Thursday, October 30, 2014

ಇಂದಿರಾ ಗಾಂಧಿ ಹತ್ಯೆ, ಮುಂಬೈ ಟ್ರಿಪ್ಪು, ಮೂವತ್ತು ವರ್ಷಗಳ ಬಳಿಕ ಮತ್ತೆ ನೆನಪು

೩೧ ಅಕ್ಟೋಬರ್ ೧೯೮೪. ಅಂದು ಇಂದಿರಾ ಗಾಂಧಿ ಹತ್ಯೆಯಾಗಿ ಹೋಯಿತು. ಇವತ್ತಿಗೆ (೩೧ ಅಕ್ಟೋಬರ್ ೨೦೧೪) ಬರೋಬ್ಬರಿ ಮೂವತ್ತು ವರ್ಷ. ನಮ್ಮ ತಲೆಮಾರಿನ ಮಂದಿಗೆ, ಅಂದರೆ ೧೯೭೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ, ಮೂರು ಗಾಂಧಿಗಳ ಸಾವಿನ ಬಗ್ಗೆ ಬರೋಬ್ಬರಿ ನೆನಪಿರುತ್ತದೆ. ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. 'ಆದಿನ ಎಲ್ಲಿದ್ದೆ? ಏನು ಮಾಡುತ್ತಿದ್ದೆ?' ಅಂತ ಕೇಳಿ ನೋಡಿ. ನೆನಪುಗಳು ಬರೋಬ್ಬರಿ ಬಿಚ್ಚಿಕೊಳ್ಳುತ್ತವೆ. ಅಮೇರಿಕಾದಲ್ಲಿ ೧೯೫೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ ೧೯೬೩ ರಲ್ಲಿ ಆದ ಜಾನ್ ಕೆನಡಿ ಹತ್ಯೆ, ೧೯೬೮ ರಲ್ಲಿ ಆದ ರಾಬರ್ಟ್ ಕೆನಡಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಗಳು ಮನಸ್ಸಿನಲ್ಲಿ ಹೇಗೆ ಅಚ್ಚೊತ್ತಿ ನಿಂತಿರುತ್ತವೋ ಹಾಗೇ ನಮಗೆ ಭಾರತೀಯರಿಗೆ ಗಾಂಧಿ ಕುಟುಂಬದ ಸಾವುಗಳು.

ನಾನಂತೂ ಅವತ್ತು ಮುಂಬೈನಲ್ಲಿದ್ದೆ. ಆಗಿನ ಬಾಂಬೆ. ಆಗ ಹನ್ನೆರೆಡು ವರ್ಷ, ಏಳನೇ ಕ್ಲಾಸ್. ಅಕ್ಟೋಬರ್ ರಜೆಯ ಸಮಯ. ಅದಕ್ಕೇ ಅಂತಲೇ ಮುಂಬೈಗೆ ಹೋಗಿದ್ದಾಗಿತ್ತು. ನೆಂಟರ ಮನೆಯಲ್ಲಿ ಒಂದೆರೆಡು ವಾರ ಕಳೆದು ಬರಲು. ನಮ್ಮ ಚಿಕ್ಕಜ್ಜಿ (ಅಮ್ಮನ ಚಿಕ್ಕಮ್ಮ) & ಫ್ಯಾಮಿಲಿ ಆಗ ಅಲ್ಲೇ ಇತ್ತು. ಅವರ ಮನೆಯಲ್ಲೇ ಉಳಿದಿದ್ದು. ಅಣ್ಣ IIT ಮುಂಬೈನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ. ಅದೂ ಒಂದು ಎಕ್ಸಟ್ರಾ ಬೋನಸ್ ಮುಂಬೈಗೆ ಹೋಗಲು. ಬೇರೆ ಯಾರೋ ನೆಂಟರು ಅಲ್ಲಿಗೆ ಹೊರಟಿದ್ದರು. ನಾನೂ ಅವರ ಜೊತೆ ತಗಲಾಕಿಕೊಂಡು ಹೋಗಿದ್ದೆ.

ಮುಂಬೈಗೆ ಹೋಗಿ, ರಜೆ ಎಂಜಾಯ್ ಮಾಡಿ, ಊರು ಸುತ್ತಿ, ವಾಪಸ್ ಬರೋ ಟೈಮ್ ಬಂದಿತ್ತು. ಆವತ್ತು ೩೧ ಅಕ್ಟೋಬರ್ ೧೯೮೪ ರಂದು ಪಾಕಿಸ್ತಾನದಲ್ಲಿ ಇಂಡಿಯಾ ಪಾಕಿಸ್ತಾನ ಒನ್ ಡೇ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು.

ಟೀವಿಯಲ್ಲಿ ಕ್ರಿಕೆಟ್ ನೋಡುವದು ಅಂದರೆ ಆಗೆಲ್ಲ ದೊಡ್ಡ ಮಾತು. ಧಾರವಾಡಕ್ಕೆ ಇನ್ನೂ ಟೀವಿ ಬಂದಿರಲಿಲ್ಲ. ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿಯೇ ಮಂಜೂರ್ ಮಾಡಿ ಹೋಗಿದ್ದರು. ಅವರ ಮರಣದ ನಂತರ ಒಂದೋ ಎರಡೋ ತಿಂಗಳಲ್ಲಿ ಬಂತು ಅನ್ನಿ. ದೇಶದ ತುಂಬೆಲ್ಲ low power tv transmitters ಮಂಜೂರು ಮಾಡಿದ್ದರು ಇಂದಿರಾ ಗಾಂಧಿ. ಸಾಯುವ ಮುಂಚೆ ಮಾಡಿದ ಒಂದು ದೊಡ್ಡ ಕೆಲಸ ಅದು. ಮತ್ತೆ ಜನರಲ್ ಎಲೆಕ್ಷನ್ ಬೇರೆ ಬಂದಿತ್ತು. ಅದಕ್ಕೆ ಅನುಕೂಲವಾಗಲಿ ಅಂತ ದೇಶದ ತುಂಬೆಲ್ಲ ಟೀವಿ ಭಾಗ್ಯ.

ಕ್ರಿಕೆಟ್ ಮ್ಯಾಚಿನಲ್ಲಿ ಭಾರತದ ಬ್ಯಾಟಿಂಗ್ ಮುಗಿದಿತ್ತು. ಆಗ ಒಮ್ಮೆಲೇ ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ಪ್ರಸಾರ ನಿಂತು ಹೋಯಿತು. ಇಂದಿರಾ ಗಾಂಧಿ ಮೇಲೆ ದಾಳಿಯಾಯಿತು ಅಂತ ಟೀವಿಯಲ್ಲಿ ಸುದ್ದಿ ಬಂತೇ? ನೆನಪಿಲ್ಲ. ಆದರೆ ಟೀವಿ ಪ್ರಸಾರ ನಿಂತು, ಸೊಳೆ ರಾಗದ, ಹೊಗೆ ಹಾಕಿಸ್ಕೊಂಡವರ ಮನೆಯ ಕೊಂಯ್ ಅನ್ನುವ ಮ್ಯೂಸಿಕ್ ಅಂತೂ ಶುರುವಾಗಿ ಏನೋ ಅಪಶಕುನದ ಸೂಚನೆ ಕೊಡುತ್ತಿತ್ತು. ಕೇವಲ ಟೀವಿ ಪ್ರಸಾರ ಒಂದೇ ಅಲ್ಲ, ಆಕಡೆ ಕ್ರಿಕೆಟ್ ಮ್ಯಾಚ್ ಸಹಿತ ಅರ್ಧಕ್ಕೆ ನಿಂತು ಹೋಗಿತ್ತು ಅಂತ ಆಮೇಲೆ ಗೊತ್ತಾಯಿತು. ಮ್ಯಾಚ್ ಒಂದೇ ಏನು, ಉಳಿದ ಸರಣಿ ಸಹಿತ ಖತಂ ಆಗಿ, ಭಾರತ ಕ್ರಿಕೆಟ್ ತಂಡ ತಾಪಡ್ತೋಪ್ ವಾಪಸ್ ಬಂದುಬಿಟ್ಟಿತು.

ಆಫೀಸಿನಿಂದ ಚಿಕ್ಕಜ್ಜ ಫೋನ್ ಮಾಡಿ ಸುದ್ದಿ ಹೇಳಿದ್ದರು, 'ಇಂದಿರಾ ಗಾಂಧಿಗೆ ಗುಂಡು ಹಾಕಿದರಂತೆ' ಅಂತ. ಅಷ್ಟೇ ಸುದ್ದಿ ಹೊರಬಿಟ್ಟಿತ್ತು ಸರಕಾರ. ನಿಧನರಾಗಿದ್ದಾರೆ ಅಂತ ಅಧಿಕೃತ ಸುದ್ದಿ ಬಂದದ್ದು ಬಹಳ ತಡವಾಗಿ. ರಾತ್ರಿ ಯಾವಾಗಲೋ ಡಿಕ್ಲೇರ್ ಆಯಿತು, 'ಇಂದಿರಾ ಗಾಂಧಿ ಇನ್ನಿಲ್ಲ,' ಅಂತ.

ಮಧ್ಯಾನ ಊಟಕ್ಕೆ ಚಿಕ್ಕಜ್ಜ ಮನೆಗೆ ಬಂದಿದ್ದರು. ಇಂದಿರಾ ಗಾಂಧಿ ಮೇಲೆ ಆದ ದಾಳಿ ಆಹೊತ್ತಿನ ಬ್ರೇಕಿಂಗ್ ನ್ಯೂಸ್. ಈಗಿನ ಹಾಗೆ ಬ್ರೇಕಿಂಗ್ ನ್ಯೂಸ್ ಕೊಡುವ ಮಂದಿ, ಸಾವಿರ ಚಾನೆಲ್ ಇರಲಿಲ್ಲ ಅಷ್ಟೇ. ರೇಡಿಯೋ ಮೇಲೆ ಸ್ವಲ್ಪ updates ಬರುತ್ತಿತು. ಇಂದಿರಾ ಗಾಂಧಿಯನ್ನು ಸೇರಿಸಿದ್ದ AIIMS ಆಸ್ಪತ್ರೆಯಿಂದ ಮೆಡಿಕಲ್ ಬುಲೆಟಿನ್ ಬರುತ್ತಿತ್ತು. ಅದನ್ನು ಉಪಯೋಗಿಸಿ AIR ಸುದ್ದಿ ಕೊಡುತ್ತಿತ್ತು ಅಂತ ನೆನಪು.

ಊಟ ಮುಗಿಸಿದ ಚಿಕ್ಕಜ್ಜ ವಾಪಸ್ ಹೊರಟರು ಆಫೀಸಿಗೆ. ಹೋಗುವಾಗ ಸುದ್ದಿ ಕೇಳಲಿಕ್ಕೆ ಇರಲಿ ಅಂತ ಪಾಕೆಟ್ ಟ್ರಾನ್ಸಿಸ್ಟರ್ ತೆಗೆದುಕೊಂಡು, ಸ್ವಿಚ್ ಆನ್ ಮಾಡಿ ನೋಡಿದರೆ ಅದರಲ್ಲಿನ ಬ್ಯಾಟರಿ ಸೆಲ್ಲು ಸತ್ತು ಹೋಗಿತ್ತು. ಬ್ಯಾಟರಿ ಪವರ್ ನಾಸ್ತಿ. ಇಲ್ಲೆ. 'ಬ್ಯಾಟರಿ ಸೆಲ್ಲಿಗೆ ಏನು ಮಾಡೋಣ?' ಅಂತ ಅವರು ವಿಚಾರ ಮಾಡುತ್ತಿದ್ದಾಗ ನಾನು ನನ್ನ 'ಭಯಂಕರ ತಲೆ' ಓಡಿಸಿ, ನನ್ನ ಹತ್ತಿರ ಇದ್ದ ಪಾಕೆಟ್ ಪೆನ್ ಟಾರ್ಚ್ ಬ್ಯಾಟರಿಯಿಂದ ಸೆಲ್ ತೆಗೆದು ಕೊಟ್ಟಿದ್ದೆ. ಆ ಪೆನ್ ಟಾರ್ಚ್ ಅಲ್ಲೇ ಮುಂಬೈನಲ್ಲಿ ಖರೀದಿ ಮಾಡಿದ್ದೆ, ಒಂದು ವಾರದ ಹಿಂದೆ. ವಾರಾಂತ್ಯಕ್ಕೆ IIT ಹಾಸ್ಟೆಲ್ ಬಿಟ್ಟು, ಜೊತೆಗಿದ್ದು ಟೈಮ್ ಕಳೆಯಲು ಬಂದಿದ್ದ ಅಣ್ಣನ ಜೊತೆ ಫೋರ್ಟ್ ಏರಿಯಾಕ್ಕೆ ಶಾಪಿಂಗಿಗೆ ಹೋಗಿದ್ದೆ. ಖರೀದಿ ಮಾಡಿದ್ದು ಒಂದು ಮೂರು ನಾಕು ಇಲೆಕ್ಟ್ರಾನಿಕ್ ವಾಚು, ಒಂದು ಟಾರ್ಚ್ ಬ್ಯಾಟರಿ. ಅದೂ ಚೈನಾ ಮೇಡ್, ಸ್ಪೆಷಲ್ ಬೆಳ್ಳಿ ಕೋಟಿಂಗ್ ಇದ್ದ ಪೆನ್ ಟಾರ್ಚ್. ಪೆನ್ನುಗಳಲ್ಲಿ ಚೈನಾ ಹೀರೋ ಪೆನ್ ಹೇಗೆ ಫೇಮಸ್ ಇತ್ತೋ ಹಾಗೇ ಈ ಚೈನಾ ಮೇಡ್ ಟಾರ್ಚ್ ಕೂಡ. ಭಾಳ ಸ್ಲಿಕ್ ಆಗಿ, ಮಸ್ತ ಇತ್ತು. ಹಸಿರು ಬಣ್ಣದ ಪ್ರಕಾಶ. ಅದೇ ಭಯಂಕರ ವಿಶೇಷ. ಅಂತಹ ಟಾರ್ಚ್ ಒಂದರ ಮೇಲೆ ಮೊದಲಿಂದ ಒಂದು ಕಣ್ಣಿತ್ತು. ಆದರೆ ಧಾರವಾಡದಲ್ಲಿ ಎಲ್ಲೂ ಕಣ್ಣಿಗೆ ಬಿದ್ದಿರಲಿಲ್ಲ. ಈಗ ಮುಂಬೈನಲ್ಲಿ ಫುಟ್ ಪಾತ್ ವ್ಯಾಪಾರಿ ಬಳಿ ಕಂಡ ಮೇಲೆ ಮುಗಿಯಿತು. ಖರೀದಿ ಮಾಡಿಸಿ, ಕೊಡಿಸಿಕೊಂಡೇಬಿಟ್ಟೆ. ಆದರೆ ಅದು ಸಿಕ್ಕಾಪಟ್ಟೆ ಸೆಲ್ ತಿನ್ನುತ್ತಿತ್ತು ಅಂತ ನಂತರ ಗೊತ್ತಾಯಿತು. ಏನೋ ಅಂದು ಆ ಟಾರ್ಚಿನಲ್ಲಿದ್ದ ಸೆಲ್ ನಲ್ಲಿ ಇನ್ನೂ ಪವರ್ ಇತ್ತು. ಅವನ್ನೇ ತೆಗೆದು ಅಜ್ಜನ ಟ್ರಾನ್ಸಿಸ್ಟರಿಗೆ ಹಾಕಿ ಕೊಟ್ಟೆ. ಅಜ್ಜ ಫುಲ್ impress ಆಗಿ, ಖುಷ್ ಆಗಿ, ಟ್ರಾನ್ಸಿಸ್ಟರ್ ಹಚ್ಚಿಕೊಂಡು, ಕಿವಿ ಹತ್ತಿರ ಇಟ್ಟುಕೊಂಡು, ಕಾರ್ ಡ್ರೈವ್ ಮಾಡಿಕೊಂಡು ಹೋಗಿಬಿಟ್ಟರು. ಮುಂದೆ ಆ ನನ್ನ ಟಾರ್ಚ್ ಮುರ್ಡೇಶ್ವರದಲ್ಲಿ ಕಣ್ಮರೆಯಾಯಿಯಿತು. ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದ ತಂದೆಯವರು ಎಲ್ಲೋ misplace ಮಾಡಿಕೊಂಡುಬಿಟ್ಟಿದ್ದರು. ಹೋಗಿದ್ದೇ ಒಳ್ಳೇದಾಯಿತು ಅನ್ನಿ. ಆ ಟಾರ್ಚಿಗೆ ಬ್ಯಾಟರಿ ಸೆಲ್ ಹಾಕುತ್ತ ಹೋಗಿದ್ದರೆ ದಿವಾಳಿ ತೆಗೆಯಬೇಕಾಗುತ್ತಿತ್ತು. ಕಳೆದು ಹೋಗಿ ರೊಕ್ಕ ಉಳಿಯಿತು.

ಇಂದಿರಾ ಗಾಂಧಿ ಹತ್ಯೆಯ ಬಳಿಕ, ಮುಂಬೈನಲ್ಲಿ, ಅದೂ ನಾವಿದ್ದ ತುಂಬ posh ಕೊಲಾಬಾ ಏರಿಯಾದಲ್ಲಿ, ಏನೂ ಗಲಭೆ ಗಿಲಭೆ ಆಗಿರಲಿಲ್ಲ. ದೇಶದ ಬೇರೆ ಕಡೆ ಆದ ಗಲಭೆ ನೋಡಿ ಕೆಲ ಮಂದಿ ತಾವಾಗೇ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದರು. ಮನೆ ಹತ್ತಿರದಲ್ಲೇ ಇದ್ದ ಒಬ್ಬ ಸರ್ದಾರ್ಜೀ ಅಂಗಡಿ ಮಾತ್ರ ಬಂದಾಗಿತ್ತು. ನಾವು ವಾಪಸ್ ಬರೋ ತನಕಾ ಆ ಸರ್ದಾರ್ಜೀ ಅಂಗಡಿ ಬಾಗಿಲು ತೆಗೆದಿರಲಿಲ್ಲ. ಅದು ನೆನಪಿದೆ. ಅದ್ಯಾಕೆ ನೆನಪಿದೆ ಅಂದರೆ ಅವನ ಅಂಗಡಿಗೆ ಒಂದೆರೆಡು ಸಲ ಹೋಗಿದ್ದೆ. ಬ್ಯಾಟರಿ ಟಾರ್ಚಿಗೆ ಬಲ್ಬ್ ತಂದುಕೊಳ್ಳಲು. ನಮ್ಮ ಚೈನಾ ಬ್ಯಾಟರಿಗೆ ಅಲ್ಲ. ಅಲ್ಲೇ ನೆಂಟರ ಮನೆಯಲ್ಲಿದ್ದ ಎಲ್ಲ ಬ್ಯಾಟರಿ ಟಾರ್ಚ್ ತೊಗೊಂಡು, ಪುಕುಳಿ ಕುಟ್ಟಿ, ಬಿಚ್ಚಿ ನೋಡೋ ಅಬ್ಬರದಲ್ಲಿ ಬಲ್ಬ್ ಒಂದೆರೆಡು ಬಾರಿ ಢಂ ಅಂದಿತ್ತು. ನಾವು ಹವ್ಯಕರು ಬ್ಯಾಟರಿ ಟಾರ್ಚ್ ಹೊತ್ತಲಿಲ್ಲ ಅಂದರೆ ಪುಕುಳಿ, ಅಂದರೆ ಬ್ಯಾಟರಿ ಪುಕುಳಿ, ತಟ್ಟಿ ತಟ್ಟಿ ಹೊತ್ತಿಸಲು ನೋಡುತ್ತೇವೆ. ಒಮ್ಮೊಮ್ಮೆ ಬ್ಯಾಟರಿ ಪುಕುಳಿ ತಟ್ಟುವ ಅಬ್ಬರದಲ್ಲಿ ಬಲ್ಬು ಮತ್ತೊಂದು ಮಟಾಶ್ ಆಗಿಹೋಗುತ್ತವೆ. ಏನು ಮಾಡಲಿಕ್ಕೆ ಬರುತ್ತದೆ? collateral damage. ಹೋದವರ ಮನೆ ಸಾಮಾನು ಮುಟ್ಟೋದೇ ತಪ್ಪು. ಅಂತಾದರಲ್ಲಿ ಮುಟ್ಟಿದ್ದೊಂದೇ ಅಲ್ಲದೇ ಹಾಳು ಮಾಡಿದ್ದು ದೊಡ್ಡ ತಪ್ಪು. ಅದನ್ನೇ ಸರಿಪಡಿಸೋಣ ಅಂತ ಇದ್ದ ಬಿದ್ದ ಒಂದೆರೆಡು ರೂಪಾಯಿ ಜೋಡಿಸಿಕೊಂಡು ಸರ್ದಾರ್ಜೀ ಅಂಗಡಿಗೆ ಹೋಗಿ, ಗುಟ್ಟಾಗಿ ಬಲ್ಬ್ ತಂದು, ಅದು ನೆಂಟರ ಮನೆ ಬ್ಯಾಟರಿಗೆ ಸರಿ ಹೊಂದದೇ, ಮತ್ತೆ ಅದನ್ನು ಹಿಂದೆ ಕೊಡಲು ಹೋದಾಗ ಸರ್ದಾರ್ಜೀ ಕೆಟ್ಟ ಮುಖ ಮಾಡಿ, ಅವನಿಗೆ ಹರಕು ಮುರುಕು ಹಿಂದಿಯಲ್ಲಿ ಏನೋ ಹೇಳಿ, ಅವ 'ಇದೇ ಕೊನೆ. ಮುಂದೆ ಬದಲು ಮಾಡಿ ಕೊಡಲ್ಲ,' ಅನ್ನುವ ರೀತಿಯಲ್ಲಿ ರೋಪ್ ಹಾಕಿ, ಬೇರೆ ಬಲ್ಬ್ ಕೊಟ್ಟು ಕಳಿಸಿದ್ದ. ಪುಣ್ಯಕ್ಕೆ ಅದು ಬರೋಬ್ಬರಿ ಫಿಟ್ ಆಗಿ, ನೆಂಟರ ಮನೆ ಬ್ಯಾಟರಿ ಮೊದಲಿನ ಸ್ಥಿತಿಗೆ ಬಂದಿತ್ತು. ಅಬ್ಬಾ! ಆತಂಕ ದೂರವಾಗಿತ್ತು. 'ಮಾಣಿ ಬಂದು ಬ್ಯಾಟರಿ ಹಾಳುಗರಿದು ಹೋದ,' ಅನ್ನುವ ಅಪಖ್ಯಾತಿ ತಪ್ಪಿತ್ತು. ಆವಾಗ ನಮಗೆ ಬ್ಯಾಟರಿ ಮಳ್ಳು ಅಂತ ಕಾಣುತ್ತದೆ. ಅದಕ್ಕೇ ಕಂಡ ಕಂಡ ಬ್ಯಾಟರಿಯ ಪುಕಳಿ ತಟ್ಟಿ ತಟ್ಟಿ ಬುರುಡೆ ಬಿಚ್ಚುತ್ತಿದ್ದೆ. ಒಳಗಿನ ಮೆಕ್ಯಾನಿಸಮ್ ಅರಿಯಲು. ಬೇರೆ ಬೇರೆ ವಯಸ್ಸಿಗೆ ನಮಗೆ ಬೇರೆ ಬೇರೆ ಮಳ್ಳುಗಳಿದ್ದಿದ್ದು ಬೇರೆ ಮಾತು ಬಿಡಿ. ಈಗ ಓದೋದು, ಬರೆಯೋದು ಬಿಟ್ಟರೆ ಬೇರೆ ಯಾವದೂ ಮಳ್ಳು ಇದ್ದ ಹಾಗಿಲ್ಲ. ಇದೆಲ್ಲ ಕಾರಣಗಳಿಂದ ಅಂಗಡಿ ಮುಚ್ಚಿಕೊಂಡು ಹೋಗಿದ್ದ ಬ್ಯಾಟರಿ ಬಲ್ಬಿನ ಸರ್ದಾರ್ಜೀ ಇನ್ನೂ ನೆನಪಿನಿಂದ ಮಾಸಿಲ್ಲ.

ಇಂದಿರಾ ಗಾಂಧಿ ಹತ್ಯೆ ಬಿಟ್ಟರೆ ಇನ್ನೂ ಹಲವು ವಿಶೇಷಗಳಿದ್ದವು ಆ ಮುಂಬೈ ಪ್ರವಾಸಕ್ಕೆ. ನಾವಿದ್ದ ಮನೆಯ ಮುಂದೇ ಸಮುದ್ರ. ನೋಡಲು ಮಾತ್ರ. ಹೋಗಲಿಕ್ಕೆ ದಾರಿ ಇರಲಿಲ್ಲ. ಎಲ್ಲ ನೌಕಾದಳದವರ ನಿಗರಾಣಿಯಲ್ಲಿತ್ತು. ಮನೆ ಮುಂದೇ 'ಸಾಗರ್ ಸಂಗೀತ್' ಎಂಬ ಸುಮಾರು ಮೂವತ್ತು ಮಹಡಿಗಳ ಗಗನಚುಂಬಿ ಕಟ್ಟಡವಿತ್ತು. ಅದರ ಟಾಪ್ ಫ್ಲೋರಿನಲ್ಲಿ ಆಕಾಲದ ಖ್ಯಾತ ಹಿಂದಿ ಸಿನೆಮಾ ತಾರೆ ನೂತನ್ ಇರುತ್ತಿದ್ದಳು.

ನೂತನ್

ನೂತನ್ ಅಂತ ಹೇಳಿದರೆ 'ನೀತೂ ಸಿಂಗಾ!?' ಅಂತ ಕೇಳಿ ನಾವು ಮಳ್ಳಾಗಿದ್ದೆವು. ಆ ವಯಸ್ಸಿನಲ್ಲಿ ನೂತನ್ ಯಾರೋ ನೀತೂ ಸಿಂಗ್ ಯಾರೋ? ಎಲ್ಲ ಒಂದೇ. ಅಂತೂ ಒಂದು ದಿವಸ ಸಂಜೆ ಹೊರಗೆ ಹೋಗಿ, ಆ ಗಗನಚುಂಬಿ ಕಟ್ಟಡದ ಲಿಫ್ಟ್ ಸುತ್ತ ಮುತ್ತ ಕಾಯುತ್ತ ನಿಂತು, ಹೊರಗಿಂದ ಬಂದು ಲಿಫ್ಟ್ ಸೇರಿಕೊಂಡ ನೂತನ್ ಎಂಬ ತಾರೆಯನ್ನು ನೋಡಿ ಬಂದಾಯಿತು. 'ಅವಳೇ ನೋಡಿ ನೂತನ್,' ಅಂತ ಯಾರೋ ತೋರಿಸಿದರು. ನಾವು ಒಟ್ಟು ಆಕಡೆ ನೋಡಿ, ನೂತನ್ ನೋಡಿದ್ದೂ ಆಯಿತು, ಡನ್ ಅಂತ ಒಂದು ಚೆಕ್ ಮಾರ್ಕ್ ಹಾಕಿದೆವು ಅನ್ನಿ.

ನೂತನ್ ಮಗ ಮೋಹನೀಶ್ ಬಹ್ಲ್ ತನ್ನ ಆಕಾಲದ ಗರ್ಲ್ ಫ್ರೆಂಡ್ ಕಿಮಿ ಕಾಟ್ಕರ್ ಜೊತೆ

ಆಕೆಯ ಮಗ ಮೋಹನೀಶ್ ಬೆಹಲ್ ಆಗ ಇನ್ನೂ ಇಪ್ಪತ್ತು ವರ್ಷದ ಪಡ್ಡೆ ಹುಡುಗ. ಆ ಕಾಲದ ಫೇಮಸ್ ಮಾಡೆಲ್ ಕಿಮಿ ಕಾಟ್ಕರ್ ಅವನ ಆವತ್ತಿನ ಗರ್ಲ್ ಫ್ರೆಂಡ್. ಅಂತೆಲ್ಲ ಹಿರಿಯರು ಹೇಳುತ್ತಿದ್ದರು. ಇಂಪೋರ್ಟೆಡ್ ಕಾರ್ ಒಂದನ್ನು ಸುಂಯ್ಯ ಅಂತ ಫಾಸ್ಟಾಗಿ ಓಡಿಸಿಕೊಂಡು ಹೋಗಿ ಬಂದು ಮಾಡುತ್ತಿದ್ದ ನೂತನಳ ಮಗ ಮೋಹನೀಶ್. ಪಕ್ಕದಲ್ಲಿ ಯಾವದೋ ಒಂದು ಪಟಾಕಾ ಹುಡುಗಿ ಕೂತಿರುತ್ತಿತ್ತು. ಅವಳು ಕಿಮಿ ಕಾಟ್ಕರ್ ಅಂತೆ. ಅಜ್ಜನ ಮನೆ ದೊಡ್ಡ ಬಾಲ್ಕನಿಯಿಂದ ಎಲ್ಲ ನೋಡಿದ್ದು ನೆನಪಿದೆ. ೧೯೮೬ ರಲ್ಲಿ ಮುಂದೆ ಎರಡು ವರ್ಷಗಳ ಬಳಿಕ 'ಟಾರ್ಜನ್' ಎಂಬ ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರಳ 'ವಿಶ್ವರೂಪ' ದರ್ಶನವಾಗಿ ಜನ್ಮ ಪಾವನವಾಯಿತು. 'ಕಾಡಿನ ರಾಜ' ಕನ್ನಡ ಸಿನೆಮಾದಲ್ಲಿ ಮಲಯಾಳಿ ಕುಟ್ಟಿ ದೀಪಾ, 'ಟಾರ್ಜನ್' ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರ್ ನೋಡದಿದ್ದರೆ ಈ ಜೀವನವೇ ವ್ಯರ್ಥ. ಈ ಮೊದಲು ನೋಡಿಲ್ಲ ಅಂದರೆ ಏನೂ ಚಿಂತೆ ಮಾಡದಿರಿ. ಅವೆಲ್ಲ ಈಗ ಯೂಟ್ಯೂಬ್ ಮೇಲೆ ಲಭ್ಯ. ಈಗ ನೋಡಿ ಕಣ್ಣು ತಂಪು ಮಾಡಿಕೊಳ್ಳಿ. ಅಷ್ಟೇ ಹೆಂಡತಿ ಮಕ್ಕಳ ಮುಂದೆ ನೋಡಿ, ಸಿಕ್ಕಿ ಬಿದ್ದು, ನಿಮ್ಮದು ನಾಯಿಪಾಡಾದರೆ ಅದಕ್ಕೆ ನಾವು ಜವಾಬ್ದಾರರಲ್ಲ.

ಮುಂಬೈಗೆ ಉಳಿಯಲು, ನೋಡಲು ಅಂತ ಹೋಗಿದ್ದು ಅದೇ ಕೊನೆ. ೧೯೭೬, ೧೯೮೪ ಎರಡೇ ಎರಡು ಸಲ ಮುಂಬೈನಲ್ಲಿ ಇದ್ದು ಬಂದಿದ್ದು. ಉಳಿದೆಲ್ಲ ಟೈಮ್ ನಲ್ಲಿ ಕೇವಲ ಟ್ರಾನ್ಸಿಟ್ ಅಥವಾ ಹೆಚ್ಚೆಂದರೆ ಒಂದೆರೆಡು ದಿವಸದ ಆಫೀಸ್ ಕೆಲಸ ಅಷ್ಟೇ.

ಇವತ್ತು ಇಂದಿರಾ ಗಾಂಧಿ ಮೂವತ್ತನೇ ಪುಣ್ಯ ತಿಥಿ. ಇದೆಲ್ಲ ಯಾಕೋ ನೆನಪಾಯಿತು.

ಇಂದಿರಾ ಗಾಂಧಿಯ ಹತ್ಯೆಯ ದಿನ ನೀವೆಲ್ಲಿದ್ದಿರಿ? ಏನು ಮಾಡುತ್ತಿದ್ದಿರಿ? ಪ್ಲೀಸ್ ಹೇಳಿ :)

ಮುಂದಿನ ಬ್ಲಾಗ್ ಪೋಸ್ಟಿನಲ್ಲಿ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಒಂದು ಸಂಭವನೀಯ ಅಂತರಾಷ್ಟ್ರೀಯ ಷಡ್ಯಂತ್ರದ ಭಯಂಕರ ರೋಚಕ ವಿವರಗಳ ಬಗ್ಗೆ ಬರೆಯಲಿದ್ದೇನೆ. ನಿರೀಕ್ಷಿಸಿ.
-- ಇಲ್ಲಿದೆ ನೋಡಿ. (http://maheshuh.blogspot.com/2014/11/blog-post.html)


3 comments:

Vimarshak Jaaldimmi said...


Very good "kunde tatting" episode!

ವಿ.ರಾ.ಹೆ. said...

ಇಂದಿರಾಗಾಂಧಿ ಕೊಲೆಯಾಗಿದ್ದು ನಂಗೆ ಎಷ್ಟೋ ವರ್ಷಗಳ ನಂತರ ತಿಳಿಯಿತು. ಯಾಕಂದ್ರೆ ೧೯೮೪ರಲ್ಲಿ ನನಗೆ ಎರಡೇ ವರ್ಷ ವಯಸ್ಸು :) ರಾಜೀವ್ ಗಾಂಧಿ ಕೊಲೆಯಾದ ದಿನದ ನೆನಪಿದೆ!

Mahesh Hegade said...

Thanks Vikas. ನಾ ಬಾಂಬೆಗೆ ಹೋಪ ದಿನಾ ನಿಂಗ ಎಲ್ಲಾ ಧಾರವಾಡದಲ್ಲೇ ಇದ್ದಿದ್ದಿ. ಬಪ್ಪ ಹೊತ್ತಿಗೆ ವಾಪಸ್ ಹೋಗಿಗಿದಿ. ಇನ್ನೂ ಸುಮಾರ್ ನೆನಪಿದ್ದು.