Tuesday, July 29, 2014

ನೇಪಾಳ ಅರಮನೆ ಹತ್ಯಾಕಾಂಡ 'ಹೀಗೂ' ಆಗಿರಬಹುದೇ?

ಜೂನ್ ೧, ೨೦೦೧. ನೇಪಾಳದ ಇತಿಹಾಸದಲ್ಲಿ ಕರಾಳ ದಿನ. ಯುವರಾಜ ದೀಪೇಂದ್ರ ತನ್ನ ತಂದೆ, ತಾಯಿ, ತಂಗಿ, ತಮ್ಮಂದಿರನ್ನು ಗುಂಡಿಕ್ಕಿ ಕೊಂದುಬಿಟ್ಟ. ಇನ್ನೂ ಹಲವು ಬಂಧುಗಳನ್ನು ಗುಂಡಿಕ್ಕಿ ಗಾಯಗೊಳಿಸಿದ. ಕೊನೆಗೆ ತಾನೂ ಸಹ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಇದು ಜಗತ್ತಿಗೆ ಹೇಳಿದ 'ಅಧಿಕೃತ' ಸುದ್ದಿ. ಆಗಿದ್ದು ಹೀಗೆಯೋ ಅಥವಾ ಸತ್ಯ ಕಥೆ ಬೇರೇನೋ ಇತ್ತೋ..........!?

ಇಂತಹ ದೊಡ್ಡದೊಂದು ಹತ್ಯಾಕಾಂಡ ಆಗಿದ್ದಕ್ಕೆ ಕೊಟ್ಟ ಕಾರಣ ಇಷ್ಟೇ.  ಯುವರಾಜ ದೀಪೇಂದ್ರ ದೇವಯಾನಿ ರಾಣಾ ಎಂಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ರಾಜ ಪರಿವಾರಕ್ಕೆ, ಮುಖ್ಯವಾಗಿ ತಾಯಿ ರಾಣಿ ಐಶ್ವರ್ಯ ಮತ್ತು ತಂದೆ ದೊರೆ ಬೀರೇಂದ್ರ ಇವರಿಗೆ, ಆ ಸಂಬಂಧ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ವೈಮನಸ್ಸು ಬಂದಿತ್ತು. ಆದಿನ ರಾತ್ರೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಯುವರಾಜ ತನ್ನ ಕುಟುಂಬವನ್ನು ಢಂ ಢಂ ಅಂತ ಯದ್ವಾ ತದ್ವಾ ಗುಂಡು ಹಾರಿಸಿ ನಿರ್ನಾಮ ಮಾಡಿದ.

ಈ 'ಅಧಿಕೃತ' ಮಾಹಿತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ಆವತ್ತು ರಾತ್ರಿ ಅರಮನೆಯಲ್ಲಿ ಒಂದು ಔತಣ ಕೂಟವಿತ್ತು. ಅದು ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ನಡೆಯುವ ಔತಣ ಕೂಟ. ರಾಜ ಪರಿವಾರದ ಎಲ್ಲರಿಗೆ ಆಮಂತ್ರಣ ಇರುತ್ತಿತ್ತು. ಮಹಾರಾಜನ ಕುಟುಂಬ, ಅವನ ಸಹೋದರ, ಸಹೋದರಿಯರ ಕುಟುಂಬಗಳು, ರಾಣಿ ಐಶ್ವರ್ಯಾಳ ಸಹೋದರ, ಸಹೋದರಿಯರ ಕುಟುಂಬ ಹೀಗೆ ಒಂದು ತರಹದ extended family get-together.

ಅಂತಹ ಆ ಔತಣ ಕೂಟಕ್ಕೆ ಒಬ್ಬ ಅತಿ ಮುಖ್ಯ ವ್ಯಕ್ತಿ ಗೈರು ಹಾಜರಾಗಿದ್ದ. ಅವನೇ ದೊರೆ ಬೀರೇಂದ್ರನ ಖಾಸಾ ತಮ್ಮ ಜ್ಞಾನೇಂದ್ರ! ಒಂದು ವೇಳೆ ಮಹಾರಾಜ ಬೀರೇಂದ್ರ, ಯುವರಾಜ ದೀಪೇಂದ್ರ,  ಇನ್ನೊಬ್ಬ ಯುವರಾಜ ನಿರಂಜನ ಇವರೆಲ್ಲ ಏನಾದರೂ ಮೃತರಾಗುವ ಸಂದರ್ಭ ಬಂದಿದ್ದರೆ ರಾಜನಾಗಲು ಪಾಳಿಯಲ್ಲಿ ನಿಂತವ ಯಾರು ಅಂತ ನೋಡಿದರೆ  ಔತಣ ಕೂಟಕ್ಕೆ ಬರದೇ ಕೈಯೆತ್ತಿದ್ದ ಇದೇ ಜ್ಞಾನೇಂದ್ರ! ಜ್ಞಾನೇಂದ್ರ ಏನೋ ಸಬೂಬು ಕೊಟ್ಟಿದ್ದ, 'ಬೇರೆ ಕೆಲಸದ ಮೇಲೆ ನೇಪಾಳದ ಬೇರೆ ಭಾಗದಲ್ಲಿ ಇರುತ್ತೇನೆ. ಆದ್ದರಿಂದ ಬರಲಾಗುವದಿಲ್ಲ,' ಅಂತ. ಆಗಲಿದ್ದ ಹತ್ಯಾಕಾಂಡದ ಬಗ್ಗೆ ಯಾವದೇ ಮಾಹಿತಿ ಜ್ಞಾನೇಂದ್ರನಿಗೆ ಇರಲಿಲ್ಲ ಅಂದಿಟ್ಟುಕೊಂಡರೂ, ಆದ ಹತ್ಯಾಕಾಂಡದಿಂದ ಅತಿ ಹೆಚ್ಚಿನ ಲಾಭ (ನೇಪಾಳದ ರಾಜ ಸಿಂಹಾಸನ) ಅವನಿಗೇ ಸಿಗುತ್ತಿದ್ದರಿಂದ ಆದ ಹತ್ಯಾಕಾಂಡದಲ್ಲಿ ಅವನ ಪಾತ್ರವಿತ್ತೆ ಅನ್ನುವದರ ಮೇಲೆ ಸಂಶಯವಂತೂ ಬಂದೇ ಬರುತ್ತದೆ. ಯಾವದೇ ಅಪರಾಧ ಆದಾಗ ನೋಡುವದೇ ಯಾರಿಗೆ ಅದನ್ನು ಮಾಡಲು, ಮಾಡಿಸಲು motive ಇತ್ತು ಅಂತ. motive ಇರುವದು ಬರುವ ಲಾಭದಿಂದ. ದೊರೆ ಬೀರೇಂದ್ರ ಮತ್ತು ಅವನ ಸಂತಾನ ಸಾಯುವದರಿಂದ ಜ್ಞಾನೇಂದ್ರನ ರಾಜ ಕುಟುಂಬದ ಶಾಖೆಗೆ ಮ್ಯಾಕ್ಸಿಮಮ್ ಲಾಭ ಇತ್ತು. ಅದೇ motive ಕೂಡ ಆಗಿತ್ತಾ? ಯಾರೂ ತನಿಖೆ ಮಾಡಲು ಹೋಗಿಲ್ಲ.

ಔತಣ ಕೂಟದ ಮೊದಲು, ಎಲ್ಲ ಜನ ಬಂದು ಸೇರುತ್ತಿದ್ದಂತೆಯೇ, ಯುವರಾಜ ದೀಪೇಂದ್ರನೇ ಎಲ್ಲರಿಗೂ ಕೇಳಿ ಕೇಳಿ ಅವರವರ ಡ್ರಿಂಕ್ ಮಾಡಿಕೊಡುತ್ತಿದ್ದ. ಹಾಗೆಯೇ ತಾನೂ ಸಹಿತ ವಿಸ್ಕಿ ಹೀರುತ್ತ, ಸಿಗರೇಟ್ ಸೇದುತ್ತ ಇದ್ದ. ಯುವರಾಜ ಮತ್ತು ಅವನದೇ ವಯಸ್ಸಿನ ಇತರ ಸೋದರ ಸಂಬಂಧಿಗಳು ಗಾಂಜಾ ಹೊಡೆದಿದ್ದಂತೂ ಖಾತ್ರಿಯಿತ್ತು. ಇನ್ನೂ ಮತ್ತಿತರ ಮಾದಕ ದ್ರವ್ಯಗಳನ್ನೂ ಸೇವಿಸಿದ್ದರೆ? ಇರಬಹದು. ಅವರಿಗೆ ಅದೆಲ್ಲದರ ಅಭ್ಯಾಸ, ಚಟ ಎಲ್ಲ ಇತ್ತು. ದೀಪೇಂದ್ರನ ಕುಡಿತದ, ಗಾಂಜಾ ಹೊಡೆಯುವ ಕೆಪ್ಯಾಸಿಟಿ ಸಿಕ್ಕಾಪಟ್ಟೆ ಅಪಾರ. ಬಾಟಲಿಗಟ್ಟಲೆ ಎಣ್ಣೆ ಹೊಡೆದರೂ ಸ್ಥಿಮಿತ ಮಾತ್ರ ಕಳೆದುಕೊಳ್ಳುತ್ತಿರಲಿಲ್ಲ ದೀಪೇಂದ್ರ.

ಸುಮಾರಾಗಿ ಆಪರಿ ಕುಡಿದರೂ, ಮಾದಕ ದ್ರವ್ಯ ಸೇವಿಸಿದರೂ ಏನೂ ಆಗದೇ ಆರಾಮ ಬಿಂದಾಸ್ ಇರುತ್ತಿದ್ದ ದೀಪೇಂದ್ರ ಆವತ್ತು ಮಾತ್ರ ಫುಲ್ ಔಟ್ ಆಗಿಬಿಟ್ಟ. ಔಟ್ ಅಂದ್ರೆ ಫುಲ್ ಔಟ್. ಪ್ರಜ್ಞೆ ತಪ್ಪಿದಂತೆ ಆಗಿ, ಫುಲ್ ಫ್ಲಾಟ್ ಆಗಿಬಿಟ್ಟ. ಬಿಲಿಯರ್ಡ್ಸ್ ಆಡುತ್ತಿದ್ದವ, ತಲೆಗೆ ಚಕ್ಕರ್ ಬಂದವನಂತೆ ಕೆಳಗೆ ಕೂತು, ಅಲ್ಲೇ ಫುಲ್ ಮಲಗಿಬಿಟ್ಟ. ಈಕಡೆ ಪರಿವೆ ಸಹ ಇರಲಿಲ್ಲ. ಎಲ್ಲರಿಗೂ ಅದೇ ಆಶ್ಚರ್ಯ. ಏನಾಯಿತಪ್ಪ ಇವನಿಗೆ? ಅಂತ. ಆವತ್ತು ಕುಡಿದಿದ್ದರ ಹತ್ತು ಪಟ್ಟು ಕುಡಿದರೂ ಏನೂ ಆಗದಿದ್ದವ ಏನೋ ಒಂದೆರೆಡು ಪೆಗ್ ಹಾಕಿ, ಒಂದೆರೆಡು ಗಾಂಜಾ ಜುರ್ಕಿ ಎಳೆದಿದ್ದೇ ಏನು ಫುಲ್ ಔಟ್ ಆಗಿಬಿಟ್ಟನಲ್ಲ? ಅಂತ ಎಲ್ಲರಿಗೂ ಆಶ್ಚರ್ಯ. ರಾಜ ಬೀರೇಂದ್ರ ಮತ್ತು ರಾಣಿ ಅದೇ ಟೈಮಿಗೆ ಅರಮನೆಗೆ ಎಂಟ್ರಿ ಕೊಡುತ್ತಿದ್ದರು. ಪೂರ್ತಿ ಔಟ್ ಆಗಿ, ನೆಲದ ಮೇಲೆ ಫ್ಲಾಟ್ ಆದ ಯುವರಾಜನನ್ನು ನೋಡಿದರೆ ನೊಂದುಕೊಂಡಾರು ಅಂತ ಹೇಳಿ ಸೋದರ ಸಂಬಂಧಿಗಳು, ಕೆಲಸದವರು ಎಲ್ಲ ಸೇರಿ, ಔತಣ ಕೂಟದ ಕೋಣೆಯಿಂದ ಸುಮಾರು ದೂರದಲ್ಲಿದ್ದ ದೀಪೇಂದ್ರನ ಕೋಣೆಗೆ ಅವನನ್ನು ಅನಾಮತ್ ಹೊತ್ತುಕೊಂಡು ಹೋಗಿ, ಮಂಚದ ಮೇಲೆ ಮಲಗಿಸಿ ಬಂದಿದ್ದರು. ಅವನ ಅವಸ್ಥೆ ನೋಡಿದವರು ಅವನು ಅಷ್ಟು ಬೇಗ ಏಳುತ್ತಾನೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. 'ಅಧಿಕೃತ' ಕಥೆ ಪ್ರಕಾರ ರಾಜಕುಮಾರ ದೀಪೇಂದ್ರ ಏಳುವದೊಂದೇ ಅಲ್ಲ, ಎದ್ದು ಬಂದವನೇ ಎಲ್ಲರನ್ನೂ ಗುಂಡಿಕ್ಕಿ ಸಹ ಕೊಂದುಬಿಟ್ಟ! ಅದೂ ಶಾಸ್ತ್ರೋಕ್ತವಾಗಿ ಪೂರ್ಣ ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಬಂದು ಕೊಂದಿದ್ದ. ಅದೂ ಒಂದೇ ಸಲ ಕೊಲ್ಲಲಿಲ್ಲ. ಗುಂಡು, ಮದ್ದು ಖರ್ಚಾತು ಅಂತ ಹೇಳಿ, ಎರಡು ಮೂರು ಸಲ ತನ್ನ ಕೋಣೆಗೆ ಹೋಗಿ, ಬಂದೂಕುಗಳಿಗೆ ಗುಂಡು ತುಂಬಿಕೊಂಡು ತುಂಬಿಕೊಂಡು ಬಂದು ಕೊಂದಿದ್ದ. ಇದೆಲ್ಲ ಮಾಡಿದವ ಕೆಲವೇ ನಿಮಿಷಗಳ ಹಿಂದೆ ಫುಲ್ ಚಿತ್ತಾಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದ. ಅಧಿಕೃತ ಕಥೆ ನಂಬಲು ಸ್ವಲ್ಪ ಕಷ್ಟ!

ಯುವರಾಜ ದೀಪೇಂದ್ರ ತನ್ನ ಕುಟುಂಬದ ತಂದೆ ಬೀರೇಂದ್ರ , ತಾಯಿ ಐಶ್ವರ್ಯ, ತಂಗಿ ಶ್ರುತಿ, ತಮ್ಮ ನಿರಂಜನ ಇವರನ್ನು ಕೊಂದೇ ಬಿಟ್ಟ. ಅತ್ತೆ, ಮಾವ, ಚಿಕ್ಕಪ್ಪ, ಅಜ್ಜಿ ಇತರನ್ನು ಗುಂಡಿಟ್ಟು ಗಾಯಗೊಳಿಸಿದ. ಅಲ್ಲಿ ನೆರೆದವರಲ್ಲಿ ಒಬ್ಬನೇ ಒಬ್ಬ ಏನೂ ಆಗದೇ ಬಚಾವ್! ಅವನು ಯಾರು ಅಂತ ನೋಡುತ್ತ ಹೋದರೆ ಅವನೇ ಮತ್ತೊಬ್ಬ ಯುವರಾಜ ಪಾರಸ್! ಈ ಪಾರಸ್ ಯಾರು ಅಂತ ನೋಡಿದರೆ ಅವನು ಜ್ಞಾನೇಂದ್ರನ ಮಗ! ಜ್ಞಾನೇಂದ್ರನ ನಂತರ ರಾಜನಾಗುವವ! ಈ ಪಾರಸನನ್ನು, 'ಎಲ್ಲರಿಗೂ ಗುಂಡಿಟ್ಟ ದೀಪೇಂದ್ರ ನಿನ್ನೊಬ್ಬನನ್ನೇ ಹೇಗೆ ಬಿಟ್ಟ?' ಅಂತ ಕೇಳಿದರೆ ಪಾರಸ್ ಏನೆಂದುಬಿಟ್ಟ ಗೊತ್ತೇ? 'ಪ್ಲೀಸ್, ಅಣ್ಣಾ, ನನ್ನನ್ನು ಬಿಟ್ಟು ಬಿಡು. ಏನೂ ಮಾಡಬೇಡ, ಅಂತ ಬೇಡಿಕೊಂಡೆ. ಅದಕ್ಕೇ ನನ್ನನ್ನು ಬಿಟ್ಟು ಬಿಟ್ಟ!!!!!' ತನ್ನ ಅತ್ಯಂತ ಪ್ರೀತಿಯ ಕಿರಿಯ ತಮ್ಮ ನಿರಂಜನನ ಬೆನ್ನಿಗೆ ಡಜನ್ನುಗಟ್ಟಲೆ ಗುಂಡು ನುಗ್ಗಿಸಿದ್ದ, ತಾಯಿಯ ಮುಖ ಪೂರ್ತಿ ಕೆತ್ತಿ ಹೋಗುವಂತೆ ಗುಂಡು ಹಾರಿಸಿದ್ದ ಎಂದು ಹೇಳಲಾದ ದೀಪೇಂದ್ರ ಪಾರಸ್ ಅನ್ನುವ ಸೋದರ ಸಂಬಂಧಿ (ಕಸಿನ್) ಮಾತು ಕೇಳಿ ಅವನನ್ನು ಬಿಟ್ಟು ಬಿಟ್ಟ, ಜೀವಂತ ಉಳಿಸಿಬಿಟ್ಟ!! ಇದನ್ನು ನಂಬಲು ಸಾಧ್ಯವೇ?

ಇದೆಲ್ಲ ಆಗಿದ್ದು ಮುಖ್ಯ ಅರಮನೆ ನಾರಾಯಣಹಿತಿ ಅರಮನೆಯಲ್ಲಿ. ಬೇಕಾದಷ್ಟು ಸೈನಿಕರು, ಇತರೆ ಕೆಲಸದವರು ಎಲ್ಲ ಇದ್ದರು. ಅವರೆಲ್ಲ ಏನು ಮಾಡುತ್ತಿದ್ದರು? ಇದೆಲ್ಲ ಒಂದು ಕ್ಷಣದಲ್ಲಿ ಆಗಿ ಹೋಯಿತು, ಯಾರಿಗೂ ಏನೂ ಮಾಡಲೂ ಸಾಧ್ಯವೇ ಆಗಲಿಲ್ಲ ಅಂದರೆ  ಅದು ಬೇರೆ ಮಾತು. ಇಷ್ಟೆಲ್ಲ ಹತ್ಯಾಕಾಂಡ ಆಗಿದ್ದು ಒಂದಿಷ್ಟು ನಿಮಿಷ, ಗಂಟೆಗಳ ಲೆಕ್ಕದಲ್ಲಿ. ಯಾರೂ ಏನೂ ಮಾಡಲೇ ಇಲ್ಲವೇ? ಅಲ್ಲಿದ್ದ ಕೆಲಸದವರನ್ನು, ಸೈನಿಕರನ್ನು ಕೇಳಿದರೆ, ಸ್ಟ್ಯಾಂಡರ್ಡ್ ಉತ್ತರ, 'ಗೊತ್ತಿಲ್ಲ. ನಾವೆಲ್ಲ ಹೊರಗಿದ್ದೆವು. ಒಳಗೆ ಏನಾಗುತ್ತಿತ್ತು ಅಂತ ನಮಗೆ ಗೊತ್ತಿಲ್ಲ. ಬಂದು ಏನಾದರೂ ಮಾಡಿ, ಕಾರ್ಯಾಚರಣೆ ಮಾಡಿ, ಪರಿಸ್ಥಿತಿ ಸಂಬಾಳಿಸಿ ಅಂತ ಆಜ್ಞೆ ಬರಲಿಲ್ಲ. ಇದೆಲ್ಲ ಅರಮನೆ ಕೆಲಸ. ಸರಿಯಾಗಿ ಆಜ್ಞೆ ಬರದೇ ನಾವೇ ನಾವೇ ಏನಾದರೂ ಮಾಡುವಂತಿಲ್ಲ.' ಇದಕ್ಕೆ ಏನಂತೀರಿ?

ಇನ್ನು ಗುಂಡು ತಿಂದು ಸತ್ತವರು, ಗಾಯಗೊಂಡವರು. ಅವರಲ್ಲಾದರೂ ಒಬ್ಬಿಬ್ಬರು ಎದ್ದು ಓಡಿ ಹೋಗುವದದನ್ನಾಗಲಿ ಅಥವಾ ಫೋನ್ ಅಥವಾ ಮತ್ತೆ ಬೇರೆ ರೀತಿ ಸಂಪರ್ಕ ಮಾಡಿ ಸಹಾಯವನ್ನು ಪಡೆಯುವದಾಗಲಿ ಮಾಡಲೇ ಇಲ್ಲ. sitting ducks ಅಂದ್ರೆ ಬಲಿಯ ಬಕರಾಗಳ ತರಹ ಗುಂಡು ತಿಂದು ಸತ್ತರು ಅಥವಾ ಗಾಯಗೊಂಡು ಬಿದ್ದರು. ಇದು ಸಹಜ ಅಂತ ಅನ್ನಿಸುವದಿಲ್ಲ. ಇನ್ನು ಅಲ್ಲಿದ್ದವರೆಲ್ಲ ಒಂದು ತರಹದ ಸಮೂಹ ಸನ್ನಿಗೆ ಒಳಗಾಗಿ, ಬಕರಾಗಳ ತರಹ ಏನೂ ಪ್ರತಿರೋಧ ಓಡ್ಡದೇ ಕೂತು ಗುಂಡು ತಿಂದರು ಅಂತ ನಂಬಿದರೆ ಅವರನ್ನೆಲ್ಲ ಅದು ಹೇಗೆ ಆ ತರಹದ ಸಮೂಹ ಸನ್ನಿಗೆ ಒಳಪಡಿಸಲಾಯಿತು?

ಎಲ್ಲರ ಮಾರಣ ಹೋಮ ಮುಗಿಸಿದ ಮೇಲೆ ದೀಪೇಂದ್ರ ತಾನೇ ತನ್ನ ತಲೆಗೆ ಒಂದು ಗುಂಡು ಹೊಡೆದುಕೊಂಡು ಸತ್ತ ಅಂತ ಹೇಳಲಾಯಿತು. ಸರಿ. ಇದನ್ನು ಒಪ್ಪೋಣ ಅಂತ ನೋಡಿದರೆ ಗುಂಡು ತಲೆ ಎಡಗಡೆಯಿಂದ ಹೊಕ್ಕಿತ್ತು. ಸಾಧಾರಣವಾಗಿ ಎಡಗೈ ಉಪಯೋಗ ಮಾಡುವವರು (ಎಡಚರು, ರೊಡ್ಡರು) ತಮ್ಮ ಕೈಯಾರೆ ತಲೆಗೆ ಬುಲೆಟ್ ಹೊಡೆದುಕೊಂಡ ರೀತಿಯಲ್ಲಿ. ಈಗ ಕೇಳಿ ಭಯಂಕರ ಕುತೂಹಲದ ಸಂಗತಿ! ರಾಜಕುಮಾರ ದೀಪೇಂದ್ರ ಎಡಚನಾಗಿರಲಿಲ್ಲ. ಅವನು ಪಕ್ಕಾ ಬಲಗೈ ಆಸಾಮಿ. ಇಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಮಾತ್ರ ಕೊಂಕಣ ಸುತ್ತಿ ಮೈಲಾರಕ್ಕೆ ಹೋದವನಂತೆ ಪಿಸ್ತೂಲನ್ನು ಎಡಗೈಗೆ ಕೊಟ್ಟು, ತಲೆಯ ಎಡಭಾಗಕ್ಕೆ ಗುಂಡು ಹೊಡೆದುಕೊಳ್ಳುತ್ತಾನೆ ಅಂದರೆ...........ಸಾಧ್ಯತೆ ಭಾಳ ಕಮ್ಮಿ  ಅನ್ನಿಸುವದಿಲ್ಲವೇ?

ನೇಪಾಳದ ಜನ ಹೇಳುವದೇನು? ಅನೇಕ ಥಿಯರಿಗಳಿವೆ. ಸಾಮಾನ್ಯ ಅಂಶಗಳಿಷ್ಟು. ಇದೆಲ್ಲ ಮಹಾರಾಜ ಬೀರೇಂದ್ರನ ತಮ್ಮ ಜ್ಞಾನೇಂದ್ರನ ಕುಟಿಲ ಕಾರಸ್ತಾನ. ಎಲ್ಲಿಯವರೆಗೆ ಬೀರೇಂದ್ರ ಮತ್ತು ಅವನ ಕುಟುಂಬದ ಶಾಖೆ ಇರುತ್ತದೆಯೋ ಅಲ್ಲಿಯವರೆಗೆ ಜ್ಞಾನೇಂದ್ರನಾಗಲೀ ಅವನ ಕುಟುಂಬದ ಶಾಖೆಯ ಯಾರೇ ಆಗಲಿ ಪಟ್ಟಕ್ಕೆ ಬರುವದು ಸಾಧ್ಯವೇ ಇರಲಿಲ್ಲ. ಹಾಗಾಗಿ ಇದ್ದ ಒಂದೇ ಮಾರ್ಗ ಅಂದರೆ ಬೀರೇಂದ್ರನ ಕುಟುಂಬದ ಶಾಖೆಯನ್ನು ಪೂರ್ತಿಯಾಗಿ ನಿರ್ನಾಮ ಮಾಡಿಬಿಡುವದು. ಬೀರೇಂದ್ರ, ಅವನಿಬ್ಬರು ಗಂಡು ಮಕ್ಕಳಾದ ದೀಪೇಂದ್ರ, ನಿರಂಜನ ಹೋಗಲೇ ಬೇಕು. ಅವನ ಹೆಂಡತಿ ಐಶ್ವರ್ಯ ಸಹಿತ ಹೋಗಿಬಿಡಬೇಕು. ಇಲ್ಲ ಅಂದರೆ ಪುತ್ರಶೋಕದ ತಾಯಿ ತನಿಖೆ ಅಂದು ಇದು ಅಂತ ಹಿಂದೆ ಬಿದ್ದರೆ ಕಷ್ಟ. ಕುಟುಂಬದ ಎಲ್ಲರನ್ನೂ ಕೊಂದೇ ಬಿಡಬೇಕು ಅಂದ ಮೇಲೆ ಮಗಳು ಶ್ರುತಿ ಯಾಕೆ ಇರಬೇಕು? ಆಕೆಯದು ವಿವಾಹವಾಗಿತ್ತು ನಿಜ. ಆದರೂ ರಿಸ್ಕ್ ಯಾಕೆ? ಆಕೆಯನ್ನೂ ತೆಗೆದುಬಿಟ್ಟರಾಯಿತು. ಇದು ಜ್ಞಾನೇಂದ್ರ ಹಾಕಿದ ಷಡ್ಯಂತ್ರದ ಸಾರಾಂಶವಾಗಿತ್ತೆ?

ಸರಿ, ಜ್ಞಾನೇಂದ್ರನ ತಲೆಯಲ್ಲಿ ಇಂತಹ ಭಯಂಕರ ವಿಚಾರ ಬಂದಿತ್ತು ಅಂತಲೇ ಇಟ್ಟುಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದೆಲ್ಲ ಮಾಡಲು ಸಾಧ್ಯವೇ? ಅದೂ ಸದ್ಯಕ್ಕೆ ಪಟ್ಟದಲ್ಲಿರುವ ಮಹಾರಾಜನ ವಿರುದ್ಧ ಈ ಮಟ್ಟದ ಷಡ್ಯಂತ್ರ!? ಈಗ ವಿಚಾರ ಮಾಡಬೇಕಾಗಿದ್ದು ಯಾರ ಬಗ್ಗೆ ಅಂದರೆ ಪಟ್ಟಭದ್ರ ಹಿತಾಸಕ್ತಿ ಹೊಂದಿದ್ದ ಬಲಶಾಲಿ ದೇಶಗಳು ಮತ್ತು ಅವುಗಳ ಬೇಹುಗಾರಿಕೆ ಸಂಸ್ಥೆಗಳು, covert operations, ರಾಜಕೀಯ ಹತ್ಯೆಗಳನ್ನು ಮಾಡುವ ಜನರ ಬಗ್ಗೆ. ಇಂತಹ ವಿಚಾರ ಬಂದ ಜ್ಞಾನೇಂದ್ರನೇ ಅಂತಹವರನ್ನು ಸಂಪರ್ಕಿಸಿ ಡೀಲ್ ಕುದುರಿಸಿದನೋ ಅಥವಾ ನೇಪಾಳದಲ್ಲಿ ಅಧಿಕಾರ ಬದಲು ಮಾಡಿ, ಜ್ಞಾನೇಂದ್ರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ತಮಗೆ ಬೇಕಾದ ಹಾಗೆ ನೇಪಾಳದಲ್ಲಿ ಅಂದಾ ದುಂಧಿ ಮಾಡುವ ಹುನ್ನಾರದಿಂದ ಬಲಿಷ್ಠ ದೇಶಗಳು ಜ್ಞಾನೇಂದ್ರನಿಗೆ ಇಂತಹದೊಂದು ಆಫರ್ ಕೊಟ್ಟವೋ? ಗೊತ್ತಿಲ್ಲ. ಮತ್ತೆ ಜ್ಞಾನೇಂದ್ರನನ್ನು ಒಂದು ತರಹದ ಇಕ್ಕಳಕ್ಕೆ ಸಿಕ್ಕಿ ಹಾಕಿಸಿದ್ದರೂ ಹಾಕಿರಬಹುದು ಈ ಪಟ್ಟಭದ್ರ ಹಿತಾಸಕ್ತಿಗಳು. ಯಾಕೆಂದ್ರೆ ಜ್ಞಾನೇಂದ್ರನನ್ನು ಬಿಟ್ಟರೆ ಇನ್ನೊಬ್ಬ ತಮ್ಮ ಧೀರೇಂದ್ರ ಅಂತ ಇದ್ದ. ಪರದೇಸಿ ಹೆಣ್ಣನ್ನು ಮದುವೆಯಾಗಿ ಪಟ್ಟಕ್ಕೆ ಬರುವ ಅರ್ಹತೆ ಕಳೆದುಕೊಂಡಿದ್ದ ಅವನು. ಆದ್ರೆ ಬಲಿಷ್ಠ ಶಕ್ತಿಗಳು ಹೀಗೂ ಬ್ಲಾಕ್ ಮೇಲ್ ಮಾಡಿರಬಹುದು, 'ಈಗಿನ ದೊರೆ ಬೀರೇಂದ್ರ ಹೋಗಲೇ ಬೇಕು. ಅದಂತೂ ನಿಶ್ಚಿತ. ಜ್ಞಾನೇಂದ್ರ, ನೀನು ನಮ್ಮ ಜೊತೆ ಅಡ್ಜಸ್ಟ್ ಮಾಡಿಕೊಂಡರೆ ನಿನ್ನನ್ನೇ ರಾಜನನ್ನಾಗಿ ಮಾಡುತ್ತೇವೆ. ಇಲ್ಲ ಅಂದರೆ ನಿನ್ನನ್ನೂ ಮುಗಿಸಿ ಧೀರೇಂದ್ರನನ್ನೋ ಅಥವಾ ಸಂಬಂಧವಿರದೇ ಇಲ್ಲದ ಇನ್ನ್ಯಾರನ್ನೋ ಸಿಂಹಾಸನದ ಮೇಲೆ ತಂದು ಕೂಡಿಸುವದು ಹೇಗೆ ಅಂತ ನಮಗೆ ಗೊತ್ತು. ಏನೋ ನಮ್ಮವ ಅಂತ ನಿನಗೇ ಮೊದಲ ಪ್ರಾಶಸ್ತ್ಯ. ಏನಂತೀ!?' ಅನ್ನುವ ಧಾಟಿಯಲ್ಲಿ ಯಾವದಾದರೂ ಬಲಿಷ್ಠ ದೇಶ, ಪಟ್ಟಭದ್ರ ಹಿತಾಸಕ್ತಿ ಸಿಕ್ಕಾಪಟ್ಟೆ ಒತ್ತಡ ಹಾಕಿತ್ತಾ? ಆಮಿಷ ಒಡ್ಡಿತ್ತಾ? ಹೌದಾದರೆ ಅದು ಜ್ಞಾನೇಂದ್ರನ ತಲೆಯಲ್ಲಿ ಗಿರಿಕಿ ಹೊಡೆಯುತ್ತಿದ್ದ ದುರಾಲೋಚನೆಗೆ ನೀರೆದಂತೆ. ಅಥವಾ ವಿಷದ ಬೀಜ ಬಿತ್ತಿದಂತೆ.

ಸರಿ, ಹತ್ಯಾಕಾಂಡದ ಹಿಂದಿನ ರೂವಾರಿ ಜ್ಞಾನೇಂದ್ರನೇ, ಮಾರಣ ಹೋಮ ಹೀಗೆಯೇ ಆಯಿತು ಅಂದುಕೊಳ್ಳೋಣ.  ಆಗಿದ್ದು ಹೇಗೆ? ಯಾರು ಮಾಡಿದರು? ಅದಕ್ಕೂ ನೇಪಾಳಿಗಳ ಉತ್ತರ ಇದೆ. ಆವತ್ತು ದೀಪೇಂದ್ರ ಕುಡಿಯುತ್ತಿದ್ದ ವಿಸ್ಕಿಯಲ್ಲೋ, ಸೇದುತ್ತಿದ್ದ ಗಾಂಜಾ ಸಿಗರೇಟಿನಲ್ಲೋ ಏನೋ ಬೆರೆಸಲಾಗಿತ್ತು. (ಹಾಗಂತ ಸರ್ಕಾರಿ ವರದಿ ಕೂಡ ಹೇಳಿದೆ ) ಅದಕ್ಕೇ ಅವತ್ತು, ಎಂದೂ ಕುಡಿದು ಎಚ್ಚರ ತಪ್ಪದ ದೀಪೇಂದ್ರ, ಔಟ್ ಆಗಿ ನೆಲದ ಮೇಲೆಯೇ ಅಡ್ಡವಾಗಿ ಮಲಗಿಬಿಟ್ಟ. ಅವನನ್ನು ಕೋಣೆಗೆ ಎತ್ತಿಕೊಂಡು ಹೋಗಿ ಮಲಗಿಸಿ ಬಂದಿದ್ದರು. ಅವನು ಈಕಡೆ ಖಬರೂ ಇಲ್ಲದಂತೆ ಮಲಗಿಯೇ ಇದ್ದ. ಆವಾಗ ಬಂದವನು ನಿಜವಾದ ಹಂತಕ ಅಥವಾ ಹಂತಕರು. ಬಂದವರೇ ಸಿಸ್ಟಮ್ಯಾಟಿಕ್ ಆಗಿ ಆರಿಸಿ ಆರಿಸಿ ಕೊಂದರು. ಬದುಕಿ ಉಳಿದವರು ದೀಪೇಂದ್ರನೇ ಎದ್ದು ಬಂದು ಗುಂಡಿಟ್ಟು ಕೊಂದ ಅಂತ ಸುಳ್ಳು ಹೇಳಿದರು. ಆವತ್ತು ಅವರೆಲ್ಲ ಬದುಕಿ ಉಳಿಯುಬೇಕು ಅಂತಿದ್ದರೆ ಹಾಗೆ ಸುಳ್ಳು ಹೇಳಲೇ ಬೇಕಾಗಿತ್ತು. ಇಲ್ಲವೆಂದರೆ ಅವರ್ಯಾರೂ ಬದುಕಿ ಉಳಿಯುತ್ತಿರಲಿಲ್ಲ. ಗಾಯಗೊಂಡು ಬದುಕಿ ಉಳಿದವರ ಮೇಲೆ ಹಾಗೆ ಒತ್ತಡ ಬಂದಿತ್ತಾ? ಇರಬಹದು. ಬದುಕಿ ಉಳಿದವರಾದರೂ ಯಾರು? ಪಾರಸ್ ಎಂಬ ಜ್ಞಾನೇಂದ್ರನ ಮಗ. ಅವನಂತೂ, 'ಅಣ್ಣನನ್ನು ಬೇಡಿಕೊಂಡು ಬಚಾವಾದೆ,' ಅಂತ ದೊಡ್ಡ ಭೋಂಗು ಬಿಟ್ಟಿದ್ದ. ಉಳಿದವರು ಜ್ಞಾನೇಂದ್ರನ ಪತ್ನಿ. ಆಕೆಗೂ ಗುಂಡು ಬಿತ್ತು ಅಂತ ಹೇಳಲಾಯಿತು. ಆಕೆಗೆ ನಿಜವಾಗಿಯೂ ಗುಂಡು ಬಿದ್ದಿತ್ತೆ? ಅಥವಾ ಬಿದ್ದಂತೆ ತೋರಿಸಲಾಯಿತೆ? ಅದೇ ದೊಡ್ಡ ಪ್ರಶ್ನೆ. ಇನ್ನು ಬೀರೇಂದ್ರನ ಇನ್ನೊಬ್ಬ ತಮ್ಮ ಧೀರೇಂದ್ರ ಗುಂಡು ತಿಂದು, ಆಸ್ಪತ್ರೆಯಲ್ಲಿ ಸತ್ತು ಹೋದ. ಅಥವಾ ಗಾಯಗೊಳಿಸಿ, ಆಸ್ಪತ್ರೆಯಲ್ಲಿ ಬದುಕಿಸಿಕೊಳ್ಳದೇ ಇರುವದೂ ಈ ಷಡ್ಯಂತ್ರದ ಒಂದು ಭಾಗವೇ ಆಗಿತ್ತೇ? ಇನ್ನು ರಾಜಕುಮಾರಿ ಶ್ರುತಿಯ ಗಂಡ. ಅವನಿಗೆ ಗುಂಡು ಬಿತ್ತು. ಬಿದ್ದ ಗುಂಡಿನ ಗಾಯವನ್ನೂ ತೋರಿಸುತ್ತಾನೆ. ಬೀರೇಂದ್ರನ ಪೈಕಿ ಬದುಕುಳಿದವ ಅಂದ್ರೆ ಆ ಅಳಿಯನೊಬ್ಬನೇ. ಘಟನೆ ಸ್ವಲ್ಪ ನೈಜವಾಗಿರಲಿ, ಪೂರ್ತಿ ನಕಲಿ ಅನ್ನಿಸದಿರಲಿ ಅಂತ ಅವನಿಗೆ ಪ್ರಾಣ ಹೋಗದ ಹಾಗೆ ಗುಂಡು ಹೊಡೆದು ನಂತರ ಬದುಕಿಸಿಕೊಳ್ಳಲಾಯಿತೆ?

'ಏ ಬಿಡ್ರೀ! ಇದೆಲ್ಲ ನಂಬೋ ಮಾತೆನ್ರೀ?' ಅಂತ ಚಾಲೆಂಜ್ ಮಾಡಿದರೆ ಹೀಗೆಲ್ಲ ಹೇಳುವವರು ಜಾನ್ ಎಫ್ ಕೆನಡಿ ಹತ್ಯೆಯ ಬಗ್ಗೆ ಮಾತಾಡುತ್ತಾರೆ. ಕೆನಡಿ ಪಕ್ಕ ಕೂತಿದ್ದ ಜಾನ್ ಕೋನಲಿ ಅನ್ನುವವರಿಗೆ ಸಹ ಒಂದು ಗುಂಡು ಬಿದ್ದಿತ್ತು. ಆದರೆ ಸಾಯುವಂತಹ ಗುಂಡೇಟು ಅದಾಗಿರಲಿಲ್ಲ. ಕೆನಡಿ ಹತ್ಯೆಗೆ ನೈಜತೆ ಬರಲಿ ಅಂತ ಅವರಿಗೂ ಒಂದು ಗುಂಡು ಹಾಕಲಾಗಿತ್ತಾ? ಇನ್ನು ಕೆಲವೊಂದು ಪೋಲೀಸ್ ಎನ್ಕೌಂಟರಗಳಲ್ಲಿ ರೌಡಿಗಳಿಂದ ಗುಂಡೇಟು ಬಿತ್ತು ಅಥವಾ ರೌಡಿಗಳು ಅಟ್ಯಾಕ್ ಮಾಡಿದರು ಅಂತ ಪೊಲೀಸರು ಸುಖಾ ಸುಮ್ಮನೆ ಬ್ಯಾಂಡೇಜ್ ಸುತ್ತಿಕೊಂಡು ಓಡಾಡುವದನ್ನು ಅಥವಾ ಇನ್ನೂ ನೈಜವಾಗಿರಲಿ ಅಂತ ಒಬ್ಬ ಪೋಲೀಸ್ ಅಧಿಕಾರಿ ಪೇದೆಯೊಬ್ಬನ ಕಾಲಿಗೋ ಕೈಗೋ ಒಂದು ಗುಂಡು ಲೈಟಾಗಿ ತರಚುವಂತೆ ಹೊಡೆದು, 'ನೋಡ್ರೀ, ಇದು ಫೇಕ್ ಎನ್ಕೌಂಟರ್ ಅಲ್ಲವೇ ಅಲ್ಲ. ನಮ್ಮ ಪೇದೆಯೊಬ್ಬರಿಗೂ ಗುಂಡು ಬಿದ್ದಿದೆ,' ಅಂತ ದೊಡ್ಡ ಬ್ಯಾಂಡೇಜ್ ತೋರಿಸುವ ದೃಶ್ಯಗಳು ಬೇಕಾದಷ್ಟು ಮೂವಿಗಳಲ್ಲಿ ಬಂದು ಹೋಗಿವೆ. ಅವೆಲ್ಲ ಏನೂ ಪೂರ್ತಿ ಕಪೋಲಕಲ್ಪಿತ ಅಲ್ಲ ಬಿಡಿ. ಹಾಗೆಯೇ ನೇಪಾಳದ ಹತ್ಯಾಕಾಂಡದಲ್ಲೂ ಮೊದಲೇ ಪ್ಲಾನ್ ಮಾಡಿ ಇಡಲಾಗಿತ್ತು, ಯಾರಿಗೆ ಏನು ಮಾಡಬೇಕು ಅಂತ.  ಅವೆಲ್ಲ  ಡೀಟೇಲ್ಸ್ ಗಾಯಗೊಂಡು ಬದುಕುಳಿದ ಜನರಿಗೆ ಗೊತ್ತಿರಲಿಕ್ಕಿಲ್ಲ ಬಿಡಿ. ಯಾಕೆಂದರೆ ಎಷ್ಟೇ ಲೈಟಾಗಿ, ಒಂದೇ ಒಂದು ಗುಂಡು ಹೊಡಿತೀನಿ ಅಂತ ನೀವು ಏನೇ ಹೇಳಿದರೂ, ಏನೇ ಆಶ್ವಾಸನೆ ಕೊಟ್ಟರೂ ಒಪ್ಪುವ ಜನ ಕಮ್ಮಿ. ಅಂತವರಿಗೆ ಮಾಡುವದನ್ನು ಮಾಡಿ, ಎರಡನೇ ಬಾರಿ ಬದುಕಿ ಬಂದ ಸಂತಸದಲ್ಲಿ ಇದ್ದಾಗ ಅವರನ್ನು ತಮಗೆ ಬೇಕಾದ ಹಾಗೆ ಮಣಿಸುವದು ಸಹಿತ covert operation ಗಳ ಭಾಗವೇ ಆಗಿರುತ್ತದೆ. ಗುಂಡು ತಿಂದು ಬದುಕುಳಿದ ಬೀರೇಂದ್ರ, ಜ್ಞಾನೇಂದ್ರರ ವೃದ್ಧ ತಾಯಿ, ತಂಗಿ, ಬೀರೇಂದ್ರನ ಅಳಿಯ, ಇತರೆ ಕೆಲವು ಸಂಬಂಧಿಗಳು ಎಲ್ಲ ಅದೇ ಗುಂಪಿಗೆ ಸೇರಬಹುದಾದವರು. ಅವರೆಲ್ಲ ದೀಪೇಂದ್ರನೇ ಕೊಲೆಗಾರ ಅಂತ ನಂಬಿರಲೂಬಹುದು ಯಾಕೆಂದರೆ ಹಂತಕ ದೀಪೇಂದ್ರನ ಮುಖವಾಡ ಹಾಕಿಕೊಂಡು ಬಂದಿದ್ದನೇ ಅಂತ ಕೂಡ ಸಂಶಯ ಇದೆ. ಯಾಕೆಂದ್ರೆ ಹಂತಕನ ಮುಖದಲ್ಲಿ ಯಾವದೇ ಭಾವನೆಗಳು ಇರಲೇ ಇಲ್ಲವಂತೆ. cold blooded killer killing like a killing machine. ಹೊರಗೆ ಕತ್ತಲು, ಒಳಗೆ ಮಬ್ಬುಗತ್ತಲು ಇತ್ತು. ಕೆಲವರಂತೂ ಕುಡಿದು, ಗಾಂಜಾ ಸೇದಿ, ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ hallucinate ಕೂಡ ಆಗಿ ಏನೇನೋ ಊಹೆ ಮಾಡಿಕೊಂಡರಾ? ಎಲ್ಲವೂ ಸಾಧ್ಯ.

ತನಗೆ ತಾನೇ ಗುಂಡು ಹೊಡೆದುಕೊಂಡ ದೀಪೇಂದ್ರ ಸ್ಥಳದಲ್ಲೇ ಸಾಯಲಿಲ್ಲ. ಆಸ್ಪತ್ರೆಯಲ್ಲಿ ಸುಮಾರು ತಾಸುಗಳ, ದಿನಗಳ ನಂತರ, ದೊಡ್ಡ ಸರ್ಜರಿ ಆದ ನಂತರ ಸತ್ತ. ಅವನನ್ನು ಬದಕಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಲಾಯಿತೇ ಅಥವಾ ಸಾಯಲಿ ಎಂದೇ ಆಸ್ಪತ್ರೆಗೆ ಒಯ್ಯಲಾಗಿತ್ತೆ? ಎಚ್ಚರ ತಪ್ಪಿ ಮಲಗಿದ್ದ ದೀಪೇಂದ್ರನ ತಲೆಗೆ ಗುಂಡು ಹೊಡೆಯುವ ಸಂದರ್ಭದಲ್ಲಿ ಹಂತಕ ತಪ್ಪು ಮಾಡಿಕೊಂಡು ಎಡಗಡೆಯಿಂದ ಗುಂಡು ಹೊಡೆದು ಒಂದು ಸುಳಿವು ಬಿಟ್ಟು ಬಿಟ್ಟನೆ? ಯಾಕೆಂದ್ರೆ ಮೊದಲೇ ಹೇಳಿದಂತೆ ದೀಪೇಂದ್ರ ಬಲಗೈ ಉಪಯೋಗಿಸುವವ. ಎಡಚ ಆಗಿರಲಿಲ್ಲ. ಹಂತಕ ಅದೆಂಗೆ ಆ ತಪ್ಪು ಮಾಡಿದ? ಅಥವಾ ಊಹಾಪೋಹಗಳ ದಾರಿ ತಪ್ಪಿಸಲೆಂದೇ ಹಾಗೆ ಮಾಡಲಾಯಿತೇ?

ದೀಪೇಂದ್ರನ ಹುಡುಗಿ ದೇವಯಾನಿಗೆ ಏನು ಗೊತ್ತಿತ್ತು? ಆಕೆ ಆದಿನ ಸಂಜೆ, ರಾತ್ರಿ ಸುಮಾರು ಸರೆ ದೀಪೇಂದ್ರನ ಜೊತೆ ಮಾತಾಡಿದ್ದಳು. ಅದರಲ್ಲೇನೂ ಜಾಸ್ತಿ ವಿಶೇಷ ಇರಲಿಲ್ಲ ಬಿಡಿ.  ಅವರು ಬಹಳ ಸಲ ಫೋನ್ ಮೇಲೆ ಮಾತಾಡುತ್ತಿದ್ದರು. ಆದರೆ ಆವತ್ತು ಯಾಕೋ ಏನೋ ದೇವಯಾನಿ ದೀಪೇಂದ್ರನಿಗೆ ಫೋನ್ ಮಾಡಿದ ನಂತರ ದೀಪೇಂದ್ರನ ಆಪ್ತ ಕಾರ್ಯದರ್ಶಿಗಳ ಜೊತೆ ಮಾತಾಡಿ, 'ಪ್ಲೀಸ್! ಅರಮನೆಗೆ ಹೋಗಿ ದೀಪೇಂದ್ರನ ವಿಚಾರಿಸಿಕೊಳ್ಳಿ,' ಅಂತ ಒತ್ತೊತ್ತಿ ಹೇಳಿದ್ದಳು. ಅವಳಿಗೆ ಏನಾದರೂ ಸುಳಿವು ಸಿಕ್ಕಿತ್ತಾ? ಕೇಳೋಣ ಅಂದರೆ ದೇವಯಾನಿ ಹತ್ಯೆಯ ನಂತರ ಮಾತಾಡಲೇ ಇಲ್ಲ. ಭಾರತಕ್ಕೆ ಪರಾರಿಯಾಗಿಬಿಟ್ಟಳು.

ಇಷ್ಟೆಲ್ಲ ಆದ ಮೇಲೆ ಸರ್ಕಾರಿ ತನಿಖೆ ಅಂತ ಏನೋ ಮಾಡಿ ಮುಗಿಸಿದರು. ಅದರಲ್ಲಿ ಹೊಸದೇನೂ ಇರಲಿಲ್ಲ. ಅದು ಅಲ್ಲಿಯವರೆಗೆ ಅರಮನೆ ಬಿಡುಗಡೆ ಮಾಡಿದ್ದ ಸುದ್ದಿಯನ್ನು ಸಮರ್ಥಿಸಿ ರಬ್ಬರ್ ಸ್ಟ್ಯಾಂಪ್ ಹಾಕಿತು ಅಷ್ಟೇ. ತಿಪ್ಪೆ ಸಾರಿಸಿ ರಂಗೋಲಿ ಹಾಕಿದರು. ಕಿಸ್ಸಾ ಖತಂ.

ನೇಪಾಳಕ್ಕೆ ಇದೆಲ್ಲ ಹೊಸದಲ್ಲ ಬಿಡಿ. ಕಳೆದ ನೂರೈವತ್ತು ವರ್ಷಗಳಲ್ಲಿ ನೇಪಾಳದ ಅರಮನೆಗಳಲ್ಲಿ ಕಮ್ಮಿ ಕಮ್ಮಿ ಅಂದರೂ ಸುಮಾರು ಐದಾರು 'ಅರಮನೆ ಕ್ರಾಂತಿಗಳು' (palace coups) ಆಗಿವೆ. ಕೆಲವೊಂದರಲ್ಲಿ ದೊರೆಗಳನ್ನು ಕೇವಲ ಪದಚ್ಯುತಗೊಳಿಸಿ ಓಡಿಸಿದರೆ, ಕೆಲವೊಂದರಲ್ಲಿ ರಕ್ತ ಹರಿದಿದೆ, ಕೊಲೆಗಳಾಗಿವೆ. ನೇಪಾಳದ ಅರಮನೆ ಎಲ್ಲ ಅರಮನೆಗಳಂತೆಯೇ. ಅಲ್ಲಿಯೂ ಬೇಕಾದಷ್ಟು ರಾಗ, ದ್ವೇಷ, ಅನೈತಿಕ ಸಂಬಂಧಗಳು, ಅವುಗಳಿಂದ ಪ್ರೇರೇಪಿತ ಹತ್ಯೆಗಳು ಎಲ್ಲ ಆಗಿವೆ. ನಿಜವನ್ನು ಅರಿತವರು ಅಲ್ಲಲ್ಲಿ ಗುಸು ಗುಸು ಮಾತಾಡುತ್ತಾರೆ. ಆದರೆ ಚಿಕ್ಕ ದೇಶ. ರಾಜ ಮಹಾರಾಜರ ಆಡಳಿತ, ಸಂಪ್ರದಾಯ, ಹತೋಟಿ ಇದ್ದ  ದೇಶ. ಹಾಗಾಗಿ ಹೆಚ್ಚಿನ ಸುದ್ದಿ ಹೊರಗೆ ಬರುವದೇ ಇಲ್ಲ.

ಈ ಹಿಂದೆ ಅಮೇರಿಕಾದಲ್ಲಿ ಅಧ್ಯಕ್ಷ ಜಾನ್ ಕೆನಡಿ, ಅವರ ತಮ್ಮ ರಾಬರ್ಟ್ ಕೆನಡಿ, ಕಪ್ಪು ಜನರ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರು ಹತ್ಯೆಗೀಡಾದಾಗ ಅವೆಲ್ಲ ಯಾವದೇ ತರಹದ ಷಡ್ಯಂತ್ರಗಳು ಇಲ್ಲದೇ ಆದವು ಅಂತ ತಿಪ್ಪೆ ಸಾರಿಸಿದ್ದವು ಆಗಿನ ಸರ್ಕಾರಗಳು. ಆದರೆ ಜನ ತನಿಖೆ ಮಾಡುತ್ತ ಹೋದರು. ಮಾಹಿತಿ ಕಾಯಿದೆ ಅಡಿ ಕೇಳಿ ಮಾಹಿತಿ ಪಡೆದರು. ಸರ್ಕಾರದ ಮೇಲೆ ಒತ್ತಡ  ತಂದು ಉನ್ನತ ತನಿಖಾ ಸಮಿತಿಗಳ ನೇಮಕವಾಗುವಂತೆ ನೋಡಿಕೊಂಡರು. ಅವೆಲ್ಲದರ ಫಲ ಇವತ್ತು ಕೆನಡಿ ಹತ್ಯೆಗಳ ಒಳಸಂಚು ಪೂರ್ತಿಯಾಗಿ ಬಯಲಾಗಿದೆ. ನೇಪಾಳ ಹತ್ಯಾಕಾಂಡದ ಬಗ್ಗೆಯೂ ಬೇಕಾದಷ್ಟು ಮಾಹಿತಿ ಬರುತ್ತಿತ್ತೋ ಏನೋ. ಏನು ಮಾಡುವದು ಅದು ಒಂದು ತರಹ ಬೇರೆಯೇ ತರಹದ ದೇಶ. ಅಲ್ಲಿನವರ ಸದ್ಯದ ಪ್ರಯಾರಿಟಿಗಳೇ ಬೇರೆ.

ಇದೆಲ್ಲ ಮಾಹಿತಿ ಸಿಕ್ಕಿದ್ದು - Love and Death in Kathmandu: A Strange Tale of Royal Murder ಎನ್ನುವ ಪುಸ್ತಕ ಓದಿದಾಗ. ಇನ್ನೂ ಸಾಕಷ್ಟು ವಿವರಗಳಿವೆ. ರಾಜಮನೆತನದ ಇನ್ನೂ ಅನೇಕಾನೇಕ ಕಹಾನಿಗಳಿವೆ. conspiracy theories ವರ್ಗದಲ್ಲಿ ಓದಿದ ಒಂದು ಒಳ್ಳೆ ಪುಸ್ತಕ. ಹತ್ಯಾಕಾಂಡದ ವಿವರ ಬೇಡ ಅಂದರೂ ಬೇರೆ ಸಾಕಷ್ಟು ವಿಷಯಗಳಿವೆ. ನೇಪಾಳದ ಸೋಷಿಯಾಲಜಿ ಬಗ್ಗೆ ಒಂದು ಒಳ್ಳೆ ಪುಸ್ತಕ ಕೂಡ.


3 comments:

Anonymous said...


Interesting insights!

The picture of that maani wearing kari toppi & kari boot looks like east-west combo!

ವಿ.ರಾ.ಹೆ. said...

ಈ ಕತೆಯನ್ನು ತೆಗೆದುಕೊಂಡು ಕಲಸುಮೇಲೋಗರ ಮಾಡಿ ತೆಗೆದಿರುವ ಕನ್ನಡ ಸಿನೆಮಾ.. ಸೂಪರ್ ಸ್ಟಾರ್.. ನೋಡಲು ಕೊಂಡಿ ಇಲ್ಲಿದೆ: https://www.youtube.com/watch?from=zerodollarmovies.com&v=oZAEl4rp8ro

Mahesh Hegade said...

Thank you :)