Sunday, July 07, 2013

'ಹಾದಿ ಶಂಕರಾ' ಜಯಂತಿ, ಮುಬಾರಕ್, ಮುಬಾರಕ್!

ಆವತ್ತು ಸ್ವಲ್ಪ ಬಿಜಿ ಇದ್ದೆ. ಲಗೂ ಲಗೂ ನೆಡಕೋತ್ತ ಹೊಂಟಿದ್ದೆ. ಅದss ಟೈಮ್ ಒಳಗ  ಸಿಕ್ಕ ಕರೀಂ. ಖರೆ ಅಂದ್ರ ಮಾತಾಡೋ ಪರಿಸ್ಥಿತಿ ಇರಲಿಲ್ಲ. ಆದರೂ ಸಿಕ್ಕಾಪಟ್ಟೆ ಖಾಸ್ ದೋಸ್ತ ನಮ್ಮ ಕರೀಂ ಸಾಬ್ರು. ಹಿಡಿದು ನಿಲ್ಲಿಸಿದ ಅಂದ್ರ ಮಾತಾಡಲೇ ಬೇಕಲ್ಲಾ? ನಾ ಬ್ಯಾರೆ ಮೊಬೈಲ್ ಮ್ಯಾಲೆ ಯಾರದ್ದೋ ಜೊತಿ ಏನೋ ಮಾತಾಡಿಕೋತ್ತ ಬ್ಯಾರೆ ಇದ್ದೆ.

ಸಾಬ್, ಹಾದಿ ಶಂಕರಾ........ ಅಂತ ಏನೋ ಅಂದಾ ಕರೀಂ. ಆವಾ ಹೇಳಿದ್ದನ್ನ ಮೊಬೈಲ್ ಮೇಲಿದ್ದ ನಾ ಸರಿ ಕೇಳಿಸಿಕೊಳ್ಳಲಿಲ್ಲ  ಬಿಡಿ.

ಸಲಾಂ ಕರೀಂ. ಇಲ್ಲಿಗೆ ಬರೋ ಮುಂದ ಹಾದಿಯೊಳಗ ಯಾರೂ ಶಂಕರಾ  ಸಿಗಲಿಲ್ಲ ಮಾರಾಯಾ. ಏನು ಹಾದಿ ಶಂಕರಾ ಹಚ್ಚಿಯೋ? - ಅಂತ ಅರ್ಧಂಬರ್ಧಾ ಗಮನ ಕೊಟ್ಟುಗೋತ್ತ ಕೇಳಿದೆ.

ಹಾದಿ ಶಂಕರಾ...ಗೊತ್ತಿಲ್ಲ ಕ್ಯಾ ನಿಮಗೆ? ಮತ್ತೆ ಜಯಂತಿ ಅಂತೆ. ಹೌದು ಕ್ಯಾ? ಮುಬಾರಕ್ ಮುಬಾರಕ್!!! - ಅಂತ ಏನೇನೋ ಹೇಳಿ ತಲಿ ಕೆಡೆಸಿಬಿಟ್ಟ ಕರೀಂ.

ಅಷ್ಟರಾಗ ನನ್ನ ಫೋನ್ ಕಾಲ್ ಸಹಿತ ಮುಗೀತು. ಇವಂದು ಏನಪಾ ನೋಡೋಣ ಅಂತ ಕರೀಮಗ ಫುಲ್ ಗಮನ ಕೊಟ್ಟೆ.

ಸಾಬ್ರಾ....ಯಾರ್ರೀ ಹಾದಿ ಶಂಕರಾ? ಹಾದಿಮನಿ ಶಂಕ್ರ್ಯಾ ಏನು? ನಮ್ಮ ಹೈಸ್ಕೂಲ್ ಕ್ಲಾಸ್ಮೇಟ್. ಗೊತ್ತಿಲ್ಲ ನನಗ  ಅವಾ ಈಗ  ಎಲ್ಲೇ ಇದ್ದಾನೋ ಏನೋ? - ಅಂತ ಹೇಳಿದೆ.

ಅಯ್ಯೋ ಸಾಬ್!!! ಹಾದಿ ಶಂಕರಾ ಅಂತ ನಾವು ಅಂದ್ರೆ ನೀವು ಹಾದಿಮನಿ ಶಂಕ್ರ್ಯಾ ಅಂತ ಕೇಳೋದು ಕ್ಯಾ? ಹಾದಿಮನಿ ಶಂಕ್ರ್ಯಾ ನಮಗೆ ಮನ್ನೆ ಸಿಕ್ಕಿದ್ದ, ಅಂದ ಕರೀಂ.

ಮತ್ತೆ ಏನೋ ಮಾರಾಯಾ? ಯಾವ ಹಾದಿ ಶಂಕರಾ? ಏನು ಕಥಿ? ಸರಿಯಾಗಿ ಹೇಳೋ ಮಾರಾಯಾ ಕರೀಂ, ಅಂತ ಕೇಳಿದೆ. ಅಷ್ಟರಾಗ ನನ್ನ ಮೊಬೈಲ್ ಮ್ಯಾಲೆ ಮತ್ತ ಫೋನ್ ಬಂತು.

ಸಾಬ್!!!ಹಾದಿ ಶಂಕರಾ, ಜಯಂತಿ ಮುಬಾರಕ್ ಮುಬಾರಕ್!!! , ಅಂತ ಹೇಳಿದ ಕರೀಂ.

ಇದೇನೋ ಗಹನವಾದದನ್ನೇ ಕರೀಮಾ ಹೇಳಲಿಕತ್ತಾನ ಅಂತ ಕಾಲ್ ಬಂದು ಮಾಡಿ ಫುಲ್ ಗಮನ ಕೊಟ್ಟೆ.

ಏನು?! ಹಾದಿಮನಿ ಶಂಕ್ರ್ಯಾ, ಮೂಲಿಮನಿ ಜಯಂತಿ ಲಗ್ನಾ ಮಾಡಿಕೊಂಡ್ರಾ? ಅದಕ್ಕಾ - ಹಾದಿ ಶಂಕರಾ, ಜಯಂತಿ ಮುಬಾರಕ್ ಮುಬಾರಕ್ - ಅಂತ ಶುಭಾಶಯ ಹೇಳಲಿಕತ್ತಿ ಏನೋ? ವೆರಿ ಗುಡ್, ಅಂತ ಹೇಳಿದೆ. ಒಂದು ಪುರಾತನ ಪ್ರೇಮ ಕಹಾನಿ ಸಕ್ಸಸ್ ಆಯಿತು ಅಂತ ಖುಷಿ ಆತು.

ಇವ ಶಂಕರ ಹಾದಿಮನಿ. ಅಕಿ ಜಯಂತಿ ಮೂಲಿಮನಿ. ಲಗ್ನಾ ಆದ ಮ್ಯಾಲೆ ಶಂಕ್ರ್ಯಾ ಹಾಲಿಮನಿ ಆದ್ನೋ? ಅಥವಾ ಅಕಿ ಜಯಂತಿ ಮೂದಿಮನಿ ಆದಳೋ? ಇಬ್ಬರ ಅಡ್ಡಹೆಸರು 'ಮನಿ' ನೋಡು. ಒಂದ ಅಕ್ಷರ ಇತ್ಲಾಗ ಅತ್ಲಾಗ ಮಾಡಿದ್ರ ಏನೇನೋ ಮನಿ ಆಗಿ ಬಿಡ್ತಾವ. ಹಾ!!! ಹಾ!!! - ಅಂತ ಜೋಕ್ ಹೊಡದೆ.

ಸಾಬ್!!! ನಿಮಗೆ ಬುದ್ಧಿ ಇಲ್ಲ ಕ್ಯಾ? ಅಲ್ಲಾ ನಾವು ಹೇಳಿದ್ದು ಏನು? ಹಾಂ? ಹಾಂ? ಹಾದಿಮನಿ ಶಂಕ್ರ್ಯಾ ಸಿಕ್ಕಿದ್ದ ಅಂತ. ಎಲ್ಲೇ ಸಿಕ್ಕಿದ್ದ? ಯಾವ ಕಂಡೀಶನ್ ಒಳಗೆ ಸಿಕ್ಕಿದ್ದ? ಏನು ಮಾಡಿದ್ವೀ? ಅನ್ನೋದೆಲ್ಲಾ ಕೇಳೋದು ಬಿಟ್ಟು ಹಾದಿಮನಿ ಶಂಕ್ರ್ಯಾಗೆ ಮತ್ತೆ ಮೂಲಿಮನಿ ಜಯಂತಿಗೆ ಶಾದಿ ಆಯಿತಾ ಅಂತ ಕೇಳ್ತೀರಿ... ಹಾಂ? ತಲಿ ಇಲ್ಲ ಕ್ಯಾ ನಿಮಗೆ? - ಅಂತ ಕರೀಂ ಬಾರಿಸಿದ.

ಏನಾತೋ?ಹಾದಿಮನಿ  ಶಂಕ್ರ್ಯಾಂದು ಮತ್ತ ಮೂಲಿಮನಿ ಜಯಂತಿದು ಲಗ್ನಾ ಆಗಿಲ್ಲ ಅಂದ್ರ ಮತ್ತೇನು ನನ್ನ ಭಾಯಿ ಆಗಪಾ ಶಂಕ್ರೂ ಅಂತ ರಾಖೀ ಕಟ್ಟಿದಳೇನು ಜಯಂತಿ? ರಾಖೀ ಕಟ್ಟಿಸಿಕೊಂಡ ಶಂಕ್ರ್ಯಾ ಸೈಕೋ ಆಗಿಬಿಟ್ಟ ಏನು? - ಅಂತ ಕೇಳಿದೆ.

ನಮಗೆ ಶಂಕ್ರ್ಯಾ ಸಿಕ್ಕಿದ್ದು ಹುಬ್ಬಳ್ಳಿ ಕಮರೀಪೇಟ್ ಒಳಗೆ. ಅಲ್ಲಿ ಸಾವಜಿ ಖಾನಾವಳಿ ಒಳಗೆ ನಾಕ್ನಾಕ್ ಕೀಮಾ ಬಾಲ್ಸ್ ತಿಂದುಬಿಟ್ಟಿ, ಒಂದೊಂದು ಕ್ವಾರ್ಟರ್ ಹಾಕಿಸಿ ಬಂದೆ. ಶಂಕ್ರ್ಯಾ ಪಾಪ ಈಗ ಕಂಟ್ರಿ ಶೆರೆ ಕುಡಿತಾನೆ. ನಾವೇ ಪಾಪ ಅಂತ ಹೇಳಿಬಿಟ್ಟಿ ಒಂದು ಕ್ವಾರ್ಟರ್ 'ಹಳೆ ಮಂಗ್ಯಾ' ಹಾಕಿಸಿ ಊಟ ಮಾಡಿಸಿ ಕಳ್ಸಿದಿವಿ ಶಂಕ್ರ್ಯಾಗೆ. ಗೊತ್ತು ಕ್ಯಾ? - ಅಂತ ಹೇಳಿದ ಕರೀಂ.

ಹಾದಿಮನಿ ಶಂಕ್ರ್ಯಾ ಕಂಟ್ರಿ ಶೆರೆ ಕುಡಿಯೋ ಪರಿಸ್ಥಿತಿಗೆ ಬಂದ್ನಾ!? 'ಹಳೆ ಮಂಗ್ಯಾ' ಅಂದ್ರ 'old monk' ರಮ್ ಕುಡಿಸಿದ 'ರಂ'ಗಣ್ಣ ನೀನು. ಪುಣ್ಯಾ ಬರಲಿ ನಿನಗ. ಕಂಟ್ರಿ ಕುಡಿಲಿಕತ್ತಾನ ಅಂದ್ರ ಜಯಂತಿ ಪಾಪ 'ನಾಮಾ' ಹಾಕಿ ಹೋಗ್ಯಾಳ ಅಂತ ಅನ್ನಸ್ತದ. ನಾಮಾ ಹಾಕಿ ಹೋಗ್ಯಾಳ ಅಂತೇನು? ನಾಮಾ? ಹಾಂ? ಹಾಂ? -ಅಂತ ಕೇಳಿದೆ. ಒಂದು ಅರ್ಧಂಬರ್ಧಾ ಸುಟ್ಟು ಹೋದ ಲವ್ ಅಫೇರ್ ವಾಸನಿ ಬಂತು.

ನಿಮಗೆ ಗೊತ್ತಿಲ್ಲ ಕ್ಯಾ? ಮೂಲಿಮನಿ  ಜಯಂತಿ ಯಾರೋ ಬ್ಯಾರೆ ಆದಮೀ ಗೆ ಶಾದಿ ಮಾಡ್ಕೊಂಡು ಬಿಟ್ಟಿ ಎಲ್ಲೋ ವಿಲಾಯತ್ ಮೇ ಸೆಟ್ಲ್ ಆಗಿ ಬಿಟ್ಟಿದಾಳೆ. ಅದಕ್ಕೇ ನಮ್ಮ ಶಂಕ್ರ್ಯಾ ಇಲ್ಲಿ 'ನಾಮ'ಧಾರಿ ಆಗಿ ಕಂಟ್ರಿ ಸೆರೆ ಕುಡ್ಕೊಂಡು ಇದ್ದಾನೆ. ನಾವು ಹೇಳಿದ್ದು ಅದು ಅಲ್ಲವೇ ಅಲ್ಲ. ಬೇರೇನೆ ಏನೋ. ಏನೇನೋ ಹೇಳ್ತೀರಿ ಅಲ್ಲಾ!! ಅಂತ ಸ್ವಲ್ಪ ಅಸಹನೆಯಿಂದ ಹೇಳಿದ ಕರೀಮ ಮತ್ತ ಮತ್ತ, ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್, ಅಂತ ಅಂದು ಬಿಟ್ಟ.

ಈಗ ಫುಲ್ ತಲಿ ಕೆಡ್ತು. ಹಾದಿಮನಿ ಶಂಕ್ರ್ಯಾಗ ಹಾದಿ ಶಂಕರಾ ಅಂತಾನೇನೋ ಅಂತ ತಿಳ್ಕೊಂಡೆ. ಇಲ್ಲ. ಹಾದಿಮನಿ ಶಂಕ್ರ್ಯಾಗೂ ಮೂಲಿಮನಿ ಜಯಂತಿಗೂ ಲಗ್ನಾತೇನೋ ಅಂತ ಕೇಳಿದ್ರ ಅದೊಂದು ಬರ್ಬಾದ್ ಪ್ರೇಮ ಕಹಾನಿ ಅಂತಾನ. ಹಾಂಗಿದ್ರ ಏನು ಮಾತಿಗೊಮ್ಮೆ, 'ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್', ಅಂತ ಯಾಕ ಅನ್ನಲಿಕತ್ತಾನ ಅಂತ ಖರೇನಾ ತಿಳಿಲಿಲ್ಲ.

ಸಾಬ್ರಾ!!!! ಏನ್ರೀ ಅದು 'ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್'? ಮಾತಿಗೊಮ್ಮೆ ಅದನ್ನೇ ಹೇಳಿ ಹೇಳಿ ತಲಿ ತಿನ್ನಲಿಕತ್ತಿರಲ್ಲಾ? ಏನಂತ ಸರೀತ್ನಾಗಿ ಹೇಳಬಾರದ? ಹಾಂ? ಹಾಂ? - ಅಂತ ಸ್ವಲ್ಪ ಜಬರಿಸಿ ಕೇಳಿದೆ.

ಒಳ್ಳೆ ಆದಮೀ ನೀವು. ಫುಲ್ ಹಾಪ್! ನಿಮಗೂ ಸ್ವಲ್ಪ 'ಹಳೆ ಮಂಗ್ಯಾ' ರಮ್ ಕುಡಿಸಲಿ ಕ್ಯಾ? ಅಂತ ಕೇಳಿದ ಕರೀಂ, ಇಲ್ಲೇ ನೋಡಿ, ಅನ್ನೋ ಹಾಂಗ ಏನೋ ಒಂದು ಪಾಂಪ್ಲೆಟ್ ತಂದು ಮಾರಿ ಮುಂದ ಹಿಡದಾ.

ಪಾಂಪ್ಲೆಟ್ ಒಳಗ ಏನದ ಅಂತ ನೋಡಿದೆ.

'ಶ್ರೀ ಶಂಕರ ಜಯಂತಿ' ಅಂತ ಪ್ರಿಂಟ್ ಆಗಿತ್ತು. ಭಗವತ್ಪಾದ ಶ್ರೀ ಆದಿ ಶಂಕರಾಚಾರ್ಯರ ಫೋಟೋ ಸಹ ಇತ್ತು. ಕಾರ್ಯಕ್ರಮದ ವಿವರಣೆ ಸಹಿತ ಇತ್ತು.
ಶ್ರೀ ಆದಿ ಶಂಕರಾಚಾರ್ಯ

ಈಗ ಗೊತ್ತಾತು. ಈ ಮಂಗ್ಯಾನಿಕೆ ಕರೀಮಗ ಯಾರೋ ಇವತ್ತು 'ಶ್ರೀ ಶಂಕರ ಜಯಂತಿ' ಅಂತ ಹೇಳಿ ಒಂದು ಪಾಂಪ್ಲೆಟ್ ಕೊಟ್ಟಾರ. ಚಿತ್ರಾ ನೋಡಿ ಅದು ಆದಿ ಶಂಕರಾಚಾರ್ಯರ ಫೋಟೋ ಅಂತ ಗೊತ್ತಾಗ್ಯದ. ನಾನು ಶಂಕರಾಚಾರ್ಯರ ಭಕ್ತ, ಶಿಷ್ಯಾ ಅಂತ ಕರೀಮಗ ಗೊತ್ತದ. ಹಂಗಂತ ಹೇಳಿ ನನಗ ಇವ ಶಂಕರ ಜಯಂತಿಯ ಶುಭಾಶಯ ತನ್ನ ಭಾಷಾ ಒಳಗ, ಹಾದಿ ಶಂಕರಾ ಜಯಂತಿ, ಮುಬಾರಕ್ ಮುಬಾರಕ್, ಅಂತ ಹೇಳಿಕತ್ತಾನ. ಹೋಗ್ಗೋ ಇವನಾ!!!!

ಸಾಬ್ರಾ!!! ಅದು 'ಆದಿ ಶಂಕರ' ಅಂತರೀಪಾ. ಹೋಗಿ ಹೋಗಿ ಹಾದಿ ಶಂಕರಾ ಅಂದು ಬಿಟ್ಟರಲ್ಲ?! ನೀವು ಹಾದಿ ಶಂಕರ ಅಂದಿದ್ದು ನಮಗ ಹಳೆ ಗೆಳೆಯಾ ಹಾದಿಮನಿ ಶಂಕ್ರ್ಯಾ ನೆನಪಾಗಿ ಏನೇನೋ ಸುದ್ದಿ ಆಗಿಬಿಡ್ತು. ಆದರೂ ನಮ್ಮ ಪರಮ ಗುರುಗಳಾದ ಶ್ರೀ ಆದಿ ಶಂಕರಾಚಾರ್ಯರ ಹುಟ್ಟಿದ ದಿವಸ ಆಚರಿಸೋ ಶ್ರೀ ಶಂಕರ ಜಯಂತಿ ದಿನ ನೀವು ನಮಗೆ ಶುಭಾಶಯ ಕೋರಿದ್ದು ಮಾತ್ರ ಭಾಳ ಸಂತೋಷ. ಥ್ಯಾಂಕ್ಸ್ ರೀ ಸಾಬ್ರಾ, ಅಂತ ಹೇಳಿದೆ.

ಅಯ್ಯೋ ನಾವೂ ಕೂಡ ಆದಿ ಶಂಕರಾ ಅಂತಾನೇ ಅಂದಿದ್ದು. ಅದು ನಿಮಗೆ ಅದು ಹಾದಿ ಶಂಕರಾ ಅಂತ ಕೇಳಿದ್ರೆ ನಾವೇನು ಮಾಡೋಣ? ನಿಮ್ಮ ಕಿವಿ ಫುಲ್ ಶೆಡ್ಡ ಆಗಿದೆ ಕ್ಯಾ? ಅವತ್ತು ನಾವು ಸ್ಕಾಚಾ (ವಿಸ್ಕಿ) ಅಂದ್ರೆ ನಿಮಗೆ ಅದು ಕಾಚಾ ಅಂತ ಕೇಳಿ ಏನೇನೋ ಅಂದ್ರೀ. ಪಾಗಲ್ ಸಾಬ್! - ಅಂತ ಮೈಲ್ಡ್ ಆಗಿ ಬಾರಿಸಿದ.

ಇರಬಹುದು ಇರಬಹುದು....ಯಾರದ್ದು ಖರೆನೋ ಏನೋ!

ಜಯಂತಿ ಅಂದ್ರೆ ಬರ್ತ್ ಡೇ ಅಂತ ಕ್ಯಾ? - ಅಂತ ಕೇಳಿದ ಕರೀಂ.

ಗೊತ್ತಿಲ್ಲ ಮಾರಾಯಾ. ಆದ್ರ ಎಲ್ಲ ದೊಡ್ಡ ಮಂದಿ ಹುಟ್ಟಿದ ದಿವಸಕ್ಕ ಜಯಂತಿ ಅಂತನೇ ಅನ್ನೋದು. ಗಾಂಧೀ ಜಯಂತಿ, ಬುದ್ಧ ಜಯಂತಿ, ಮಹಾವೀರ ಜಯಂತಿ, ಹನುಮ ಜಯಂತಿ, ಬಸವ ಜಯಂತಿ ಇತ್ಯಾದಿ ಇತ್ಯಾದಿ. ಹಾಂಗೇ ಶಂಕರ ಜಯಂತಿ ಕೂಡ. ಆದ್ರ ಹುಟ್ಟಿದ ಹಬ್ಬಕ್ಕ ಮತ್ತ ಜಯಂತಿಗೆ ಹ್ಯಾಂಗ ಲಿಂಕ ಅಂತ ಕೇಳಬ್ಯಾಡ. ಅದನ್ನ ಯಾರರ ಸಂಸ್ಕೃತ ಪಂಡಿತರ ಹತ್ರ ಕೇಳು, ಅಂತ ಕಳಚಿಕೊಳ್ಳೋ ಪ್ರಯತ್ನ ಮಾಡಿದೆ.

ಮತ್ತೆ ಒಂದು ಡೌಟ್ ಸಾಬ್. ಜಯಂತಿ ಬರ್ತ್ ಡೇ ಗೆ 'ಜಯಂತಿ ಜಯಂತಿ' ಅಂತಾರೆ ಕ್ಯಾ? - ಅಂತ ಮಸ್ತ ಪಾಯಿಂಟ್ ಹಾಕಿದ ಕರೀಂ.

ಅಲ್ಲಲೇ........ 'ಜಯಂತಿ ಜಯಂತಿ' ಅನ್ನಲಿಕ್ಕೆ ಮೂಲಿಮನಿ ಜಯಂತಿ ಏನು ಅಷ್ಟು ದೊಡ್ಡ ಮನುಷ್ಯಾ ಏನು? ಏನಪಾ ಅಕಿ ಮಾಡಿದ ದೊಡ್ಡ ಕೆಲಸಾ? ಪಾಪ ಹಾದಿಮನಿ ಶಂಕ್ರ್ಯಾಗ ನಾಮಾ ಹಾಕಿ, ಅವಾ ಇಕಿ ನೆನಪಿನ್ಯಾಗ ವಿಭೂತಿ ಹಚ್ಚೋದು ಪೂರ್ತ ಬಿಟ್ಟು, 7x24 ನಾಮಾನೇ ಹಾಕ್ಕೊಂಡು, ಸದಾ ನಾಮಧಾರಿ ಆಗಿ, ಕಮರೀಪೇಟ್ ಶೆರೆ ಅಂಗಡಿ ಒಳಗ ಮನಗಂಡ ಕುಡಿತೇನಿ ಅನ್ನೋ ಹಾಂಗ ಮಾಡಿದ್ದೇ ಅಕಿ ಮಾಡಿದ ದೊಡ್ಡ ಕೆಲಸ ಇರಬಹದು ಏನಪಾ. ಅದಕ್ಕ ಅಕಿ ಹುಟ್ಟಿದ ಹಬ್ಬಕ್ಕ ಜಯಂತಿ ಅನ್ನಬೇಕಾ? ಏನಲೇ ನೀ ಹಾದಿಮನಿ ಶಂಕ್ರ್ಯಾನ ದೋಸ್ತನೋ ಅಥವಾ ಮೂಲಿಮನಿ ಜಯಂತಿ ದೋಸ್ತನೋ? ಕ್ಲಿಯರ್ ಮಾಡಪಾ. ಶಂಕ್ರ್ಯಾಗ ಜಯಂತಿ ನಾಮಾ ಹಾಕೋದರ ಹಿಂದ ನಿನ್ನ ಕೈವಾಡ ಏನಾರಾ ಇತ್ತೇನು ಅಂತ ನಮಗ ಈಗ ಡೌಟ್ ನೋಡಪಾ, ಅಂತ ಹೇಳಿದೆ.

ಅಯ್ಯೋ!!! ಮೂಲಿಮನಿ ಜಯಂತಿ ಬಿಡ್ರೀ ಸಾಬ್!!! ಅಕಿದು ಬರ್ತ್ ಡೇ ಗೆ ಯಾರು ಜಯಂತಿ ಕೊಯಂತಿ ಅಂತಾ ಹೇಳ್ತಾರೆ.... ಅಂತ ಹೇಳಿದ ಕರೀಂ ಬ್ರೇಕ್ ತೊಗೊಂಡ.

ಮತ್ಯಾವ ಜಯಂತಿ ರೀ ಸಾಬ್ರಾ???? - ಅಂತ ಕೇಳಿದೆ.

ಸಾಬ್!!! ಅಕಿ ಪುರಾತನ ಬಾಂಬ್ ಸುಂದರೀ ಸಿನೆಮಾ ಹಿರೋಯಿನ್ ಜಯಂತಿ ಅಂತಾ ಒಬ್ಬಾಕಿ ಇದ್ದಳು, ನೆನಪ ಐತೆ ಕ್ಯಾ? 'ವಿರಹಾ ವಿರಹಾ  ನೂರು ನೂರು ತರಹಾ' ಅಂತ ಹಾಡಿಗೆ ಫುಲ್ 'ಲಂಬೀ ಜುದಾಯಿ' ಫೀಲಿಂಗ್ ನಲ್ಲಿ ಮಸ್ತ ಆಕ್ಟ್ ಮಾಡಿದ್ದಳು. ಅವಳು ಫೇಮಸ್ ಅಲ್ಲಾ ಕ್ಯಾ? ಅಕಿದು ಬರ್ತ್ ಡೇ ಗೆ 'ಜಯಂತಿ ಜಯಂತಿ' ಅನ್ನಬಹುದು ಕ್ಯಾ? ಕ್ಯಾ? - ಅಂತ ಕೇಳಿದ.

ಪುರಾತನ ಚಿತ್ರತಾರೆ ಜಯಂತಿ

ವಾಹ್!!! ಎಲ್ಲೆಲ್ಲಿಂದ ನೆನಪು ಇಟ್ಟು ಮಸ್ತಾಗಿ ಪಾಯಿಂಟ್ ಹಾಕ್ತಾನೋ!!!

ಹ್ಞೂ ಸಾಬ್ರಾ!!! ಜಯಂತಿ ಸಿನೆಮಾ ನಟಿ ಒಂದು ತರಹ ಫೇಮಸ್ ಬಿಡ್ರೀ. ಆದರೂ ಜಯಂತಿ ಪಯಂತಿ ಅನ್ನೋವಷ್ಟು ಫೇಮಸ್ ಅಲ್ಲಾ ಸಿನೆಮಾ ಮಂದಿ. ಯಾವದೇ ಸಿನಿಮಾ ಮಂದಿ ಹೆಸರಿನ್ಯಾಗ ಇನ್ನೂ ಜಯಂತಿ ಅಂತ ಬಂದಿಲ್ಲ. ಮತ್ತ ಹಾಂಗೆನರಾ ಮಾಡಬೇಕು ಅಂದ್ರೂ ನಟಿ ಜಯಂತಿಗಿಂತ ಫೇಮಸ್ ಭಾಳ ಮಂದಿ ನಟ ನಟಿಯರು ಇದ್ದಾರ. ತಿಳೀತಾ? - ಅಂತ ಹೇಳಿದೆ.

ಅದು ಖರೆ ಬಿಡಿ ಸಾಬ್. ಇನ್ನೂ ಅಣ್ಣಾವರ ಬರ್ತ್ ಡೇ ನೇ 'ಡಾ. ರಾಜ್ ಜಯಂತಿ' ಅಂತ ಆಗಿಲ್ಲ. ಹಾಗಿರೋವಾಗ ಜಯಂತಿ ಬರ್ತ್ ಡೇ 'ಜಯಂತಿ ಜಯಂತಿ' ಆಗೋದು ದೂರ ಅದೇ ಬಿಡ್ರೀ. ನೀವೇನು ಮಾಡ್ತೀರಿ ಇವತ್ತು ನಿಮ್ಮ ಸ್ವಾಮೀಜಿ ಆದ ಆದಿ ಶಂಕರ ಜೀ ಅವರ ಬರ್ತ್ ಡೇ ಅಂತ? ಕೇಕ್ ಕಾಟೋಗೆ ಕ್ಯಾ? ಅಂಡಾವಾಲಾ ಯಾ ಬಿನಾ  ಅಂಡಾವಾಲಾ ಕೇಕ್? - ಅಂತ ಕೇಳಿದ.

ಏ.....ಶಂಕರಾಚಾರ್ಯರ ಜನ್ಮ ದಿವಸ ಕೇಕ್ ಗೀಕ್ ಕತ್ತರಿಸಿ ಆಚರಿಸೋದಲ್ಲ ಬಿಡು. ಅವರು ಹೇಳಿದ ಅದ್ವೈತ ವೇದಾಂತದ ಬಗ್ಗೆ ಓದಿ, ತಿಳಿದು, ಮನನ ಮಾಡಿ, ನಮಗಾದಷ್ಟು ಜ್ಞಾನಾರ್ಜನೆ ಮಾಡೋದು ನೋಡಪಾ. ಮೊದಲಿಂದ ಆದಿ ಶಂಕರರು ಅಂದ್ರ ಭಾಳ ಸಿಂಪಲ್. ಅವರು ಜ್ಞಾನದ ಬಗ್ಗೆ ಒತ್ತು ಕೊಟ್ಟರೆ ವಿನಃ ಆಚರಣೆಗಳ ಬಗ್ಗೆ ಅಲ್ಲವೇ ಅಲ್ಲ, ಅಂತ ಹೇಳಿದೆ.

ಜನರಿಗೆ ನಿಮ್ಮ ಶಂಕರಿ ಸ್ವಾಮಿಜೀ ಮೆಸೇಜ್ ಏನು? - ಅಂತ ಕೇಳಿದ ಕರೀಂ.

'ಬ್ರಹ್ಮ ಸತ್ಯ ಜಗತ್ ಮಿಥ್ಯಾ, ಜೀವೋ ಬ್ರಹ್ಮೈವ ನ ಪರಹ' ಅಂತ ಒಂದು ಶಾರ್ಟ್ & ಸ್ವೀಟ್ ವಾಕ್ಯದೊಳಗ ಎಲ್ಲಾ ವೇದ, ಉಪನಿಷತ್ತು, ಪುರಾಣ ಎಲ್ಲದರ ಸಾರ ಹೇಳಿ ಬಿಟ್ಟಾರ ನೋಡಪಾ ನಮ್ಮ ಗುರುಗಳು. ಇದೊಂದನ್ನೇ ವಿವರಿಸಲಿಕ್ಕೆ ಅಂತ ಸಾವಿರಾರು ಸ್ವಾಮಿಗಳು, ಸಾಧುಗಳು, ಸಂತರು ಲಕ್ಷಾಂತರ ಪುಸ್ತಕ ಬರೆದು ಪ್ರವಚನ ಮತ್ತೊಂದು ಕೊಟ್ಟಾರೆ ನೋಡಪಾ, ಅಂತ ಶಂಕರರ ಸಂದೇಶ ವಿವರಿಸಿದೆ.

ಐಸಾ ಬೋಲೇ ತೋ ಕ್ಯಾ? - ಅಂತ ಕೇಳಿದ ಕರೀಂ. ನಿರೀಕ್ಷಿಸಿದ್ದೆ ಅವನ ಪ್ರಶ್ನೆ.

ಶಂಕರರು ಹೇಳೋದು ಏನಪಾ ಅಂದ್ರಾ.....ವಿಶ್ವರೂಪಿ ಚೈತನ್ಯವಾದ ಬ್ರಹ್ಮನ್ ಮಾತ್ರ ಸತ್ಯ. ಪಂಚೇಂದ್ರಿಯಗಳಿಗೆ ಕಾಣುವ ಜಗತ್ತು ಪೂರ್ತಿ ಸತ್ಯ ಅಲ್ಲ. ನಿನ್ನಲ್ಲಿರುವ ಜೀವಾತ್ಮ ಮತ್ತ ಮ್ಯಾಲಿರೋ ಪರಮಾತ್ಮ ಎಲ್ಲಾ ಒಂದೇ. ಬ್ಯಾರೆ ಅಲ್ಲ, ಅಂತ ಹೇಳಿ ಬಿಟ್ಟಾರೋ! ಎಷ್ಟು ಮಸ್ತ ಹೇಳ್ಯಾರ ನೋಡು. ನೀನು, ನಾನು, ಹಾದಿಮನಿ ಶಂಕ್ರ್ಯಾ, ಮೂಲಿಮನಿ ಜಯಂತಿ ಎಲ್ಲಾ ಒಂದೇ ನೋಡಪಾ. ಫಾರ್ ಎಕ್ಸಾಂಪಲ್ ನೋಡಪಾ..... ಇರೋದು ಒಂದು ಚಂದ್ರ. ಹೌದೋ ಅಲ್ಲೋ? ಆದ್ರ ಚಂದ್ರನ ಪ್ರತಿಬಿಂಬ ನಿಮ್ಮನಿ ಸ್ವಿಮ್ಮಿಂಗ್ ಪೂಲ್ ಒಳಗೂ ಬೀಳ್ತದ, ನಿಮ್ಮನಿ ಮುಂದಿನ ಹೊಲಸ ಗಟಾರ ಒಳಗೂ ಬೀಳ್ತದ. ಪ್ರತಿಬಿಂಬ ಮಾತ್ರ ಚಂದ್ರನದೇ ಹೌದಿಲ್ಲೋ? ಹಾಂಗ ನೋಡಪಾ. ಬ್ಯಾರೆ ಬ್ಯಾರೆ ಮಂದಿ, ಪ್ರಾಣಿ, ಪಕ್ಷಿ, ಎವ್ರಿಥಿಂಗ್ ಇಸ್ ಬ್ರಹ್ಮನ್! ಎಲ್ಲಾ ಬ್ರಹ್ಮನ್. ವಿಶ್ವ ಚೈತನ್ಯ. ಒಂದು ಶಕ್ತಿ. ಅಷ್ಟೇ. ತಿಳೀತ? - ಅಂತ ಕೇಳಿದೆ.

ಏನೋ ಒಂದು ತರಹ ಮಜಾ ಅದೇ ಶಂಕರ ಸ್ವಾಮೀಜಿ ಹೇಳೋದು. ಮತ್ತೆ ಟೈಮ್ ಸಿಕ್ಕಾಗ ಡೀಟೇಲ್ ಆಗಿ ಹೇಳೀರಂತೆ. ಓಕೆ? ಬರಲೀ ಈಗಾ? ಖುದಾ ಹಾಫಿಜ್. ನೀವು ಮನೆಗೆ ಹೋಗಿ ಒಳ್ಳೆದಾಗಿ ಆದಿ ಶಂಕರಾಜೀ ಅವರ ಜನಮ್ ದಿನ್ ಮಸ್ತಾಗಿ ಮಾಡಿ. ಓಕೆ? - ಅಂತ ಹೇಳಿ ಕರೀಂ ಹೊಂಟು ಹೋದ. ನಾನೂ ಹೊಂಟು ಬಂದೆ.

ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿಯ ದಿನ ಶ್ರೀ ಆದಿ ಶಂಕರರ ಜನ್ಮ ದಿನ.

ಈ ವರ್ಷ ಮೇ 15 ರಂದು ಆಚರಿಸಲಾಯಿತು.