Monday, July 14, 2014

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

೧೯೯೩ ಇಸವಿಯ ಆಗಸ್ಟ್ ತಿಂಗಳ ಒಂದು ದಿನ. ಲಂಡನ್ ನಗರದ ಮನೆಯೊಂದರಲ್ಲಿ ಫೋನ್ ರಿಂಗಾಯಿತು. ಮನೆಯಲ್ಲಿದ್ದ ಮನುಷ್ಯ ಫೋನ್ ಎತ್ತಿದರು.

"ಹಲೋ?"

"ಹಲೋ....."

"ಹಲೋ....ಹೇಳಿ?"

"ಲಾಯರ್ ರಾಮ್ ಜೇಠಮಲಾನಿ ಅವರಾ?"

"ಹೌದು. ನಾನೇ ರಾಮ್ ಜೇಠಮಲಾನಿ. ತಾವು?"

"ಸಲಾಂ ವಾಲೇಕುಂ. ಸಾಬ್, ನಾನು ದಾವೂದ್. ದಾವೂದ್ ಇಬ್ರಾಹಿಂ."

ಈಗ ಒಂದು ಕ್ಷಣ ತಬ್ಬಿಬ್ಬಾಗುವ ಸರದಿ ಭಾರತದ ಖ್ಯಾತ ಕ್ರಿಮಿನಲ್ ವಕೀಲ ರಾಮ್ ಜೇಠಮಲಾನಿ ಅವರದ್ದು. ಫೋನ್ ಮೇಲೆ ಆಕಡೆ ಇದ್ದವ ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ! ಆದರೂ ಸಾವರಿಸಿಕೊಂಡು ಮಾತು ಮುಂದುವರಿಸಿದರು.

"ಹಾಂ.....ಹೇಳಿ. ಏನು ವಿಷಯ?"

"ನಿಮಗೆ ಗೊತ್ತೇ ಇದೆ ರಾಮ್ ಸಾಬ್. ನಾನು ಈಗ most wanted ಪಟ್ಟಿಯಲ್ಲಿ ಇದ್ದೀನಿ. ನಾನಾಗೇ ವಾಪಸ್ ಭಾರತಕ್ಕೆ ಬಂದು, ಸರೆಂಡರ್ ಆಗಿಬಿಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ."

"ಬನ್ನಿ. ಅದಕ್ಕೇನು?"

"ಬರಲಿಕ್ಕೆ ನನ್ನ ಕೆಲವು ಷರತ್ತು ಇವೆ ಸಾಬ್......................."

"ಹಂ....ನನ್ನಿಂದ ಏನಾಗಬೇಕು? ಅದನ್ನು ಹೇಳಿ ದಾವೂದ್......."

"ಸಾಬ್, ನೀವು ಈ ಷರತ್ತುಗಳನ್ನು ಸರಕಾರಕ್ಕೆ ತಿಳಿಸಿ, ಸರಕಾರ ಇವುಗಳ ಬಗ್ಗೆ ಏನೆನ್ನುತ್ತದೆ ಅನ್ನೋದನ್ನ ನನಗೆ ವಾಪಸ್ ತಿಳಿಸುತ್ತೀರಾ? ಪ್ಲೀಸ್"

"ಪ್ರಯತ್ನ ಮಾಡೋಣ. ಷರತ್ತು ಹೇಳಿ....."

"೧) ನನ್ನನ್ನು ಕೇವಲ ಮುಂಬೈ ಸ್ಪೋಟಕ್ಕೆ ಸಂಬಂಧಿಸಿದ ಕೇಸುಗಳಲ್ಲಿ ಮಾತ್ರ ಬುಕ್ ಮಾಡಬೇಕು ೨) ಹಿಂಸೆಗೆ, ಟಾರ್ಚರ್ ಗೆ ಒಳಪಡಿಸಬಾರದು ೩) ಬಂಧನವನ್ನು ಗೃಹಬಂಧನಕ್ಕೆ ಮಾತ್ರ ಸೀಮಿತಗೊಳಿಸಬೇಕು"

"ಆಯಿತು. ನಿಮ್ಮ ಷರತ್ತುಗಳನ್ನ ಸರಕಾರಕ್ಕೆ ತಿಳಿಸಿ, ಸರ್ಕಾರ ಏನೆನ್ನುತ್ತದೆ ಅಂತ ತಿಳಿದುಕೊಂಡು ವಾಪಸ್ ನಿಮಗೆ ತಿಳಿಸುತ್ತೇನೆ."

"ಅಚ್ಛಾ ಸಾಬ್. ಬಡಿ ಮೆಹರ್ಬಾನಿ. ಬಹುತ್ ಶುಕ್ರಿಯಾ. ಖುದಾ ಹಾಫಿಜ್"

ಆಕಡೆ ಫೋನಿಟ್ಟ ಶಬ್ದ. ಈಕಡೆ ರಾಮ್ ಜೇಠಮಲಾನಿ ಫೋನ್ ಒಂದು ಕ್ಷಣ ತಡದೇ ಇಟ್ಟರು. ರಜಾ ಕಳೆಯಲೆಂದು ಲಂಡನ್ನಿಗೆ ಬಂದಿದ್ದರು. ಹಾಗಿರುವಾಗ ಅವರಿದ್ದ ಖಾಸಗಿ ಜಾಗದ ಫೋನ್ ನಂಬರ್ ಹುಡುಕಿ ತೆಗೆದು, ಬರೋಬ್ಬರಿ ಟೈಮಿಗೆ ಫೋನ್ ಮಾಡಿ, ಜೇಠಮಲಾನಿ ಅವರನ್ನು ಹಿಡಿದು ಮಾತಾಡಿದ್ದ ಡಾನ್ ದಾವೂದ್ ಇಬ್ರಾಹಿಂ. ಅವನ ದೊಡ್ಡ ಮಟ್ಟದ ಸಂಪರ್ಕಗಳಿಗೆ, ಅವುಗಳ ಆಪರಿ ವ್ಯಾಪ್ತಿಗೆ ಒಂದು ಮೆಚ್ಚುಗೆ ಮೂಡಿತು ಜೇಠಮಲಾನಿ ಅವರ ಮನದದಲ್ಲಿ.

ದಾವೂದ್ ಇಬ್ರಾಹಿಂ
ಸಂಭಾಷಣೆ ಮುಗಿಸಿದ ಖ್ಯಾತ ಕ್ರಿಮಿನಲ್ ವಕೀಲ ರಾಮ್ ಜೇಠಮಲಾನಿ ಒಂದು ಕ್ಷಣ ಕಣ್ಣು ಮುಚ್ಚಿ ಧ್ಯಾನಸ್ಥರಾದರು. ಫೋನ್ ಮಾಡಿ ಮಾತಾಡಿದ್ದು ದಾವೂದ್ ಅಲ್ಲ ಅಂತ ಸಂಶಯ ಪಡಲು ಕಾರಣ ಇರಲಿಲ್ಲ. ಮೊದಲೆಂದಾದರೂ ದಾವೂದ್ ತಮ್ಮ ಕಕ್ಷಿದಾರನಾಗಿದ್ದನೇ ಅಂತ ವಿಚಾರ ಮಾಡಿದರು. ಅವರ ನೆನಪಿನ ಶಕ್ತಿ ಭಯಂಕರ. ಏನನ್ನೂ ಎಂದೂ ಮರೆಯುವದಿಲ್ಲ. ದಾವೂದ್ ಇಬ್ರಾಹಿಂ ಎಂದೂ ಅವರ ನೇರ ಕಕ್ಷಿದಾರ ಆಗಿರಲೇ ಇಲ್ಲ. ಮತ್ತೆ ದಾವೂದ್ ಯಾಕೆ ಜೇಠಮಲಾನಿ ಅವರಿಗೇ ಫೋನ್ ಮಾಡಿದ?

ಹಾಂ! ಫ್ಲಾಶ್ ಆಯಿತು! ನೆನಪು ಬಂತು.

ಡೇವಿಡ್ ಪರದೇಸಿ! ದಾವೂದ್ ಗುಂಪಿನ ಒಬ್ಬ ಶಾರ್ಪ್ ಶೂಟರ್. ಅಮೀರ್ ಜಾದಾ ಪಠಾಣ್ ಎಂಬ ಎದುರಾಳಿ ಬಣದ ಗ್ಯಾಂಗಸ್ಟರನನ್ನು ಕೊಂದಿದ್ದ. ಯಾಕೆ ಕೊಂದಿದ್ದ ಅಂದ್ರೆ ಆ ಅಮೀರ್ ಜಾದಾ ಇದೇ ದಾವೂದನ ಹಿರಿಯಣ್ಣ ಶಬ್ಬೀರ್ ಇಬ್ರಾಹಿಂನನ್ನು ಕೊಂದು ಬಿಟ್ಟಿದ್ದ. ೧೯೮೦ ರ ಸಮಯ. ಅದು ಮುಂಬೈ ಭೂಗತ ಲೋಕದಲ್ಲಿ ದೊಡ್ಡ ಬದಲಾವಣೆಯ ಕಾಲ. ದಾವೂದ್ ಸಹೋದರರು ಮುಂಬೈ ಭೂಗತ ಸಾಮ್ರಾಜ್ಯದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಹಪಾಹಪಿಯಲ್ಲಿದ್ದರು. ಇದ್ದ ಒಬ್ಬ ಹಳೆಯ ಡಾನ್ ಹಾಜಿ ಮಸ್ತಾನನಿಗೆ ವಯಸ್ಸಾಗಿತ್ತು. ಗ್ಯಾಂಗ್ ಮುಂದುವರಿಸಿಕೊಂಡು ಹೋಗಬಹುದಾದ ವಂಶದ ಕುಡಿ ಇರಲಿಲ್ಲ. ದಾವೂದ್ ಇಬ್ರಾಹಿಮ್ಮನೇ ಸ್ವಂತ ಹೋಗಿ, 'ಚಾಚಾ ಜಾನ್, ನಿಮಗೆ ವಯಸ್ಸಾಯಿತು. ಸುಮ್ಮನೆ ಮಲಗಿ ಹಾಯಾಗಿರಿ,' ಅಂತ ಹೇಳಿ, ಹಾಜಿ ಮಸ್ತಾನನನ್ನು ಮಲಗಿಸಿ, ಸೊಳ್ಳೆಪರದೆ ಕಟ್ಟಿಕೊಟ್ಟು ಬಂದಿದ್ದ. ದಾವೂದನ ನಮ್ರ ವಿನಂತಿಯೊಂದಿಗೆ ಒಂದು ಫೈನಲ್ ಖಡಕ್ ಬೆದರಿಕೆ ಇದ್ದಿದ್ದನ್ನು ಗಮನಿಸದಷ್ಟು ಮೂರ್ಖನಾಗಿರಲಿಲ್ಲ ಹಾಜಿ ಮಸ್ತಾನ್. 'ಒಳ್ಳೆದಾಗಲಿ ಬೇಟಾ,' ಅಂತ ಆಶೀರ್ವಾದ ಮಾಡಿಯೇ ಕಳಿಸಿದ್ದ. ದಂಧೆಯಿಂದ ಸ್ವಯಂ ನಿವೃತ್ತನಾಗಿದ್ದ. ಇನ್ನೊಬ್ಬ ಡಾನ್ ಮದರಾಸಿ ವರದರಾಜನ್ ಮೊದಲಿಯಾರ ಪೋಲೀಸರ ಕಾಟ ತಡಿಯಲಾಗದೆ ವಾಪಸ್ ಮದ್ರಾಸಿಗೆ ಹೋಗಿಬಿಟ್ಟಿದ್ದ. ಅವನ ಆರೋಗ್ಯವೂ ಎಕ್ಕುಟ್ಟಿ ಹೋಗಿ, ಸ್ವಲ್ಪೇ ದಿವಸಗಳಲ್ಲಿ ಸತ್ತೂ ಹೋದ. ಅವನಡಿಯಲ್ಲಿದ್ದ ಧಾರಾವಿ ಸುಲಭವಾಗಿ ದಾವೂದ್ ತೆಕ್ಕೆಯೊಳಗೆ ಬಂದಿತ್ತು. ಕೊನೆಗೆ ಉಳಿದವನೆಂದರೆ ದೈತ್ಯ ಪಠಾಣ ಡಾನ್ ಕರೀಂ ಲಾಲಾ. ಅವನಿಗೂ ವಯಸ್ಸಾಗಿತ್ತು. ಆದರೆ ಅವನಿಗೆ ದೈತ್ಯ ರೂಪಿ ಮಕ್ಕಳ ಶನಿ ಸಂತಾನವಿತ್ತು. ಹಾಗಾಗಿ ಅವನು ಮುಂಬೈ ಭೂಗತ ಲೋಕದ ಮೇಲಿನ ಅಧಿಪತ್ಯವನ್ನು ಫೈಟ್ ಕೊಡದೇ ಬಿಟ್ಟು ಕೊಡುವ ಚಾನ್ಸೇ ಇರಲಿಲ್ಲ. ಅದರ ಪ್ರತಿಫಲವೇ ಒಂದು ಭಯಂಕರ ಗ್ಯಾಂಗ್ ವಾರ್! ಮೊದಲ ಬಲಿಯೇ ದಾವೂದ್ ಇಬ್ರಾಹಿಮ್ಮನ ಅಣ್ಣ ಶಬ್ಬೀರ ಇಬ್ರಾಹಿಂ. ತನ್ನ ಆವತ್ತಿನ, ಆಹೊತ್ತಿನ ಯಾವದೋ ಹುಡುಗಿ ಜೊತೆ ಕಾರಿನಲ್ಲಿ ಹೋಗುತ್ತಿದ್ದವನ್ನು ಮುಂಬೈನ ಪೆಟ್ರೋಲ್ ಬಂಕಿನಲ್ಲಿ ಕರೀಂ ಲಾಲಾನ ಮಕ್ಕಳು ಮತ್ತು ಸೋದರ ಸಂಬಂಧಿ ಸಮದ್ ಖಾನ್ ಕೂಡಿ ಕೊಂದಿದ್ದರು. ಕರೀಂ ಲಾಲಾನ ಗ್ಯಾಂಗ್ ನಿರ್ನಾಮ ಮಾಡಿಯೇ ತೀರುತ್ತೇನೆ ಅಂತ ಅವತ್ತೇ ನಿರ್ಧರಿಸಿದ ದಾವೂದ್ ಅಮೀರ್ ಜಾದಾನ ಸುಪಾರಿ ಇದೇ ಡೇವಿಡ್ ಪರದೇಸಿಗೆ ಕೊಟ್ಟಿದ್ದ. ವಕೀಲನ ವೇಷದಲ್ಲಿ ಕೋರ್ಟಿಗೆ ಬಂದ ಡೇವಿಡ್, ಬೇರೆ ಯಾವದೋ ಪ್ರಕರಣದ ವಿಚಾರಣೆಗೆ ಕೋರ್ಟಿಗೆ ಬಂದಿದ್ದ ಅಮೀರ್ ಜಾದಾನನ್ನು ಕೋರ್ಟಿನ ಕಟಕಟೆಯಲ್ಲಿಯೇ ಗುಂಡಿಕ್ಕಿ ಕೊಂದು ಬಿಟ್ಟಿದ್ದ. ಇನ್ನೊಬ್ಬನಾದ ಅಲಂ ಜೇಬ್ ಪಠಾಣನನ್ನು ಗುಜರಾತ್ ಪೊಲೀಸರು ಎನ್ಕೌಂಟರ್ ಮಾಡಿ ಕೊಂದರು. ಅವರೇ ಎನ್ಕೌಂಟರ್ ಮಾಡಿದರೋ ಅಥವಾ ದಾವೂದನೇ ಸುಪಾರಿ ಕೊಟ್ಟು ಮಾಡಿಸಿದನೋ ಗೊತ್ತಿಲ್ಲ. ಸಮದ್ ಖಾನನನ್ನು ಆ ಕಾಲದಲ್ಲಿ ದಾವೂದನ ಖಾಸ್ ಬಲಗೈ ಬಂಟ ಮತ್ತು ಈಗಿನ ಬದ್ಧ ವೈರಿ ಛೋಟಾ ರಾಜನ್ ತನ್ನ ಸಂಗಡಿಗರೊಂದಿಗೆ ಕೂಡಿ ಕೊಂದು ಬಿಟ್ಟ. ಹೀಗೆ ಗ್ಯಾಂಗ್ ನಿರ್ನಾಮವಾದ ಮೇಲೆಯೇ ಕರೀಂ ಲಾಲಾ ಶರಣಾಗತನಾಗಿ, ದಾವೂದ್ ಮುಂಬೈ ಭೂಗತ ಲೋಕದ ಏಕೈಕ ದೊರೆಯಾಗಿ ಮೆರೆಯತೊಡಗಿದ್ದು. ೧೯೮೩-೮೪ ರ ಕಾಲ. ಇದೇ ಟೈಮಿನಲ್ಲಿ ದಾವೂದ್ ಮುಂಬೈ ಬಿಟ್ಟು ದುಬೈಗೆ ಉಡ್ಕಿ ಹಾರಿದ್ದು. ದುಬೈನಲ್ಲಿ ಇದ್ದರೆ ಸುರಕ್ಷಿತ ಮತ್ತೆ ಸಕತ್ ಐಶಾರಾಮದ ಜೀವನ ಮಾಡಬಹುದು ಅಂತ ಹೇಳಿ ದಾವೂದ್ ದುಬೈ ಸೇರಿಕೊಂಡಿದ್ದ. ಮುಂಬೈ ಭೂಗತ ಜಗತ್ತನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದ್ದ.

ಇಷ್ಟೆಲ್ಲ ಇತಿಹಾಸ ಇತ್ತು ಡೇವಿಡ್ ಪರದೇಸಿ ಎಂಬ ದಾವೂದ್ ಬಂಟನ ನಾಮಧೇಯಕ್ಕೆ. ಜೇಠಮಲಾನಿ ಅವರಿಗೆ ಎಲ್ಲ ನೆನಪಾಯಿತು.

ಇಂತಹ ಡೇವಿಡ್ ಪರದೇಸಿ ಪರವಾಗಿ ಸುಮಾರು ಹತ್ತು ವರ್ಷದ ಹಿಂದೆ ಅಂದರೆ ೧೯೮೨-೮೩ ರ ಟೈಮಿನಲ್ಲಿ ವಕಾಲತ್ತು ವಹಿಸಿ, ಕೊಲೆ ಕೇಸಿಂದ ಬಿಡುಗಡೆ ಮಾಡಿಸಿದ್ದರು ಜೇಠಮಲಾನಿ. ಆದರೆ ಆಗ ದಾವೂದನ ನೇರ ಸಂಪರ್ಕ ಬಂದಿರಲಿಲ್ಲ. ಬೇರೆ ಯಾರೋ ಬಂದು ಕೇಸ್ ವಹಿಸಿ ಹೋಗಿದ್ದರು. ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಜೇಠಮಲಾನಿ ಕೇಸ್ ಗೆದ್ದು ಕೊಟ್ಟಿದ್ದರು. ಅದೇ ಆಧಾರದ ಮೇಲೆ ಈಗ ದಾವೂದ್ ಫೋನ್ ಮಾಡಿರಬೇಕು ಅಂತ ಅಂದುಕೊಂಡರು ಜೇಠಮಲಾನಿ. [ನೂರಾರು ಜನರ ಎದುರೇ, ಅದರಲ್ಲೂ ನ್ಯಾಯಾಧೀಶರೇ ಮುಂದೇ ಕೊಲೆ ಮಾಡಿದ್ದ ಡೇವಿಡ್ ಪರದೇಸಿಯನ್ನು ರಾಮ್ ಜೇಠಮಲಾನಿ ಖುಲಾಸೆ ಮಾಡಿಸಿದ್ದೇ ಒಂದು ಐತಿಹಾಸಿಕ ಕೋರ್ಟ್ ಕೇಸ್ ಮತ್ತು ತೀರ್ಪು. ಆರೋಪಿಗೆ ತಪ್ಪು ಒಪ್ಪಿಕೋ ಅಂದು ಬಿಟ್ಟರು ಜೇಠಮಲಾನಿ! ನಂತರ ಆರೋಪಿ ಕೊಲೆ ಮಾಡಲು ಏನು ಕಾರಣ ಅಂತ ಮನ ಕಲಕುವ ಕಹಾನಿ ಹೆಣೆದು, ಸಹಾನುಭೂತಿ ಮೂಡಿಸಿ ನಿರ್ದೋಷಿ ಅಂತ ಬಿಡಿಸಿಕೊಂಡು ಬಂದಿದ್ದರು. ಕಾನೂನಿನ ವಿದ್ಯಾರ್ಥಿಗಳು ಓದಲೇ ಬೇಕಾದ ಕೇಸಂತೆ ಅದು.]

ಹೀಗೆ ಲಂಡನ್ನಿನಲ್ಲಿ ಕುಳಿತು ದಾವೂದ್ ಇಬ್ರಾಹಿಮ್ಮನ ಷರತ್ತುಗಳನ್ನು ಆಲಿಸಿದ ರಾಮ್ ಜೇಠಮಲಾನಿ ಮುಂದೇನು ಮಾಡಿದರು?

ತಕ್ಷಣ ಮುಂಬೈನಲ್ಲಿದ್ದ ತಮ್ಮ ಮಗ ಮಹೇಶ ಜೇಠಮಲಾನಿಗೆ ಫೋನ್ ಮಾಡಿದರು. ವಿಷಯ ಎಲ್ಲ ತಿಳಿಸಿ, ಮುಂದೆ ಏನು ಮಾಡಬೇಕು ಅನ್ನುವ ಸೂಚನೆ ಕೊಟ್ಟರು. ದೊಡ್ಡ ವಕೀಲರಾಗಿ ಹೆಸರು ಮಾಡಿದ್ದ ಅವರ ಮಗ ಮಹೇಶ ಆ ಕಾಲದ ಮುಖ್ಯಮಂತ್ರಿ ಶರದ್ ಪವಾರ್, ಪೋಲೀಸ್ ಕಮಿಷನರ್ ಅಮರ್ಜಿತ್ ಸಾಮ್ರಾ, ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ಮಹೇಶ ನಾರಾಯಣ ಸಿಂಗ ಅವರೆಲ್ಲ ಕೂಡಿ ಕರೆದಿದ್ದ ಸಭೆಗೆ ಹೋದರು. ದಾವೂದ್ ಇಬ್ರಾಹಿಂ ವಿಧಿಸಿದ್ದ ಷರತ್ತುಗಳನ್ನು ವಿವರಿಸಿದರು. ಸರಕಾರ ವಿಚಾರಿಸಿ, ಪರಾಮರ್ಶಿಸಿ ತಿಳಿಸುತ್ತೇನೆ ಅಂತ ಹೇಳಿತು. "ದಾವೂದ್ ಇಬ್ರಾಹಿಮ್ಮನ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಷರತ್ತು ಗಿರತ್ತು ಇಲ್ಲದೆ ಬಂದು ಶರಣಾದರೆ ಸರಿಯಾಗಿ, ನ್ಯಾಯಬದ್ಧವಾಗಿ ವಿಚಾರಣೆ ನಡೆಸಿ, ಮೊಕದ್ದಮೆ ದಾಖಲಿಸಿ, ಎಲ್ಲ ನಾಗರಿಕರಿಗೆ ಇರುವ ಎಲ್ಲ ಹಕ್ಕು, ಸೌಲಭ್ಯ ಒದಗಿಸಲಾಗುವದು. ಯಾವದೇ ರೀತಿಯ ವಿಶೇಷ ಸವಲತ್ತು, ರಿಯಾಯತಿ ಕೊಡಲು ಸಾಧ್ಯವಿಲ್ಲ," ಅಂತ ಸರ್ಕಾರ ಹೇಳಿಬಿಟ್ಟಿತು. ಮಹೇಶ ಜೇಠಮಲಾನಿ ಇದನ್ನು ಲಂಡನ್ನಿನಲ್ಲಿದ್ದ ತಮ್ಮ ತಂದೆಯವರಿಗೆ ತಿಳಿಸಿದರು.

ಸ್ವಲ್ಪ ದಿವಸಗಳ ನಂತರ ದಾವೂದ್ ಮತ್ತೆ ಫೋನ್ ಮಾಡಿದ್ದ. ರಾಮ್ ಜೇಠಮಲಾನಿ ಆಗಿದ್ದ ಬೆಳವಣಿಗೆಗಳ ಬಗ್ಗೆ ವಿಷಯ ತಿಳಿಸಿದರು. ಅವರಿಗೆ ಮತ್ತೊಮ್ಮೆ ಶುಕ್ರಿಯಾ ಹೇಳಿದ ದಾವೂದನಿಂದ ಮತ್ತೊಮ್ಮೆ ಈ ತರಹದ 'ಬಂದು ಸರೆಂಡರ್ ಆಗ್ತೀನಿ' ಅನ್ನೋ ಧಾಟಿಯ ಫೋನ್ ಯಾರಿಗೂ ಬಂದಿಲ್ಲ. ಅದು ಒನ್ ಟೈಮ್ ಆಫರ್ ಆಗಿತ್ತು ಅನಿಸುತ್ತದೆ. ನಂತರ ಬಂದಿದ್ದೆಲ್ಲ ಕೇವಲ ಹಫ್ತಾ ವಸೂಲಿ, ಧಮಕಿ, ಬೆದರಿಕೆ, ಒತ್ತಡ ಹಾಕಲು ಬಂದ extortion ಟೈಪಿನ ಕರೆಗಳೇ.

ಮುಂಬೈ ಸರಣಿ ಸ್ಪೋಟಗಳು ಆಗಿದ್ದು ಮಾರ್ಚ್ ೧೯೯೩. ದಾವೂದ್ ಫೋನ್ ಮಾಡಿದ್ದು ಆಗಸ್ಟ್ ೧೯೯೩ ರಲ್ಲಿ. ಸರಣಿ ಸ್ಪೋಟದ ವರೆಗೆ ದುಬೈನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ ದಾವೂದ್, ಯಾವಾಗ ಸಂಚಿನ ಹೂರಣವೆಲ್ಲ ಹೊರಬಂದು, ತನ್ನ ಹೆಸರು ಬಂತೋ ಆವಾಗ ಪಾಕಿಸ್ತಾನಕ್ಕೆ ಓಡಿಬಿಟ್ಟ. ಅಥವಾ ಹಾಗೆ ಸುದ್ದಿಯಾಯಿತು. ಪಾಕಿಸ್ತಾನದ ISI ಬೇಹುಗಾರಿಕೆ ಸಂಸ್ಥೆ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದೆ ಅಂತ ಸುದ್ದಿಯಾಯಿತು. ನಂತರದ ಸುದ್ದಿ ಅಂದರೆ - ದಾವೂದ್ ಪಾಕಿಸ್ತಾನದಲ್ಲಿ ಅಕ್ಷರಶ ISI ಬಂಧನದಲ್ಲಿ ಇದ್ದಾನೆ. ಅವನನ್ನು ISI ಎಂದೂ ಬಿಟ್ಟು ಕೊಡಲಾರದು ಅಂತೆಲ್ಲ ಸುದ್ದಿ. ಹಾಗಿದ್ದರೆ ತಾನಾಗಿಯೇ ಬಂದು ಶರಣಾಗುವ ಪ್ರಸ್ತಾವ ದಾವೂದ್ ಹೇಗೆ ಮಾಡಿದ್ದ? ಅಂದರೆ ಅವನಿಗೆ ಆವಾಗ ಅಷ್ಟು ಸ್ವಾತಂತ್ರ ಇತ್ತೇ? ಇತ್ತು ಅಂತಾದರೆ ಅವನು ISI ಹಿಡಿತದಲ್ಲಿ ಇರಲಿಲ್ಲವೇ? ಅಥವಾ ಬೇರೆಯೇ ಏನೋ ಪ್ಲಾನ್ ಹಾಕಿದ್ದನೋ? ಯಾರಿಗೂ ಸರಿ ಮಾಹಿತಿ ಇಲ್ಲ.

ಒಂದು ವೇಳೆ ದಾವೂದ್ ಬಂದು ಶರಣಾಗಿದ್ದರೆ  ಜೇಠಮಲಾನಿ ಅವನ ವಕೀಲರಾಗುತ್ತಿದ್ದರೇ? ಶುದ್ಧ ವಕೀಲರಾದ ಅವರಿಗೆ ಯಾರೂ ವರ್ಜ್ಯರಲ್ಲ. ಇಂದಿರಾ ಗಾಂಧಿ ಹತ್ಯೆಯ ಸಂಚಿನಲ್ಲಿ  ಸುಖಾ ಸುಮ್ಮನೆ ಫಿಟ್ ಆಗಿದ್ದ, ಏನೂ ಸಂಬಂಧವೇ ಇರದಿದ್ದ ಜನರ ಪರವಾಗಿ ವಕೀಲರಾಗಿ ಇಬ್ಬರಲ್ಲಿ ಒಬ್ಬನನ್ನು ಸುಪ್ರೀಂ ಕೋರ್ಟಿನಲ್ಲಿ ಇಲ್ಲದ ಬಡಿದಾಟ ಮಾಡಿ ನಿರ್ದೋಷಿ ಅಂತ ಸಾಬೀತು ಮಾಡಿದವರು ಅವರು. ಹಾಗಾಗಿ ದಾವೂದ್ ವಕಾಲತ್ ನಾಮಾ ಕೊಟ್ಟಿದ್ದರೆ ಅವನ ವಕೀಲರೂ ಆಗುತ್ತಿದ್ದರೋ ಏನೋ. ಅದರ ಬಗ್ಗೆ ಅವರು ಹೆಚ್ಚೇನೂ ಹೇಳುವದಿಲ್ಲ. ಊಹಾಪೋಹಗಳಿಗೆ ಹೆಚ್ಚಿನ ಸ್ಕೋಪ್ ಕೊಡುವದಿಲ್ಲ ಅವರು. ಎಲ್ಲದಕ್ಕೂ may be ಅನ್ನುವಂತಹ ಉತ್ತರ.

ಮುಂಬೈ ಸ್ಪೋಟಗಳ ನಂತರ ಒಮ್ಮೆ ದಾವೂದ್ ಫೋನ್ ಮಾಡಿ, ತಾನೇ ಸರೆಂಡರ್ ಆಗುವ ಆಫರ್ ಕೊಟ್ಟಿದ್ದ ಅಂತ ಅಲ್ಲಿ ಇಲ್ಲಿ ಸ್ವಲ್ಪ ಓದಿ ತಿಳಿದಿತ್ತು. ಪೂರ್ತಿ ಮಾಹಿತಿ ತಿಳಿದಿರಲಿಲ್ಲ. ನಳಿನಿ ಗೇರಾ ಬರೆದ ರಾಮ್  ಜೇಠ್ಮಲಾನಿ ಅವರ ಅಧಿಕೃತ ಆತ್ಮಚರಿತೆ  ಓದುತ್ತಿದ್ದಾಗ ಪೂರ್ತಿ ಮಾಹಿತಿ ಸಿಕ್ಕಿತು. ತುಂಬ ಸ್ವಾರಸ್ಯಕರ ಪುಸ್ತಕ.  ಜೇಠ್ಮಲಾನಿ ಅವರ ಬಗ್ಗೆ ಹಿಂದೆಲ್ಲೂ ಬಂದಿರದಿದ್ದ ಹಲವಾರು ಸ್ವಾರಸ್ಯಕರ, ರೋಚಕ ವಿವರಗಳಿವೆ.

ಇದೇ ಪುಸ್ತಕದಿಂದ ಆಯ್ದ ಮತ್ತೊಂದು ಬ್ಲಾಗ್ ಪೋಸ್ಟ್ ಇಲ್ಲಿದೆ.


3 comments:

ವಿ.ರಾ.ಹೆ. said...

RamJetmalani is an interesting person....

"ಹಾಜಿ ಮಸ್ತಾನನನ್ನು ಮಲಗಿಸಿ, ಸೊಳ್ಳೆಪರದೆ ಕಟ್ಟಿಕೊಟ್ಟು ಬಂದಿದ್ದ. "

LOL :D

Mahesh Hegade said...

ಹೌದೋ!ಕಂಪನಿ ಹೇಳಿ ಒಂದು ಫಿಲಂ ಬಂದಿತ್ತು ನೋಡು ೨೦೦೨ ರಲ್ಲಿ. ಅದರಲ್ಲಿ ಅದೇ ಸೀನ್ ಇದ್ದು! :)

Vimarshak Jaaldimmi said...


Interesting!

Any relation among this Ram, Kimaam RamBhaav, LORam, LO1/2 & YesTVBhaav?