Sunday, December 29, 2013

ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಇದು ಭಾಗ -೨. ಭಾಗ - ೧ ಇಲ್ಲಿದೆ. ಓದಿಕೊಳ್ಳಿ.)

ಬ್ರಹ್ಮರ್ಷಿ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಭಾಲಚಂದ್ರ ಶಾಸ್ತ್ರಿಗಳಿಗೆ ಮತ್ತು ನಮ್ಮ ತಂದೆ ಪ್ರೊಫೆಸರ್ ಹೆಗಡೆ ಅವರಿಗೆ ೧೯೫೦ ರ ಕಾಲದಿಂದಲೇ ಒಂದು ತರಹದ ಗುರುತು, ಪರಿಚಯ, ಆತ್ಮೀಯತೆ, ಪರಸ್ಪರ ಗೌರವ ಎಲ್ಲ.

ನಮ್ಮ ತಂದೆ ೧೯೫೦ ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ವೀ.ಕೇ. ಗೋಕಾಕರು ಪ್ರಿನ್ಸಿಪಾಲ್ ಇದ್ದಾಗ ಕರ್ನಾಟಕ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದವರು. ಮುಂದೆ ಅಲ್ಲೇ ಭೌತಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದವರು. ಕಲಿತದ್ದು, ಕಲಿಸಿದ್ದು ಭೌತಶಾಸ್ತ್ರವೇ ಆದರೂ ತಂದೆಯವರಿಗೆ ಮೊದಲಿಂದ ವೇದ, ವೇದಾಂತ, ವೇದಾಂಗವಾದ ಜ್ಯೋತಿಷ್ಯದಲ್ಲಿ ತುಂಬಾ ಆಸಕ್ತಿ ಮತ್ತು ಆಳವಾದ ಜ್ಞಾನ. ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ಕಾಲೇಜಿನಲ್ಲಿ ದಿನವಿಡಿ ಅಭ್ಯಾಸ. ಸಂಜೆ ಹೊಸೆಲ್ಲಾಪುರದ ಪಂಡಿತರ ಸೇವೆ. ಅದೇ ವೇದ, ಉಪನಿಷತ್ತು, ಜ್ಯೋತಿಷ್ಯ, ಅದು ಇದು ಕಲಿಯಲಿಕ್ಕೆ. ಹೀಗಾಗಿ ಆ ಕಾಲದಿಂದಲೇ ಭಾಲಚಂದ್ರ ಶಾಸ್ತ್ರಿಗಳ ಕಣ್ಣಿಗೆ ಬಿದ್ದವರು ನಮ್ಮ ತಂದೆ. ಒಳ್ಳೆಯ ರೀತಿಯಿಂದ, ಸ್ವಂತ ಅಧ್ಯಯನದಿಂದ  ವೇದಾಧಾರಿತ ಜ್ಯೋತಿಷ್ಯದ (Vedic Astrology) ಮೇಲೆ ಪಾಂಡಿತ್ಯ ಸಾಧಿಸಿದ್ದ ತಂದೆಯವರ ಮೇಲೆ ಭಾಲಚಂದ್ರ ಶಾಸ್ತ್ರಿಗಳಿಗೆ ತುಂಬಾ ಗೌರವ ಮತ್ತು ಹೆಮ್ಮೆ. ಭಾಲಚಂದ್ರ ಶಾಸ್ತ್ರಿಗಳೂ ತಕ್ಕ ಮಟ್ಟಿಗೆ ಜ್ಯೋತಿಷ್ಯ ತಿಳಿದಿದ್ದರು. ಆದ್ರೆ ಅದು ಅವರ specialty ಇರಲಿಲ್ಲ. ಹೀಗಾಗಿ ಅವರ ಕಡೆ ಜ್ಯೋತಿಷ್ಯದ ಜಟಿಲ ಪ್ರಶ್ನೆ, ಕ್ಲಿಷ್ಟ ಸವಾಲು ಇತ್ಯಾದಿ ತಂದವರನ್ನು ಅವರು - ಇದಕೆಲ್ಲಾ ನೀವು ಹೋಗಿ ಪ್ರೊಫೆಸರ್ ಹೆಗಡೆ ಅವರನ್ನ ನೋಡ್ರೀ. ಶಾಸ್ತ್ರಬದ್ಧವಾಗಿ ಜ್ಯೋತಿಷ್ಯ ಕಲಿತು, ಕಲಿಸಬಲ್ಲವರು ಅಂದ್ರ ಅವರು. ಇಂತಾದಕ್ಕೆಲ್ಲಾ ಅವರೇ ಸರಿ - ಅಂತ ತುಂಬು ಹೃದಯದಿಂದ ನಮ್ಮ ತಂದೆಯವರ ಕಡೆ ಅಂತಹ ಜನರನ್ನು ಯಾವದೇ ಪೂರ್ವಾಗ್ರಹಗಳಿಲ್ಲದೆ, ಪ್ರೀತಿಯಿಂದ ಕಳಿಸಿದವರು ಭಾಲಚಂದ್ರ ಶಾಸ್ತ್ರಿಗಳು. ಕಾಲೇಜಿನ್ಯಾಗ physics ಕಲಿಸೋ ಮಾಸ್ತರಿಗೆ ಏನು ಜ್ಯೋತಿಷ್ಯ ಗೊತ್ತಿರ್ತದ? ಅನ್ನೋ ಕೆಲ ಕರ್ಮಠ ಬ್ರಾಹ್ಮಣರ ಚಿಕ್ಕ ಮನಸ್ಸು ಶಾಸ್ತ್ರಿಗಳದ್ದು ಅಲ್ಲವೇ ಅಲ್ಲ. ಇದೇ ತರಹ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವೇದಗಳ ಬಗ್ಗೆ, ಕೆಲವು ಅನುಷ್ಠಾನಗಳ ಬಗ್ಗೆ ಪ್ರಶ್ನೆ ಬಂದಾಗ ನಮ್ಮ ತಂದೆಯವರು ಮೊದಲು ಹೋಗುತ್ತಿದ್ದುದು ಭಾಲಚಂದ್ರ ಶಾಸ್ತ್ರಿಗಳ ಬಳಿಯೇ. ಅದ್ವೈತ ಪರಂಪರೆಯ ದೊಡ್ಡ ದೊಡ್ಡ ಸ್ವಾಮಿಗಳೇ ಭಾಲಚಂದ್ರ ಶಾಸ್ತ್ರಿಗಳ ಸಲಹೆ ಕೇಳುತ್ತಿದ್ದರು. ಆ ಮಟ್ಟಿಗಿತ್ತು ಅವರ ಪಾಂಡಿತ್ಯ.
 
ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಸೋದರ ಪ್ರೊ. ಎಂ. ಎನ್. ಜೋಶಿ ಅವರು ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು. ನಮ್ಮ ತಂದೆಯವರಿಗೆ ಕೊಂಚ ಹಿರಿಯ ಸಹೋದ್ಯೋಗಿ. ಕೆಲ ವರ್ಷಗಳ ನಂತರ ಭಾಲಚಂದ್ರ ಶಾಸ್ತ್ರಿಗಳ ಸುಪುತ್ರ ಶ್ರೀ ವೀ. ಬೀ. ಜೋಶಿ ಸಹ ಕರ್ನಾಟಕ ಕಾಲೇಜಿನಲ್ಲೇ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಶುರು ಮಾಡಿ ನಮ್ಮ ತಂದೆಯವರ ಕಿರಿಯ ಸಹೋದ್ಯೋಗಿ ಆದರು. ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಎಷ್ಟೋ ಜನ ಸಮಕಾಲೀನ ಪಂಡಿತರು  ನಮ್ಮ ತಂದೆಯವರಿಗೆ ಹಿರಿಯರಿದ್ದಂತೆ. ಹೀಗಾಗಿ ಒಳ್ಳೆಯ ಸಂಬಂಧ, ಪರಿಚಯ ಎಲ್ಲ ಇತ್ತು ಶಾಸ್ತ್ರಿಗಳ ಜೋಡಿ ನಮ್ಮ ತಂದೆಯವರದು.

೧೯೮೪-೮೫ ರ ಸಮಯ. ದೊಡ್ಡ ಉದ್ಯಮಿ ಶ್ರೀ ಆರ್. ಎನ್. ಶೆಟ್ಟಿಯವರು ಮುರುಡೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದ್ದರು. ಅದು ಅವರ ಹುಟ್ಟೂರು. ಮುರುಡೇಶ್ವರ ದೇವಸ್ಥಾನ ಅಂದ್ರೆ ಜನ ಆಶ್ಚರ್ಯ ಪಡಬೇಕು, ಆ ರೀತಿಯಲ್ಲಿ ಅದನ್ನು ಮಾಡಬೇಕು ಅಂತ ನಿಶ್ಚಯಿಸಿ ದುಡ್ಡು ಕಾಸಿನ ಪರವಾ ಮಾಡದೆ, ಕೋಟ್ಯಂತರ ರೂಪಾಯಿ ಸುರಿದು, ಒಂದು ಕುಗ್ರಾಮವಾಗಿದ್ದ ಮುರುಡೇಶ್ವರವನ್ನು ಇವತ್ತಿನ ಸ್ಥಿತಿಗೆ ತಂದವರು ಶೆಟ್ಟರು.

ಶೆಟ್ಟರು ಮುರುಡೇಶ್ವರದಾಗ ದೊಡ್ಡ ದೇವಸ್ಥಾನ ಏನೋ ಕಟ್ಟಿ ಮುಗಿಸಿಬಿಟ್ಟರು. ಆದರ ಮುಂದ ಏನು? ದೇವಸ್ಥಾನ ಮೊದಲೂ ಇತ್ತು ಅಲ್ಲೆ. ಇವರು ಮಾಡಿದ್ದು ಜೀರ್ಣೋದ್ಧಾರ. ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಅದನ್ನು ಮತ್ತ ತೆಗಿಬೇಕು ಅಂದ್ರ ಏನೇನೋ ಪೂಜಿ ಪುನಸ್ಕಾರ ಎಲ್ಲ ಆಗಬೇಕು. ಸಾಧಾರಣ ಪೂಜಾರಿಗಳಿಗೆ, ಭಟ್ಟರಿಗೆ ಅವೆಲ್ಲ ಗೊತ್ತಿರೋದಿಲ್ಲ. ಅದಕೆಲ್ಲಾ ವೇದಗಳ ಕರ್ಮಕಾಂಡ ಅನ್ನೋ ಭಾಗದಾಗ ಹೋಗಿ, ಸರಿಯಾದ ಮಂತ್ರ, ಅನುಷ್ಠಾನ ಇತ್ಯಾದಿ ಆರಿಸಿ ತಂದು, ಸರಿ ಮಾಡಿ ಪೂಜಿ ಮಾಡಿದ ಮೇಲೇನೇ ಜೀರ್ಣೋದ್ಧಾರ ಮುಗಿದಂಗ. ಆನಂತರವೇ ದೇವಸ್ಥಾನ ತೆಗಿಬಹುದು.

ಈಗ ಶೆಟ್ಟರು ಅಂತಹ ಪಂಡಿತರನ್ನು ಹುಡಕಲಿಕ್ಕೆ ಶುರು ಮಾಡಿದರು. ಶೆಟ್ಟರು ನಮಗ ಮೊದಲಿಂದಲೂ ಭಾಳ ಕ್ಲೋಸ್.

ಭಟ್ಟರೇ, ಒಂದು ಕೆಲಸ ಆಗಬೇಕಿತ್ತು, ಅಂತ ಅನಕೋತ್ತ ಒಂದು ದಿವಸ ಶೆಟ್ಟರು ಬಂದೇ ಬಿಟ್ಟರು.

ಶೆಟ್ಟರಿಗೆ ಎಲ್ಲ ಬ್ರಾಹ್ಮಣರೂ  ಭಟ್ಟರೇ. ಹೀಗಾಗಿ ನಮ್ಮ ತಂದೆಯವರು ಸಹ ಅವರಿಗೆ ಭಟ್ಟರೇ.

ಏನ್ರೀ ಶೆಟ್ಟರೆ? ಏನು ಕೆಲಸ? - ಅಂತ ನಮ್ಮ ತಂದೆಯವರು ಕೇಳಿದರು.

ಮುರುಡೇಶ್ವರದ ಕೆಲಸ ಎಲ್ಲ ಮುಗಿಯಲಿದೆ. ದೇವಸ್ಥಾನ ತೆಗಿಲಿಕ್ಕಿದೆ. ಪೂಜೆ ಎಲ್ಲ ಮಾಡಲಿಕ್ಕಿದೆ. ಅದೇನೋ ದೊಡ್ಡ ದೊಡ್ಡ ಪೂಜೆಯಂತೆ. ಭಾರಿ ಭರ್ಜರೀ ಭಟ್ಟರೇ ಬೇಕಂತೆ. ಹೌದಾ? ನಿಮಗೆ ಯಾರಾದರೂ ಆ ನಮೂನಿ ದೊಡ್ಡ ಭಟ್ಟರು ಗೊತ್ತುಂಟಾ? ಒಳ್ಳೆ ಮಂಡೆ ಬಿಸಿ ಮಾರ್ರೆ - ಅಂತ ಹೇಳಿದ್ರು ಶೆಟ್ಟರು.

ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಜಕಣಾಚಾರಿ ತರಹದ ಶಿಲ್ಪಿಗಳನ್ನ ಕರೆಸಿ, ಎಲ್ಲೆಲ್ಲಿಂದಲೋ ಏನೇನೋ ಸಾಮಾನು ತರಿಸಿ, ಸಮರೋಪಾದಿಯಲ್ಲಿ ಕೆಲಸ ಮಾಡಿ ಮುರುಡೇಶ್ವರದ ಗುಡಿ ಕಟ್ಟಿಸಬೇಕಾದ್ರೂ ಶೆಟ್ಟರಿಗೆ ಇಷ್ಟು ಮಂಡೆ ಬಿಸಿ ಆಗಿರಲಿಕ್ಕೆ ಇಲ್ಲ. ಈಗ ದೊಡ್ಡ ಪೂಜಿಗೆ ಅದಕ್ಕೆ ಸರಿಯಾದ ದೊಡ್ಡ ಭಟ್ಟರನ್ನು ಹುಡುಕೋದು ಮಾತ್ರ ಶೆಟ್ಟರಿಗೆ ದೊಡ್ಡ ತಲೆ ಬಿಸಿಯಾಗಿ ಹೋತು. ಕೇಳಿದ ಪಂಡಿತರು ಒಬ್ಬಬ್ಬರು ಒಂದೊಂದು ತರಹಾ ಹೇಳ್ತಾರ. ಇದು ಹೀಂಗ ಬಗೆಹರಿಯೋದು ಅಲ್ಲ. ಇದಕ್ಕ ಮತ್ತ ತಮ್ಮ ಆಪ್ತ ಭಟ್ಟರು, ಅಲ್ಲ ಹೆಗಡೇರು, ಕಡೆನೇ ಹೋಗಬೇಕು ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ಬಂದಿದ್ದರು.

ಶೆಟ್ಟರೆ, ಚಿಂತೆ ಬೇಡ. ನಮ್ಮ ಹೊನ್ನಾವರದ ಕರ್ಕಿಯಲ್ಲಿ ಒಬ್ಬ ದೊಡ್ಡ ಪಂಡಿತರು ಇದ್ದಾರೆ. ಅವರನ್ನು ಕಾಣುವ - ಅಂತ ಶೆಟ್ಟರಿಗೆ ಹೇಳಿ, ಅವರಿಗೆ ಆ ದೊಡ್ಡ ಪಂಡಿತರನ್ನು ಗುರ್ತು ಮಾಡಿಸಿಕೊಟ್ಟರು ನಮ್ಮ ತಂದೆಯವರು.

ಆ ಕರ್ಕಿ ಪಂಡಿತರು ಖರೆ ದೊಡ್ಡ ಪಂಡಿತರು. ಮೂಲ ದೇವಸ್ಥಾನದ ಜೀರ್ಣೋದ್ಧಾರ ಮಾಡೋದು, ಅದಕ್ಕ ತಕ್ಕ ಪೂಜೆ ಪುನಸ್ಕಾರ ಮಾಡೋದು ಅಂದ್ರ ಸಣ್ಣ ಮಾತಲ್ಲ ಅಂತ ಅವರಿಗೆ ಗೊತ್ತೇ ಇತ್ತು.

ನನಗ ಇದ್ದರ ಬಗ್ಗೆ ಎಲ್ಲಾ ಗೊತ್ತದ. ಜೀರ್ಣೋದ್ಧಾರ ಹೇಗೆ ಸರಿಯಾಗಿ ಶಾಸ್ತ್ರಬದ್ಧವಾಗಿ ಮಾಡಬೇಕು ಅಂತ ಹೇಳಬಲ್ಲೆ. ಆದರೂ ನಾನೂ ಸಹಿತ ಇನ್ನೊಬ್ಬ ಪಂಡಿತರನ್ನ consult ಮಾಡಬೇಕು. ಅವರ ಜೋಡಿ meeting ಎಲ್ಲಾ ಮಾಡಸ್ರೀ - ಅಂದ್ರು ಆ ಹೊನ್ನಾವರದ ಪಂಡಿತರು.

ಯಾರ್ರೀ ಅವರು ಆ ಪಂಡಿತರು? ನೀವು ಭೆಟ್ಟಿ ಮಾಡಬೇಕು ಅಂದವರು? - ಅಂತ ನಮ್ಮ ತಂದೆ ಕೇಳಿದರು.

ಧಾರವಾಡದೊಳಗ ಭಾಲಚಂದ್ರ ಶಾಸ್ತ್ರಿ ಅಂತ ಇದ್ದಾರ. ನನಗ ಛೊಲೋ ಪರಿಚಯ ಅದ. ಅವರ ಜೋಡಿ ನಾ ಎಲ್ಲಾ ಫುಲ್ ಚರ್ಚೆ ಮಾಡಿ, ಅವರ ಸಲಹೆ ಎಲ್ಲಾ ತೊಗೋಂಡ ಮ್ಯಾಲೆನೇ ನಾ ನಿಮಗ ಜೀರ್ಣೋದ್ಧಾರಕ್ಕಾಗಿ ಮಾಡಬೇಕಾದ ಪೂಜಾ ವಿದಿಗಳ ಬಗ್ಗೆ ಎಲ್ಲಾ ಬರೆದು ಕೊಡತೇನಿ. ನಂತರ ನೀವು ಸರಿಯಾದ ವೈದಿಕರನ್ನು ಹಿಡಿದು ಎಲ್ಲಾ ಮಾಡಿಸಿಕೊಳ್ಳಿ - ಅಂತ ಅಂದ್ರು ಆ ಕರ್ಕಿ ಪಂಡಿತರು.

ಯಾರು ಈ ಹೊಸ ಭಟ್ಟರು? ಎಂತಾ ಶಾಸ್ತ್ರಿ ಅಂದ್ರು? - ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ನೋಡಿದರು.

ಶೆಟ್ಟರೆ, ಚಿಂತೆ ಬೇಡ. ಅವರು ಭಾಲಚಂದ್ರ ಶಾಸ್ತ್ರಿಗಳು ಅಂತ. ನನ್ನ ಗುರುಗಳು ಅವರು. ನಾ ಎಲ್ಲ ಮಾಡುವೆ - ಅಂತ ಶೆಟ್ಟರಿಗೆ ನಮ್ಮ ತಂದೆಯವರು ಹೇಳಿದರು.

ಕರ್ಕಿ ಪಂಡಿತರಿಗೆ ಹಿಂತಿಂತ ದಿವಸ ಧಾರವಾಡಕ್ಕೆ ಬರ್ರಿ, ಕಾರು ಗೀರು ಎಲ್ಲಾ ವ್ಯವಸ್ಥೆ ಮಾಡ್ತೇವಿ, ಭಾಲಚಂದ್ರ ಶಾಸ್ತ್ರಿಗಳ ಜೋಡಿನೂ ಮೀಟಿಂಗ್ ಫಿಕ್ಸ್ ಮಾಡಿಸಿ, ಎಲ್ಲಾ ರೆಡಿ ಮಾಡಿ ಇಟ್ಟಿರ್ತೇವಿ. ನೀವು ಬಂದು, ಭಾಲಚಂದ್ರ ಶಾಸ್ತ್ರಿಗಳ ಜೋಡಿ ಎಲ್ಲಾ ಚರ್ಚೆ ಮಾಡಿ, ನಮ್ಮ ಮುರುಡೇಶ್ವರ ಜೀರ್ಣೋದ್ಧಾರದ ಪೂಜಾ ವಿಧಾನಗಳಿಗೆ ಒಂದು user manual ರೆಡಿ ಮಾಡಿಕೊಟ್ಟು ಹೋಗಿ ಬಿಡ್ರೀ. ಭಾಳ ಸಹಾಯ ಆಗ್ತದ, ಅಂತ ವಿನಂತಿ ಮಾಡಿಕೊಂಡು, ನಮಸ್ಕಾರ ಮಾಡಿ, ದಕ್ಷಿಣಾ ಗಿಕ್ಷಿಣಾ ಕೊಟ್ಟು ಬಂದ್ರು ಅಂತಾತು.

ಫಿಕ್ಸ್ ಮಾಡಿದ ದಿವಸ ಕರ್ಕಿ ಪಂಡಿತರು ಬಂದ್ರು. ಆರ್. ಎನ್. ಶೆಟ್ಟರು ಬಂದ್ರು. ಮೊದಲು ಎಲ್ಲಾ ನಮ್ಮ ಮನಿಗೇ ಬಂದ್ರು. ಅಲ್ಲಿಂದ ಶೆಟ್ಟರ ಆ ಕಾಲದ ಭಯಂಕರ ಲಕ್ಸುರಿ ವಾಹನ ಕಾಂಟೆಸ್ಸಾ ಕಾರ್ ಒಳಗ ಎಲ್ಲಾರೂ ಕೂಡಿ ಹಳೆ ಧಾರವಾಡದಲ್ಲಿದ್ದ ಭಾಲಚಂದ್ರ ಶಾಸ್ತ್ರಿಗಳ ಮನಿಗೆ ಹೋದರು. ನಾನೂ ಹೋಗಿದ್ದೆ. ಕಾಂಟೆಸ್ಸಾ ಕಾರ್ ಒಳಗ  ರೌಂಡ್ ಹೊಡಿಯೋದನ್ನ ಯಾರು ಬಿಡ್ತಾರ್ರೀ?! ಆ ಕಾಲದ ಮಹಾ ತುಟ್ಟಿ ಕಾರ್ ಅದು.

ಭಾಲಚಂದ್ರ ಶಾಸ್ತ್ರಿಗಳ ಮನಿ ಬಂತು. ದೊಡ್ಡವರೆಲ್ಲಾ ಇಳಿದು ಹೋದರು. ನಾನು ಮಾತ್ರ ಶೆಟ್ಟರ ಗಂಟ ಮಾರಿ ಡ್ರೈವರ್ ತಾನಾಜಿ ಜೋಡಿ ಕಾಂಟೆಸ್ಸಾ ಕಾರ್ ಒಳಗೇ ಕೂತೆ. ಅವನ ಕಡೆ ಅದು ಇದು ಕೇಳಿಕೋತ್ತ. ನಾ ಹತ್ತು ಪ್ರಶ್ನೆ ಕೇಳಿದರ ಆವಾ ಗಂಟ ಮಾರಿ ತಾನಾಜಿ ರೊಕ್ಕ ಖರ್ಚು ಆಗ್ತದೇನೋ ಅನ್ನೋರಾಂಗ, ಹೌದು, ಇಲ್ಲ, ಅಂತ ಉತ್ತರ ಕೊಡವಾ. ನಾ ಎಲ್ಲರೆ ಶೆಟ್ಟರ ಕಾಂಟೆಸ್ಸಾ ಕಾರ್ ಏನರೆ ಮಾಡಿಬಿಡ್ತೆನೇನೋ ಅಂತ ಅವಂಗ tension ಇದ್ದಂಗ ಅನ್ನಸ್ತಿತ್ತು. ನಾ ಏನ್ ಮಾಡಲಿಲ್ಲ ಬಿಡ್ರೀ.

ಕರ್ಕಿ ಪಂಡಿತರು, ಶೆಟ್ಟರು, ನಮ್ಮ ತಂದೆಯವರು ಭಾಲಚಂದ್ರ ಶಾಸ್ತ್ರಿಗಳ ಮನಿ ಒಳಗ ಹೋದರಲ್ಲ, ಮುಂದೇನಾತು? ನಾ ಏನ ಒಳಗ ಹೋಗಿರಲಿಲ್ಲ. ತಂದೆಯವರಿಂದ ಕೇಳಿದ್ದು. ಸ್ವಾರಸ್ಯಕರ  ಘಟನೆ.

ಕರ್ಕಿಯಿಂದ ತಮ್ಮ ಸ್ನೇಹಿತ ದೊಡ್ಡ ಪಂಡಿತರು ಬರ್ಲಿಕತ್ತಾರ. ಅದೂ ಏನೇನೋ ದೊಡ್ಡ ಚರ್ಚೆ ಮಾಡಲಿಕ್ಕೆ. ಯಾವದಕ್ಕೂ ಇರಲಿ ಅಂತ ಭಾಲಚಂದ್ರ ಶಾಸ್ತ್ರಿಗಳೂ ಸಹ ತಮ್ಮ ನಂಬಿಕಸ್ತ ಇನ್ನೊಂದಿಷ್ಟು ಜನ ಪಂಡಿತರನ್ನೂ ಸಹ ಕಲೆ ಹಾಕಿಕೊಂಡು ಕೂತಿದ್ದರು ತಮ್ಮ ಮನಿಯೊಳಗ.

ಪಂಡಿತರೆಲ್ಲರ ಉಭಯಕುಶಲೋಪರಿ ಇತ್ಯಾದಿ ಮಾತುಕತೆ ಮುಗಿದು ಮುಖ್ಯ ಪಾಯಿಂಟಿಗೆ ಎಲ್ಲರೂ ಬಂದ್ರು.

ಮುರುಡೇಶ್ವರದ ದೇವಸ್ಥಾನದ ಜೀರ್ಣೋದ್ಧಾರ ಹ್ಯಾಂಗೆ ಮಾಡಬೇಕು? ವೇದಗಳು, ಪುರಾಣಗಳು ಇತ್ಯಾದಿ ಏನು ಹೇಳ್ತಾವ? ಯಾವ ಯಾವ ಅನುಷ್ಠಾನ ಮಾಡಬೇಕು? ಅವಕ್ಕ ಮಂತ್ರಾ ಎಲ್ಲೆಲ್ಲಿಂದ ಎತ್ತಬೇಕು? ಪ್ರತಿಯೊಂದಕ್ಕೂ ಶಾಸ್ತ್ರಾಧಾರ ಎಲ್ಲೆ ಅದ? ಕೆಲವೊಂದು ಅನುಷ್ಠಾನಗಳು ಬೇರೆ ಬೇರೆ ವೇದದಲ್ಲಿ ಬೇರೆ ಬೇರೆ ತರಹ ಅವ. ಅವನ್ನ ಹ್ಯಾಂಗೆ reconcile ಮಾಡಬೇಕು - ಅಂತ ದೊಡ್ಡ ಮಟ್ಟದ ಚರ್ಚೆ, ಸಂವಾದ ಎಲ್ಲಾ ನೆರದ ಪಂಡಿತರಲ್ಲಿ ಆತು.

ಶೆಟ್ಟರು, ನಮ್ಮ ತಂದೆಯವರು ಸುಮ್ಮ ಕೇಳಿಕೋತ್ತ, ನೋಡಿಕೋತ್ತ ಕೂತರು.

ಇಷ್ಟೆಲ್ಲಾ ಮಂದಿ ಪಂಡಿತರು ಕೂಡಿ ಒಂದು ನಿರ್ಧಾರಕ್ಕೆ ಬರೋದು ಸಾಧ್ಯ ಅದ ಏನ್ರೀ?

ಯಾವದೋ ಒಂದು ಪಾಯಿಂಟ್ ಸಿಕ್ಕಾಪಟ್ಟೆ ತೊಂದ್ರೀ ತಂದು ಇಡ್ತು. ಕೆಲೊ ಮಂದಿ ಈ ವೇದದ, ಈ ಶಾಖೆಯೊಳಗ ಹೀಂಗ ಅದ, ಅದೇ ಸರಿ, ಅದರ ಪ್ರಕಾರನೇ ಮಾಡಬೇಕು ಅಂದ್ರ, ಉಳಿದ ಮಂದಿ, ಏ... ಅದು ತಪ್ಪು....ಮತ್ತೊಂದು ವೇದದ, ಮತ್ತೊಂದು ಶಾಖೆಯಲ್ಲಿ ಅದು ಹೀಂಗದ, ಅದೇ ಸರಿ, ಅದರಾಂಗೇ ಮಾಡಬೇಕು, ಅಂತ. ಅವರಲ್ಲೇ ವಾದ, ವಿವಾದ. ಒಟ್ಟಿನ್ಯಾಗ ಒಂದು ಒಪ್ಪಂದಕ್ಕೆ ಬರವಲ್ಲರು ಈ ದೊಡ್ಡ ದೊಡ್ಡ ಪಂಡಿತ ಮಂದಿ.

ಹತ್ತು ನಿಮಿಷಾತು, ಹದಿನೈದು ನಿಮಿಷಾತು, ಅರ್ಧಾ ತಾಸಾತು, ಪೌಣೆ ತಾಸಾತು. ಈ ಪಂಡಿತರ ಆ ವೇದ ಸರಿ, ಈ ವೇದ ಸರಿಯಲ್ಲ ಅನ್ನೋ ವಾದ ವಿವಾದ ಮುಗಿವಲ್ಲದು. ಈಗ temper ಬ್ಯಾರೆ rise ಆಗಿ ಕೆಲೊ ಮಂದಿ ಸುಮಾರು ಜಗಳಾನೇ ಮಾಡ್ಲಿಕತ್ತಾರ! ಹಾಂ!!! ಹವಾ ಫುಲ್ ಗರಂ!!

ಏನ್ರೀ ಭಟ್ಟರೇ ಅಲ್ಲಲ್ಲ ಹೆಗಡೇರೆ?! ಇದೆಂತಾ ಭಟ್ಟರ ಜಗಳ? - ಅನ್ನೋ ಲುಕ್ ಶೆಟ್ಟರು ನಮ್ಮ ತಂದೆಯವರಿಗೆ ಕೊಟ್ಟರು.

ದೊಡ್ಡ ಮಂದಿ ಚರ್ಚಾ ನೆಡದದ. ಎಲ್ಲಾ ನಿಮ್ಮ ಮುರುಡೇಶ್ವರದ ಜೀರ್ಣೋದ್ಧಾರಕ್ಕಾಗಿ. ಮಾಡ್ಲಿ ಬಿಡ್ರೀ ಅವರು ಚರ್ಚಾ. ಹೀಂಗ ಚರ್ಚಾ ಆದ್ರೆ ಮಾತ್ರ ನಿಮಗ ಸರಿಯಾಗಿ ಪೂಜಾ syllabus ಸಿಗೋದು. ಇಲ್ಲಂದ್ರ ಇಲ್ಲ - ಅಂತ ನಮ್ಮ ತಂದೆಯವರು ಶೆಟ್ಟರಿಗೆ ಕಣ್ಣ ಸನ್ನಿಯೊಳಗೇ ಹೇಳಿದರು.

ಏನೋ ದೊಡ್ಡ ಭಟ್ಟರ ದೊಡ್ಡ ಜಗಳಾ, ಅಂತ ಶೆಟ್ಟರು ವಾಚ್ ನೋಡ್ಕೊತ್ತ ಕೂತರು.

ಪೌಣಾ ತಾಸು ಹೋಗಿ ಒಂದು ತಾಸಾಗ್ಲಿಕ್ಕೆ ಬಂತು. ಈ ಪಂಡಿತರು ಇನ್ನೂ ಆ ವೇದ, ಈ ಶಾಖೆ, ಆ ಮಂತ್ರ, ಈ ಅನುಷ್ಠಾನ ಅಂತ ಇನ್ನೂ ತಮ್ಮ ವಾದ ವಿವಾದ ಮುಗಿಸವಲ್ಲರು. ಒಟ್ಟಿನ್ಯಾಗ ಇವರ ಜಗಳ ಬಗೆಹರಿವಲ್ಲದು. ಚರ್ಚೆ ಹೋಗಲಿ ಈಗ ಎಲ್ಲಾರೂ ಭುಸು ಭುಸು ಅನಕೋತ್ತ ಕೂತಾರ. ಮುಂದೇನು ಹೀಂಗ ಆದ್ರ?

ನಮ್ಮ ತಂದೆಯವರಿಗೆ ಅದು ಎಲ್ಲಿಂದ ಏನು ಪ್ರೇರಣೆ ಆತೋ ಗೊತ್ತಿಲ್ಲ. ಒಂದು ಬಾಂಬ್ ಒಗದೇ ಬಿಟ್ಟರು!

ಆ ವೇದ, ಈ ವೇದ ಏನ್ರೀ? ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

ಫುಲ್ ಸೈಲೆನ್ಸ್!

ಎಲ್ಲ ದೊಡ್ಡ ಪಂಡಿತರು ಒಂದು ಕ್ಷಣ ಫುಲ್ ಥಂಡಾ. ಏನು ಇವ ಕಾಲೇಜಿನ್ಯಾಗ ಕಲಿಸೋ ಮಾಸ್ತರ್ ಒಳ್ಳೆ ಅಧಿಕಪ್ರಸಂಗಿ ಹಾಂಗ, ನಮ್ಮ ದೊಡ್ಡ ಪಂಡಿತರ ಚರ್ಚಾ ನಡೆದಾಗ, ನಡು ಉಪದ್ವಾಪಿತನ ಮಾಡತಾನ? ಹಾಂ?! ಬುದ್ಧಿ ಗಿದ್ಧಿ ಅದನೋ ಇಲ್ಲೋ ಇವರಿಗೆ?! - ಅಂತ ಕೆಲೊ ಮಂದಿ ಮಾರಿ ಮ್ಯಾಲೆ ಏನೇನೋ ತರಹದ ಭಾವಗಳು ಮೂಡಿ ಮರೆಯಾದವು.

ನಮ್ಮ ತಂದೆಯವರನ್ನು ಅರಿತಿದ್ದ ಕೆಲ ಪಂಡಿತರು ಮಾತ್ರ, ಈ ಹೆಗಡೆಯವರು ಏನೋ ಪಾಯಿಂಟ್ ಇಟಗೋಂಡೇ ಹೀಗಂದಾರ. ಏನಿರಬಹುದು? - ಅಂತ ಕುತೂಹಲಿಗಳಾದ್ರು. ಕೆಲೊ ಮಂದಿ ದೇಶಾವರಿ ನಗು ನಕ್ಕರು.

ಮೊದಲು ಸುಧಾರಿಕೊಂಡು ಮಾತಾಡಿದವರು ಭಾಲಚಂದ್ರ ಶಾಸ್ತ್ರಿಗಳೇ.

ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ ಅಂತ ಇಷ್ಟು ಗುಂಡು ಹೊಡೆದಂಗ ಹೇಳಲಿಕತ್ತಿರಲ್ಲಾ ಹೆಗಡೆಯವರ, ಅದು ಹ್ಯಾಂಗ್ರೀ? ಅದನ್ನೂ ಸ್ವಲ್ಪ ಹೇಳಿಬಿಡ್ರಲ್ಲಾ. ಹಾಂ! - ಅಂತ ಭಾಲಚಂದ್ರ ಶಾಸ್ತ್ರಿಗಳು ಕೇಳಿದರು. ಮಾತಿನಲ್ಲಿ ಅಕ್ಕರೆಯಿತ್ತು. ಸಣ್ಣ ಹುಡುಗುರು ಏನೋ ದೊಡ್ಡ ಮಾತಾಡಿದಾಗ ದೊಡ್ಡವರು ಮಾತಾಡೋ ಪ್ರೀತಿಯ ಧಾಟಿ ಇರ್ತದಲ್ಲ. ಹಾಂಗೆ.

ವೇದಾನಾಂ ಸಾಮ ವೇದೋಸ್ಮೀ, ಅಂದ್ರ, ವೇದಗಳಲ್ಲಿ ನಾನು ಸಾಮವೇದವಾಗಿದ್ದೇನೆ, ಅಂತ ಭಗವದ್ಗೀತೆಯೊಳಗೆ ಭಗವಾನ ಶ್ರೀ ಕೃಷ್ಣನೇ ಹೇಳಿಬಿಟ್ಟಾನ. ಅಂದ ಮ್ಯಾಲೆ ಮತ್ತೇನ್ರೀ ಶಾಸ್ತ್ರಿಗಳ?! ಎಲ್ಲಿ ಆ ವೇದ ಈ ವೇದ ಹಚ್ಚೀರಿ? ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ - ಅಂತ ಅಂದ್ರು ನಮ್ಮ ತಂದೆಯವರು.

(ವೇದಾನಾಂ ಸಾಮ ವೇದೋಸ್ಮೀ - ಭಗವದ್ಗೀತಾ ಅಧ್ಯಾಯ ೧೦, ಶ್ಲೋಕ ೨೨)

ಈಗ ಭಾಲಚಂದ್ರ ಶಾಸ್ತ್ರಿಗಳು ಮಾತ್ರ ಅಲ್ಲ ಎಲ್ಲರೂ ಸ್ವಲ್ಪ loosen up ಆದರು. ಆ ಪರಿ ಫುಲ್ ಟೈಟ್ ಆಗಿದ್ದ ವಾತಾವರಣ ಸ್ವಲ ತಿಳಿ ಆತು.

ಅಧಿಕಪ್ರಸಂಗಿತನ ಮಾಡಿದರೂ ಶಾಸ್ತ್ರೋಕ್ತವಾಗಿ, ಎಲ್ಲಾ ಫುಲ್ ಶಾಸ್ತ್ರದ ಸಪೋರ್ಟ್ ಇಟ್ಟೇ  ಮಾಡ್ತೀರಿ ನೋಡ್ರೀ ಹೆಗಡೆಯವರ!!!! ಅನ್ನೋ ಲುಕ್ ಭಾಲಚಂದ್ರ ಶಾಸ್ತ್ರಿಗಳ ಮುಖದಲ್ಲಿ.

ಎಲ್ಲ ಪಂಡಿತರ ಮುಖದ ಮ್ಯಾಲಿನ ಗಂಟೆಲ್ಲ ಮಾಯವಾಗಿ, ಮೋಡ ಕವಿದ ವಾತಾವರಣ ತಿಳಿಯಾಗಿ, ಎಲ್ಲರೂ ಎಲ್ಲಾ ಬಿಚ್ಚಿ (ಅಂದ್ರ ಮನಸ್ಸು ಇತ್ಯಾದಿ ಮಾತ್ರ) ನಕ್ಕರು. ಮುಂದೆ ಎಲ್ಲಾ ಸುರಳೀತ ಆತು.

ತಂದೆಯವರ ಮಾತಿನ ಹಿಂದೆ ಯಾವದೇ ಕುಚೋದ್ಯ ಇರಲಿಲ್ಲ. ಕಾವೇರುತ್ತಿದ್ದ ವಾತಾವರಣಕ್ಕೆ ಒಂದು ತಣ್ಣನೆ ಟಚ್ ಕೊಡುವ ಯತ್ನವಿತ್ತು ಅಷ್ಟೇ. ಹಾಗಾಗಿ ಯಾರೂ ಸಿಟ್ಟಿಗೇಳಲಿಲ್ಲ.

ಶೆಟ್ಟರೂ ಸಹಾ ಹೇ! ಹೇ! ಅಂತ ನಕ್ಕರು. ಅವರಿಗೆ ಯಾವ ವೇದ ಆದರೇನು, ಒಟ್ಟಿನ್ಯಾಗ ಈ ದೊಡ್ಡ ಭಟ್ಟರ ಜಗಳ ಮುಗಿದು ಅವರ ಪೂಜಿ ಆದ್ರ ಸಾಕು. ಅವರಿಗೆ ಮಾಡಲಿಕ್ಕೆ ಸಾವಿರ ಕೆಲಸ ಬ್ಯಾರೆ ಅವ. ಸಾವಿರಾರು ಕೋಟಿ ಆ ಕಡೆಯಿಂದ ಈ ಕಡೆ ಹಾಕೋವಾಗ ಸಹಿತ ಶೆಟ್ಟರು ಇಷ್ಟು ತಲಿ ಕೆಡಿಸ್ಕೊತ್ತಾರೋ ಇಲ್ಲೋ! ಈ ಭಟ್ಟರು ಮಾತ್ರ ಇಷ್ಟು ರಿಪಿ ರಿಪಿ ಮಾಡ್ತಾರ!

ನಂತರ ಶಾಸ್ತ್ರಿಗಳು, ವೇದಾನಾಂ ಸಾಮ ವೇದೋಸ್ಮೀ, ಅಂತ ಭಗವದ್ಗೀತಾ ಒಳಗ ಕೃಷ್ಣ ಹೇಳಿದ್ದರ ಅರ್ಥ ಏನು, ಮತ್ತ ಪೂಜಾವಿಧಿ ವಿಧಾನ ಎಲ್ಲಾ ಹ್ಯಾಂಗ ಹೆಚ್ಚಾಗಿ ರಿಗ್ವೇದ, ಯಜುರ್ವೇದಿಂದ ಬರ್ತಾವ, ಅದು ಇದು ಅಂತ ಒಂದು ಸಣ್ಣ ಪ್ರವಚನ ಕೊಟ್ಟು, ಶಾಸ್ತ್ರಬದ್ಧವಾಗಿಯೇ ಅಧಿಕಪ್ರಸಂಗಿತನ ಮಾಡಿದ್ದ ತಂದೆಯವರಿಗೆ ಒಂದೆರಡು ಉತ್ತತ್ತಿ ಪ್ರಸಾದದಲ್ಲಿ ಹೆಚ್ಚೇ ಕೊಟ್ಟು, ಆಶೀರ್ವಾದ ಮಾಡಿ ಕಳಿಸಿದ್ದು ಭಾಲಚಂದ್ರ ಶಾಸ್ತ್ರಿಗಳ ದೊಡ್ಡ ಗುಣ.

ಮುಂದೆ ಭಾಲಚಂದ್ರ ಶಾಸ್ತ್ರಿಗಳು ಮತ್ತು ಇತರೆ ಪಂಡಿತರು ಎಲ್ಲಾ ಕೂಡಿ ಒಂದು proper vedic syllabus ಮಾಡಿ ಕೊಟ್ಟರು. ಅದರ ಪ್ರಕಾರ ಗೋಕರ್ಣದ ದೊಡ್ಡ ದೊಡ್ಡ ವೈದಿಕರು ಬಂದು ಶಾಸ್ತ್ರಸಮ್ಮತವಾಗಿ ಮುರುಡೇಶ್ವರದ ಜೀರ್ಣೋದ್ಧಾರ ಪೂಜೆ ಅದು ಇದು ಎಲ್ಲಾ ಮಾಡಿ ಕೊಟ್ಟರು.

ನಂತರ ಮುರುಡೇಶ್ವರ ಹಿಂತಿರುಗಿ ನೋಡಿಲ್ಲ. ಅಭಿವೃದ್ಧಿ ಆಗತಾನೇ ನೆಡದದ. ಭಾಲಚಂದ್ರ ಶಾಸ್ತ್ರಿಗಳ ಆಶೀರ್ವಾದ ಸಹಾ ಅದಕ್ಕೆ ಕಾರಣ.

ಇನ್ನು ಭಾಲಚಂದ್ರ ಶಾಸ್ತ್ರಿಗಳ ತಮ್ಮಾ ಪ್ರೊ. ಎಂ. ಎನ್. ಜೋಶಿ ಸರ್. ನಮ್ಮ ತಾಯಿಯವರಿಂದ ಹಿಡಿದು ನಮ್ಮ ಕುಟುಂಬದ ಕರ್ನಾಟಕ ಕಾಲೇಜಿಗೆ ಹೋದ ಎಲ್ಲರಿಗೂ ಸಂಸ್ಕೃತ ಕಲಿಸಿದವರು. ನಮ್ಮ ತಂದೆಯವರನ್ನು ಬಿಟ್ಟು. ಅವರ ಸಮಕಾಲೀನರು ಅವರು. ದೊಡ್ಡ ಪಂಡಿತರು. ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಗಳಲ್ಲಿ ಪೂರ್ತಿ ಪಾಂಡಿತ್ಯ. ಅವರ ಲೆಕ್ಚರ್ ಅಂದ್ರ ಏನ್ರೀ! ಸೂಪರ್!

ಪಿಯೂಸಿ ಮೊದಲನೇ ವರ್ಷ ಎಂ. ಎನ್. ಜೋಶಿ ಸರ್ ಕಾಳಿದಾಸನ ಯಾವದೋ ಒಂದು ಕಾವ್ಯದ ಮೇಲೆ ಅಮೋಘ ಲೆಕ್ಚರ್ ಕೊಟ್ಟು, what effect does it produce? ಅಂತ ಕೇಳಿದ್ದರು. ಆಗ ಮಾತ್ರ ಫಿಸಿಕ್ಸ್ ಕ್ಲಾಸ್ ಮುಗಿಸಿ ಬಂದಿದ್ದ ನಾವು, ಹಿಂದಿನ ಬೆಂಚಿನಿಂದ, Raman Effect, ಅಂತ ಒದರಿದಾಗ ಎಲ್ಲರೂ ನಕ್ಕಿದ್ದರು. ಎಂ. ಎನ್. ಜೋಶಿ ಸರ್ ಕೇಳಿದ್ದು ಯಾವ poetic effect ಅಂತ. ಹೋಗಿ ಹೋಗಿ ನಾವು Raman Effect ಅಂದ್ರ ಅವರಿಗೆ ಉರಿದೇ ಇರ್ತದ ಏನ್ರೀ?! ಹಾಕ್ಕೊಂಡು ಬೈದ್ರು. ಎಲ್ಲರಿಗೆ. ಇಂಗ್ಲೀಷ್ ಮಿಶ್ರಿತ ಸಂಸ್ಕೃತದಲ್ಲಿ ಬೈದ್ರೋ ಅಥವಾ ಸಂಸ್ಕೃತ ಮಿಶ್ರಿತ ಇಂಗ್ಲೀಷ್ ಒಳಗ ಬೈದ್ರೋ, ದೇವರಿಗೇ ಗೊತ್ತು. ಪುಣ್ಯಕ್ಕ ನನ್ನ ಒಬ್ಬವನ್ನೇ ಎಬ್ಬಿಸಿ ನಿಲ್ಲಿಸಿ ಬೈಲಿಲ್ಲ. ಎಲ್ಲಾರಿಗೂ ಕೂಡೆ ಹಾಕ್ಕೊಂಡು ಬೈದ್ರು.

ಇನ್ನು ವೀ.ಬೀ.ಜೋಶಿ ಸರ್. ಭಾಲಚಂದ್ರ ಶಾಸ್ತ್ರಿಗಳ ಪುತ್ರ. ದೊಡ್ಡ ಪಂಡಿತರು. ಅವರು ನಮಗೆ ಪಿಯುಸಿ ಎರಡನೇ ವರ್ಷ ಸಂಸ್ಕೃತ ಕಲಿಸಿದವರು. ಯಾವಾಗಲೂ ಒಂದು ಕಾಫಿ ಕಲರ್ ಕೋಟ್ ಮತ್ತು ಅದೇ ಬಣ್ಣದ್ದೋ ಅಥವಾ ಕರಿ ಬಣ್ಣದ್ದೋ ಟೊಪ್ಪಿಗಿ ಅವರ ತಲಿ ಮ್ಯಾಲೆ. ಅವರ ನೋಡಿದಾಕ್ಷಣ, ಅವರ ಬೋರ್ನವಿಟಾ ಬಣ್ಣದ ಖಾಯಂ ಕೋಟ್ ನೋಡಿದಾಕ್ಷಣ ನಮ್ಮ ಕಿಡಿಗೇಡಿ ದೋಸ್ತ ಒಬ್ಬ ಅವರಿಗೆ 'ಬೋರ್ನವಿಟಾ ಭಟ್ಟಾ' ಅಂತ ಹೆಸರು ಇಟ್ಟುಬಿಟ್ಟ. ಕೆಟ್ಟ ಹುಡುಗ. ಭಾರೀ ಮಸ್ತ ಸಂಸ್ಕೃತ ಕಲಸ್ತಿದ್ದರು. ಭಾಲಚಂದ್ರ ಶಾಸ್ತ್ರಿಗಳಂತಹ ತಂದೆಗೆ ತಕ್ಕ ಮಗ ಅವರು. ಕೇವಲ ಪಾಂಡಿತ್ಯದಿಂದ ಮಾತ್ರ ಬರುವಂತಹ ಒಂದು ತರಹದ ತೇಜಸ್ಸು ಅವರ ಮುಖದಲ್ಲಿ. ಈಗ ಅವರೂ ಸಹ ರಿಟೈರ್ ಆಗಿರಬಹುದು.

ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದ್ದು ಬಹುಶ ಎರಡೇ ಸರಿ. ಒಂದು ಓಪನ್ ಏರ್ ಥೀಯೇಟರ್ ನಲ್ಲಿ. ಇನ್ನೊಮ್ಮೆ ಶೃಂಗೇರಿ ಸ್ವಾಮಿಗಳು ಯಾರದೋ ಮನೆಗೆ ಪಾದಪೂಜೆಗೆ ಬಂದಾಗ ನೋಡಿ, ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಂಡಿದ್ದು.

ಅದು ಏನೋ ಏನೋ! ಭಾಲಚಂದ್ರ ಶಾಸ್ತ್ರಿಗಳು ಹೋಗಿದ್ದೇ ಹೋಗಿದ್ದು ಈ ಎಲ್ಲ ನೆನಪುಗಳು ಬಂದು ಬಿಟ್ಟವು. ಬರೆಯೋ ತನಕಾ ನೆಮ್ಮದಿ ಇಲ್ಲ.

5 comments:

ಸುಬ್ರಹ್ಮಣ್ಯ ಭಾಗ್ವತ್ said...

ನಗ್ತಾ ನಗ್ತಾನೇ ಹಿರಿಯರ ಹಿರಿತನವನ್ನು ಚೆನ್ನಾಗಿ ಬರ್ದಿದ್ದೀರಿ ಮಹೇಶಣ್ಣಾ :) ಸೂಪರ್

Mahesh Hegade said...

ಧನ್ಯವಾದ ಭಾಗವತರೇ!

ದೀಪಕ್ ಕುಲಕರ್ಣಿ said...

ಚೊಲೋ ಬರದಿಪಾ ..ಧಾರವಾಡದ ಎಲ್ಲ ಭಟ್ಟರ ಮ್ಯಾಲೆ ಸ್ಟೋರಿ ಬರಿಬಹುದು..:-)

Vimarshak Jaaldimmi said...


Excellent writing!

Not a hyperbole: Upama Kalidasasya; Blog Maheshsasya!

So far, no Kannada writer has received a Nobel prize in literature - worth recommending yours!

Mahesh Hegade said...

Thanks, Deepak! :)