ವಾಮಿಯವರಿಗೆ ಖುದ್ದಾಗಿ ಹಾಜರಾಗಿ ಕೇಸ್ ನಡೆಸುವ ಜರೂರತ್ತೂ ಇರಲಿಲ್ಲ. ಒಟ್ಟಿನಲ್ಲಿ ಇಸವಿ ೨೦೦೪ ರ ಹೊತ್ತಿಗೂ ಕೇಸ್ ಖುಲಾಸೆಯಾಗಿರಲಿಲ್ಲ. ಅಷ್ಟೊತ್ತಿಗೆ ಹೆಗಡೆ ಅವರ ರಾಜಕೀಯ ಜೀವನ ಒಂದು ದೊಡ್ಡ ಸರ್ಕಲ್ ರೌಂಡ್ ಹಾಕಿ ಮುಗಿದಿತ್ತು. ಆರೋಗ್ಯ ಬಹಳ ಕೆಟ್ಟಿತ್ತು. ಹೆಗಡೆ ಮರಣಶಯ್ಯೆಯಲ್ಲಿದ್ದರು. ಕೇಸ್ ನಡೆಸುವ ಉಮೇದಿ, ತಾಕತ್ತು ಅವರಲ್ಲಿ ಇರಲಿಲ್ಲ. ಹೆಚ್ಚಿನ ಸದ್ದು ಮಾಡದೆ ಸೈಲೆಂಟಾಗಿ ಅವರ ವಕೀಲರು ಸ್ವಾಮಿಯವರ ವಿರುದ್ಧ ಹಾಕಿದ್ದ ಮೊಕದ್ದಮೆಯನ್ನು ವಾಪಸ್ ತೆಗೆದುಕೊಂಡಿದ್ದು ಜಗತ್ತಿಗೆ ಗೊತ್ತಾಗದಿದ್ದರೂ ಸ್ವಾಮಿಯವರಿಗೆ ಮಾತ್ರ ಜರೂರ್ ಗೊತ್ತಾಯಿತು. ನಕ್ಕರು ಸ್ವಾಮಿ.

ಮರಣಶಯ್ಯೆಯಲ್ಲಿದ್ದ ಹೆಗಡೆ ಸುಬ್ರಮಣಿಯನ್ ಸ್ವಾಮಿಗಳನ್ನು ತುಂಬಾ ನೆನಪಿಸಿಕೊಂಡರಂತೆ. ಇಬ್ಬರಿಗೂ ಆಪ್ತರಾಗಿದ್ದ ವಿಜಯ ಮಲ್ಯರನ್ನು ಕರೆಸಿಕೊಂಡ ಹೆಗಡೆ, 'ಒಮ್ಮೆ ಸ್ವಾಮಿಯನ್ನು ಭೇಟಿ ಮಾಡಿಸಯ್ಯಾ. ಸಾಯೋ ಮುಂಚೆ ಅವರನ್ನು ಭೇಟಿಯಾಗಬೇಕು ಎಂದು ತುಂಬಾ ಅನ್ನಿಸುತ್ತಿದೆ,' ಎಂದು ಗೋಗರಿದರಂತೆ.

ಸ್ವಾಮಿಯವರನ್ನು ಭೇಟಿಯಾದ ಮಲ್ಯ ಹೆಗಡೆಯವರ ಕೋರಿಕೆಯನ್ನು ಸ್ವಾಮಿಯವರಿಗೆ ತಿಳಿಸಿದರಂತೆ. ಒಂದು ಕಾಲದಲ್ಲಿ ಬದ್ಧವೈರಿಯಾದರೇನಾಯಿತು? ಮನುಷ್ಯತ್ವಕ್ಕೆ, ಒಂದು ಕಾಲದ ಪರಿಚಯಕ್ಕೆ ಮಹತ್ವ ಕೊಟ್ಟ ಸ್ವಾಮಿ ಬೆಂಗಳೂರಿಗೆ ತೆರಳಿ ಹೆಗಡೆಯವರನ್ನು ಅವರ ಮನೆಯಲ್ಲಿ ಭೇಟಿಯಾದರು.

ಮಲಗಿದ್ದಲ್ಲಿಂದಲೇ ಸ್ವಾಮಿಯವರ ಎರಡೂ ಕೈಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ಹೆಗಡೆ, 'ಸ್ವಾಮೀ, ನಾವಿಬ್ಬರೂ ಸ್ನೇಹಿತರಾಗಿರಬೇಕಿತ್ತು ಕಣೋ. ಜಗಳವಾಡಿ ತಪ್ಪು ಮಾಡಿದೆವು,' ಎಂದು ಗೊಳೋ ಎಂದು ರೋಧಿಸಿದರಂತೆ. ಪಾಪ! ಗತಕಾಲದ ಏನೇನು ನೆನಪಾಗಿತ್ತೋ ಹೆಗಡೆಯವರಿಗೆ. ಮುಂದೆ ಕೆಲವೇ ದಿವಸಗಳಲ್ಲಿ ಹೆಗಡೆ ನಿಧನರಾದರು.

ಕರಿಷ್ಮಾ ಇದ್ದ ಚಾಣಾಕ್ಷ ರಾಜಕಾರಣಿ ಹೆಗಡೆ ಮತ್ತು ಅಸಾಧಾರಣ ಬುದ್ಧಿಮತ್ತೆಯ ಸ್ವಾಮಿ ಇಬ್ಬರೂ ಒಂದಾಗಿ ರಾಜಕಾರಣ ಮಾಡಿದ್ದರೆ ಏನೇನಾಗುತ್ತಿತ್ತೋ ಗೊತ್ತಿಲ್ಲ. ರಾಜಕಾರಣ ತುಂಬಾ ರಂಗೀನ್ ಆಗಿ ರೋಚಕವಾಗಿರುತ್ತಿತ್ತು. ಅದು ಮಾತ್ರ ಖಾತ್ರಿ. ೧೯೯೯ ರಲ್ಲಿ ಪ್ರಧಾನಿ ವಾಜಪೇಯಿ ಅವರ ಮುಂದೆಯೇ ಹೆಗಡೆ ಮತ್ತು ಸ್ವಾಮಿ ಮಧ್ಯೆ ಕಿಡಿಗಳು ಹಾರಿ ಜ್ವಾಲೆಯೆದ್ದಿತ್ತು. ಹೆಗಡೆಗೆ ಮಂತ್ರಿಗಿರಿ ಕೊಡಬಾರದು ಎಂದು ಹಠ ಹಿಡಿದು ಕೂತಿದ್ದರು ಜಯಲಲಿತಾ. ಆಕೆಯ ಹೆಗಲಿನ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದ್ದವರು ಇದೇ ಸ್ವಾಮಿ. ಅಂದು ಆಪ್ತೆಯಾಗಿದ್ದ ಆಕೆಯ ವಿರುದ್ಧ ಮುಂದಿನ ವರ್ಷಗಳಲ್ಲಿ ಸ್ವಾಮಿ ಅದ್ಯಾವ ರೀತಿಯಲ್ಲಿ ತಿರುಗಿಬಿದ್ದರು ಎಂದರೆ ಗಾಯಗೊಂಡ ಸಿಂಹಿಣಿಯಾದಂತಾದ ಜಯಲಲಿತಾ ಕೂಡ ಹೇಗೆ ಸ್ವಾಮಿಯವರ ಮೇಲೆ ದ್ವೇಷ ಸಾಧಿಸಿದರು ಅಂದರೆ ಒಮ್ಮೆಯಂತೂ ಸ್ವಾಮಿಯನ್ನು ಜಯಲಲಿತಾ ಬೆಂಬಲಿಗರ ಗುಂಪು ಬಡಿದು ಕೊಂದೇಬಿಟ್ಟಿತ್ತು. ಆಯ್ತ ವೇಳೆಗೆ ನ್ಯಾಯಾಧೀಶರ ಚೇಂಬರ್ ಒಳಗೆ ನುಗ್ಗಿದ ಸ್ವಾಮಿ ಬಚಾವಾಗಿದ್ದರು. ಮುಂದೆ ನಕ್ಷತ್ರಿಕನಂತೆ ಹಿಂದೆ ಬಿದ್ದ ಸ್ವಾಮಿ ಜಯಲಲಿತಾಳನ್ನು ಸೆರೆಮನೆಗೆ ಅಟ್ಟಿದರು. ಸೆರೆಮನೆಗೆ ಹೋಗುವ ಮೊದಲೇ ಆ ಪುಣ್ಯಾತ್ಗಿತ್ತಿ ಸ್ವರ್ಗ ಸೇರಿಕೊಂಡಳು. ಆಕೆಯ ಆಪ್ತೆ ಶಶಿಕಲಾ ಸ್ವಾಮಿಗಳಿಗೆ ಶಾಪ ಹಾಕುತ್ತಾ ಜೈಲಿನಲ್ಲಿ ರಾಗಿ ಬೀಸುತ್ತಿದ್ದಾಳೆ.

ಸ್ವಾಮಿಯವರ ಕಾನೂನಿನ ಕುಣಿಕೆ ಮುಂದೆ ಯಾರ್ಯಾರ ಕೊರಳಿಗೆ ಪಾಶದಂತೆ ಬೀಳಲಿದೆಯೋ!? ಭಗವಂತನೇ ಬಲ್ಲ.

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.




Sunday, April 29, 2018

'ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ!' ಎಂದಿತ್ತು ಹಾರ್ವರ್ಡ್ ವಿಶ್ವವಿದ್ಯಾಲಯ

೧೯೬೦ ನೇ ಇಸವಿಯ ಕಾಲ. ಅವನೊಬ್ಬ ಆಗಷ್ಟೇ ಹೈಸ್ಕೂಲ್ (12th class) ಮುಗಿಸಿದ್ದ ಹುಡುಗ. ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ. ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರು.

ಹೈಸ್ಕೂಲ್ ಮುಗಿಯಿತು. ಕಾಲೇಜು ಸೇರಲು ದೆಹಲಿಯ ಪ್ರಖ್ಯಾತ ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಅರ್ಜಿ ಹಾಕೋಣ ಎಂದು ಫಾರ್ಮ್ ತರಲು ಕಾಲೇಜಿಗೆ ಹೋಗಿದ್ದ. ಬೇಸಿಗೆ ಸಮಯ. ಸರಳವಾಗಿ ಹಾಫ್ ಶರ್ಟ್ ಮತ್ತು ಹಾಫ್ ಪ್ಯಾಂಟ್ ಹಾಕಿಕೊಂಡೇ ಹೋಗಿದ್ದ. ಅದು ಆಗಿನ ಕಾಲದ ಮಧ್ಯಮವರ್ಗದ ಹುಡುಗರ ಸ್ಟ್ಯಾಂಡರ್ಡ್ ಡ್ರೆಸ್. ಮೊದಲು ತಲೆ ಮೇಲೆ ಗಾಂಧಿ ಟೋಪಿ ಕೂಡ ಇರುತ್ತಿತ್ತು. ಸ್ವಾತಂತ್ರ್ಯದ ನಂತರ ಗಾಂಧಿ ಟೋಪಿ ರಾಜಕಾರಣಿಗಳ ಪಾಲಾಗಿ, ಅದಕ್ಕೊಂದು ಕೆಟ್ಟ ಹೆಸರು ಬಂದು, ಹುಡುಗರು ಟೋಪಿ ಹಾಕುವದನ್ನು ಬಿಟ್ಟಿದ್ದರು.

ಸೇಂಟ್ ಸ್ಟೆಫೆನ್ಸ್ ದೇಶದಲ್ಲೇ ಹೆಸರಾಂತ ಕಾಲೇಜು. ಬ್ರಿಟಿಷರು ಎಂದೋ ದೇಶ ಬಿಟ್ಟು ಹೋಗಿದ್ದರು. ಅವರೂ ಸಹಿತ ಎಂದೋ ಬಿಟ್ಟಿರಬಹುದಾದ ಸಂಪ್ರದಾಯಗಳನ್ನೂ ಸಹ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದ ಸಂಸ್ಥೆಗಳಲ್ಲಿ ಸೇಂಟ್ ಸ್ಟೆಫೆನ್ಸ್ ಕೂಡ ಒಂದು. ಅಲ್ಲಿ ಒಂದು ರೀತಿಯ superiority complex. ಥಳಕುಬಳುಕಿಲ್ಲದ ಸಾಮಾನ್ಯ ದೇಶಿ ಜನರ ಬಗ್ಗೆ ಮತ್ತು ಅವರ ಸರಳ ಮತ್ತು ಸಹಜ ಜೀವನಶೈಲಿಯ ಬಗ್ಗೆ ಕಾರಣವಿಲ್ಲದ ಅಸಡ್ಡೆ ಮತ್ತು ಹೇವರಿಕೆ. ಎಲ್ಲ ಮೆಕಾಲೆಯ ಶನಿ ಸಂತಾನಗಳು.

ಈ ಹುಡುಗ ಹೋಗಿ 'ಪ್ರವೇಶ ಪಡೆಯಬೇಕಾಗಿದೆ. ಒಂದು ಅರ್ಜಿ ಫಾರ್ಮ್ ಕೊಡಿ,' ಅಂದ.

ಅರ್ಜಿ ಕೊಡುವ ಕ್ಲಾರ್ಕ್ ಕೂಡ ಮೆಕಾಲೆ ಸಂತಾನಿಯೇ. ಹತ್ತಿಯ ಶುದ್ಧ ಶುಭ್ರ ದೇಶಿ ದಿರುಸಿನಲ್ಲಿ ಕಂಗೊಳಿಸುತ್ತಿದ್ದ ಈ ಹುಡುಗನಿಗೆ ಅರ್ಜಿ ಫಾರ್ಮ್  ಏನೋ ಕೊಟ್ಟ. ಅಸಡ್ಡೆಯಿಂದ ನೋಡುತ್ತಾ ಹೇಳಿದ, 'ಹಳ್ಳಿ ಹುಂಬನಂತವರಿಗೆ ಈ ಕಾಲೇಜಿನಲ್ಲಿ ಪ್ರವೇಶ ದೊರೆಯುವದಿಲ್ಲ!' ಯಾರ ಬಗ್ಗೆ ಹೇಳಿದ ಎಂದು ತಿಳಿಯದಷ್ಟು ದಡ್ಡನಾಗಿರಲಿಲ್ಲ ಆ ಹುಡುಗ. ಸಾಕಷ್ಟು ಪ್ರತಿಭಾವಂತನಾಗಿದ್ದ ಅವನಿಗೆ ಆ ಕಾಲೇಜೊಂದರಲ್ಲೇ ಅಲ್ಲ ದೆಹಲಿಯ ಬೇಕಾದ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿತ್ತು.

'ಎಲಲಾ, ನಿನ್ನ ಸೊಕ್ಕೇ! ನೀನೂ ಬೇಡ, ನಿನ್ನ ಅರ್ಜಿಯೂ ಬೇಡ, ನಿನ್ನ ಕಾಲೇಜೂ ಬೇಡ,' ಎಂದು ಆ ಕಾರಕೂನನ ಮುಖದ ಮೇಲೆ ಅರ್ಜಿ ಎಸೆದು ಬಂದ ಆ ಹುಡುಗ ಅದೇ ಕಾಲೇಜಿನ ಎದುರಿಗೇ ಇದ್ದ ಹಿಂದೂ ಕಾಲೇಜ್ ಸೇರಿದ. ಅಂದು ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಗೊತ್ತಿರಲಿಕ್ಕಿಲ್ಲ ತಾವು ಎಂತಹ ಮೇಧಾವಿ ವಿದ್ಯಾರ್ಥಿಯೊಬ್ಬನನ್ನು ಕಳೆದುಕೊಂಡೆವು ಎಂದು. ಅದು ಅವರ ಅರಿವಿಗೆ ಬರಲು ಐದಾರು ವರ್ಷ ಕಾಯಬೇಕಾಯಿತು. ನಂತರ ವರ್ಷಾನುಗಟ್ಟಲೆ, ಈಗಲೂ ಸಹ, ಆ ಕಹಿಯನ್ನು ಅನುಭವಿಸುತ್ತಿರಬೇಕು.

ಹಿಂದೂ ಕಾಲೇಜಿನಲ್ಲಿ ಪದವಿಗೆ ಪ್ರವೇಶ ಪಡೆದ ಹುಡುಗ ಅತ್ಯಂತ ಉತ್ತಮ ಅಂಕಗಳೊಂದಿಗೆ ಗಣಿತ, ಸಂಖ್ಯಾಶಾಸ್ತ್ರಗಳಲ್ಲಿ ಪದವಿ ಗಳಿಸಿದ. ಉನ್ನತ ಶಿಕ್ಷಣಕ್ಕಾಗಿ ಎಲ್ಲೂ ಹೋಗಬಹುದಾಗಿತ್ತು. ಅಷ್ಟು ಉತ್ಕೃಷ್ಟವಾಗಿತ್ತು ಆತನ ಸಾಧನೆ. ಆತ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಮಾಡಲು ಹೋಗಿದ್ದು ಕಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗೆ (Indian Statistical Institute).  ಅನೇಕ ಮೇಧಾವಿ ಶಿಕ್ಷಕರನ್ನು ಹೊಂದಿದ್ದ ಆ ಸಂಸ್ಥೆಗೆ ದೊಡ್ಡ ಪ್ರಮಾಣದ ಪ್ರತಿಷ್ಠೆ, ಮನ್ನಣೆ ಎಲ್ಲ ಇತ್ತು.

ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಂದಿನ ಮುಖ್ಯಸ್ಥರು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಅಥವಾ ಹಾಗಂತ ಬಿಲ್ಡಪ್ ಕೊಟ್ಟುಕೊಂಡು, ರಾಜಕಾರಣಿಗಳ ಸಖ್ಯ ಮಾಡಿಕೊಂಡು, ತಮ್ಮ ಸುತ್ತ ಒಂದು ಪ್ರಭಾವಳಿ ಸೃಷ್ಟಿಸಿಕೊಂಡು ಕೂತಿದ್ದರು. ಮೇಲಿಂದ ದೊಡ್ಡ ಮಟ್ಟದ ಅಹಂ ಬೇರೆ.

ಈ ಹುಡುಗನ ತಂದೆ ಕೂಡ ದೊಡ್ಡ ಸಂಖ್ಯಾಶಾಸ್ತ್ರಜ್ಞರೇ. ಅವರು ಸರ್ಕಾರಿ ನೌಕರಿ ಮಾಡಿಕೊಂಡಿದ್ದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥರಿಗೂ ಮತ್ತು ಈ ಹುಡುಗನ ತಂದೆಗೂ ಏನೋ ಒಂದು ತರಹದ ego clash. ಒಮ್ಮೊಮ್ಮೆ ಮೇಧಾವಿಗಳಲ್ಲಿ, ಅದರಲ್ಲೂ ತಾವೇ ದೊಡ್ಡ ಜ್ಞಾನಿಗಳು, ತಮ್ಮನ್ನು ಬಿಟ್ಟರೆ ಬೇರೆ ಯಾರಿಲ್ಲ ಅಂತೆಲ್ಲ ಅಂದುಕೊಂಡವರ ಮಧ್ಯೆ ಅಹಂ ಯುದ್ಧಗಳು ಆಗುತ್ತಿರುತ್ತವೆ. ಅದೇ ರೀತಿಯ ಅಹಂ ಯುದ್ಧ ಆ ಇಬ್ಬರು ಹಿರಿಯರಲ್ಲಿ.

ತನ್ನ ವೈರಿಯ ಪುತ್ರ ತನ್ನ ಸಂಸ್ಥೆಗೆ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಓದಲು ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದ ಆ ಸಂಸ್ಥೆಯ ಮುಖ್ಯಸ್ಥರಿಗೆ ಸಮ್ಮಿಶ್ರ ಭಾವನೆ. ಒಮ್ಮೆ ಆ ಹುಡುಗನ ತಂದೆ ಭೇಟಿಯಾದಾಗ, 'ನಿಮ್ಮ ಹುಡುಗನ ಚಿಂತೆ ಬಿಡಿ. ಈಗ ನಮ್ಮ ಉಸ್ತುವಾರಿಯಲ್ಲಿದ್ದಾನೆ. ಸರಿಯಾಗಿ ನೋಡಿಕೊಳ್ಳುತ್ತೇವೆ,' ಎಂದು ತುಂಬಾ patronizing ಮಾಡಿದ ರೀತಿಯಲ್ಲಿ ಹೇಳಿದ್ದರು. ಹಾಗೆ ಹೇಳಿದ್ದರ ಹಿಂದಿನದರ ಮರ್ಮ, 'ಈಗ ನಿಮ್ಮ ಹುಡುಗನ ಜುಟ್ಟು ನಮ್ಮ ಕೈಯಲ್ಲಿದೆ. ದುವಾ ಸಲಾಮಿ ಮಾಡಿಕೊಂಡು, ನಮಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋದರೆ ಬಚಾವ್. ಇಲ್ಲವಾದರೆ ಅಷ್ಟೇ ಮತ್ತೆ!' ಅನ್ನುವ ಸಂದೇಶವಿತ್ತು. ಹುಡುಗನ ತಂದೆಗೆ ಆ ಸಂದೇಶದ ಮರ್ಮ ತಿಳಿಯಿತು. ಅವರಿಗೇನು ಆತ್ಮಾಭಿಮಾನ, ಮಗನ ಮೇಲೆ ಅಭಿಮಾನ ಇರುವದಿಲ್ಲವೇ? ಉರಿದುಕೊಂಡ ಅವರು, 'ನಿಮ್ಮ ಕೆಲಸ ನೀವು ಮಾಡಿಕೊಳ್ಳಿ. ನನ್ನ ಮಗ ಖುದ್ದಾಗಿ ಎಲ್ಲ ಸಂಬಾಳಿಸಿಕೊಂಡು ಹೋಗುತ್ತಾನೆ. ನಿಮ್ಮ ಸಹಾಯವೇನೂ ಬೇಕಾಗಿಲ್ಲ,' ಎಂದು ಮುಖದ ಮೇಲೆ ತಪರಾಕಿ ಬಾರಿಸಿದಂತೆ ಹೇಳಿದ್ದರು. 'ನೀವೇ ದೇವರು. ನನ್ನ ಮಗನನ್ನು ನಿಮ್ಮ ಸುಪರ್ದಿಯಲ್ಲಿ ತೆಗೆದುಕೊಂಡು ಚೆನ್ನಾಗಿ ತಯಾರು ಮಾಡಿ ಮಹಾಪ್ರಭುಗಳೇ,' ಎಂದು ಹೇಳುತ್ತಾರೇನೋ, ಹಾಗೆ ಹೇಳಲಿ ಎಂದು ಬಯಸಿದ್ದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಅವಮಾನವಾಗಿತ್ತು. ಅದನ್ನು ಅವರು ಮರೆಯಲು ಸಾಧ್ಯವೇ ಇರಲಿಲ್ಲ. ಕಲ್ಕತ್ತಾಗೆ ಬಂದವರೇ ಕತ್ತಿ ಮಸೆಯತೊಡಗಿದರು. 'ನೀನು ಹೇಗೆ ಇಲ್ಲಿಂದ ಪಾಸಾಗಿ, ಡಿಗ್ರಿ ತೆಗೆದುಕೂಂಡು ಹೋಗುತ್ತೀಯೋ ಎಂದು ನೋಡೇಬಿಡುತ್ತೇನೆ!' ಎಂದು ಅವಡುಗಚ್ಚಿ ಕೊಕ್ಕೆ ಹಾಕಲು ಕುಳಿತರು.

ಕಲ್ಕತ್ತಾದ ಆ ಸಂಸ್ಥೆಗೆ ಅನಭಿಷಿಕ್ತ ಮಹಾರಾಜ ಅವರು. ಮೇಲಿಂದ ಅಂದಿನ ಪ್ರಧಾನಿ ನೆಹರೂವಿಗೆ ಏಕ್ದಂ ಖಾಸಮ್ ಖಾಸ್. ಅಂತಹ ಪ್ರಭಾವಿಗಳು ಕೈತೊಳೆದುಕೊಂಡು ಹಿಂದೆ ಬಿದ್ದರೆ ಒಬ್ಬ ವಿದ್ಯಾರ್ಥಿಗೆ ತೊಂದರೆ ಕೊಟ್ಟು, ಹಣ್ಣು ಮಾಡಿ, ಹೈರಾಣ ಮಾಡಿ ಒಗೆಯುವದು ಒಂದು ದೊಡ್ಡ ಮಾತೇ? ತುಂಬಾ ಸುಲಭ ಅದು. ಮತ್ತೆ ಭಾರತೀಯ ವಿದ್ಯಾಸಂಸ್ಥೆಗಳಲ್ಲಿ ಪಾರದರ್ಶಕತೆ ಬಹಳ ಕಮ್ಮಿ. ದೊಡ್ಡ ಮಂದಿಯ ಅಂದಾದುಂಧಿ ಮನ್ಮಾನಿಯನ್ನು ಯಾರೂ ಕೇಳುವದಿಲ್ಲ. ಕೇಳಿದರೆ ಅವರ ಜೀವನವನ್ನು ನರಕ ಮಾಡಿ ಒಗೆಯುತ್ತಾರೆ.

ಮುಖ್ಯಸ್ಥರು ಒಂದು ಅಲಿಖಿತ ಆಜ್ಞೆ ಹೊರಡಿಸಿದರು. 'ಆ ಹುಡುಗ ಉತ್ತೀರ್ಣನಾಗಕೂಡದು. ಅವನಿಗೆ ಎಲ್ಲಾ ವಿಧದ ತೊಂದರೆ ಕೊಡಿ. ಫೇಲ್ ಮಾಡಿ ಒಗೆಯಿರಿ. ತಾನಾಗಿಯೇ ಬಿಟ್ಟು ಹೋಗಬೇಕು ಅನ್ನುವಷ್ಟು ತೊಂದರೆ, ತಾಪತ್ರಯ ಕೊಡಿ. ಉಳಿದ ಚಿಂತೆ ನನಗಿರಲಿ!' ಎಂಬ ಠರಾವು ಪಾಸ್ ಮಾಡಿದರು.

ಮೊದಲಿನ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಹುಡುಗ ಒಮ್ಮೆಲೇ ಫೇಲಾಗತೊಡಗಿದ. ಫೇಲ್ ಆದ ಅನ್ನುವದಕಿಂತ ಫೇಲ್ ಮಾಡಲ್ಪಟ್ಟ. ಯಾಕೆ ಎಂದು ಕೇಳಿದರೆ ಕೆಲವು ಶಿಕ್ಷಕರು ಉಡಾಫೆಯ ಉತ್ತರ ಕೊಟ್ಟರು. ಉಳಿದ ಕೆಲವರು ಏನೇನೋ ಹೇಳಿ ಜಾರಿಕೊಂಡರು. ಆತ್ಮಸಾಕ್ಷಿ ಇದ್ದ ಕೆಲವರು ಮತ್ತು ಈ ಹುಡುಗನನ್ನು ಇಷ್ಟಪಡುತ್ತಿದ್ದ ಕೆಲವರು ಮಾತ್ರ ಹುಡುಗ ಸಡನ್ನಾಗಿ ಫೇಲ್ ಆಗುತ್ತಿರುವ ಹಕೀಕತ್ತಿನ ಹಿಂದಿನ ನಿಜವಾದ ಕಾರಣ ಹೇಳಿದರು. ಆ ಸಂಸ್ಥೆಯನ್ನು ಬಿಟ್ಟು ಹೋಗಿ ಬೇರೆ ಎಲ್ಲಿಯಾದರೂ ಓದುವಂತೆ ಹೇಳಿದರು.

ಹುಡುಗನಿಗೆ ಬೇಜಾರಾಗಿದ್ದು ನಿಜ. ಈ ದೊಡ್ಡವರ ಸಣ್ಣತನ ನೋಡಿ ಹೇವರಿಕೆ, ಹೇಸಿಗೆ ಕೂಡ ಮನದಲ್ಲಿ ಮೂಡಿತು. ಈ ಸಂಸ್ಥೆಯಲ್ಲಿ ಪ್ರವೇಶ ಪಡೆದದ್ದಾಗಿದೆ. ಶಿಷ್ಯವೇತನ ಬರುತ್ತಿದೆ. ಈ ಶಿಕ್ಷಕರು ಪರೀಕ್ಷೆಯಲ್ಲಿ ಫೇಲ್ ಮಾಡಿದರೆ ಏನಂತೆ? ಸ್ವಂತ ಓದಿ ಜ್ಞಾನ ಸಂಪಾದಿಸುತ್ತೇನೆ ಎಂದು ಖುದ್ದಾಗಿ ಓದಲು ಕೂತ. ಸಂಸ್ಥೆಯ ಗ್ರಂಥಾಲಯವೇ ಅವನ ಮನೆಯಾಗಿ ಹೋಯಿತು. ಸದಾ ಅಲ್ಲೇ ಇದ್ದು ಸಾಧಾರಣ ವಿದ್ಯಾರ್ಥಿಗಳು ಓದದ ಪುಸ್ತಕಗಳನ್ನು ಮತ್ತು ದೇಶವಿದೇಶಗಳ ಮೇಧಾವಿ ಪತ್ರಿಕೆಗಳನ್ನು ವಿವರವಾಗಿ ಓದತೊಡಗಿದ.

ಆ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಮಟ್ಟದ ಮನ್ನಣೆ ಇತ್ತು. ಸಂಖ್ಯಾಶಾಸ್ತ್ರದ ಅತಿ ಕ್ಲಿಷ್ಟ ಸಮಸ್ಯೆಯೊಂದನ್ನುಜಗತ್ತಿನಲ್ಲೇ 'ಪಪ್ರಥಮವಾಗಿ'  ಬಗೆಹರಿಸಿದ್ದಕ್ಕಾಗಿ ಅವರಿಗೆ ದೊಡ್ಡ ಹೆಸರು ಬಂದಿತ್ತು.  ಅವರು ಬಗೆಹರಿಸಿದ್ದ ಆ ಕ್ಲಿಷ್ಟ ಪ್ರಮೇಯ ದೇಶವಿದೇಶಗಳ ಸಂಖ್ಯಾಶಾಸ್ತ್ರದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.  ಅದಾದ ನಂತರ ಅವರನ್ನು ಹಿಡಿಯುವರೇ ಇರಲಿಲ್ಲ. ತಮ್ಮ ಸುತ್ತ ಪ್ರಭಾವಳಿ ಸೃಷ್ಟಿಸಿಕೊಂಡು, ಬಿಲ್ಡಪ್ ಕೊಟ್ಟುಕೊಂಡು, ಭೋ ಪರಾಕ್ ಹೇಳುವ ಭಟ್ಟಂಗಿಗಳ ಸಮೂಹ ಸೃಷ್ಟಿಸಿಕೊಂಡು, ತಮ್ಮದೇ ಅಹಂನ ಅಮಲಿನ ಮಹಲಿನಲ್ಲಿ ಇರುತ್ತಿದ್ದರು ಅವರು.

ವಿಧಿಯ ಲೀಲೆಗಳು ವಿಚಿತ್ರವಾಗಿರುತ್ತವೆ. ಈ ಹುಡುಗ ಕೂಡ ಸಂಖ್ಯಾಶಾಸ್ತ್ರದ ಅದೇ ಸಮಸ್ಯೆಯನ್ನು ಅಧ್ಯಯನ ಮಾಡತೊಡಗಿದ. ಆಳವಾಗಿ ಅಧ್ಯಯನ ಮಾಡಿದ. ಏನೋ ಹೊಳೆಯಿತು. 'ಅರೇ! ಈ ಸಮಸ್ಯೆಯನ್ನು ಈಗ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬೇರೆ ರೀತಿಯಲ್ಲಿ ಬಿಡಿಸಿದ್ದಾನೆ. ನಮ್ಮ ಸಂಸ್ಥೆಯ ಮುಖ್ಯಸ್ಥರು ಬೇರೆ ರೀತಿಯಲ್ಲಿ ಬಿಡಿಸಿದ್ದಾರೆಯೇ ವಿನಃ ಈ ಸಮಸ್ಯೆಯನ್ನು ಬಿಡಿಸಿದವರಲ್ಲಿ ಇವರು ಮೊದಲನೆಯವರು ಖಂಡಿತ ಅಲ್ಲ. ಮೊದಲು ಬಿಡಿಸಿದ ಗಣಿತಜ್ಞ ಅಷ್ಟು ವಿವರವಾಗಿ ಬಿಡಿಸಿರಲಿಕ್ಕಿಲ್ಲ. ನಾನು ಅದನ್ನು ವಿವರವಾಗಿ ಬಿಡಿಸಿದರೆ ನಿಖರ ಉತ್ತರ ದೊರೆಯುತ್ತದೆ,' ಎಂದು ಫ್ಲಾಶ್ ಆಯಿತು.

ನಾಲ್ಕು ಶತಮಾನಗಳ ಹಿಂದೆ ಗಣಿತಜ್ಞ ಹೇಗೆ ಬಿಡಿಸಿದ್ದನೋ ಅದನ್ನು ಮತ್ತೂ ಉತ್ತಮಗೊಳಿಸಿ, ಪರಿಹಾರವನ್ನು ಸರಳೀಕರಿಸುವ ಕೆಲಸಕ್ಕೆ ಪದ್ಮಾಸನ ಹಾಕಿ ಕುಳಿತುಬಿಟ್ಟ ಈ ಹುಡುಗ. ಎಷ್ಟೇ ಓದಿದರೂ ಶಿಕ್ಷರು ಫೇಲ್ ಮಾಡಿ ಒಗೆಯತೊಡಗಿದ್ದರು ಅಥವಾ ಜಸ್ಟ್ ಪಾಸ್ ಮಾಡುತ್ತಿದ್ದರು. ಹಾಗಾಗಿ ಡಿಗ್ರಿಗಾಗಿ ಓದುವದರಲ್ಲಿ ಮಜವೇ ಇರಲಿಲ್ಲ. ಈಗ ಈ ಕ್ಲಿಷ್ಟ ಸಮಸ್ಯೆಯನ್ನು ಬಿಡಿಸಿ, ಅದೇನಾದರೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿಬಿಟ್ಟರೆ.... ಎನ್ನುವುದನ್ನು ಊಹಿಸಿಕೊಂಡರೆ ಸಿಕ್ಕಾಪಟ್ಟೆ ಹುರುಪು, ಉಮೇದಿ ಬರತೊಡಗಿತು.

ಬಹಳ ಶ್ರಮಪಟ್ಟು ಒಂದು ಪ್ರೌಢ ಪ್ರಬಂಧವನ್ನು ಸಿದ್ಧಪಡಿಸಿದ. ಅಡಿಯಲ್ಲಿ ಒಂದು ಖಡಕ್ ಟಿಪ್ಪಣಿ ಬರೆಯುವದನ್ನು ಮರೆಯಲಿಲ್ಲ, 'ಭಾರತದ ಸಂಖ್ಯಾಶಾಸ್ತ್ರಜ್ಞರೊಬ್ಬರು graph theory ಉಪಯೋಗಿಸಿ ಈ ಸಮಸ್ಯೆಯನ್ನು ಬಿಡಿಸಿದ್ದಾರೆ. ಈ ಸಮಸ್ಯೆಯನ್ನು ಮೊತ್ತ ಮೊದಲನೆಯದಾಗಿ ತಾವೇ ಬಿಡಿಸಿದ್ದು ಎಂದು ಬಿಂಬಿಸಿಕೊಂಡಿದ್ದಾರೆ. ನಿಮ್ಮ ಪತ್ರಿಕೆ ಕೂಡ ಅದನ್ನು ಒಪ್ಪಿಕೊಂಡಿದೆ. ನನ್ನ ಈ ಪ್ರಬಂಧದ ತಿರುಳೇನೆಂದರೆ - ಈ ಸಮಸ್ಯೆಯನ್ನು integral calculus ಉಪಯೋಗಿಸಿ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬಿಡಿಸಿದ್ದಾನೆ. ಆತನ ಸಿದ್ಧಾಂತವನ್ನು ಮತ್ತೂ ಸರಳೀಕರಿಸಿದ್ದೇನೆ ಮತ್ತು ಸಮಸ್ಯೆಗೆ ಉತ್ತರವನ್ನು ನೇರವಾಗಿ ಕಂಡುಕೊಂಡಿದ್ದೇನೆ. ಈ ಪ್ರಬಂಧವನ್ನು ನಿಮ್ಮ ಪತ್ರಿಕೆಯಯಲ್ಲಿ ಪ್ರಕಟಿಸಿ. ಈ ಸಮಸ್ಯೆಯನ್ನು ಬಿಡಿಸಿದ ಮೊದಲಿಗರು ಭಾರತದ ಈ ಸಂಖ್ಯಾಶಾಸ್ತ್ರಜ್ಞರು ಅಲ್ಲ ಎಂಬ ತಿದ್ದುಪಡಿಯನ್ನು ಕೂಡ ಪ್ರಕಟಿಸಿ.'

ಹೀಗೆ ಸಿದ್ಧಪಡಿಸಿದ ಪ್ರಬಂಧವನ್ನು ಅಮೇರಿಕಾದ ಖ್ಯಾತ ಸಂಖ್ಯಾಶಾಸ್ತ್ರದ ಪತ್ರಿಕೆಗೆ ಕಳುಹಿಸಿಬಿಟ್ಟ. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಬಂಧಗಳು ಹಾಗೇ ಸುಮ್ಮನೆ ಪ್ರಕಟವಾಗುವದಿಲ್ಲ. ಹಲವಾರು ಖ್ಯಾತ ಪಂಡಿತರಿಂದ peer review ಮಾಡಲ್ಪಡುತ್ತವೆ. ತಪ್ಪುಗಳೇನಾದರೂ ಇವೆಯೋ ಎಂದು ಭೂತಗನ್ನಡಿ ಹಿಡಿದು ನೋಡುತ್ತಾರೆ. ಆಕ್ಷೇಪಣೆಗಳನ್ನು ಎತ್ತುತ್ತಾರೆ. ಒಮ್ಮೊಮ್ಮೆ ಒಂದು ಪ್ರಬಂಧ peer review ಆಗಿ, ಎತ್ತಿದ ಎಲ್ಲ ಆಕ್ಷೇಪಣೆಗಳಿಗೆ ತಕ್ಕ ಉತ್ತರ ಕೊಟ್ಟು, ಬೇಕಾದ ತಿದ್ದುಪಡಿಗಳನ್ನು ಮಾಡಿದ ನಂತರ ಪ್ರಕಟವಾಗಲು ಒಂದೆರೆಡು ವರ್ಷ ಹಿಡಿದರೂ ಆಶ್ಚರ್ಯವಿಲ್ಲ.

ಈ ಹುಡುಗನ ಪ್ರಬಂಧವನ್ನು ತಪಾಸಣೆ ಮಾಡಲು ಕುಳಿತವರು ಅಮೇರಿಕಾದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದ ಒಬ್ಬ ಖ್ಯಾತ ಪ್ರೊಫೆಸರ್. ಇನ್ನೂ ಸ್ನಾತ್ತಕೋತ್ತರ ಪದವಿ ಮಾಡುತ್ತಿರುವ ಹುಡುಗನ ಪ್ರಬಂಧ ಅವರನ್ನು ತುಂಬಾ ಇಂಪ್ರೆಸ್ ಮಾಡಿತ್ತು. ಇಂತಹ ಮೇಧಾವಿ ಹುಡುಗ ತಮ್ಮ ವಿಶ್ವವಿದ್ಯಾಲಯವಾದ ಹಾರ್ವರ್ಡಿಗೆ ಮುದ್ದಾಂ ಬರಬೇಕು ಎಂದೆನ್ನಿಸಿತು ಅವರಿಗೆ. ಅಮೇರಿಕಾದ ಖ್ಯಾತ ವಿಶ್ವವಿದ್ಯಾಲಯಗಳಿಗೆ ಒಂದು ವಿಷಯ ಬರೋಬ್ಬರಿ ಗೊತ್ತಿರುತ್ತದೆ. ತಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠೆ ನಿಂತಿರುವದೇ ಮೇಧಾವಿ ಶಿಕ್ಷಕರ ಮತ್ತು ಜಾಣ ವಿದ್ಯಾರ್ಥಿಗಳಿಂದ ಮೇಲೆ ಎಂದು. ಬಾಕಿ ಎಲ್ಲ ನಗಣ್ಯ. ಹಾಗಾಗಿ ಅತ್ಯುತ್ತಮ ವಿಶ್ವವಿದ್ಯಾಲಯಗಳು ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ ಸದಾ ಬಲೆ ಹಾಕಿಕೊಂಡು ಕುಳಿತಿರುತ್ತವೆ.

ಈ ಹುಡುಗ ಕಲ್ಕತ್ತಾದಿಂದ ಬರೆದು ಕಳಿಸಿದ್ದ ಅತ್ಯುತ್ತಮ ಮತ್ತು landmark ಅನ್ನಿಸುವಂತಹ ಪ್ರಬಂಧವನ್ನು ಮುದ್ದಾಂ ಪ್ರಕಟಿಸುವಂತೆ ಟಿಪ್ಪಣಿ ಬರೆದು ಸಂಪಾದಕ ಮಂಡಳಿಗೆ ಕಳಿಸಿದ ಆ ಹಾರ್ವರ್ಡ್ ಯೂನಿವರ್ಸಿಟಿ ಅಧ್ಯಾಪಕರು ಮತ್ತೊಂದು ಖತರ್ನಾಕ್ ಕೆಲಸ ಮಾಡಿಬಿಟ್ಟರು.

ಅದೇನೆಂದರೆ.....

ಹಾರ್ವರ್ಡ್ ಯೂನಿವರ್ಸಿಟಿಯ ಪ್ರವೇಶ ಮಂಡಳಿಯ ಮುಖ್ಯಸ್ಥರಿಗೆ ಒಂದು ಪತ್ರ ಬರೆದರು. 'ಕಲ್ಕತ್ತಾದ ಸಂಸ್ಥೆಯೊಂದರಲ್ಲಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬನಿದ್ದಾನೆ. ಅಂತಹ ಪ್ರತಿಭಾನ್ವಿತ ಹಾರ್ವರ್ಡಿನಲ್ಲಿ ಓದಲಿಲ್ಲ ಅಂದರೆ ಅದು ನಮಗೇ ನಷ್ಟ. ತ್ವರಿತವಾಗಿ ಅವನಿಗೆ ಪ್ರವೇಶ ಮಂಜೂರು ಮಾಡಿ. ದೊಡ್ಡ ಪ್ರಮಾಣದ ಪೂರ್ತಿ ಶಿಷ್ಯವೇತನ, ಇತರೆ ಆರ್ಥಿಕ ಸಹಾಯದ ಬಗ್ಗೆ ಖಾತ್ರಿ ಕೊಟ್ಟು ಆದಷ್ಟು ಬೇಗ ಸಂದೇಶ ಕಳುಹಿಸಿ. ಮುಂದಿನ ಟರ್ಮಿನಲ್ಲಿ ಆತ ನನ್ನ ಜೊತೆ ಮತ್ತು ಇತರೆ ಹಾರ್ವರ್ಡ್ ಪ್ರೊಫೆಸರ್ ಜನರ ಜೊತೆ ಕೆಲಸ ಮಾಡಲು ಇಲ್ಲಿ ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತು ಗೆಲುವು ಇನ್ನೊಂದಿಲ್ಲ. ಆ ವಿದ್ಯಾರ್ಥಿ ನಮ್ಮ ಹಾರ್ವರ್ಡ್ ಆಹ್ವಾನವನ್ನು ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡುತ್ತಿರಿ.'

ಹೀಗೆ ಕಲ್ಕತ್ತಾದಲ್ಲಿ ಅಲ್ಲಿನ ಪ್ರೊಫೆಸರ್ ಮಂದಿ ಕೊಡಬಾರದ ಕಾಟ ಕೊಟ್ಟು, ಫೇಲ್ ಮಾಡುತ್ತಾ, ಕೊಕ್ಕೆ ಹಾಕುತ್ತಿದ್ದರೆ ಈ ಕಡೆ ಹಾರ್ವರ್ಡ್ PhD ಗೆ ಬರುವಂತೆ ಆಹ್ವಾನ ಕಳಿಸಿತ್ತು. ಏನೇನೋ ಕಷ್ಟಪಟ್ಟು ಅರ್ಜಿ ಹಾಕಿದ ೦.೦೫% ಜನರಿಗೂ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಪ್ರವೇಶ ಸಿಗುವದಿಲ್ಲ. ಅಂತದ್ದರಲ್ಲಿ ಈ ಹುಡುಗನ ಅಸಾಧಾರಣ ಬುದ್ಧಿಮತ್ತೆಯಿಂದ ತುಂಬಾ ಪ್ರಭಾವಿತವಾಗಿದ್ದ ಹಾರ್ವರ್ಡ್ ಯೂನಿವರ್ಸಿಟಿ ತಾನೇ ಆಹ್ವಾನ ಕಳಿಸಿತ್ತು. Pure meritocracy ಅಂದರೆ ಅದು.

ಹಾರ್ವರ್ಡ್ ಯೂನಿವರ್ಸಿಟಿಯಿಂದ ಬಂದ ಅನಿರೀಕ್ಷಿತ ಆಹ್ವಾನ ನೋಡಿ ಹುಡುಗನಿಗೆ ಆಶ್ಚರ್ಯ ಮತ್ತು ಖುಷಿ. ಅದಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿಮತ್ತೆಗೆ, ಶ್ರದ್ಧೆಗೆ ಸಿಕ್ಕ ಗೌರವದಿಂದ ನೆಮ್ಮದಿ ಮತ್ತು ಆತ್ಮತೃಪ್ತಿ. ಕಲ್ಕತ್ತಾದ ಸಂಸ್ಥೆಯಿಂದ ಡಿಗ್ರಿ ಕೂಡ ಸಿಗದಿದ್ದರೆ ಮುಂದೇನು ಎಂಬ ಚಿಂತೆ ಗಾಢವಾಗಿ ಕಾಡಿತ್ತು. ಕುಹಕಿಗಳು, ವಿಘ್ನಸಂತೋಷಿಗಳು ಹೇಳಿದ್ದರು - 'ಉಕ್ಕಿನ ಕಾರ್ಖಾನೆಗಳಲ್ಲಿ ಲೆಕ್ಕ ಬರೆಯುವ ಗುಮಾಸ್ತನ ಕೆಲಸ ಖಾಲಿ ಇವೆ. ನಿನ್ನ BSc ಡಿಗ್ರಿ ಸಾಕು ಅವುಗಳಿಗೆ. ಅರ್ಜಿ ಹಾಕು. ಜೀವನೋಪಾಯಕ್ಕೆ ಒಂದು ಕೆಲಸ ಅಂತಾದೀತು!' ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು.

ಹುಡುಗ ಕಳಿಸಿದ್ದ ಪ್ರಬಂಧ ಪ್ರಕಟವೂ ಆಯಿತು. ಆ ಕ್ಲಿಷ್ಟಕರ ಸಮಸ್ಯೆಯನ್ನು ಬಗೆಹರಿಸಿದ ಮೊದಲಿಗ ಆ ಸಂಸ್ಥೆಯ ಮುಖ್ಯಸ್ಥರು ಅಲ್ಲ ಎನ್ನುವ ತಿದ್ದುಪಡಿ ಕೂಡ ಪ್ರಕಟವಾಯಿತು. ನಾಲ್ಕು ಶತಮಾನಗಳ ಹಿಂದಿನ ಗಣಿತದ ಪ್ರಮೇಯವನ್ನು ಮುಂದುವರೆಸಿ ಶುದ್ಧ ಗಣಿತದಿಂದಲೇ ಅದನ್ನು ಸೃಜನಾತ್ಮಕವಾಗಿ ಬಿಡಿಸಿದ್ದಕ್ಕೆ ಹುಡುಗನಿಗೆ ಅಭಿನಂದನೆಯನ್ನು ವಿಶ್ವದ ಅತಿ ದೊಡ್ಡ ದೊಡ್ಡ ಗಣಿತಜ್ಞರು ಮತ್ತು ಸಂಖ್ಯಾಶಾಸ್ತ್ರಿಗಳು ಸಲ್ಲಿಸಿದ್ದರು.

ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಮುಖಭಂಗ. ಆದರೂ ಆ ಹುಡುಗನ ಭವಿಷ್ಯಕ್ಕೆ ಕೊಕ್ಕೆ ಹಾಕಿ ಮುಗಿದಿರಲಿಲ್ಲ. ಕೊನೆಯ ಬ್ರಹ್ಮಾಸ್ತ್ರ ಬಿಟ್ಟರು. ಹಾರ್ವರ್ಡ್ ಯೂನಿವರ್ಸಿಟಿಗೆ ಅಧಿಕೃತವಾಗಿ ಒಂದು ಪತ್ರ ಬರೆದರು. ಅದರಲ್ಲೂ ತಮ್ಮ ಕಾರ್ಕೋಟಕ ವಿಷ ಕಾರಿಕೊಂಡಿದ್ದರು.

ಆ ಪತ್ರದ ಸಾರಾಂಶ ಇಷ್ಟು. 'ನಿಮ್ಮ ಹಾರ್ವರ್ಡ್ ವಿಶ್ವವಿದ್ಯಾಲಯ ನಮ್ಮ ಸಂಸ್ಥೆಯ ವಿದ್ಯಾರ್ಥಿಗೆ PhD ಪದವಿಗೆ ಆಹ್ವಾನ ನೀಡಿರುವ ವಿಷಯ ತಿಳಿದುಬಂದಿದೆ. ಈ ಸದರಿ ವಿದ್ಯಾರ್ಥಿ MSc ಪದವಿಯನ್ನು ಮುಗಿಸುವ ಬಗ್ಗೆ ಖಾತ್ರಿ ಇಲ್ಲ. ಅವನ ಶೈಕ್ಷಣಿಕ ಪ್ರಗತಿ ಸಮಾಧಾನಕರವಾಗಿಲ್ಲ. ನಿಗದಿತ ಸಮಯದಲ್ಲಿ MSc ಡಿಗ್ರಿ ಮುಗಿಸುತ್ತಾನೆ ಎನ್ನುವ ನಂಬಿಕೆಯ ಮೇಲೆ ನೀವು ಅವನಿಗೆ PhD ಪದವಿಗಾಗಿ ಪ್ರವೇಶದ ಆಹ್ವಾನ ಕೊಟ್ಟಿದ್ದರೆ ನೀವು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸುವದು ಉತ್ತಮ.'

ಇಂತಹ ಪತ್ರ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರವೇಶ ವಿಭಾಗದ ಡೀನ್ ಅವರ ಮೇಜಿಗೆ ಬಂದಿತು. ಆ ವಿದ್ಯಾರ್ಥಿಯ ಬಗ್ಗೆ ಹಾರ್ವರ್ಡ್ ತನ್ನದೇ ಆದ ರೀತಿಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿತ್ತು. ಅದೆಷ್ಟೋ ಪ್ರಬಂಧಗಳನ್ನು ಆತ ಆಗಲೇ ಪ್ರಕಟಿಸಿದ್ದ. ಅದೆಷ್ಟೋ ಪ್ರಬಂಧಗಳ ಮೇಲೆ ವಿಮರ್ಶೆಗಳನ್ನು ಬರೆದು ಪ್ರಕಟಿಸಿದ್ದ. ಅವೆಲ್ಲವನ್ನು ಗಣನೆಗೆ ತಗೆದುಕೊಡಿತ್ತು ಹಾರ್ವರ್ಡ್.

ಹಾರ್ವರ್ಡ್ ಚಿಕ್ಕದಾಗಿ ಒಂದು ಪತ್ರ ವಾಪಸ್ ಬರೆಯಿತು. 'ನಿಮ್ಮ ಸಂಸ್ಥೆ ಕೊಡಬಹುದಾದ ಅಥವಾ ಕೊಡದೇಇರಬಹುದಾದ ಡಿಗ್ರಿಯನ್ನು ನಾವು ಗಣನೆಗೆ ತೆಗೆದುಕೊಂಡಿಲ್ಲ. ವಿದ್ಯಾರ್ಥಿಯನ್ನು ಬೇರೆ ಬೇರೆ ಕೋನಗಳಿಂದ ನಮ್ಮದೇ ರೀತಿಯಲ್ಲಿ ಮೌಲ್ಯಮಾಪನ ಮಾಡಿ PhD ಆಹ್ವಾನ ಕಳಿಸಿದ್ದೇವೆ. ಹಾಗಾಗಿ ನಿಮ್ಮ ಸಂಸ್ಥೆಯ ಡಿಗ್ರಿಯ ಮೇಲೆ ನಮ್ಮ ಆಹ್ವಾನ ನಿಂತಿಲ್ಲ!'

In short, ಹಾರ್ವರ್ಡ್ ಪತ್ರದ ಧಾಟಿ ನೋಡಿದರೆ, ಅವರ ಸಂದೇಶ ಹೀಗಿತ್ತು - ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ ಅಥವಾ ಹೆಟ್ಟಿಕೊಳ್ಳಿ!

ಹೀಗೆ ಕಪಾಳಕ್ಕೆ ರಪ್ರಪಾ ಎಂದು ಬಾರಿಸಿದಂತೆ ಬರೆದಿದ್ದ ಹಾರ್ವರ್ಡ್ ಪತ್ರ ನೋಡಿ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ದಂಗಾದರು. ಭಗ ಭಗ ಉರಿದುಕೊಂಡರು. ಎಷ್ಟು ಬರ್ನಾಲ್ ಎಲ್ಲೆಲ್ಲಿ ಹಚ್ಚಿಕೊಂಡು ಉಫ್ ಉಫ್ ಅಂತ ಗಾಳಿಯಾಡಿಸಿಕೊಂಡರೋ ಅವರಿಗೇ ಗೊತ್ತು. ಇಲ್ಲದ ಕೆತ್ತೆಬಜೆ ಮಾಡಲು ಹೋದವರಿಗೆ ಬರೋಬ್ಬರಿ ಮಂಗಳಾರತಿ ಆಗಿತ್ತು.

ಹಾರ್ವರ್ಡ್ ಮಂಗಳಾರತಿ ಮಾಡಿತು. ಆದರೆ ಪೂಜೆಯ ಪ್ರಸಾದವನ್ನು ಇವರೇ ಕೊಟ್ಟುಕೊಳ್ಳಬೇಕಾಯಿತು. ಇವರು ಡಿಗ್ರಿ ಕೊಡಲಿ ಬಿಡಲಿ ಹಾರ್ವರ್ಡ್ ಅಂತೂ ಪ್ರವೇಶ ಕೊಟ್ಟುಬಿಟ್ಟಿದೆ. ಹುಡುಗ ಹಾರ್ವರ್ಡ್ ಯೂನಿವರ್ಸಿಟಿಯನ್ನು ಹೋಗಿ ಸೇರಿಕೊಳ್ಳುತ್ತಾನೆ. ಹಾರ್ವರ್ಡ್ ಸೇರಿಕೊಳ್ಳುವ ಬುದ್ಧಿಮತ್ತೆ ಇರುವ ಹುಡುಗ ಕಲ್ಕತ್ತಾದ ಸಂಸ್ಥೆಯಲ್ಲಿ ಫೇಲಾದವ ಅಂದರೆ ಯಾರೂ ನಂಬುವದಿಲ್ಲ. ಇಂತಹ ಬುದ್ಧಿವಂತನನ್ನು ಫೇಲ್ ಮಾಡಿದ್ದಾರೆ ಅಂದ ಮೇಲೆ ಆ ಸಂಸ್ಥೆಯ ಬಗ್ಗೆಯೇ ಸಂಶಯ ವ್ಯಕ್ತಪಡಿಸುತ್ತಾರೆ. ಹಾಗಾಗಿಬಿಟ್ಟರೆ ಕಲ್ಕತ್ತಾದ ಸಂಸ್ಥೆಯ ಹೆಸರು ಹಾಳಾಗುತ್ತದೆ. ಹೀಗಾಗಿ ಹುಡುಗನನ್ನು ನಪಾಸ್ ಮಾಡಿದರೆ ತಮ್ಮ ಸಂಸ್ಥೆಯ ಪ್ರತಿಷ್ಠೆಗೇ ಕುತ್ತು ಬರುತ್ತದೆ. ಒಟ್ಟಿನಲ್ಲಿ ಅವರ ಬ್ರಹ್ಮಾಸ್ತ್ರ ಅವರಿಗೇ ಬೂಮ್ ರಾಂಗ್ ಆಗಿ ತಿರುಗಿ ಬಂದು ಬಡಿದಿತ್ತು! ಕಪಾಳಕ್ಕೆ ರಪ್ ಅಂತ ಅಪ್ಪಳಿಸಿತ್ತು!

ಮುಂದಾಲೋಚನೆ ಮಾಡಿದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ಒಮ್ಮೆಲೇ ಪ್ಲೇಟ್ ಬದಲಾಯಿಸಿದರು. ಎಲ್ಲ ಶಿಕ್ಷಕರನ್ನು ಕರೆದರು. ತಮ್ಮ ಹಿಂದಿನ ಅಲಿಖಿತ ಆಜ್ಞೆಗಳನ್ನು ಹಿಂದೆ ತೆಗೆದುಕೊಂಡರು. ಆ ಹುಡುಗನಿಗೆ ಪರೀಕ್ಷೆಯಲ್ಲಿ ಸರಿಯಾಗಿ ಮಾರ್ಕ್ ಹಾಕುವಂತೆ ಹೇಳಿ ಮುಖ ಮುಚ್ಚಿಕೊಂಡು ಎದ್ದು ಹೋದರು. ತಮ್ಮದೇ ಅಸ್ತ್ರ ತಮಗೇ ರಿವರ್ಸ್ ಹೊಡೆದಿತ್ತು. ಎಲ್ಲರ ದೃಷ್ಟಿಯಲ್ಲಿ ಅಷ್ಟು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಆದರೆ ವಿಷಸರ್ಪ. ಪಾಪದ ಹುಡುಗನ ಮೇಲೆ, ಅವನ ತಂದೆ ಮೇಲೆ ತಮಗಿದ್ದ ಅಹಂನ ಕಾರಣದಿಂದ, ದ್ವೇಷ ಸಾಧಿಸಲು ಹೋಗಿ ವಿಧಿಯಿಂದ ತಾರಾಮಾರಾ  ಬಾರಿಸಿಕೊಂಡಿದ್ದರು. ಬರೋಬ್ಬರಿಯಾಯಿತು.

ಮೊದಲು ಹುಡುಗನನ್ನು ಫೇಲ್ ಮಾಡುವ ಆತುರವಾದರೆ ಈಗ ಹೇಗಾದರೂ ಮಾಡಿ ಪಾಸ್ ಮಾಡಿ ಸಾಗಹಾಕುವ ಆತುರ. ಫೇಲ್ ಆಗಿಬಿಟ್ಟ ಅಂದರೆ ಸಂಸ್ಥೆಯ ಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ. ಹಿಂದೆ ಬೇಕಂತಲೇ ಕಮ್ಮಿ ಮಾರ್ಕ್ ಹಾಕಿದ್ದ ಪರೀಕ್ಷೆಗಳನ್ನು ಮತ್ತೊಮ್ಮೆ ಇವನೊಬ್ಬನಿಗಾಗಿಯೇ ಪ್ರತ್ಯೇಕವಾಗಿ ಮಾಡಲಾಯಿತು. ಒಳ್ಳೊಳ್ಳೆ ಅಂಕಗಳನ್ನು ನೀಡಲಾಯಿತು. ಹೊಡೀರಿ ಹಲಗಿ!

ಅಂದು ಗುರುವಿಗೇ ತಿರುಮಂತ್ರ ಹಾಕಿದ್ದ ಆ ವಿದ್ಯಾರ್ಥಿ ಮತ್ಯಾರೂ ಅಲ್ಲ. ಅವರೇ ಇಂದಿನ ಖತರ್ನಾಕ್ ರಾಜಕಾರಣಿ - ಸುಬ್ರಮಣಿಯನ್ ಸ್ವಾಮಿ. ತಿರುಮಂತ್ರ ಹಾಕಿಸಿಕೊಂಡಿದ್ದ ಗುರುಗಳೂ  ದೊಡ್ಡ ಮನುಷ್ಯರೇ. ಅವರು ಯಾರೆಂದರೆ ದೊಡ್ಡ ಸಂಖ್ಯಾಶಾಸ್ತ್ರಜ್ಞ ಪ್ರಸನ್ನ ಚಂದ್ರ ಮಹಾಲನೋಬಿಸ್. ದೊಡ್ಡ ಮಿದುಳು ಇತ್ತು. ಏನುಪಯೋಗ? ಹೃದಯ ಸಂಕುಚಿತವಾಗಿತ್ತು. ಎಲ್ಲವನ್ನೂ ಮೀರಿದ ಅಹಂಕಾರ ಬೇರೆ.

ಇಪ್ಪತ್ತೂ ಚಿಲ್ಲರೆ ವಯಸ್ಸಿನ ವಿದ್ಯಾರ್ಥಿ ಸುಬ್ರಮಣಿಯನ್ ಸ್ವಾಮಿ ಹಾರ್ವರ್ಡ್ ಯೂನಿವರ್ಸಿಟಿ ಸೇರಿಕೊಂಡರು. ಅಲ್ಲೂ ದಾಖಲೆಗಳ ಮೇಲೆ ದಾಖಲೆ ಮಾಡಿದರು. ಅರ್ಥಶಾಸ್ತ್ರದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ PhD ಗಳಿಸಿದ ದಾಖಲೆ ಇನ್ನೂ ಸ್ವಾಮಿಯವರ ಹೆಸರಲ್ಲೇ ಇದೆ. ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಂದಿಯೊಂದಿಗೆ ಅನೇಕ ಪ್ರೌಢ ಪ್ರಬಂಧಗಳನ್ನು ಪ್ರಕಟಿಸಿದರು. ದೇಶಗಳ GDP ಅಳೆಯುವ ಸೂತ್ರವನ್ನು ಸ್ವಾಮಿಯವರ ಮತ್ತು ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಸ್ಯಾಮ್ಯುಯೆಲ್ಸೆನ್ ಹೆಸರಿಂದ ಕರೆಯಲಾಗುತ್ತದೆ.

ಈ ಘಟನೆಯ ತಮಾಷೆಯ ಕ್ಲೈಮಾಕ್ಸ್ ಅಂದರೆ.... ಕೆಲ ವರ್ಷಗಳ ನಂತರ ಇದೇ ಸಣ್ಣ ಮನಸ್ಸಿನ ದೊಡ್ಡ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್ ಹಾರ್ವರ್ಡ್ ಯೂನಿವರ್ಸಿಟಿಗೆ ಭೇಟಿ ಕೊಟ್ಟಿದ್ದರು. ಎಲ್ಲರೂ ಅವರ ಮುಂದೆ ಸುಬ್ರಮಣಿಯನ್ ಸ್ವಾಮಿಗಳ ಪ್ರಶಂಸೆ ಮಾಡಿದರು. ಸ್ವಾಮಿ ಆಗಲೇ ಹಾರ್ವರ್ಡ್ ಮತ್ತು ಪಕ್ಕದ MIT ಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಹಾಗಾಗಿ ಅಲ್ಲಿನ ಜನ ತೆರೆದ ಮನಸ್ಸಿನಿಂದ ಭಾರತದಿಂದ ಬಂದ ಅತಿಥಿಯ ಮುಂದೆ ಸ್ವಾಮಿಗಳ ಪ್ರಶಂಸೆ ಮಾಡಿದ್ದರು. ಅವರಿಗೇನು ಗೊತ್ತು ಈ ಗುರು ಹೇಗೆ ತಮ್ಮ ಶಿಷ್ಯನಿಗೆ ಕೊಕ್ಕೆ ಹಾಕಿದ್ದರು ಮತ್ತು ಶಿಷ್ಯ ಹೇಗೆ ಗುರುವಿಗೇ ತಿರುಮಂತ್ರ ಹಾಕಿದ್ದ ಎಂತೆಲ್ಲ.

ತಮ್ಮ ಒಂದು ಕಾಲದ ಶಿಷ್ಯನ ಪ್ರಶಂಸೆ ಕೇಳಿದ ಮಹಾಲನೋಬಿಸ್ ಒಳೊಳಗೇ ಉರಿದುಕೊಂಡಿರಬೇಕು. ಆದರೆ ಮೇಲಿಂದ ಮಾತ್ರ ದೊಡ್ಡದಾಗಿ ಗಫಾ ಹೊಡೆದರು. ಏನೆಂದುಬಿಟ್ಟರು ಗೊತ್ತೇ? 'ಸುಬ್ರಮಣ್ಯ ಸ್ವಾಮಿ ಅಂದರೆ ಯಾರ ಶಿಷ್ಯ ಅಂದುಕೊಂಡಿದ್ದೀರಿ? ನನ್ನ ಶಿಷ್ಯ ಕಣ್ರೀ ಅವನು. ನನ್ನ ಶಿಷ್ಯ. ನನ್ನ ಶಿಷ್ಯ ಅಂದ ಮೇಲೆ ಇಷ್ಟು ಮೇಧಾವಿಯಾಗಿರಲೇಬೇಕು ತಾನೇ!? ಅದರಲ್ಲಿ ಆಶ್ಚರ್ಯವೇನಿದೆ!?'

ಇದನ್ನು ಕೇಳಿ, ಮಹಾಲನೋಬಿಸರ ಕೊಕ್ಕೆ ಕಾಮಗಾರಿ ಬಗ್ಗೆ ಗೊತ್ತಿದ್ದವರು ಎಲ್ಲೆಲ್ಲಿಂದ ನಕ್ಕರೋ ದೇವರಿಗೇ ಗೊತ್ತು.

ಸುಬ್ರಮಣಿಯನ್ ಸ್ವಾಮಿ ಅಂದರೆ ಅಷ್ಟೇ ಮತ್ತೆ! deadly and lethal!

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.





Tuesday, April 17, 2018

ಮತ್ತೊಬ್ಬ ಪ್ಯಾಲೆಸ್ಟೈನಿ ಉಗ್ರನ ಗೇಮ್ ಬಾರಿಸಿತೇ ಇಸ್ರೇಲಿನ ಮೊಸ್ಸಾದ್!?

ಅರಬ್ ದೇಶಗಳ ಉಗ್ರಗಾಮಿಗಳ ವಲಯದಲ್ಲಿ ಒಂದೇ ಗುಸುಗುಸು. ಅದೇನೆಂದರೆ - ಇಸ್ರೇಲಿನ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮತ್ತೊಂದು ಗೇಮ್ ಬಾರಿಸಿದೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಮದಾನ್ ಶಾಲ್ಲಾ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದವ ಸೀದಾ ಕೋಮಾಗೆ ಹೋಗಿಬಿಟ್ಟಿದ್ದಾನೆ. ಇನ್ನೂ ಕೋಮಾದಲ್ಲೇ ಇದ್ದಾನೋ ಅಥವಾ ಅಲ್ಲಾನಿಗೆ ಪ್ಯಾರೇ ಆಗಿಬಿಟ್ಟಿದ್ದಾನೋ ಗೊತ್ತಿಲ್ಲ. ಹೇಗಾದರೂ ಮಾಡಿ ಮುಖ ಉಳಿಸಿಕೊಳ್ಳಬೇಕಾಗಿರುವದು ಅವನ ಸಂಘಟನೆಯಾದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಗೆ.  'ನಮ್ಮ ಬಾಸ್ ವಯೋಸಹಜ ಕಾರಣಗಳಿಂದ ಕೊಂಚ ಅಸ್ವಸ್ಥರಾಗಿದ್ದಾರೆ. ಅದು ಬಿಟ್ಟರೆ ಎಲ್ಲ ಓಕೆ,' ಎಂದು ಅದು ಪತ್ರಿಕಾ ಹೇಳಿಕೆಗಳಲ್ಲಿ ಪುಂಗುತ್ತಿದೆ. ಆದರೆ ಬೇಹುಗಾರಿಕೆ ವಲಯದಲ್ಲಿ ಮಾತ್ರ  - for all practical purposes he is finished. ಇದ್ದರೂ ಅಷ್ಟೇ ಬಿಟ್ಟರೂ ಅಷ್ಟೇ. ಕೋಮಾದಲ್ಲಿದ್ದರೆ ಸುಮ್ಮನೆ ಖರ್ಚು. ಮೊದಲೇ ಕಾಸಿಲ್ಲದ ಚಿಕ್ಕ ಸಂಘಟನೆ ಇಸ್ಲಾಮಿಕ್ ಜಿಹಾದ್.

ರಮದಾನ್ ಶಾಲ್ಲಾ 
ಈ ರಮದಾನ್ ಶಾಲ್ಲಾ ಯಾರು ಅಂತ ನೋಡುತ್ತಾ ಹೋದರೆ ಅದೇ ಒಂದು ಅಚ್ಚರಿಯ ಕತೆ. ಇವನು ಆಕ್ರಮಿತ ಪ್ಯಾಲೆಸ್ಟೈನ್ ದೇಶದಲ್ಲಿ ಜನಿಸಿದರೂ ಇಂಗ್ಲೆಂಡಿಗೆ ಹೋಗಿ ಅರ್ಥಶಾಸ್ತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ PhD ಮಾಡಿಕೊಂಡಿದ್ದ ಪ್ರತಿಭಾವಂತ. ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿದ್ದ ಮತ್ತೊಬ್ಬ ಅಂಡೆಪಿರ್ಕಿ ಪ್ಯಾಲೆಸ್ಟೈನ್ ವಲಸಿಗ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಎಂಬಾತ ಇವನನ್ನು ಅಮೇರಿಕಾಗೆ ಕರೆದುಕೊಂಡು ಬಂದ. ತಾನು ಪಾಠ ಮಾಡಿಕೊಂಡಿದ್ದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲೇ ಪಾರ್ಟ್-ಟೈಮ್ ಉಪನ್ಯಾಸಕನ ಕೆಲಸ ಹಚ್ಚಿಕೊಟ್ಟ.

ಪ್ಯಾಲೆಸ್ಟೈನ್ ಉಗ್ರರನ್ನು ಖುಲ್ಲಂ ಖುಲ್ಲಾ ಬೆಂಬಲಿಸುತ್ತಿದ್ದ ಸಾಮಿ ಅಲ್-ಅರಿಯನ್ ಮೇಲೆ ಅಮೇರಿಕಾದ ತನಿಖಾ ಸಂಸ್ಥೆ FBI  ಒಂದು ಖಡಕ್ ನಜರ್ ಮಡಗಿತ್ತು. ಯಾವಾಗ ಈ ಸಾಮಿ ಅಲ್-ಅರಿಯನ್ ಇಲ್ಲಿನ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಸಂಗ್ರಹಿಸುತ್ತಿದ್ದ ದೇಣಿಗೆ ಸೀದಾ ಮಾನವಬಾಂಬುಗಳನ್ನು ತಯಾರು ಮಾಡಿ, ದೂರದ ಇಸ್ರೇಲಿನಲ್ಲಿ ಸ್ಫೋಟಗಳಿಗೆ ಕಾರಣವಾಗಿ, ನೂರಾರು ನಿಷ್ಪಾಪಿ ಇಸ್ರೇಲಿಗಳ ಪ್ರಾಣ ತೆಗೆಯುತ್ತಿದೆ ಅಂತಾದಾಗ ಅಮೇರಿಕಾ ಅಲ್-ಅರಿಯನ್ ಎಂಬ ಅಂಡೆಪಿರ್ಕಿ ಪ್ರೊಫೆಸರನ ಅಂಡಿನ ಮೇಲೆ ಒದ್ದು ಗಡಿಪಾರು ಮಾಡಿತು. ಹಾಗೇ ಸುಮ್ಮನೆ ಹೋದಾನೆಯೇ ಪ್ರೊಫೆಸರ್? ಅವನೂ ಸಕತ್ ಕಾನೂನು ಕಾಳಗ ಮಾಡಿದ. ಮೊದಲಿನ ಕೆಲ ಸುತ್ತುಗಳಲ್ಲಿ FBI  ಗೇ ನೀರು ಕುಡಿಸಿದ. ತನ್ನ ಪರವಾಗಿ ತೀರ್ಪುಗಳು ಬಂದಾಗ 'ಹೆಂಗೆ??!!' ಎಂಬಂತೆ ಗರ್ವದಿಂದ ಗಡ್ಡ ನೀವಿಕೊಂಡಿದ್ದ.

೨೦೦೧ ರಲ್ಲಿ ಬಿಲ್ ಕ್ಲಿಂಟನ್  ಸಾಹೇಬರು ಹೋಗಿ ಜಾರ್ಜ್ ಬುಷ್ ಸಾಹೇಬರು ಬಂದು ಕುಂತರು ನೋಡಿ. ಗಾಳಿ ಬೇರೆ ದಿಕ್ಕಿನಲ್ಲಿ ಬೀಸತೊಡಗಿತು. ಮೇಲಿಂದ ೯/೧೧ ದುರಂತ ಕೂಡ ಆಗಿಹೋಯಿತು. ಆವಾಗ ಇಂತಹ ಬುದ್ಧಿಜೀವಿ ಪ್ರೊಫೆಸರ್ ಮುಖವಾಡ ಧರಿಸಿ ಉಗ್ರರನ್ನು ಬೆಂಬಲಿಸುತ್ತಿದ್ದ ಮಂದಿಯ ಮೇಲಿನ ಮೃದು ಧೋರಣೆ ಬದಲಾಯಿತು. ಅಂತೂ ಸಾಮಿ ಅಲ್-ಅರಿಯನ್ನನ್ನು ಯಾವುದೋ ಕೊಲ್ಲಿ ದೇಶಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿಗೆ ಒಂದು ಪೀಡೆ ತೊಲಗಿತು.

ಅವನು ಹೋದರೇನಾಯಿತು ಆದರೆ ಇವನಿದ್ದನಲ್ಲ ಶಿಷ್ಯ - ರಮದಾನ್ ಶಾಲ್ಲಾ. ಬಹುಬೇಗನೆ ತಯಾರಾಗಿಬಿಟ್ಟಿದ್ದ. ಗುರುವಿಗಿಂತ ಜೋರಾಗಿ ದೇಣಿಗೆ ಸಂಗ್ರಹ ಮಾಡಿ ಮಾಡಿ ದೂರದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ ಫಾತಿ ಶಕಾಕಿ ಎಂಬ ದುರುಳನಿಗೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ನೀಟಾಗಿ ಬ್ಯಾಂಕ್ ವೈರ್ ಮಾಡುತ್ತಿದ್ದ. ಕಲಿತಿದ್ದ ಮತ್ತು ಕಲಿಸುತ್ತಿದ್ದ ಬ್ಯಾಂಕಿಂಗ್ ವಿದ್ಯೆ ಅಲ್ಲಿಗೆ ಸಾರ್ಥಕವಾಯಿತು.

ಆಗಲೇ ಸಾಕಷ್ಟು ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಗಳು ಇದ್ದವು. ಪ್ರತ್ಯೇಕವಾಗಿ ತನ್ನದೂ ಒಂದು ಇರಲಿ ಅಂತ ಫಾತಿ ಶಾಕಾಕಿ ಕೂಡ ಹೊಸ ಸಂಘಟನೆ ಶುರು ಮಾಡಿದ್ದ. ಎಲ್ಲರಿಗೂ ಕೈಬಿಚ್ಚಿ ಕಾಸು ಕೊಡುತ್ತಿದ್ದ ಲಿಬಿಯಾದ ಸರ್ವಾಧಿಕಾರಿ ಮೊಹಮದ್ ಗಡಾಫಿಯ ಉತ್ತುಂಗದ ದಿನಗಳು ಅವು. ಅವನ ಅಬ್ಬರ ಜೋರಾಗಿತ್ತು. ಅದರಲ್ಲೂ ೧೯೯೧ ರ ಗಲ್ಫ್ ಯುದ್ಧದಲ್ಲಿ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಮುದಿಯೆತ್ತಿನಂತಾಗಿ ಹೋದ ಮೇಲಂತೂ ಇಡೀ ಕೊಲ್ಲಿ ಪ್ರದೇಶಕ್ಕೆ ಗಡಾಫಿಯೇ ದಾದಾ! ಅವನದೇ ಫುಲ್ ಹವಾ! ಫುಲ್ ದಾದಾಗಿರಿ.

ಫಾತಿ ಶಾಕಾಕಿ 
ಹೀಗಿರುವಾಗ ಫಾತಿ ಶಕಾಕಿ ಎಂಬ ಗಾಜಾ ಪಟ್ಟಿಯ ಗಿರಾಕಿ ಬಂದು, 'ಸಾರ್, ಇಸ್ರೇಲ್ ವಿರುದ್ಧ ಸಂಗ್ರಾಮ ಶುರುಮಾಡುತ್ತೇನೆ. ಹೊಸ ಸಂಘಟನೆ ಆರಂಭಿಸುತ್ತೇನೆ. ಕೊಂಚ ಫಂಡಿಂಗ್ ಕೊಡಿ' ಎಂದು ಸಲಾಂ ಮಾಡಿದರೆ ಗಡಾಫಿ ಇಲ್ಲ ಅಂದಾನೆಯೇ? ಚಾನ್ಸೇ ಇಲ್ಲ. ಮತ್ತೆ ಗಡಾಫಿಗೆ ಹಳೆ ಉಗ್ರರಾಗಿದ್ದ ಯಾಸೀರ್ ಅರಾಫತ್, ಅಬು ನಿದಾಲ್ ಮುಂತಾದವರ ಮೇಲೆ ಒಂದು ತರಹದ ಭ್ರಮನಿರಸನವಾಗಿತ್ತು. ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಮುಂತಾದವರ ಪ್ರಭಾವದಲ್ಲಿ  ಬಂದಿದ್ದ ಅರಾಫತ್ ಉಗ್ರವಾದವನ್ನು ಕಮ್ಮಿ ಮಾಡಿದ್ದರು. ಶಾಂತಿ ವಾಂತಿ ಅಂತ ಏನೇನೋ ಬಡಬಡಿಸುತ್ತಿದ್ದರು. ಕರೆದಲ್ಲಿ ಹೋಗಿ ಇಸ್ರೇಲ್ ಜೊತೆ ಮಾತುಕತೆಗೆ ಕೂಡುತ್ತಿದ್ದರು. ಕೂತಲ್ಲೇ ತೂಕಡಿಸುತ್ತಿದ್ದರು. ನಂತರ ಎಲ್ಲವೂ ಸರಿಹೊಂದಿ ಪ್ಯಾಲೆಸ್ಟೈನ್ ಸಮಸ್ಯೆ once for all ಪರಿಹಾರವಾಗಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ರಚ್ಛೆ ಹಿಡಿದ ಮಗುವಿನಂತೆ ಏನೋ ಒಂದು ರಗಳೆ ತೆಗೆದು ಮಾತುಕತೆಯನ್ನು ಬರಕಾಸ್ತು ಮಾಡಿ ಎದ್ದು ಹೊರಟುಬಿಡುತ್ತಿದ್ದರು. ಅರಾಫತ್ ಅವರ unpredictable ವರ್ತನೆಯಿಂದ ಎಲ್ಲರಿಗೂ ಪೂರ್ತಿ frustration.

ಅರಾಫತ್ ಬಣದವರಿಗೆ ಪ್ಯಾಲೆಸ್ಟೈನ್ ಸಂಗ್ರಾಮ ರೊಕ್ಕ ಮಾಡಿಕೊಳ್ಳುವ ದಂಧೆಯಾಗಿ ಹೋಗಿತ್ತು. ಲೆಬನಾನಿನಲ್ಲಿ ಝೇಂಡಾ ಹೊಡೆದುಕೊಂಡು ಗೂಂಡಾಗಿರಿ ಮಾಡುತ್ತಾ ಕುಳಿತಿದ್ದರು ಅರಾಫತ್ ಮತ್ತು ಅವರ ಫತಾ ಸಂಘಟನೆ. ರೋಸಿಹೋದ ಇಸ್ರೇಲ್ ಅರಾಫತ್ ಅವರನ್ನು ಲೆಬನಾನಿಂದ ಒದ್ದು ಓಡಿಸಿತ್ತು. ಮತ್ತೊಮ್ಮೆ ನಿರಾಶ್ರಿತರಾದ ಅರಾಫತ್ ಬಣಕ್ಕೆ ಅಂತಾರಾಷ್ಟ್ರೀಯ ಸಮುದಾಯ ಆಫ್ರಿಕಾದ ಚಿಕ್ಕ ದೇಶ ಟ್ಯುನೀಸಿಯಾದ ರಾಜಧಾನಿ ಟ್ಯೂನಿಸ್ಸಿನಲ್ಲಿ ಒಂದು ರೆಸಾರ್ಟ್ ಮಾದರಿಯ ಶಿಬಿರ ಮಾಡಿಕೊಟ್ಟಿತ್ತು. ಅಲ್ಲಿಂದ ಅರಾಫತ್ ಸಾಹೇಬರ ರೊಕ್ಕ ಮಾಡುವ ನಾಮ್ಕೆವಾಸ್ತೆ ಸಂಗ್ರಾಮ ನಡೆಯುತ್ತಿತ್ತು. ಇಂತಹ ಲಂಪಟ ಸ್ವಾತಂತ್ರ್ಯ ಹೋರಾಟಗಾರನಿಗೆ ಮಿಲಿಯನ್ ಗಟ್ಟಲೆ ರೊಕ್ಕ ಕೊಟ್ಟು ಮಂಗ್ಯಾ ಆದೆನಲ್ಲ ಎನ್ನುವ ವಿಷಾದ ಗಡಾಫಿಗೆ. ಕೊಟ್ಟ ರೊಕ್ಕಕ್ಕೆ ಬರೋಬ್ಬರಿ ಪಟಾಕಿ ಹಾರಿದರೆ ಮಾತ್ರ ಗಡಾಫಿಗೆ ವಿಕೃತ ಸಂತೋಷ. ಒಂದಿಷ್ಟು ವಿಮಾನಗಳು ಆಕಾಶದಲ್ಲೇ ಸಿಡಿದುಹೋಗಬೇಕು. ಮತ್ತೊಂದಿಷ್ಟು ವಿಮಾನಗಳ ಅಪಹರಣವಾಗಿ, ಪಶ್ಚಿಮ ದೇಶಗಳು ಮಂಡಿಯೂರಿ, ಜೈಲಲ್ಲಿರುವ ಪ್ಯಾಲೆಸ್ಟೈನ್ ಉಗ್ರರನ್ನು ಬಿಡುಗಡೆ ಮಾಡಿ, ತಮ್ಮ ತಮ್ಮ ವಿಮಾನಗಳನ್ನು ಮತ್ತು ನಾಗರೀಕರನ್ನು ಬಚಾವ್ ಮಾಡಿಕೊಳ್ಳಬೇಕು. ಆಗ ಗಡಾಫಿ ಗಹಗಹಿಸಿ ರಕ್ಕಸ ನಗೆ ನಗುತ್ತಿದ್ದ. ಹಾಗಾದಾಗ ಮಾತ್ರ ಉಗ್ರರ ಮೇಲೆ ಸುರಿದ ರೊಕ್ಕಕ್ಕೆ ತಕ್ಕ ಪ್ರತಿಫಲ ಬಂತು ಅಂತ ಅವನ ಭಾವನೆ.

ಅರಾಫತ್ ಸಾಹೇಬರು ಶಾಂತಿಯ ಹಿಂದೆ ಹೋದರೆ ಮತ್ತೊಬ್ಬ ಹಳೆ ಕಿರಾತಕ ಅಬು ನಿದಾಲ್ ಫುಲ್ ಸೈಕೋ ಆಗಿಹೋಗಿದ್ದ. ಅವನ ANO ಸಂಘಟನೆಯನ್ನು ತುಂಬಾ ಡೀಪಾಗಿ penetrate ಮಾಡಿದ್ದ ಮೊಸ್ಸಾದ್ ಅವನ ಅನೇಕ ಹಿರಿತಲೆಗಳನ್ನು compromise ಮಾಡಿತ್ತು. ಅವರಿಗೆ ಮೊಸ್ಸಾದ್ ಹೇಳಿದಂತೆ ಕೇಳುವುದನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ಪರಿಸ್ಥಿತಿ ಕೊನೆಗೆ ಎಲ್ಲಿಗೆ ಬಂದುಮುಟ್ಟಿತು ಅಂದರೆ ಪೂರ್ತಿ ಮತಿಭ್ರಾಂತನಾದ ಅಬು ನಿದಾ ಪ್ಯಾಲೆಸ್ಟೈನ್ ಸಂಗ್ರಾಮ ಮಾಡುವುದು ದೂರವಿರಲಿ ತನ್ನದೇ ಬಣದ ಉಗ್ರಗಾಮಿಗಳನ್ನು wholesale ರೇಟಿನಲ್ಲಿ ಕೊಲ್ಲತೊಡಗಿದ. ಎಲ್ಲರ ಮೇಲೂ ಅವನಿಗೆ ಸಂಶಯ. ಎಲ್ಲಿಯಾದರೂ ಶತ್ರುವಾದ ಇಸ್ರೇಲಿ ಮೊಸ್ಸಾದ್ ಜೊತೆ ಹೊಂದಾಣಿಕೆ ಮಾಡಿಕೊಂಡ ಈ ಮುಂಡೇಮಕ್ಕಳು ತನ್ನ ಬುಡಕ್ಕೆ ಬಾಂಬಿಟ್ಟುಬಿಟ್ಟರೆ ಏನು ಗತಿ ಎಂದು ತನ್ನದೇ ಜನರನ್ನು ಸಿಕ್ಕಾಪಟ್ಟೆ ಕೊಂದುಬಿಟ್ಟ. ಕ್ರಮಬದ್ಧವಾಗಿ disinformation campaign ಮಾಡಿ, ಸುಳ್ಳು ಸುದ್ದಿ ಹರಿಬಿಟ್ಟು, ಅಬು ನಿದಾಲನನ್ನು ಸೈಕೋ ಮಂಗ್ಯಾ ಮಾಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಪೆಕಪೆಕಾ ಎಂದು ನಕ್ಕಿತು. ಕಮ್ಮಿ ಖರ್ಚಿನಲ್ಲಿ ಅವರ ಕೆಲಸವಾಗಿತ್ತು.

ಒಮ್ಮೆಯಂತೂ ಫಂಡ್ ಎತ್ತಲು ಗಡಾಫಿಯ ಲಿಬಿಯಾಕ್ಕೆ ಹೋಗಿದ್ದ ಅಬು ನಿದಾಲ್ ಖತರ್ನಾಕ್ ಕೆಲಸ ಮಾಡಿಬಿಟ್ಟ. ಅಲ್ಲಿ ಅವನ ಉಗ್ರಗಾಮಿಗಳ ಶಿಬಿರ ಇತ್ತು. ಗಡಾಫಿಯ ಸೇನೆಯ ಜನ ಅರಬ್ ಯುವಕರಿಗೆ ಉಗ್ರಗ್ರಾಮಿಗಳ ತರಬೇತಿ ಕೊಡುತ್ತಿದ್ದರು. ಅಷ್ಟೊತ್ತಿಗೆ ಅಬು ನಿದಾಲ್ ಪೂರ್ತಿ ಸಂಶಯಪಿಶಾಚಿಯಾಗಿ ತಲೆ ಹನ್ನೆರೆಡಾಣೆ ಮಾಡಿಕೊಂಡಿದ್ದ. ಅಲ್ಲಿನ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರೆಲ್ಲ ಮೊಸ್ಸಾದಿಗೆ, ಸಿಐಎಗೆ compromise ಆಗಿಬಿಟ್ಟಿದ್ದಾರೆ ಎಂದು ತಲೆಯಲ್ಲಿ ಬಂದುಬಿಟ್ಟಿತು. ತರಬೇತಿ ಪಡೆಯುತ್ತಿದ್ದ ಆ ಜನರಿಂದಲೇ ಅಲ್ಲೇ ಒಂದು ದೊಡ್ಡ ಸಾಮೂಹಿಕ ಗೋರಿ ತೋಡಿಸಿದ. ಗೋರಿ ತೋಡಿದವರು ಗೋರಿಯಲ್ಲಿ ಹೋಗಿ ನಿಂತರು. ನೂರಾರು ಜನ. ಅವರೆಲ್ಲರನ್ನೂ ಮಷೀನ್ ಗನ್ ಹಚ್ಚಿ ನುಣ್ಣಗೆ ಬೀಸಿದಂತೆ ರುಬ್ಬಿಬಿಟ್ಟ ಕಿರಾತಕ ಅಬು ನಿದಾಲ್. ಒಂದೇ ಕ್ಷಣದಲ್ಲಿ ನೂರಾರು ಜನ ಮಟಾಷ್! ಸಂತೃಪ್ತ ವಿಕೃತ ನಗೆ ಗಹಗಹಿಸಿ ನಕ್ಕ ಅಬು ನಿದಾಲ್ ಆ ಸಾಮೂಹಿಕ ಗೋರಿ ಮುಚ್ಚಿಸಿದವನೇ ಅದರ ಮೇಲೆ ಡೇರೆ ಹಾಕಿಸಿಕೊಂಡು ಬೋರಲಾಗಿ ಮಲಗಿಬಿಟ್ಟ. ನೂರಾರು ಜನ so-called ಗದ್ದಾರರನ್ನು ಕೊಂದ ಮೇಲೆ ಏನೋ ಒಂದು ತರಹದ ನೆಮ್ಮದಿ, ಶಾಂತಿ! ಅಪರೂಪಕ್ಕೆ ನಿದ್ದೆ ಸೊಗಸಾಗಿ ಬಂತು.

ಅಬು ನಿದಾಲನ ಈ ಯಬಡತನದ ಕಾರ್ನಾಮೆಯ ಬಗ್ಗೆ ಕೇಳಿದ ಗಡಾಫಿ ತಲೆ ತಲೆ ಚಚ್ಚಿಕೊಂಡ. ತನ್ನ ದೇಶದಲ್ಲಿ ಉಗ್ರಗಾಮಿ ಶಿಬಿರ ಮಾಡಿಕೊಟ್ಟ, ಸಾವಿರಾರು ಜನ ನಿರುದ್ಯೋಗಿ ಅರಬ್ ಯುವಕರನ್ನು ಹಿಡಿದು ತರಿಸಿಕೊಟ್ಟ, ಅವರಿಗೆ ತನ್ನದೇ ಸೈನ್ಯದ ಮೂಲಕ ಉಗ್ರಗಾಮಿ ತರಬೇತಿ ಕೊಡಿಸಿದ, ಹಲವಾರು ಮಿಲಿಯನ್ ಡಾಲರುಗಳ ಫಂಡಿಂಗ್ ಕೊಟ್ಟ. ಇಷ್ಟೆಲ್ಲಾ ಕೊಟ್ಟ ಮೇಲೂ ಈ ಮತಿಭ್ರಾಂತ, ಒಂದು ಕಾಲದ ಟಾಪ್ ಉಗ್ರಗಾಮಿ, ಅಬು ನಿದಾಲ್ ಅವರೆಲ್ಲರ ಮೇಲೆ ಸಂಶಯಪಟ್ಟು ಎಲ್ಲರನ್ನೂ ಮಷೀನ್ ಗನ್ ಹಚ್ಚಿ ಉಡಾಯಿಸಿ ಉದ್ದಕ್ಕೆ ಲಂಬಾ ಲಂಬಾ ಮಲಗಿಬಿಟ್ಟ. ಅಲ್ಲಿಗೆ ಅಬು ನಿದಾಲನನ್ನೂ ತನ್ನ ಫೇವರಿಟ್ ಉಗ್ರರ ಪಟ್ಟಿಯಿಂದ ತೆಗೆದುಹಾಕಿದ ಗಡಾಫಿ.

ಹೀಗೆ ಪ್ಯಾಲೆಸ್ಟೈನ್ ಉಗ್ರರ ಹಳೆ ತಲೆಗಳಿಂದ ಭ್ರಮನಿರಸನಕ್ಕೆ ಒಳಗಾಗಿದ್ದ ಗಡಾಫಿ ಹೊಸ ತಲೆಮಾರಿನ ಉಗ್ರರಾಗಿ ಕಾದುಕುಳಿತಿದ್ದ. ಆಗಲೇ ಫಾತಿ ಶಾಕಾಕಿ ಪ್ರತ್ಯಕ್ಷನಾಗಿ ಹೊಸ ಸಂಘಟನೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದಿನ ಪ್ರಪೋಸಲ್ ಇಟ್ಟಿದ್ದ. ಸಿಕ್ಕಾಪಟ್ಟೆ excite ಆದ ಗಡಾಫಿ ನೀಟಾಗಿ ಒಂದಿಷ್ಟು ಮಿಲಿಯನ್ ಡಾಲರ್ ಕಾಣಿಕೆ ಕೊಟ್ಟಿದ್ದ.

ಗಡಾಫಿಯ ಕಾಣಿಕೆ, ದೂರದ ಅಮೇರಿಕಾದಿಂದ ಇಬ್ಬರು ಪ್ರೊಫೆಸರ್ ಜನರಾದ ಸಾಮಿ ಅಲ್-ಅರಿಯನ್ ಮತ್ತು ರಮದಾನ್ ಶಾಲ್ಲಾ ಕಳಿಸಿಕೊಡುತ್ತಿದ್ದ ಕಾಣಿಕೆ ಸಾಕಷ್ಟಾಗಿತ್ತು. ಆ ಫಂಡ್ ಎತ್ತಿಕೊಂಡ ಫಾತಿ ಶಾಕಾಕಿ ಸೀದಾ ಹೋಗಿ ಗಾಜಾ ಪಟ್ಟಿಯಲ್ಲಿ ಕುಳಿತ. ಮೊದಲೇ ನರಕಸದೃಶ ಜಾಗ ಗಾಜಾ ಪಟ್ಟಿ. ಜನರಿಗೆ ಊಟಕ್ಕೆ ಗತಿಯಿಲ್ಲ. ಗಳಿಸಿದ ಅಷ್ಟೂ ರೊಕ್ಕವನ್ನು ಪ್ಯಾಲೆಸ್ಟೈನ್ ಸ್ವಾತಂತ್ರ ಸಂಗ್ರಾಮದ ಹೆಸರಿನಲ್ಲಿ ಬೇರೆ ಬೇರೆ ದಾದಾಗಳು ಕಿತ್ತುಕೊಳ್ಳುತಿದ್ದರು. ಇವರ ರೊಕ್ಕ ಕಿತ್ತುಕೊಂಡ 'ಓರಾಟಗಾರರು' ದುಂಡಗಾಗಿ ದುಬೈ, ಶಾರ್ಜಾ ಇತ್ಯಾದಿ ಕೊಲ್ಲಿ ದೇಶಗಳಲ್ಲಿ ವ್ಯಾಪಾರ ಅದು ಇದು ಮಾಡಿಕೊಂಡು ಹಾಯಾಗಿರುತ್ತಿದ್ದರು. ಅಲ್ಲಿಗೆ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಸಂಗ್ರಾಮ ಹಳ್ಳ ಹಿಡಿದಿತ್ತು. ಗಾಜಾ ಪಟ್ಟಿಯ ಜನ ಭ್ರಮನಿರಸನಗೊಂಡಿದ್ದರು. ಹೊಸ ನಾಯಕತ್ವಕ್ಕೆ ಹಾತೊರೆಯುತ್ತಿದ್ದರು. ಆಗ ಎಂಟ್ರಿ ಕೊಟ್ಟ ಫಾತಿ ಶಾಕಾಕಿ! ಕೈಯಲ್ಲಿ ಗಡಾಫಿ ಕೊಟ್ಟಿದ್ದ ರೊಕ್ಕದ ಥೈಲಿ! 'ಬನ್ನಿ, ಹೊಸ ಸ್ವಾತಂತ್ರ್ಯ ಸಂಗ್ರಾಮ ಶುರುಮಾಡೋಣ!' ಎಂದು ಛೋಡಿದ. ಅನಕ್ಷರಸ್ಥ ಮುಗ್ಧ ಜನ. ಅವರಿಗೆ ಧರ್ಮದ ಅಫೀಮು, ದ್ವೇಷದ ಅಫೀಮುಗಳನ್ನು ಬರೋಬ್ಬರಿ ಕೊಟ್ಟ ಫಾತಿ ಶಾಕಾಕಿ, ಮಾನವ ಬಾಂಬುಗಳ ತಯಾರಿಕೆಗೆ ಕುಳಿತುಬಿಟ್ಟ.

ಗಾಜಾ ಪಟ್ಟಿಯಲ್ಲೇನು ಅಬ್ಬೇಪಾರಿಗಳಿಗೆ ಕೊರತೆಯೇ? ಸತ್ತ ಮೇಲೆ ಮನೆ ಕಡೆ, ಉಳಿಯುವ ಕುಟುಂಬದ ಕಡೆ ಗಮನಿಸಿಕೊಂಡರೆ ಸಾಕು. ಬಾಕಿ ಏನೂ ಕೇಳುವದಿಲ್ಲ ಅವರು. ಸೊಂಟಕ್ಕೆ ಬಾಂಬಿನ ಬೆಲ್ಟ್ ಕಟ್ಟಿಕೊಂಡು, 'ಅಲ್ಲಾ ಹೋ ಅಕ್ಬರ್!' ಎಂದು ಕೂಗುತ್ತ ಇಸ್ರೇಲಿಗಳ ಗುಂಪಿನ ಮೇಲೆ ಬಿದ್ದು ಸ್ಪೋಟಿಸಿಕೊಂಡುಬಿಡುತ್ತಾರೆ. ಕಮ್ಮಿ ಕಮ್ಮಿ ೧೦-೧೫ ಇಸ್ರೇಲಿ ಯಹೂದಿಗಳು ಮಟಾಷ್. ಕೆಲವೇ ಕೆಲವು ನೂರು ಡಾಲರುಗಳನ್ನು ಖರ್ಚು ಮಾಡಿದರೆ ಸಾಕು. ದೊಡ್ಡ ಪ್ರಮಾಣದ ಧಮಾಕಾ ಆಗಿಹೋಗುತ್ತದೆ. ಜಿಹಾದಿನ ಕುರ್ಬಾನಿಯ ಬಳಿಕ ೭೨ ವರ್ಜಿನ್ ಕನ್ಯೆಯರ ಸುಖ ಹುಡುಕುತ್ತ ಬಾಂಬಿನ ಬೆಂಕಿಯ ಜ್ವಾಲೆಗಳಲ್ಲಿ ಕಳೆದುಹೋಗುವ ಉಗ್ರರ ಕುರುಹು ಕೂಡ ಸಿಗುವದಿಲ್ಲ.

ಹೊಸದಾಗಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸ್ಥಾಪಿಸಿದ ಫಾತಿ ಶಾಕಾಕಿ ಕೆಲವು spectacular ಅನ್ನಿಸುವಂತಹ ಸುಯಿಸೈಡ್ ಬಾಂಬಿಂಗ್ ಕಾರ್ಯಾಚರಣೆಗಳನ್ನು ಮಾಡಿಸಿದ. ಹಲವಾರು ಬಲಿ ತೆಗೆದುಕೊಂಡ. ಲಿಬಿಯಾದ ದುರುಳ ಗಡಾಫಿ 'ಮೊಗ್ಯಾಂಬೋ ಖುಷ್ ಹುವಾ !' ಮಾದರಿಯಲ್ಲಿ ತೊಡೆ ತಟ್ಟಿಕೊಂಡು ತಟ್ಟಿಕೊಂಡು ಸಂಭ್ರಮಿಸಿದ. ವಿಕೃತ ಮನಸ್ಸು ಅವನದು. ಕೆಲವೇ ವರ್ಷಗಳ ಹಿಂದೆ ಅವನ ಉಗ್ರಗಾಮಿ ಉಪಟಳಗಳಿಂದ ಸಾಕಾಗಿ ಹೋಗಿದ್ದ ಅಂದಿನ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಸಾಹೇಬರು ಅವನ ಅರಮನೆ ಮೇಲೆ ಬಾಂಬಿನ ಮಳೆಗರೆದು ಬಂದಿದ್ದರು. ಆ ಬಾಂಬ್ ದಾಳಿಯಲ್ಲಿ ಮಗನನ್ನು ಕಳೆದುಕೊಂಡರೂ ಗಡಾಫಿ ಅದೆಲ್ಲೋ ನೆಲಮಾಳಿಗೆಯ ಪಾಯಖಾನೆಯಲಲ್ಲಿ ಬಚ್ಚಿಟ್ಟುಕೊಂಡು ಬಚಾವಾಗಿದ್ದ.

'ಇದ್ಯಾವ ಹೊಸ ಪೀಡೆ ಗಾಜಾ ಪಟ್ಟಿಗೆ ಬಂದು ವಕ್ಕರಿಸಿಕೊಂಡಿದೆ?' ಎಂದು ತಲೆಕೆಡಿಸಿಕೊಂಡವರು ಇಸ್ರೇಲಿನ ಶಿನ್-ಬೆಟ್ ಅನ್ನುವ ಆಂತರಿಕ ರಕ್ಷಣಾಸಂಸ್ಥೆಯವರು. ಮೊಸ್ಸಾದ್ ಏನಿದ್ದರೂ ಬಾಹ್ಯ ಬೇಹುಗಾರಿಕೆ ಮತ್ತು ಕಪ್ಪು ಕಾರ್ಯಾಚರಣೆಗಳ ಉಸ್ತುವಾರಿ ಮಾತ್ರ. ಆಂತರಿಕ ವಿಷಯವೆಲ್ಲವನ್ನೂ ಶಿನ್-ಬೆಟ್ ಸಂಬಾಳಿಸುತ್ತದೆ.

ಗಾಜಾ ಪಟ್ಟಿಯ ತಮ್ಮ ಮಾಹಿತಿದಾರರನ್ನು activate ಮಾಡಿದ ಶಿನ್-ಬೆಟ್ ತನಿಖಾಧಿಕಾರಿಗಳಿಗೆ ಫಾತಿ ಶಾಕಾಕಿ ಬಗ್ಗೆ ಮಾಹಿತಿ ಹನಿಹನಿಯಾಗಿ ದೊರೆಯತೊಡಗಿತು. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಗೆ ಪರೋಕ್ಷವಾಗಿ ಅಥವಾ ನೇರವಾಗಿ ಸಂಬಂಧವಿರುವ ಜನರನ್ನು ಜೊತೆಯಲ್ಲಿ ಅವರ ಗೆಳತಿಯರನ್ನು, ಹೆಂಡತಿಯರನ್ನು ಜೆರುಸಲೇಮಿನ ನೆಲಮಾಳಿಗೆ ಕಾರಾಗೃಹಗಳಿಗೆ ಎತ್ತಾಕಿಕೊಂಡು ಬಂದರು ಶಿನ್ - ಬೆಟ್ ಅಧಿಕಾರಿಗಳು. ಶಿನ್-ಬೆಟ್ ಸಂಸ್ಥೆಯ ನುರಿತ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನ ತಮ್ಮದೇ ರೀತಿಯಲ್ಲಿ ಮಾತಾಡಿಸತೊಡಗಿದಾಗ ಮೊದಲು ಏನೂ ಗೊತ್ತಿಲ್ಲ ಸಾರ್! ಎಂದು ಮೊಂಡು ಹಿಡಿದವರು ನಂತರ ಗಿಣಿಗಳಂತೆ ಹಾಡಿದ್ದರು. ಇಸ್ರೇಲಿಗಳ ತರಹತರಹದ ಚಿತ್ರಹಿಂಸೆಗಳನ್ನು ಅನುಭವಿಸುವದು ದೂರದ ಮಾತು. ಅವುಗಳ ವರ್ಣನೆ ಕೇಳಿದರೂ ಚಡ್ಡಿ ಒದ್ದೆಯಾಗಿಬಿಡುತ್ತದೆ. ಹಾಗಿರುತ್ತವೆ ಅವರ ಬಾಯಿಬಿಡಿಸುವ ವಿಧಾನಗಳು.

ಹೀಗೆ ಜೆರುಸಲೇಮ್ ಜೈಲಿನ ಕಗ್ಗತ್ತಲ ನೆಲಮಾಳಿಗೆಯಲ್ಲಿ ಶಿನ್-ಬೆಟ್ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನರಿಂದ ನುಣ್ಣಗೆ ರುಬ್ಬಿಸಿಕೊಂಡಿದ್ದ ಗಾಜಾ ಪಟ್ಟಿಯ ಅರಬರು ಫಾತಿ ಶಾಕಾಕಿ ಬಗ್ಗೆ ತಮಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು. ಈ ಫಾತಿ ಶಾಕಾಕಿ ಆಸಾಮಿ ಲಿಬಿಯಾದ ಗಡಾಫಿ ಜೊತೆ ಮತ್ತು ಮತ್ತೊಬ್ಬ ಖದೀಮ ಸಿರಿಯಾದ ಹಫೀಜ್ ಅಲ್-ಅಸಾದ್ ಜೊತೆ ಜಕ್ಕಣಕ್ಕ ಶುರುಮಾಡಿಕೊಂಡಿದ್ದಾನೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಖಿಲಾಡಿಯಾಗಿದ್ದಾನೆ ಎಂದು ಗೊತ್ತಾದ ಕೂಡಲೇ ಶಿನ್-ಬೆಟ್ ಮತ್ತೂ ತಡ ಮಾಡಲಿಲ್ಲ. ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಜೊತೆ ವಿವರ ಹಂಚಿಕೊಂಡರು. ಮೊಸ್ಸಾದ್ ತನ್ನ ಇತರೆ ಸಂಪರ್ಕಗಳನ್ನು ಉಪಯೋಗಿಸಿಕೊಂಡು ಫಾತಿ ಶಾಕಾಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿತು. ಶಿನ್-ಬೆಟ್ ಸಂಗ್ರಹಿಸಿದ್ದ ಮಾಹಿತಿ, ಮೊಸ್ಸಾದ್ ಕಲೆಹಾಕಿದ್ದ ಮಾಹಿತಿ, ಸಿಐಎ ಮತ್ತಿತರ ಫ್ರೆಂಡ್ಲಿ ಬೇಹುಗಾರಿಕೆ ಸಂಸ್ಥೆಗಳು ಕೊಟ್ಟ ಮಾಹಿತಿಯೆಲ್ಲವನ್ನೂ ಕ್ರೋಢಿಕರಿಸಿದಾಗ ಫಾತಿ ಶಾಕಾಕಿ ಬಗ್ಗೆ ಒಂದು ಫುಲ್ ಪಿಕ್ಚರ್ ಬಂತು. ಚಿತ್ರಣ ತುಂಬಾ ಖರಾಬಾಗಿತ್ತು. ಇವನನ್ನು ಹೀಗೇ ಬಿಟ್ಟರೆ ಮುಂದೆ ಕೆಲವೇ ವರ್ಷಗಳಲ್ಲಿ ಇವನು ಇಸ್ರೇಲಿಗೆ ದೊಡ್ಡ ತಲೆನೋವಾಗುತ್ತಾನೆ ಎನ್ನುವದರಲ್ಲಿ ಇಸ್ರೇಲಿನ ಹಿರಿತಲೆಗಳಿಗೆ ಯಾವುದೇ ಸಂದೇಹವಿರಲಿಲ್ಲ. ಇಂಥವನ್ನೆಲ್ಲ ಮೊಳಕೆಯಲ್ಲಿರುವಾಗಲೇ ಚಿವುಟಿಹಾಕಬೇಕು. ಅಲ್ಲಿಗೆ ಫಾತಿ ಶಾಕಾಕಿಯ ಮರಣಶಾಸನಕ್ಕೆ ಇಸ್ರೇಲಿ ಕ್ಯಾಬಿನೆಟ್ಟಿನ ಮುದ್ರೆ ಬಿದ್ದಿತ್ತು. ಇನ್ನು ಫಾತಿ ಶಾಕಾಕಿಯನ್ನು ಮೇಲೆ ಅಲ್ಲಾಹುವಿನ ಬಳಿಗೆ ಕಳಿಸುವ ಸಮಾರಂಭಕ್ಕೆ ಮುಹೂರ್ತವಿಡುವದು ಬಾಕಿ ಇತ್ತು.

ಎಂದಿನಂತೆ ಇಸ್ರೇಲಿ ಪ್ರಧಾನಿ ಸಹಿ ಹಾಕಿದ ಫಾತಿ ಶಾಕಾಕಿಯ ಮರಣಶಾಸನ ಅಂದಿನ ಮೊಸ್ಸಾದಿನ ಅರಿಭಯಂಕರ ಡೈರೆಕ್ಟರ್ ಶಾಬ್ಟೈ ಶಾವಿತ್ ಅವರ ಟೇಬಲ್ ಮೇಲೆ ಬಂದು ಬಿತ್ತು. ಅವರಿಗೆ ಅದೊಂದು ಔಪಚಾರಿಕತೆ (formality) ಅಷ್ಟೇ. ಅವರ ಏಳು ವರ್ಷದ ಅವಧಿಯಲ್ಲಿ ಅದೆಷ್ಟು ಮಂದಿ ಅರಬ್ ಉಗ್ರರಿಗೆ ಮೋಕ್ಷ ತೋರಿಸಿದ್ದರೋ ಅವರು. ಅತಿಫ್ ಬೀಸೋ ಎಂಬ ದುರುಳನನ್ನು ಪ್ಯಾರಿಸ್ ನಗರದಲ್ಲಿ ಮೊಸ್ಸಾದ್ ಗುಂಡಿಕ್ಕಿ ಕೊಂದಿತ್ತು. ಅತಿ ಮುಖ್ಯ ಉಗ್ರನಾಗಿದ್ದ ಅವನಿಗೆ ಮುಹೂರ್ತವಿಡಲು ಖುದ್ದಾಗಿ ಡೈರೆಕ್ಟರ್ ಶಾವಿತ್ ಅವರೇ ಬಾಕಿ ಹಂತಕರಂತೆ ಮಾರುವೇಷದಲ್ಲಿ ಪ್ಯಾರಿಸ್ಸಿಗೆ ಹೋಗಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪ್ಯಾರಿಸ್ ನಗರದ ಹೃದಯಭಾಗದಲ್ಲಿ ಒಂದು ಸುಳಿವೂ ಸಿಗದಂತೆ ಅತಿಫ್ ಬೀಸೋನ ಗೇಮ್ ಬಾರಿಸಿತ್ತು ಮೊಸ್ಸಾದ್. ಫ್ರೆಂಚ್ ಸರ್ಕಾರಕ್ಕೆ ಅವನ ಹೆಣ ಎತ್ತುವದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ.

ಎಂದಿನಂತೆ ಫಾತಿ ಶಾಕಾಕಿಗೆ ಒಂದು ಗತಿ ಕಾಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದು ಮೊಸ್ಸಾದಿನ ಅತಿ ಖತರ್ನಾಕ್ ಹಂತಕರ ಕಿಡೋನ್ ತಂಡ. ಅವರಿಗೆ ಬೇಕಾಗುವ ಎಲ್ಲ ಮಟ್ಟದ ಸಹಕಾರ ಬೇರೆಲ್ಲ ಸಂಸ್ಥೆಗಳಿಂದ ಸಿಗುತ್ತಿತ್ತು.

ಫಾತಿ ಶಾಕಾಕಿಗೆ ಮೊಸ್ಸಾದ್ ಮುಹೂರ್ತವಿಟ್ಟಿದ್ದು ಮಾಲ್ಟಾ ಎಂಬ ಚಿಕ್ಕ ದ್ವೀಪದಲ್ಲಿ. ಇಟಲಿ ದೇಶದ ಕೆಳಗೇ ಇದೆ ಸುಂದರ ಮಾಲ್ಟಾ ದ್ವೀಪ. ಎದುರಿನ ಕಡಲನ್ನು ದಾಟಿದರೆ ಸಿಗುತ್ತದೆ ಲಿಬಿಯಾ ದೇಶದ ಟ್ರಿಪೋಲಿ ಶಹರ. ಟ್ರಿಪೋಲಿ ಮತ್ತು ಮಾಲ್ಟಾ ನಡುವೆ ಫೆರ್ರಿ (ಹಡಗು) ಸಂಚಾರ ವ್ಯಾಪಕವಾಗಿದೆ. ಮಾಲ್ಟಾ ಒಂದು ಕೇಂದ್ರ ಹಬ್ ಇದ್ದಂತೆ. ಮಾಲ್ಟಾದಿಂದ ಎಲ್ಲಿ ಬೇಕಾದರೂ ಹೋಗಬಹುದು.

ಗಾಜಾ ಪಟ್ಟಿಯಲ್ಲಿ ಹೀಟ್ ಕೊಂಚ ಹೆಚ್ಚಾದ ಕಾರಣ ಫಾತಿ ಶಾಕಾಕಿ ಸಿರಿಯಾದ ಡಮಾಸ್ಕಸ್ಸಿಗೆ ಹಾರಿದ್ದ. ಆಗ ಅಲ್ಲಿ ಹಫೀಜ್ ಅಲ್-ಅಸಾದ್ ಇದ್ದ. ಈಗಿರುವ ಬಶೀರ್ ಅಲ್-ಅಸ್ಸಾದನ ಪಿತಾಜಿ. ಸಿರಿಯಾ ಅಂದರೆ ಸಮಸ್ತ ಅರಬ್ ಉಗ್ರರಿಗೆ ತೋಟದಪ್ಪನ ಛತ್ರ ಇದ್ದಂತೆ. ಸಿರಿಯಾದ ಅಸಾದ್ ಬಳಿ ಅವರಿಗೆ ಲಿಬಿಯಾದ ಗಡಾಫಿ, ಇರಾಕಿನ ಸದ್ದಾಮ್ ಹುಸೇನ್ ಕೊಟ್ಟಷ್ಟು ಕಾಸು ಕೊಡುವ ಹೈಸಿಯತ್ತು ಇರಲಿಲ್ಲ. ಆದರೆ ಯಾವುದೇ ಉಗ್ರರಿಗೂ ಜಾಗವಿಲ್ಲ ಎಂದು ಅವರು ಬಾಗಿಲು ಹಾಕಿರಲಿಲ್ಲ. ಬಂದ ಉಗ್ರರೆಲ್ಲರಿಗೂ ಊಟ, ವಸತಿ, ಸೂಳೆಯರನ್ನು ಒದಗಿಸುವಷ್ಟು ಕಾಸು ಮತ್ತು ಒಳ್ಳೆ ಬುದ್ಧಿಯನ್ನು ದೇವರು ಹಫೀಜ್ ಅಲ್-ಅಸಾದನಿಗೆ ಕೊಟ್ಟಿದ್ದ. ಹಾಗಾಗಿ ಅಬು ಮೂಸಾನಂತಹ ರಿಟೈರ್ಡ್ ಉಗ್ರಗಾಮಿಗಳಿಂದ ಹಿಡಿದು ಫಾತಿ ಶಕಾಕಿಯಂತಹ ಹೊಸಬರೂ ಸಹ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಗೆ ಹೋಗಿ, ಅಸಾದ್ ನ ಛತ್ರಛಾಯೆಯಲ್ಲಿ ಆತನ ತೋಟದಪ್ಪನ ಛತ್ರದಲ್ಲಿ ಝೇಂಡಾ  ಹೊಡೆದು ಕೂತಿದ್ದರು. ಸಿರಿಯಾದ  ಮುಖ್ಬಾರಾತ್ ಎಂಬ ಪರಮ ಕ್ರೂರಿ ರಕ್ಷಣಾ ಸಂಸ್ಥೆ ಅಲ್ಲಿ ನೆಲೆಸಿದ್ದ ಅರಬ್ ಉಗ್ರರಿಗೆ ತಕ್ಕ ಮಟ್ಟಿನ ರಕ್ಷಣೆ ಕೊಡುತ್ತಿತ್ತು. ಇಲ್ಲವಾದರೆ ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಬಿಟ್ಟರೆ ಎನ್ನುವ ಆತಂಕ. ಇಷ್ಟೆಲ್ಲಾ ಇದ್ದರೂ ಹಫೀಜ್ ಅಲ್-ಅಸಾದ್ ನ ಹಿರಿಯ ಮಗನನ್ನು ಕಾರ್ ಆಕ್ಸಿಡೆಂಟ್ ಒಂದರಲ್ಲಿ ಮುಗಿಸಿದ್ದು, ಮತ್ತದೇ, ಮೊಸ್ಸಾದ್ ಎಂದು ಊಹಾಪೋಹಗಳಿವೆ. ಮಗನನ್ನು ಕಳೆದುಕೊಂಡ ಅಸಾದ್ ಇಸ್ರೇಲ್ ಬಗ್ಗೆ ಮತ್ತೂ ಕ್ರುದ್ಧನಾಗಿದ್ದ. ಇದ್ದ ಬಿದ್ದ ಎಲ್ಲ ಉಗ್ರಗಾಮಿಗಳಿಗೆ ಕೆಂಪುಗಂಬಳಿಯ ಸ್ವಾಗತ ಕೋರಿದ್ದ.

ಫಾತಿ ಶಾಕಾಕಿ ಸಿರಿಯಾಗೆ ಹೋದ ಆದರೆ ಈ ಮೊದಲು ಹೇಳಿದಂತೆ ಸಿರಿಯಾದ ಕಡೆ ರೊಕ್ಕವಿರಲಿಲ್ಲ. ರೊಕ್ಕವಿಲ್ಲ ಅಂದರೆ ಇಸ್ರೇಲಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತು ಬಿಡುತ್ತವೆ. ರೊಕ್ಕ ಬೇಕು ಅಂದರೆ ಗಡಾಫಿಯೇ ಬೇಕು. ಹಾಗಾಗಿ ಒಂದಿಷ್ಟು ಫಂಡ್ ಎತ್ತಿಕೊಂಡು ಬರೋಣ ಎಂದು ಶಾಕಾಕಿ ಲಿಬಿಯಾಗೆ ಹೊರಟ. ಆಗಲೇ ಮೊಸ್ಸಾದ್  ಅವನನ್ನು ಟ್ರ್ಯಾಕ್ ಮಾಡಲು ಶುರುಮಾಡಿತ್ತು. ಶಾಕಾಕಿಯ ಅಂತಿಮ ಗೇಮ್ ಬಾರಿಸಲು ಕ್ಷಣಗಣನೆ ಶುರುವಾಗಿತ್ತು. ಅಷ್ಟೇ ಅದು ಶಾಕಾಕಿಗೆ ಗೊತ್ತಿರಲಿಲ್ಲ.

ಶಾಕಾಕಿ ಲಿಬಿಯಾಗೆ ಬಂದ. ಫಾತಿ ಶಾಕಾಕಿ ಹುಟ್ಟುಹಾಕಿದ್ದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಾರ್ನಾಮೆಗಳಿಂದ ಗಡಾಫಿ ಬಹಳ ಸಂತುಷ್ಟನಾಗಿದ್ದ. ಕೊಟ್ಟ ರೊಕ್ಕಕ್ಕೆ ನಿಯತ್ತಾಗಿ ಕೆಲಸ ಮಾಡಿಕೊಟ್ಟಿದ್ದ ಶಾಕಾಕಿ. ಹತ್ತಾರು ಆತ್ಮಹತ್ಯಾ ದಾಳಿಗಳಲ್ಲಿ ಹಲವಾರು ಇಸ್ರೇಲಿಗಳನ್ನು ಬರ್ಬರವಾಗಿ ಕೊಂದಿದ್ದರು ಶಾಕಾಕಿಯ ಶಿಷ್ಯರು. ಹಾಗಾಗಿ ಶಾಕಾಕಿಗೆ ಮತ್ತೊಂದಿಷ್ಟು ರೊಕ್ಕ ಕೊಡಲು ಗಡಾಫಿ ಹಿಂದೆ ಮುಂದೆ ನೋಡಲಿಲ್ಲ. ದೊಡ್ಡ ಮೊತ್ತದ ಕಾಣಿಕೆ ಕೊಟ್ಟು ಖುದಾ ಹಫೀಜ್ ಹೇಳಿ ಕಳಿಸಿದ್ದ.

ದೊಡ್ಡ ಮೊತ್ತದ ರೊಕ್ಕ ಸಿಕ್ಕಿದ್ದಕ್ಕೆ ಸಂತುಷ್ಟನಾದ ಫಾತಿ ಶಾಕಾಕಿ ತಡ ಮಾಡಲಿಲ್ಲ. ಟ್ರಿಪೋಲಿ ಶಹರಕ್ಕೆ ಬಂದವನೇ ಮಾಲ್ಟಾಗೆ ಹೋಗುವ ಫೆರ್ರಿ (ಹಡಗು) ಹತ್ತಿಬಿಟ್ಟ. ಸಮುದ್ರ ಶಾಂತವಾಗಿತ್ತು. ಅದರ ಮೌನ ಕರಾಳವಾಗಿತ್ತು. ಮುಂಬರುವ ಅನಾಹುತದ ಯಾವ ಸುಳಿವೂ ಇರಲಿಲ್ಲ ಶಾಕಾಕಿಗೆ.

ಮಾಲ್ಟಾಗೆ ಬಂದಿಳಿದ ಶಾಕಾಕಿ ಎಂದಿನಂತೆ ತನ್ನ ರೆಗ್ಯುಲರ್ ಹೋಟೆಲ್ಲಿಗೆ ಹೋದ. ಕೋಣೆಯಲ್ಲಿ ಸ್ವಲ್ಪ ಫ್ರೆಶ್ ಆದ ನಂತರ ಮಾಲ್ಟಾ ಶಹರವನ್ನು ಕೊಂಚ ಸುತ್ತಾಡಿ, ಮಕ್ಕಳಿಗೆ ಅಂಗಿ ಚಡ್ಡಿ ಶಾಪಿಂಗ್ ಮಾಡೋಣ ಅಂತ ಮಾಲ್ಟಾದ ರಸ್ತೆ ಗುಂಟ ನಡೆಯತೊಡಗಿದ. ಅವನು ಅದೆಷ್ಟು ಬಾರಿ ಆ ರಸ್ತೆಗಳ ಮೇಲೆ ಓಡಾಡಿದ್ದನೋ.

ಮೊಸ್ಸಾದಿನ ಕಿಡೋನ್ ಹಂತಕರು ಮೋಟಾರ್ ಸೈಕಲ್ ಮೇಲೆ ಕಾದಿದ್ದರು. ಬೇರೊಂದಿಷ್ಟು ಜನ ಮೊಸ್ಸಾದಿನ ಬೇಹುಗಾರರು ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿದ್ದರು. ಮಾಲ್ಟಾದಲ್ಲಿ ನೆರೆದಿದ್ದ ಹತ್ತಾರು ಮೊಸ್ಸಾದ್ ವೃತ್ತಿಪರರ ಖಾಸಗಿ ರೇಡಿಯೋ ಜಾಲದಲ್ಲಿ ಮಾಹಿತಿಗಳು ಸರಸರನೆ ವಿನಿಮಯವಾಗಿ ಮೋಟಾರ್ ಸೈಕಲ್ ಮೇಲೆ ರೊಂಯ್ ರೊಂಯ್ ಅಂತ ಆಕ್ಸಿಲರೇಟರ್ ತಿರುವುತ್ತ ಕುಳಿತಿದ್ದ ಕಿಡೊನ್ ಹಂತಕರಿಗೆ ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯ ಮಾಹಿತಿ ತಕ್ಷಣ ತಲುಪುತ್ತಿತ್ತು.

ಫಾತಿ ಶಾಕಾಕಿ ಆಯಕಟ್ಟಿನ ಜಾಗಕ್ಕೆ ಬಂದು ತಲುಪಿದ ಅನ್ನುವ ಮಾಹಿತಿ ಕಿಡೊನ್ ಹಂತಕರ ಕಿವಿಗಳಲ್ಲಿ ಅಡಗಿದ್ದ ear piece ಗಳಲ್ಲಿ ಕೇಳಿಬಂದಿದ್ದೇ ಕೊನೆ. ಮುಂದೆ ಕೆಲ ನಿಮಿಷ ಏನೂ ಕೇಳಲಿಲ್ಲ. ಸುತ್ತುಮುತ್ತಲಿನ ಜನರು ಗಾಭರಿಗೊಳ್ಳಲಿ, distract ಆಗಲಿ ಅಂತಲೇ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ಮೋಟಾರ್ ಸೈಕಲ್ ಮೇಲಿದ್ದ ಹಂತಕರು ಅತಿ ವೇಗದಿಂದ ನುಗ್ಗಿ ಬಂದರು. ಮೋಟಾರ್ ಸೈಕಲ್ ಶಬ್ದ ವಿಪರೀತ ಕರ್ಕಶವಾಗಿತ್ತು. ಜನರು ಗಲಿಬಿಲಿಗೊಂಡರು. ಇದ್ಯಾರು ಇಂತಹ ಶಾಂತ ವಾತಾವರಣದಲ್ಲಿ ಇಂತಹ ಕರ್ಕಶ ಮೋಟಾರ್ ಸೈಕಲ್ ಮೇಲೆ ಬಂದು ರಸಭಂಗ ಮಾಡುತ್ತಿದ್ದಾರೆ ಅಂದುಕೊಂಡನೇನೋ ಫಾತಿ ಶಾಕಾಕಿ. ಯಾವನಿಗೆ ಗೊತ್ತು?

ಶಾಕಾಕಿಯನ್ನು ಕ್ಷಣಮಾತ್ರದಲ್ಲಿ ಸಮೀಪಿಸಿದರು ಹಂತಕರು. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಹಿಂಬದಿಯ ಸವಾರ, ನುರಿತ ಹಂತಕ, ಮೋಟಾರ್ ಸೈಕಲ್ ಆಪಾಟಿ ವೇಗದಲ್ಲಿ ಹೋಗುತ್ತಿದ್ದರೂ, ಅರ್ಧಚಂದ್ರಾಕೃತಿಯಲ್ಲಿ ಸರ್ರ್ ಅಂತ ತಿರುಗಿದವನೇ ಒಂದು ಇಡೀ ಮ್ಯಾಗಜಿನ್ ಗುಂಡುಗಳನ್ನು ಫಾತಿ ಶಾಕಾಕಿಯ ಶರೀರದೊಳಗೆ ನುಗ್ಗಿಸಿದ್ದ. ಮೊದಲೇ ಸೈಲೆನ್ಸರ್ ಮಾರ್ಪಡಿಸಿದ್ದ ಮೋಟಾರ್ ಸೈಕಲ್. ಕಿವಿ ತಮ್ಮಟೆ ಹರಿದುಹೋಗುವಂತಹ ಅದರ ಶಬ್ದ. ಅಂತದ್ದರಲ್ಲಿ ಸೈಲೆನ್ಸರ್ ಹಾಕಿದ್ದ 'ಚಿಕ್ಕ ಆಯುಧಗಳ ವೈಢೂರ್ಯ' (jewel of small arms) ಅನ್ನಿಸಿಕೊಂಡಿರುವ ಬೆರೆಟ್ಟಾ ಇಟಾಲಿಯನ್ ಮೇಡ್ ಪಿಸ್ತೂಲಿನಿಂದ ಹಾರಿದ ಗುಂಡುಗಳು ಫಾತಿ ಶಾಕಾಕಿಯ ದೇಹವನ್ನು ಛಲ್ಲಿ ಛಲ್ಲಿ ಮಾಡಿಹಾಕಿದ್ದವು. ಶಾಕಾಕಿಯ ದೇಹ ಮಾಲ್ಟಾದ ರಸ್ತೆಯ ಫುಟ್ ಪಾತ್ ಮೇಲೆ ಬೀಳುವಷ್ಟರಲ್ಲಿ ಮೊಸ್ಸಾದಿನ ಹಂತಕರು ಚಲಾಯಿಸುತ್ತಿದ್ದ ಬೈಕ್ ಅಲ್ಲಿಂದ ಮಾಯವಾಗಿತ್ತು.

ಹೀಗೆ ಕ್ಷಣಾರ್ಧದಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮತ್ತು ಪ್ರಥಮ ಹಿರಿತಲೆ  ಫಾತಿ ಶಾಕಾಕಿ ಖಲಾಸ್! ಹಿಮ್ಮಡದಲ್ಲಿ ಚುಚ್ಚಿ ಇನ್ನಿಲ್ಲದ ಉಪದ್ರವ ಕೊಡುತ್ತಿದ್ದ ಮುಳ್ಳನ್ನು ಮುಳ್ಳಿನಿಂದಲೇ ತೆಗೆದೆಸೆದಾಗ ಆಗುವ ನಿರುಮ್ಮಳ ನೆಮ್ಮದಿ ಇಸ್ರೇಲಿಗೆ.

ಹೀಗೆ ಮಾಲ್ಟಾ ಎಂಬ ಪರದೇಶದಲ್ಲಿ ಫಾತಿ ಶಾಕಾಕಿ ಇಸ್ರೇಲಿಗಳ ಗುಂಡು ತಿಂದು ರಸ್ತೆ ಬದಿಯಲ್ಲಿ ನಾಯಿಯಂತೆ ಸತ್ತಿದ್ದೇ ಸತ್ತಿದ್ದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಸಂಘಟನೆ ಬೇವರ್ಸಿಯಾಗಿಬಿಟ್ಟಿತು. ಹೊಸ ನಾಯಕನೇ ಇಲ್ಲ. ಕಾರಣವೇನೋ ಗೊತ್ತಿಲ್ಲ. ಒಳಮುಚ್ಚುಗ ಶಾಕಾಕಿ ಎರಡನೇ ಹಂತದ ನಾಯಕರನ್ನೂ ತಯಾರು ಮಾಡಿರಲಿಲ್ಲ. ಎಲ್ಲವನ್ನೂ ತನ್ನ ಹತೋಟಿಯಲ್ಲೇ ಇಟ್ಟುಕೊಂಡು ರಿಮೋಟ್ ಕಂಟ್ರೋಲ್ ಮೂಲಕ ಸಂಬಾಳಿಸುತ್ತಿದ್ದ. ಈಗ ಅವನಿಲ್ಲದೆ ಅವನ ಸಂಘಟನೆ ಅನಾಥವಾಗಿತ್ತು.

ಸಂಘಟನೆಯ ನಾಯಕತ್ವವನ್ನು ವಹಿಸಿಕೊಳ್ಳುವ ಕಾಬೀಲಿಯತ್ತು ಇರುವ ಜನರು ಯಾರೂ ಗಾಜಾ ಪಟ್ಟಿಯಲ್ಲಿ ಇರಲಿಲ್ಲ. ಇಡೀ ಮಧ್ಯಪ್ರಾಚ್ಯದಲ್ಲೇ ಇರಲಿಲ್ಲ. ಆಗಲೇ ಎಂಟ್ರಿ ಕೊಟ್ಟ ನಮ್ಮ ಕಥಾ ನಾಯಕ ರಮದಾನ್ ಶಾಲ್ಲಾ.

ಇಸ್ರೇಲ್ ಫಾತಿ ಶಾಕಾಕಿಯನ್ನು ಮಾಲ್ಟಾದಲ್ಲಿ ಉಡಾಯಿಸಿದ್ದು ೧೯೯೫ ರಲ್ಲಿ. ಆಗ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ರಮದಾನ್ ಶಾಲ್ಲಾ ಪಾರ್ಟ್ ಟೈಮ್ ಮಾಸ್ತರಿಕೆ ಮಾಡಿಕೊಂಡಿದ್ದ. ಪೂರ್ತಿ ಪ್ರಮಾಣದ ಪ್ರೊಫೆಸರ್ ಆಗಿದ್ದ ಸಾಮಿ ಆಲ್-ಅರಿಯನ್ ಅವನಿಗೆ ಗುರುವಿದ್ದಂತೆ.

ದೂರದ ಅಮೆರಿಕಾದಲ್ಲಿದ್ದರೂ ಪ್ಯಾಲೆಸ್ಟೈನ್ ಇಸ್ಲಾಮಿಕ್ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈ ಇಬ್ಬರು ಪ್ರೊಫೆಸರ್ ಮಹಾಶಯರು ತಕ್ಷಣ ಫೀಲ್ಡಿಗೆ ಇಳಿದರು. ಆಗಲೇ ಅಮೇರಿಕಾದ FBI ಜೊತೆ ತಿಕ್ಕಾಟಕ್ಕೆ ಇಳಿದಿದ್ದ ಸಾಮಿ ಅಲ್ - ಅರಿಯನ್ ರಮದಾನ್ ಶಾಲ್ಲಾನನ್ನು ಸಿರಿಯಾದ ಡಮಾಸ್ಕಸ್ ನಗರಕ್ಕೆ ಕಳಿಸಿಬಿಟ್ಟ. ಪ್ಯಾಲೆಸ್ಟೈನ್ ಉಗ್ರರ ಸಮುದಾಯದಲ್ಲಿ ಏನೇನು ಮಾತುಕತೆಗಳು ಆದವೋ, ಏನೇನು ಸಮೀಕರಣಗಳು ವರ್ಕೌಟ್ ಆದವೋ, ಗಡಾಫಿಯಂತಹ ಯಾವ್ಯಾವ ತಲೆತಿರುಕರು ತಮ್ಮ ತಮ್ಮ ಆಶೀರ್ವಾದ ಮಾಡಿದರೋ, ಒಟ್ಟಿನಲ್ಲಿ ಫ್ಲೋರಿಡಾ ಬಿಟ್ಟು ಉಟ್ಟ ಬಟ್ಟೆಯಲ್ಲಿ ಸಿರಿಯಾಕ್ಕೆ ಬಂದಿಳಿದಿದ್ದ ರಮದಾನ್ ಶಾಲ್ಲಾನಿಗೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕ ಅಂತ ಪಟ್ಟಾಭಿಷೇಕ ಮಾಡಲಾಯಿತು.

ಪಟ್ಟಾಭಿಷೇಕ ಮಾಡಿಸಿಕೊಂಡ ರಮದಾನ್ ಶಾಲ್ಲಾ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಅನಾಥ ಸಂಘಟನೆಯ ನಾಯಕತ್ವವನ್ನೇನೋ ವಹಿಸಿಕೊಂಡ. ಆದರೆ ರೊಕ್ಕವಿದ್ದ ತಿಜೋರಿಯ ಚಾವಿ ಫಾತಿ ಶಾಕಾಕಿಯ ಜೊತೆಗೇ ಅಲ್ಲಾಹುವಿನ ಪಾದ ಸೇರಿಕೊಂಡಿದೆ ಎಂದು ತಡವಾಗಿ ಗೊತ್ತಾಯಿತು.

ಯಾರನ್ನೂ ನಂಬದ ಹಿಂದಿನ ನಾಯಕ ಫಾತಿ ಶಾಕಾಕಿ ಅಷ್ಟೆಲ್ಲ ರೊಕ್ಕವಿದ್ದರೂ ಅದರ ವಿವರಗಳನ್ನು ಎಲ್ಲೂ ಕ್ರಮಬದ್ಧವಾಗಿ ರೆಕಾರ್ಡ್ ಮಾಡಿಟ್ಟಿರಲಿಲ್ಲ. ಅಲ್ಲಿಗೆ ಗಡಾಫಿ ಕೊಟ್ಟಿದ್ದ ಹಲವಾರು ಮಿಲಿಯನ್ ಡಾಲರುಗಳಿಗೆ, ಅಮೇರಿಕಾದ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಬೇಡಿದ್ದ ರೊಕ್ಕಕ್ಕೆ, ಇತರೆ ಅರಬ್ ಸೇಠು ಜನ ಕೊಟ್ಟಿದ್ದ ರೊಕ್ಕಕ್ಕೆ ಎಲ್ಲ ಶಿವಾಯ ನಮಃ! ರಮದಾನ್ ಶಾಲ್ಲಾ ಹುಚ್ಚನಂತಾಗಿ ತಲೆ ತಲೆ ಚಚ್ಚಿಕೊಂಡ. ಅದರಲ್ಲೂ ಅವನು ಬ್ಯಾಂಕಿಂಗ್ ಪಾಠ ಮಾಡುವ ಮಾಸ್ತರ್ ಬೇರೆ. ಇಲ್ಲಿ ನೋಡಿದರೆ ಸಂಘಟನೆಯ ಬ್ಯಾಂಕಿಂಗ್ ವಿವರಗಳೇ ಇಲ್ಲ. ಅವೆಲ್ಲ ಫಾತಿ ಶಾಕಾಕಿಯೊಂದಿಗೇ ಶಹೀದ್ ಆಗಿಬಿಟ್ಟಿವೆ. ಹೊಸ ಸಂಘಟನೆಗೆ ದೊಡ್ಡ ಮಟ್ಟದ ಬಾಲಗ್ರಹದ ಪೀಡೆ.

ಫಾತಿ ಶಾಕಾಕಿ ಸತ್ತ. ಸಾಯುವಾಗ ರೊಕ್ಕದ ಮೂಲಗಳನ್ನೆಲ್ಲ ಒಣಗಿಸಿಯೇ ಸತ್ತಿದ್ದ. ಆರ್ಥಿಕ ಮುಗ್ಗಟ್ಟಿನ ಆ ಹೊಡೆತದಿಂದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಮುಂದೆ ಚೇತರಿಸಿಕೊಳ್ಳಲೇ ಇಲ್ಲ. ಇತ್ತಕಡೆ ಅಮೇರಿಕಾದಲ್ಲಿ ಸಾಮಿ ಅಲ್-ಅರಿಯನ್ ಅಬ್ಬೇಪಾರಿಯಾಗಿ ಕುವೈತ್ ದೇಶಕ್ಕೋ, ಕತಾರ್ ದೇಶಕ್ಕೋ ಗಡಿಪಾರು ಮಾಡಲ್ಪಟ್ಟ. ಅಲ್ಲಿಗೆ ಅಮೇರಿಕಾದ ಮಸೀದಿಗಳಿಂದ ಬರುತ್ತಿದ್ದ ಅಷ್ಟಿಟ್ಟು ಕಾಸು ಕೂಡ ಒಣಗಿತು.

ಆದರೂ ಏನೇನೋ ಮಾಡಿ ರಮದಾನ್ ಶಾಲ್ಲಾ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದ. ವರ್ಷಕ್ಕೆ ಒಂದೆರೆಡು ಬಾರಿ ಗಾಜಾ ಪಟ್ಟಿಯಿಂದ ಇಸ್ರೇಲ್ ಒಳಗೆ ಕತ್ಯುಷಾ ರಾಕೆಟ್ ಹಾರಿಸಿ ಉಪಟಳ ಕೊಟ್ಟು, ಕೊಂಚ ಪ್ರೆಸ್ ಕವರೇಜ್ ಗಳಿಸಿ ಸುದ್ದಿಯಲ್ಲಿರುತ್ತಿದ್ದ. ಆದರೆ ತಾನು ಮಾತ್ರ ತೋಟದಪ್ಪನ ಛತ್ರ ಅಂದರೆ ಸಿರಿಯಾದಲ್ಲಿ ಇರುತ್ತಿದ್ದ. ಅಸಾದ್ ತಕ್ಕಮಟ್ಟಿನ ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದ. ಮತ್ತೆ ಇಸ್ರೇಲ್ ಕೂಡ priority ಮೇಲೆ ಉಗ್ರರ ಗೇಮ್ ಬಾರಿಸುತ್ತದೆ. ಎಲ್ಲ ಚಿಳ್ಳೆ ಪಿಳ್ಳೆ ಜನರ ಗೇಮ್ ಬಾರಿಸುತ್ತ ಹೋಗಲು ಮೊಸ್ಸಾದ್ ತನ್ನ ಲಿಮಿಟೆಡ್ ಸಂಪನ್ಮೂಲಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ. ಹಾಗಾಗಿ ರಮದಾನ್ ಶಾಲ್ಲಾನ ಗೇಮ್ ಬಾರಿಸಿರಲಿಲ್ಲ. ಆ ಮಟ್ಟದ ಕುಖ್ಯಾತಿಗೆ ಅವನೂ ಏರಿರಲಿಲ್ಲ.

ಮೊನ್ನಿತ್ತಲಾಗೆ ಏನೋ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗೆಂದು ಪಕ್ಕದ ದೇಶ ಲೆಬನಾನಿನ ರಾಜಧಾನಿ ಬಿರೂಟಿನ ಆಸ್ಪತ್ರೆಗೆ ರಹಸ್ಯವಾಗಿ ದಾಖಲಾಗಿದ್ದಾನೆ. ಇಷ್ಟಕ್ಕೂ ಈ ಹೆದರುಪುಕ್ಕ ಪುಣ್ಯಾತ್ಮ ಸಿರಿಯಾದ ತೋಟದಪ್ಪನ ಛತ್ರ ಬಿಟ್ಟು ಬಿರೂಟಿಗೆ ಯಾಕೆ ಬಂದ !!?? ಈಗ ಏಳೆಂಟು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ಶುರುವಾದಾಗಿನಿಂದ ಪರಿಸ್ಥಿತಿ ತುಂಬಾ ಹದೆಗೆಟ್ಟು ಹೋಗಿದೆ. ಬಷೀರ್ ಅಲ್-ಅಸಾದನಿಗೆ ತನ್ನನ್ನು ತಾನು ಕಾಪಾಡಿಕೊಂಡರೆ ಸಾಕಾಗಿದೆ. ಪೌರಾಡಳಿತ ಮತ್ತು ನಗರ ವ್ಯವಸ್ಥೆ ಪೂರ್ತಿ ಹಳ್ಳಹಿಡಿದು ಇಡೀ ಸಿರಿಯಾ ಒಂದು ದೊಡ್ಡ ಕೊಳಗೇರಿ ಆಗಿದೆ. ಹಾಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಒಳ್ಳೆ ಚಿಕಿತ್ಸೆ ಸಿಗುವುದು ಅಷ್ಟರಲ್ಲೇ ಇದೆ. ರೊಕ್ಕ ಕೊಟ್ಟರೂ ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ, ಔಷಧಗಳೂ ಇಲ್ಲ. ಹೀಗಿರುವಾಗಲೇ ರಮದಾನ್ ಶಾಲ್ಲಾನ ಆರೋಗ್ಯ ಬಿಗಡಾಯಿಸಿದೆ. ರಿಸ್ಕ್ ತೆಗೆದುಕೊಂಡು ಹೇಗೋ ಮಾಡಿ ಪಕ್ಕದ ಬಿರೂಟಿಗೆ ಬಂದಿದ್ದಾನೆ. ಆಪರೇಷನ್ ಥೀಯೇಟರ್ ಒಳಗೆ ಹೋಗುವಾಗ ಇದ್ದ ಪ್ರಜ್ಞೆ ನಂತರ ವಾಪಸ್ ಬಂದಿಲ್ಲ. ಕೋಮಾಗೆ ಜಾರಿದ್ದಾನೆ. ವಿಷಪ್ರಾಶನದಿಂದ ವಾಪಸ್ ತಿರುಗಿ ಬರಲಾರದಂತಹ ಕೋಮಾಕ್ಕೆ ಕಳಿಸಲಾಗಿದೆ ಅಂತ ಗುಸುಗುಸು.

ರಮದಾನ್ ಶಾಲ್ಲಾನಂತಹ ಚಿಲ್ಟು (insignificant) ಉಗ್ರಗಾಮಿಯ ಗೇಮನ್ನು ಮೊಸ್ಸಾದ್ ಖುದ್ದಾಗಿ ಬಾರಿಸಿರಲಿಕ್ಕಿಲ್ಲ. ಬಿರೂಟಿನಲ್ಲಿ ಕಾಸು ಕೊಟ್ಟರೆ ಎಂತಹ ಕೆಲಸವನ್ನು ಬೇಕಾದರೂ ಮಾಡಿಕೊಡಬಲ್ಲ ಭೂಗತಲೋಕದ ಭಾಡಿಗೆ ಜನರನ್ನು  (mercenary) ಬಿಟ್ಟು ರಮದಾನ್ ಶಾಲ್ಲಾನ ಕೇಸ್ ಖತಂ ಮಾಡಿದೆ ಅಂತಲೂ ಒಂದು ಸುದ್ದಿ ಮಧ್ಯಪ್ರಾಚ್ಯದ ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಇಸ್ಲಾಮಿಕ್ ಜಿಹಾದ್ ಮಾತ್ರ 'ನಮ್ಮ ಸಾಹೇಬರು ಗುಣಮುಖರಾಗುತ್ತಿದ್ದಾರೆ. ಚಿಂತಿಸುವ ಕಾರಣವಿಲ್ಲ,' ಎಂದು ಒಣ ಒಣ ಪತ್ರಿಕಾಹೇಳಿಕೆಗಳನ್ನು ಬಿಡುಗಡೆ ಮಾಡಿ ರಮದಾನ್ ಶಾಲ್ಲಾನ ನಿಜ ಸ್ಥಿತಿಯನ್ನು obfuscate ಮಾಡಿ, ರಮದಾನ್ ಶಾಲ್ಲಾನ ಖೇಲ್ ಖತಂ ಆಗಿರಬಹುದೇ ಎನ್ನುವ ಸಂದೇಹವನ್ನು deflect ಮಾಡುತ್ತಿದೆ.

ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕಿಕೊಳ್ಳಬೇಕಾಗಿದೆ. ಅಮೇರಿಕಾದಿಂದ ಗಡಿಪಾರಾಗಿ ಅಲ್ಲೆಲ್ಲೋ ಕುವೈತಿನಲ್ಲೋ ಕತಾರಿನಲ್ಲೋ ಕುಳಿತಿರುವ ಮಾಜಿ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಬಂದು ಜುಗಾಡ್ ಮಾಡುವನಿದ್ದಾನೋ ಅಥವಾ ಇತರೆ ಅನೇಕ  ಚುಲ್ಟು ಪುಲ್ಟು ಸಂಘಟನೆಗಳಂತೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಕೂಡ 'ಯಾ ಅಲ್ಲಾ!' ಎಂದು ಒಂದು ಆಖ್ರಿ ಚೀಕ್ ಹೊಡೆದು ಗೋಣು ಚಲ್ಲಿ ಶಿವಾಯ ನಮಃ ಆಗಲಿದೆಯೋ? ಕಾದು ನೋಡಬೇಕು!

ಇಸ್ರೇಲೇ ರಹಸ್ಯ ಕಾರ್ಯಾಚರಣೆ ಮಾಡಿ ರಮದಾನ್ ಶಾಲ್ಲಾನನ್ನು ಕೋಮಾಕ್ಕೆ ತಳ್ಳಿದ್ದೇ ಹೌದಾದರೆ ಅದನ್ನು ಹೇಗೆ ಸಾಧಿಸಿತು? ಈ ಪ್ರಶ್ನೆಗೆ ಉತ್ತರ ಈಗಂತೂ ಇಲ್ಲ. ಚರಿತ್ರೆ ಏನಾದರೂ ಪಾಠವಾದರೆ (If history is any lesson), ಇಸ್ರೇಲ್ ಈ ಹಿಂದೆ ೧೯೭೦ ರ  ದಶಕದಲ್ಲಿ ವಾಡಿ ಹದ್ದಾದ್ ಎಂಬ ಖತರ್ನಾಕ್ ಉಗ್ರಗಾಮಿಯನ್ನು ಕಂಡುಹಿಡಿಯಲಾಗದ ವಿಷಬೆರೆತ ಪರಮ ದುಬಾರಿ ಬೆಲ್ಜಿಯನ್ ಚಾಕಲೇಟ್ ಮೂಲಕ ವಿಷಪ್ರಾಶನ ಮಾಡಿಸಿ, ಆ ದುರುಳ ಪ್ಯಾರಿಸ್ಸಿನ ದವಾಖಾನೆಯೊಂದರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಸಾಯುವಂತೆ ಮಾಡಿತ್ತು. ಚಾಕಲೇಟ್ ಪ್ರಿಯನಾಗಿದ್ದ ತಿಂಡಿಪೋತ ವಾಡಿ ಹದ್ದಾದ್ ತನ್ನ ಪ್ರೀತಿಯ ಬೆಲ್ಜಿಯನ್ ಚಾಕ್ಲೆಟ್ ಮೆದ್ದು ಗೊಟಕ್ ಅಂದಿದ್ದ. ೨೦೦೪ ರಲ್ಲಿ ಯಾಸಿರ್ ಅರಾಫತ್ ಕೂಡ ನಿಗೂಢವಾಗಿ ಕಂಡುಹಿಡಿಯಲಾಗದ ಬೇನೆ ಬಂದು ಸತ್ತರು. ಅವರನ್ನೂ ಸಹ ವಿಷ ಹಾಕಿ ಕೊಲ್ಲಲಾಯಿತು ಅನ್ನುವ ಗುಸುಗುಸು ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಿದೆ. 

Sunday, April 08, 2018

Dispassion Vs Depression

In one of his discourses, Swami Anubhavanandaji very cleverly explained the subtle difference between dispassion (ವೈರಾಗ್ಯ) and depression (ಖಿನ್ನತೆ).

Dispassion =  real detachment from the word with wisdom

Depression = apparent detachment from the world without wisdom (or with ignorance)

I think this gives the best way to evaluate our own condition when we feel we are detached from the world. Make sure it is not a case of sour grape syndrome. It is easy to feel detached or show that you are detached from things that you could not or did not get.

They say, you are really free when you have nothing to lose.

Another saying that comes to mind is, if you want to determine what truly is your possession, check what remains with you after you have lost everything. (Ans: Knowledge).

Yoga Vasishtha (ಯೋಗ ವಾಸಿಷ್ಠ) is one of the best books to cultivate real dispassion. It is not a book on Vedanta (i.e. Upanishads) but nevertheless regarded as one of the highest books of Advaita school. It is placed at the same level as Mandukya Upanishad and commentaries on Mandukya upanishad. These two books are the two highest summits of Advaita Vedanta.

Mythology says that sage Vasishta preached dispassion to lord Rama when Rama was confused and that became the book Yoga Vasishta. Scholars say it belongs to Kashmir shaivisam.

Swami Venkateshanada has translated this treasure to English. It is one of the best books if you have read and prepared yourself by going through foundational books of Advaita such as Viveka choodamani, Atmabodha, Aparokshanubhuti etc. by Shankarachyara and others. Even otherwise, you may come to appreciate and benefit from it very much if you are blessed with grace to understand it.

A shorter version of Yoga Vasishta called Yoga Vasishta Sara is a good pocket book for frequent reference.

Cheers!