Friday, December 27, 2013

ಚಂದ್ರಂಗ ಬಾಲ ಹಚ್ಚಿ ಬಾಲಚಂದ್ರ ಯಾಕ ಮಾಡಬೇಕು ಅಂತ ಹೇಳಿ 'ಏನೇನೋ' ಸೀಳಿ 'ಭಾ'ಲಚಂದ್ರ ಮಾಡಿಬಿಟ್ಟಿದ್ದು!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.)

ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಬಾಲಚಂದ್ರ ಶಾಸ್ತ್ರಿಗಳು....ಯಾವಾಗ  ಕೇಳಿದೆ ಈ ಹೆಸರು ಮೊದಲ ಬಾರಿಗೆ ಅಂತ ವಿಚಾರ ಮಾಡಿದೆ.

ಒಮ್ಮೆ ಭಾಳ ಸಣ್ಣವ ಇದ್ದಾಗ, ತಾಯಿಯವರ ಜೋಡಿ ಅಲ್ಲೆಲ್ಲೋ ದತ್ತಾತ್ರಯ ದೇವರ ಗುಡಿ ಹತ್ತಿರ ಹೊಂಟಾಗ, ತಾಯಿಯವರು ಏನೋ ತೋರಿಸಿ - ಇದs ನೋಡು ಬಾಲಚಂದ್ರ ಶಾಸ್ತ್ರಿಗಳ ಸಂಸ್ಕೃತ ಪಾಠಶಾಲಿ. ದೊಡ್ಡ ಸಂಸ್ಕೃತ ಪಂಡಿತರು ಅವರು. ಅವರ ತಮ್ಮಾ ಅಂದ್ರ ಎಂ. ಎನ್. ಜೋಶಿ ಪ್ರೊಫೆಸರ್. ನಮಗ ಕರ್ನಾಟಕ ಕಾಲೇಜ್ ಒಳಗ ಸಂಸ್ಕೃತ ಕಲಸ್ತಿದ್ದರು. ನಿಮ್ಮ ಅಪ್ಪನ colleague - ಅಂತ ಹೇಳಿದ್ದು  ನೆನಪು.

ಹಾಂ!!! ಅಣ್ಣನ ಹೆಸರು ಬಾಲಚಂದ್ರ ಶಾಸ್ತ್ರಿ. ತಮ್ಮನ ಹೆಸರು ಎಂ. ಎನ್. ಜೋಶಿ. ಅದೆಂಗ ಬ್ಯಾರೆ ಬ್ಯಾರೆ ಅಡ್ಡೆಸರು??!! - ಅಂತ ಕಿಡಿಗೇಡಿ ವಿಚಾರ ತಲಿಯೊಳಗ ಅವತ್ತು ಬಂದಿತ್ತಾ? ನೆನಪಿಲ್ಲ. ಬಂದಿರಲಿಕ್ಕೆ ಇಲ್ಲ. ಭಾಳ ಸಣ್ಣವ ಇದ್ದೆ ಅಂತ ಹೇಳಿದ್ನ್ಯಲ್ಲ. ಅವತ್ತೇನು ಭಾಳ ವರ್ಷದ ತನಕಾ ಶಾಸ್ತ್ರಿ ಅಂಬೋದು ಅವರಿಗೆ ಬಂದ ಬಿರಿದು (ಉಪಾಧಿ) ಅಂತ ನನಗ ಗೊತ್ತೇ ಇರಲಿಲ್ಲ ಬಿಡ್ರೀ.

ಅಷ್ಟು ಸಣ್ಣವ ಇದ್ದಾಗ ಶಾಸ್ತ್ರಿ ಅನ್ನೋದು ಸಹಿತ ಒಂದು ತರಹದ ವಿಶೇಷ ಹೆಸರೇ ಬಿಡ್ರೀ. ಬಾಲಚಂದ್ರ ಶಾಸ್ತ್ರಿ ಅನ್ನೋ ಹೆಸರು ಕೇಳೋ ಮೊದಲು ಕೇಳಿದ್ದ ಏಕೈಕ ಶಾಸ್ತ್ರಿ ಅಂದ್ರ ನಮ್ಮ ಮುತ್ತಜ್ಜ ಸಿರ್ಸಿ ಕೃಷ್ಣ ಶಾಸ್ತ್ರಿ. ಅವರೂ ಸಹ ದೊಡ್ಡ ಪಂಡಿತರು ಇದ್ದರಂತ. ಲಗೂನ ತೀರಿಕೊಂಡರು. ಆದರೂ ತೀರಿಕೊಳ್ಳೋ ಮೊದಲು ಆ ಕಾಲದ ಮೈಸೂರ ಮಹಾರಾಜರಿಂದ ಒಂದು ದೊಡ್ಡ ಬಂಗಾರದ ಕಡಗ ಅವರ ಮಹಾನ ಪಾಂಡಿತ್ಯಕ್ಕೆ ಅಂತ ಪ್ರೈಸ್ ಹೊಡಕೊಂಡ ಮ್ಯಾಲೇ ತೀರಿಕೊಂಡರು. ಹಾಂಗಾಗಿ ಈ ಬಾಲಚಂದ್ರ ಶಾಸ್ತ್ರಿಗಳೂ ಕೂಡ ಅದೇ ಟೈಪಿನ ಬಂಗಾರದ ಕಡಗ ಹಾಕ್ಕೊಂಡು, ದೊಡ್ಡ ಚಂಡಕಿ ಬಿಟ್ಟ ಪಂಡಿತರೇ ಇರಬೇಕು ಅಂತ ಊಹಾ ಮಾಡಿದೆ. ಭಾಳ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದಾಗ ನಾ ಮೊದಲು ಮಾಡಿದ್ದ ಊಹಾ ಎಷ್ಟು ತಪ್ಪಿತ್ತು ಅಂತ ಅರಿವಾತು.

ಇದಾಗಿ ಸುಮಾರು ವರ್ಷ ಬಾಲಚಂದ್ರ ಶಾಸ್ತ್ರಿಗಳು ಮರೆತು ಹೋಗಿದ್ದರು. ಅವರ ಹೆಸರು ನೆನಪು ಆಗೋವಂತಹ ಯಾವದೇ ಘಟನೆ ನಡಿಲಿಲ್ಲ.

೧೯೮೩-೮೪ ರ ಟೈಮ್. ನಾವೆಲ್ಲಾ ಆವಾಗ ಆರನೇತ್ತಾ (೬ ಕ್ಲಾಸ್). ಕೆ.ಇ. ಬೋರ್ಡ್ ಸಾಲಿ. ಶ್ರೀಮತಿ ಅನುರಾಧಾ ಜೋಶಿ ಟೀಚರ್ ನಮ್ಮ ಕ್ಲಾಸ್ ಟೀಚರ್. ಗಣಿತ ಮತ್ತ ಇಂಗ್ಲೀಷ್ ಎರಡೂ ಅವರದ್ದೇ.

ಮಹೇಶಾ, ನಡಿ ನನ್ನ ಜೋಡಿ - ಅಂತ ಅಂದ್ರು ಜೋಶಿ ಟೀಚರ್ ಒಂದು ದಿವಸ ಪೀರಿಯಡ್ ಮುಗಿದ ಕೂಡಲೆ.

ಎಲ್ಲಿಗರಿ? ಅಂತ ಕೇಳಲಿಲ್ಲ. ಎಲ್ಲೋ ಟೀಚರ್ ಸ್ಟಾಫ್ ರೂಮಿಗೆ ಕರಕೊಂಡು ಹೋಗಿ ಏನೋ administrative ಕೆಲಸ ಕೊಡ್ತಾರ, ಮಾಡಿ ಬಂದ್ರಾತು ಅಂತ ವಿಚಾರ ಮಾಡಿದೆ. ಮಾರ್ಕ್ಸ್ ಟೋಟಲ್ ಮಾಡೋದು, ಪ್ರೋಗ್ರೆಸ್ ಕಾರ್ಡ್ ತುಂಬೋದು ಮುಂತಾದ ಕೆಲಸ ಟೀಚರ್ ನಮಗ ಆಗಾಗ ಹಚ್ಚತಿದ್ದರು. ನಾವೂ ಖುಷಿಂದ ಮಾಡಿ ಬರ್ತಿದ್ದಿವಿ. ಹಾಂಗೇ ಏನೋ ಇರಬೇಕು ಅಂತ ತಿಳಕೊಂಡು, ಟೀಚರ್ ಹಿಂದ ಅವರ ಬಾಲಂಗೋಚಿ ಹಾಂಗ ಹೊಂಟೆ.

ಟೀಚರ್ ಸ್ಟಾಫ್ ರೂಮಿಗೆ ಬಂದ್ರು. ಹಿಂದೆ ನಾನು. ಟೀಚರ್ ತಮ್ಮ ಪುಸ್ತಕಾ ಗಿಸ್ತಕಾ ಕೆಳಗ ಇಟ್ಟು, ಹುಸ್ಸ್ ಅಂತ ಉಸಿರು ಬಿಟ್ಟು, ಎಲ್ಲೋ ಅವರ ಸ್ಟಾಫ್ ರೂಂ ಡೆಸ್ಕ್ ಕೆಳಗ ಕೈ ಹಾಕಿ, ಏನೋ ಒಂದು ಪುಸ್ತಕ ತೆಗೆದು ನನ್ನ ಕೈಯ್ಯಾಗ ಇಟ್ಟರು.

ಪುಸ್ತಕ ನೋಡಿ ಏನೂ ತಿಳಿಲಿಲ್ಲ. ಏನ್ರೀ ಟೀಚರ್? - ಅನ್ನೋ ಹಾಂಗ ಟೀಚರ್ ಮಾರಿ ನೋಡಿದೆ.

ಮಹೇಶಾ, ಒಂದು ಕೆಲಸ ಆಗಬೇಕೋ. ನಾಳಿಗೇ ಆಗಬೇಕು ನೋಡು. ತಪ್ಪಬಾರದು ನೋಡು. ಒಂದು ಕೆಲಸ ಆಗಬೇಕು ನೋಡಪಾ - ಅಂದ್ರು ಜೋಶಿ ಟೀಚರ್.

ಮತ್ತೂ confusion ಆತು. ಮೊದಲು ಒಂದು ಬುಕ್ ಕೈಯ್ಯಾಗ ಇಡ್ತಾರ. ಏನಂತ ಹೇಳಂಗಿಲ್ಲ. ಮ್ಯಾಲಿಂದ ಒಂದು ಕೆಲಸ ಆಗಬೇಕು ಅಂತಾರ. ಏನಂತ ಅರ್ಥ ಮಾಡಿಕೋಬೇಕು? ಹಾಂ?!

ಏನ್ರೀ ಟೀಚರ್? - ಅಂದೆ.

ನೋಡು....ಈ ಪುಸ್ತಕ ತೊಗೋ. ಓದಿ ಇದರ ಮ್ಯಾಲೆ ಒಂದೆರಡು ಪೇಜ್ ಆಗೋವಷ್ಟು ಒಂದು ಚಂದ ನಿಬಂಧ ತಯಾರ ಮಾಡು. ನಾಳೆ ಬೇಕೇ ಬೇಕು. ಏನಪಾ? ಹೆಡ್ ಮಾಸ್ಟರ್ ಗೆ ಹೇಳಿ ಬಿಟ್ಟೇನೋ. ನಾಳೆ ತಂದು ಕೊಡತೇನಿ ಅಂತ. ಹಾಂಗಾಗಿ ಏನರೆ ಮಾಡು. ಒಟ್ಟಿನ್ಯಾಗ ಒಂದು ನಿಬಂಧ ಬರೆದು ತಂದು ಬಿಡು. ನಾ ಚೆಕ್ ಮಾಡಿ ಹೆಡ್ ಮಾಸ್ಟರ್ ಗೆ ಕೊಟ್ಟು ಬಿಡ್ತೇನಿ. ಅದೇನೋ ಸ್ಕೂಲ್ ಮ್ಯಾಗಜಿನ್ ಗೆ ಬೇಕಂತಪಾ. ನಾಳೆ ಬೇಕೇ ಬೇಕಾ ಮತ್ತ! ನೀ ತಯಾರ ಮಾಡಲಿಕ್ಕೇ ಬೇಕಾ ಮತ್ತ - ಅಂತ ಜೋಶಿ ಟೀಚರ್ ಹೇಳಿದರು. ಮತ್ತ ಮತ್ತ ಹೇಳಿದರು.

ಅವರು ಕೊಟ್ಟ ಬುಕ್ ನೋಡಿದೆ. ಕವರ್ ಪೇಜ್ ಮ್ಯಾಲೆ ಆದಿ ಶಂಕರಾಚಾರ್ಯರ ಫೋಟೋ ಇತ್ತು. ಪುಸ್ತಕ ಶಂಕರರ  ಬಗ್ಗೆ ಇತ್ತಾ ಅಥವಾ ಅವರು ಪ್ರತಿಪಾದಿಸಿದ ಅದ್ವೈತದ ಮೇಲಿತ್ತಾ? ನೆನಪಿಲ್ಲ.

ಈಗ ತಿಳೀತು. ಏನೋ ಸ್ಕೂಲ್ ಮ್ಯಾಗಜಿನ್ ಬರೋದು ಅದ. ಎಲ್ಲಾ ಕ್ಲಾಸಿನವರೂ ಒಂದೊಂದು ಆರ್ಟಿಕಲ್ ಬರೆದು ಕೊಡಬೇಕು ಅಂತ ಕಾಣಿಸ್ತದ. ನಮ್ಮ ಕ್ಲಾಸಿನ ಆರ್ಟಿಕಲ್ ಟೀಚರ್ ನನಗ ಬರೆದು ತಂದು ಕೊಡು ಅಂತ ಹೇಳಲಿಕತ್ತಾರ.

ಹೂನ್ರೀ ಟೀಚರ್. ನಿಬಂಧ ಬರೆದು ತರತೇನ್ರೀ ನಾಳೆ. ತಪ್ಪಿಸಂಗಿಲ್ಲರಿ. ನೀವು ಕೊಟ್ಟ ಬುಕ್ ಅಲ್ಲದೇ ಬೇರೆ ಬೇರೆ ಬುಕ್ ಸಹಿತ ರೆಫರ್ ಮಾಡಿ ಮಸ್ತ essay ರೆಡಿ ಮಾಡ್ತೆನ್ರೀ ಟೀಚರ್ - ಅಂತ ಹೇಳಿದೆ.

ಬ್ಯಾರೆ ಬ್ಯಾರೆ ಬುಕ್ ಅಂತ! ಇಲ್ಲದ ಡೌಲು. ನಿಬಂಧ ತಯಾರ ಮಾಡಲಿಕ್ಕೆ ಒಂದು ಫುಲ್ ದಿವಸ ಸಹಾ ಇಲ್ಲ. ಟೀಚರ್ ಕೊಟ್ಟ ಪುಸ್ತಕನೇ ಸಾಕಷ್ಟು ದೊಡ್ಡ ಸೈಜಿನದು ಅದ. ಅದನ್ನೇ ಓದಿ ಮುಗಿಸೋದು ದೊಡ್ಡ ಮಾತು. ಅಂತಾದ್ರಾಗ ಬ್ಯಾರೆ ಬುಕ್ಸ್ ಸಹಿತ ರೆಫರೆನ್ಸ್ ಮಾಡ್ತೇನಿ ಅಂತ!

ಹ್ಞೂ....ಏನರೆ  ಮಾಡು. ಒಟ್ಟಿನ್ಯಾಗ ನಾಳೆ ನಿಬಂಧ ತಯಾರ ಆಗಬೇಕು ನೋಡಪಾ, ಅಂತ ಅಂದ್ರು ಜೋಶಿ ಟೀಚರ್. ಹೆಚ್ಚಿನ motivation ಗೆ ಮತ್ತ confidence ಬರಲಿ ಅಂತ ಹೇಳಿ, ತಲಿ ಸವರಿ - ನೀ ಬರೆದು ತರ್ತಿ ಅಂತ ಖಾತ್ರಿ ಅದನೋ. ಅದಕ್ಕs ನಿನಗೇ ಹಚ್ಚೇನಿ ಈ ಕೆಲಸಾ - ಅಂದ ಜೋಶಿ ಟೀಚರ್ ಕಡೀಕ್ಕ ತಲಿ ಮ್ಯಾಲೆ ಮೈಲ್ಡ್ ಆಗಿ ಮೊಟಕಿದರು. ಅವರು ತಲಿ ಮ್ಯಾಲೆ ಹಾಂಗ ಮೊಟಕಿದರು ಅಂದ್ರ ಮಾತು ಮುಗೀತು, ಜಾಗಾ ಖಾಲಿ ಮಾಡು ಅಂತ ಅರ್ಥ. ಒಂದು ಅರ್ಥದಾಗ ಸುಪಾರಿ ಕೊಟ್ಟಂಗ ಅದು. ನಂತರ ಹೇಳಿದ ಕೆಲಸ ಮಾಡಿಕೊಂಡು ಬಂದ್ರ ಆತು.

ಟೀಚರ್ ಕೊಟ್ಟ ಬುಕ್ ಇಸ್ಕೊಂಡು ಮನಿಗೆ ಬಂದೆ. ನಿಬಂಧ ಬ್ಯಾರೆ ಬರಿಬೇಕು ಅಂತ homework ಎಲ್ಲಾ ಲಗೂ ಲಗೂ ಮಾಡಿ ಮುಗಿಸಿದೆ.

ನೋಡೋಣ ನಡೀಪಾ, ಅಂತ ಹೇಳಿ ಟೀಚರ್ ಕೊಟ್ಟ ಪುಸ್ತಕ ಓಪನ್ ಮಾಡಿದೆ.

ಬೇತಾಳ ಬೆನ್ನು ಹತ್ತಿತು ನೋಡ್ರೀ!!!!!!!

ಹಾಂಗಿತ್ತು ಆ ಪುಸ್ತಕ. ಏನೂ ತಿಳಿವಲ್ಲತು. ಏನೇನೋ ಅದ. ಏನೇನೋ ಬರದಾರ. ಒಂದೆರಡು ಪ್ಯಾರಾ ಓದೋದ್ರೊಳಗ ತಲಿ ಪೂರ್ತಿ ಕಡೆದಿಟ್ಟ ಮೊಸರ ಗಡಿಗಿ ಆಗಿ ಹೋತು! ಹೋಗ್ಗೋ!!! ಇಂತಹ ಪುಸ್ತಕ ಪೂರ್ತಿ ಓದಿ, ಅರ್ಥ ಮಾಡಿಕೊಂಡು, ಅದರ ಮ್ಯಾಲೆ ನಿಬಂಧ ಬರಿಬೇಕು. ಅದೂ ಇನ್ನೆರಡು ತಾಸಿನ್ಯಾಗ. ಇಲ್ಲಂದ್ರ ನಿದ್ದಿ ಬರ್ತದ. ಮುಂಜಾನೆ ಜಾಸ್ತಿ ಟೈಮ್ ಇರಂಗಿಲ್ಲ. ಎಲ್ಲಾ ಇವತ್ತೇ ಈ ರಾತ್ರಿನೇ ಆಗಬೇಕು.

ಹ್ಯಾಂಗಪಾ ದೇವರಾ??!!! ಅಂತ ತಲಿ ಹಿಡಕೊಂಡು ಕೂತೆ. ಟೀಚರ್ ಬ್ಯಾರೆ ನಾಳೆ ನಿಬಂಧ ತಯಾರ ಇರಲೇ ಬೇಕು ಅಂತ ಸುಪಾರಿ ಕೊಟ್ಟು ಬಿಟ್ಟಾರ. ಬರೆದುಕೊಂಡು ಹೋಗಲಿಲ್ಲ ಅಂದ್ರ ಕೆಟ್ಟ ಅವಮಾನ.

ಏನು ಮಾಡೋದು?

ಮತ್ತ ಮತ್ತ ಓದಲಿಕ್ಕೆ ಪ್ರಯತ್ನ ಮಾಡಿದೆ. ಆಕಳಿಕೆ ಬಂತೇ ಹೊರತು ತಲಿಯೊಳಗೆ ಏನೂ ಹೋಗಲಿಲ್ಲ. ಮುನ್ನುಡಿನೇ ಓದಿ ಮುಗಿಸಲಿಕ್ಕೆ ಆಗವಲ್ಲತು. ಇನ್ನೆಲ್ಲಿ ಪೂರ್ತಿ ಪುಸ್ತಕ ಓದೋದು. ಅಷ್ಟರಾಗ ರಾತ್ರಿ ಊಟದ ಟೈಮ್ ಆತು. ಊಟಕ್ಕ ಕರೆದರು. ಊಟ ಮಾಡಿ ಬಂದ ಮೇಲೆ ನೋಡಿದರ ಆತು ಅಂತ ಬಿಟ್ಟೆ.

ಊಟ ಮಾಡಿದ ಮ್ಯಾಲೆ ಎಂತೆಂತ ರೋಚಕ ಪುಸ್ತಕ ಓದಿದರೂ ನಿದ್ದಿ ಬರ್ತದ. ಇನ್ನು ಇಂತಹ ಪುಸ್ತಕ ಓದಿದರ ಅಷ್ಟ ಮತ್ತ. ಆದರೂ ಪ್ರಯತ್ನ ಮಾಡಿದೆ. ಸಿಕ್ಕಾಪಟ್ಟೆ ಆಕಳಿಕೆ ಬಂತು.

ಆ ಪರಿ ಆಕಳಿಸೋದು ನೋಡಿ - ಹೋಗಿ ಮಲ್ಕೋ, ಸಾಕು ಓದಿದ್ದು - ಅಂದ್ರು ನಮ್ಮ ತಾಯಿ. ಅವರಿಗೆಲ್ಲಿ ಹೇಳಿಕೋತ್ತ ಕೂಡಲಿ ನನ್ನ ನಿಬಂಧ ಬರಿಲಿಕ್ಕೆ ತೊಗೋಂಡ ಸುಪಾರಿ ಬಗ್ಗೆ.

ಏನು ಮಾಡೋದು? ಎಷ್ಟೇ ಪ್ರಯತ್ನ ಮಾಡಿದರೂ ಪುಸ್ತಕದ ಮುನ್ನುಡಿಯ ಮೊದಲನೇ ಪೇಜ್ ಬಿಟ್ಟು ಮುಂದು ಹೋಗಲಿಕ್ಕೆ ಆಗವಲ್ಲದು. ಲಾಸ್ಟ್ ಟ್ರಿಕ್ ಅಂತ ಹೇಳಿ ಒಂದು ಉಪಾಯ ಮಾಡಿದೆ.

ಮುನ್ನುಡಿಯ ಪ್ರತಿ ಪ್ಯಾರಾದಿಂದ ಒಂದೋ ಎರಡೋ ಪಾಯಿಂಟ್ ಒಂದು ಹಾಳಿ ಒಳಗ ಬರಕೋತ್ತ ಹೋದೆ. ನೋಟ್ಸ್ ಮಾಡಿಕೊಂಡಂಗ ಅನ್ರೀ. ಅಷ್ಟು ಮಾಡೋದ್ರಾಗ ಸಿಕ್ಕಾಪಟ್ಟೆ ನಿದ್ದಿ ಬಂದು, ಮಾರಿ ಹೋಗಿ ನೋಟ್ ಬುಕ್ಕಿಗೆ ಅಪ್ಪಳಿಸಿ, ಮೂಗು ಚಪಟ್ ಆಗಿ, ನೋವಾಗಿ, ನಿಬಂಧ ತಯಾರ್ ಆಗಿಲ್ಲ ಅಂತ ಮತ್ತೂ ಹೆಚ್ಚು tension ಆಗಿ......ರಾಮ ರಾಮ....ಕೇಳಬ್ಯಾಡ್ರೀ ನಮ್ಮ ಹಾಲತ್.

ಹ್ಯಾಂಗೂ ನೋಟ್ಸ್ ಮಾಡಿದ್ದು ಆತು, ಆ ನೋಟ್ ಮಾಡಿಕೊಂಡ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ(?) ಮಾಡಿ ಕೂಡಿಸಿ, ನಮಗ ತಿಳದ ಮಟ್ಟಿಗೆ ಬರೆದು ಬಿಟ್ಟರೆ ಒಂದು ಎರಡು ಪೇಜ್ ಆಗಿ ಹೋಗ್ತಾವ. ಅದನ್ನೇ ಕೊಟ್ಟು ಬಿಟ್ಟರ ಆತು, ಅಂತ ವಿಚಾರ ಮಾಡಿ ಮಲ್ಕೊಂಡು ಬಿಟ್ಟೆ. ಜೈ ಶಂಭುಲಿಂಗಾ!!! ಮುಂಜಾನೆ ಲಗೂ ಎಬ್ಬಸಪಾ  ದೇವರಾ. ನಿಬಂಧ ಬರೀಬೇಕು - ಅಂತ ಹೇಳಿ ಮಲಗಿದ್ದೆನಾ? ನೆನಪಿಲ್ಲ.

ರಾತ್ರಿ ಎಲ್ಲಾ ನಿಬಂಧದ ಬಗ್ಗೆನೇ ಕನಸು. ಎಲ್ಲಾ ದುಸ್ವಪ್ನಗಳೇ. ಒಂದೂ ಸ್ವೀಟ್ ಡ್ರೀಮ್ಸ್ ಇಲ್ಲ ತೊಗೊರೀ!

ಮುಂಜಾನೆ ಲಗೂನ ಎದ್ದುಬಿಟ್ಟೆ. ನಿಬಂಧದ tension ಇತ್ತಲ್ಲ.

ಎದ್ದು ನೋಟ್ಸ್ ಮತ್ತ ನೋಡಿಕೊಂಡೆ. ಉಳಿದ ಪುಸ್ತಕ ಸಹಿತ ಕಣ್ಣಾಡಿಸಿ ನೋಟ್ಸ್ ಮಾಡಲೋ ಏನೋ ಅಂತ ವಿಚಾರ ಮಾಡಿದೆ. ಟೈಮ್ ಇರಲಿಲ್ಲ. ಅದರಕಿಂತ ಹೆಚ್ಚಾಗಿ ಜೋಶಿ ಟೀಚರ್ ಕೊಟ್ಟ ಪುಸ್ತಕ ಓದಿ ಅರ್ಥ ಮಾಡಿಕೊಳ್ಳೋವಷ್ಟು ತಲಿ ಆವತ್ತಿನ ಮಟ್ಟಿಗೆ ಇರಲಿಲ್ಲ.

ಮಾಡಿಕೊಂಡಿದ್ದ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ ಮಾಡಿ ಜೋಡಿಸಿ, ನಮಗ ತಿಳಿದ ಮಟ್ಟಿಗೆ ಒಂದು ನಿಬಂಧ ಛಂದ ಅಕ್ಷರದಾಗ ತಯಾರ ಮಾಡಿಬಿಟ್ಟೆ. ಏನೋ ಒಂದೆರಡು ತಾಸು ಖರ್ಚ ಮಾಡಿರಬೇಕು ಬಿಡ್ರೀ. ನಿಬಂಧ ಛಂದ ಅಂತೂ ಬಂತು. ನೋಡಲಿಕ್ಕೆ ಅಷ್ಟೇ ಮತ್ತ. ಒಳಗಿನ ಹೂರಣ ಹ್ಯಾಂಗಿತ್ತೋ ಏನೋ? ಯಾರಿಗೆ ಗೊತ್ತು?

ಎರಡು ಫುಲ್ ಉದ್ದನೆ ಪೇಜ್ ಒಂದಕ್ಕೊಂದು ಸ್ಟೇಪಲ್ ಮಾಡಿ, ಅದು ಪಾಟಿಚೀಲದಾಗ ಮುದ್ದಿ ಆಗದಂಗ ಒಂದು ರಟ್ಟಿನ ಫೈಲ್ ಫೋಲ್ಡರ್ ಒಳಗ ಅದನ್ನು ಇಟ್ಟು, ಭಾಳ ಕಾಳಜಿಯಿಂದ ಅವತ್ತು ಪಾಟಿಚೀಲಾ ಸೈಕಲ್ ಕ್ಯಾರಿಯರ್ ಗೆ ಹಾಕದೇ, ಹೆಗಲಿಗೆ ಹಾಕಿಕೊಂಡೇ ಸಾಲಿಗೆ ಸೈಕಲ್ ಹೊಡದೆ. ಸೂಟಿ ಬಿಟ್ಟಾಗ ಜೋಶಿ ಟೀಚರ್ ಗೆ ನಿಬಂಧ ಕೊಟ್ಟರಾತು ಅಂತ ಬಿಟ್ಟೆ. ಆ ಪ್ರಸಂಗ ಬರಲೇ ಇಲ್ಲ.

ಮೊದಲನೇ ಪಿರಿಯಡ್ absent ಪಿರಿಯಡ್ ಇತ್ತು. absentee ಟೀಚರ್ ಆಗಿ ಯಾರು ಬರಬೇಕು ಹೇಳ್ರೀ? ಜೋಶಿ ಟೀಚರ್! ಬಂದವರೇ ಕ್ಲಾಸ್ ಮಂದಿಗೆ ಏನೋ ಕೆಲಸಾ ಹಚ್ಚಿ, ನನಗ, ಬಾ, ಅಂತ ಕಣ್ಣಾಗs ಹೇಳಿದರು. ನಿಬಂಧ ನೋಡಬೇಕು, ತೊಗೊಂಡು ಬಾ ಅಂತ ಬ್ಯಾರೆ ಹೇಳೋ ಜರೂರತ್ ಅವರಿಗೆ ಕಾಣಲಿಲ್ಲ. ನಾ ಅಂತೂ ನಿಬಂಧ ಕೈಯ್ಯಾಗ ಹಿಡಕೊಂಡೇ ಅಡ್ಯಾಡಲಿಕತ್ತಿದ್ದೆ.

ಜೋಶಿ ಟೀಚರ್ ನಿಬಂಧ ತೊಗೊಂಡು ಓದಲಿಕ್ಕೆ ಶುರು ಮಾಡಿದರು. ತಪ್ಪಿದ್ದರ ತಿದ್ದಲಿಕ್ಕೆ ಅಂತ ಕೆಂಪ ಬಣ್ಣದ ಪೆನ್ನು ಅವರ ಕೈಯ್ಯಾಗ ಥಕಾ ಥಕಾ ಅಂತ ಕುಣಿಲಿಕತ್ತಿತ್ತು.

ಮಹೇಶಾ, ಒಂದು ಮಾತು - ಅಂತ ಹೇಳಿದ ಜೋಶಿ ಟೀಚರ್ ನನ್ನ ಕಡೆ ನೋಡಿದರು. ನಾ ಅವರ ಟೇಬಲ್ ಬಾಜೂಕೇ ನಿಂತಿದ್ದೆ.

ಏನ್ರೀ ಟೀಚರ್? - ಅಂತ ಕೇಳಿದೆ.

ಎಲ್ಲಾ ಕಡೆ 'ಭಾ'ಲಚಂದ್ರ ಶಾಸ್ತ್ರಿ, 'ಭಾ'ಲಚಂದ್ರ ಶಾಸ್ತ್ರಿ ಅಂತ ಬರದೀ. ಅದು 'ಭಾ'ಲಚಂದ್ರನೋ ಅಥವಾ ಬಾಲಚಂದ್ರ ಇರಬಹುದೋ? ಗೊತ್ತದ ಏನು? - ಅಂತ ಟೀಚರ್ ಕೇಳಿದರು. ಅವರ ಮಾರಿ ಮ್ಯಾಲೂ ಫುಲ್ confusion. ನೋಡಲಿಕ್ಕೆ ಮಸ್ತ ಇತ್ತು.

ಏ....ಟೀಚರ್....ಅದು 'ಭಾ'ಲಚಂದ್ರನೇ ಬಿಡ್ರೀ. ಸಂಶಯ ಬ್ಯಾಡ್ರೀ. ನೀವು ಕೊಟ್ಟ ಪುಸ್ತಕದಾಗೂ ಹಾಂಗೇ ಇತ್ತರಿ. ಅದಕ್ಕರೀ,  ನಾನೂ ಸಹಿತ 'ಭಾ'ಲಚಂದ್ರ 'ಭಾ'ಲಚಂದ್ರ ಅಂತ ಬರೆದು ಬಿಟ್ಟೆರಿ - ಅಂತ ಫುಲ್ confidence ನಿಂದ ಹೇಳಿದೆ.

ಹಾಂಗಾ???!!! - ಅನ್ನೋ ಲುಕ್ ಟೀಚರ್ ಕೊಟ್ಟರು.

ಹೂನ್ರೀ. ಹಾಂಗರೀ - ಅನ್ನೋ ಲುಕ್ ನಾ ತಿರುಗಿ ಕೊಟ್ಟೆ.

ಹ್ಞೂ - ಅಂದ ಟೀಚರ್ ಉಳಿದ essay ಓದೋದ್ರಲ್ಲಿ ಮಗ್ನರಾದರು.

ಹ್ಞೂ....ಮಸ್ತ ಬರದೀ. essay ಛೊಲೋ ಬಂದದ. ಹೆಡ್ ಮಾಸ್ತರಿಗೆ ಕೊಡಲೀ? - ಅಂತ ಟೀಚರ್ ಕೇಳಿದರು.

ಕೊಡ್ರೀ ಟೀಚರ್. ಅದ್ರಾಗ ಏನ್ರೀ? - ಅಂತ ಫುಲ್ guarantee ಕೊಡೋರ ಹಾಂಗೆ ಹೇಳಿದೆ.

ಮತ್ತಾ... ನಾ ಕೊಟ್ಟ ಬುಕ್? - ಅಂತ ಟೀಚರ್ ಕೇಳಿದರು. ಏನೂ ಮರಿಯೋ ಪೈಕಿ ಅಲ್ಲ ಜೋಶಿ ಟೀಚರ್.

ಅದನ್ನ ಕೊಡೋದೇ ಮರ್ತೆ ನೋಡ್ರೀ ಟೀಚರ್ - ಅಂತ ಹೇಳಿ ಅವರು ಕೊಟ್ಟ ಬುಕ್ ಅವರಿಗೆ ವಾಪಸ್ ಕೊಟ್ಟೆ. ಬೆನ್ನ ಮೇಲಿನ ಬೇತಾಳ ಬೆನ್ನು ಬಿಟ್ಟು ಹಾರಿ ಹೋಗಿ, ಮೈಯ್ಯೆಲ್ಲಾ ಹೂವಿನಷ್ಟು ಹಗುರವಾದ ಅನುಭವ. ಫುಲ್ ರಿಲೀಫ್.

ಆವತ್ತು ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ನಿಬಂಧದ ಒಳಗ ಬಾಲಚಂದ್ರ ಹೋಗಿ 'ಭಾ'ಲಚಂದ್ರ ಆದವರು ಬೇರೆ ಯಾರೂ ಅಲ್ಲ, ಇದೇ ಬ್ರಹ್ಮರ್ಷಿ ಬಾಲಚಂದ್ರ ಶಾಸ್ತ್ರಿಗಳು!

ಪುಸ್ತಕಕ್ಕೆ ಮುನ್ನುಡಿ ಬರೆದವರು ಯಾರೋ ಬಾಲಚಂದ್ರ ಶಾಸ್ತ್ರಿಗಳ ಶಿಷ್ಯರೋ, ಪರಿಚಯದವರೋ ಇರಬೇಕು ಬಿಡ್ರೀ. ಅದಕ್ಕೇ ಮಾತಿಗೊಮ್ಮೆ ಬಾಲಚಂದ್ರ ಶಾಸ್ತ್ರಿಗಳು ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಅಂತ ಮುನ್ನುಡಿಯೊಳಗ ಮತ್ತ ಮತ್ತ quote ಮಾಡಿದ್ದರು. ನಾವೂ ಸಹ ನಮ್ಮ ನಿಬಂಧದ ಸೇಫ್ಟಿಗೆ ದೊಡ್ಡ ಪಂಡಿತರ ಹೆಸರು ಇರಲಿ ಅಂತ ಎಲ್ಲಾ ಕಡೆ ಅವರ ಹೆಸರು ಭಾಲಚಂದ್ರ ಭಾಲಚಂದ್ರ ಅಂತ ಬರೆದಿದ್ದೆ.

ಅದ್ಯಾಕೆ 'ಭಾ'ಲಚಂದ್ರ ಅಂತ ಮಹಾಪ್ರಾಣ ಹಾಕಿ ಬರದೆ? ಅಂತ ಕೇಳಿಕೊಂಡರ ಉತ್ತರ ಈಗ ನೆನಪು ಆಗವಲ್ಲತು.

ನೋಡ್ರೀ....ನಮಗ ಆವತ್ತಿನ ಮಟ್ಟಿಗೆ 'ಬಾಲ' ಅಂದ್ರ ತಿಳಿದಿದ್ದು ಅಂದ್ರ ಮಂಗ್ಯಾನ ಬಾಲ, ಕತ್ತಿ ಬಾಲ, ನಾಯಿ ಬಾಲ, ಆ ಬಾಲ, ಈ ಬಾಲ. ಬಾಲ ಅಂದ್ರ ಒಟ್ಟಿನ್ಯಾಗ ಪಶುಗಳಿಗೆ ಇರೋ ಬಾಲ ಅಂತನೇ ನಮ್ಮ ಅಚಲ ನಂಬಿಕೆ. ಅದರ ಬಿಟ್ಟು ಬಾಲ ಅಂದ್ರ ಸಣ್ಣದು, ಚಿಕ್ಕದು ಅನ್ನುವ ಅರ್ಥಗಳು ನಮಗ ಖರೇ ಅಂದ್ರೂ ಗೊತ್ತಿರಲಿಲ್ಲ. ಆರನೇತ್ತಾ ಹುಡುಗಗ ಬಾಲ ಅನ್ನೋದರ ವಿವಿಧ ಅರ್ಥ ಗೊತ್ತಿಲ್ಲ, ಎಂತಾ ಹಶಿ ಧಡ್ಡ ಇದ್ದಾನ ಇವಾ?! ಅಂತ ನೀವು ಅಂದುಕೊಂಡರೂ ತೊಂದ್ರೀ ಇಲ್ಲರೀ. ಇದ್ದಿದ್ದು ಹೇಳಿದೆ. ಅಷ್ಟೇ.

ಬಾಲ ಏನಿದ್ದರೂ ಮಂಗ್ಯಾಗ ಇರೋದು. ಮುರುಳಿ ಅನ್ನೋ ಹುಡುಗ್ಗ ಬಾಲ ಹಚ್ಚಿ ಬಿಟ್ಟರ ಬಾಲಮುರುಳಿ ಆಗ್ತಾನ. ಕೃಷ್ಣಗ ಹಿಂದ ಒಂದು ಬಾಲ ಹಚ್ಚಿ ಬಿಟ್ಟರೆ ಬಾಲಕೃಷ್ಣ ಆಗಿ ಬಿಡ್ತಾನ - ಅಂತ ಜೋಕ್ ಮಾಡೋ ಕಿಡಿಗೇಡಿಗಳು ನಾವು. ಆವತ್ತು ನಮ್ಮ ಕನ್ನಡದ ಜ್ಞಾನ ಹಾಂಗಿತ್ತು.

ಹೀಂಗಿದ್ದಾಗ ಅಷ್ಟು ದೊಡ್ಡ ಶಾಸ್ತ್ರಿಗಳಿಗೆ, ಅವರ ಹೆಸರಿಗೆ ಬಾಲ ಹಚ್ಚೋದು ಅಂದ್ರ ಏನ್ರೀ?! ಅದಕ್ಕಾ ಬ್ಯಾಡ ಅಂತ ಹೇಳಿ ಅವರ ಹೆಸರು 'ಭಾ'ಲಚಂದ್ರ ಶಾಸ್ತ್ರಿ ಅಂತ ಮಾಡಿ ಬರೆದು ಬಿಟ್ಟಿದ್ದೆನಾ? - ಅಂತ ಈಗ ಡೌಟ್.

ಅದು ಬ್ಯಾರೆ ಇನ್ನೊಂದು ಲಫಡಾ ಬ್ಯಾರೆ ಆಗಿತ್ತು. ಅದೂ ಕಾರಣ ಇರಬಹುದು ಬಿಡ್ರೀ.

ಒಂದು ವರ್ಷ ಮೊದಲು ಅಂದ್ರ ಐದನೇತ್ತಾ (೫ ಕ್ಲಾಸ್) ಇದ್ದಾಗ, ಕನ್ನಡ ಟೀಚರ್ ಒಬ್ಬರು ಪರೀಕ್ಷಾ ಒಳಗ ಒಂದು ಅರ್ಧಾ ಮಾರ್ಕ್ಸ್ ಕಟ್ ಮಾಡಿ ಬಿಟ್ಟಿದ್ದರು. ಕಾರಣ - ಬುದ್ಧ ಬರೆಯೋವಾಗ ಮಹಾಪ್ರಾಣ ಕೊಡದೇ ಬುದ್ದ ಅಂತ ಬರೆದು ಬಿಟ್ಟಿದ್ದೆ. ಅದಕ್ಕ ಅಂತ ಅರ್ಧಾ ಮಾರ್ಕ್ಸ್ ಕಟ್ ಮಾಡಿದ್ದರಂತ. ಅದರ ಮ್ಯಾಲೆ ಊರು ತುಂಬಾ ಡಂಗುರಾ ಬ್ಯಾರೆ ಹೊಡೆದು ಬಿಟ್ಟಿದ್ದರು ಆ ಟೀಚರ್.

ಏ....ಆವಾ ಹೆಗಡೆ ಮಸ್ತ ಪೇಪರ್ ಬರದಿದ್ದಾ. ಆದ್ರ ಬುದ್ಧ ಬರಿಯೋವಾಗ ಕುಂಡಿ ಸೀಳೋದನ್ನ ಮರೆತಾ ನೋಡ್ರೀ ಅದಕ್ಕಾ ಅರ್ಧಾ ಮಾರ್ಕ್ಸ್ ಕಟ್ ಮಾಡಿಬಿಟ್ಟೆ. ಕುಂಡಿ ಒಂದು ಸೀಳಿ ಬಿಟ್ಟಿದ್ದರ ಫುಲ್ ಸೆಂಟ್ ಪರ್ಸೆಂಟ್ ಕೊಟ್ಟು ಒಗೆದು ಬಿಡಾಕಿ ನಾ. ಕುಂಡಿ ಸೀಳದೇ ಅರ್ಧಾ ಮಾರ್ಕ್ಸ್ ಕಳಕೊಂಡಾ ಪಾಪ!!! - ಅಂತ ಅವರ ಡಂಗುರಾ. ಏನಂತೀರಿ ಇದಕ್ಕ??!!

ಯಾವ ಪರಿ ಡಂಗುರಾ ಹೊಡೆದಿದ್ದರು ಅಂದ್ರ - ಏನಲೇ ಕುಂಡಿ ಸೀಳಲಿಕ್ಕೆ ಬರೋದಿಲ್ಲಾ ನಿನಗ? - ಅಂತ ಕಂಡವರು ಚಾಸ್ಟಿ ಮಾಡೋ ಹಾಂಗ. ಸೂಡ್ಲೀ!!!

(ಮಹಾಪ್ರಾಣ ಕೊಡುವದಕ್ಕೆ ಧಾರವಾಡ ಕಡೆ 'ಕುಂಡಿ ಸೀಳೋದು' ಅನ್ನುತ್ತಾರೆ. ಬೇರೆ ಅಪಾರ್ಥ ಬೇಡ.)

ಕುಂಡಿ ಸೀಳಲಿಕ್ಕೆ ಬರದವಾ. ಕುಂಡಿ ಸೀಳದೆ ಅರ್ಧಾ ಮಾರ್ಕ್ಸ್ ಕಳಕೊಂಡವಾ, ಅಂತ ಕೇಳಿ ಕೇಳಿ ಒಂದು ತರಹದ ಮಾನಸಿಕ್ ಆಗಿ ಬಿಟ್ಟಿದ್ದೆನೋ ಏನೋ? ಯಾರಿಗ್ಗೊತ್ತ?!

ಹೀಂಗಾಗಿ ನಾನು wholesale ಒಳಗ ಎಲ್ಲಾ ಕಡೆ, ಎಲ್ಲಾದರ ಕುಂಡಿ ಸೀಳಿ ಮಹಾಪ್ರಾಣ ಕೊಡಲಿಕ್ಕೆ ಶುರು ಮಾಡಿಬಿಟ್ಟಿದ್ದೆನೋ ಏನೋ? ಗೊತ್ತಿಲ್ಲ. ಹೀಂಗಾಗಿ ಮತ್ತ ಜೋಶಿ ಟೀಚರ್ ಸಹಾ, ಕುಂಡಿ ಸೀಳೋದು ಮರತೀ ಅಲ್ಲೋ, ಅಂತ ಮತ್ತ ಅನ್ನೋದು ಬ್ಯಾಡ ಅಂತ ಹೇಳಿ, ಸೇಫ್ಟಿಗೆ ಇರಲಿ ಅಂತ ಹೇಳಿ ಎಲ್ಲಾ ಕಡೆ ಮಹಾಪ್ರಾಣ ಕೊಟ್ಟು ಭಾಲಚಂದ್ರ ಶಾಸ್ತ್ರಿ ಭಾಲಚಂದ್ರ ಶಾಸ್ತ್ರಿ ಅಂತ ಬರೆದು ಬಿಟ್ಟಿದ್ದೆ ಅಂತ ಕಾಣಸ್ತದ. ಇದು ಒಂದು possibility.

ಹೆಚ್ಚಾಗಿ ಆ ಪುಸ್ತಕದಲ್ಲಿ ಸಹಾ 'ಭಾ'ಲಚಂದ್ರ ಶಾಸ್ತ್ರಿ ಅಂತನೇ misprint ಆಗಿತ್ತು ಅಂತ ಅನ್ನಸ್ತದ. ಅದಕ್ಕೇ ನಾನೂ ಸಹ ಹಾಂಗೆ ಬರದಿರಬೇಕು. ಇದು most likely possibility.

ಒಟ್ಟಿನ್ಯಾಗ ಧಾರವಾಡದ ದೊಡ್ಡ ಪಂಡಿತ ಬಾಲಚಂದ್ರ ಶಾಸ್ತ್ರಿ ನನ್ನ ನಿಬಂಧ ಒಳಗ 'ಭಾ'ಲಚಂದ್ರ ಶಾಸ್ತ್ರಿ ಆಗಿ ಒಂದು ಮಹಾಪ್ರಾಣ ಬಿಟ್ಟಿಯೊಳಗ ತೊಗೊಂಡು ಹೋಗಿಬಿಟ್ಟಿದ್ದರು.

ಇದಾದ ಒಂದೇ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ಪ್ರತ್ಯಕ್ಷ ನೋಡುವ ಸೌಭಾಗ್ಯ ನಮಗೆ. ನಮ್ಮ ಏಳನೇತ್ತಾ ಮುಗಿದಿದ್ದು ೧೯೮೫. ಆ ವರ್ಷ ಬೇಸಿಗೆ ರಜಾ ಒಳಗ ಶೃಂಗೇರಿ ಮಹಾಸ್ವಾಮಿಗಳು ಧಾರವಾಡಕ್ಕೆ ಬಂದು ಒಂದು ೮-೧೦ ದಿವಸ ಕ್ಯಾಂಪ್ ಹಾಕಿದ್ದರು. ದಿನಾ ಸಂಜಿ ಮುಂದ ಅವರ ಪ್ರವಚನ ಓಪನ್ ಏರ್ ಥಿಯೇಟರ್ ಒಳಗ. ಪ್ರವಚನದ ನಂತರವೋ ಅಥವಾ ಮೊದಲೋ ಒಂದು ಭಾಷಣ. ಒಬ್ಬ ದೊಡ್ಡ ಪಂಡಿತರಿಂದ. ನಿರರ್ಗಳವಾಗಿ ಸಂಸ್ಕೃತ ಒಳಗ. ಅವರೇ ಬಾಲಚಂದ್ರ ಶಾಸ್ತ್ರಿಗಳು ಅಂತ ದೊಡ್ಡವರು ಹೇಳಿದರು. ಇವರೇ ಏನು? ಅಂತ ಭಾಳ ಆಶ್ಚರ್ಯ ಆತು. ಬಹಳ ಸರಳ ಮನುಷ್ಯ. ಸ್ವಚ್ಛ ಬಿಳೆ ಧೋತ್ರಾ, ಮ್ಯಾಲೆ ಬಿಳೆ ಶಾಲು, ಮೈ ತುಂಬಾ ಭಸ್ಮ ಹಚ್ಚಿಕೊಂಡು, ಅವರ ಸ್ಮಾರ್ಥ ಸಂಪ್ರದಾಯದ ನಿಂಬಿಹುಳಿ ತಿಲಕ ಅದು ಇದು ಇತ್ಯಾದಿ ಹಚ್ಚಿಕೊಂಡು, ಸಂಕೋಚದಿಂದಲೋ ಅಥವಾ ಸ್ವಾಮಿಗಳ ಎದುರು ಅತಿ ವಿನಮ್ರತೆಯಿಂದಲೋ ಮೈಯೆಲ್ಲಾ ಗುಬ್ಬಿ ಗತೆ ಸಣ್ಣಗೆ ಮಾಡಿಕೊಂಡು ಗುಣು ಗುಣು ಭಾಷಣ ಮಾಡಿದ ಬಾಲಚಂದ್ರ ಶಾಸ್ತ್ರಿಗಳು ನೆನಪಾದರು. ಅವರ ಆ ಖಡಕ್ಕ ಸಂಸ್ಕೃತ ಭಾಷಣ ಕೇಳಿ, ಭಲೇ! ಭಲೇ!, ಅನ್ನುವಂತೆ ತಲೆಯಾಡಿಸಿದ ಕನವಳ್ಳಿ ಸರ್ ಅವರನ್ನು  ಹ್ಯಾಂಗ ಮರೀಲಿ!

(ಕನವಳ್ಳಿ ಸರ್ ಅಲ್ಲ್ಯಾಕೆ ಬರ್ತಿದ್ದರು ಅನ್ನೋದನ್ನ ಬ್ಯಾರೆ ಬರದೇನಿ. ಇಲ್ಲಿ ಓದಿಕೊಳ್ಳಿ)

ಬಾಲಚಂದ್ರ ಶಾಸ್ತ್ರಿಗಳ ಬಗ್ಗೆ ಇನ್ನೂ ಕೆಲವು ನೆನಪುಗಳಿವೆ. ಮತ್ತೊಂದು ಸಲ ಬರಿತೀನಿ.

ತಿದ್ದುಪಡಿ:  ಒಮ್ಮೊಮ್ಮೆ  ಹೀಂಗ ಆಗ್ತದ ಅಂದ್ರ, ನಾವು ಯಾವದನ್ನು ತಪ್ಪು ಅಂತ ತಿಳಿದಿರತೆವೋ ಅದು ಸರಿ ಇರ್ತದ ಮತ್ತು ಸರಿ ಅಂತ ತಿಳಿದಿದ್ದು ತಪ್ಪು ಇರ್ತದ. ಈಗ ನೋಡ್ರೀ ಆವಾಗ ಸಾಲಿ ನಿಬಂಧ ಒಳಗ "ಭಾಲಚಂದ್ರ" ಅಂತ ಮಹಾಪ್ರಾಣ ಕೊಟ್ಟು ಬರೆದಿದ್ದು ತಪ್ಪು, ಅದು ಬಾಲಚಂದ್ರ ಆಗಬೇಕಿತ್ತು ಅಂತ ಈಗ ಬರೆದೆ. ಈಗ ನೋಡಿದರ ಶಾಸ್ತ್ರಿಗಳ ನಿಜವಾದ ಮತ್ತು ಸರಿಯಾದ ಹೆಸರು "ಭಾಲಚಂದ್ರ" ಅಂತನೇ ಅಂತ ಮಾನ್ಯ ಶ್ರೀಕಾಂತ ಸವಣೂರ ಅವರು ಫೇಸ್ಬುಕ್ ಮೇಲೆ ಮೆಸೇಜ್ ಮಾಡಿ ತಿಳಿಸಿದರು. ಹಾಂಗಿದ್ದರ "ಭಾಲಚಂದ್ರ" ಅಂದ್ರ ಏನು ಅರ್ಥ? ಅದನ್ನೂ ಸಹ ಅವರೇ ಹೇಳಿದರು. ಭಾಲಚಂದ್ರ ಅಂದ್ರ "ಹಣೆಯ ಮೇಲೆ ಚಂದ್ರ ಇರುವವ" ಅಂತ ಅರ್ಥ. ಭಾಲಚಂದ್ರ ಎಂಬುದು ಗಣಪತಿಯ ಒಂದು ಹೆಸರು. ಶಾಸ್ತ್ರಿಗಳು ಸಂಕಷ್ಟ ಚತುರ್ತಿಯಂದು ಹುಟ್ಟಿದ್ದರಿಂದ ಅವರಿಗೆ ಗಣಪತಿಯ ಹೆಸರಾದ "ಭಾಲಚಂದ್ರ" ಅಂತ ಇಡಲಾಗಿತ್ತು ಅಂತ ಸವಣೂರ ಅವರು ತಿಳಿಸಿದ್ದಾರೆ. ಇದೆಲ್ಲ ವಿವರ ತಿಳಿಸಿ ತಪ್ಪು ತಿದ್ದಿದ ಸವಣೂರ ಅವರಿಗೆ ಧನ್ಯವಾದಗಳು. ಭಾಲಚಂದ್ರ ಅಂದ್ರೆ ಗಣಪತಿ ಅನ್ನುವ ಮಾಹಿತಿ ಇಲ್ಲಿದೆ ನೋಡಿ. 

ಬಾಲಚಂದ್ರ ಶಾಸ್ತ್ರಿಗಳ ಫೋಟೋ ಮಾತ್ರ ಸಿಗಲಿಲ್ಲ. ಯಾರಾದರೂ ಒದಗಿಸಿಕೊಟ್ಟರೆ ಜರೂರ್ ಹಾಕ್ತೇನಿ ಇಲ್ಲೆ. ಅಲ್ಲಿ ತನಕಾ ಅವರ ಪರಮ ಗುರುಗಳಾದ ಆದಿ ಶಂಕರರ ಫೋಟೋ ಇರಲಿ. ಧಾರವಾಡ ಅದ್ವೈತ ವೇದಾಂತದ ಮಟ್ಟಿಗೆ ಬಾಲಚಂದ್ರ ಶಾಸ್ತ್ರಿಗಳು ಅಭಿನವ ಆದಿ ಶಂಕರಾಚಾರ್ಯರೇ ಸರಿ.
-- ಹೈಸ್ಕೂಲಿನಲ್ಲಿ ನಮಗೆ ಭೂಗೋಳ ಕಲಿಸಿದ ಗುರುಗಳಾದ ಶ್ರೀ ಗುರುರಾಜ ಜಮಖಂಡಿ ಸರ್ ಅವರು ಭಾಲಚಂದ್ರ ಶಾಸ್ತ್ರಿಗಳ ಫೋಟೋ ಕಳಿಸಿದ್ದಾರೆ. ಮೇಲೆ ಹಾಕಿದ್ದೇನೆ. ಜಮಖಂಡಿ ಸರ್ ಗೆ ಒಂದು ದೊಡ್ಡ ಥ್ಯಾಂಕ್ಸ್.

* ಬಾಲಚಂದ್ರ ಶಾಸ್ತ್ರಿಗಳ ಮರಣದ ಮರುದಿವಸನೇ ಒಂದು ಲೇಖನ ಬರೆದು ಇಟ್ಟೆ. ಈ blogger.com ನಲ್ಲಿರುವ ಒಂದು glitch ನಿಂದಾಗಿ ಬರೆದ ಲೇಖನ ಢಂ ಅಂದು, cyber ಸಮುದ್ರದ ಸುಳಿಯಲ್ಲಿ ಯಾವದೇ ಕುರುಹು ಇಲ್ಲದಂತೆ ಲೀನವಾಗಿ ಹೋಯಿತು. ಮಟಾಶ್! ಆ ಮೇಲೆ (ವಿ)ದೇಶ ಪ್ರಯಾಣ ಅದು ಇದು ಅಂತ ಹೇಳಿ ಇಲ್ಲಿ ತನಕ ಬರೆಯಲಾಗಿರಲಿಲ್ಲ.

* ಇದರ ಮುಂದುವರಿದ ಭಾಗ ಇಲ್ಲಿದೆ ಓದಿಕೊಳ್ಳಿ.

1 comment:

Vimarshak Jaaldimmi said...


Excellent writing!

Not a hyperbole: Upama Kalidasasya; Blog Maheshsasya!

So far, no Kannada writer has received a Nobel prize in literature - worth recommending yours!