Sunday, June 15, 2014

ಮಗ 'ಅರಳಿದ ಹೂ'. ಅಪ್ಪ 'ಬಾಡದ ಹೂ'. ಗುರುದತ್ತ ನಾರಾಯಣ ಹೆಗಡೆ ಎಂಬ ಐಎಎಸ್ ಟಾಪರ್.

ಗುರುದತ್ತ ನಾರಾಯಣ ಹೆಗಡೆ (ಚಿತ್ರ ಕೃಪೆ: ದೈಜಿ ವರ್ಲ್ಡ್)
ಗುರುದತ್ತ  ನಾರಾಯಣ ಹೆಗಡೆ ಎಂಬ ಧಾರವಾಡದ ಹವ್ಯಕ ಮಾಣಿಯೊಬ್ಬ ೨೦೧೩ ಸಾಲಿನ ಅಖಿಲ ಭಾರತ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಇಪ್ಪತ್ತೈದನೇ (25) ಸ್ಥಾನ ಪಡೆದು ಯಶಸ್ವಿಯಾಗಿದ್ದಾನೆ. ಧಾರವಾಡದಲ್ಲಿ ನಮ್ಮ ಆತ್ಮೀಯರ ಮಗ ಮತ್ತೆ ನಮ್ಮ ಸಂಬಂಧಿ ಅನ್ನುವದು ದೊಡ್ಡ ಹೆಮ್ಮೆಯ ವಿಷಯ. ಕನ್ನಡ ಮಾಧ್ಯಮದಲ್ಲಿಯೇ ಬರೆದು, ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವನ್ನಾಗಿ ಆರಿಸಿಕೊಂಡು, ಐಎಎಸ್ ಪರೀಕ್ಷೆಯಲ್ಲಿ ಇಷ್ಟು ಉನ್ನತ ಸ್ಥಾನ ಪಡೆದಿರುವವರು ಈ ಮೊದಲು ಯಾರೂ ಇರಲಿಕ್ಕಿಲ್ಲ.

ವಿಷಯ ಇಷ್ಟೇ ಆಗಿದ್ದರೆ ಹೆಮ್ಮೆ, ಖುಷಿ, ಸಂತೋಷ ಎಲ್ಲ ಪಟ್ಟು ಸುಮ್ಮನಾಗುತ್ತಿದ್ದೆವೋ ಏನೋ. ಆದರೆ ಈ ಮಾಣಿಯ ಯಶಸ್ಸಿನ ಸುದ್ದಿ ಕೇವಲ ಖುಷಿಯೊಂದನ್ನೇ ತರಲಿಲ್ಲ, ಅನೇಕಾನೇಕ ಹಳೆಯ ಸುಮಧುರ ನೆನಪಗಳನ್ನೂ ಸಹ ಜೊತೆಗೆ ತಂದು ಸಂತೋಷ ದುಪ್ಪಟ್ಟಾಯಿತು.

ಈ ಗುರುದತ್ತ ಹೆಗಡೆಯ ಕುಟುಂಬ ನಮಗೆ ತುಂಬ ಆಪ್ತವಾದದ್ದು. ಇವನ ತಂದೆ ನಾರಾಯಣ ಹೆಗಡೆ ನಮಗೆ ಮೊದಲಿಂದ 'ಕರ್ಜೀ ಮಾವ' ಎಂದೇ ಪರಿಚಿತರು ಮತ್ತು ಆತ್ಮೀಯರು. ಸಿರ್ಸಿ ಸಮೀಪದ ಊರು ಕರ್ಜೀಮನೆಯವರಾದ ಅವರು ೧೯೭೫-೭೬ ರ ಹೊತ್ತಿಗೆ ಧಾರವಾಡಕ್ಕೆ ಡಿಗ್ರಿ ಮಾಡಲು ಬಂದಾಗಿನಿಂದ ನಮಗೆ ಬಹಳ ಆತ್ಮೀಯರು. ನಮ್ಮ ಕಾಲದ ಹವ್ಯಕ ಹುಡುಗರಿಗೆ ಎಲ್ಲರೂ ಮಾವ, ಎಲ್ಲರೂ ಅತ್ತೆ. ಈಗಿನ ಹುಡುಗರಿಗೆ ಅಂಕಲ್ಲು, ಆಂಟಿಗಳಿದ್ದ ಹಾಗೆ. ಕರ್ಜೀಮನೆ ಅನ್ನುವ ವಿಶಿಷ್ಟ ಹೆಸರಿನ ಊರಿನಿಂದ ಬಂದ ಇವರಿಗೆ ನಾಣ (ನಾರಾಯಣ) ಮಾವ ಅನ್ನುವ ಜರೂರತ್ತೇ ಬರಲಿಲ್ಲ. ವಿಶಿಷ್ಟವಾದ 'ಕರ್ಜೀಮನೆ ಮಾವ' ಉರ್ಫ್ 'ಕರ್ಜೀ ಮಾವ' ಅನ್ನುವ ಹೆಸರೇ ಖಾಯಂ ಆಯಿತು. ಈ ಕರ್ಜಿಮನೆ ಅನ್ನುವ ಊರು ಸಿರ್ಸಿ ತಾಲೂಕಿನ ಹೊನ್ನೆಗದ್ದೆ ಎಂಬ ಹಳ್ಳಿಯ ಒಂದು ಭಾಗವೇ. ಅದು ಏನೋ, ಒಟ್ಟಿನಲ್ಲಿ ಸರಕಾರೀ ದಾಖಲೆಗಳಲ್ಲಿ ಕರ್ಜೀಮನೆ ಒಂದು ಬೇರೆ ಗ್ರಾಮ ಅಂತಿದೆ. ನಮ್ಮ ಅಜ್ಜನ ಮನೆ (ತಾಯಿಯ ತವರೂರು) ಹೊನ್ನೆಗದ್ದೆ. ಮತ್ತೆ ನಮ್ಮ ಅಜ್ಜನ ಅಣ್ಣನ ಹೆಂಡತಿ ಕರ್ಜೀಮನೆಯವರು ಅಂತ ಕೇಳಿದ್ದು. ಅವರನ್ನೆಲ್ಲ ನಾವು ನೋಡಿಲ್ಲ. ನೋಡಲು ಅವರೆಲ್ಲ ನಾವು ಹುಟ್ಟುವ ಮೊದಲೇ ತೀರಿ ಹೋಗಿದ್ದರು. ಹೀಗೆ ಕರ್ಜೀಮನೆ ಜೊತೆ ಸಂಬಂಧ ಕೂಡ ಉಂಟು.

ಸಣ್ಣವರಿದ್ದಾಗ ರಜೆ ಬಿಟ್ಟ ತಕ್ಷಣ ಅಜ್ಜನ ಮನೆಗೆ ಓಡುವ ಕಾತುರ. ಕಳಿಸಿ ಬಿಟ್ಟು ಬರಲು ಯಾರಾದರೂ ದೊಡ್ಡವರು ಬೇಕು. ಅಂತಹ ಹೊತ್ತಿನಲ್ಲಿ ಸಿರ್ಸಿ ಕಡೆ ಹೋಗಿ ಬಂದು ಮಾಡುತ್ತಿದ್ದ ಧಾರವಾಡದಲ್ಲಿ ಓದುತ್ತಿದ್ದ ಸಿರ್ಸಿ ಕಡೆಯ ಮಾಣಿ, ಕೂಸುಗಳೇ ನಮಗೆ ಆಧಾರ. ನಮ್ಮಂತ ಸಣ್ಣ ಮಾಣಿಗಳನ್ನು ಕರೆದುಕೊಂಡು ಹೋಗಿ ಅಜ್ಜನ ಮನೆ ಮುಟ್ಟಿಸುವ ಜವಾಬ್ದಾರಿ ಅಂತಹ ಹವ್ಯಕ ಮಾವಂದಿರದ್ದು. ಅದರಲ್ಲೂ ಈ ಕರ್ಜೀ ಮಾವ ನಮ್ಮ ಅಜ್ಜನ ಮನೆ ಊರಿನವರೇ ಆದ್ದರಿಂದ ಅವರೊಂದಿಗೆ ಸಿರ್ಸಿಗೆ ಹೋಗಿ, ಬಂದು ಮಾಡಿದ ನೆನಪುಗಳು ಬಹಳ ಇವೆ ಬಿಡಿ. ಆ ಕಾಲದಲ್ಲಿ ಧಾರವಾಡದಿಂದ ಸಿರ್ಸಿಗೆ ಹೋಗಿ, ಅಲ್ಲಿಂದ ಹಳ್ಳಿ ಕಡೆ ಹೋಗೋ ಬಸ್ ಹಿಡಿದು, ಹೊನ್ನೆಗದ್ದೆ ಬಸ್ಟಾಪಿನಲ್ಲಿಯೋ, ಹೊಸ್ಮನೆ ಕತ್ರಿಯಲ್ಲಿಯೋ ಇಳಿದು, ನಂತರ ಕಾಡು, ತೋಟ, ಗದ್ದೆ, ಹಳ್ಳದ ಮೇಲಿನ ಸಂಕದ ಮೇಲೆ ಒಂದು ಮೈಲಿ ನೆಡೆದು, ಮೊದಲು ಸಿಗುತ್ತಿದ್ದ ಇವರ ಕರ್ಜೀಮನೆಯಲ್ಲಿ ಒಂದು ಕುಡತೆ ಆಸ್ರೀ ಕುಡಿದು (ಸಣ್ಣ ನಾಷ್ಟಾ ಮಾಡಿ), ಅಜ್ಜನ ಮನೆ ಮುಟ್ಟುವಷ್ಟರಲ್ಲಿ ಸುಮಾರು ಏಳೆಂಟು ತಾಸು ಬೇಕಾಗುತ್ತಿತ್ತು. ಮೊತ್ತ ಮೊದಲ ಬಾರಿಗೆ ಮಿಸ್ರಿ ಜೇನುತುಪ್ಪ ತಿನ್ನಿಸಿದ್ದು ಈ ಕರ್ಜೀ ಮಾವನೇ ಅಂತ ನೆನಪು. ರಜೆಯಲ್ಲಿ ಕಾಡು ಮೇಡು ಸುತ್ತಿ, ಅಜ್ಜನ ಮನೆ ಕಡೆ ವಾಪಸ್ ಬರುತ್ತಿದ್ದಾಗ, "ಏ ಮರೀ! ಹನಿ ಬಂದೋಗಾ. ಈಗ ಮಾತ್ರ ತೆಗೆದ ಮಿಸ್ರಿ ಇದ್ದು. ಒಂದು ರಟ್ಟು ತಿಂದ್ಕ ಹೋಗು" ಅಂತ ಹೇಳಿ ಮಿಸ್ರಿ ಎಂಬ ಅಪರೂಪದ ಜೇನುತುಪ್ಪದ ಸವಿ ಸವಿದಿದ್ದು ಇವರ ಕೃಪೆಯಿಂದಲೇ. 

ಈ ಗುರುದತ್ತ ಹೆಗಡೆ ಐಎಎಸ್ ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣನಾದ ಅನ್ನುವ ಸುದ್ದಿ ಮೊದಲ ಬಾರಿಗೆ, ಯಾವದೇ ಪತ್ರಿಕೆಯಲ್ಲಿ ಬರುವ ಮೊದಲು, ತಿಳಿದಿದ್ದು ಧಾರವಾಡದ ಶ್ರೀ ಗುರುರಾಜ ಜಮಖಂಡಿ ಅವರ ಫೇಸ್ಬುಕ್ ಸ್ಟೇಟಸ್ ಅಪ್ಡೇಟ್ ನಿಂದ. ಅದು ಒಂದು ತರಹ ಬ್ರೇಕಿಂಗ್ ನ್ಯೂಸ್. ಈ ಜಮಖಂಡಿ ನಮ್ಮ ಗುರುಗಳು. ಒಂಬತ್ತನೇ ಕ್ಲಾಸಿನಲ್ಲಿ ಭೂಗೋಳ ಕಲಿಸಿದ್ದಾರೆ. NCC ನಲ್ಲಿ ನಮ್ಮ ಕಮಾಂಡಿಂಗ್ ಆಫೀಸರ್ ಅಂತ ಸಹ ಇದ್ದರು ಒಂದು ವರ್ಷ. ಮಾಸ್ತರಿಕೆಯೊಂದಿಗೆ ಪತ್ರಕರ್ತರೂ ಸಹ. ಹವ್ಯಾಸಿ ಕಲಾವಿದರಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಐಎಎಸ್ ರಿಸಲ್ಟ್ ತಿಳಿಯುತ್ತಲೇ ಇಂತಹ ಜಮಖಂಡಿ ಸರ್ ಅವರು ಗುರುದತ್ತ ಹೆಗಡೆ ಮನೆಗೆ ಹೋಗಿ, ಅವನಿಗೆ ಅಭಿನಂದನೆ ಸಲ್ಲಿಸಿ, ಒಂದೆರಡು ಫೋಟೋ ತೆಗೆದುಕೊಂಡು ಬಂದು, ಫೇಸ್ಬುಕ್ ಮೇಲೆ ಹಾಕಿ, ಒಂದು ಚಿಕ್ಕ ಬರಹ ಬರೆದಿದ್ದರು. ಆವಾಗ ಗೊತ್ತಾಯಿತು ನಮ್ಮ ಕರ್ಜೀ ಮಾವನ ಮಗ ಐಎಎಸ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾನೆ ಅಂತ. ಎಲ್ಲಕ್ಕಿಂತ ಮೊದಲಿಗೆ ಒಳ್ಳೆ ಸುದ್ದಿ ಕೊಟ್ಟ ಜಮಖಂಡಿ ಸರ್ ಅವರಿಗೊಂದು ದೊಡ್ಡ ನಮಸ್ಕಾರ ಅನಂತ ಧನ್ಯವಾದಗಳೊಂದಿಗೆ.

ಮಜಾ ನೋಡಿ....ನಮ್ಮ ಪ್ರೀತಿಯ ಕರ್ಜೀ ಮಾವ ಉರ್ಫ್ ನಾರಾಯಣ ಹೆಗಡೆ ಕೂಡ ಅವರ ವಿದ್ಯಾರ್ಥಿ ದಿನಗಳಲ್ಲಿ ಹವ್ಯಾಸಿ ರಂಗ ಕಲಾವಿದ. 'ಬಾಡದ ಹೂ' ಎಂಬ ೧೯೮೨, ೮೩ ಟೈಮ್ ನಲ್ಲಿ ಬಂದ ಚಿತ್ರವೊಂದರಲ್ಲಿ ಚಿಕ್ಕ ಸೈಡ್ ಪಾತ್ರ ಮಾಡಿದ್ದ ಕೂಡ. ಪಾತ್ರ ಮಾಡಬೇಕು ಅಂತ ಹುಡಕಿಕೊಂಡು ಹೋಗಿ ಮಾಡಿದ್ದ ಪಾತ್ರವಲ್ಲ. ಆ ಕಾಲದಲ್ಲಿ ಅವನು ಧಾರವಾಡದ ಕವಿವಿಯಲ್ಲಿ MSW (Master of Social Work) ಓದುತ್ತಿದ್ದ. ಅವರ ಗುರುಗಳಾದ ಪ್ರೊ. ಕುಲಕರ್ಣಿ ಅನ್ನುವವರು ಸಿನಿಮಾ ರಂಗದ ಜೊತೆ ಒಡನಾಟ ಹೊಂದಿದ್ದರು. ಈ 'ಬಾಡದ ಹೂ' ಚಿತ್ರದ ಒಂದು ಗೀತೆಗೆ ಹೀರೋ ಅನಂತ ನಾಗ್, ಹೀರೋಯಿನ್ ಪದ್ಮಪ್ರಿಯಾ ಜೊತೆಯಾಗಿ ಕೋರಸ್ ನಲ್ಲಿ ಹಾಡಿ, ಕುಣಿಯಲು ಒಂದಿಷ್ಟು ಜನ ಕಾಲೇಜ್ ಹುಡುಗ ಹುಡುಗಿಯರು ಬೇಕಾಗಿದ್ದರು. ಕುಲಕರ್ಣಿ ಮಾಸ್ತರರು ತಮ್ಮ ವಿದ್ಯಾರ್ಥಿಗಳ ತಂಡ ಕರೆದುಕೊಂಡು ಹೋಗಿ, ಚಿತ್ರೀಕರಣದಲ್ಲಿ ಭಾಗವಹಿಸಿ, ನಮ್ಮ ಕರ್ಜೀ ಮಾವನಂತಹ ಹುಡುಗರಿಗೆ ಸಿನಿಮಾದಲ್ಲಿ ನಟಿಸಿದ  ಒಂದು ಅನುಭವವನ್ನೂ ಮಾಡಿಸಿದ್ದರು. ಈ ಪ್ರೊ. ಕುಲಕರ್ಣಿ ಯಾರು ಅಂತ ನೋಡುತ್ತ ಹೋದರೆ ಇವರು ನಮ್ಮ ಜಮಖಂಡಿ ಸರ್ ಅವರ ಮಾವ (ಪತ್ನಿಯ ತಂದೆ). ಜಮಖಂಡಿ ಸರ್ ಅವರಿಗೆ ವಿಷಯ ತಿಳಿಸಿ ಕೇಳಿದೆ,"ಸರ್! ನಿನ್ನೆ ನೀವು ಗುರುದತ್ ಹೆಗಡೆ ಐಎಎಸ್ ಟಾಪರ್ ಆಗಿದ್ದಾನೆ ಅಂತ ನ್ಯೂಸ್ ಕೊಟ್ಟಿರಿ. ಅವರಪ್ಪ ನಾರಾಯಣ ಹೆಗಡೆ 'ಬಾಡದ ಹೂ' ಪಿಚ್ಚರ್ ಒಳಗ, ಗ್ರೂಪ್ ಸಾಂಗ್ ಒಳಗ ಇದ್ದರು. ಅದರಲ್ಲಿ ನಿಮ್ಮ ಮಾವ ಸಹಿತ ಇದ್ದರು. ಅಲ್ಲರೀ ಸರ್?" ಅಂತ. " ಹೌದಪಾ! ಕರೆಕ್ಟ್ ಹೇಳಿದಿ! ಥ್ಯಾಂಕ್ಯೂ" ಅಂತ ಜಮಖಂಡಿ ಸರ್ ಉತ್ತರ ಕೊಟ್ಟರು. ನೋಡಿ strange coincidences ಅಂದ್ರೆ ಹೇಗಿರುತ್ತವೆ ಅಂತ.

ಈ ಗುರುದತ್ತ ಹೆಗಡೆ ತಾಯಿ ಶಶಿಕಲಾ ಹೆಗಡೆ (ಭಟ್) ಕೂಡ ನಮಗೆ ಪರಿಚಿತರೇ. ಅವರ ಅಣ್ಣ ಹಾಸಣಗಿ ಗೋಪಾಲ್ ಭಟ್ಟರು ಸಹ ಧಾರವಾಡದಲ್ಲಿ ಶಿಕ್ಷಕರು. ಧಾರವಾಡದ ಕೆ.ಇ. ಬೋರ್ಡ್ ಶಾಲಾ ಸಮೂಹದಲ್ಲಿ ಸಂಸ್ಕೃತ ಗುರುಗಳಾಗಿ, ನಂತರ ಮುಖ್ಯಾಧ್ಯಾಪಕರೂ ಸಹ ಆಗಿದ್ದವರು. ಕೆ.ಇ. ಬೋರ್ಡ್ ಶಾಲಾ ಸಮೂಹಕ್ಕೆ ಬಂದು ಸೇರಿದ ಹವ್ಯಕ ಶಿಕ್ಷಕರಲ್ಲಿ ಅವರೇ ಮೊದಲನೇಯವರು. ಕೆ.ಇ. ಬೋರ್ಡ್ ಶಾಲಾ ಸಮೂಹದಲ್ಲಿ ಇರುವ ನಾಲ್ಕು ಶಾಲೆಗಳ ಪೈಕಿ ಮೂರರಲ್ಲಿ ಸಂಸ್ಕೃತ ಕಲಿಸುತ್ತಿದ್ದವರು ಹವ್ಯಕರೇ. ನಮಗೆ ಕಲಿಸಿದವರು ಶ್ರೀಪಾದ ಹೆಗಡೆ. ಕೆಎನ್ಕೆ ಗರ್ಲ್ಸ್ ಹೈಸ್ಕೂಲಿನಲ್ಲಿ ಗೋಪಾಲ್ ಭಟ್. ಕರ್ನಾಟಕ ಹೈಸ್ಕೂಲಿನಲ್ಲಿ ಶ್ರೀಧರ್ ಗಾಂವಕರ್. ಈ ಗುರುದತ್ತ ಹೆಗಡೆ ತಾಯಿ ಶಶಿಕಲಾ ಹೆಗಡೆ ಕೂಡ ಕೆ. ಇ. ಬೋರ್ಡ್ ಶಾಲಾ ಸಮೂಹದಲ್ಲಿ ಶಿಕ್ಷಕಿ. ೨೦೧೨ ಡಿಸೆಂಬರ್ ನಲ್ಲಿ ನಮ್ಮ SSLC ಬ್ಯಾಚಿನ ರಜತಮಹೋತ್ಸವ ಸಮಾರಂಭದ ಸಲುವಾಗಿ ಶಾಲೆಗೆ ಹೋದಾಗ ಹೋದಾಗ ಸಿಕ್ಕಿದ್ದರು. ಇತರ ಹವ್ಯಕ ಶಿಕ್ಷಕರಾದ ಗೋಪಾಲ್ ಭಟ್, ಶ್ರೀಧರ್ ಗಾಂವಕರ್, ಶ್ರೀಪಾದ ಹೆಗಡೆ ಸಹ ಆವಾಗಲೇ ಸಿಕ್ಕಿದ್ದರು.

ಈ ಗುರುದತ್ತ ಹೆಗಡೆಯನ್ನು ಒಂದೆರೆಡು ವರ್ಷದ ಸಣ್ಣ ಮಾಣಿಯಿದ್ದಾಗ, ತಂದೆ ತಾಯಿಯೊಂದಿಗೆ ಧಾರವಾಡದ ನಮ್ಮ ಮನೆಗೆ ಬಂದಾಗ ನೋಡಿದ ನೆನಪು.  ಮಸಕು ಮಸಕು ನೆನಪು ಅಷ್ಟೇ. ಅದೇ ಮಾಣಿ ಈಗ ಇಪ್ಪತ್ತಾರರ ಹರೆಯದಲ್ಲಿ ಇಂಜಿನಿಯರಿಂಗ್ ಪದವಿಯ ನಂತರ ಐಎಎಸ್ ನಲ್ಲಿ ಉನ್ನತ ಸ್ಥಾನ ಗಳಿಸಿದ್ದಾನೆ. ಮುಂದೆ ಎಲ್ಲ ಒಳ್ಳೆದಾಗಲಿ. ಇನ್ನೂ ಹೆಚ್ಚಿನ ಯಶಸ್ಸು ಎಲ್ಲ ರಂಗಗಳಲ್ಲಿ ಲಭ್ಯವಾಗಲಿ. ಇನ್ನೂ ಹೆಚ್ಚಿನ ಕೀರ್ತಿ, ಸುಖ, ಸಂತೋಷ ಎಲ್ಲ ಪಡೆಯಲಿ. ಇದೇ ನಮ್ಮ ಮತ್ತು ಎಲ್ಲರ ಹಾರೈಕೆ.

**


ಇಲ್ಲಿ ಹಾಕಿರುವ  'ಬಾಡದ ಹೂ' ಸಿನೆಮಾದ ಈ ಹಾಡಿನಲ್ಲಿ ನಮ್ಮ ಕರ್ಜೀ ಮಾವ ಇದ್ದಾರೆ. ಎರಡನೇ ಸಾಲಿನಲ್ಲಿ, ಅನಂತ್ ನಾಗ್ ಹಿಂದೆ, ಕೇಸರಿ ಬಣ್ಣದ ಟೀ ಶರ್ಟೋ, ಹಾಫ್ ಸ್ವೆಟರೋ ಹಾಕಿಕೊಂಡು ತುಂಬ handsome ಆಗಿ ಕಾಣುತ್ತಿದ್ದಾರೆ. 'ಬಾಡದ ಹೂ' ಸಿನೆಮಾ ಬಿಡುಗಡೆಯಾದ ಮೇಲೆ ಅವರೊಂದಿಗೆ ಎಲ್ಲರೂ ಕೂಡಿ ಧಾರವಾಡದಲ್ಲಿ ಈ ಸಿನಿಮಾ ನೋಡಿದ ನೆನಪು. "ನೋಡಾ! ಆನು ಅಲ್ಲಿದ್ದಿ. ನೋಡಾ! ಕಂಡ್ಚಾ? ಕಂಡ್ಚಾ?" ಅಂತ ಅವರು ತೋರಿಸಿಯೇ ತೋರಿಸಿದ್ದರು. ಅವತ್ತು ಸರಿಯಾಗಿ ಕಂಡಿರಲಿಲ್ಲ. ಯಾಕೆಂದ್ರೆ ಸಿನಿಮಾ ಮಂದಿರದವರು ನಮ್ಮ ಸಲುವಾಗಿ ಪ್ರೊಜೆಕ್ಟರ್ ನಿಧಾನ ಮಾಡುವದಿಲ್ಲ ನೋಡಿ. ಈಗ ಬೇಕಾದ ಹಾಗೆ ಇಂಟರ್ನೆಟ್ ಮೇಲೆ ಸ್ಟಾಪ್ ಅಂಡ್ ಗೋ ಮಾಡಿಕೊಂಡು, ಕರ್ಜೀ ಮಾವನನ್ನು ಕಂಡು ಹಿಡಿದು ಹಿಡಿದು ನೋಡಾಯಿತು ಬಿಡಿ.

ಈ ಹಾಡಿನಲ್ಲಿ ಬರುವ ಪ್ರೊಫೆಸರ್ ಪಾರ್ಟ್ ಮಾಡಿದವರು ನಿಜವಾದ ಪ್ರೊಫೆಸರ್ ಕುಲಕರ್ಣಿ ಅವರು.  ಅವರು ಅವರೇ ಅಂತ ಗೊತ್ತಾಗಿದ್ದೂ ಸಹ ಒಂದು ಮಜವಾದ ರೀತಿಯಲ್ಲಿಯೇ. ಮೊದಲೇ ಹೇಳಿದಂತೆ ಜಮಖಂಡಿ ಸರ್ ನಮಗೆ ೧೯೮೬-೮೭ ಸಮಯದಲ್ಲಿ ಒಂಬತ್ತನೇ ಕ್ಲಾಸಿನಲ್ಲಿ ಭೂಗೋಳ ಕಲಿಸುತ್ತಿದ್ದರು. ಅದೇ ವರ್ಷ ಅವರ ವಿವಾಹ ನಿಕ್ಕಿಯಾಯಿತು. ಮಿತ್ರನೊಬ್ಬನಿಗೆ ಜಮಖಂಡಿ ಸರ್ ಮಾವ ಈ ಪ್ರೊ. ಕುಲಕರ್ಣಿ ಅಂತ ಗೊತ್ತಾಗಿತ್ತು. ನನಗೆ ಹೇಳಿದ್ದ. "ಮಹೇಶಾ, ಜಮಖಂಡಿ ಸರ್ ಮಾವ ಯಾರ್ ಗೊತ್ತೇನ?" ಅಂತ. "ಯಾರಲೇ? ಗೊತ್ತಿಲ್ಲ ಬಿಡಪಾ" ಅಂದೆ. "ಅವರs ಮಾರಾಯಾ. ಬಾಡದ ಹೂ ಪಿಚ್ಚರ್ ನಾಗ ಡಾನ್ಸ್ ಹೊಡೆದ ಯೂನಿವರ್ಸಿಟಿ ಮಾಸ್ತರ್ರು. ಈಗ ಗೊತ್ತಾತ?" ಅಂತ ಕೇಳಿದ್ದ. ಆಶ್ಚರ್ಯವಾಗಿತ್ತು. "ಲೇ! ಆ ಹಾಡಿನ್ಯಾಗ ನಮ್ಮ ಮಾಮಾ ಕೂಡ ಡಾನ್ಸ್ ಹೊಡೆದ ಬಂದಾನಲೇ. ಅವರ ಸ್ಟೂಡೆಂಟ್ ಇರ್ಬೇಕು ನಮ್ಮ ಮಾಮಾ. ಭಾರಿ ಆತ ಬಿಡಪಾ" ಅಂತ ಹೇಳಿ ಮಾತು ಮುಗಿದಿತ್ತು. ಆವತ್ತೇ ಗೊತ್ತಾಗಿತ್ತು ಕರ್ಜೀ ಮಾವನ ಜೊತೆ ಡಾನ್ಸ್ ಮಾಡಿದ ಪ್ರೊಫೆಸರ್ ನಮ್ಮ ಜಮಖಂಡಿ ಸರ್ ಮಾವ ಅಂತ. ಹೀಗೇ ಮುಂದುವರಿದಿದ್ದರೆ ನಮ್ಮ ಕರ್ಜೀ ಮಾವ ಕೂಡ ಆಕ್ಟರ್ ಆಗುತ್ತಿದ್ದನೋ ಏನೋ. ಆದರೆ ಅವನು ಓದಿ, ಮೊದಲು ನೌಕರಿ ಮಾಡಿ, ಈಗ ಧಾರವಾಡದಲ್ಲಿ ಬಿಸಿನೆಸ್ ಮಾಡುತ್ತಾನೆ. ಹೆಂಡತಿ ಶಾಲಾ ಶಿಕ್ಷಕಿ. ಮಗ ಐಎಎಸ್ ನಲ್ಲಿ ಜಯಭೇರಿ ಬಾರಿಸಿ ಖುಷಿಯಲ್ಲಿದ್ದಾರೆ.

"ಕರ್ಜೀಮನೆ ನಾಣು ಪಾರ್ಟ್ ಮಾಡಿದ್ನಡಾ. ಆ ಶಿನೀಮಾ ನೋಡನ ಬನ್ನಿ," ಅಂತ ಹೇಳುತ್ತ ಸಿರ್ಸಿ ಸೀಮೆಯ ಹವ್ಯಕರು ಸುಮಾರು ಜನ 'ಬಾಡದ ಹೂ' ಪಿಚ್ಚರ್ ನೋಡಿ ಒಳ್ಳೆಯ ಕಲೆಕ್ಷನ್ ಮಾಡಿಸಿಕೊಟ್ಟಿದ್ದಾರು ಬಿಡಿ.

ಈಗ ಮಗ ಗುರುದತ್ತ ಹೆಗಡೆ ಯಶಸ್ಸಿನ ಹೂ ಅರಳಿಸಿದ್ದಾನೆ. ಅಪ್ಪ ನಾರಾಯಣ ಹೆಗಡೆ ಉರ್ಫ್ ನಮ್ಮ ಆತ್ಮೀಯ ಕರ್ಜೀ ಮಾವ ಎಂದಿನಂತೆ ಎವರ್ ಗ್ರೀನ್, ಎಂದಿಗೂ ಬಾಡದ ಹೂವಿನಂತೆಯೇ ಇದ್ದಾರೆ. ಹಾಗೇ ನೂರ್ಕಾಲ ಇರಲಿ.

ಮಗನೊಂದಿಗೆ ಸಂಭ್ರಮಿಸುತ್ತಿರುವ ಕರ್ಜೀ ಮಾವ, ಅತ್ತೆ (ಚಿತ್ರ ಕೃಪೆ: ದೈಜಿ ವರ್ಲ್ಡ್)

* ಪುಟ್ಟಣ್ಣ ಕಣಗಾಲರ ಮಾನಸ ಪುತ್ರ ಎಂದೇ ಖ್ಯಾತನಾಗಿದ್ದ ನೀರ್ನಳ್ಳಿ ರಾಮಕೃಷ್ಣ ಹೆಗಡೆ ಸಹ ಹವ್ಯಕನೇ. ನಮ್ಮ ಅಜ್ಜನ ಮನೆ ಹೊನ್ನೆಗದ್ದೆಯ  ಪಕ್ಕದ ಊರೇ ನೀರ್ನಳ್ಳಿ. ನಮ್ಮ ಸೋದರ ಮಾವಂದಿರ ವಾರಿಗೆಯವ ಆ ರಾಮಕೃಷ್ಣ. ಈಗೊಂದಿಷ್ಟು ವರ್ಷದ ಹಿಂದೆ ಧಾರವಾಡ ಹುಬ್ಬಳ್ಳಿಗೆ ಯಾವದೋ ಹವ್ಯಕ ಸಂಘದ ಸಮಾರಂಭಕ್ಕೆ ಬಂದವ ಎಲ್ಲರ ಜೊತೆ ಮಾತಾಡಿ, ಹೊನ್ನೆಗದ್ದೆ, ನೀರ್ನಳ್ಳಿ ಬದಿಗಿನ ಸುದ್ದಿ ಎಲ್ಲ ಹೇಳಿ ಕೇಳಿ  ಹೋಗಿದ್ದ ಅಂತ ಅವನನ್ನು ಭೆಟ್ಟಿಯಾಗಿದ್ದ ತಂದೆ ತಾಯಿ ಹೇಳಿದ್ದರು. ಇವತ್ತಿನ ಹಾಟ್ ನಟ ದಿಗಂತ್ ಮಂಚಾಲೆ ಕೂಡ ಹವ್ಯಕನೇ.

* ಕನ್ನಡದಲ್ಲಿ ಬರೆದು ಐಎಎಸ್ ಪಾಸ್ ಮಾಡಿದ ಮೊತ್ತ ಮೊದಲಿಗರು ಹಿಂದಿನ ಕಾಲದ ಅಧಿಕಾರಿ, ಪಾರ್ಟ್ ಟೈಮ್ ಸಿನೆಮಾ ನಟ ಶಿವರಾಮು ಅಂತ ನೆನಪು. ಅವರು ನಟಿಸಿ, ನಾಗತಿಹಳ್ಳಿ ನಿರ್ದೇಶಿಸಿದ್ದ 'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ' ಎಂಬ ಮಿಸ್ಟರಿ ಥ್ರಿಲ್ಲರ್ ಚಿತ್ರ ಹಿಟ್ಟಾಗಿತ್ತು. 

12 comments:

ವಿ.ರಾ.ಹೆ. said...

Great.

ಪತ್ರಿಕೆಗಳಲ್ಲಿ ಈ ಬಗ್ಗೆ ಓದಿ ಖುಶಿಪಟ್ಟಿದ್ದೆ. ಆದರೆ ಕರ್ಜಿಮನೆ ಲಿಂಕು ಗೊತ್ತಿತ್ತಿಲ್ಲೆ! ಈಗ ಫುಲ್ ಡೀಟೈಲ್ಸ್ ಗೊತ್ತಾತು ನೋಡು.

Mahesh Hegade said...

Thanks Vikas.

ನಿನ್ನ ಅಮ್ಮನ್ನ ಕೇಳು. ಅದರ ಬೆಸ್ಟ್ ಫ್ರೆಂಡ್ ಕರ್ಜೀ ಮಾವ. ಅವೇ ಇಬ್ಬರು ಊರಿನ ದೊಡ್ಡ ಜಗಳಗಂಟರು ಹೇಳಿ ಅವೇ ಕುಶಾಲಿ ಮಾಡ್ಕ್ಯತ್ತಿದ್ದ. :)

Shailesh Hegde said...

Wonderful news!

Congratulations & All the Best to
Gurudatta!!

Mahesh Hegade said...

Yes, really wonderful news!

Vimarshak Jaaldimmi said...


Any relation between "Karjimane" and "Karjikai?"

Unknown said...

Superb write up Mahesh.

Mahesh Hegade said...

Thank you very much, Jamkhandi Sir. Really enjoyed recollecting all the old memories and putting them together.

Unknown said...

Nice blog.. liked it. "Badada hoovu" relation is a news for me. I should ask Karji mava abt this.

Mahesh Hegade said...

Thank you very much.If you learn more about the "ಬಾಡದ ಹೂ" connection from Karji mava, feel free to share with me. Love to hear it :)

Gurudatt Hegde said...

Dear brother Mahesh, I am thrilled to read this well written blog. I had heard so much about you and it is very nice to hear from you.

My father N.V.Hegde is very happy to watch the video you have posted and we had a very good laugh looking at his orange sweater.He sends his regards for shedding light on this unique memory from the past.

Our family has always been grateful for your family's support.My father thanks your father and mother "lalitakka" for their help and affection.

Please visit our home when you come to Dharwad. I'm looking forward to meet you, so are my parents. Thank you once again for this beautiful post. No newspaper has covered my story better. I also thank Mr. Gururaj Jamkhandi for his support.

Gurudatt Hegde said...

Dear brother Mahesh, I am thrilled to read this well written blog. I had heard so much about you and it is very nice to hear from you.

My father N.V.Hegde is very happy to watch the video you have posted and we had a very good laugh looking at his orange sweater.He sends his regards for shedding light on this unique memory from the past.

Our family has always been grateful for your family's support.My father thanks your father and mother "lalitakka" for their help and affection.

Please visit our home when you come to Dharwad. I'm looking forward to meet you, so are my parents. Thank you once again for this beautiful post. No newspaper has covered my story better. I also thank Mr. Gururaj Jamkhandi for his support.

Mahesh Hegade said...

ಗುರುದತ್ತ, ನಿನ್ನ ಕಾಮೆಂಟ್ ಓದಿ ರಾಶಿ ಖುಷಿ ಆತು. ಕರ್ಜೀಮಾವ ಸಹಿತ ಓದಿದ್ದಾ ಹೇಳಿ ತೆಳದೂ ಖುಷಿ ಆತು. ಇಷ್ಟು ದಿವಸದಲ್ಲಿ ಬರೆದ ಎಲ್ಲ ಬ್ಲಾಗ್ ಪೋಸ್ಟುಗಳಿಗಿಂತ ಇದನ್ನ ಬರೆಯಕರೆ ಭಾಳ ಸಂತೋಷ, ಮಜಾ ಎಲ್ಲಾ ಕೂಡೆ ಆತು. It was a great a joy to be part of your success while reliving some fond memories from the past. Best regards to you all, Mahesh