Sunday, December 29, 2013

ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಇದು ಭಾಗ -೨. ಭಾಗ - ೧ ಇಲ್ಲಿದೆ. ಓದಿಕೊಳ್ಳಿ.)

ಬ್ರಹ್ಮರ್ಷಿ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಭಾಲಚಂದ್ರ ಶಾಸ್ತ್ರಿಗಳಿಗೆ ಮತ್ತು ನಮ್ಮ ತಂದೆ ಪ್ರೊಫೆಸರ್ ಹೆಗಡೆ ಅವರಿಗೆ ೧೯೫೦ ರ ಕಾಲದಿಂದಲೇ ಒಂದು ತರಹದ ಗುರುತು, ಪರಿಚಯ, ಆತ್ಮೀಯತೆ, ಪರಸ್ಪರ ಗೌರವ ಎಲ್ಲ.

ನಮ್ಮ ತಂದೆ ೧೯೫೦ ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ವೀ.ಕೇ. ಗೋಕಾಕರು ಪ್ರಿನ್ಸಿಪಾಲ್ ಇದ್ದಾಗ ಕರ್ನಾಟಕ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದವರು. ಮುಂದೆ ಅಲ್ಲೇ ಭೌತಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದವರು. ಕಲಿತದ್ದು, ಕಲಿಸಿದ್ದು ಭೌತಶಾಸ್ತ್ರವೇ ಆದರೂ ತಂದೆಯವರಿಗೆ ಮೊದಲಿಂದ ವೇದ, ವೇದಾಂತ, ವೇದಾಂಗವಾದ ಜ್ಯೋತಿಷ್ಯದಲ್ಲಿ ತುಂಬಾ ಆಸಕ್ತಿ ಮತ್ತು ಆಳವಾದ ಜ್ಞಾನ. ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ಕಾಲೇಜಿನಲ್ಲಿ ದಿನವಿಡಿ ಅಭ್ಯಾಸ. ಸಂಜೆ ಹೊಸೆಲ್ಲಾಪುರದ ಪಂಡಿತರ ಸೇವೆ. ಅದೇ ವೇದ, ಉಪನಿಷತ್ತು, ಜ್ಯೋತಿಷ್ಯ, ಅದು ಇದು ಕಲಿಯಲಿಕ್ಕೆ. ಹೀಗಾಗಿ ಆ ಕಾಲದಿಂದಲೇ ಭಾಲಚಂದ್ರ ಶಾಸ್ತ್ರಿಗಳ ಕಣ್ಣಿಗೆ ಬಿದ್ದವರು ನಮ್ಮ ತಂದೆ. ಒಳ್ಳೆಯ ರೀತಿಯಿಂದ, ಸ್ವಂತ ಅಧ್ಯಯನದಿಂದ  ವೇದಾಧಾರಿತ ಜ್ಯೋತಿಷ್ಯದ (Vedic Astrology) ಮೇಲೆ ಪಾಂಡಿತ್ಯ ಸಾಧಿಸಿದ್ದ ತಂದೆಯವರ ಮೇಲೆ ಭಾಲಚಂದ್ರ ಶಾಸ್ತ್ರಿಗಳಿಗೆ ತುಂಬಾ ಗೌರವ ಮತ್ತು ಹೆಮ್ಮೆ. ಭಾಲಚಂದ್ರ ಶಾಸ್ತ್ರಿಗಳೂ ತಕ್ಕ ಮಟ್ಟಿಗೆ ಜ್ಯೋತಿಷ್ಯ ತಿಳಿದಿದ್ದರು. ಆದ್ರೆ ಅದು ಅವರ specialty ಇರಲಿಲ್ಲ. ಹೀಗಾಗಿ ಅವರ ಕಡೆ ಜ್ಯೋತಿಷ್ಯದ ಜಟಿಲ ಪ್ರಶ್ನೆ, ಕ್ಲಿಷ್ಟ ಸವಾಲು ಇತ್ಯಾದಿ ತಂದವರನ್ನು ಅವರು - ಇದಕೆಲ್ಲಾ ನೀವು ಹೋಗಿ ಪ್ರೊಫೆಸರ್ ಹೆಗಡೆ ಅವರನ್ನ ನೋಡ್ರೀ. ಶಾಸ್ತ್ರಬದ್ಧವಾಗಿ ಜ್ಯೋತಿಷ್ಯ ಕಲಿತು, ಕಲಿಸಬಲ್ಲವರು ಅಂದ್ರ ಅವರು. ಇಂತಾದಕ್ಕೆಲ್ಲಾ ಅವರೇ ಸರಿ - ಅಂತ ತುಂಬು ಹೃದಯದಿಂದ ನಮ್ಮ ತಂದೆಯವರ ಕಡೆ ಅಂತಹ ಜನರನ್ನು ಯಾವದೇ ಪೂರ್ವಾಗ್ರಹಗಳಿಲ್ಲದೆ, ಪ್ರೀತಿಯಿಂದ ಕಳಿಸಿದವರು ಭಾಲಚಂದ್ರ ಶಾಸ್ತ್ರಿಗಳು. ಕಾಲೇಜಿನ್ಯಾಗ physics ಕಲಿಸೋ ಮಾಸ್ತರಿಗೆ ಏನು ಜ್ಯೋತಿಷ್ಯ ಗೊತ್ತಿರ್ತದ? ಅನ್ನೋ ಕೆಲ ಕರ್ಮಠ ಬ್ರಾಹ್ಮಣರ ಚಿಕ್ಕ ಮನಸ್ಸು ಶಾಸ್ತ್ರಿಗಳದ್ದು ಅಲ್ಲವೇ ಅಲ್ಲ. ಇದೇ ತರಹ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವೇದಗಳ ಬಗ್ಗೆ, ಕೆಲವು ಅನುಷ್ಠಾನಗಳ ಬಗ್ಗೆ ಪ್ರಶ್ನೆ ಬಂದಾಗ ನಮ್ಮ ತಂದೆಯವರು ಮೊದಲು ಹೋಗುತ್ತಿದ್ದುದು ಭಾಲಚಂದ್ರ ಶಾಸ್ತ್ರಿಗಳ ಬಳಿಯೇ. ಅದ್ವೈತ ಪರಂಪರೆಯ ದೊಡ್ಡ ದೊಡ್ಡ ಸ್ವಾಮಿಗಳೇ ಭಾಲಚಂದ್ರ ಶಾಸ್ತ್ರಿಗಳ ಸಲಹೆ ಕೇಳುತ್ತಿದ್ದರು. ಆ ಮಟ್ಟಿಗಿತ್ತು ಅವರ ಪಾಂಡಿತ್ಯ.
 
ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಸೋದರ ಪ್ರೊ. ಎಂ. ಎನ್. ಜೋಶಿ ಅವರು ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು. ನಮ್ಮ ತಂದೆಯವರಿಗೆ ಕೊಂಚ ಹಿರಿಯ ಸಹೋದ್ಯೋಗಿ. ಕೆಲ ವರ್ಷಗಳ ನಂತರ ಭಾಲಚಂದ್ರ ಶಾಸ್ತ್ರಿಗಳ ಸುಪುತ್ರ ಶ್ರೀ ವೀ. ಬೀ. ಜೋಶಿ ಸಹ ಕರ್ನಾಟಕ ಕಾಲೇಜಿನಲ್ಲೇ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಶುರು ಮಾಡಿ ನಮ್ಮ ತಂದೆಯವರ ಕಿರಿಯ ಸಹೋದ್ಯೋಗಿ ಆದರು. ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಎಷ್ಟೋ ಜನ ಸಮಕಾಲೀನ ಪಂಡಿತರು  ನಮ್ಮ ತಂದೆಯವರಿಗೆ ಹಿರಿಯರಿದ್ದಂತೆ. ಹೀಗಾಗಿ ಒಳ್ಳೆಯ ಸಂಬಂಧ, ಪರಿಚಯ ಎಲ್ಲ ಇತ್ತು ಶಾಸ್ತ್ರಿಗಳ ಜೋಡಿ ನಮ್ಮ ತಂದೆಯವರದು.

೧೯೮೪-೮೫ ರ ಸಮಯ. ದೊಡ್ಡ ಉದ್ಯಮಿ ಶ್ರೀ ಆರ್. ಎನ್. ಶೆಟ್ಟಿಯವರು ಮುರುಡೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದ್ದರು. ಅದು ಅವರ ಹುಟ್ಟೂರು. ಮುರುಡೇಶ್ವರ ದೇವಸ್ಥಾನ ಅಂದ್ರೆ ಜನ ಆಶ್ಚರ್ಯ ಪಡಬೇಕು, ಆ ರೀತಿಯಲ್ಲಿ ಅದನ್ನು ಮಾಡಬೇಕು ಅಂತ ನಿಶ್ಚಯಿಸಿ ದುಡ್ಡು ಕಾಸಿನ ಪರವಾ ಮಾಡದೆ, ಕೋಟ್ಯಂತರ ರೂಪಾಯಿ ಸುರಿದು, ಒಂದು ಕುಗ್ರಾಮವಾಗಿದ್ದ ಮುರುಡೇಶ್ವರವನ್ನು ಇವತ್ತಿನ ಸ್ಥಿತಿಗೆ ತಂದವರು ಶೆಟ್ಟರು.

ಶೆಟ್ಟರು ಮುರುಡೇಶ್ವರದಾಗ ದೊಡ್ಡ ದೇವಸ್ಥಾನ ಏನೋ ಕಟ್ಟಿ ಮುಗಿಸಿಬಿಟ್ಟರು. ಆದರ ಮುಂದ ಏನು? ದೇವಸ್ಥಾನ ಮೊದಲೂ ಇತ್ತು ಅಲ್ಲೆ. ಇವರು ಮಾಡಿದ್ದು ಜೀರ್ಣೋದ್ಧಾರ. ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಅದನ್ನು ಮತ್ತ ತೆಗಿಬೇಕು ಅಂದ್ರ ಏನೇನೋ ಪೂಜಿ ಪುನಸ್ಕಾರ ಎಲ್ಲ ಆಗಬೇಕು. ಸಾಧಾರಣ ಪೂಜಾರಿಗಳಿಗೆ, ಭಟ್ಟರಿಗೆ ಅವೆಲ್ಲ ಗೊತ್ತಿರೋದಿಲ್ಲ. ಅದಕೆಲ್ಲಾ ವೇದಗಳ ಕರ್ಮಕಾಂಡ ಅನ್ನೋ ಭಾಗದಾಗ ಹೋಗಿ, ಸರಿಯಾದ ಮಂತ್ರ, ಅನುಷ್ಠಾನ ಇತ್ಯಾದಿ ಆರಿಸಿ ತಂದು, ಸರಿ ಮಾಡಿ ಪೂಜಿ ಮಾಡಿದ ಮೇಲೇನೇ ಜೀರ್ಣೋದ್ಧಾರ ಮುಗಿದಂಗ. ಆನಂತರವೇ ದೇವಸ್ಥಾನ ತೆಗಿಬಹುದು.

ಈಗ ಶೆಟ್ಟರು ಅಂತಹ ಪಂಡಿತರನ್ನು ಹುಡಕಲಿಕ್ಕೆ ಶುರು ಮಾಡಿದರು. ಶೆಟ್ಟರು ನಮಗ ಮೊದಲಿಂದಲೂ ಭಾಳ ಕ್ಲೋಸ್.

ಭಟ್ಟರೇ, ಒಂದು ಕೆಲಸ ಆಗಬೇಕಿತ್ತು, ಅಂತ ಅನಕೋತ್ತ ಒಂದು ದಿವಸ ಶೆಟ್ಟರು ಬಂದೇ ಬಿಟ್ಟರು.

ಶೆಟ್ಟರಿಗೆ ಎಲ್ಲ ಬ್ರಾಹ್ಮಣರೂ  ಭಟ್ಟರೇ. ಹೀಗಾಗಿ ನಮ್ಮ ತಂದೆಯವರು ಸಹ ಅವರಿಗೆ ಭಟ್ಟರೇ.

ಏನ್ರೀ ಶೆಟ್ಟರೆ? ಏನು ಕೆಲಸ? - ಅಂತ ನಮ್ಮ ತಂದೆಯವರು ಕೇಳಿದರು.

ಮುರುಡೇಶ್ವರದ ಕೆಲಸ ಎಲ್ಲ ಮುಗಿಯಲಿದೆ. ದೇವಸ್ಥಾನ ತೆಗಿಲಿಕ್ಕಿದೆ. ಪೂಜೆ ಎಲ್ಲ ಮಾಡಲಿಕ್ಕಿದೆ. ಅದೇನೋ ದೊಡ್ಡ ದೊಡ್ಡ ಪೂಜೆಯಂತೆ. ಭಾರಿ ಭರ್ಜರೀ ಭಟ್ಟರೇ ಬೇಕಂತೆ. ಹೌದಾ? ನಿಮಗೆ ಯಾರಾದರೂ ಆ ನಮೂನಿ ದೊಡ್ಡ ಭಟ್ಟರು ಗೊತ್ತುಂಟಾ? ಒಳ್ಳೆ ಮಂಡೆ ಬಿಸಿ ಮಾರ್ರೆ - ಅಂತ ಹೇಳಿದ್ರು ಶೆಟ್ಟರು.

ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಜಕಣಾಚಾರಿ ತರಹದ ಶಿಲ್ಪಿಗಳನ್ನ ಕರೆಸಿ, ಎಲ್ಲೆಲ್ಲಿಂದಲೋ ಏನೇನೋ ಸಾಮಾನು ತರಿಸಿ, ಸಮರೋಪಾದಿಯಲ್ಲಿ ಕೆಲಸ ಮಾಡಿ ಮುರುಡೇಶ್ವರದ ಗುಡಿ ಕಟ್ಟಿಸಬೇಕಾದ್ರೂ ಶೆಟ್ಟರಿಗೆ ಇಷ್ಟು ಮಂಡೆ ಬಿಸಿ ಆಗಿರಲಿಕ್ಕೆ ಇಲ್ಲ. ಈಗ ದೊಡ್ಡ ಪೂಜಿಗೆ ಅದಕ್ಕೆ ಸರಿಯಾದ ದೊಡ್ಡ ಭಟ್ಟರನ್ನು ಹುಡುಕೋದು ಮಾತ್ರ ಶೆಟ್ಟರಿಗೆ ದೊಡ್ಡ ತಲೆ ಬಿಸಿಯಾಗಿ ಹೋತು. ಕೇಳಿದ ಪಂಡಿತರು ಒಬ್ಬಬ್ಬರು ಒಂದೊಂದು ತರಹಾ ಹೇಳ್ತಾರ. ಇದು ಹೀಂಗ ಬಗೆಹರಿಯೋದು ಅಲ್ಲ. ಇದಕ್ಕ ಮತ್ತ ತಮ್ಮ ಆಪ್ತ ಭಟ್ಟರು, ಅಲ್ಲ ಹೆಗಡೇರು, ಕಡೆನೇ ಹೋಗಬೇಕು ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ಬಂದಿದ್ದರು.

ಶೆಟ್ಟರೆ, ಚಿಂತೆ ಬೇಡ. ನಮ್ಮ ಹೊನ್ನಾವರದ ಕರ್ಕಿಯಲ್ಲಿ ಒಬ್ಬ ದೊಡ್ಡ ಪಂಡಿತರು ಇದ್ದಾರೆ. ಅವರನ್ನು ಕಾಣುವ - ಅಂತ ಶೆಟ್ಟರಿಗೆ ಹೇಳಿ, ಅವರಿಗೆ ಆ ದೊಡ್ಡ ಪಂಡಿತರನ್ನು ಗುರ್ತು ಮಾಡಿಸಿಕೊಟ್ಟರು ನಮ್ಮ ತಂದೆಯವರು.

ಆ ಕರ್ಕಿ ಪಂಡಿತರು ಖರೆ ದೊಡ್ಡ ಪಂಡಿತರು. ಮೂಲ ದೇವಸ್ಥಾನದ ಜೀರ್ಣೋದ್ಧಾರ ಮಾಡೋದು, ಅದಕ್ಕ ತಕ್ಕ ಪೂಜೆ ಪುನಸ್ಕಾರ ಮಾಡೋದು ಅಂದ್ರ ಸಣ್ಣ ಮಾತಲ್ಲ ಅಂತ ಅವರಿಗೆ ಗೊತ್ತೇ ಇತ್ತು.

ನನಗ ಇದ್ದರ ಬಗ್ಗೆ ಎಲ್ಲಾ ಗೊತ್ತದ. ಜೀರ್ಣೋದ್ಧಾರ ಹೇಗೆ ಸರಿಯಾಗಿ ಶಾಸ್ತ್ರಬದ್ಧವಾಗಿ ಮಾಡಬೇಕು ಅಂತ ಹೇಳಬಲ್ಲೆ. ಆದರೂ ನಾನೂ ಸಹಿತ ಇನ್ನೊಬ್ಬ ಪಂಡಿತರನ್ನ consult ಮಾಡಬೇಕು. ಅವರ ಜೋಡಿ meeting ಎಲ್ಲಾ ಮಾಡಸ್ರೀ - ಅಂದ್ರು ಆ ಹೊನ್ನಾವರದ ಪಂಡಿತರು.

ಯಾರ್ರೀ ಅವರು ಆ ಪಂಡಿತರು? ನೀವು ಭೆಟ್ಟಿ ಮಾಡಬೇಕು ಅಂದವರು? - ಅಂತ ನಮ್ಮ ತಂದೆ ಕೇಳಿದರು.

ಧಾರವಾಡದೊಳಗ ಭಾಲಚಂದ್ರ ಶಾಸ್ತ್ರಿ ಅಂತ ಇದ್ದಾರ. ನನಗ ಛೊಲೋ ಪರಿಚಯ ಅದ. ಅವರ ಜೋಡಿ ನಾ ಎಲ್ಲಾ ಫುಲ್ ಚರ್ಚೆ ಮಾಡಿ, ಅವರ ಸಲಹೆ ಎಲ್ಲಾ ತೊಗೋಂಡ ಮ್ಯಾಲೆನೇ ನಾ ನಿಮಗ ಜೀರ್ಣೋದ್ಧಾರಕ್ಕಾಗಿ ಮಾಡಬೇಕಾದ ಪೂಜಾ ವಿದಿಗಳ ಬಗ್ಗೆ ಎಲ್ಲಾ ಬರೆದು ಕೊಡತೇನಿ. ನಂತರ ನೀವು ಸರಿಯಾದ ವೈದಿಕರನ್ನು ಹಿಡಿದು ಎಲ್ಲಾ ಮಾಡಿಸಿಕೊಳ್ಳಿ - ಅಂತ ಅಂದ್ರು ಆ ಕರ್ಕಿ ಪಂಡಿತರು.

ಯಾರು ಈ ಹೊಸ ಭಟ್ಟರು? ಎಂತಾ ಶಾಸ್ತ್ರಿ ಅಂದ್ರು? - ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ನೋಡಿದರು.

ಶೆಟ್ಟರೆ, ಚಿಂತೆ ಬೇಡ. ಅವರು ಭಾಲಚಂದ್ರ ಶಾಸ್ತ್ರಿಗಳು ಅಂತ. ನನ್ನ ಗುರುಗಳು ಅವರು. ನಾ ಎಲ್ಲ ಮಾಡುವೆ - ಅಂತ ಶೆಟ್ಟರಿಗೆ ನಮ್ಮ ತಂದೆಯವರು ಹೇಳಿದರು.

ಕರ್ಕಿ ಪಂಡಿತರಿಗೆ ಹಿಂತಿಂತ ದಿವಸ ಧಾರವಾಡಕ್ಕೆ ಬರ್ರಿ, ಕಾರು ಗೀರು ಎಲ್ಲಾ ವ್ಯವಸ್ಥೆ ಮಾಡ್ತೇವಿ, ಭಾಲಚಂದ್ರ ಶಾಸ್ತ್ರಿಗಳ ಜೋಡಿನೂ ಮೀಟಿಂಗ್ ಫಿಕ್ಸ್ ಮಾಡಿಸಿ, ಎಲ್ಲಾ ರೆಡಿ ಮಾಡಿ ಇಟ್ಟಿರ್ತೇವಿ. ನೀವು ಬಂದು, ಭಾಲಚಂದ್ರ ಶಾಸ್ತ್ರಿಗಳ ಜೋಡಿ ಎಲ್ಲಾ ಚರ್ಚೆ ಮಾಡಿ, ನಮ್ಮ ಮುರುಡೇಶ್ವರ ಜೀರ್ಣೋದ್ಧಾರದ ಪೂಜಾ ವಿಧಾನಗಳಿಗೆ ಒಂದು user manual ರೆಡಿ ಮಾಡಿಕೊಟ್ಟು ಹೋಗಿ ಬಿಡ್ರೀ. ಭಾಳ ಸಹಾಯ ಆಗ್ತದ, ಅಂತ ವಿನಂತಿ ಮಾಡಿಕೊಂಡು, ನಮಸ್ಕಾರ ಮಾಡಿ, ದಕ್ಷಿಣಾ ಗಿಕ್ಷಿಣಾ ಕೊಟ್ಟು ಬಂದ್ರು ಅಂತಾತು.

ಫಿಕ್ಸ್ ಮಾಡಿದ ದಿವಸ ಕರ್ಕಿ ಪಂಡಿತರು ಬಂದ್ರು. ಆರ್. ಎನ್. ಶೆಟ್ಟರು ಬಂದ್ರು. ಮೊದಲು ಎಲ್ಲಾ ನಮ್ಮ ಮನಿಗೇ ಬಂದ್ರು. ಅಲ್ಲಿಂದ ಶೆಟ್ಟರ ಆ ಕಾಲದ ಭಯಂಕರ ಲಕ್ಸುರಿ ವಾಹನ ಕಾಂಟೆಸ್ಸಾ ಕಾರ್ ಒಳಗ ಎಲ್ಲಾರೂ ಕೂಡಿ ಹಳೆ ಧಾರವಾಡದಲ್ಲಿದ್ದ ಭಾಲಚಂದ್ರ ಶಾಸ್ತ್ರಿಗಳ ಮನಿಗೆ ಹೋದರು. ನಾನೂ ಹೋಗಿದ್ದೆ. ಕಾಂಟೆಸ್ಸಾ ಕಾರ್ ಒಳಗ  ರೌಂಡ್ ಹೊಡಿಯೋದನ್ನ ಯಾರು ಬಿಡ್ತಾರ್ರೀ?! ಆ ಕಾಲದ ಮಹಾ ತುಟ್ಟಿ ಕಾರ್ ಅದು.

ಭಾಲಚಂದ್ರ ಶಾಸ್ತ್ರಿಗಳ ಮನಿ ಬಂತು. ದೊಡ್ಡವರೆಲ್ಲಾ ಇಳಿದು ಹೋದರು. ನಾನು ಮಾತ್ರ ಶೆಟ್ಟರ ಗಂಟ ಮಾರಿ ಡ್ರೈವರ್ ತಾನಾಜಿ ಜೋಡಿ ಕಾಂಟೆಸ್ಸಾ ಕಾರ್ ಒಳಗೇ ಕೂತೆ. ಅವನ ಕಡೆ ಅದು ಇದು ಕೇಳಿಕೋತ್ತ. ನಾ ಹತ್ತು ಪ್ರಶ್ನೆ ಕೇಳಿದರ ಆವಾ ಗಂಟ ಮಾರಿ ತಾನಾಜಿ ರೊಕ್ಕ ಖರ್ಚು ಆಗ್ತದೇನೋ ಅನ್ನೋರಾಂಗ, ಹೌದು, ಇಲ್ಲ, ಅಂತ ಉತ್ತರ ಕೊಡವಾ. ನಾ ಎಲ್ಲರೆ ಶೆಟ್ಟರ ಕಾಂಟೆಸ್ಸಾ ಕಾರ್ ಏನರೆ ಮಾಡಿಬಿಡ್ತೆನೇನೋ ಅಂತ ಅವಂಗ tension ಇದ್ದಂಗ ಅನ್ನಸ್ತಿತ್ತು. ನಾ ಏನ್ ಮಾಡಲಿಲ್ಲ ಬಿಡ್ರೀ.

ಕರ್ಕಿ ಪಂಡಿತರು, ಶೆಟ್ಟರು, ನಮ್ಮ ತಂದೆಯವರು ಭಾಲಚಂದ್ರ ಶಾಸ್ತ್ರಿಗಳ ಮನಿ ಒಳಗ ಹೋದರಲ್ಲ, ಮುಂದೇನಾತು? ನಾ ಏನ ಒಳಗ ಹೋಗಿರಲಿಲ್ಲ. ತಂದೆಯವರಿಂದ ಕೇಳಿದ್ದು. ಸ್ವಾರಸ್ಯಕರ  ಘಟನೆ.

ಕರ್ಕಿಯಿಂದ ತಮ್ಮ ಸ್ನೇಹಿತ ದೊಡ್ಡ ಪಂಡಿತರು ಬರ್ಲಿಕತ್ತಾರ. ಅದೂ ಏನೇನೋ ದೊಡ್ಡ ಚರ್ಚೆ ಮಾಡಲಿಕ್ಕೆ. ಯಾವದಕ್ಕೂ ಇರಲಿ ಅಂತ ಭಾಲಚಂದ್ರ ಶಾಸ್ತ್ರಿಗಳೂ ಸಹ ತಮ್ಮ ನಂಬಿಕಸ್ತ ಇನ್ನೊಂದಿಷ್ಟು ಜನ ಪಂಡಿತರನ್ನೂ ಸಹ ಕಲೆ ಹಾಕಿಕೊಂಡು ಕೂತಿದ್ದರು ತಮ್ಮ ಮನಿಯೊಳಗ.

ಪಂಡಿತರೆಲ್ಲರ ಉಭಯಕುಶಲೋಪರಿ ಇತ್ಯಾದಿ ಮಾತುಕತೆ ಮುಗಿದು ಮುಖ್ಯ ಪಾಯಿಂಟಿಗೆ ಎಲ್ಲರೂ ಬಂದ್ರು.

ಮುರುಡೇಶ್ವರದ ದೇವಸ್ಥಾನದ ಜೀರ್ಣೋದ್ಧಾರ ಹ್ಯಾಂಗೆ ಮಾಡಬೇಕು? ವೇದಗಳು, ಪುರಾಣಗಳು ಇತ್ಯಾದಿ ಏನು ಹೇಳ್ತಾವ? ಯಾವ ಯಾವ ಅನುಷ್ಠಾನ ಮಾಡಬೇಕು? ಅವಕ್ಕ ಮಂತ್ರಾ ಎಲ್ಲೆಲ್ಲಿಂದ ಎತ್ತಬೇಕು? ಪ್ರತಿಯೊಂದಕ್ಕೂ ಶಾಸ್ತ್ರಾಧಾರ ಎಲ್ಲೆ ಅದ? ಕೆಲವೊಂದು ಅನುಷ್ಠಾನಗಳು ಬೇರೆ ಬೇರೆ ವೇದದಲ್ಲಿ ಬೇರೆ ಬೇರೆ ತರಹ ಅವ. ಅವನ್ನ ಹ್ಯಾಂಗೆ reconcile ಮಾಡಬೇಕು - ಅಂತ ದೊಡ್ಡ ಮಟ್ಟದ ಚರ್ಚೆ, ಸಂವಾದ ಎಲ್ಲಾ ನೆರದ ಪಂಡಿತರಲ್ಲಿ ಆತು.

ಶೆಟ್ಟರು, ನಮ್ಮ ತಂದೆಯವರು ಸುಮ್ಮ ಕೇಳಿಕೋತ್ತ, ನೋಡಿಕೋತ್ತ ಕೂತರು.

ಇಷ್ಟೆಲ್ಲಾ ಮಂದಿ ಪಂಡಿತರು ಕೂಡಿ ಒಂದು ನಿರ್ಧಾರಕ್ಕೆ ಬರೋದು ಸಾಧ್ಯ ಅದ ಏನ್ರೀ?

ಯಾವದೋ ಒಂದು ಪಾಯಿಂಟ್ ಸಿಕ್ಕಾಪಟ್ಟೆ ತೊಂದ್ರೀ ತಂದು ಇಡ್ತು. ಕೆಲೊ ಮಂದಿ ಈ ವೇದದ, ಈ ಶಾಖೆಯೊಳಗ ಹೀಂಗ ಅದ, ಅದೇ ಸರಿ, ಅದರ ಪ್ರಕಾರನೇ ಮಾಡಬೇಕು ಅಂದ್ರ, ಉಳಿದ ಮಂದಿ, ಏ... ಅದು ತಪ್ಪು....ಮತ್ತೊಂದು ವೇದದ, ಮತ್ತೊಂದು ಶಾಖೆಯಲ್ಲಿ ಅದು ಹೀಂಗದ, ಅದೇ ಸರಿ, ಅದರಾಂಗೇ ಮಾಡಬೇಕು, ಅಂತ. ಅವರಲ್ಲೇ ವಾದ, ವಿವಾದ. ಒಟ್ಟಿನ್ಯಾಗ ಒಂದು ಒಪ್ಪಂದಕ್ಕೆ ಬರವಲ್ಲರು ಈ ದೊಡ್ಡ ದೊಡ್ಡ ಪಂಡಿತ ಮಂದಿ.

ಹತ್ತು ನಿಮಿಷಾತು, ಹದಿನೈದು ನಿಮಿಷಾತು, ಅರ್ಧಾ ತಾಸಾತು, ಪೌಣೆ ತಾಸಾತು. ಈ ಪಂಡಿತರ ಆ ವೇದ ಸರಿ, ಈ ವೇದ ಸರಿಯಲ್ಲ ಅನ್ನೋ ವಾದ ವಿವಾದ ಮುಗಿವಲ್ಲದು. ಈಗ temper ಬ್ಯಾರೆ rise ಆಗಿ ಕೆಲೊ ಮಂದಿ ಸುಮಾರು ಜಗಳಾನೇ ಮಾಡ್ಲಿಕತ್ತಾರ! ಹಾಂ!!! ಹವಾ ಫುಲ್ ಗರಂ!!

ಏನ್ರೀ ಭಟ್ಟರೇ ಅಲ್ಲಲ್ಲ ಹೆಗಡೇರೆ?! ಇದೆಂತಾ ಭಟ್ಟರ ಜಗಳ? - ಅನ್ನೋ ಲುಕ್ ಶೆಟ್ಟರು ನಮ್ಮ ತಂದೆಯವರಿಗೆ ಕೊಟ್ಟರು.

ದೊಡ್ಡ ಮಂದಿ ಚರ್ಚಾ ನೆಡದದ. ಎಲ್ಲಾ ನಿಮ್ಮ ಮುರುಡೇಶ್ವರದ ಜೀರ್ಣೋದ್ಧಾರಕ್ಕಾಗಿ. ಮಾಡ್ಲಿ ಬಿಡ್ರೀ ಅವರು ಚರ್ಚಾ. ಹೀಂಗ ಚರ್ಚಾ ಆದ್ರೆ ಮಾತ್ರ ನಿಮಗ ಸರಿಯಾಗಿ ಪೂಜಾ syllabus ಸಿಗೋದು. ಇಲ್ಲಂದ್ರ ಇಲ್ಲ - ಅಂತ ನಮ್ಮ ತಂದೆಯವರು ಶೆಟ್ಟರಿಗೆ ಕಣ್ಣ ಸನ್ನಿಯೊಳಗೇ ಹೇಳಿದರು.

ಏನೋ ದೊಡ್ಡ ಭಟ್ಟರ ದೊಡ್ಡ ಜಗಳಾ, ಅಂತ ಶೆಟ್ಟರು ವಾಚ್ ನೋಡ್ಕೊತ್ತ ಕೂತರು.

ಪೌಣಾ ತಾಸು ಹೋಗಿ ಒಂದು ತಾಸಾಗ್ಲಿಕ್ಕೆ ಬಂತು. ಈ ಪಂಡಿತರು ಇನ್ನೂ ಆ ವೇದ, ಈ ಶಾಖೆ, ಆ ಮಂತ್ರ, ಈ ಅನುಷ್ಠಾನ ಅಂತ ಇನ್ನೂ ತಮ್ಮ ವಾದ ವಿವಾದ ಮುಗಿಸವಲ್ಲರು. ಒಟ್ಟಿನ್ಯಾಗ ಇವರ ಜಗಳ ಬಗೆಹರಿವಲ್ಲದು. ಚರ್ಚೆ ಹೋಗಲಿ ಈಗ ಎಲ್ಲಾರೂ ಭುಸು ಭುಸು ಅನಕೋತ್ತ ಕೂತಾರ. ಮುಂದೇನು ಹೀಂಗ ಆದ್ರ?

ನಮ್ಮ ತಂದೆಯವರಿಗೆ ಅದು ಎಲ್ಲಿಂದ ಏನು ಪ್ರೇರಣೆ ಆತೋ ಗೊತ್ತಿಲ್ಲ. ಒಂದು ಬಾಂಬ್ ಒಗದೇ ಬಿಟ್ಟರು!

ಆ ವೇದ, ಈ ವೇದ ಏನ್ರೀ? ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

ಫುಲ್ ಸೈಲೆನ್ಸ್!

ಎಲ್ಲ ದೊಡ್ಡ ಪಂಡಿತರು ಒಂದು ಕ್ಷಣ ಫುಲ್ ಥಂಡಾ. ಏನು ಇವ ಕಾಲೇಜಿನ್ಯಾಗ ಕಲಿಸೋ ಮಾಸ್ತರ್ ಒಳ್ಳೆ ಅಧಿಕಪ್ರಸಂಗಿ ಹಾಂಗ, ನಮ್ಮ ದೊಡ್ಡ ಪಂಡಿತರ ಚರ್ಚಾ ನಡೆದಾಗ, ನಡು ಉಪದ್ವಾಪಿತನ ಮಾಡತಾನ? ಹಾಂ?! ಬುದ್ಧಿ ಗಿದ್ಧಿ ಅದನೋ ಇಲ್ಲೋ ಇವರಿಗೆ?! - ಅಂತ ಕೆಲೊ ಮಂದಿ ಮಾರಿ ಮ್ಯಾಲೆ ಏನೇನೋ ತರಹದ ಭಾವಗಳು ಮೂಡಿ ಮರೆಯಾದವು.

ನಮ್ಮ ತಂದೆಯವರನ್ನು ಅರಿತಿದ್ದ ಕೆಲ ಪಂಡಿತರು ಮಾತ್ರ, ಈ ಹೆಗಡೆಯವರು ಏನೋ ಪಾಯಿಂಟ್ ಇಟಗೋಂಡೇ ಹೀಗಂದಾರ. ಏನಿರಬಹುದು? - ಅಂತ ಕುತೂಹಲಿಗಳಾದ್ರು. ಕೆಲೊ ಮಂದಿ ದೇಶಾವರಿ ನಗು ನಕ್ಕರು.

ಮೊದಲು ಸುಧಾರಿಕೊಂಡು ಮಾತಾಡಿದವರು ಭಾಲಚಂದ್ರ ಶಾಸ್ತ್ರಿಗಳೇ.

ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ ಅಂತ ಇಷ್ಟು ಗುಂಡು ಹೊಡೆದಂಗ ಹೇಳಲಿಕತ್ತಿರಲ್ಲಾ ಹೆಗಡೆಯವರ, ಅದು ಹ್ಯಾಂಗ್ರೀ? ಅದನ್ನೂ ಸ್ವಲ್ಪ ಹೇಳಿಬಿಡ್ರಲ್ಲಾ. ಹಾಂ! - ಅಂತ ಭಾಲಚಂದ್ರ ಶಾಸ್ತ್ರಿಗಳು ಕೇಳಿದರು. ಮಾತಿನಲ್ಲಿ ಅಕ್ಕರೆಯಿತ್ತು. ಸಣ್ಣ ಹುಡುಗುರು ಏನೋ ದೊಡ್ಡ ಮಾತಾಡಿದಾಗ ದೊಡ್ಡವರು ಮಾತಾಡೋ ಪ್ರೀತಿಯ ಧಾಟಿ ಇರ್ತದಲ್ಲ. ಹಾಂಗೆ.

ವೇದಾನಾಂ ಸಾಮ ವೇದೋಸ್ಮೀ, ಅಂದ್ರ, ವೇದಗಳಲ್ಲಿ ನಾನು ಸಾಮವೇದವಾಗಿದ್ದೇನೆ, ಅಂತ ಭಗವದ್ಗೀತೆಯೊಳಗೆ ಭಗವಾನ ಶ್ರೀ ಕೃಷ್ಣನೇ ಹೇಳಿಬಿಟ್ಟಾನ. ಅಂದ ಮ್ಯಾಲೆ ಮತ್ತೇನ್ರೀ ಶಾಸ್ತ್ರಿಗಳ?! ಎಲ್ಲಿ ಆ ವೇದ ಈ ವೇದ ಹಚ್ಚೀರಿ? ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ - ಅಂತ ಅಂದ್ರು ನಮ್ಮ ತಂದೆಯವರು.

(ವೇದಾನಾಂ ಸಾಮ ವೇದೋಸ್ಮೀ - ಭಗವದ್ಗೀತಾ ಅಧ್ಯಾಯ ೧೦, ಶ್ಲೋಕ ೨೨)

ಈಗ ಭಾಲಚಂದ್ರ ಶಾಸ್ತ್ರಿಗಳು ಮಾತ್ರ ಅಲ್ಲ ಎಲ್ಲರೂ ಸ್ವಲ್ಪ loosen up ಆದರು. ಆ ಪರಿ ಫುಲ್ ಟೈಟ್ ಆಗಿದ್ದ ವಾತಾವರಣ ಸ್ವಲ ತಿಳಿ ಆತು.

ಅಧಿಕಪ್ರಸಂಗಿತನ ಮಾಡಿದರೂ ಶಾಸ್ತ್ರೋಕ್ತವಾಗಿ, ಎಲ್ಲಾ ಫುಲ್ ಶಾಸ್ತ್ರದ ಸಪೋರ್ಟ್ ಇಟ್ಟೇ  ಮಾಡ್ತೀರಿ ನೋಡ್ರೀ ಹೆಗಡೆಯವರ!!!! ಅನ್ನೋ ಲುಕ್ ಭಾಲಚಂದ್ರ ಶಾಸ್ತ್ರಿಗಳ ಮುಖದಲ್ಲಿ.

ಎಲ್ಲ ಪಂಡಿತರ ಮುಖದ ಮ್ಯಾಲಿನ ಗಂಟೆಲ್ಲ ಮಾಯವಾಗಿ, ಮೋಡ ಕವಿದ ವಾತಾವರಣ ತಿಳಿಯಾಗಿ, ಎಲ್ಲರೂ ಎಲ್ಲಾ ಬಿಚ್ಚಿ (ಅಂದ್ರ ಮನಸ್ಸು ಇತ್ಯಾದಿ ಮಾತ್ರ) ನಕ್ಕರು. ಮುಂದೆ ಎಲ್ಲಾ ಸುರಳೀತ ಆತು.

ತಂದೆಯವರ ಮಾತಿನ ಹಿಂದೆ ಯಾವದೇ ಕುಚೋದ್ಯ ಇರಲಿಲ್ಲ. ಕಾವೇರುತ್ತಿದ್ದ ವಾತಾವರಣಕ್ಕೆ ಒಂದು ತಣ್ಣನೆ ಟಚ್ ಕೊಡುವ ಯತ್ನವಿತ್ತು ಅಷ್ಟೇ. ಹಾಗಾಗಿ ಯಾರೂ ಸಿಟ್ಟಿಗೇಳಲಿಲ್ಲ.

ಶೆಟ್ಟರೂ ಸಹಾ ಹೇ! ಹೇ! ಅಂತ ನಕ್ಕರು. ಅವರಿಗೆ ಯಾವ ವೇದ ಆದರೇನು, ಒಟ್ಟಿನ್ಯಾಗ ಈ ದೊಡ್ಡ ಭಟ್ಟರ ಜಗಳ ಮುಗಿದು ಅವರ ಪೂಜಿ ಆದ್ರ ಸಾಕು. ಅವರಿಗೆ ಮಾಡಲಿಕ್ಕೆ ಸಾವಿರ ಕೆಲಸ ಬ್ಯಾರೆ ಅವ. ಸಾವಿರಾರು ಕೋಟಿ ಆ ಕಡೆಯಿಂದ ಈ ಕಡೆ ಹಾಕೋವಾಗ ಸಹಿತ ಶೆಟ್ಟರು ಇಷ್ಟು ತಲಿ ಕೆಡಿಸ್ಕೊತ್ತಾರೋ ಇಲ್ಲೋ! ಈ ಭಟ್ಟರು ಮಾತ್ರ ಇಷ್ಟು ರಿಪಿ ರಿಪಿ ಮಾಡ್ತಾರ!

ನಂತರ ಶಾಸ್ತ್ರಿಗಳು, ವೇದಾನಾಂ ಸಾಮ ವೇದೋಸ್ಮೀ, ಅಂತ ಭಗವದ್ಗೀತಾ ಒಳಗ ಕೃಷ್ಣ ಹೇಳಿದ್ದರ ಅರ್ಥ ಏನು, ಮತ್ತ ಪೂಜಾವಿಧಿ ವಿಧಾನ ಎಲ್ಲಾ ಹ್ಯಾಂಗ ಹೆಚ್ಚಾಗಿ ರಿಗ್ವೇದ, ಯಜುರ್ವೇದಿಂದ ಬರ್ತಾವ, ಅದು ಇದು ಅಂತ ಒಂದು ಸಣ್ಣ ಪ್ರವಚನ ಕೊಟ್ಟು, ಶಾಸ್ತ್ರಬದ್ಧವಾಗಿಯೇ ಅಧಿಕಪ್ರಸಂಗಿತನ ಮಾಡಿದ್ದ ತಂದೆಯವರಿಗೆ ಒಂದೆರಡು ಉತ್ತತ್ತಿ ಪ್ರಸಾದದಲ್ಲಿ ಹೆಚ್ಚೇ ಕೊಟ್ಟು, ಆಶೀರ್ವಾದ ಮಾಡಿ ಕಳಿಸಿದ್ದು ಭಾಲಚಂದ್ರ ಶಾಸ್ತ್ರಿಗಳ ದೊಡ್ಡ ಗುಣ.

ಮುಂದೆ ಭಾಲಚಂದ್ರ ಶಾಸ್ತ್ರಿಗಳು ಮತ್ತು ಇತರೆ ಪಂಡಿತರು ಎಲ್ಲಾ ಕೂಡಿ ಒಂದು proper vedic syllabus ಮಾಡಿ ಕೊಟ್ಟರು. ಅದರ ಪ್ರಕಾರ ಗೋಕರ್ಣದ ದೊಡ್ಡ ದೊಡ್ಡ ವೈದಿಕರು ಬಂದು ಶಾಸ್ತ್ರಸಮ್ಮತವಾಗಿ ಮುರುಡೇಶ್ವರದ ಜೀರ್ಣೋದ್ಧಾರ ಪೂಜೆ ಅದು ಇದು ಎಲ್ಲಾ ಮಾಡಿ ಕೊಟ್ಟರು.

ನಂತರ ಮುರುಡೇಶ್ವರ ಹಿಂತಿರುಗಿ ನೋಡಿಲ್ಲ. ಅಭಿವೃದ್ಧಿ ಆಗತಾನೇ ನೆಡದದ. ಭಾಲಚಂದ್ರ ಶಾಸ್ತ್ರಿಗಳ ಆಶೀರ್ವಾದ ಸಹಾ ಅದಕ್ಕೆ ಕಾರಣ.

ಇನ್ನು ಭಾಲಚಂದ್ರ ಶಾಸ್ತ್ರಿಗಳ ತಮ್ಮಾ ಪ್ರೊ. ಎಂ. ಎನ್. ಜೋಶಿ ಸರ್. ನಮ್ಮ ತಾಯಿಯವರಿಂದ ಹಿಡಿದು ನಮ್ಮ ಕುಟುಂಬದ ಕರ್ನಾಟಕ ಕಾಲೇಜಿಗೆ ಹೋದ ಎಲ್ಲರಿಗೂ ಸಂಸ್ಕೃತ ಕಲಿಸಿದವರು. ನಮ್ಮ ತಂದೆಯವರನ್ನು ಬಿಟ್ಟು. ಅವರ ಸಮಕಾಲೀನರು ಅವರು. ದೊಡ್ಡ ಪಂಡಿತರು. ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಗಳಲ್ಲಿ ಪೂರ್ತಿ ಪಾಂಡಿತ್ಯ. ಅವರ ಲೆಕ್ಚರ್ ಅಂದ್ರ ಏನ್ರೀ! ಸೂಪರ್!

ಪಿಯೂಸಿ ಮೊದಲನೇ ವರ್ಷ ಎಂ. ಎನ್. ಜೋಶಿ ಸರ್ ಕಾಳಿದಾಸನ ಯಾವದೋ ಒಂದು ಕಾವ್ಯದ ಮೇಲೆ ಅಮೋಘ ಲೆಕ್ಚರ್ ಕೊಟ್ಟು, what effect does it produce? ಅಂತ ಕೇಳಿದ್ದರು. ಆಗ ಮಾತ್ರ ಫಿಸಿಕ್ಸ್ ಕ್ಲಾಸ್ ಮುಗಿಸಿ ಬಂದಿದ್ದ ನಾವು, ಹಿಂದಿನ ಬೆಂಚಿನಿಂದ, Raman Effect, ಅಂತ ಒದರಿದಾಗ ಎಲ್ಲರೂ ನಕ್ಕಿದ್ದರು. ಎಂ. ಎನ್. ಜೋಶಿ ಸರ್ ಕೇಳಿದ್ದು ಯಾವ poetic effect ಅಂತ. ಹೋಗಿ ಹೋಗಿ ನಾವು Raman Effect ಅಂದ್ರ ಅವರಿಗೆ ಉರಿದೇ ಇರ್ತದ ಏನ್ರೀ?! ಹಾಕ್ಕೊಂಡು ಬೈದ್ರು. ಎಲ್ಲರಿಗೆ. ಇಂಗ್ಲೀಷ್ ಮಿಶ್ರಿತ ಸಂಸ್ಕೃತದಲ್ಲಿ ಬೈದ್ರೋ ಅಥವಾ ಸಂಸ್ಕೃತ ಮಿಶ್ರಿತ ಇಂಗ್ಲೀಷ್ ಒಳಗ ಬೈದ್ರೋ, ದೇವರಿಗೇ ಗೊತ್ತು. ಪುಣ್ಯಕ್ಕ ನನ್ನ ಒಬ್ಬವನ್ನೇ ಎಬ್ಬಿಸಿ ನಿಲ್ಲಿಸಿ ಬೈಲಿಲ್ಲ. ಎಲ್ಲಾರಿಗೂ ಕೂಡೆ ಹಾಕ್ಕೊಂಡು ಬೈದ್ರು.

ಇನ್ನು ವೀ.ಬೀ.ಜೋಶಿ ಸರ್. ಭಾಲಚಂದ್ರ ಶಾಸ್ತ್ರಿಗಳ ಪುತ್ರ. ದೊಡ್ಡ ಪಂಡಿತರು. ಅವರು ನಮಗೆ ಪಿಯುಸಿ ಎರಡನೇ ವರ್ಷ ಸಂಸ್ಕೃತ ಕಲಿಸಿದವರು. ಯಾವಾಗಲೂ ಒಂದು ಕಾಫಿ ಕಲರ್ ಕೋಟ್ ಮತ್ತು ಅದೇ ಬಣ್ಣದ್ದೋ ಅಥವಾ ಕರಿ ಬಣ್ಣದ್ದೋ ಟೊಪ್ಪಿಗಿ ಅವರ ತಲಿ ಮ್ಯಾಲೆ. ಅವರ ನೋಡಿದಾಕ್ಷಣ, ಅವರ ಬೋರ್ನವಿಟಾ ಬಣ್ಣದ ಖಾಯಂ ಕೋಟ್ ನೋಡಿದಾಕ್ಷಣ ನಮ್ಮ ಕಿಡಿಗೇಡಿ ದೋಸ್ತ ಒಬ್ಬ ಅವರಿಗೆ 'ಬೋರ್ನವಿಟಾ ಭಟ್ಟಾ' ಅಂತ ಹೆಸರು ಇಟ್ಟುಬಿಟ್ಟ. ಕೆಟ್ಟ ಹುಡುಗ. ಭಾರೀ ಮಸ್ತ ಸಂಸ್ಕೃತ ಕಲಸ್ತಿದ್ದರು. ಭಾಲಚಂದ್ರ ಶಾಸ್ತ್ರಿಗಳಂತಹ ತಂದೆಗೆ ತಕ್ಕ ಮಗ ಅವರು. ಕೇವಲ ಪಾಂಡಿತ್ಯದಿಂದ ಮಾತ್ರ ಬರುವಂತಹ ಒಂದು ತರಹದ ತೇಜಸ್ಸು ಅವರ ಮುಖದಲ್ಲಿ. ಈಗ ಅವರೂ ಸಹ ರಿಟೈರ್ ಆಗಿರಬಹುದು.

ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದ್ದು ಬಹುಶ ಎರಡೇ ಸರಿ. ಒಂದು ಓಪನ್ ಏರ್ ಥೀಯೇಟರ್ ನಲ್ಲಿ. ಇನ್ನೊಮ್ಮೆ ಶೃಂಗೇರಿ ಸ್ವಾಮಿಗಳು ಯಾರದೋ ಮನೆಗೆ ಪಾದಪೂಜೆಗೆ ಬಂದಾಗ ನೋಡಿ, ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಂಡಿದ್ದು.

ಅದು ಏನೋ ಏನೋ! ಭಾಲಚಂದ್ರ ಶಾಸ್ತ್ರಿಗಳು ಹೋಗಿದ್ದೇ ಹೋಗಿದ್ದು ಈ ಎಲ್ಲ ನೆನಪುಗಳು ಬಂದು ಬಿಟ್ಟವು. ಬರೆಯೋ ತನಕಾ ನೆಮ್ಮದಿ ಇಲ್ಲ.

Friday, December 27, 2013

ಚಂದ್ರಂಗ ಬಾಲ ಹಚ್ಚಿ ಬಾಲಚಂದ್ರ ಯಾಕ ಮಾಡಬೇಕು ಅಂತ ಹೇಳಿ 'ಏನೇನೋ' ಸೀಳಿ 'ಭಾ'ಲಚಂದ್ರ ಮಾಡಿಬಿಟ್ಟಿದ್ದು!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.)

ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಬಾಲಚಂದ್ರ ಶಾಸ್ತ್ರಿಗಳು....ಯಾವಾಗ  ಕೇಳಿದೆ ಈ ಹೆಸರು ಮೊದಲ ಬಾರಿಗೆ ಅಂತ ವಿಚಾರ ಮಾಡಿದೆ.

ಒಮ್ಮೆ ಭಾಳ ಸಣ್ಣವ ಇದ್ದಾಗ, ತಾಯಿಯವರ ಜೋಡಿ ಅಲ್ಲೆಲ್ಲೋ ದತ್ತಾತ್ರಯ ದೇವರ ಗುಡಿ ಹತ್ತಿರ ಹೊಂಟಾಗ, ತಾಯಿಯವರು ಏನೋ ತೋರಿಸಿ - ಇದs ನೋಡು ಬಾಲಚಂದ್ರ ಶಾಸ್ತ್ರಿಗಳ ಸಂಸ್ಕೃತ ಪಾಠಶಾಲಿ. ದೊಡ್ಡ ಸಂಸ್ಕೃತ ಪಂಡಿತರು ಅವರು. ಅವರ ತಮ್ಮಾ ಅಂದ್ರ ಎಂ. ಎನ್. ಜೋಶಿ ಪ್ರೊಫೆಸರ್. ನಮಗ ಕರ್ನಾಟಕ ಕಾಲೇಜ್ ಒಳಗ ಸಂಸ್ಕೃತ ಕಲಸ್ತಿದ್ದರು. ನಿಮ್ಮ ಅಪ್ಪನ colleague - ಅಂತ ಹೇಳಿದ್ದು  ನೆನಪು.

ಹಾಂ!!! ಅಣ್ಣನ ಹೆಸರು ಬಾಲಚಂದ್ರ ಶಾಸ್ತ್ರಿ. ತಮ್ಮನ ಹೆಸರು ಎಂ. ಎನ್. ಜೋಶಿ. ಅದೆಂಗ ಬ್ಯಾರೆ ಬ್ಯಾರೆ ಅಡ್ಡೆಸರು??!! - ಅಂತ ಕಿಡಿಗೇಡಿ ವಿಚಾರ ತಲಿಯೊಳಗ ಅವತ್ತು ಬಂದಿತ್ತಾ? ನೆನಪಿಲ್ಲ. ಬಂದಿರಲಿಕ್ಕೆ ಇಲ್ಲ. ಭಾಳ ಸಣ್ಣವ ಇದ್ದೆ ಅಂತ ಹೇಳಿದ್ನ್ಯಲ್ಲ. ಅವತ್ತೇನು ಭಾಳ ವರ್ಷದ ತನಕಾ ಶಾಸ್ತ್ರಿ ಅಂಬೋದು ಅವರಿಗೆ ಬಂದ ಬಿರಿದು (ಉಪಾಧಿ) ಅಂತ ನನಗ ಗೊತ್ತೇ ಇರಲಿಲ್ಲ ಬಿಡ್ರೀ.

ಅಷ್ಟು ಸಣ್ಣವ ಇದ್ದಾಗ ಶಾಸ್ತ್ರಿ ಅನ್ನೋದು ಸಹಿತ ಒಂದು ತರಹದ ವಿಶೇಷ ಹೆಸರೇ ಬಿಡ್ರೀ. ಬಾಲಚಂದ್ರ ಶಾಸ್ತ್ರಿ ಅನ್ನೋ ಹೆಸರು ಕೇಳೋ ಮೊದಲು ಕೇಳಿದ್ದ ಏಕೈಕ ಶಾಸ್ತ್ರಿ ಅಂದ್ರ ನಮ್ಮ ಮುತ್ತಜ್ಜ ಸಿರ್ಸಿ ಕೃಷ್ಣ ಶಾಸ್ತ್ರಿ. ಅವರೂ ಸಹ ದೊಡ್ಡ ಪಂಡಿತರು ಇದ್ದರಂತ. ಲಗೂನ ತೀರಿಕೊಂಡರು. ಆದರೂ ತೀರಿಕೊಳ್ಳೋ ಮೊದಲು ಆ ಕಾಲದ ಮೈಸೂರ ಮಹಾರಾಜರಿಂದ ಒಂದು ದೊಡ್ಡ ಬಂಗಾರದ ಕಡಗ ಅವರ ಮಹಾನ ಪಾಂಡಿತ್ಯಕ್ಕೆ ಅಂತ ಪ್ರೈಸ್ ಹೊಡಕೊಂಡ ಮ್ಯಾಲೇ ತೀರಿಕೊಂಡರು. ಹಾಂಗಾಗಿ ಈ ಬಾಲಚಂದ್ರ ಶಾಸ್ತ್ರಿಗಳೂ ಕೂಡ ಅದೇ ಟೈಪಿನ ಬಂಗಾರದ ಕಡಗ ಹಾಕ್ಕೊಂಡು, ದೊಡ್ಡ ಚಂಡಕಿ ಬಿಟ್ಟ ಪಂಡಿತರೇ ಇರಬೇಕು ಅಂತ ಊಹಾ ಮಾಡಿದೆ. ಭಾಳ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದಾಗ ನಾ ಮೊದಲು ಮಾಡಿದ್ದ ಊಹಾ ಎಷ್ಟು ತಪ್ಪಿತ್ತು ಅಂತ ಅರಿವಾತು.

ಇದಾಗಿ ಸುಮಾರು ವರ್ಷ ಬಾಲಚಂದ್ರ ಶಾಸ್ತ್ರಿಗಳು ಮರೆತು ಹೋಗಿದ್ದರು. ಅವರ ಹೆಸರು ನೆನಪು ಆಗೋವಂತಹ ಯಾವದೇ ಘಟನೆ ನಡಿಲಿಲ್ಲ.

೧೯೮೩-೮೪ ರ ಟೈಮ್. ನಾವೆಲ್ಲಾ ಆವಾಗ ಆರನೇತ್ತಾ (೬ ಕ್ಲಾಸ್). ಕೆ.ಇ. ಬೋರ್ಡ್ ಸಾಲಿ. ಶ್ರೀಮತಿ ಅನುರಾಧಾ ಜೋಶಿ ಟೀಚರ್ ನಮ್ಮ ಕ್ಲಾಸ್ ಟೀಚರ್. ಗಣಿತ ಮತ್ತ ಇಂಗ್ಲೀಷ್ ಎರಡೂ ಅವರದ್ದೇ.

ಮಹೇಶಾ, ನಡಿ ನನ್ನ ಜೋಡಿ - ಅಂತ ಅಂದ್ರು ಜೋಶಿ ಟೀಚರ್ ಒಂದು ದಿವಸ ಪೀರಿಯಡ್ ಮುಗಿದ ಕೂಡಲೆ.

ಎಲ್ಲಿಗರಿ? ಅಂತ ಕೇಳಲಿಲ್ಲ. ಎಲ್ಲೋ ಟೀಚರ್ ಸ್ಟಾಫ್ ರೂಮಿಗೆ ಕರಕೊಂಡು ಹೋಗಿ ಏನೋ administrative ಕೆಲಸ ಕೊಡ್ತಾರ, ಮಾಡಿ ಬಂದ್ರಾತು ಅಂತ ವಿಚಾರ ಮಾಡಿದೆ. ಮಾರ್ಕ್ಸ್ ಟೋಟಲ್ ಮಾಡೋದು, ಪ್ರೋಗ್ರೆಸ್ ಕಾರ್ಡ್ ತುಂಬೋದು ಮುಂತಾದ ಕೆಲಸ ಟೀಚರ್ ನಮಗ ಆಗಾಗ ಹಚ್ಚತಿದ್ದರು. ನಾವೂ ಖುಷಿಂದ ಮಾಡಿ ಬರ್ತಿದ್ದಿವಿ. ಹಾಂಗೇ ಏನೋ ಇರಬೇಕು ಅಂತ ತಿಳಕೊಂಡು, ಟೀಚರ್ ಹಿಂದ ಅವರ ಬಾಲಂಗೋಚಿ ಹಾಂಗ ಹೊಂಟೆ.

ಟೀಚರ್ ಸ್ಟಾಫ್ ರೂಮಿಗೆ ಬಂದ್ರು. ಹಿಂದೆ ನಾನು. ಟೀಚರ್ ತಮ್ಮ ಪುಸ್ತಕಾ ಗಿಸ್ತಕಾ ಕೆಳಗ ಇಟ್ಟು, ಹುಸ್ಸ್ ಅಂತ ಉಸಿರು ಬಿಟ್ಟು, ಎಲ್ಲೋ ಅವರ ಸ್ಟಾಫ್ ರೂಂ ಡೆಸ್ಕ್ ಕೆಳಗ ಕೈ ಹಾಕಿ, ಏನೋ ಒಂದು ಪುಸ್ತಕ ತೆಗೆದು ನನ್ನ ಕೈಯ್ಯಾಗ ಇಟ್ಟರು.

ಪುಸ್ತಕ ನೋಡಿ ಏನೂ ತಿಳಿಲಿಲ್ಲ. ಏನ್ರೀ ಟೀಚರ್? - ಅನ್ನೋ ಹಾಂಗ ಟೀಚರ್ ಮಾರಿ ನೋಡಿದೆ.

ಮಹೇಶಾ, ಒಂದು ಕೆಲಸ ಆಗಬೇಕೋ. ನಾಳಿಗೇ ಆಗಬೇಕು ನೋಡು. ತಪ್ಪಬಾರದು ನೋಡು. ಒಂದು ಕೆಲಸ ಆಗಬೇಕು ನೋಡಪಾ - ಅಂದ್ರು ಜೋಶಿ ಟೀಚರ್.

ಮತ್ತೂ confusion ಆತು. ಮೊದಲು ಒಂದು ಬುಕ್ ಕೈಯ್ಯಾಗ ಇಡ್ತಾರ. ಏನಂತ ಹೇಳಂಗಿಲ್ಲ. ಮ್ಯಾಲಿಂದ ಒಂದು ಕೆಲಸ ಆಗಬೇಕು ಅಂತಾರ. ಏನಂತ ಅರ್ಥ ಮಾಡಿಕೋಬೇಕು? ಹಾಂ?!

ಏನ್ರೀ ಟೀಚರ್? - ಅಂದೆ.

ನೋಡು....ಈ ಪುಸ್ತಕ ತೊಗೋ. ಓದಿ ಇದರ ಮ್ಯಾಲೆ ಒಂದೆರಡು ಪೇಜ್ ಆಗೋವಷ್ಟು ಒಂದು ಚಂದ ನಿಬಂಧ ತಯಾರ ಮಾಡು. ನಾಳೆ ಬೇಕೇ ಬೇಕು. ಏನಪಾ? ಹೆಡ್ ಮಾಸ್ಟರ್ ಗೆ ಹೇಳಿ ಬಿಟ್ಟೇನೋ. ನಾಳೆ ತಂದು ಕೊಡತೇನಿ ಅಂತ. ಹಾಂಗಾಗಿ ಏನರೆ ಮಾಡು. ಒಟ್ಟಿನ್ಯಾಗ ಒಂದು ನಿಬಂಧ ಬರೆದು ತಂದು ಬಿಡು. ನಾ ಚೆಕ್ ಮಾಡಿ ಹೆಡ್ ಮಾಸ್ಟರ್ ಗೆ ಕೊಟ್ಟು ಬಿಡ್ತೇನಿ. ಅದೇನೋ ಸ್ಕೂಲ್ ಮ್ಯಾಗಜಿನ್ ಗೆ ಬೇಕಂತಪಾ. ನಾಳೆ ಬೇಕೇ ಬೇಕಾ ಮತ್ತ! ನೀ ತಯಾರ ಮಾಡಲಿಕ್ಕೇ ಬೇಕಾ ಮತ್ತ - ಅಂತ ಜೋಶಿ ಟೀಚರ್ ಹೇಳಿದರು. ಮತ್ತ ಮತ್ತ ಹೇಳಿದರು.

ಅವರು ಕೊಟ್ಟ ಬುಕ್ ನೋಡಿದೆ. ಕವರ್ ಪೇಜ್ ಮ್ಯಾಲೆ ಆದಿ ಶಂಕರಾಚಾರ್ಯರ ಫೋಟೋ ಇತ್ತು. ಪುಸ್ತಕ ಶಂಕರರ  ಬಗ್ಗೆ ಇತ್ತಾ ಅಥವಾ ಅವರು ಪ್ರತಿಪಾದಿಸಿದ ಅದ್ವೈತದ ಮೇಲಿತ್ತಾ? ನೆನಪಿಲ್ಲ.

ಈಗ ತಿಳೀತು. ಏನೋ ಸ್ಕೂಲ್ ಮ್ಯಾಗಜಿನ್ ಬರೋದು ಅದ. ಎಲ್ಲಾ ಕ್ಲಾಸಿನವರೂ ಒಂದೊಂದು ಆರ್ಟಿಕಲ್ ಬರೆದು ಕೊಡಬೇಕು ಅಂತ ಕಾಣಿಸ್ತದ. ನಮ್ಮ ಕ್ಲಾಸಿನ ಆರ್ಟಿಕಲ್ ಟೀಚರ್ ನನಗ ಬರೆದು ತಂದು ಕೊಡು ಅಂತ ಹೇಳಲಿಕತ್ತಾರ.

ಹೂನ್ರೀ ಟೀಚರ್. ನಿಬಂಧ ಬರೆದು ತರತೇನ್ರೀ ನಾಳೆ. ತಪ್ಪಿಸಂಗಿಲ್ಲರಿ. ನೀವು ಕೊಟ್ಟ ಬುಕ್ ಅಲ್ಲದೇ ಬೇರೆ ಬೇರೆ ಬುಕ್ ಸಹಿತ ರೆಫರ್ ಮಾಡಿ ಮಸ್ತ essay ರೆಡಿ ಮಾಡ್ತೆನ್ರೀ ಟೀಚರ್ - ಅಂತ ಹೇಳಿದೆ.

ಬ್ಯಾರೆ ಬ್ಯಾರೆ ಬುಕ್ ಅಂತ! ಇಲ್ಲದ ಡೌಲು. ನಿಬಂಧ ತಯಾರ ಮಾಡಲಿಕ್ಕೆ ಒಂದು ಫುಲ್ ದಿವಸ ಸಹಾ ಇಲ್ಲ. ಟೀಚರ್ ಕೊಟ್ಟ ಪುಸ್ತಕನೇ ಸಾಕಷ್ಟು ದೊಡ್ಡ ಸೈಜಿನದು ಅದ. ಅದನ್ನೇ ಓದಿ ಮುಗಿಸೋದು ದೊಡ್ಡ ಮಾತು. ಅಂತಾದ್ರಾಗ ಬ್ಯಾರೆ ಬುಕ್ಸ್ ಸಹಿತ ರೆಫರೆನ್ಸ್ ಮಾಡ್ತೇನಿ ಅಂತ!

ಹ್ಞೂ....ಏನರೆ  ಮಾಡು. ಒಟ್ಟಿನ್ಯಾಗ ನಾಳೆ ನಿಬಂಧ ತಯಾರ ಆಗಬೇಕು ನೋಡಪಾ, ಅಂತ ಅಂದ್ರು ಜೋಶಿ ಟೀಚರ್. ಹೆಚ್ಚಿನ motivation ಗೆ ಮತ್ತ confidence ಬರಲಿ ಅಂತ ಹೇಳಿ, ತಲಿ ಸವರಿ - ನೀ ಬರೆದು ತರ್ತಿ ಅಂತ ಖಾತ್ರಿ ಅದನೋ. ಅದಕ್ಕs ನಿನಗೇ ಹಚ್ಚೇನಿ ಈ ಕೆಲಸಾ - ಅಂದ ಜೋಶಿ ಟೀಚರ್ ಕಡೀಕ್ಕ ತಲಿ ಮ್ಯಾಲೆ ಮೈಲ್ಡ್ ಆಗಿ ಮೊಟಕಿದರು. ಅವರು ತಲಿ ಮ್ಯಾಲೆ ಹಾಂಗ ಮೊಟಕಿದರು ಅಂದ್ರ ಮಾತು ಮುಗೀತು, ಜಾಗಾ ಖಾಲಿ ಮಾಡು ಅಂತ ಅರ್ಥ. ಒಂದು ಅರ್ಥದಾಗ ಸುಪಾರಿ ಕೊಟ್ಟಂಗ ಅದು. ನಂತರ ಹೇಳಿದ ಕೆಲಸ ಮಾಡಿಕೊಂಡು ಬಂದ್ರ ಆತು.

ಟೀಚರ್ ಕೊಟ್ಟ ಬುಕ್ ಇಸ್ಕೊಂಡು ಮನಿಗೆ ಬಂದೆ. ನಿಬಂಧ ಬ್ಯಾರೆ ಬರಿಬೇಕು ಅಂತ homework ಎಲ್ಲಾ ಲಗೂ ಲಗೂ ಮಾಡಿ ಮುಗಿಸಿದೆ.

ನೋಡೋಣ ನಡೀಪಾ, ಅಂತ ಹೇಳಿ ಟೀಚರ್ ಕೊಟ್ಟ ಪುಸ್ತಕ ಓಪನ್ ಮಾಡಿದೆ.

ಬೇತಾಳ ಬೆನ್ನು ಹತ್ತಿತು ನೋಡ್ರೀ!!!!!!!

ಹಾಂಗಿತ್ತು ಆ ಪುಸ್ತಕ. ಏನೂ ತಿಳಿವಲ್ಲತು. ಏನೇನೋ ಅದ. ಏನೇನೋ ಬರದಾರ. ಒಂದೆರಡು ಪ್ಯಾರಾ ಓದೋದ್ರೊಳಗ ತಲಿ ಪೂರ್ತಿ ಕಡೆದಿಟ್ಟ ಮೊಸರ ಗಡಿಗಿ ಆಗಿ ಹೋತು! ಹೋಗ್ಗೋ!!! ಇಂತಹ ಪುಸ್ತಕ ಪೂರ್ತಿ ಓದಿ, ಅರ್ಥ ಮಾಡಿಕೊಂಡು, ಅದರ ಮ್ಯಾಲೆ ನಿಬಂಧ ಬರಿಬೇಕು. ಅದೂ ಇನ್ನೆರಡು ತಾಸಿನ್ಯಾಗ. ಇಲ್ಲಂದ್ರ ನಿದ್ದಿ ಬರ್ತದ. ಮುಂಜಾನೆ ಜಾಸ್ತಿ ಟೈಮ್ ಇರಂಗಿಲ್ಲ. ಎಲ್ಲಾ ಇವತ್ತೇ ಈ ರಾತ್ರಿನೇ ಆಗಬೇಕು.

ಹ್ಯಾಂಗಪಾ ದೇವರಾ??!!! ಅಂತ ತಲಿ ಹಿಡಕೊಂಡು ಕೂತೆ. ಟೀಚರ್ ಬ್ಯಾರೆ ನಾಳೆ ನಿಬಂಧ ತಯಾರ ಇರಲೇ ಬೇಕು ಅಂತ ಸುಪಾರಿ ಕೊಟ್ಟು ಬಿಟ್ಟಾರ. ಬರೆದುಕೊಂಡು ಹೋಗಲಿಲ್ಲ ಅಂದ್ರ ಕೆಟ್ಟ ಅವಮಾನ.

ಏನು ಮಾಡೋದು?

ಮತ್ತ ಮತ್ತ ಓದಲಿಕ್ಕೆ ಪ್ರಯತ್ನ ಮಾಡಿದೆ. ಆಕಳಿಕೆ ಬಂತೇ ಹೊರತು ತಲಿಯೊಳಗೆ ಏನೂ ಹೋಗಲಿಲ್ಲ. ಮುನ್ನುಡಿನೇ ಓದಿ ಮುಗಿಸಲಿಕ್ಕೆ ಆಗವಲ್ಲತು. ಇನ್ನೆಲ್ಲಿ ಪೂರ್ತಿ ಪುಸ್ತಕ ಓದೋದು. ಅಷ್ಟರಾಗ ರಾತ್ರಿ ಊಟದ ಟೈಮ್ ಆತು. ಊಟಕ್ಕ ಕರೆದರು. ಊಟ ಮಾಡಿ ಬಂದ ಮೇಲೆ ನೋಡಿದರ ಆತು ಅಂತ ಬಿಟ್ಟೆ.

ಊಟ ಮಾಡಿದ ಮ್ಯಾಲೆ ಎಂತೆಂತ ರೋಚಕ ಪುಸ್ತಕ ಓದಿದರೂ ನಿದ್ದಿ ಬರ್ತದ. ಇನ್ನು ಇಂತಹ ಪುಸ್ತಕ ಓದಿದರ ಅಷ್ಟ ಮತ್ತ. ಆದರೂ ಪ್ರಯತ್ನ ಮಾಡಿದೆ. ಸಿಕ್ಕಾಪಟ್ಟೆ ಆಕಳಿಕೆ ಬಂತು.

ಆ ಪರಿ ಆಕಳಿಸೋದು ನೋಡಿ - ಹೋಗಿ ಮಲ್ಕೋ, ಸಾಕು ಓದಿದ್ದು - ಅಂದ್ರು ನಮ್ಮ ತಾಯಿ. ಅವರಿಗೆಲ್ಲಿ ಹೇಳಿಕೋತ್ತ ಕೂಡಲಿ ನನ್ನ ನಿಬಂಧ ಬರಿಲಿಕ್ಕೆ ತೊಗೋಂಡ ಸುಪಾರಿ ಬಗ್ಗೆ.

ಏನು ಮಾಡೋದು? ಎಷ್ಟೇ ಪ್ರಯತ್ನ ಮಾಡಿದರೂ ಪುಸ್ತಕದ ಮುನ್ನುಡಿಯ ಮೊದಲನೇ ಪೇಜ್ ಬಿಟ್ಟು ಮುಂದು ಹೋಗಲಿಕ್ಕೆ ಆಗವಲ್ಲದು. ಲಾಸ್ಟ್ ಟ್ರಿಕ್ ಅಂತ ಹೇಳಿ ಒಂದು ಉಪಾಯ ಮಾಡಿದೆ.

ಮುನ್ನುಡಿಯ ಪ್ರತಿ ಪ್ಯಾರಾದಿಂದ ಒಂದೋ ಎರಡೋ ಪಾಯಿಂಟ್ ಒಂದು ಹಾಳಿ ಒಳಗ ಬರಕೋತ್ತ ಹೋದೆ. ನೋಟ್ಸ್ ಮಾಡಿಕೊಂಡಂಗ ಅನ್ರೀ. ಅಷ್ಟು ಮಾಡೋದ್ರಾಗ ಸಿಕ್ಕಾಪಟ್ಟೆ ನಿದ್ದಿ ಬಂದು, ಮಾರಿ ಹೋಗಿ ನೋಟ್ ಬುಕ್ಕಿಗೆ ಅಪ್ಪಳಿಸಿ, ಮೂಗು ಚಪಟ್ ಆಗಿ, ನೋವಾಗಿ, ನಿಬಂಧ ತಯಾರ್ ಆಗಿಲ್ಲ ಅಂತ ಮತ್ತೂ ಹೆಚ್ಚು tension ಆಗಿ......ರಾಮ ರಾಮ....ಕೇಳಬ್ಯಾಡ್ರೀ ನಮ್ಮ ಹಾಲತ್.

ಹ್ಯಾಂಗೂ ನೋಟ್ಸ್ ಮಾಡಿದ್ದು ಆತು, ಆ ನೋಟ್ ಮಾಡಿಕೊಂಡ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ(?) ಮಾಡಿ ಕೂಡಿಸಿ, ನಮಗ ತಿಳದ ಮಟ್ಟಿಗೆ ಬರೆದು ಬಿಟ್ಟರೆ ಒಂದು ಎರಡು ಪೇಜ್ ಆಗಿ ಹೋಗ್ತಾವ. ಅದನ್ನೇ ಕೊಟ್ಟು ಬಿಟ್ಟರ ಆತು, ಅಂತ ವಿಚಾರ ಮಾಡಿ ಮಲ್ಕೊಂಡು ಬಿಟ್ಟೆ. ಜೈ ಶಂಭುಲಿಂಗಾ!!! ಮುಂಜಾನೆ ಲಗೂ ಎಬ್ಬಸಪಾ  ದೇವರಾ. ನಿಬಂಧ ಬರೀಬೇಕು - ಅಂತ ಹೇಳಿ ಮಲಗಿದ್ದೆನಾ? ನೆನಪಿಲ್ಲ.

ರಾತ್ರಿ ಎಲ್ಲಾ ನಿಬಂಧದ ಬಗ್ಗೆನೇ ಕನಸು. ಎಲ್ಲಾ ದುಸ್ವಪ್ನಗಳೇ. ಒಂದೂ ಸ್ವೀಟ್ ಡ್ರೀಮ್ಸ್ ಇಲ್ಲ ತೊಗೊರೀ!

ಮುಂಜಾನೆ ಲಗೂನ ಎದ್ದುಬಿಟ್ಟೆ. ನಿಬಂಧದ tension ಇತ್ತಲ್ಲ.

ಎದ್ದು ನೋಟ್ಸ್ ಮತ್ತ ನೋಡಿಕೊಂಡೆ. ಉಳಿದ ಪುಸ್ತಕ ಸಹಿತ ಕಣ್ಣಾಡಿಸಿ ನೋಟ್ಸ್ ಮಾಡಲೋ ಏನೋ ಅಂತ ವಿಚಾರ ಮಾಡಿದೆ. ಟೈಮ್ ಇರಲಿಲ್ಲ. ಅದರಕಿಂತ ಹೆಚ್ಚಾಗಿ ಜೋಶಿ ಟೀಚರ್ ಕೊಟ್ಟ ಪುಸ್ತಕ ಓದಿ ಅರ್ಥ ಮಾಡಿಕೊಳ್ಳೋವಷ್ಟು ತಲಿ ಆವತ್ತಿನ ಮಟ್ಟಿಗೆ ಇರಲಿಲ್ಲ.

ಮಾಡಿಕೊಂಡಿದ್ದ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ ಮಾಡಿ ಜೋಡಿಸಿ, ನಮಗ ತಿಳಿದ ಮಟ್ಟಿಗೆ ಒಂದು ನಿಬಂಧ ಛಂದ ಅಕ್ಷರದಾಗ ತಯಾರ ಮಾಡಿಬಿಟ್ಟೆ. ಏನೋ ಒಂದೆರಡು ತಾಸು ಖರ್ಚ ಮಾಡಿರಬೇಕು ಬಿಡ್ರೀ. ನಿಬಂಧ ಛಂದ ಅಂತೂ ಬಂತು. ನೋಡಲಿಕ್ಕೆ ಅಷ್ಟೇ ಮತ್ತ. ಒಳಗಿನ ಹೂರಣ ಹ್ಯಾಂಗಿತ್ತೋ ಏನೋ? ಯಾರಿಗೆ ಗೊತ್ತು?

ಎರಡು ಫುಲ್ ಉದ್ದನೆ ಪೇಜ್ ಒಂದಕ್ಕೊಂದು ಸ್ಟೇಪಲ್ ಮಾಡಿ, ಅದು ಪಾಟಿಚೀಲದಾಗ ಮುದ್ದಿ ಆಗದಂಗ ಒಂದು ರಟ್ಟಿನ ಫೈಲ್ ಫೋಲ್ಡರ್ ಒಳಗ ಅದನ್ನು ಇಟ್ಟು, ಭಾಳ ಕಾಳಜಿಯಿಂದ ಅವತ್ತು ಪಾಟಿಚೀಲಾ ಸೈಕಲ್ ಕ್ಯಾರಿಯರ್ ಗೆ ಹಾಕದೇ, ಹೆಗಲಿಗೆ ಹಾಕಿಕೊಂಡೇ ಸಾಲಿಗೆ ಸೈಕಲ್ ಹೊಡದೆ. ಸೂಟಿ ಬಿಟ್ಟಾಗ ಜೋಶಿ ಟೀಚರ್ ಗೆ ನಿಬಂಧ ಕೊಟ್ಟರಾತು ಅಂತ ಬಿಟ್ಟೆ. ಆ ಪ್ರಸಂಗ ಬರಲೇ ಇಲ್ಲ.

ಮೊದಲನೇ ಪಿರಿಯಡ್ absent ಪಿರಿಯಡ್ ಇತ್ತು. absentee ಟೀಚರ್ ಆಗಿ ಯಾರು ಬರಬೇಕು ಹೇಳ್ರೀ? ಜೋಶಿ ಟೀಚರ್! ಬಂದವರೇ ಕ್ಲಾಸ್ ಮಂದಿಗೆ ಏನೋ ಕೆಲಸಾ ಹಚ್ಚಿ, ನನಗ, ಬಾ, ಅಂತ ಕಣ್ಣಾಗs ಹೇಳಿದರು. ನಿಬಂಧ ನೋಡಬೇಕು, ತೊಗೊಂಡು ಬಾ ಅಂತ ಬ್ಯಾರೆ ಹೇಳೋ ಜರೂರತ್ ಅವರಿಗೆ ಕಾಣಲಿಲ್ಲ. ನಾ ಅಂತೂ ನಿಬಂಧ ಕೈಯ್ಯಾಗ ಹಿಡಕೊಂಡೇ ಅಡ್ಯಾಡಲಿಕತ್ತಿದ್ದೆ.

ಜೋಶಿ ಟೀಚರ್ ನಿಬಂಧ ತೊಗೊಂಡು ಓದಲಿಕ್ಕೆ ಶುರು ಮಾಡಿದರು. ತಪ್ಪಿದ್ದರ ತಿದ್ದಲಿಕ್ಕೆ ಅಂತ ಕೆಂಪ ಬಣ್ಣದ ಪೆನ್ನು ಅವರ ಕೈಯ್ಯಾಗ ಥಕಾ ಥಕಾ ಅಂತ ಕುಣಿಲಿಕತ್ತಿತ್ತು.

ಮಹೇಶಾ, ಒಂದು ಮಾತು - ಅಂತ ಹೇಳಿದ ಜೋಶಿ ಟೀಚರ್ ನನ್ನ ಕಡೆ ನೋಡಿದರು. ನಾ ಅವರ ಟೇಬಲ್ ಬಾಜೂಕೇ ನಿಂತಿದ್ದೆ.

ಏನ್ರೀ ಟೀಚರ್? - ಅಂತ ಕೇಳಿದೆ.

ಎಲ್ಲಾ ಕಡೆ 'ಭಾ'ಲಚಂದ್ರ ಶಾಸ್ತ್ರಿ, 'ಭಾ'ಲಚಂದ್ರ ಶಾಸ್ತ್ರಿ ಅಂತ ಬರದೀ. ಅದು 'ಭಾ'ಲಚಂದ್ರನೋ ಅಥವಾ ಬಾಲಚಂದ್ರ ಇರಬಹುದೋ? ಗೊತ್ತದ ಏನು? - ಅಂತ ಟೀಚರ್ ಕೇಳಿದರು. ಅವರ ಮಾರಿ ಮ್ಯಾಲೂ ಫುಲ್ confusion. ನೋಡಲಿಕ್ಕೆ ಮಸ್ತ ಇತ್ತು.

ಏ....ಟೀಚರ್....ಅದು 'ಭಾ'ಲಚಂದ್ರನೇ ಬಿಡ್ರೀ. ಸಂಶಯ ಬ್ಯಾಡ್ರೀ. ನೀವು ಕೊಟ್ಟ ಪುಸ್ತಕದಾಗೂ ಹಾಂಗೇ ಇತ್ತರಿ. ಅದಕ್ಕರೀ,  ನಾನೂ ಸಹಿತ 'ಭಾ'ಲಚಂದ್ರ 'ಭಾ'ಲಚಂದ್ರ ಅಂತ ಬರೆದು ಬಿಟ್ಟೆರಿ - ಅಂತ ಫುಲ್ confidence ನಿಂದ ಹೇಳಿದೆ.

ಹಾಂಗಾ???!!! - ಅನ್ನೋ ಲುಕ್ ಟೀಚರ್ ಕೊಟ್ಟರು.

ಹೂನ್ರೀ. ಹಾಂಗರೀ - ಅನ್ನೋ ಲುಕ್ ನಾ ತಿರುಗಿ ಕೊಟ್ಟೆ.

ಹ್ಞೂ - ಅಂದ ಟೀಚರ್ ಉಳಿದ essay ಓದೋದ್ರಲ್ಲಿ ಮಗ್ನರಾದರು.

ಹ್ಞೂ....ಮಸ್ತ ಬರದೀ. essay ಛೊಲೋ ಬಂದದ. ಹೆಡ್ ಮಾಸ್ತರಿಗೆ ಕೊಡಲೀ? - ಅಂತ ಟೀಚರ್ ಕೇಳಿದರು.

ಕೊಡ್ರೀ ಟೀಚರ್. ಅದ್ರಾಗ ಏನ್ರೀ? - ಅಂತ ಫುಲ್ guarantee ಕೊಡೋರ ಹಾಂಗೆ ಹೇಳಿದೆ.

ಮತ್ತಾ... ನಾ ಕೊಟ್ಟ ಬುಕ್? - ಅಂತ ಟೀಚರ್ ಕೇಳಿದರು. ಏನೂ ಮರಿಯೋ ಪೈಕಿ ಅಲ್ಲ ಜೋಶಿ ಟೀಚರ್.

ಅದನ್ನ ಕೊಡೋದೇ ಮರ್ತೆ ನೋಡ್ರೀ ಟೀಚರ್ - ಅಂತ ಹೇಳಿ ಅವರು ಕೊಟ್ಟ ಬುಕ್ ಅವರಿಗೆ ವಾಪಸ್ ಕೊಟ್ಟೆ. ಬೆನ್ನ ಮೇಲಿನ ಬೇತಾಳ ಬೆನ್ನು ಬಿಟ್ಟು ಹಾರಿ ಹೋಗಿ, ಮೈಯ್ಯೆಲ್ಲಾ ಹೂವಿನಷ್ಟು ಹಗುರವಾದ ಅನುಭವ. ಫುಲ್ ರಿಲೀಫ್.

ಆವತ್ತು ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ನಿಬಂಧದ ಒಳಗ ಬಾಲಚಂದ್ರ ಹೋಗಿ 'ಭಾ'ಲಚಂದ್ರ ಆದವರು ಬೇರೆ ಯಾರೂ ಅಲ್ಲ, ಇದೇ ಬ್ರಹ್ಮರ್ಷಿ ಬಾಲಚಂದ್ರ ಶಾಸ್ತ್ರಿಗಳು!

ಪುಸ್ತಕಕ್ಕೆ ಮುನ್ನುಡಿ ಬರೆದವರು ಯಾರೋ ಬಾಲಚಂದ್ರ ಶಾಸ್ತ್ರಿಗಳ ಶಿಷ್ಯರೋ, ಪರಿಚಯದವರೋ ಇರಬೇಕು ಬಿಡ್ರೀ. ಅದಕ್ಕೇ ಮಾತಿಗೊಮ್ಮೆ ಬಾಲಚಂದ್ರ ಶಾಸ್ತ್ರಿಗಳು ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಅಂತ ಮುನ್ನುಡಿಯೊಳಗ ಮತ್ತ ಮತ್ತ quote ಮಾಡಿದ್ದರು. ನಾವೂ ಸಹ ನಮ್ಮ ನಿಬಂಧದ ಸೇಫ್ಟಿಗೆ ದೊಡ್ಡ ಪಂಡಿತರ ಹೆಸರು ಇರಲಿ ಅಂತ ಎಲ್ಲಾ ಕಡೆ ಅವರ ಹೆಸರು ಭಾಲಚಂದ್ರ ಭಾಲಚಂದ್ರ ಅಂತ ಬರೆದಿದ್ದೆ.

ಅದ್ಯಾಕೆ 'ಭಾ'ಲಚಂದ್ರ ಅಂತ ಮಹಾಪ್ರಾಣ ಹಾಕಿ ಬರದೆ? ಅಂತ ಕೇಳಿಕೊಂಡರ ಉತ್ತರ ಈಗ ನೆನಪು ಆಗವಲ್ಲತು.

ನೋಡ್ರೀ....ನಮಗ ಆವತ್ತಿನ ಮಟ್ಟಿಗೆ 'ಬಾಲ' ಅಂದ್ರ ತಿಳಿದಿದ್ದು ಅಂದ್ರ ಮಂಗ್ಯಾನ ಬಾಲ, ಕತ್ತಿ ಬಾಲ, ನಾಯಿ ಬಾಲ, ಆ ಬಾಲ, ಈ ಬಾಲ. ಬಾಲ ಅಂದ್ರ ಒಟ್ಟಿನ್ಯಾಗ ಪಶುಗಳಿಗೆ ಇರೋ ಬಾಲ ಅಂತನೇ ನಮ್ಮ ಅಚಲ ನಂಬಿಕೆ. ಅದರ ಬಿಟ್ಟು ಬಾಲ ಅಂದ್ರ ಸಣ್ಣದು, ಚಿಕ್ಕದು ಅನ್ನುವ ಅರ್ಥಗಳು ನಮಗ ಖರೇ ಅಂದ್ರೂ ಗೊತ್ತಿರಲಿಲ್ಲ. ಆರನೇತ್ತಾ ಹುಡುಗಗ ಬಾಲ ಅನ್ನೋದರ ವಿವಿಧ ಅರ್ಥ ಗೊತ್ತಿಲ್ಲ, ಎಂತಾ ಹಶಿ ಧಡ್ಡ ಇದ್ದಾನ ಇವಾ?! ಅಂತ ನೀವು ಅಂದುಕೊಂಡರೂ ತೊಂದ್ರೀ ಇಲ್ಲರೀ. ಇದ್ದಿದ್ದು ಹೇಳಿದೆ. ಅಷ್ಟೇ.

ಬಾಲ ಏನಿದ್ದರೂ ಮಂಗ್ಯಾಗ ಇರೋದು. ಮುರುಳಿ ಅನ್ನೋ ಹುಡುಗ್ಗ ಬಾಲ ಹಚ್ಚಿ ಬಿಟ್ಟರ ಬಾಲಮುರುಳಿ ಆಗ್ತಾನ. ಕೃಷ್ಣಗ ಹಿಂದ ಒಂದು ಬಾಲ ಹಚ್ಚಿ ಬಿಟ್ಟರೆ ಬಾಲಕೃಷ್ಣ ಆಗಿ ಬಿಡ್ತಾನ - ಅಂತ ಜೋಕ್ ಮಾಡೋ ಕಿಡಿಗೇಡಿಗಳು ನಾವು. ಆವತ್ತು ನಮ್ಮ ಕನ್ನಡದ ಜ್ಞಾನ ಹಾಂಗಿತ್ತು.

ಹೀಂಗಿದ್ದಾಗ ಅಷ್ಟು ದೊಡ್ಡ ಶಾಸ್ತ್ರಿಗಳಿಗೆ, ಅವರ ಹೆಸರಿಗೆ ಬಾಲ ಹಚ್ಚೋದು ಅಂದ್ರ ಏನ್ರೀ?! ಅದಕ್ಕಾ ಬ್ಯಾಡ ಅಂತ ಹೇಳಿ ಅವರ ಹೆಸರು 'ಭಾ'ಲಚಂದ್ರ ಶಾಸ್ತ್ರಿ ಅಂತ ಮಾಡಿ ಬರೆದು ಬಿಟ್ಟಿದ್ದೆನಾ? - ಅಂತ ಈಗ ಡೌಟ್.

ಅದು ಬ್ಯಾರೆ ಇನ್ನೊಂದು ಲಫಡಾ ಬ್ಯಾರೆ ಆಗಿತ್ತು. ಅದೂ ಕಾರಣ ಇರಬಹುದು ಬಿಡ್ರೀ.

ಒಂದು ವರ್ಷ ಮೊದಲು ಅಂದ್ರ ಐದನೇತ್ತಾ (೫ ಕ್ಲಾಸ್) ಇದ್ದಾಗ, ಕನ್ನಡ ಟೀಚರ್ ಒಬ್ಬರು ಪರೀಕ್ಷಾ ಒಳಗ ಒಂದು ಅರ್ಧಾ ಮಾರ್ಕ್ಸ್ ಕಟ್ ಮಾಡಿ ಬಿಟ್ಟಿದ್ದರು. ಕಾರಣ - ಬುದ್ಧ ಬರೆಯೋವಾಗ ಮಹಾಪ್ರಾಣ ಕೊಡದೇ ಬುದ್ದ ಅಂತ ಬರೆದು ಬಿಟ್ಟಿದ್ದೆ. ಅದಕ್ಕ ಅಂತ ಅರ್ಧಾ ಮಾರ್ಕ್ಸ್ ಕಟ್ ಮಾಡಿದ್ದರಂತ. ಅದರ ಮ್ಯಾಲೆ ಊರು ತುಂಬಾ ಡಂಗುರಾ ಬ್ಯಾರೆ ಹೊಡೆದು ಬಿಟ್ಟಿದ್ದರು ಆ ಟೀಚರ್.

ಏ....ಆವಾ ಹೆಗಡೆ ಮಸ್ತ ಪೇಪರ್ ಬರದಿದ್ದಾ. ಆದ್ರ ಬುದ್ಧ ಬರಿಯೋವಾಗ ಕುಂಡಿ ಸೀಳೋದನ್ನ ಮರೆತಾ ನೋಡ್ರೀ ಅದಕ್ಕಾ ಅರ್ಧಾ ಮಾರ್ಕ್ಸ್ ಕಟ್ ಮಾಡಿಬಿಟ್ಟೆ. ಕುಂಡಿ ಒಂದು ಸೀಳಿ ಬಿಟ್ಟಿದ್ದರ ಫುಲ್ ಸೆಂಟ್ ಪರ್ಸೆಂಟ್ ಕೊಟ್ಟು ಒಗೆದು ಬಿಡಾಕಿ ನಾ. ಕುಂಡಿ ಸೀಳದೇ ಅರ್ಧಾ ಮಾರ್ಕ್ಸ್ ಕಳಕೊಂಡಾ ಪಾಪ!!! - ಅಂತ ಅವರ ಡಂಗುರಾ. ಏನಂತೀರಿ ಇದಕ್ಕ??!!

ಯಾವ ಪರಿ ಡಂಗುರಾ ಹೊಡೆದಿದ್ದರು ಅಂದ್ರ - ಏನಲೇ ಕುಂಡಿ ಸೀಳಲಿಕ್ಕೆ ಬರೋದಿಲ್ಲಾ ನಿನಗ? - ಅಂತ ಕಂಡವರು ಚಾಸ್ಟಿ ಮಾಡೋ ಹಾಂಗ. ಸೂಡ್ಲೀ!!!

(ಮಹಾಪ್ರಾಣ ಕೊಡುವದಕ್ಕೆ ಧಾರವಾಡ ಕಡೆ 'ಕುಂಡಿ ಸೀಳೋದು' ಅನ್ನುತ್ತಾರೆ. ಬೇರೆ ಅಪಾರ್ಥ ಬೇಡ.)

ಕುಂಡಿ ಸೀಳಲಿಕ್ಕೆ ಬರದವಾ. ಕುಂಡಿ ಸೀಳದೆ ಅರ್ಧಾ ಮಾರ್ಕ್ಸ್ ಕಳಕೊಂಡವಾ, ಅಂತ ಕೇಳಿ ಕೇಳಿ ಒಂದು ತರಹದ ಮಾನಸಿಕ್ ಆಗಿ ಬಿಟ್ಟಿದ್ದೆನೋ ಏನೋ? ಯಾರಿಗ್ಗೊತ್ತ?!

ಹೀಂಗಾಗಿ ನಾನು wholesale ಒಳಗ ಎಲ್ಲಾ ಕಡೆ, ಎಲ್ಲಾದರ ಕುಂಡಿ ಸೀಳಿ ಮಹಾಪ್ರಾಣ ಕೊಡಲಿಕ್ಕೆ ಶುರು ಮಾಡಿಬಿಟ್ಟಿದ್ದೆನೋ ಏನೋ? ಗೊತ್ತಿಲ್ಲ. ಹೀಂಗಾಗಿ ಮತ್ತ ಜೋಶಿ ಟೀಚರ್ ಸಹಾ, ಕುಂಡಿ ಸೀಳೋದು ಮರತೀ ಅಲ್ಲೋ, ಅಂತ ಮತ್ತ ಅನ್ನೋದು ಬ್ಯಾಡ ಅಂತ ಹೇಳಿ, ಸೇಫ್ಟಿಗೆ ಇರಲಿ ಅಂತ ಹೇಳಿ ಎಲ್ಲಾ ಕಡೆ ಮಹಾಪ್ರಾಣ ಕೊಟ್ಟು ಭಾಲಚಂದ್ರ ಶಾಸ್ತ್ರಿ ಭಾಲಚಂದ್ರ ಶಾಸ್ತ್ರಿ ಅಂತ ಬರೆದು ಬಿಟ್ಟಿದ್ದೆ ಅಂತ ಕಾಣಸ್ತದ. ಇದು ಒಂದು possibility.

ಹೆಚ್ಚಾಗಿ ಆ ಪುಸ್ತಕದಲ್ಲಿ ಸಹಾ 'ಭಾ'ಲಚಂದ್ರ ಶಾಸ್ತ್ರಿ ಅಂತನೇ misprint ಆಗಿತ್ತು ಅಂತ ಅನ್ನಸ್ತದ. ಅದಕ್ಕೇ ನಾನೂ ಸಹ ಹಾಂಗೆ ಬರದಿರಬೇಕು. ಇದು most likely possibility.

ಒಟ್ಟಿನ್ಯಾಗ ಧಾರವಾಡದ ದೊಡ್ಡ ಪಂಡಿತ ಬಾಲಚಂದ್ರ ಶಾಸ್ತ್ರಿ ನನ್ನ ನಿಬಂಧ ಒಳಗ 'ಭಾ'ಲಚಂದ್ರ ಶಾಸ್ತ್ರಿ ಆಗಿ ಒಂದು ಮಹಾಪ್ರಾಣ ಬಿಟ್ಟಿಯೊಳಗ ತೊಗೊಂಡು ಹೋಗಿಬಿಟ್ಟಿದ್ದರು.

ಇದಾದ ಒಂದೇ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ಪ್ರತ್ಯಕ್ಷ ನೋಡುವ ಸೌಭಾಗ್ಯ ನಮಗೆ. ನಮ್ಮ ಏಳನೇತ್ತಾ ಮುಗಿದಿದ್ದು ೧೯೮೫. ಆ ವರ್ಷ ಬೇಸಿಗೆ ರಜಾ ಒಳಗ ಶೃಂಗೇರಿ ಮಹಾಸ್ವಾಮಿಗಳು ಧಾರವಾಡಕ್ಕೆ ಬಂದು ಒಂದು ೮-೧೦ ದಿವಸ ಕ್ಯಾಂಪ್ ಹಾಕಿದ್ದರು. ದಿನಾ ಸಂಜಿ ಮುಂದ ಅವರ ಪ್ರವಚನ ಓಪನ್ ಏರ್ ಥಿಯೇಟರ್ ಒಳಗ. ಪ್ರವಚನದ ನಂತರವೋ ಅಥವಾ ಮೊದಲೋ ಒಂದು ಭಾಷಣ. ಒಬ್ಬ ದೊಡ್ಡ ಪಂಡಿತರಿಂದ. ನಿರರ್ಗಳವಾಗಿ ಸಂಸ್ಕೃತ ಒಳಗ. ಅವರೇ ಬಾಲಚಂದ್ರ ಶಾಸ್ತ್ರಿಗಳು ಅಂತ ದೊಡ್ಡವರು ಹೇಳಿದರು. ಇವರೇ ಏನು? ಅಂತ ಭಾಳ ಆಶ್ಚರ್ಯ ಆತು. ಬಹಳ ಸರಳ ಮನುಷ್ಯ. ಸ್ವಚ್ಛ ಬಿಳೆ ಧೋತ್ರಾ, ಮ್ಯಾಲೆ ಬಿಳೆ ಶಾಲು, ಮೈ ತುಂಬಾ ಭಸ್ಮ ಹಚ್ಚಿಕೊಂಡು, ಅವರ ಸ್ಮಾರ್ಥ ಸಂಪ್ರದಾಯದ ನಿಂಬಿಹುಳಿ ತಿಲಕ ಅದು ಇದು ಇತ್ಯಾದಿ ಹಚ್ಚಿಕೊಂಡು, ಸಂಕೋಚದಿಂದಲೋ ಅಥವಾ ಸ್ವಾಮಿಗಳ ಎದುರು ಅತಿ ವಿನಮ್ರತೆಯಿಂದಲೋ ಮೈಯೆಲ್ಲಾ ಗುಬ್ಬಿ ಗತೆ ಸಣ್ಣಗೆ ಮಾಡಿಕೊಂಡು ಗುಣು ಗುಣು ಭಾಷಣ ಮಾಡಿದ ಬಾಲಚಂದ್ರ ಶಾಸ್ತ್ರಿಗಳು ನೆನಪಾದರು. ಅವರ ಆ ಖಡಕ್ಕ ಸಂಸ್ಕೃತ ಭಾಷಣ ಕೇಳಿ, ಭಲೇ! ಭಲೇ!, ಅನ್ನುವಂತೆ ತಲೆಯಾಡಿಸಿದ ಕನವಳ್ಳಿ ಸರ್ ಅವರನ್ನು  ಹ್ಯಾಂಗ ಮರೀಲಿ!

(ಕನವಳ್ಳಿ ಸರ್ ಅಲ್ಲ್ಯಾಕೆ ಬರ್ತಿದ್ದರು ಅನ್ನೋದನ್ನ ಬ್ಯಾರೆ ಬರದೇನಿ. ಇಲ್ಲಿ ಓದಿಕೊಳ್ಳಿ)

ಬಾಲಚಂದ್ರ ಶಾಸ್ತ್ರಿಗಳ ಬಗ್ಗೆ ಇನ್ನೂ ಕೆಲವು ನೆನಪುಗಳಿವೆ. ಮತ್ತೊಂದು ಸಲ ಬರಿತೀನಿ.

ತಿದ್ದುಪಡಿ:  ಒಮ್ಮೊಮ್ಮೆ  ಹೀಂಗ ಆಗ್ತದ ಅಂದ್ರ, ನಾವು ಯಾವದನ್ನು ತಪ್ಪು ಅಂತ ತಿಳಿದಿರತೆವೋ ಅದು ಸರಿ ಇರ್ತದ ಮತ್ತು ಸರಿ ಅಂತ ತಿಳಿದಿದ್ದು ತಪ್ಪು ಇರ್ತದ. ಈಗ ನೋಡ್ರೀ ಆವಾಗ ಸಾಲಿ ನಿಬಂಧ ಒಳಗ "ಭಾಲಚಂದ್ರ" ಅಂತ ಮಹಾಪ್ರಾಣ ಕೊಟ್ಟು ಬರೆದಿದ್ದು ತಪ್ಪು, ಅದು ಬಾಲಚಂದ್ರ ಆಗಬೇಕಿತ್ತು ಅಂತ ಈಗ ಬರೆದೆ. ಈಗ ನೋಡಿದರ ಶಾಸ್ತ್ರಿಗಳ ನಿಜವಾದ ಮತ್ತು ಸರಿಯಾದ ಹೆಸರು "ಭಾಲಚಂದ್ರ" ಅಂತನೇ ಅಂತ ಮಾನ್ಯ ಶ್ರೀಕಾಂತ ಸವಣೂರ ಅವರು ಫೇಸ್ಬುಕ್ ಮೇಲೆ ಮೆಸೇಜ್ ಮಾಡಿ ತಿಳಿಸಿದರು. ಹಾಂಗಿದ್ದರ "ಭಾಲಚಂದ್ರ" ಅಂದ್ರ ಏನು ಅರ್ಥ? ಅದನ್ನೂ ಸಹ ಅವರೇ ಹೇಳಿದರು. ಭಾಲಚಂದ್ರ ಅಂದ್ರ "ಹಣೆಯ ಮೇಲೆ ಚಂದ್ರ ಇರುವವ" ಅಂತ ಅರ್ಥ. ಭಾಲಚಂದ್ರ ಎಂಬುದು ಗಣಪತಿಯ ಒಂದು ಹೆಸರು. ಶಾಸ್ತ್ರಿಗಳು ಸಂಕಷ್ಟ ಚತುರ್ತಿಯಂದು ಹುಟ್ಟಿದ್ದರಿಂದ ಅವರಿಗೆ ಗಣಪತಿಯ ಹೆಸರಾದ "ಭಾಲಚಂದ್ರ" ಅಂತ ಇಡಲಾಗಿತ್ತು ಅಂತ ಸವಣೂರ ಅವರು ತಿಳಿಸಿದ್ದಾರೆ. ಇದೆಲ್ಲ ವಿವರ ತಿಳಿಸಿ ತಪ್ಪು ತಿದ್ದಿದ ಸವಣೂರ ಅವರಿಗೆ ಧನ್ಯವಾದಗಳು. ಭಾಲಚಂದ್ರ ಅಂದ್ರೆ ಗಣಪತಿ ಅನ್ನುವ ಮಾಹಿತಿ ಇಲ್ಲಿದೆ ನೋಡಿ. 

ಬಾಲಚಂದ್ರ ಶಾಸ್ತ್ರಿಗಳ ಫೋಟೋ ಮಾತ್ರ ಸಿಗಲಿಲ್ಲ. ಯಾರಾದರೂ ಒದಗಿಸಿಕೊಟ್ಟರೆ ಜರೂರ್ ಹಾಕ್ತೇನಿ ಇಲ್ಲೆ. ಅಲ್ಲಿ ತನಕಾ ಅವರ ಪರಮ ಗುರುಗಳಾದ ಆದಿ ಶಂಕರರ ಫೋಟೋ ಇರಲಿ. ಧಾರವಾಡ ಅದ್ವೈತ ವೇದಾಂತದ ಮಟ್ಟಿಗೆ ಬಾಲಚಂದ್ರ ಶಾಸ್ತ್ರಿಗಳು ಅಭಿನವ ಆದಿ ಶಂಕರಾಚಾರ್ಯರೇ ಸರಿ.
-- ಹೈಸ್ಕೂಲಿನಲ್ಲಿ ನಮಗೆ ಭೂಗೋಳ ಕಲಿಸಿದ ಗುರುಗಳಾದ ಶ್ರೀ ಗುರುರಾಜ ಜಮಖಂಡಿ ಸರ್ ಅವರು ಭಾಲಚಂದ್ರ ಶಾಸ್ತ್ರಿಗಳ ಫೋಟೋ ಕಳಿಸಿದ್ದಾರೆ. ಮೇಲೆ ಹಾಕಿದ್ದೇನೆ. ಜಮಖಂಡಿ ಸರ್ ಗೆ ಒಂದು ದೊಡ್ಡ ಥ್ಯಾಂಕ್ಸ್.

* ಬಾಲಚಂದ್ರ ಶಾಸ್ತ್ರಿಗಳ ಮರಣದ ಮರುದಿವಸನೇ ಒಂದು ಲೇಖನ ಬರೆದು ಇಟ್ಟೆ. ಈ blogger.com ನಲ್ಲಿರುವ ಒಂದು glitch ನಿಂದಾಗಿ ಬರೆದ ಲೇಖನ ಢಂ ಅಂದು, cyber ಸಮುದ್ರದ ಸುಳಿಯಲ್ಲಿ ಯಾವದೇ ಕುರುಹು ಇಲ್ಲದಂತೆ ಲೀನವಾಗಿ ಹೋಯಿತು. ಮಟಾಶ್! ಆ ಮೇಲೆ (ವಿ)ದೇಶ ಪ್ರಯಾಣ ಅದು ಇದು ಅಂತ ಹೇಳಿ ಇಲ್ಲಿ ತನಕ ಬರೆಯಲಾಗಿರಲಿಲ್ಲ.

* ಇದರ ಮುಂದುವರಿದ ಭಾಗ ಇಲ್ಲಿದೆ ಓದಿಕೊಳ್ಳಿ.

Wednesday, November 27, 2013

'ಕರವಾ ಚೌತ್' ವೃತದ ದಿನ ಕೆರದಿಂದ ಪತಿಗೆ 'ಕೆರ'ವಾ ಪೂಜೆ ಮಾಡಿದಳಾ ಆ ಸತಿ ಶಿರೋಮಣಿ!

ಪೈಲಾ ನಶಾ. ಪೈಲಾ ಪಗಾರ್. ಕೈಯ್ಯಾಗ ರೊಕ್ಕ ಹೈ. ದಾರು ಪೀನಾ ಹೈ - ಅಂತ ಹಾಡು ಗುಣು ಗುಣು ಮಾಡಿದ ಕರೀಮ.

ಏ ಸಾಬಾ! ಅಂತಾ ಚಂದ ಪ್ಯಾರ ಭರಾ ನಗ್ಮಾ ತೊಗೊಂಡು ಹೋಗಿ ಶೆರೆ ಕುಡಿಯೋದಕ್ಕ ಜೋಡಿಸಿ ರಾಡಿ ಯಾಕ ಎಬ್ಬಸ್ತಿ? ಅಂತ ಕೇಳಿದೆ.

ಏನು ಸಾಬ್, ಭೂಲ್ ಗಯಾ ಕ್ಯಾ? ಇವತ್ತು ಯಾವ ದಿವಸ ಹೇಳಿ? - ಅಂತ ಕೇಳಿದ ಕರೀಮ.

ಯಾವ ದಿವಸ? ಹಾಂ! ಇವತ್ತು ಪೈಲಾ. ಅದರಾಗ ಏನು ಮಹಾ? ವರ್ಷಕ್ಕ ಹನ್ನೆರಡು ಪೈಲಾ ಬರ್ತಾವ, ಹೋಗ್ತಾವ. ಏನು ಮಹಾ? - ಅಂತ ಕೇಳಿದೆ.

ಸಾಬ್! ಇವತ್ತು ಪೈಲಾ. ಅಂದ್ರೆ ನಮ್ಮದು ದೋಸ್ತ ಚೀಪ್ಯಾಗೆ ಪಗಾರ್ ಆಗಿರ್ತದೆ. ಇವತ್ತು ರಾತ್ರಿ ದಾರು ಅಂದ್ರೆ ನಮಗೆ ಸ್ಕಾಚ್, ನಿಮಗೆ ಬೀಯರ್ ಮತ್ತೆ ಚೀಪ್ಯಾಗೆ 'ಹಳೆ ಮಂಗ್ಯಾ' (Old Monk) ರಮ್. ಎಲ್ಲಾ ಚೀಪ್ಯಾನ ಖರ್ಚಿನಾಗೆ. ಮರೆತು ಬಿಟ್ಟಿರಿ ಕ್ಯಾ? - ಅಂತ ಕರೀಂ ಕೇಳಿದ.

ಈಗ ನೆನಪಾತು. ಪ್ರತಿ ಪೈಲಾ ದಿನ ಪಗಾರ ಆಗೋದು ಕೇವಲ ಚೀಪ್ಯಾಗ ಮಾತ್ರ. ಕರೀಮಾ ಬಿಸಿನೆಸ್ ಮಾಡವಾ. ದಿನಾ ಪಗಾರ ಅವಂಗ. ನಾವಂತೂ ಕೆಲಸಾ ಬಗಸಿ ಬಿಟ್ಟು ಶತಮಾನಗಳೇ ಆಗಿ ಹೋದವು. ಹಾಂಗಾಗಿ ನಮಗ ಪಗಾರ ಹೋಗ್ಲೀ ಕೆಲಸವೇ ಇಲ್ಲ. ಹಾಂಗಾಗಿ ಮಂತ್ಲಿ ಮಂತ್ಲಿ ಪಗಾರ್ ಅಂದ್ರ ಚೀಪ್ಯಾಗ ಮಾತ್ರ. ಆವಾ ಹೇಳಿ ಕೇಳಿ ತಿಂಗಳಕ್ಕ ಒಮ್ಮೆ ಮಾತ್ರ ಪಗಾರ ತೊಗೊಂಡು, ಅದೇ ಪಗಾರದಲ್ಲಿ ಇಡೀ ತಿಂಗಳ ಹೆಂಡ್ತಿ ಮಕ್ಕಳ ಸಮೇತ ಜೀವನ ಮಾಡಬೇಕಾದ ಪಾಪದ ಜೀವಿ. ಹಾಂಗಾಗಿ ಚೀಪ್ಯಾಗ ಪೈಲಾಕ್ಕ ಒಂದೇ ಸಲ ಸ್ವಲ್ಪ ತೀರ್ಥ ತೊಗೊಂಡು, ನಮಗೂ ಕೊಡಿಸಲಿಕ್ಕೆ afford ಆಗ್ತದ. ಬಾಕಿ ದಿವಸ ಎಲ್ಲಾ ನಮ್ಮ ಶ್ರೀಮಂತ ಗೆಳೆಯಾ ಕರೀಮ ಕರೆದು ಕರೆದು ಎಲ್ಲಾರಿಗೂ ಮಸ್ತ ಪಾರ್ಟಿ ಮಾಡಿಸ್ತಾನ.

ಹಾಂ! ಕರೀಂ! ಕರೆಕ್ಟ್ ಹೇಳಿದಿ ನೋಡು. ಚೀಪ್ಯಾ ಹುಬ್ಬಳ್ಳಿಯಿಂದ ಬರೋ ಟೈಮ್ ಆತು. ಆರರ ಬೋಂಗಾ ಆತು. ಇನ್ನೇನು ಲೋಕಲ್ ಟ್ರೈನ್ ಸುಮಾರು ನವಲೂರ್ ದಾಟಿ ಬಿಟ್ಟಿರಬೇಕು. ಬಂದಾ ಬಿಡ್ತಾನ. ಇಲ್ಲೇ ಬರ್ತಾನ. ಇಲ್ಲಿಂದ ಸೀದಾ ನ್ಯೂ ಪ್ರಭಾತ ಬಾರಿಗೆ ಹೋಗೇ ಬಿಡೋಣ. ನಿಮ್ಮ ಭಾಂಜಾ ಮೆಹಮೂದಗ ಸುಮಾರು ರಾತ್ರಿ ಹನ್ನೊಂದರ ಹೊತ್ತಿಗೆ ಬಂದು ಆಟೋ ಒಳಗ ನಮ್ಮನ್ನೆಲ್ಲಾ ಪಿಕಪ್ ಮಾಡಿಕೊಂಡು ಹೋಗಲಿಕ್ಕೆ ಹೇಳಿಬಿಡು. ಕುಡಿಯೋದು ಸ್ವಲ್ಪೇ ಆದರೂ ಪೊಲೀಸರು ಭಾಳ ಹಡಬಿಟ್ಟಿ ಆಗ್ಯಾರ ನೋಡು. ಹಿಡದು ರೊಕ್ಕಾ ಕೆತ್ತಿ ಬಿಡ್ತಾರ. ಅದಕ್ಕಾ ಬ್ಯಾರೆ ಅವರ, ಅದೂ ಕುಡಿಯದೇ ಇದ್ದವರ, ಗಾಡಿ ಒಳಗ ಹೋಗಿ ಬಿಟ್ಟರೆ ಚಿಂತಿ ಇಲ್ಲ, ಅಂತ ಹೇಳಿದೆ.

ಎಲ್ಲಿ ಮೆಹಮೂದ್ ಸಾಬ್?! ಅವನೇ ಆ ಹೊತ್ತಿಗೆ ಕುಡಿದು  ಫುಲ್ ಚಿತ್ತಾಗಿ  ಬಿಟ್ಟಿರ್ತಾನೆ. ನೀವು ಚಿಂತಿ ನಕೊ ಕರ್ನೆಕಾ. ನಾವು ನಿಮಗೆ ಮನಿ ತನಕಾ ಡ್ರಾಪ್ ಮಾಡ್ತಾರೆ. ಪೋಲಿಸ್ ಪೋದ್ದಾರ್ ಎಲ್ಲಾ ನಮ್ಮದೂಕಿ ಕಿಸೆನಲ್ಲಿ ಇದ್ದಾರೆ. ಚಿಂತಾ ನಕೊ, ಅಂದುಬಿಟ್ಟ ಕರೀಂ.

ಬಾರಲ್ಲಾದರೂ ಹಾಕು ಜೈಲಲ್ಲಾದರೂ ಹಾಕು ರಾಘವೇಂದ್ರಾ! - ಅಂತ ಪ್ರಾರ್ಥನೆ ಮಾಡಿ ಹ್ಞೂ ಅಂದೆ.

ಅಷ್ಟರಾಗ ದೂರಿಂದ ಸ್ಟೇಷನ್ ಹೊರಗ ಚೀಪ್ಯಾ ಬರೋದು ಕಾಣಿಸ್ತು. ಮುಂದ ಒಂದೆರಡು ನಿಮಿಷದೊಳಗ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ಹಾಜರ್ ಆದ.

ಚೀಪ್ಯಾ, ಪಗಾರ್ ಆತೆನಲೇ? ಹೋಗೋಣ ತೀರ್ಥಯಾತ್ರಾಕ್ಕ? ನ್ಯೂ ಪ್ರಭಾತ ಬಾರ್ & ರೆಸ್ಟೋರೆಂಟ್. ನಾನು ಕರೀಮಾ ತಯಾರ್ ಇದ್ದೇವಿ ನೋಡಪಾ, ಅಂದೆ.

ದೋಸ್ತಾ...ಇವತ್ತು ಆಗೋದಿಲ್ಲ ನೋಡಪಾ! - ಅಂತ ಬಾಂಬ್ ಹಾಕಿದ ಚೀಪ್ಯಾ.

ಯಾಕಲೇ?!!! - ಅಂತ ನಾನು ಕರೀಮಾ ಇಬ್ಬರೂ ಜೋರಾಗಿ ಹೊಯ್ಕೊಂಡ್ವೀ. ತಿಂಗಳಕ್ಕೆ ಒಮ್ಮೆ ಮಾತ್ರ ಆಗೋವಂತಹವು, ಅವು ಏನೇ(!) ಇರಲಿ, ಟೈಮ್ ಗೆ ಸರಿ ಆಗಲಿಲ್ಲ ಅಂದ್ರ ಏನೋ ಅನಾಹುತ ಆದ ಫೀಲಿಂಗ್ ಎಲ್ಲಾರಿಗೂ ಬರೋ ಹಾಂಗ ನಮಗೂ ಬಂತು.

ಯಾಕಲೇ ಚೀಪ್ಯಾ? ಪಗಾರ್ ಆಗಲಿಲ್ಲ ಇವತ್ತು? ಅಥವಾ ಎಲ್ಲರೆ ಮತ್ತ ನಿನ್ನ ಕೆಲಸಾ ಗೊಟ್ಟಕ್ಕ ಅಂತೋ? - ಅಂತ ಕೇಳಿದೆ. ಹಿಂದೊಮ್ಮೆ ಅವನ ಕೆಲಸ ಹೋಗಿ ದೊಡ್ಡ ಅನಾಹುತ ಆಗಿತ್ತು. ಅದರ ಬಗ್ಗೆ ಮೊದಲು ಬರೆದಿದ್ದೆ. ಇಲ್ಲದ ನೋಡ್ರೀ.

ಛೆ!! ಛೆ!! ಕೆಲಸ ಗಿಲಸ ಎಲ್ಲಾ ಹರಿವಾಯುಗುರುಗಳ ಕೃಪೆಯಿಂದ ಛೊಲೋ ನೆಡದದ. ಪಗಾರನೂ ಆತು. ಆದ್ರ ಇವತ್ತು ಬಂದು ಶೆರೆ ಕುಡಿಲಿಕ್ಕೆ, ಹರಟಿಗೆ ಕೂಡಲಿಕ್ಕೆ ಆಗೋದಿಲ್ಲ ನೋಡ್ರೀಪಾ. ಬೇಕಾದ್ರ ಮುಂದಿನ ತಿಂಗಳ ಡಬಲ್ ಕುಡಿಸ್ತೇನಿ. ಓಕೆ? - ಅಂದಾ ಚೀಪ್ಯಾ.

ಮಂಗ್ಯಾನಿಕೆ!! ಬಡಿದ್ಯಲ್ಲಪಾ ಬಗಣಿ ಗೂಟಾ. ಮಹಾ ದೊಡ್ಡ KLPD ಮಾಡಿದಿ ನೋಡಲೇ ಚೀಪ್ಯಾ. ಹೀಂಗಾ ಮಾಡೋದು? ಪೈಲಾ ನಶಾ ಅಂತ ಈ ಸಾಬಾ ಈಗಲೇ ಅರ್ಧಾ ನಶಾ ಒಳಗ ಫೀಲಿಂಗ್ ಒಳಗ ಇದ್ದಾನ. ನಾನೂ ಸುಮಾರ ಹಾಂಗೆ. ಹೀಂಗಿದ್ದಾಗ ಒಮ್ಮೆಲೆ ಪಾರ್ಟಿ ಪ್ಲಾನ್ ಕ್ಯಾನ್ಸಲ್ ಮಾಡೋದು ಅಂದ್ರ ಏನಲೇ? ಯಾಕ ಬ್ಯಾಡ ಇವತ್ತು? - ಅಂತ ಕೇಳಿದೆ, ದೊಡ್ಡ ಆಕ್ಷೇಪಣೆ ಮಾಡುತ್ತ.

ಮನಿಯೊಳಗ ಕೆಲಸ ಅದನೋ. ನನ್ನ ಹೆಂಡ್ತಿ ಉರ್ಫ್ ನಿಮ್ಮ ರೂಪಾ ವೈನಿ ಕಾಯ್ತಿರ್ತಾಳ. ಉಪವಾಸ ಬ್ಯಾರೆ ಇದ್ದಾಳ. ನಾ ಹೋಗಿ, ಅಕಿ ಕಡೆ ಪೂಜಿ ಮಾಡಿಸಿಕೊಂಡ ಮ್ಯಾಲೇ ಅಕಿ ಉಪವಾಸ ಮುಗಿಸಾಕಿ ಇದ್ದಾಳ. ಅದಕ್ಕಾ ನಾ ಮುದ್ದಾಂ ಮನಿಗೆ ಹೋಗಲಿಕ್ಕೇ ಬೇಕು. ಆಕಾಶ ಸ್ವಚ್ಚ ಆಗಿ ಚಂದಪ್ಪ ಬಂದ್ರ ಸಾಕಪಾ. ನಾನು, ಚಂದಪ್ಪಾ ಇಬ್ಬರೂ ಇರಬೇಕು. ಇಬ್ಬರನ್ನೂ ನೋಡಿದ ಮ್ಯಾಲೆ ಅಕಿದು ಊಟ ಮತ್ತೊಂದು. ಹೀಂಗಿದ್ದಾಗ ನಾ ನಿಮ್ಮ ಜೋಡಿ ಬಂದು ಹ್ಯಾಂಗ ಕುಡಕೋತ್ತ ಕೂಡಲಿ? - ಅಂತ ಏನೇನೋ ಹೊಸಾ ಹೊಸಾ ಸುದ್ದಿ ಹೇಳಿಬಿಟ್ಟ ಚೀಪ್ಯಾ.

ಕ್ಯಾ ಚೀಪ್ಯಾ ಭಾಯ್, ಇವತ್ತು ನಿಮ್ಮದೂಕಿ ಏಕಾದ್ವಾಶಿ ಕ್ಯಾ? ಅದಕ್ಕೆ ಉಪವಾಸ್ ರಕ್ಕಾ ಕ್ಯಾ ಭಾಬಿ ಜಾನ್? - ಅಂತ ಕೇಳಿದ ಕರೀಂ.

ಲೇ ಹಾಪಾ.... ಅದು ಏಕಾದಶಿ ಅಂತ. ಒಂದೇ ದ್ವಾಶಿ ತಿನ್ನೊ ದಿವಸಕ್ಕ ಏಕಾದ್ವಾಶಿ ಅಂತಾರ. ಸುಮ್ಮ ಕೂಡಾಪಾ, ಅಂತ ಚೀಪ್ಯಾ ಉರಕೊಂಡ. ಅವಂಗ ಮನಿಗೆ ಹೋಗೋದು ಅರ್ಜೆಂಟ್ ಇತ್ತು.

ಮತ್ತೇನಲೇ ಚೀಪ್ಯಾ? ಏನೇನೋ ವಿಚಿತ್ರ ನೇಮಾ ನಿಷ್ಠಿ ಶುರು ಮಾಡಿಕೊಂಡಂಗ ಅದ ವೈನೀ. ಏನು ನೆಡೆಶ್ಯಾರ? ಹಾಂ? - ಅಂತ ಕೇಳಿದೆ.

ಕರವಾ ಚೌತ್! ನಿಮ್ಮ ರೂಪಾ ವೈನಿ ಅಂದ್ರ ನಮ್ಮನಿಯವರು ಅದೇನೋ ಕರವಾ ಚೌತ್ ಅಂತ ಹೊಸಾ ವೃತಾ ಮಾಡ್ಯಾಳ ಈ ಸಲೆ. ಅದರ ಪ್ರಕಾರ ಇವತ್ತು ಫುಲ್ ಉಪವಾಸ ಅಕಿದು. ಅದೇನೋ ನಾ ಹೋದ ಮ್ಯಾಲೆ ಹಿಟ್ಟಿನ ಜರಡಿ ಒಳಗ ಚಂದಪ್ಪನ ನೋಡಿ, ನನ್ನ ಕಾಲಿಗೆ ಬಿದ್ದು, ನಂತರನೇ ಅಕಿ ಉಪವಾಸ ಮುರಿಯೋದು ಅಂತ. ಏನರೆ ಇರಲಿ ಮಾರಾಯಾ, ಅಂತ ಹೇಳಿದ ಚೀಪ್ಯಾ.
ಕರವಾ ಚೌತ್ ಮಾಡುತ್ತಿರುವ ಮಹಿಳೆ

ಕ್ಯಾ? ಕೆರವಾ ಚೌತ್? ಮತ್ಲಬ್ ಚಪ್ಪಲಿ ಪೂಜಾ ಕ್ಯಾ? - ಅಂತ ಕರೀಂ ಕೇಳಿದ. ಅವಂಗ ಕರವಾ ಚೌತ್ ಅಂದಿದ್ದು ಕೆರವಾ ಅಂತ ಕೇಳಿ, ಅದನ್ನ ಆವಾ ಕೆರಾ ಅಂದ್ರ ಚಪ್ಪಲ್ಲು ಅಂತ ತಿಳಕೊಂಡು.... ರಾಮಾ.... ರಾಮಾ.....

ಸಾಬ್ರಾ....ಕೆರವಾ ಅದು ಇದು ಅಂದ್ರ ನಿಮ್ಮ ಭಾಬಿ ಜಾನ್ ನಿಮಗ ಅದ್ರಾಗೇ ನಾಕು ಹಾಕ್ತಾರ ನೋಡ್ರೀ ಮತ್ತ. ಸುಮ್ಮ ಕೂಡ್ರೀಪಾ, ಅಂತ ಹೇಳಿದೆ.

ಏನಲೇ ಚೀಪ್ಯಾ ಇದು ಹೊಸಾ ಅವತಾರ ರೂಪಾ ವೈನೀದು? ಎಲ್ಲಿಂದ ಕಲತಾರ ಈ ಹೊಸಾ ವೃತಾ? ನಮ್ಮ ಪದ್ಧತಿ ಅಲ್ಲಲ್ಲೋ ಇದೆಲ್ಲಾ, ಅಂತ ಕೇಳಿದೆ.

ಅಕಿ ಬಾಜು ಮನಿ ಪಣಿಯಮ್ಮ ಇದ್ದಾಳಲ್ಲಪ್ಪಾ. ಅಕಿದೇ ಸಹವಾಸ ದೋಷ, ಅಂತ ಚೀಪ್ಯಾ ಮುಗುಮ್ಮಾಗಿ ಹೇಳಿದ. ನನಗ ತಿಳಿಲಿಲ್ಲ.

ಏನಲೇ ಚೀಪ್ಯಾ!? ಏನೇನೋ ಅಂತೀ. ಹಾಂ? ಮುತ್ತೈದಿ ಆದ ನಿಮ್ಮ ಹೆಂಡ್ರು ಕೆಂಪ ಸೀರಿ ಪಣಿಯಮ್ಮನ ಕಡೆ ಏನು ವೃತಾ ಕಲಿಲಿಕತ್ತಾಳೋ? ಎಲ್ಲಿ ಮಹಾಲಕ್ಷ್ಮಿ ಅಂತಾ ಮುತ್ತೈದಿ ರೂಪಾ ವೈನಿ, ಎಲ್ಲಿ ಡೇಂಜರ್ ಸಿಗ್ನಲ್ ಬೋಡ ತಲಿ ಪಣಿಯಮ್ಮ? ಹಾಂ? ಎಲ್ಲೆ ಮತ್ತ ಪಣಿಯಮ್ಮನ ಕಡೆ ಈಗಿಂದನೇ ಋಷಿ ಪಂಚಮಿ ವೃತದ ಟ್ರೇನಿಂಗ ತೊಗೊಳ್ಳಿಕ್ಕೆ ಹತ್ಯಾಳೇನು ರೂಪಾ ವೈನೀ? ಹಾಂ? - ಅಂತ ಕೇಳಿದೆ.

ಏ....ಪಣಿಯಮ್ಮ ಅಂದ್ರ ನಮ್ಮ ಚಾಳಿನ ಕೆಂಪ ಸೀರಿ ಬೋಡಮ್ಮ ಅಲ್ಲಪಾ. ನಮ್ಮ ಬಾಜೂ ಮನಿಗೆ ಒಂದು ಪಂಜಾಬಿ ಫ್ಯಾಮಿಲಿ ಬಂದದ ನೋಡು, ಅವರ ಮನಿಯಾಕಿ. ಅದೇನೋ ಅಕಿ ಹೆಸರು ಪಣಿಂದರ್ ಕೌರ್ ಅಂತ. ಅಕಿನೇ ಎಲ್ಲಾ ನಮ್ಮ ಹೆಂಡ್ತೀ ತಲಿ ಫುಲ್ ಬ್ರೈನ್ ವಾಶ್ ಮಾಡಿ ಏನೇನೋ ಕಲಿಸಿ ಬಿಟ್ಟಾಳ. ನೋಡಬೇಕು ನೀ ನಿಮ್ಮ ರೂಪಾ ವೈನೀ ಪಂಜಾಬಿ ವೇಷಾ, ಅಂತ ಹೇಳಿದ ಚೀಪ್ಯಾ.

ಓಹೋ! ಪಣಿಂದರ್ ಕೌರ್ ಅಂದ್ರ ಸಿಖ್ ಮಂದಿ. ಆದ್ರ ಅವರು ಕರವಾ ಚೌತ್ ಮಾಡ್ತಾರ ಏನು? ಬರೆ ಹಿಂದೂಗಳು ಮಾತ್ರ ಅಲ್ಲೇನೋ ಅವೆಲ್ಲಾ ಮಾಡೋದು? - ಅಂತ ಕೇಳಿದೆ.

ಅಕಿ ಗಂಡಾ ಶರ್ಮಾ ಮಾರಾಯಾ. ಆವಾ ಪಂಜಾಬಿ ಬ್ರಾಹ್ಮಣ. ಹಾಂಗಾಗಿ ಇಕಿ ಪಣಿಂದರ್  ಕೌರ್ ಶರ್ಮಾ ನೋಡು. ಆ ಕಡೆ ಮುಂಜಾನೆದ್ದು 'ವಾಹೆ ಗುರು, ವಾಹೆ ಗುರು' ಅಂತ ತಾನೂ ಹೊಯ್ಕೊಂಡು, ಮನಿ ಮಂದಿ ಕಡೆ ಎಲ್ಲಾ ಹೊಯ್ಕೊಳ್ಳೋ ಹಾಂಗ ಮಾಡ್ತಾಳ. ಮತ್ತ ಕರವಾ ಚೌತ್ ಸುದಾ ಮಾಡ್ತಾಳ ಅಕಿ, ಅಂತ ಬಾಜೂ ಮನಿ ಪಣಿಂದರ್ ಕೌರ್ ತವರ ಮನಿ ಕಡೆ ಸಿಖ್ಖರ ಸಂಪ್ರದಾಯ, ಗಂಡನ ಮನಿ ಕಡೆ ಪಂಜಾಬಿ ಬ್ರಾಹ್ಮರ ಸಂಪ್ರದಾಯ ಎರಡೂ ನೆಡಿಸಿಕೊಂಡು ಹೋಗ್ತಾಳ ಅಂತ ಹೇಳಿದ ಚೀಪ್ಯಾ.

ಹೀಂಗ ಕಥಿ ಅಂತ ಆತು, ಅಂತ ಹೇಳಿ ನಿಟ್ಟುಸಿರು ಬಿಟ್ಟೆ. ಒಂದು ಪಾರ್ಟಿ ಗತಿಗೆಟ್ಟು ಹೋದ ಸಂಕಟ ಆತು. ಏನು ಮಾಡೋದು? ಅದೇನೋ ಅಂತಾರಲ್ಲ, ನಸೀಬ್ ಮೇ ಲಿಖಾ ಹೈ ಗಾಂಡು, ಕ್ಯಾ ಕರೇಗಾ ಪಾಂಡು? ಹಾಂಗಾತು ನಮ್ಮ ಗತಿ.

ಹ್ಞೂ....ಹೋಗಿ ಪೂಜಾ ಮಾಡಿಸ್ಕೋ ಹೋಗಪಾ. ಹೇಳಿ ಕೇಳಿ ಧರ್ಮಪತ್ನಿ. ಧರ್ಮಕ್ಕಾರ ಅಷ್ಟರ ಮಾಡಲಿಕ್ಕೇ ಬೇಕಲ್ಲಪಾ, ಅಂತ ಹೇಳಿ ಚೀಪ್ಯಾನ ಕಳಿಸಿಕೊಟ್ಟಿವಿ.

ಸಾಬ್ರಾ, ನಾವೇನ ಮಾಡೋನ್ರೀ? ಬಾರೋ, ಮನಿನೋ? ಏನಂತೀರಿ? - ಅಂತ ಕೇಳಿದೆ.

ಸಾಬ್......................................! - ಅಂತ ಕರೀಂ ರಾಗಾ ಎಳೆದ.

ಏನಾತಪಾ? ನಿನಗೂ ಮನಿಯೊಳಗ ಬೇಗಂ ಏನರಾ ವೃತಾ ಇಟ್ಟುಕೊಂಡು ಲಗೂ ಬಾ ಅಂತ ಹೇಳ್ಯಾರೇನು? ಹಾಂ? - ಅಂತ ಕೇಳಿದೆ.

ಸಾಬ್, ಹಾಗೇನೂ ಇಲ್ಲ. ಆದ್ರೆ ಇವತ್ತು ದಂಧಾ ಸ್ವಲ್ಪಾ ಮಂದಾ ಇತ್ತು ಸಾಬ್. ಏನೂ ಪೈಸಾ ಆಗಲೇ ಇಲ್ಲಾ. ಜೇಬ್ ಫುಲ್ ಖಾಲಿ ಸಾಬ್. ಹಾಂಗಾಗಿ...... - ಅಂತ ಕರೀಂ ರಾಗಾ ಎಳೆದೆಳದು ರೊಕ್ಕಿಲ್ಲ ಅಂತ ಫುಲ್ ಬತ್ತಲೆ ಆದವರು ಹೇಳಿದಂಗ ಹೇಳಿದ.

ರೊಕ್ಕಿಲ್ಲ? ಅಷ್ಟನಾ? ಇರ್ಲಿ ಬಿಡು. ದಿನಾ ನೀನಾ ಕುಡಿಸಿ ತಿನ್ನಿಸಿ ಮಾಡವಾ. ಇರ್ಲಿ ಬಿಡು. ನಡಿ ಹಾಂಗಿದ್ದರ. ನೀ ಮನಿ ಕಡೆ ಹೊಂಡು. ನಾನೂ ಹೊಂಟೆ, ಅಂತ ಹೇಳಿ ಬಂದೆ. ಇವತ್ತು ಹೊಟ್ಟಿ ಮ್ಯಾಲೆ ತಣ್ಣೀರು ಬಟ್ಟೆಯೇ ಗತಿ ಸಿವಾ!

ಸಾಬಾ ಖರೇನೇ ರೊಕ್ಕಿಲ್ಲ ಅಂದನೋ ಅಥವಾ ಇವತ್ತಾರ ಒಂದು ದಿವಸ ಬಿಟ್ಟಿ ಕಟಿಯೋ ನನ್ನಂತಹ ಬಿಟ್ಟಿದೇವನಿಂದ ಬಚಾವ್ ಆಗಲು ರೊಕ್ಕಿಲ್ಲ ಅಂದನೋ? ಅಂತ ಸ್ವಲ್ಪ ಸಂಶಯ ಬಂತು. ಏನರೆ ಹಾಳಾಗಿ ಹೋಗಲಿ ಅಂತ ವಾಪಸ್ ಮನಿಗೆ ಬಂದು ಮಲ್ಕೊಂಡುಬಿಟ್ಟೆ.

ಇದು ಆಗಿ ಮರುದಿವಸನಾ ಮತ್ತ ಚೀಪ್ಯಾ ಸಿಕ್ಕಾ.

ಚೀಪ್ಯಾನ ಗಲ್ಲಾ ಅಂದ್ರ ಉದ್ದಿನ ವಡಿ ಉಬ್ಬಿದಂಗ ಉಬ್ಬಿದ್ದವು! ಬಾಡಿ ಸಹಿತ ಸ್ವಲ್ಪ ವಾಕಡಾ ಮಾಡಿಕೊಂಡು ನೆಡಕೋತ್ತ ಬಂದು ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನನ್ನ ಮತ್ತ ಕರೀಮನ್ನ ಕೂಡಿಕೊಂಡಾ ಚೀಪ್ಯಾ.

ಏನು ಚೀಪ್ಯಾ ಭಾಯಿ, ನಿಮ್ಮದೂಕಿ ಶಕಲ್ ಯಾಕೆ ಉದ್ದಿಂದು ವಡಿ ಆದಂಗೆ ಆಗಿದೆ? ಮನಿಯಾಗೆ ಶ್ರದ್ಧಾಗೆ ಮಾಡಿದ್ದರಿ ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ಹಾಂ! ಅದು ನಿನಗ್ಯಾಂಗ ಗೊತ್ತಾತೋ!!!?? ನಾ ಶ್ರದ್ಧಾಗ ಏನೂ ಮಾಡಲಿಲ್ಲ ಮಾರಾಯಾ. ಅಕಿ ಊರು ತುಂಬಾ ಏನು ಹೇಳಿಕೋತ್ತ ಅಡ್ಯಾಡಲಿಕತ್ತಾಳ? ಬರೇ ಏನೋ ಅಕಿ ಕಡೆ ಕೇಳಿ, ಅಕಿ ಏನೋ ತಿಳಕೊಂಡು ಈ ಹಾಲತ್, ಅಂತ ಚೀಪ್ಯಾ ನಿಟ್ಟುಸಿರು ಬಿಟ್ಟ.

ಹಾಂ!!! ಅಂತ ಕರೀಂ ಉದ್ಗಾರ ಮಾಡಿದ.

ಚೀಪ್ಯಾ ನಾವು ನಿಮಗೆ ಶ್ರದ್ಧಾಗೆ ಮಾಡಿದಿರಿ ಕ್ಯಾ ಅಂತ ಕೇಳಿದರೆ, ನೀವು ಏನೇನೋ ಅಂತೀರಲ್ಲಾ? - ಅಂತ ಕರೀಂ ಫುಲ್ ಹಾಪ್ ಆಗಿ ಕೇಳಿದ.

ಮತ್ತಾ?!!! - ಅಂತ ಚೀಪ್ಯಾ ವಾಪಸ್ ಉದ್ಗರಿಸಿದ.

ನಿಮ್ಮದೂಕಿ ಮಂದಿಯೊಳಗೆ ಸತ್ತು ಹೋದ ಮಂದಿಗೆ ವರ್ಷಕ್ಕೊಮ್ಮೆ ಶ್ರದ್ಧಾಗೆ ಮಾಡ್ಬಿಟ್ಟಿ ಉದ್ದಿಂದು ವಡಿ ಮಾಡೋದಿಲ್ಲ ಕ್ಯಾ?  ಅದಕ್ಕೆ ಕೇಳಿದೆ, ಅಂತ ಕರೀಂ ಹೇಳಿದ.

ಶ್ರಾದ್ದ ಮಾಡಿಯೇನು ಅನ್ನಲಿಕ್ಕೆ ಶ್ರದ್ಧಾಗೆ ಮಾಡ್ಬಿಟ್ಟಿ ಅಂತಿಯಲ್ಲಲೇ ಪಾಪಿ ಮುಂಡೆ ಮಗನೇ??!! ಆ ಶ್ರದ್ಧಾನ ಹೆಸರು ಕೇಳಿದರ ನನ್ನ ಮೈ ಉರಿತದ, ಅಂತ ಹೇಳಿದ ಚೀಪ್ಯಾ.

ಯಾರಲೇ ಚೀಪ್ಯಾ ಈ ಶ್ರದ್ಧಾ? ಅಕಿ ಹೆಸರು ಕೇಳಿದರ ಯಾಕ ಹಾಂಗ ಉರಿದು ಜಿಗಿದು ಬೀಳಲಿಕತ್ತಿ? ಹಾಂ? - ಅಂತ ಕೇಳಿದ.

ಶ್ರದ್ಧಾ ಅಂದ್ರ ನನ್ನ ಕಿರೇ ನಾದಿನಿ ಮಾರಾಯಾ. ನನ್ನ ಹೆಂಡ್ತಿ ತಂಗಿ. ನಿಮ್ಮ ಪ್ರೀತಿ ರೂಪಾ ವೈನಿಯ ಕಡೀ ತಂಗಿ. ಅಕಿಂದನೇ ನನ್ನ ಹಾಲತ್ ಹೀಂಗ ಆಗ್ಯದ, ಅಂತ ಹೇಳಿಕೋತ್ತ ಚೀಪ್ಯಾ ತನ್ನ ವಾಕಡಾ ಆದ ಬಾಡಿಯನ್ನು ಸ್ವಲ್ಪ ಸೀದಾ ಮಾಡಿಕೊಳ್ಳಲಿಕ್ಕೆ ನೋಡಿದ. ನೋವು ಆತು ಚೀಪ್ಯಾಗ. ಆಯಿರೇ! ಬಾಬಾರೇ! ಅಂತ ಮುಲುಗಿದ ಚೀಪ್ಯಾ.

ಏನು ಚೀಪ್ಯಾ, ನಿಮ್ಮದೂಕಿ ಸಾಲಿ ಸಾಹೇಬಾ ನಿಮಗೆ ಆ ಪರಿ ಪ್ಯಾರಗೆ, ಮೊಹಬ್ಬತ್ ಗೆ ಮಾಡ್ಬಿಟ್ಟಿ, ನಿಮ್ಮದೂಕಿ ಗಲ್ಲಾಗೆ ಉದ್ದಿಂದು ವಡಿ ಹಾಂಗೆ ಉಬ್ಬಿಸಿ ಬಿಟ್ಟರು ಕ್ಯಾ? - ಅಂತ ಕೇಳಿದ ಕರೀಮಾ. ಆವಾ ಹಾಪ್ ಸಾಬಾ. ಕರೀಮಾ ತಾನು ತನ್ನ ಬೇಗಂ ಅಕ್ಕಾ, ತಂಗಿ ಎಲ್ಲಾರ ಜೋಡಿ ಮಸ್ಕಿರಿ ಮಾಡಿಕೋತ್ತ ಇರ್ತಾನ. ತನ್ನ ಹಾಂಗೆ ಎಲ್ಲಾರು ಅಂತ ತಿಳಕೊಂಡು ಬಿಟ್ಟಾನ.

ಸುಮ್ಮ ಕೂಡಪಾ ಕರೀಂ. ಇಲ್ಲೆ ನನ್ನ ಹಾಲತ್ ಹಳ್ಳಾ ಹಿಡದು, ನನ್ನ ನೋವು ನನಗ. ನಿನಗ  ಈಗೇ ಮಜಾಕ್ ಮಾಡ್ಬೇಕು ಅಂತ ಅನ್ನಸ್ಲಿಕತ್ತದೇನು? ಹಾಂ? ಯಾಕ ಮುಕ...ಮೈಯ್ಯಾಗಿನ ಸೊಕ್ಕಾ? ಹಾಂ? - ಅಂತ ಮೈಲ್ಡ್ ಸಿಟ್ಟಿಲೆ ಚೀಪ್ಯಾ ಕರೀಮನ ಮ್ಯಾಲೆ ಉರಕೊಂಡ.

ಮಾಮಲಾ ಸೀರಿಯಸ್ ಅದ ಅಂತ ಕರೀಮಾ ತಿಳಕೊಂಡು ಇನ್ನೊಂದು ಫೋರ್ಟ್ವೆಂಟಿ ಜರ್ದಾ ಪಾನ್ ಕಟ್ಟಿಸೋದರ ಕಡೆ ಲಕ್ಷ ಕೊಟ್ಟ. ಸಿಟ್ಟಿಗೆದ್ದ ಚೀಪ್ಯಾ ಎಲ್ಲರೆ ಕಟಿಲಿಕ್ಕೆ ಹೋಗಿ, ಅದು ರಿವರ್ಸ್ ಆಗಿ ಮತ್ತೂ ವಾಕಡಾ ಆಗಿ ಬಿಟ್ಟಾನು ಅಂತ. ಸಾಬಗ ಹೊಡಿಲಿಕ್ಕೆ ಹೋದ್ರ ಚೀಪ್ಯಾನ ಕೈನೇ ಮುರಿತಾವ ಹೊರತೂ ಸಾಬ್ಗ ಏನೂ ಆಗಂಗಿಲ್ಲ.

ಏನಾತ್ಲೇ ಚೀಪ್ಯಾ? ನಿನ್ನೆ ಕರವಾ ಚೌತ್, ಲಗೂನ ಮನಿಗೆ ಹೋಗಬೇಕು, ನಿಮ್ಮ ಹೆಂಡ್ರು ನಿನ್ನ ನೋಡಿದ ಮ್ಯಾಲೇ ಉಪವಾಸ ಮುರಿಯವರು ಇದ್ದಾರ, ಅದು ಇದು ಅಂತ ಹೇಳಿಕೋತ್ತ ಹೋದವಂಗ ಏನಾತೋ? ಈ ಪರಿ ಗಲ್ಲ ಬಾಯೋ ಹಾಂಗ, ಫುಲ್ ಬಾಡಿ ವಾಕಡಾ ಆಗೋ ಹಾಂಗ  ಏನಾತು? ಎಲ್ಲರೆ ಬಿದ್ಯೋ ಅಥವಾ ಯಾರರೆ ಹಿಡದು ನಾದಿ ಬಿಟ್ಟರೋ? ಏನಾತು ಹೇಳೋ, ಅಂತ ಕೇಳಿದೆ.

ಏ...ನಿನ್ನೆ ನನ್ನ ಬ್ಯಾಡ್ ಲಕ್ ಫುಲ್ ಖರಾಬ್ ಇತ್ತ ಮಾರಾಯಾ, ಅಂತ ಹೇಳಿದ ಚೀಪ್ಯಾ ನಿಟ್ಟುಸಿರು ಬಿಟ್ಟ.

ಏನಾತು? - ಅಂತ ಕೇಳಿದೆ.

ನಿನ್ನೆ ಸೀದಾ ಮನಿಗೆ ಹೋದ್ನಾ. ಅಲ್ಲೆ ಮನಿಯಾಗ ನನ್ನ ಹೆಂಡ್ತೀ ತಂಗಿ ಶ್ರದ್ಧಾ ಬಂದು ಕೂತಿದ್ದಳು. ಹೆಂಡ್ತಿ ಅಣ್ಣ ನಾಗಣ್ಣ ಉರ್ಫ್ ತೂತ್ ನಾಗ್ಯಾ ಸಹಿತ ಬಂದಿದ್ದ. ಮೊದಲನೇ ಸರಿ ಇಕಿ ಕರವಾ ಚೌತ್ ಮಾಡ್ಲಿಕತ್ತಾಳ. ಹ್ಯಾಂಗಿರ್ತದೋ ಏನೋ ಅಂತ ಕೆಟ್ಟ ಕುತೂಹಲ ಎಲ್ಲಾರಿಗೂ. ಒಳ್ಳೆ ದೊಂಬರಾಟ ನೋಡಲಿಕ್ಕೆ ಬಂದು ಕೂತವರ ಹಾಂಗ ಬಂದು ಕೂತಿದ್ದರು, ಅಂತ ಹೇಳಿದ ಚೀಪ್ಯಾ.

ಹ್ಞೂ...ಮುಂದಾ? - ಅಂತ ಒಂದು ಕ್ವೆಶ್ಚನ್ ಒಗದು ಕೂತೆ.

ಅಕಿನೌನ್....ಅಕಿ ಶ್ರದ್ಧಾ ಆಗಷ್ಟೇ ಫ್ರೆಶ್ ಆಗಿ ಮಾಡಿದ ಚಿಗಳಿ ಕೆಟ್ಟ ಅಸಹ್ಯ ರೀತಿಯೊಳಗ ಚೀಪಿಕೋತ್ತ ಕೂತಿದ್ದಳು. ಏನೋ ಮಜಾಕ್ ಮಾಡೋಣ ಅಂತ ಹೇಳಿ, ಏನಾ ಶ್ರದ್ಧಾ ಆ ಪರಿ ಚಿಗಳಿ ಚೀಪ್ಲಿಕತ್ತಿ? ಏನರ ವಿಶೇಷ ಅದ ಏನು? ಹಾಂ? ಅಂತ ಕೇಳಿದೆ ನೋಡಪಾ, ಅಂತ ಹೇಳಿದ ಚೀಪ್ಯಾ.

ಚಿಗಳಿ
ಹಾಂಗದ್ರ ಏನು ಮಾಮಾ? ಹಾಂ? ನಾ ಚಿಗಳಿ ಚೀಪಿದರ ಏನೀಗಾ? - ಅಂತ ಶ್ರದ್ಧಾ ಚೀಪ್ಯಾಗ ಕೇಳಿದಳು.

ಏನಿಲ್ಲ ಶ್ರದ್ಧಾ....ನೀ ಆ ಚಿಗಳಿ ಆ ಪರಿ ಹಿಡಕೊಂಡು ಚೀಪೋದು ನೋಡಿದರ ನಿನಗ ಬಯಕಿ ಎದ್ದಂಗ ಕಾಣ್ತದ? ಬಯಕಿ ಏನು? ಹಾಂ? ಹಾಂ? - ಅಂತ ಕೇಳಿಬಿಟ್ಟಾನ ಚೀಪ್ಯಾ.

ಹೋಗ್ಗೋ ಚೀಪ್ಯಾ! ಇನ್ನೂ ಪಿಯೂಸಿ ಸೆಕೆಂಡ್ ಇಯರ್ ಏನೂ ಬಲಿತಿರದ ಬಾಲೆಗೆ ಬಯಕಿ ಅದು ಇದು ಅಂತ ಕೇಳಿದ್ಯಾ? ಥತ್ ನಿನ್ನಾ. ಏನಲೇ ಸಣ್ಣು ಹುಡಿಗ್ಯಾರ ಜೋಡಿ ಏನು ನಿನ್ನ ಮಜಾಕ್ ಅಂತೇನಿ? - ಅಂತ ಮೈಲ್ಡ್ ಆಗಿ ಝಾಡಿಸಿದೆ.

ಈವಾ ಹುಸ್ಸೂಳೆಮಗ ಸಾಬಾ 'ಸಾಲಿ ಆಧಿ ಘರವಾಲಿ' ಅಂತ ಅನಕೋತ್ತ ಅವನ ನಾದಿನಿಯರ ಜೋಡಿ ಮಜಾಕ್ ಮಾಡಿಕೋತ್ತ ಇರೋದು ನೋಡಿ ನನಗೂ ಮಸ್ತಿ ಬಂದಿತ್ತು ನೋಡಪಾ. ಅದಕ್ಕಾ ಅಕಿ ಶ್ರದ್ಧಾಗ ಕೆಣಕಿದೆ ನೋಡಪಾ, ಅಂತ ಹೇಳಿದ ಚೀಪ್ಯಾ.

ಹ್ಞೂ...ಮುಂದ? - ಅಂತ ಕೇಳಿದೆ.

ಅಕಿ ಹಾಪ್ ಶ್ರದ್ಧಾಗ ಏನು ಅಂತ ತಿಳಿಲೇ ಇಲ್ಲ. ಹಾಂ? ಅಂತ ಮಂಗ್ಯಾನ ಮಾರಿ ಮಾಡಿದಳು. ಬಾ ಇಲ್ಲೆ ಅಂತ ಕರದೆ. ಬಂದಳು. ಕಿವ್ಯಾಗ ಕುಸುಪುಸು ಅಂತ ಊದಿದೆ. ಕೇಳಿಕೊಂಡು, ಫುಲ್ ನಾಚಿ, ಮಾಮಾ!!! ಅಂತ ನೌಟಂಕಿ ರಾಗಾ ತೆಗೆದು, ಏನ್ ಮಾಮಾ, ಎಷ್ಟು ಹೊಲಸ್ ಹೊಲಸ್ ಮಾತಾಡ್ತೀರಿ. ರೂಪಕ್ಕಗ ಹೇಳತೇನಿ ನೋಡ್ರೀ ಮತ್ತ, ಅಂತ ಅಕಿ ಸುಮ್ಮನ ಓಳು ಬಿಟ್ಟಳು. ನಾನೂ ಅಕಿಗೆ ಕಣ್ಣು ಹೊಡೆದು, ಅರವಿ ಚೇಂಜ್ ಮಾಡಿ, ಕೈಕಾಲ್ಮುಕ ತೊಳಕೊಳ್ಳಲಿಕ್ಕೆ ಹೋದೆ. ನನ್ನ ಹೆಂಡ್ತಿ ಕಡೆ ಪೂಜಿ ಬ್ಯಾರೆ ಮಾಡಿಸ್ಕೊಬೇಕಿತ್ತಲ್ಲಪಾ. ಅದೇ ಕರವಾ ಚೌತದ ಪೂಜಿ, ಅಂತ ಹೇಳಿದ ಚೀಪ್ಯಾ.

ಮುಂದ? - ಅಂತ ಮತ್ತ ಕೇಳಿದೆ. ಮಗಂದು ಎಲ್ಲಾ ಲಾಂಗ್ ಸ್ಟೋರಿ ಇರ್ತಾವ. ಮುಂದ, ಮುಂದ, ಮುಂದ!

ಕೈಕಾಲ್ಮುಕ ತೊಳಕೊಂಡು ಬರೋವಾಗ ಅಲ್ಲೆ ಅಲಮಾರಿ ಒಳಗ ಇದ್ದ ಕ್ಯಾಮೆರಾ ತೊಗೊಂಡು ಕೊರಳಿಗೆ ಹಾಕ್ಕೊಂಡು ಬಂದೆ. ಈಗ ನೋಡಿದರ ಇಕಿ ಶ್ರದ್ಧಾ ಚಿಗಳಿ ಚೀಪೋದು ಮುಗಿಸಿ, ನಮ್ಮ ಮದ್ವಿ ಫೋಟೋ ಫೋಟೋ ಆಲ್ಬಮ್ ನೋಡಿಕೋತ್ತ, ಖೀ ಖೀ ಅಂತ ಮಂಗ್ಯಾನ ಗತೆ ನಕ್ಕೋತ್ತ, ಅಸಡಾಬಸಡಾ ಸೋಫಾದ ಮ್ಯಾಲೆ ಬೋರಲು ಬಿದಕೊಂಡು, ಕಾಲ್ ಮ್ಯಾಲೆ ಎತ್ತಿಕೊಂಡು ಕೂತಂಗ ಮಲಗಿದ್ದಳು ಅಥವಾ ಮಲಗಿದಂಗ ಕೂತಿದ್ದಳು. ಅಕಿ ಆ ಆಲ್ಬಮ್ ನೋಡೋ ವ್ಯಾಷಾ ನೋಡಿದ್ರ ಸಾಕು, ಅಂತ ಹೇಳಿದ ಚೀಪ್ಯಾ.

ಮುಂದ?

ಏನು ಶ್ರದ್ಧಾ ಭಾಳ ನಗಲೀಕತ್ತಿ, ಏನು ವಿಷಯ? - ಅಂತ ಚೀಪ್ಯಾ ಕೇಳಿದ.

ಎದ್ದು ಕೂತಾಕಿನ ಶ್ರದ್ಧಾ, ಭರಕ್ಕನೆ ಒಂದು ಫೋಟೋ ಆಲ್ಬಮ್ ಒಳಗಿಂದ ತೆಗೆದಳು. ಒಂದು ಫೋಟೋ ತೆಗೆಯೋ ಅಬ್ಬರಕ್ಕ ಇನ್ನೂ ನಾಕು ಫೋಟೋ ಕಾಲಾಗ ಕೆಡವಿಕೊಂಡಿದ್ದು ಚೀಪ್ಯಾ ನೋಡಿದ ಆದ್ರ ಹುಚ್ಚ ಖೋಡಿ ಶ್ರದ್ಧಾ ಮಾತ್ರ ನೋಡಿರಲಿಲ್ಲ.

ನೋಡ್ರೀ ಮಾಮಾ ನಿಮ್ಮ ಲಗ್ನದ ರೆಡ್ ಅಂಡ್ ವೈಟ್ ಫೋಟೋ!! ಸೋ ಸ್ವೀಟ್!! ಸೋ ಕ್ಯೂಟ್!! ಏನ್ ಮಾಮಾ, ಬಿಳೆ ಧೋತ್ರದ ಒಳಗ ಕೆಂಪ್ ಚಡ್ಡಿ ಹಾಕ್ಕೊಂಡು ಫುಲ್ ರೆಡ್ ಅಂಡ್ ವೈಟ್ ಆಗಿ ಫುಲ್ ಚಮಕ್ ಚಮಕ್ ಲುಕ್ ಕೊಟ್ಟೀರಲ್ಲಾ!? ಖೀ ಖೀ, ಅಂತ ಚೀಪ್ಯಾನ ಅಣಗಿಸಿಕೋತ್ತ ಶ್ರದ್ಧಾ ನಕ್ಕಳು. ಚೀಪ್ಯಾನ ರೆಡ್ ಅಂಡ್ ವೈಟ್ ಕಥಿ ಬಗ್ಗೆ ಹಿಂದೆ ಬರದಿದ್ದೆ ನೋಡ್ರೀ. ಇಲ್ಲದ.

ಸಾಕು ಸುಮ್ಮ ಕೂಡವಾ ಶ್ರದ್ಧಾ. ಶ್ರದ್ಧಾ ಶ್ರದ್ಧಾ!! - ಅಂತ ಚೀಪ್ಯಾ ಒಂದು ತರಹದ ಆತಂಕ ವ್ಯಕ್ತಪಡಿಸಿದ.

ಏನಾತ್ರೀ ಮಾಮಾ? - ಅಂತ ಶ್ರದ್ಧಾ ಕೇಳ್ಯಾಳ.

ಚೀಪ್ಯಾಗ ಶ್ರದ್ಧಾನ ಕಾಲಾಗ ಬಿದ್ದು ನಲುಗಿತ್ತಿರುವ ಫೋಟೋ ಕಂಡು ಅದರ ಮ್ಯಾಲೆ ಗಮನ. ಶ್ರದ್ಧಾಗ ಮಾತ್ರ ತಾನು ಆಲ್ಬಮ್ ನಿಂದ ಫೋಟೋ ತೆಗೆಯೋವಾಗ ಫೋಟೋಗಳನ್ನು ಕೆಡವಿಕೊಂಡಿದ್ದು, ಅವು ತನ್ನ ಕಾಲಿನ ಕೆಳಗ ಬಿದ್ದು ಕಚಾಪಚಾ ಅಗ್ತಾ ಇರೋದಾಗಲಿ ಖಬರೇ ಇಲ್ಲ. ಅದೇನೋ ಅಂತಾರಲ್ಲಾ, 'ಏನೋ' ಬಂದಾಕಿಗೆ ನೆಲಾ ಕಾಣಂಗಿಲ್ಲ ಅಂತ. ನೆಲಾನೇ ಕಾಣದ ಶ್ರದ್ಧಾಗ ನೆಲದ ಮ್ಯಾಲೆ ಬಿದ್ದಿರುವ ಫೋಟೋ ಎಲ್ಲೆ  ಕಾಣಬೇಕು?

ಫೋಟೋ ಕೆಡವಿಕೊಂಡಿ, ಮ್ಯಾಲೆ ತೆಕ್ಕೋ ಅದು ಇದು ಅಂತ ಇಕಿಗೆಲ್ಲಿ ಹೇಳಿಕೋತ್ತ ಇರೋದು ಅಂತ ಹೇಳಿ, ಏ ಶ್ರದ್ಧಾ, ಸ್ವಲ್ಪ ಕಾಲೆತ್ತವಾ ಫೋಟೋ ತೆಕ್ಕೊತ್ತೇನಿ - ಅಂತ ಅಂದು ಬಿಟ್ಟಾನ ಚೀಪ್ಯಾ.

ಮಾಮಾ!!! ಏನಂದ್ರೀ???!!! - ಅಂತ ಚೀಪ್ಯಾನ ಕೊರಳಾಗ ನೇತಾಡುತ್ತಿದ್ದ ಕ್ಯಾಮೆರಾ ನೋಡಿಕೋತ್ತ, ಏನೋ ತಿಳಿದವಳಾಂಗ ಶ್ರದ್ಧಾ ಕೇಳ್ಯಾಳ. ಯಾಕೋ ಈ ಮಾಮಾನ ಮಸ್ಕಿರಿ ಜಾಸ್ತಿನೇ ಆಗ್ಲಿಕತ್ತ್ಯದ ಅಂತ ಅಕಿಗೆ ಅನ್ನಿಸಿರಬೇಕು.

ಹ್ಞೂ...ಕಾಲೆತ್ತೋದೇನು ಬ್ಯಾಡ ಬಿಡು. ಸ್ವಲ್ಪ ಲಂಗಾ ಎತ್ತಿಬಿಡು, ಫೋಟೋ ತೆಕ್ಕೊಂಡೇ ಬಿಡ್ತೇನಿ, ಅಂತ ಚೀಪ್ಯಾ desperate ಆಗಿ ಹೇಳ್ಯಾನ. ಶ್ರದ್ಧಾನ ಕಾಲಾಗ ಅವನ ಮದ್ವಿ ಫೋಟೋ ಕಚಾಪಚಾ ಆಗೋದು ನೋಡಿ ಚೀಪ್ಯಾಗ ಭಾಳ ಸಂಕಟ ಆಗ್ಲಿಕತ್ತಿತ್ತು.

ಈ ಸರೆ ಮಾತ್ರ ಶ್ರದ್ಧಾ ಊರಿಗೆಲ್ಲ ಕೇಳೋ ಹಾಂಗ, ಅಕ್ಕಾ!!! ರೂಪಕ್ಕಾ!!!ಅಣ್ಣಾ!!! ನಾಗಣ್ಣಾ!!! ಇಲ್ಲೆ ಬರ್ರಿ!!! ಲಗೂನ ಬರ್ರಿ!!! ಕಾಪಾಡ್ರೀ !!!ಬರ್ರಿ!!!! ಅಂತ ಲಬೋ ಲಬೋ ಹೊಯ್ಕೊಂಡು ಬಿಟ್ಟಾಳ.

ಚೀಪ್ಯಾ ಫುಲ್ ಘಾಬ್ರೀ. ಕಾಲಾಗ ಫೋಟೋ ಚಲ್ಲಿಕೊಂಡು, ಭಕ್ತ ಕುಂಬಾರ ಮಣ್ಣು ತುಳಿದಾಂಗ ಫೋಟೋ ತುಳಿಲಿಕತ್ತಿ, ಕಾಲೆತ್ತು, ಕಾಲಾಗ ಬಿದ್ದ ಫೋಟೋ ತೆಕ್ಕೊತ್ತೇನಿ ಅಂದ್ರ ಇಕಿ ಶ್ರದ್ಧಾ ಯಾಕ ಇಕಿ ಮಾನಭಂಗನೇ ಮಾಡಲಿಕ್ಕೆ ಬಂದೆನೋ ಅನ್ನವರಾಂಗ ಲಬೋ ಲಬೋ ಹೊಯ್ಕೊಳ್ಳಲಿಕತ್ತಾಳ ಅಂತ ತಿಳಿಯದೇ, ಏನಾತಾ ಶ್ರದ್ಧಾ? ಹೀಂಗ್ಯಾಕ ಹೊಯ್ಕೊಂಡು ಎಲ್ಲಾರನ್ನ ಕರೀಲಿಕತ್ತಿ? ಹಾಂ? ಹಾಂ? - ಅಂತ ಇನ್ನೋಸೆಂಟ್ ಆಗಿ ಚೀಪ್ಯಾ ಕೇಳ್ಯಾನ.

ಅಲ್ರೀ!!! ಕೊರಳಾಗ ಕ್ಯಾಮೆರಾ ಹಾಕ್ಕೊಂಡು, ಪ್ರಾಯದ ಹುಡುಗಿ ಮುಂದ ನಿಂತು, ಖಬರಿಲ್ಲದೆ, ಕಾಲೆತ್ತು ಫೋಟೋ ತೆಕ್ಕೊತ್ತೇನಿ, ಲಂಗಾ ಎತ್ತು ಫೋಟೋ ತೋಗೊತ್ತೇನಿ ಅಂದ್ರ ಏನ್ರೀ!!!??? ಹಾಂ???!!! ನಿಮ್ಮ ಉದ್ದೇಶ ಏನೇ ಇರಲೀ ಅಪಾರ್ಥ ಅಂತೂ ಆಗೇ ಆಗ್ತದ. ಅಲ್ಲಾ? ಇಲ್ಲೂ ಅದೇ ಆತು. ಅನಾಹುತ ಆತು. ಘೋರ ಅನಾಹುತ ಆತು.

ಶ್ರದ್ಧಾ ಅನ್ನೋ ಬಾಲೆ ಆ ಪರಿ ಕೂಗಿದ್ದನ್ನ ಕೇಳಿದ ಕರವಾ ಚೌತದ ಆಖ್ರೀ ರಸಂ ಮಾಡುತ್ತಿದ್ದ ರೂಪಾ ವೈನೀ ಮತ್ತ ಸ್ಟೋರ್ ರೂಂ ಒಳಗ ಕೂತು ಆವತ್ತಿನ ಕೋಟಾ 'ಹಳೆ ಮಂಗ್ಯಾ' ರಂ ಕುಡಿದು 'ರಂ'ಗಣ್ಣ ಆಗಿದ್ದ ನಾಗಣ್ಣ ಇಬ್ಬರೂ ಓಡಿ ಬಂದಾರ.

ಏನಾತಾ ಶ್ರದ್ಧಾ?! ಹಾಂ!? ಏನಾತು? ಆ ಪರಿ ಚೀರಿಕೊಂಡಿ. ದೆವ್ವಾ ನೋಡಿದವರ ಹಾಂಗ ಚೀರಿಕೊಂಡಿ. ಯಾಕಾ? ಏನಾತಾ? ಹೇಳಾ? - ಅಂತ ಶ್ರದ್ಧಾಗ ಕೇಳ್ಯಾರ ರೂಪಾ ಮತ್ತ ನಾಗಣ್ಣ.

ಅಕ್ಕಾ.....ಮಾಮಾ....ಮಾಮಾ.....ಅದು...ಅದು.... ಅಂತ ಚೀಪ್ಯಾನ ಒಂದು ತರಹದ ಆರೋಪಿ ತರಹ ನೋಡಿಕೋತ್ತ ಶ್ರದ್ಧಾ ಬಿಕ್ಕಳಿಸಿದಳು.

ಏನು ಮಾಡಿದ್ರು ಅವರು? - ಅಂತ ರೂಪಾ ವೈನಿ ಕೇಳ್ಯಾಳ.

ನನ್ನ ತಂಗಿಗೆ ಏನು ಮಾಡಿದ್ಯಲೇ ಚೀಪ್ಯಾ?! ಹಾಂ?! ಅಂತ ರಂ ಕುಡಿದು ರಂಗಾಗಿದ್ದ ರಂಗಣ್ಣ ಉರ್ಫ್ ನಾಗಣ್ಣ ಕೇಳ್ಯಾನ.

ಚೀಪ್ಯಾಗ ತಾನು ಮಾಡಿಕೊಂಡ ಅನಾಹುತದ ಅರಿವೇ ಇಲ್ಲ! ಹೋಗ್ಗೋ!!

ಹಾಂ?! ಏನಾತು? ನಾ ಏನ್ ಮಾಡಿನಾ ಶ್ರದ್ಧಾ? - ಅಂತ ಚೀಪ್ಯಾ ಇನ್ನೊಂಸೆಂಟ್ ಆಗಿ ಕೇಳ್ಯಾನ.

ಕೇಳೋದೆಲ್ಲಾ ಕೇಳಿ, ಮಾಡೋದೆಲ್ಲಾ ಮಾಡಿ, ಹ್ಯಾಂಗ ಕೇಳತಾರ ನೋಡು....ಅಕ್ಕಾ..... ರೂಪಕ್ಕಾ....ಅಣ್ಣಾ.... ನಾಗಣ್ಣಾ.... ಅಂತ ಶ್ರದ್ಧಾ ಮತ್ತ ಕಣ್ಣಾಗ ಮೂಗಾಗ ನೀರು ತಂದುಕೊಂಡು ಅತ್ತಾಳ.

ನೀ ಹೇಳವಾ....ಶ್ರದ್ಧಾ ಅವ್ವಿ....ಶ್ರದ್ಧಾ ಪುಟ್ಟಿ....ನೀ ಹೇಳವಾ....ಅಂತ ರೂಪಾ ವೈನಿ, ನಾಗಣ್ಣ ಇಬ್ಬರೂ ಕೂಡೆ ಶ್ರದ್ಧಾನ ರಮಿಸಿದರು.

ಅಕ್ಕಾ...ಅಕ್ಕಾ....ಈ ಮಾಮಾ....ನಿನ್ನ ಗಂಡ....ಇವತ್ತು ಸಂಜಿ ಮುಂದ ಆಫೀಸ್ ನಿಂದ ಬಂದಾಗಿಂದ ಹುಚ್ಚುಚ್ಚರೆ ಮಾತಾಡ್ಲಿಕತ್ತಾರ. ಅಸಹ್ಯ ಹೊಲಸ್ ಹೊಲಸ್ ಮಾತಾಡಿ ಏನೇನೋ ಅಂತಾರ. ಅಕ್ಕಾ.... ಅಂತ ಮತ್ತ ಶ್ರದ್ಧಾ ಹೊಯ್ಕೊಂಡಳು.

ಅವರು ಏನಂದ್ರ ಶ್ರದ್ಧಾ? - ಅಂತ ಮುಂದಿನ ವಿವರಣೆಗೆ ಕಾದಾರ.

ಮೊದಲು ಬಂದವರೇ, ಏನ್ ಶ್ರದ್ಧಾ ಚಿಗಳಿ ಏನು ಮಸ್ತ ಚೀಪಲಿಕತ್ತಿ ಏನರೆ ವಿಶೇಷ ಅದ ಏನು? ಅಂತ ಕೇಳಿದರು. ನನಗ ತಿಳಿಲೇ ಇಲ್ಲ. ಕೇಳಿದರ, ಹತ್ತರ ಕರದು, ಕಿವ್ಯಾಗ, ಶ್ರದ್ಧಾ ಹೀಂಗ ಚಿಗಳಿ ಯಾರು ಚೀಪ್ತಾರ ಹೇಳು? ಅಂತ ಅಂದ್ರು. ಗೊತ್ತಿಲ್ಲ ಅಂದ್ರ, ಕಣ್ಣು ಹೊಡೆದು, ಬಸಿರಿದ್ದವ್ರು. ಬಸರಿದ್ದಿ? ಇದ್ದೀ? ಇದ್ದೀ? ಅಂತ ಕೇಳಿದರು ಅಕ್ಕಾ..... ಅಕ್ಕಾ.... ಅಂತ ಶ್ರದ್ಧಾ ಚೀಪ್ಯಾನ ಭಾಂಡಾ ಬಿಚ್ಚಿದಳು.

ಹೌದೇನ್ರೀ? ಅಷ್ಟು ಸಣ್ಣ ಹುಡಿಗಿ ಜೋಡಿ ಇಂತಾ ಮಾತೇ ನಿಮ್ಮವು? ಹಾಂ? ಏನಾಗ್ಯದ ನಿಮಗ? ಹಾಂ? ಹೊತ್ತಿಲ್ಲಿದ ಹೊತ್ತಿನ್ಯಾಗ ಆ 'ನೈಯಾಗ್ರಾ' ಗುಳುಗಿ ತೊಗೊಂಡು ಕೂತಿರೇನು? ಆ ಹೊಲಸ್ ಗುಳಿಗಿ ಬಿಡ್ರೀ ಸಾಕು, ಅಂತ ರೂಪಾ ವೈನಿ ಚೀಪ್ಯಾಗ ಝಾಡಿಸಿದರು. ಚೀಪ್ಯಾ ನೈಯಾಗ್ರಾ ಅಂತ ಏನೋ ಗುಳಿಗಿ ತೊಗೋತ್ತಾನ. ನಿಶಕ್ತಿ ಕಮ್ಮಿ ಆಗಲಿ ಅಂತ.

ಇಲ್ಲ....ಇಲ್ಲ.. ರೂಪಾ... ಹಾಂಗೇನೂ ಇಲ್ಲ. ನನ್ನ ಮಾತ ನಂಬು ಮಾರಾಳ. ನಂಬು, ಅಂತ ಚೀಪ್ಯಾ ಏನೋ ವಿವರಣೆ ಕೊಡಲಿಕ್ಕೆ ಹೋಗ್ಯಾನ.

ಸುಮ್ಮ ಕೂಡ್ರೀ ನೀವು, ಅಂತ ಚೀಪ್ಯಾಗ ಝಾಡಿಸಿ, ನೀ ಹೇಳವಾ ಅವ್ವಿ. ಮತ್ತೇನು ಮಾಡಿದರು, ಅಂತ ರೂಪಾ ವೈನಿ ಶ್ರದ್ಧಾಗ ಕೇಳ್ಯಾರ. ಸಾಥ್ ಕೊಡಲಿಕ್ಕೆ ಕಿಕ್ ಬೇಕು ಅಂತ ಹೇಳಿ ನಾಗಣ್ಣ ಫುಲ್ 'ಹಳೆ ಮಂಗ್ಯಾ' ರಮ್ ಬಾಟಲಿಗೇ ಬಾಯಿ ಹಾಕಿ ಬಿಟ್ಟಾನ!

ಮುಂದ....ಮುಂದ....ಮಾಮಾ...ಮಾಮಾ.....ಮತ್ತಾ....ಮತ್ತಾ.....ಕ್ಯಾಮೆರಾ ತೊಗೊಂಡು ಬಂದು....ಶ್ರದ್ಧಾ ಕಾಲೆತ್ತು ಫೋಟೋ ತೆಕ್ಕೊತ್ತೇನಿ. ಲಂಗಾ ಎತ್ತು ಫೋಟೋ ತೆಕ್ಕೊತ್ತೇನಿ ಅಂತ ಅಂದ್ರು ಅಕ್ಕಾ!!!! - ಅಂತ ಶ್ರದ್ಧಾ ಫುಲ್ ಹೇಳಿ ಬಿಟ್ಟಾಳ. ಅಕಿಗೆ ಹ್ಯಾಂಗ ತಿಳದದ ಹಾಂಗ ಹೇಳಿ ಬಿಟ್ಟಾಳ.

ಈಗ ಫುಲ್ ಕೇಸ್ ಫಿಟ್ ಆಗಿ ಬಿಡ್ತು ಚೀಪ್ಯಾನ ವಿರುದ್ಧ. ಕೊರಳಾಗ ನೇತಾಡುತ್ತಿದ್ದ ಕೆಮೆರಾ ಜೀವಂತ ಸಾಕ್ಷಿ ಬ್ಯಾರೆ. ಚೀಪ್ಯಾಗ ಕೊರಳಾಗ ಕ್ಯಾಮೆರಾ ಬದಲಿ ಹಾವಾದ್ರೂ ಇರಬಾರದೇ ದೇವರೇ ಅನ್ನಿಸಿಬಿಡ್ತು. ಹೂವು ಹಾವಾದರೇನು? ಕ್ಯಾಮೆರಾ ಹಾವಾಗಲಿಲ್ಲ.

ಹೌದೇನ್ರೀ!!!!!!???????? - ಅಂತ ರೂಪಾ ವೈನಿ ಜೋರಾಗಿ ಒದರಿ ಕೇಳಿದರು.

ಹೌದೇನಲೇ ಹಲ್ಕಟ್ ಸೂಳಿಮಗನೇ!? ಹಾಂ!? ಅಕ್ಕನ್ನ ಲಗ್ನ ಆದ್ರಾ ತಂಗಿ ಫ್ರೀ ಅಂತ ತಿಳಕೊಂಡು ನನ್ನ ಸಣ್ಣ ತಂಗಿ ಜೋಡಿ ಮಸ್ಕಿರಿ ಮಾಡ್ತಿ ಏನಲೇ!? - ಅಂತ ಕೈ ಎತ್ತಿಕೊಂಡು, ಜೋಲಿ ಹೊಡಕೋತ್ತ ನಾಗಣ್ಣ ಉರ್ಫ್ ತೂತ್ ನಾಗ್ಯಾ ಬಂದು, ಜೋಲಿ ತಪ್ಪಿ, ಸೋಫಾ ಮ್ಯಾಲೆ ಧಡ್ ಅಂತ ಬಿದ್ದು, ನಿನ್ನ ಇವತ್ತು ಹೆಣಾ ಎತ್ತತೆನಲೇ ಚೀಪ್ಯಾ, ಬಿಡಂಗಿಲ್ಲ ಇವತ್ತು ನಿನ್ನ, ಹ್ಞೂ... ಹಾಂ.... ಅನಕೋತ್ತ ಫುಲ್ ಗುರ್ ಗುರ್ ಅಂತ ಗೊರಕಿ ಹೊಡಿಲಿಕ್ಕೆ ಶುರು ಮಾಡಿಬಿಟ್ಟ ನಾಗಣ್ಣ. ನಶಾ ಜಾಸ್ತಿ ಆಗಿರಬೇಕು ಹಳೆ ಮಂಗ್ಯಾ ರಮ್ಮಿಂದು.

ರೂಪಾ....ರೂಪಾ....ಇಲ್ಲೆ ಕೇಳಿಲ್ಲೆ. ನಿನ್ನ ಕರವಾ ಚೌತದ ಫೋಟೋ ತೆಗೆಯೋಣ ಅಂತ ಕ್ಯಾಮೆರಾ ಹೊರಗ ತೆಗದೆ. ಇಲ್ಲೆ ಬಂದು ನೋಡಿದರ ಇಕಿ ಶ್ರದ್ಧಾ ನಮ್ಮ ಲಗ್ನದ ಆಲ್ಬಮ್ ನಿಂದ ಫೋಟೋ ಕೆಳಗ ಕೆಡವಿಕೊಂಡು ಕೂತಿದ್ದಳು. ಕಾಲೆತ್ತು ಫೋಟೋ ತೆಕ್ಕೊತ್ತೇನಿ ಅಂದೆ. ಅಕಿಗೆ ತಿಳಿಲಿಲ್ಲ. ಹೋಗ್ಲಿ, ಸ್ವಲ್ಪ ಲಂಗಾ ಆದರೂ ಎತ್ತವಾ ಫೋಟೋ ತೆಕ್ಕೊತ್ತೇನಿ ಅಂದೆ. ನಾ ತೆಕ್ಕೊತ್ತೇನಿ ಅಂದಿದ್ದು ನೆಲದ ಮ್ಯಾಲೆ ಬಿದ್ದಂತ ಫೋಟೋ. ಅಕಿ ಏನೋ ತಿಳಕೊಂಡು, ಚೀರಿಕೊಂಡರ ನಂದು ಏನು ತಪ್ಪು ರೂಪಾ? - ಅಂತ ಚೀಪ್ಯಾ ಗೋಗರಿದಾನ ಹೆಂಡ್ತಿ ಮುಂದ. ಗಡ ಗಡ ನಡಗುತ್ತ ಗಿಡ್ಗಿಡಾಯಾ ಚೀಪ್ಯಾ!

ಕರವಾ ಚೌತದ ಕಾರಣ ಮುಂಜಾನಿಂದ ಉಪವಾಸಿದ್ದ ರೂಪಾ ವೈನಿ ತಲಿ ಈಗ ಫುಲ್ ಕೆಟ್ಟು ಹೋತು. ಮೊದಲೆದಾಗಿ ತಂಗಿ ಜೋಡಿ ಹೊಲಸ್ ಹೊಲಸ್ flirt ಮಾಡ್ಯಾರ, ಮ್ಯಾಲಿಂದ ಮುಚ್ಚಿಗೊಳ್ಳಲಿಕ್ಕೆ ಬ್ಯಾರೆ ನೋಡ್ತಾರ. ಕದ್ದು ಮೇಯೋ ಪ್ಲಾನ್ ಇದ್ದಂಗ ಅದ ಅಂತ ಸಿಟ್ಟಿಗೆದ್ದವರಾ ರೂಪಾ ವೈನಿ ಫುಲ್ ಫಾರ್ಮಿಗೆ ಬಂದು ಬಿಟ್ಟಾರ.

ನಿಮ್ಮ...ನಿಮ್ಮಾ...ನಿಮ್ಮ ಸಲುವಾಗಿ ನಾ ಮುಂಜಾನಿಂದ ಉಪವಾಸಿದ್ದು ಕರವಾ ಚೌತದ ವೃತಾ ಮಾಡಿಕೋತ್ತ ಕೂತೇನಿ. ನೀವು ನೋಡಿದರ ಇನ್ನೂ ಸ್ವೀಟ್ ಸಿಕ್ಸ್ಟೀನ್ ಕನ್ಯಾ ಆದ ನನ್ನ ತಂಗಿ ಶ್ರದ್ಧಾನ ಜೋಡಿ ಜಮ್ಮ ಚಕ್ಕ ಮಾಡಿಕೋತ್ತ, ಅಕಿ ಜೋಡಿ ಹೊಲಸ್ ಹೊಲಸ್ flirt ಮಾಡಿಕೋತ್ತ ಕೂತೀರಿ? ಹಾಂ? ನಿಮ್ಮ ಜನ್ಮಕಿಷ್ಟು ಬೆಂಕಿ ಹಾಕಾ! - ಅಂದವರೇ ಚೀಪ್ಯಾಗ ಹಿಡಕೊಂಡು ನಾಕು ತಟ್ಟಿ ಬಿಟ್ಟಾರ ರೂಪಾ ವೈನೀ.

ಹೋಗ್ಗೋ!!!!

ಕೊರಳಾಗಿನ ಕ್ಯಾಮೆರಾ ಕಿತ್ತಗೊಂಡು, ಕ್ಯಾಮೆರಾ ಒಳ್ಳೆ ಬಾರ್ಕೋಲಿನ ಹಾಂಗ ಮಾಡಿ, ದನಕ್ಕ ಬಾರುಕೋಲಿಲೆ ಕಟದಾಂಗ ಕಟಿದು ಬಿಟ್ಟಾರ ರೂಪಾ ವೈನೀ. ಸಿಟ್ಟು ಇಳದಿಲ್ಲ ಅಂತ ಸಾಂಬ್ರಾಣಿ ಚಪ್ಪಲ್ ಅಂಗಡಿಯೊಳಗ ಮನ್ನಿ ಮನ್ನಿ ಮಾತ್ರ ತೊಗೊಂಡ ಹೊಸಾ ಹೈ ಹೀಲ್ಡ್ ಚಪ್ಪಲಿ ಹೊರಗ ತಂದು, ಕೈಯ್ಯಾಗ ವಿಕೆಟ್ ಕೀಪರ್ ಗ್ಲೌಸ್ ಗತೆ ಹಾಕ್ಕೊಂಡು, ಚೀಪ್ಯಾನ ತಲಿನೇ ಮಿಡ್ಲ್ ಸ್ಟಂಪ್ ಅಂತ ಗುರಿ ಇಟ್ಟು, ಸ್ಟಂಪ್ ಔಟ್ ಮ್ಯಾಲೆ ಸ್ಟಂಪ್ ಔಟ್ ಮಾಡಿ ಬಿಟ್ಟಾರ ರೂಪಾ ವೈನೀ. ಗಲ್ಲಾ, ಮಸಡಿ, ತಲಿ ಎಲ್ಲಾ ಫುಲ್ ಸ್ಕ್ರ್ಯಾಪ್. ಸಾಂಬ್ರಾಣಿ ಚಪ್ಪಲ್ ಅಂಗಡಿ ಹೈ ಹೀಲ್ಡ್ ಚಪ್ಪಲ್ ಅಂದ್ರ ಭಾಳ ಡೇಂಜರ್. ಅದಕ್ಕಾ ಚೀಪ್ಯಾನ ಗಲ್ಲಾ ಊದಿ ಉದ್ದಿನ ವಡಿ ಶೇಪಿಗೆ ಬಂದದ ಅಂತ ಗೊತ್ತಾತು.

ಹೋಗ್ಗೋ ಚೀಪ್ಯಾ!!! ದೊಡ್ಡ ಅನಾಹುತ ಮಾಡಿಕೊಂಡು ಬಿಟ್ಟ್ಯಲ್ಲಪಾ. ಹೀಂಗ ಆಗಬಾರದಿತ್ತೋ. ನಮ್ಮ ಕರೀಮ ಸಹಿತ ಹಿಂದಿನ ವರ್ಷ ಇದೇ ಟೈಮ್ ಒಳಗ ಹೀಂಗೆ ಅವನ ನಾದನಿಗೆ ಏನೋ ಅನ್ನಲಿಕ್ಕೆ ಹೋಗಿ ಹೀಂಗ ಗಜ್ಜು ತಿಂದಿದ್ದ ನೋಡಪಾ, ಅಂತ ಹೇಳಿದೆ.

ಏನಾಗಿತ್ತು ಅವನ ಕೇಸಿನ್ಯಾಗ? - ಅಂತ ಚೀಪ್ಯಾ ಕೇಳಿದ.


ಹಾಂಗೇನು? ಅಂದ್ರ  ನಾ ಒಬ್ಬನೇ ಏನೂ ಅಲ್ಲ ತೊಗೋ, ಹೆಂಡ್ತಿ ಕಡೆ ಗಜ್ಜು ತಿಂದವಾ, ಅಂತ ಚೀಪ್ಯಾ ಸಮಾಧಾನ ಮಾಡಿಕೊಂಡ.

ಹ್ಞೂ...ಅವತ್ತು ನೀ ಕರವಾ ಚೌತ್ ಪೂಜಿಗೆ ಹೊಂಟಿ ಅಂದಾಗ 'ಕೆರ'ವಾ ಚೌತ್ ಏನಲೇ ಅಂತ ಚ್ಯಾಸ್ಟಿ ಮಾಡಿದ್ದಿವಿ. ಅದಕ್ಕ ಸರಿ ಆಗೋ ಹಾಂಗ ಕೆರದಿಂದಲೇ ಪೂಜಿ ಮಾಡಿಸಿಕೊಂಡು ಬಿಟ್ಟಿಯಲ್ಲಪಾ ಚೀಪ್ಯಾ? - ಅಂತ ಅನುಕಂಪ ವ್ಯಕ್ತಪಡಿಸಿದೆ.

ಹ್ಞೂ...ಹ್ಞೂ....ನಮ್ಮ ಬ್ಯಾಡ್ ಲುಕ್ ಫುಲ್ ಖರಾಬ್ ಇತ್ತ....ಹ್ಞೂ... ಹ್ಞೂ - ಅಂತ ಚೀಪ್ಯಾ ಗೋಣಾಡಿಸಿದ.

ವಿ. ಸೂ: ಧಾರವಾಡ ಕಡೆ ಅಕ್ಕನ ಗಂಡ ಭಾವನಿಗೆ ಮಾಮಾ ಅನ್ನುತ್ತಾರೆ. ಯಾಕೋ ಏನೋ! ಅದಕ್ಕೇ ಚೀಪ್ಯಾಗೆ ಅವನ ನಾದಿನಿ ಶ್ರದ್ಧಾ ಮಾಮಾ ಅಂದಿದ್ದು. ಮಾವ ಭಾವರಲ್ಲಿ confusion ಆಗದಿರಲೆಂದು ಈ ವಿಶೇಷ ಸೋಚನೆ.

ಮೂಲ: ಯಾವದೋ ಒಂದು ಇಂಟರ್ನೆಟ್ ಜೋಕ್. ಯಾರೋ ಬಸ್ಸಲ್ಲಿ ಹೋಗ್ತಾ ಇರೋವಾಗ, ಅವರ ಕೈಯಲ್ಲಿರುವ ಫೋಟೋಗಳು ಮುಂದೆ ನಿಂತಿರುವ ಮಹಿಳೆಯ ಕಾಲ ಕೆಳಗಡೆ ಬಿದ್ದು ಬಿಡುತ್ತವೆ. ಪಾಪ ಅವನ ಖರಾಬ್ ನಸೀಬ! ರೀ, ಮೇಡಂ, ಸ್ವಲ್ಪ ಕಾಲೆತ್ತಿ ಅಥವಾ ಸೀರೆ ಎತ್ತಿ. ಪ್ಲೀಸ್. ಫೋಟೋ ತೆಕ್ಕೊಂಡು ಬಿಡ್ತೀನಿ, ಅಂತ ಅಂದಿದ್ದೆ ಅಂದಿದ್ದು ಅವನ ಕಥೆ ಡಮಾರ್! ಎಲ್ಲರಿಂದ ಧರ್ಮದೇಟು. ಆ ಎರಡು ಲೈನ್ ಜೋಕು ಈ ಬ್ಲಾಗ್ ಪೋಸ್ಟಿಗೆ ಸ್ಪೂರ್ತಿ (!?)

Tuesday, November 26, 2013

26/11 ದಾಳಿಯ ಹುತಾತ್ಮ ಅಶೋಕ ಕಾಮಟೆಯವರ ಅಜ್ಜನೂ, ಶ್ರೀ ಕರಮರಕರರೂ, ಧಾರವಾಡದ ಸ್ವಾತಂತ್ರ ಚಳುವಳಿಯ ದಿನಗಳೂ.....

1940 ರ ಟೈಮ್. ಆಗ ತಾನೇ ಧಾರವಾಡದ ಸುಪರಿಂಟೆಂಡೆಂಟ್ ಆಫ್ ಪೋಲಿಸ್ ಎಂದು ಅಧಿಕಾರ ವಹಿಸಿಕೊಂಡಿದ್ದೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟ ಜೋರಾಗಿ ನೆಡದಿತ್ತು. ಧಾರವಾಡದಲ್ಲಿಯೂ ಬೇಕಾದಷ್ಟು ಮಂದಿ ದೊಡ್ಡ ಮಟ್ಟದ ಕಾಂಗ್ರೆಸ್ ನಾಯಕರು, ಹೋರಾಟಗಾರರು ಇದ್ದರು.

ಅವರಲ್ಲಿ ನಮ್ಮ ಪೊಲೀಸರಿಗೆ ತುರ್ತಾಗಿ ಬೇಕಾಗಿದ್ದವರು ಶ್ರೀ ಕರಮರಕರ ಮತ್ತು ಶ್ರೀ ಹುಕ್ಕೇರಿಕರ. ನಾನು ಬಂದು ಲೋಕಲ್ ಪೋಲೀಸರನ್ನು ಗರಮ್ ಮಾಡಿದ್ದೇ ಮಾಡಿದ್ದು, ಈ ಇಬ್ಬರೂ ನಾಯಕರು ಗಾಯಬ್ ಆಗಿ  ಬಿಟ್ಟರು. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. 

ನನಗೆ ಗೊತ್ತಾಯಿತು, ಇದು ಯಾರೋ ಪೋಲೀಸರದೇ ಕಿತಾಪತಿ ಅಂತ. ಪೋಲೀಸರಲ್ಲೇ ಯಾರೋ ಅವರಿಗೆ ಸುಳಿವು ಕೊಟ್ಟು ಧಾರವಾಡದಿಂದ ನಾಪತ್ತೆಯಾಗುವಂತೆ ಮಾಡಿದ್ದಾರೆ ಅಂದು. ಲೋಕಲ್ ಪೋಲೀಸರನ್ನು ಕರೆದು ಸರಿಯಾಗಿ ಗದರಿಸಿದೆ ಮತ್ತು ನಾಪತ್ತೆಯಾದವರನ್ನು ಪತ್ತೆ ಮಾಡಲು ಬೇರೆ ತಂತ್ರಗಳ ಬಗ್ಗೆ ಯೋಚಿಸತೊಡಗಿದೆ. 

ಇಂತಹ ಸಮಯದಲ್ಲಿ ಶ್ರೀ ಕರಮರಕರ ಬರೆದಂತಹ ಪತ್ರವೊಂದು ನನ್ನ ಕೈಸೇರಿತು. ಪತ್ರಗಳ ಮೇಲೆ ಸರ್ಕಾರಿ ಸೆನ್ಸಾರ್ ಇದ್ದಂತಹ ಸಮಯ. ಹೀಗಾಗಿ ಪೋಲಿಸ್ ಅಧಿಕಾರಿಯಾದ ನಾನು ಅಂತಹ ಪತ್ರಗಳನ್ನು ಓದಲೇ ಬೇಕಾಗಿತ್ತು. ಶ್ರೀ ಕರಮರಕರ ಮುಂಬೈಯಿಂದ ತಮ್ಮ ಪತ್ನಿಗೆ ಬರದಂತಹ ಪತ್ರ ಅದಾಗಿತ್ತು. ಓದಿದ ನಂತರ ಯಾಕೋ ಪಾಪ ಅನ್ನಿಸಿ, ಆ ಪತ್ರದ ಸುದ್ದಿ ಅಷ್ಟಕ್ಕೇ ಬಿಟ್ಟು, ಆ ಪತ್ರ ಹರಿದು ಹಾಕಿದೆ. 

ಮತ್ತೆ ಸ್ವಲ್ಪ ದಿನಗಳಲ್ಲಿಯೇ ಮತ್ತೊಂದು ಪತ್ರ ಶ್ರೀ ಕರಮರಕರ ಅವರಿಂದ ಬಂತು. ಮತ್ತೆ ಪತ್ನಿಗೆ. ಈ ಸಲ ಹಾಗೆಯೇ ಬಿಡುವಂತೆ ಇರಲಿಲ್ಲ. ಬಾಂಬೆ ಪೋಲೀಸರ ಸಹಾಯದಿಂದ ಪತ್ತೆ ಮಾಡಿ, ಚೌಪಾಟಿ ಬೀಚಿನ ಮೇಲೆ ತಿರುಗುತ್ತಿದ್ದ ಕರಮರಕರ ಅವರನ್ನು ಧಾರವಾಡ ಪೊಲೀಸರು ಬಂಧಿಸಿದರು. 

ಕರಮರಕರ ಅವರ ಬಂಧನದ ಸುದ್ದಿ ಮತ್ತು ಅವರನ್ನು ಧಾರವಾಡಕ್ಕೆ ತರುವ ಸುದ್ದಿ ಧಾರವಾಡದಲ್ಲಿ ದೊಡ್ಡ ಮಟ್ಟಿನ ಸಂಚಲನ ಉಂಟುಮಾಡಿತ್ತು. ದೊಡ್ಡ ಪ್ರಮಾಣದಲ್ಲಿ ಜನರು ಧಾರವಾಡ ರೈಲ್ವೆ ಸ್ಟೇಷನ್ ನಲ್ಲಿ ಜಮೆಯಾಗಿದ್ದರು. ನಾನೂ ಸಹ ಸುಮಾರು ಐವತ್ತು ಶಸ್ತ್ರಸಜ್ಜಿತ ಪೊಲೀಸರೊಂದಿಗೆ ರೈಲ್ವೆ ಸ್ಟೇಷನ್ ಬಂದೋಬಸ್ತಿನ ಮೇಲಿದ್ದೆ. ಕರಮಕರ ಸೀದಾ ರೈಲ್ವೆ ಸ್ಟೇಷನ್ನಿಗೆ ಬಂದರೆ ದೊಡ್ಡ ಮಟ್ಟದ ಗಲಭೆ ಆಗಬಹುದು ಅಂತ ಅಂದಾಜಿದ್ದ ನಾನು ಎಲ್ಲ ತಯಾರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಕೂಡಿದ್ದ ಜನರಿಗೆ ಗೊತ್ತಿಲ್ಲದ್ದು ಅಂದರೆ ಧಾರವಾಡಕ್ಕೆ ಮೂರ್ನಾಕು ಮೈಲು ದೂರವಿದ್ದಾಗಲೇ ಸಿಗ್ನಲ್ ಒಂದರಲ್ಲಿ ಕರಮಕರ್ ಅವರನ್ನು ಇಳಿಸಿಕೊಂಡಿದ್ದ ಪೋಲಿಸರು ರಹಸ್ಯವಾಗಿ ಅವರನ್ನು ಪೋಲಿಸ್ ಹೆಡ್ ಕ್ವಾರ್ಟರ್ಸ್ ಗೆ ಕರೆದೊಯ್ದಿದ್ದರು!

ರೈಲು ಬಂತು. ಕರೆತರಲು ಹೋಗಿದ್ದ ಪೋಲಿಸರಾಗಲಿ, ಕರಮರಕರ್ ಅವರಾಗಲಿ ರೈಲಿನಿಂದ ಇಳಿಯಲಿಲ್ಲ. ಕರಮರಕರ ಎಲ್ಲಿ? ಯಾಕೆ ಬಂದಿಲ್ಲ? - ಅಂತ ಕೂಡಿದ್ದ ಜನ ಗದ್ದಲ ಶುರು ಮಾಡಿದರು. ನನಗೇನು ಗೊತ್ತು? ನಾನೂ ಅವರನ್ನೇ ಹುಡುಕುತ್ತಿದ್ದೇನೆ, ಅಂತ ಎಲ್ಲರೂ ನಂಬುವಂತೆ ಹೇಳಿದೆ. 

ಹೀಗೆ ಕರಮರಕರ ಅವರನ್ನು ರಹಸ್ಯವಾಗಿ ಸಾಗಿಸಿದ್ದು ಒಂದು ದೊಡ್ಡ ಸಾಧನೆಯೇ ಅಂತ ನನ್ನ ಭಾವನೆ. ಇಲ್ಲದಿದ್ದರೆ ಆ ಕಾಲದಲ್ಲಿ ಸಂದರ್ಭ ಇಷ್ಟು ಗರಂ ಆಗಿತ್ತು ಅಂದರೆ, ರೈಲ್ವೆ ಸ್ಟೇಷನ್ ನಲ್ಲಿ ದೊಡ್ಡ ಗಲಭೆ ಆಗಿ, ಪೊಲೀಸರು ಲಾಠಿ ಚಾರ್ಜ್, ಗೋಲೀಬಾರ್ ಮಾಡಿ ಎಷ್ಟು ಜನರಿಗೆ ಗಾಯಗಳಾಗಬೇಕಿತ್ತೋ, ಎಷ್ಟು ಜನರು ಸಾಯಬೇಕಿತ್ತೋ. 

ಧಾರವಾಡದ ಶಾಣ್ಯಾ ಜನ ಏನು ಹಂಗೆಲ್ಲಾ ಸುಮ್ಮನೆ ಬಿಡೋ ಜನ ಅಲ್ಲ. ಮರುದಿವಸ ರೈಲ್ವೆ ಸ್ಟೇಷನ್ ನಲ್ಲಿ ಸೇರಿದ್ದಕ್ಕಿಂತ ದೊಡ್ಡ ಗುಂಪೊಂದು ಟೌನ್ ಪೋಲಿಸ್ ಸ್ಟೇಷನ್ ಮುಂದೆ ಬಂದು ಗದ್ದಲ ಶುರು ಮಾಡಿತು. ಕರಮರಕರ ಎಲ್ಲಿ? ಎಲ್ಲಿ ಅವರನ್ನು ಹುಗಿಸಿಟ್ಟಿದ್ದೀರಿ? ನಮಗೆ ಅವರನ್ನು ನೋಡಬೇಕು, ಅಂತ ಒಂದೇ ಸಮನೆ ಗದ್ದಲ. ಅಷ್ಟರಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಲು ಆರಂಭಿಸಿದರು. ಆ ಕಾಲದಲ್ಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿದ್ದವ ಒಬ್ಬ ಬ್ರಿಟಿಷ್ ಅಧಿಕಾರಿ. ಅವನಿಗೆ ಸಿಕ್ಕಾಪಟ್ಟೆ tension ಶುರು ಆಯಿತು. ಬೇಗ ಪರಿಸ್ಥಿತಿ ಕಂಟ್ರೋಲ್ ಮಾಡಿ. ಎಷ್ಟು ಬೇಕೋ ಅಷ್ಟು ಶಕ್ತಿ ಉಪಯೋಗಿಸಿ. ಗೋಲಿಬಾರ್ ಬೇಕಾದರೂ ಮಾಡಿ. ಒಟ್ಟಿನಲ್ಲಿ ಜನ ಹೋಗಬೇಕು. ಗದ್ದಲ ಕಡಿಮೆ ಆಗಬೇಕು. ಅಷ್ಟೇ, ಅಂತ ಖಡಕ್ಕ್ ಆರ್ಡರ್ ಮೇಲಿನ ಸಾಹೇಬರಿಂದ ಬಂತು.

ಬೇರೆ ಯಾರೋ ಆಗಿದ್ದರೆ ಪರಿಸ್ಥಿತಿ ನಿಭಾಯಿಸಲು ಗೋಲಿಬಾರೇ ಮಾಡುತ್ತಿದ್ದರೋ ಏನೋ. ಆದ್ರೆ ನನಗೆ ಅನಗತ್ಯ ಹಿಂಸೆಯ ಜರೂರತ್ ಕಾಣಲಿಲ್ಲ. ಗಲಭೆ ಮಾಡುತ್ತಿರುವರಲ್ಲೇ ಎದ್ದು ಕಾಣುತ್ತಿದ್ದ ನಾಲ್ಕಾರು ಹುಡುಗರನ್ನು ಕರೆದೆ. ಬಂದರು. ನೋಡ್ರೀಪಾ, ನಿಮ್ಮ ಕರಮರಕರ ಸಾಹೇಬರು ನಮ್ಮ ಪೋಲಿಸ್ ಸ್ಟೇಷನ್ ಒಳಗ ಇಲ್ಲ. ಬೇಕಾದ್ರ ನೀವೇ ಫುಲ್ ಅಡ್ಯಾಡಿ, ನೋಡಿಕೊಂಡು ಬಂದು ಖಾತ್ರಿ ಮಾಡಿಕೊಳ್ಳಿ, ಅಂತ ಹೇಳಿದೆ. ಮೊದಲು ಅವರಿಗೆಲ್ಲ ಫುಲ್ ಆಶ್ಚರ್ಯ. ಗಲಭೆ ಮಾಡುತ್ತಿದ್ದ ಜನರೊಂದಿಗೆ ಪೋಲೀಸರ ಈ ತರಹದ ಸದ್ವರ್ತನೆ! ನ ಭೂತೋ ನ ಭವಿಷ್ಯತಿ! ಅದೂ ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದ ಅಧಿಕಾರಿಯಿಂದ ಇಷ್ಟು ಒಳ್ಳೆಯ ವರ್ತನೆ! ಆದರೂ ಸುಧಾರಿಸಿಕೊಂಡ ಚಳುವಳಿಗಾರರು, ಪೋಲಿಸ್ ಸ್ಟೇಷನ್ ಹೊಕ್ಕು, ಎಲ್ಲಾ ಕಡೆ ಜಾಲಾಡಿ, ತಮ್ಮ ನಾಯಕ ಕರಮರಕರ ಇಲ್ಲ ಅಂತ ಖಾತ್ರಿ ಆದ ಮ್ಯಾಲೆ ಹೊರಟು ಹೋದರು. ಅವರ ಹಿಂದೆಯೇ ಸ್ಟೇಷನ್ ಮುಂದೆ ಗದ್ದಲ ಮಾಡುತ್ತಿದ್ದ ಗುಂಪು ಸಹ ಕರಗಿತು. 

ಆವತ್ತಿನ ಪರಿಸ್ಥಿತಿ ಇಷ್ಟು ಗಂಭೀರವಿತ್ತು ಅಂದರೆ ಪಾಲಕರು ಮತ್ತು ಇತರೆ ಸಹೃದಯರು ಗಾಯಾಳುಗಳಿಗೆ ಸುಶ್ರೂಷೆ ಮಾಡಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಯಾರಿಗೂ ಇಷ್ಟು ಸಲೀಸಾಗಿ ಆವತ್ತಿನ ಪರಿಸ್ಥಿತಿ ಹತೋಟಿಗೆ ಬಂದೀತು ಅಂತ ಅನ್ನಿಸಿರಲಿಲ್ಲ. ಪೊಲೀಸರು ಗೋಲಿಬಾರ್ ಮಾಡಿಯೇ ಮಾಡುತ್ತಾರೆ, ಒಂದಿಷ್ಟು ಹೆಣಗಳು ಉರುಳಿಯೇ ಉರುಳುತ್ತವೆ ಅಂತ ತಿಳಿದು ಖಾಸಗಿ ambulance ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಧಾರವಾಡದ ಸಿವಿಲ್ ಹಾಸ್ಪಿಟಲ್ ಎಲ್ಲದಕ್ಕೂ ರೆಡಿ ಆಗಿತ್ತು. ಪುಣ್ಯಕ್ಕೆ ಅಂತಹ ಸಂದರ್ಭ ಬರಲಿಲ್ಲ. 

ಈ ರೀತಿ ಮಾನವೀಯತೆಯಿಂದ ಪೋಲಿಸ್ ಕೆಲಸ ಮಾಡಿದ ನನ್ನನ್ನು ಧಾರವಾಡದ ಜನ ತುಂಬಾ ಮೆಚ್ಚಿಕೊಂಡರು. ಅನೇಕ ಕಾಂಗ್ರೆಸ್ ನಾಯಕರೂ ಸಹ ನನ್ನ ಮಿತ್ರರಾದರು. ನಾನು ಕಠಿಣ ಹೃದಯದ ಪೋಲಿಸ್ ಅಧಿಕಾರಿಯಲ್ಲ ಅಂತ ಧಾರವಾಡದ ಜನ ಪ್ರಶಂಸಿಸಿದರು.

ಧಾರವಾಡದ ಜನ ನನ್ನ ಮೇಲೆ ಎಷ್ಟು ಪ್ರೀತಿ, ವಿಶ್ವಾಸ, ಮೆಚ್ಚುಗೆ ಇಟ್ಟಿದ್ದರು ಅನ್ನುವದಕ್ಕೆ ಒಂದು ಸಣ್ಣ ಉದಾಹರಣೆ. ನಾನು ಧಾರವಾಡ ಬಿಟ್ಟು ಸುಮಾರು ಮೂವತ್ತು ವರ್ಷಗಳ ನಂತರ ಅಂದರೆ 1976 ರ ಸಮಯ. ಒಮ್ಮೆ ಮಿತ್ರರೊಂದಿಗೆ ಸತ್ಯ ಸಾಯಿ ಬಾಬಾ ಅವರನ್ನು ಭೆಟ್ಟಿಯಾಗಲು ಪುಟಪರ್ತಿಗೆ ಹೋಗುತ್ತಿದ್ದೆ. ರೈಲಿನಲ್ಲಿ. ಸಹ ಪ್ರಯಾಣಿಕರೊಬ್ಬರು ಧಾರವಾಡದವರು ಅಂತ ಗೊತ್ತಾಯಿತು. ಧಾರವಾಡದ ದೊಡ್ಡ ವಕೀಲರು ಅವರು. ನನ್ನ ಮಿತ್ರರು ಅವರನ್ನು, ನಿಮಗೆ ನಿವೃತ್ತ ಪೋಲಿಸ್ ಅಧಿಕಾರಿ ಕಾಮಟೆ ಗೊತ್ತೇ? ಅಂತ ಕೇಳಿದರು. ಆ ಸಹ ಪ್ರಯಾಣಿಕರು ಒಮ್ಮೆಲೇ ಹುರುಪಿನಿಂದ, ಕಾಮಟೆ ಅವರನ್ನು ಮರೆಯಲಾದೀತೇ? ಅವರಂತಹ ಪೋಲಿಸ್ ಅಧಿಕಾರಿ ಮತ್ತೆ ಧಾರವಾಡಕ್ಕೆ ಬರಲೇ ಇಲ್ಲ. ಎಷ್ಟು ಒಳ್ಳೆಯ ಮನುಷ್ಯರಾಗಿದ್ದರು ಅವರು. ಕ್ವಿಟ್ ಇಂಡಿಯಾ ಚಳುವಳಿ ಕಾಲದಲ್ಲಿ ಧಾರವಾಡದ ಪರಿಸ್ಥಿಯನ್ನು ಅತ್ಯಂತ ನಾಜೂಕಾಗಿ ನಿಭಾಯಿಸಿದವರು ಕಾಮಟೆಯವರು. ಧಾರವಾಡದಲ್ಲಿ ಈಗಲೂ ಎಲ್ಲರೂ ಅವರನ್ನು ನೆನೆಸುತ್ತಾರೆ. ಈಗ ಎಲ್ಲಿದ್ದಾರೋ ಏನೋ ಕಾಮಟೆಯವರು ? - ಅಂತ ಹೇಳಿದರು. ಅದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಮೂವತ್ತು ವರ್ಷದ ಮೇಲೂ ಧಾರವಾಡದ ಜನ ನನ್ನ ಮೇಲೆ ಇಷ್ಟು ಪ್ರೀತಿ, ಮೆಚ್ಚುಗೆ ಇಟ್ಟಿದ್ದಾರಲ್ಲ ಅಂತ ಹೆಮ್ಮೆ, ಸಂತೋಷ ಎಲ್ಲ ಆಯಿತು. ನನ್ನ ಸ್ನೇಹಿತರು, ನನ್ನನ್ನು ತೋರಿಸುತ್ತ, ಇಲ್ಲೇ ಇದ್ದಾರೆ ನೋಡಿ. ಇವರೇ ನಿಮ್ಮ ಆಗಿನ ಪೋಲಿಸ್ ಸಾಹೇಬರು. ಕಾಮಟೆಯವರು, ಅಂತ ಆ ಧಾರವಾಡದ ವಕೀಲರಿಗೆ ನನ್ನನ್ನು ಮರು ಪರಿಚಯ ಮಾಡಿಕೊಟ್ಟರು. ವಯಸ್ಸಾಗಿ ತುಂಬ ಬದಲಾಗಿದ್ದ ನನ್ನನ್ನು ಅವರು ಗುರುತಿಸಿರಲಿಲ್ಲ. ಈಗ ಅವರಿಗೆ ನನ್ನ ಪರಿಚಯವಾಗಿ, ನೆನಪುಗಳು ಮರುಕಳಿಸಿ, ತುಂಬ ಹೊತ್ತಿನ ತನಕ ಮಾತಾಡಿದರು. 

ಹೀಗೆ ಧಾರವಾಡದ ಬಗ್ಗೆ, ಧಾರವಾಡದಲ್ಲಿ ತಮ್ಮ ಪೋಲಿಸ್ ಅವಧಿಯ ಬಗ್ಗೆ, ಆ ಸಮಯದ ಸವಾಲುಗಳ ಬಗ್ಗೆ, ಅವುಗಳನ್ನು ತಾವು ಹೇಗೆ ನಿಭಾಯಿಸಿದರು ಅನ್ನುವದರ ಬಗ್ಗೆ ಬರೆದವರು ಶ್ರೀ ನಾರಾಯಣರಾವ್ ಮಾರುತಿರಾವ್ ಕಾಮಟೆ

ನಾರಾಯಣರಾವ್ ಮಾರುತಿರಾವ್ ಕಾಮಟೆ ಅಂದರೆ ಭಾಳ ಜನರಿಗೆ ತಿಳಿಯಲಿಕ್ಕಿಲ್ಲ. ಅದೇ 26/11 ರ ಮುಂಬೈನಲ್ಲಿ ಆದ ಉಗ್ರರ ದಾಳಿಯಲ್ಲಿ, ಉಗ್ರರೊಂದಿಗೆ ಹೋರಾಡುತ್ತಾ ಪ್ರಾಣ ಕೊಟ್ಟ ಹುತಾತ್ಮ ಶ್ರೀ ಅಶೋಕ ಕಾಮಟೆಯವರ ಅಜ್ಜ (ತಂದೆಯವರ ತಂದೆ) ಅಂದರೆ ತಿಳಿದೀತು. 

ದಿವಂಗತ ಅಶೋಕ ಕಾಮಟೆಯವರ ಪತ್ನಿ ವಿನೀತಾ ಕಾಮಟೆ ತಮ್ಮ ಪತಿಯ ಮರಣಾನಂತರ 'To the last bullet' ಅನ್ನುವ ಪುಸ್ತಕ ಬರೆದಿದ್ದಾರೆ. ಅಶೋಕರ ಬದುಕಿನ ಒಂದು ಚಿತ್ರಣ ಕಟ್ಟಿಕೊಡುವ ಸಮಯದಲ್ಲಿ ವಿನೀತಾ ಕಾಮಟೆ ಅವರ ಕುಟುಂಬ ಹೇಗೆ ತಲೆಮಾರುಗಳಿಂದ ಸೈನ್ಯ, ಪೋಲಿಸ್ ಇಲಾಖೆಗಳಲ್ಲಿ ದೇಶ ಸೇವೆ ಮಾಡಿದೆ ಅನ್ನುವದನ್ನು ಹೇಳುತ್ತಾ ಪಿತಾಮಹ ನಾರಾಯಣರಾವ್ ಮಾರುತಿರಾವ್ ಕಾಮಟೆ ಅವರ ಪೋಲಿಸ್ ಸೇವೆ ಸ್ಮರಿಸಿದ್ದಾರೆ. ಹಿರಿಯ ಕಾಮಟೆಯವರ ದಿನಚರಿಯಿಂದಲೋ, ಅವರು ಬರೆದ ಪುಸ್ತಕದಿಂದಲೋ, ಪ್ರಕಟವಾಗದ ಹಸ್ತಪ್ರತಿಯಿಂದಲೋ ವಿನೀತಾ ಈ ವಿವರ ಬರೆದಿದ್ದಾರೆ ಅಂತ ಓದಿದ ನೆನಪು. 

ದಿವಂಗತ ಅಶೋಕ ಕಾಮಟೆ ಮೊದಲಿಂದಲೂ ಗಮನ ಸೆಳದ ಗಂಡೆದೆಯ ಪೋಲಿಸ್ ಆಫೀಸರ್. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಅಧಿಕಾರಿ. ಯಾರಿಗೂ ಕೇರೇ ಮಾಡದ ದಿಟ್ಟ ಅಧಿಕಾರಿ. ಇಲ್ಲದಿದ್ದರೆ ಎರಡು ಹಾಲಿ MLA ಗಳನ್ನು ಶಾಂತಿಭಂಗದ ಆಪಾದನೆ ಮೇಲೆ ಒದ್ದು ಲಾಕಪ್ ಒಳಗೆ ಹಾಕುವ ದಮ್ಮು ಇರುತ್ತಿರಲಿಲ್ಲ. ಅದನ್ನು ಮಾಡಿ, ಅದರ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿ, ಸೋಲಾಪುರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರು ಅಶೋಕ ಕಾಮಟೆ. ಮುಂದೆ ಬೋಸ್ನಿಯಾದಲ್ಲಿ ಭಾರತದ ಶಾಂತಿಪಡೆಯಲ್ಲೂ ಕೆಲಸ ಮಾಡಿದ್ದರು ಕಾಮಟೆ. ಒಳ್ಳೆಯ ಕೆಲಸ ಮಾಡಿದ್ದ ಅವರನ್ನು ಮುದ್ದಾಂ ಮುಂಬೈಗೆ ಹಾಕಲಾಗಿತ್ತು. ಅಡಿಷನಲ್ ಕಮಿಷನರ್ ಅಂತ ಅಲ್ಲಿದ್ದರು ಕಾಮಟೆ. 26/11/2008 ರಂದು ಉಗ್ರರ ದಾಳಿ ನೆಡದಾಗ ಆ ಕಾಲದ ಮುಂಬೈ ಪೋಲಿಸ್ ಕಮಿಷನರ್ ಹಸನ್ ಗಫೂರರಿಗೆ ಮೊದಲು ನೆನಪಾದ dare devil ಆಫೀಸರ್ ಅಂದರೆ ಅಶೋಕ ಕಾಮಟೆ. ಹೀಗಾಗಿ ಕಾಮಟೆ ಅವರ ಏರಿಯಕ್ಕೆ ಸಂಬಂಧವಿಲ್ಲದಿದ್ದರೂ ಕಾಮಟೆಯವರಿಗೇ ಬುಲಾವಾ ಹೋಗಿತ್ತು, ಪರಿಸ್ಥಿತಿ ನಿಯಂತ್ರಿಸಲು. ಉಗ್ರರೊಂದಿಗೆ ತಮ್ಮ AK - 47 ಹಿಡಿದು ಹೋರಾಡುತ್ತಲೇ ಕಾಮಟೆ ಇತರ ಇಬ್ಬರು ಅಧಿಕಾರಿಗಳೊಂದಿಗೆ ಹುತಾತ್ಮರಾದರು. ಶ್ರೀ ಕರ್ಕರೆ ಮತ್ತು ಶ್ರೀ ಸಲಸ್ಕರ್ ಆ ಇಬ್ಬರು ಇತರ ಅಧಿಕಾರಿಗಳು.


ಶ್ರೀ ಕರಮರಕರ - ಧಾರವಾಡ ಸೀಮೆಯ ಆ ಕಾಲದ ದೊಡ್ಡ ಸ್ವಾತಂತ್ರ ಹೋರಾಟಗಾರರು, ಸಮಾಜಸೇವಕರು ಇತ್ಯಾದಿ. ಅವರು ನೆಹರು ಸಂಪುಟದಲ್ಲಿ ಸಚಿವರಾಗಿದ್ದರು. ಕೆ.ಇ.ಬೋರ್ಡ್ ಶಾಲೆಯಲ್ಲಿ ಶಿಕ್ಷಕರೂ, ಶಾಲೆಯ ಉನ್ನತಿಗೆ ಕಾರಣರೂ ಆಗಿದ್ದರು. 

ಒಳ್ಳೆಯ ಪುಸ್ತಕ. 26/11 ಕ್ಕೆ ಇವತ್ತಿಗೆ ಐದು ವರ್ಷ. ಎರಡು ವರ್ಷದ ಹಿಂದೆ ಓದಿದ್ದ ಪುಸ್ತಕದ ಮೇಲೆ ಮತ್ತೆ ಕಣ್ಣಾಯಿಸಿದೆ. ಅರೆ! ಹುತಾತ್ಮ ಅಶೋಕ ಕಾಮಟೆಯವರಿಗೂ ಧಾರವಾಡಕ್ಕೂ ಪುರಾತನ ಸಂಬಂಧವಂದಿದೆಯಲ್ಲ ಅಂತ ನೆನಪಾಯಿತು. ಅದಕ್ಕೇ ಈ ಲೇಖನ.

Sunday, November 17, 2013

'ಭಾರತ ರತ್ನ' ಸೂಪರ್ ಕಂಡಕ್ಟರ್ ಡಾ. ಸಿಎನ್ನಾರ್ ರಾವ್ ಧಾರವಾಡಕ್ಕೆ ಬಂದಾಗ....ಕವಿವಿಯಲ್ಲಿ ಭಾಷಣ ಮಾಡಿದಾಗ

ಇವತ್ತು ಶನಿವಾರ ಮುಂಜಾನೆದ್ದು ಹಾಪ್ ಕಾಫೀ ಕುಡಕೋತ್ತ ಫೇಸ್ಬುಕ್ ಮ್ಯಾಲೆ ಕಣ್ಣಾಡಿಸಿಕೋತ್ತ ಇದ್ದಾಗ ಸಚಿನ್ ತೆಂಡುಲ್ಕರಗ 'ಭಾರತ ರತ್ನ' ಪ್ರಶಸ್ತಿ ಬಂದದ ಅಂತ ಸುಮಾರು ಮಂದಿ ಹಾಕಿದ ಪೋಸ್ಟ್ ನೋಡಿ ಆತು. ಆತು ಬಿಡ್ರೀ. ಒಬ್ಬ ಮಹಾನ ಕ್ರಿಕೆಟ್ ಆಟಗಾರ ರಿಟೈರ್ ಆದ. ಕಲೆ, ಕ್ರೀಡೆ ಎಲ್ಲದರಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಿದವರಿಗೆ 'ಭಾರತ ರತ್ನ' ಕೊಟ್ಟ ಪದ್ಧತಿ ಅದ. ಇವಂಗೂ ಕೊಟ್ಟಾರ ಅಂತ ಸುಮ್ಮನಾದ್ವೀ.

ಮುಂಜಾನೆ ನ್ಯೂಸ್ ಪೇಪರ್ ಓದೇ ಇರಲಿಲ್ಲ ನೋಡ್ರೀ. ಹಾಂಗಾಗಿ ಇನ್ನೊಬ್ಬ ಮಹಾನುಭಾವರಿಗೆ ಅದೇ ಪ್ರಶಸ್ತಿ ಬಂದ ವಿಷಯ ಗೊತ್ತೇ ಇರಲಿಲ್ಲ. ಅಷ್ಟರಾಗ ಫೇಸ್ಬುಕ್ ಮ್ಯಾಲೆ ಇರೊ 'ಧಾರವಾಡ ಬಾಂಡ್ಸ್' ಅನ್ನುವ ಗ್ರೂಪ್ ಮ್ಯಾಲೆ ಯಾರೋ ಒಬ್ಬರು ಡಾ. ಸಿ.ಎನ್. ಆರ್. ರಾವ್ ಅವರಿಗೂ ಸಹ 'ಭಾರತ ರತ್ನ' ಪ್ರಶಸ್ತಿ ಬಂದದ ಅಂತ ಪೋಸ್ಟ್ ಹಾಕಿದರು. ಸುದ್ದಿ ತಿಳದು ಸಿಕ್ಕಾಪಟ್ಟೆ ಖುಷಿ ಆಗಿ ಹೋತು.

ಡಾ. ಸಿಎನ್ನಾರ್ ರಾವ್
'ಭಾರತ ರತ್ನ' ಪ್ರಶಸ್ತಿ ಪಡೆದವರು ಭಾಳ ಮಂದಿ ಇದ್ದಾರ ಬಿಡ್ರೀ. ಆದರೆ ನಾವು ನೋಡಿದವರು, ಅದೂ ಪ್ರತ್ಯಕ್ಷ ನೋಡಿದವರಿಗೆ ಅದು ಸಿಕ್ಕಿತು ಅಂದ್ರ ಅದಕ್ಕ ಏನೋ ಬೇರೇನೆ ಮಹತ್ವ ಬರ್ತದ ಬಿಡ್ರೀ. ಆ ಖುಷಿನೇ ಬ್ಯಾರೆ. ಡಾ. ಸಿ.ಎನ್. ಆರ್. ರಾವ್ ಅವರನ್ನು ಬಿಟ್ಟರೆ ಬ್ಯಾರೆ ಯಾವ 'ಭಾರತ ರತ್ನ' ಪ್ರಶಸ್ತಿ ವಿಜೇತರನ್ನೂ ಪ್ರತ್ಯಕ್ಷ ನೋಡಿಲ್ಲ ಅಂತ ಮಾಡಿದ್ದೆ. ಆ ಮ್ಯಾಲೆ ಕಂಪ್ಲೀಟ್ ಲಿಸ್ಟ್ ಚೆಕ್ ಮಾಡಿ ನೋಡಿದರೆ ಇನ್ನೂ ಒಬ್ಬರನ್ನ ದೂರಿಂದ ನೋಡಿದ ನೆನಪಾತು. ಅವರೇ ರಾಜೀವ್ ಗಾಂಧೀ. ಧಾರವಾಡಕ್ಕ ಬಂದಿದ್ದರು. 1984 ಒಳಗ. ಆವಾಗ ಮಾತ್ರ ಅವರ ಅವ್ವ ಇಂದಿರಾ ಗಾಂಧೀ ತೀರಿಕೊಂಡಿದ್ದರು. ಎಲೆಕ್ಷನ್ ಪ್ರಚಾರಕ್ಕ ಯೂನಿವರ್ಸಿಟಿ ಗ್ರೌಂಡ್ ಒಳಗ ಹೆಲಿಕ್ಯಾಪ್ಟರ್ ನಿಂದ ಇಳದು, ಕೆಸಿಡಿ ಗ್ರೌಂಡ್ ಗೆ ಭಾಷಣ ಮಾಡಲಿಕ್ಕೆ ಹೋಗಿದ್ದರು. ನಾವೆಲ್ಲಾ ಆವಾಗ ಏಳನೆತ್ತಾ ಹುಡುಗುರು. ರಾಜೀವ್ ಗಾಂಧಿಕಿಂತ ಅವರ ಹೆಲಿಕಾಪ್ಟರ್ ನೋಡಲಿಕ್ಕೆ ಯೂನಿವರ್ಸಿಟಿ ಗ್ರೌಂಡ್ ಗೆ ಹೋದಾಗ, ರಾಜೀವ್ ಗಾಂಧಿ ಒಂದು ದೊಡ್ಡ ಟಾಟಾ ಮಾಡಿ, ಕಾರ್ ಹತ್ತಿ ಹೋಗಿದ್ದನ್ನ ನೋಡಿದ ನೆನಪು. ಆ ಮ್ಯಾಲೆ ಅವರು 1991 ಒಳಗ ಮರಣ ಹೊಂದಿದ ಮ್ಯಾಲೆ ಅವರಿಗೂ 'ಭಾರತ ರತ್ನ' ಬಂತಂತ ಅನ್ನೋದನ್ನ ವಿಕಿಪೀಡಿಯ ನೋಡಿದ ಮ್ಯಾಲೆ ಗೊತ್ತಾತು.

ಡಾ. ಸಿ.ಎನ್. ಆರ್. ರಾವ್ ಅವರ ಬಗ್ಗೆ ಮೊದಲಿಂದಲೂ ಅಲ್ಪ ಸ್ವಲ್ಪ ಗೊತ್ತಿತ್ತು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಸ್ಥೆಯ ನಿರ್ದೇಶಕರು ಅಂತ ಭಾಳ ವರ್ಷ ಇದ್ದರು. ಪೇಪರ್ ಒಳಗ ಅಲ್ಲೆ ಇಲ್ಲೆ ಸುದ್ದಿ ಬರ್ತಿತ್ತು. ದೊಡ್ಡ ವಿಜ್ಞಾನಿ, ಮಹಾ ಮೇಧಾವಿ ಅಂತ ಆಗಲೇ ಅಂದ್ರ ೧೯೮೦, ೧೯೯೦ ಟೈಮ್ ನಲ್ಲೇ ದೊಡ್ಡ ಹವಾ ಇತ್ತು ಡಾ. ರಾವ್ ಅವರ ಬಗ್ಗೆ.

ಇಂತಹ ಡಾ. ಸಿಎನ್ನಾರ ರಾವ್ ಧಾರವಾಡಕ್ಕೆ ಒಮ್ಮೆ ೧೯೯೦ ಜನವರಿ ಅಥವಾ ಫೆಬ್ರುವರಿ ಒಳಗ ಬಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಕೊಟ್ಟ ಗೌಡಾ (ಗೌರವ ಡಾಕ್ಟರೇಟ್) ಪಡೆಯಲು ಬಂದಿದ್ದಾರಾ? ಸರಿ ನೆನಪಿಲ್ಲ.

ಆವಾಗ superconductivity ಅನ್ನೋದು ಸಿಕ್ಕಾಪಟ್ಟೆ hot ಟಾಪಿಕ್. superconductors ತಯಾರ ಆದವು ಅಂದ್ರ ಅದು ಒಂದು ಹೊಸ ಕ್ರಾಂತಿಯನ್ನೇ ಮಾಡಿಬಿಡ್ತದ ಅದು ಇದು ಅಂತ. ಸಿಕ್ಕಾಪಟ್ಟೆ ಪ್ರಾಮಿಸಿಂಗ್ ಫೀಲ್ಡ್ ಆಗಿತ್ತು ಅದು. ರೆಗ್ಯುಲರ್ ನ್ಯೂಸ್ ಪೇಪರ್ ಒಳಗೂ ಅದರ ಬಗ್ಗೆ ಆರ್ಟಿಕಲ್ ಅವು ಇವು ಬರ್ತಿದ್ದವು. ಎಲ್ಲಾ ಕಡೆ ಇರೊ ಕಾಮನ್ ಸುದ್ದಿ ಅಂದ್ರ ಈ ಡಾ. ಸಿಎನ್ನಾರ್ ರಾವ್ ಅನ್ನೊ ಭಾರತೀಯ ವಿಜ್ಞಾನಿ ಸಹ ವಿಶ್ವದ ಕೆಲವೇ ಕೆಲವು ದೊಡ್ಡ ಮಟ್ಟದಲ್ಲಿ superconductivity ಮ್ಯಾಲೆ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳಲ್ಲಿ ಒಬ್ಬರು ಅಂತ. ಸುದ್ದಿ ಕೇಳಿ ಮಸ್ತ ಖುಷಿ ಆಗ್ತಿತ್ತು ಬಿಡ್ರೀ.

ನಾವೆಲ್ಲಾ ಆವಾಗ ಇನ್ನೂ ಪಿಯೂಸಿ ಸೆಕೆಂಡ್ ಇಯರ್. semiconductor ಬಗ್ಗೆನೇ ಸರಿ ಗೊತ್ತಿರಲಿಲ್ಲ. superconductors ಬಿಡ್ರೀ. ಬಸ್ ಕಂಡಕ್ಟರ್ ಮಾತ್ರ ಸರಿ ಗೊತ್ತಿದ್ದರು. ಅಷ್ಟೇ. ಆದ್ರ ನಮ್ಮ 'ಗಣಿತ ಲೋಕ' ಎಂಬ ಟ್ಯೂಶನ್ ಕ್ಲಾಸಿನ ದೇಶಪಾಂಡೆ ಸರ್ ಮಾತ್ರ ಪಿಯೂಸಿ ಫಿಸಿಕ್ಸ್ ಒಳಗ ಸೆಮಿಕಂಡಕ್ಟರ್ ಬಗ್ಗೆ ಕ್ಲಾಸ್ ತೊಗೊಂಡಾಗ semiconductor ಜೋಡಿನೇ ಸಂಕ್ಷಿಪ್ತವಾಗಿ superconductors ಬಗ್ಗೆ ಸಹಿತ ಹೇಳಿ ಆ superconductor ಬಗ್ಗೆ ಏನೋ ಒಂದು ತರಹದ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಗಣಿತಲೋಕದ ದೇಶಪಾಂಡೆ ಸರ್ ಅಂದ್ರ ಹಾಂಗೇ. ಸಣ್ಣ ಮಟ್ಟದ ಸಿಎನ್ನಾರ್ ರಾವ್ ಇದ್ದಂಗ ಅವರು.

ರೈಟ್ ಶಿವಾ!! ರೈಟ್ ಶಿವಾ!!! ಸಪ್ತಾಪುರ ಭಾವಿ ಬಂತು. ಇಳೀರಿ. ಈ ಕ್ವಾಣದಂತಹ ಹುಡುಗ್ಗ ಎಮ್ಮಿಕೆರಿಗೆ ಹಾಪ್ ಟಿಕೆಟ್ರೀ? ಏ...ಫುಲ್ ಟಿಕೆಟ್ ತೊಗೊಳ್ಳಿಕ್ಕೇ ಬೇಕು. ರೀ ಸ್ವಾಮ್ಯಾರ...ಅದು ಲೇಡೀಸ್ ಸೀಟ್ ರೀ. ಬಿಟ್ಟು ಕೊಡ್ರೀ, ಅದು ಇದು ಅಂತ ಕೇವಲ ಸಿಟಿ ಬಸ್ ಕಂಡಕ್ಟರ್ ಉವಾಚ ಕೇಳಿದ್ದ ನಮಗೆ ಈ superconductor ಅಂದ್ರೆ ಏನಪಾ ಅಂತಾ ತಿಳ್ಕೊಬೇಕು ಅಂತ ಭಾಳ ಕುತೂಹಲ ಇತ್ತು.

ಇಂತಾ ಸಮಯದಾಗ ಡಾ. ಸಿಎನ್ನಾರ ರಾವ್ ಅವರು ಧಾರವಾಡಕ್ಕ ಬರೋರು ಇದ್ದಾರ, ಕರ್ನಾಟಕ ಯೂನಿವರ್ಸಿಟಿ ಒಳಗ ಲೆಕ್ಚರ್ ಕೊಡವರು ಇದ್ದಾರ ಅಂತ ಸುದ್ದಿ ಆತು. ಒಂದು ದಿವಸ ಮಧ್ಯಾನ್ಹ ಕರ್ನಾಟಕ ಯೂನಿವರ್ಸಿಟಿ ಮೇನ್ ಬಿಲ್ಡಿಂಗ್ ಒಳಗ ಇರುವ ಸೆನೆಟ್ ಹಾಲಿನಲ್ಲಿ ಲೆಕ್ಚರ್ ಅಂತ ನಿಕ್ಕಿ ಆಗಿ ಪೇಪರ್ ಒಳಗೆ ಸುದ್ದಿ ಬಂದು ನಮಗೂ ತಿಳೀತು. ನಾನು ನಮ್ಮ ದೋಸ್ತ ಪ್ರದೀಪ ಹೆಗಡೆಗೆ, ಏ ನಡೀಲೇ, ದೊಡ್ಡ ಸೈಂಟಿಸ್ಟ್ ಬಂದಾರ, ಲೆಕ್ಚರ್ ಅದ, ಕೇಳಿ ಬರೋಣ. ಮನಿಗೆ ಬಾ. ಕೂಡೆ ಹೋಗೋಣ, ಅಂತ ಹೇಳಿದ್ದೆ.

ಆವಾ ಬಂದಾ ಮಧ್ಯಾನ್ಹ ಮನಿಗೆ. ಬರೋಬ್ಬರಿ ಟೈಮಿಗೆ. ಫೆಬ್ರವರಿ ೧೯೯೦ ಅಂತ ನೆನಪು. ಇಬ್ಬರೂ ಕೂಡಿ ಯೂನಿವರ್ಸಿಟಿಗೆ ಹೋದ್ವೀ. ಸೆನೆಟ್ ಹಾಲ್ ಒಳಗ ಹೋಗಿ ಕೂತ್ವೀ. ಮಸ್ತ ಫುಲ್ ಆಗಿತ್ತು. ಸುಮಾರು ಮಂದಿ ಆ ಕೆಟ್ಟ ಫೆಬ್ರುವರಿ ಹೀಟ್ ಒಳಗೂ ಸೂಟ್ ಹಾಕ್ಕೊಂಡು, ಟೈ ಮತ್ತೊಂದು ಕಟ್ಟಿಕೊಂಡು, ಕರ್ಚೀಪ್ ಒಳಗ ನಿಮಷಕ್ಕೊಮ್ಮೆ ಮಾರಿ ಬೆವರ ಒರಸಿಕೋತ್ತ ಅಡ್ಯಾಡಿಲಿಕತ್ತಿದ್ದರು. ಇವರೊಳಗೇ ಯಾರೋ ಸಿಎನ್ನಾರ್ ರಾವ್ ಇರಬೇಕು ಬಿಡು ಅಂತ ತಿಳಕೊಂಡು, ಏನೋ ಹರಟಿ ಹೊಡಕೋತ್ತ ಕೂತ್ವೀ. ಕಾರ್ಯಕ್ರಮ ಶುರು ಆಗೋದಿತ್ತು ಇನ್ನೇನು.

ಎಲ್ಲಾರೂ ಬಂದು ಸ್ಟೇಜ್ ಮ್ಯಾಲೆ ಕೂತರು. ಆದರೂ ಈ superconductor ಸಿಎನ್ನಾರ್ ರಾವ್ ಯಾರು ಅಂತ ಮಾತ್ರ ತಿಳಿಲಿಲ್ಲ. ಸ್ವಾಗತ ಗೀತೆ, ಅದು ಇದು ಎಲ್ಲಾ ಮುಗೀತು. ಏನೇನೋ ಸ್ವಾಗತ ಭಾಷಣ, ಅತಿಥಿ ಪರಿಚಯ ಎಲ್ಲಾ ಆತು. ಆ ಮ್ಯಾಲೆ ಒಮ್ಮೆ ಕೊನೀಗೇ, ಡಾ. ಸಿಎನ್ನಾರ್ ರಾವ್ ಅವರಿಗೆ ಸ್ವಾಗತ, ಅವರು ಬಂದು ಭಾಷಣ ಮಾಡಬೇಕು, ಅಂತ ಅಂದಾಗ, ಅಂತೂ ಇಂತೂ superconductor ರಾವ್ ಬರ್ತಾರಪಾ ಇನ್ನೇನು ಅಂತ ಆ ಕಡೆ ಈ ಕಡೆ ತಿರುಗಿ ತಿರುಗಿ ನೋಡಿದಿವಿ.

ಆಶ್ಚರ್ಯಕರ ಸಂಗತಿ ಏನು ಅಂದ್ರ ಅಷ್ಟು ದೊಡ್ಡ ವಿಜ್ಞಾನಿ ಸ್ಟೇಜ್ ಮ್ಯಾಲೆ ಇರಲೇ ಇಲ್ಲ. ಅವರು ಹಿಂದೆ ಸಭಿಕರ ಮಧ್ಯೆ ತಮ್ಮ ಇತರೆ ಕವಿವಿ ಪ್ರಾಧ್ಯಾಪಕ ಮಿತ್ರರ ಜೋಡಿ ಆರಾಮ ಕೂತು ಬಿಟ್ಟಿದ್ದರು!!! ಕರೆದ ಕೂಡಲೆ ಹಿಂದಿಂದ ಎದ್ದು ಬಂದರು ಡಾ. ರಾವ್.

ಇವರೇ ಏನು superconductivity ಮ್ಯಾಲೆ ವಿಶ್ವದಲ್ಲಿ ದೊಡ್ಡ ಮಟ್ಟದ ರಿಸರ್ಚ್ ಮಾಡುತ್ತಿರುವರಲ್ಲಿ ಅಗ್ರಗಣ್ಯರು ಅನ್ನಿಸಿಕೊಂಡಿರುವಂತಹ ಡಾ. ಸಿಎನ್ನಾರ್ ರಾವ್?! ಅಂತ ಭಾಳ ಆಶ್ಚರ್ಯ ಆತು. ಸಿಂಪಲ್ ಅಂದ್ರ ಸಿಂಪಲ್ ಆದಮೀ. ಒಂದು ಸಿಂಪಲ್ ಶರ್ಟ್, ದೊಗಲಾ ಬಗಲಾ ಪ್ಯಾಂಟ್, ಬೆಲ್ಟ್ ಅಷ್ಟೇ. ನೋಡಿದರ ಬಾಜೂ ಮನಿ generic ಅಂಕಲ್ ಗತೆ ಇದ್ದಾರ. ಅಷ್ಟು ದೊಡ್ಡ ವಿಜ್ಞಾನಿ ಇಷ್ಟು ಸಿಂಪಲ್ಲಾ???!! ಬಗಲಾಗ ಒಂದು ಬ್ರೀಫ್ ಕೇಸ್ ಇತ್ತು. ಆ ಬ್ರೀಫ್ ಕೇಸ್ ಬಗಲ ಸಂದಿಯೊಳಗ ಸಿಕ್ಕಿಸಿಕೊಂಡಿದ್ದ ಸ್ಟೈಲ್ ಮಾತ್ರ ಥೇಟ್ ಬಸ್ ಕಂಡಕ್ಟರ್ ಅವನ ಆ ಚರ್ಮದ ಬ್ಯಾಗ್ ಒಮ್ಮೊಮ್ಮೆ ಬಗಲಾಗ ಸಿಗಿಸಿಕೊಂಡಿರ್ತಾರ ನೋಡ್ರೀ, ಸೇಮ್ ಹಾಂಗೇ! ಒಟ್ಟಿನ್ಯಾಗ ಬಸ್ ಕಂಡಕ್ಟರ್ ಇರ್ಲಿ ಸೂಪರ್ ಕಂಡಕ್ಟರ್ ಮ್ಯಾಲೆ ರಿಸರ್ಚ್ ಮಾಡೋ ದೊಡ್ಡ ವಿಜ್ಞಾನಿ ಇರಲಿ ಬಗಲ ಸಂದಿಯೊಳಗ ಬ್ರೀಫ್ ಕೇಸ್ ಸಿಗಿಸಿಕೊಳ್ಳೋ ಸ್ಟೈಲ್ ಮಾತ್ರ ಸೇಮ್ ಅಂತ ಕಾಣಸ್ತದ.

ದೊಡ್ಡ ನಗು ಬೀರಿಕೋತ್ತ ಹಿಂದಿಂದ ಎದ್ದು ಬಂದ ಸಿಎನ್ನಾರ್ ರಾವ್ ಅವರು ಸ್ಟೇಜ್ ಮ್ಯಾಲೆ ಹೋಗಲೇ ಇಲ್ಲ. ಅವರು ಸೀದಾ ಹೋಗಿ ನಿಂತಿದ್ದು ಪ್ರೊಜೆಕ್ಟರ್ ಬಾಜೂಕ. ಪ್ರೊಜೆಕ್ಟರ್ ಬಾಜೂಕ ನಿಂತವರೇ, ತಮ್ಮ ಬ್ರೀಫ್ ಕೇಸಿನಿಂದ transparencies ತೆಗೆದರು. ಅವನ್ನ ನೀಟಾಗಿ ಜೋಡಿಸಿಕೊಂಡರು. ಆವಾಗೆಲ್ಲಾ ಈ PowerPoint ಅದು ಇದು ಇರಲಿಲ್ಲ. ಲೆಕ್ಚರ್ ಕೊಡಬೇಕು ಅಂದ್ರ transparencies ತಂದುಕೊಂಡು, ಅದರ ಮ್ಯಾಲೆ ಬರಿಯುವಂತಹ ಸ್ಪೆಷಲ್ ಇಂಕ್ ಇರೋ ಪೆನ್ ತೊಗೊಂಡು ಬಂದು, ವಿಷಯವನ್ನು transparencies ಮ್ಯಾಲೆ ಬರಕೊಂಡು ಹೋಗಿ, ಅದನ್ನ overhead projector ಮ್ಯಾಲೆ ಇಟ್ಟರ ನಿಮ್ಮ material ರೆಡಿ. ನಂತರ ಹೊಡಿರೀ ಹಲಗಿ. ಭಾಷಣ ಮಾಡ್ರೀ.

ತಮ್ಮ ಸ್ವಂತ ಕೈ ಬರಹದಲ್ಲಿ ಸುಂದರವಾಗಿ ಬೇರೆ ಬೇರೆ ಬಣ್ಣದ ಪೆನ್ಸ್ ಉಪಯೋಗಿಸಿ ಡಾ. ಸಿಎನ್ನಾರ್ ರಾವ್ superconductivity ಮೇಲೆ transparencies ಮಾಡಿಕೊಂಡು ಬಂದಿದ್ದರು.

ಒಮ್ಮೆ ಅವರು ಸೆಟಲ್ ಆಗಿ ಮಾತಾಡ್ಲಿಕ್ಕೆ ಶುರು ಮಾಡಿದರು ನೋಡ್ರೀ! ಒಂದು ತಾಸು ಹ್ಯಾಂಗ ಹೋತು ಅನ್ನೋದೇ ಗೊತ್ತಾಗಲಿಲ್ಲ. ಅಷ್ಟು ಮಸ್ತ ಮಾತಾಡಿದರು. ಸಿಂಪಲ್ ಅಂದ್ರ ಸಿಂಪಲ್ ಇಂಗ್ಲಿಷ್ ಭಾಷಾ. ಮುಂಬೋ ಜಂಬೋ ಏನೂ ಇಲ್ಲ. ಇಲ್ಲದ ಒಣಾ ಉಪದೇಶ, ಉದ್ರಿ ಅಡ್ವೈಸ್, ಅದು ಇದು ಕೇಳಲೇ ಬ್ಯಾಡ್ರೀ. superconductivity ಮ್ಯಾಲೆ introductory ಲೆಕ್ಚರ್ ಅಂದ್ರ ಕೇವಲ ಅಷ್ಟೇ. ಇದಕ್ಕೂ ಮುಂಚೆ ಕೆಮಿಸ್ಟ್ರಿ ಡಿಪಾರ್ಟ್ಮೆಂಟ್ ಒಳಗ ಅವರ advanced ಲೆಕ್ಚರ್ ಆಗಿತ್ತು.

ಒಂದು ತಾಸು ಅಮೋಘ ಭಾಷಣ ಮಾಡಿ, ಅದನ್ನ ಒಂದು ಲಾಜಿಕಲ್ ಹಂತಕ್ಕೆ ತಂದು, ಭವಿಷ್ಯದಲ್ಲಿ ಆಗಬಹುದಾದ ಸಂಶೋಧನೆಗಳ ಬಗ್ಗೆ ಮಾತಾಡಿ ಡಾ. ರಾವ್ ಭಾಷಣ ಮುಗಿಸಿದರೆ ಒಂದು ಸಂಗೀತ ಕಚೇರಿ ಮುಗಿದ ಅನುಭವ. ಮಸ್ತ ಚಪ್ಪಾಳಿ ಹೊಡೆದರು ಎಲ್ಲರೂ.

ಏನೋ ಮಾಲಿ ಹಾಕಿಸಿಕೊಳ್ಳಲಿಕ್ಕೋ, ಸನ್ಮಾನ ಮಾಡಿಸಿಕೊಳ್ಳಲಿಕ್ಕೋ ಡಾ. ರಾವ್ ಆ ಕಡೆ ಹೋದರು ಒಂದು ಕ್ಷಣ. ಈ ಕಡೆ ಕವಿವಿ ಚಪರಾಸಿ ಒಬ್ಬ ಅವರ ಅಮೂಲ್ಯ ಬ್ರೀಫ್ ಕೇಸ್, transparencies ಹಿಂದೆ ಮುಂದೆ ಮಾಡಿಬಿಟ್ಟ ಅಂತ ಕಾಣಿಸ್ತದ. ಏ...ಸ್ಟುಪಿಡ್! ಈಡಿಯಟ್! ಅಂತ ಸಣ್ಣದಾಗಿ ಚೀರುತ್ತ ಡಾ. ರಾವ್ ಈ ಕಡೆ ಓಡಿ ಬಂದು ಬಿಟ್ಟರು. ಎಲ್ಲರೆ ಅವರ ಸಾಮಾನು ರಾಡಿ ಎಬ್ಬಿಸಿ ಬಿಟ್ಟಾನು ಅಂತ ಚಿಂತಿ ಇರಬೇಕು ಅವರಿಗೆ. ಆ ಹೊತ್ತಿಗಾಗಲೇ ಮಂದಿ ಎಲ್ಲಾ ಎದ್ದು ಹೊಂಡಲಿಕ್ಕೆ ತಯಾರ ಆಗಿ ಗದ್ದಲ ಶುರು ಆಗಿತ್ತು. ಹಾಂಗಾಗಿ ಡಾ. ಸಿಎನ್ನಾರ್ ರಾವ್ ಚಪರಾಸಿಗೆ ಬೈದಿದ್ದು ನಮ್ಮಂತಹ ಕಿಡಿಗೇಡಿಗಳಿಗೆ ಮಾತ್ರ ಕಂಡು, ಅವತ್ತಿನ ಸಂಜಿ ಹರಟಿ ಒಳಗ superconductivity ಎಲ್ಲಾ ಮರ್ತು ಹೋಗಿ, ಸೂಪರ್ ಕಂಡಕ್ಟರ್ ಸೂಪರ್ ಸಿಎನ್ನಾರ್ ರಾವ್ ಚಪರಾಸಿಯನ್ನು ಹ್ಯಾಂಗ ಅಟ್ಟಿಸಿಕೊಂಡು ಬಂದು ಬೈದರು ಅನ್ನೋದನ್ನ ಮತ್ತ ಮತ್ತ ನೆನಪಿಸಿಕೊಂಡು, ಅದನ್ನ ಆಕ್ಟ್ ಮಾಡಿ ಮಾಡಿ ನಕ್ಕಿದ್ದೆ ನಕ್ಕಿದ್ದು.

ಲೆಕ್ಚರ್ ಕೇಳಿ, ಸೆನೆಟ್ ಹಾಲಿಂದ ಹೊರಗ ಬಂದ್ರ ಇನ್ನೊಬ್ಬ ಖಾಸ್ ದೋಸ್ತ ಅರವಿಂದ ಪಾಟೀಲ ಸಹಿತ ಕಂಡ. ಅವನೂ ಅಲ್ಲೇ ಬಂದಿದ್ದ ಅಂತ. ನಾವು ಬರೋದು ಗೊತ್ತಿಲ್ಲದ ಕಾರಣ ಬ್ಯಾರೆ ಎಲ್ಲೋ ಹೋಗಿ ಕೂತುಬಿಟ್ಟಿದ್ದ. ಅವನೂ ಏನರೆ ಜೋಡಿ ಇದ್ದಿದ್ದ ಅಂದ್ರ, ನಾವು ಏನರೆ ಜೋಕ್ ಮಾಡಿ, ಸಿಕ್ಕಾಪಟ್ಟೆ ನಕ್ಕು, ಸಿಎನ್ನಾರ್ ರಾವ್ ಕಡೆ ಬೈಸಿಕೊಳ್ಳುತ್ತಿದ್ದೆವೋ ಏನೋ? ಯಾರಿಗೊತ್ತು? ಆವಾ ನಾನು ಕೂಡಿ ಇದ್ದಾಗ, ನಗಬಾರದ ಟೈಮ್ ಒಳಗ  ಏನೇನೋ ಹೇಳಿ, ಜೋಕ್ ಮಾಡಿ, ನಕ್ಕು ಬೈಸಿಕೊಂಡಿದ್ದು ಬೇಕಾದಷ್ಟು ಸರೆ ಇತ್ತು. ಏನೋ ಇಲ್ಲಿ ಬಚಾವ್ ಅಷ್ಟೇ!

ಇದೆಲ್ಲಾ ಆಗಿದ್ದು 23 ವರ್ಷಗಳ ಹಿಂದೆ. ಅದಾದ ನಂತರ ಡಾ. ಸಿಎನ್ನಾರ್ ರಾವ್ ಮತ್ತೂ ಏನೇನೋ ಸಾಧಿಸಿ ಬಿಟ್ಟಾರ. ವಿದೇಶ ಒಳಗ ಇದ್ದಿದ್ದರ ಅವರಿಗೆ ನೊಬೆಲ್ ಪ್ರೈಜ್ ಎಂದೋ ಬರ್ತಿತ್ತು ಅಂತ ವೈಜ್ಞಾನಿಕ ಸಮೂಹದಲ್ಲಿ ಮಾತು ನೆಡದಿರ್ತದ. ಅದು ಖರೆ. ಲಗೂನೇ ಅವರಿಗೆ ನೊಬೆಲ್ ಪ್ರೈಜ್ ಬರಲಿ ಅಂತ ಎಲ್ಲರೊಂದಿಗೆ ನಮ್ಮದೂ ಹಾರೈಕೆ!

Friday, November 01, 2013

ಜ್ಞಾನಯೋಗದ ಮಂಗ್ಯಾನಮರಿಯಾಗುವೆಯಾ? ಭಕ್ತಿಯೋಗದ ಬೆಕ್ಕಿನಮರಿಯಾಗುವೆಯಾ? ಕರ್ಮಯೋಗದ ಕರೀಮನಾಗುವೆಯಾ?

ಒಂದಿನ ನಾನು ಮತ್ತ ನಮ್ಮ ಖಾಸ್ ದೋಸ್ತ ಕರೀಮಾ ಅಲ್ಲೇ ನಿಂತಿದ್ದಿವಿ. ಅಲ್ಲೇ ಅಂದ್ರ ನಮ್ಮ ಖಾಯಂ ಅಡ್ಡಾ - ಭೀಮ್ಯಾನ ಚುಟ್ಟಾ ಅಂಗಡಿ. ಕರೀಮಾ ತನ್ನ ರೆಗ್ಯುಲರ್ 420 ಜರ್ದಾ ಪಾನ್ ಮೆಲ್ಲಲಿಕತ್ತಿದ್ದಾ.  ನಾನು ನನ್ನ ರೆಗ್ಯುಲರ್ ಮಾವಾ ಅಗಿಲಿಕತ್ತಿದ್ದೆ. ಅಷ್ಟರಾಗ ದೂರದಿಂದ ಬರ್ಲಿಕತ್ತಿದ್ದ ಚೀಪ್ಯಾ ಕಂಡ. ಬರೊ ರೀತಿ ನೋಡಿದರ ಆವಾ ಚೀಪ್ಯಾಗೂ ತಲಬು ಎದ್ದಂಗ ಕಾಣ್ತದ. ಪಾನಿಂದೋ ಸಿಗರೇಟಿಂದೋ ತಲಬು. ಊರಿಗೆ ಬಂದಾಕಿ ನೀರಿಗೆ ಬರಲೇ ಬೇಕು ಅಂದಂಗ ತಲಬು ಎದ್ದವರು ಭೀಮ್ಯಾನ ಚುಟ್ಟಾ ಅಂಗಡಿಗೆ ಬರಲೇ ಬೇಕು. ಹೀಂಗಾಗಿ ಚೀಪ್ಯಾ ಬಂದೇ  ಬರ್ತಾನ, ಹೆಚ್ಚಿಗಿ ಏನೂ ಪ್ರಯತ್ನ ಮಾಡಬೇಕಿಲ್ಲ, ಅಂತ ನಾನು ಕರೀಮಾ ಹಾಂಗೆ ಸುಮ್ಮನೆ ನಿಂತಿವೀ ಅಂತ ಆತು. ಬಂದಾ ಚೀಪ್ಯಾ.

ಏನಲೇ  ಚೀಪ್ಯಾ? ಎಲ್ಲೋ ತಿಥಿ ಊಟಕ್ಕ ಹೋಗಿ ಬಂದಂಗ ಕಾಣ್ತದ? ಏನು ಹೊಸಾ ಧೋತ್ರಾ, ಮ್ಯಾಲೆ ಹೊಸಾ ಅಂಗವಸ್ತ್ರಾ, ಫ್ರೆಶ್ ಆಗಿ ಹಾಕಿಕೊಂಡ ಬೇರೆ ಬೇರೆ ತರಹದ ನಾಮ, ಅಕ್ಷಂತಿ ಎಲ್ಲಾ ನೋಡಿದರೆ ಎಲ್ಲೋ ದೊಡ್ಡ ತಿಥಿ ಊಟ ಮಾಡಿ, ಗಡದ್ ನಿದ್ದಿ ಹೊಡದು, ಒಂದು ಹಾಪ್ ಚಹಾ ಸುದ್ದಾ ಕುಡದು, ಮತ್ತೊಂದು ರೌಂಡ್ ಎಲಿ ಅಡಕಿ ಹಾಕಿಕೊಂಡು ಬಂದಂಗ ಅದ ಶ್ರೀಪಾದ ಆಚಾರ್ ಡಕ್ಕನೆಕರ್ ಸಾಹೇಬರು. ಹಾಂ? - ಅಂತ ಕೇಳಿದೆ.

ಹುಚ್ಚ ಸೂಳಿಮಗನss - ಅಂತ ಚೀಪ್ಯಾ ರಾಗಾ ಎಳದ  ಅಂದ ಮ್ಯಾಲೆ ನನ್ನ ಊಹಾ  ತಪ್ಪು ಅಂತ ಅನ್ನಿಸ್ತು.

ತಿಥಿ ಊಟದಿಂದ ಬರ್ಲಿಕತ್ತಿಲ್ಲೊ! ಸ್ವಾಮಿಗಳ ಪ್ರವಚನ ಕೇಳಲಿಕ್ಕೆ ಹೋಗಿದ್ದೆ. ಮಠಕ್ಕ. ವಾಪಸ್ ಬರ್ಲಿಕತ್ತೇನಿ, ಅಂತ ಹೇಳಿದ ಚೀಪ್ಯಾ.

ಭೀಮು ಮಹಾರಾಜ! ನನಗ ಒಂದು ನೇವಿ  ಕಟ್ ಸಿಗರೇಟ್  ಕೊಡಪಾ. ಲೆಕ್ಕ ಬರೆದುಕೊಂಡು ಬಿಡು. ರೊಕ್ಕ ಇಲ್ಲ. ಇದ್ದ ಚಿಲ್ಲರೆ ಪಲ್ಲರೆ ಎಲ್ಲಾ ಮಠದ ಕಾಣಿಕಿ  ಡಬ್ಬಿ ಒಳಗಾ ಹಾಕಿಬಿಟ್ಟೆ ನೋಡು, ಅಂದ ಚೀಪ್ಯಾ ಚುಟ್ಟಾ ಅಂಗಡಿ ಭೀಮ್ಯಾಗ.

ತೊಗೊಳ್ಳಿ, ಈ ಸಿಗರೇಟ್ ನಮ್ಮ ಕಾಣಿಕೆ, ಅಂತ ಬಾಯಿ ಬಿಟ್ಟು ಹೇಳದೇ ಭೀಮು ಸಿಗರೇಟ್  ಕೊಟ್ಟ. ಮಾಳಮಡ್ಡಿ ಮುದ್ರಿ ಮಂದಿಗೆ ಉದ್ರಿ ಕೊಟ್ಟೇ ಭೀಮು ಉದ್ಧಾರ ಆಗಿ ಹೋಗ್ಯಾನ. ಒಂದು ಸಿಗರೇಟ್  ಉದ್ರಿ ಒಳಗ  ತೊಗೊಂಡ್ರ ಇವಾ ಬಡ್ಡಿಮಗ ಭೀಮು ಇನ್ನೊಂದು ಎರಡು ಜಾಸ್ತಿ ಅಂತ ಲೆಕ್ಕಾ ಬರೆದು, ತಿಂಗಳ ಕೊನಿಯೊಳಗ ಸರೀತ್ನಾಗಿ ಕೆತ್ತತಾನ. ಆವಾಗ ಯಾರಿಗೆ ನೆನಪು ಇರ್ತದ, ಎಲ್ಲೆ  ಒಂದು ತೊಗೊಂಡಿದ್ದೆವೋ  ಅಥವಾ ಎರಡೋ ಅಂತ?

ಚೀಪ್ಯಾ ಸಿಗರೇಟ್ ಹಚ್ಚಿ ಎರಡು ಜುರ್ಕೀ ಎಳದು ನನ್ನ ನೋಡಿಕೋತ್ತ ಕೇಳಿದಾ.

ಏನಲೇ  ಅದು? ಬರೆ ಡ್ರೈ ಮಾವಾ ತಿಂತಿ? ಮಾವಿಲ್ಲ ಅಂತ ಮಾವಾ ತಿಂದು ತಿಂದು ಇಲ್ಲದ ಮಾವಂಗ ಪರಿಹಾರ ತುಂಬಿಕೊತ್ತಿ  ಏನು? - ಅಂತ ಕೇಳಿದ ಚೀಪ್ಯಾ ನನ್ನ. ಕುಹಕ ಇತ್ತು.

ಏ!!! ಮಂಗ್ಯಾನಿಕೆ, ಅಂತ ಆವಾಜ್ ಹಾಕಿದೆ.

ಚೀಪ್ಯಾ ಪಿಕಿ ನೋಡಿದ. ಇದ್ದಿದ್ದು ಇದ್ದಂಗ ಹೇಳಿದರ ಈವ್ಯಾಕ ಎದ್ದು ಬಂದು ಎದಿಗೆ ಒದಿಲಿಕತ್ಯಾನ ಅನ್ನೋ ಲುಕ್ ಕೊಟ್ಟ ಚೀಪ್ಯಾ.

ನನಗ ಮಾವಿಲ್ಲ ಅಂತ ಯಾರ ಹೇಳ್ಯಾರಲೇ ನಿನಗ ಹಾಪ್ ಮಂಗ್ಯಾನಿಕೆ? ಇಬ್ಬರು ಮಾವಂದಿರು ಇದ್ದರು. ಒಬ್ಬರು ತೀರಿಕೊಂಡು ಈಗ ಇನ್ನೊಬ್ಬರೇ ಉಳದಾರ. ಮಾವಿಲ್ಲಂತ ನನಗ! ಅದಕ್ಕ ಮಾವಾ ಹಾಕ್ತೇನಂತ. ಏನಲೇ  ಅನ್ನೋದು ನೀನು? ಥತ್, ಅಂತ ನನ್ನ ಸಿಟ್ಟು ಮೈಲ್ಡ್ ಆಗಿ ತೋರ್ಸಿದೆ.

ಹಾಂ! - ಅಂದು ದಂಗು ಹೊಡೆದ ಚೀಪ್ಯಾ.

ಇಬ್ಬರು ಮಾವಂದಿರಾ  ನಿನಗ? ಅದೂ ನಿನ್ನಂತ ಬ್ರಹ್ಮಚಾರಿ ಬೇವರ್ಷಿಗೆ? ಎಲ್ಲಿಂದ ಎರಡು ಮಾವಂದಿರನ್ನ ಹಿಡಕೊಂಡು ಬಂದಿಲೇ? ಮಾವನ ಮಗಳುಗಳನ್ನ ಏನು ಮಾಡಿದಿ? ಕೊಂದು ಭ್ಯಾವ್ಯಾಗ ಒಗದಿ ಏನು? ಬಾಡಿನೂ ಸಿಕ್ಕಿಲ್ಲಲ್ಲೋ? ಹಾಂ? ಹಾಂ? - ಅಂತ ಚೀಪ್ಯಾ ಕೇಳಿದ.

ಕ್ಯಾ ಸಾಬ್!? ಭಾವಿಯೊಳಗೆ ಹೆಂಗಸು ಮಂದಿದು ಬಾಡಿ ಸಿಗ್ತು ಕ್ಯಾ? ಕೋನಸೀ ಬ್ರಾಂಡ್ ಕಾ ಸಾಬ್? ಯಾಕೆ ಅಂದ್ರೆ ನಮ್ಮದು ಬೇಗಂ ಅವರದ್ದು ವಿಲಾಯತಿ ಬಾಡಿ ಎಲ್ಲಾ ಕಳ್ಳತನ ಆಗಿ ಬಿಟ್ಟಿದೆ. ಕಳ್ಳಾ ಭಾವಿಯೊಳಗೆ ನಮ್ಮದು ಬೇಗಂ ಬಾಡಿ ಒಗೆದು ಹೋಗಿರಬಹುದಾ ಅಂತ ನಮಗೆ ವಿಚಾರ, ಅಂದುಬಿಟ್ಟ ಕರೀಮ.

ಹೋಗ್ಗೋ!!!

ಇಬ್ಬರು ಹುಚ್ಚರ ನಡುವೆ ನಾ ಸಿಕ್ಕೊಂಡೇನಿ. ಶಿವನೇ ಶಂಭುಲಿಂಗ.

ಲೇ ಹಾಪ್ ಸೂಳಿಮಕ್ಕಳ! ಗಪ್ಪ ಕೂಡ್ರೀಲೆ! ಕರೀಮಾ......ಆವಾ ಚೀಪ್ಯಾ ಭಾವಿಯೊಳಗ ಬಾಡಿ ಸಿಕ್ಕಿಲ್ಲ ಅಂದ್ರ ಭಾವಿಯೊಳಗ ಹೆಣಾ ಸಿಕ್ಕಿಲ್ಲ ಅಂದ್ರ ನೀ ನಿನ್ನ ಹೆಂಡ್ತೀ ಕಳುವಾದ ಹಾಕ್ಕೊಳ್ಳೋ  ಬಾಡಿ ಉರ್ಫ್ ಬ್ರಾ ಬಗ್ಗೆ ಮಾತಾಡ್ತೀ ಅಲ್ಲಪಾ. ಹಾಂ? ಏನ್ ಹಾಪ್ ಇದ್ದೀರಿಲೆ!? ಥತ್ ನಿಮ್ಮ, ಅಂತ ಬೈದು ಮಾವಾ ಉಗಳಿದೆ.

ಲೇ ಚೀಪ್ಯಾ! ಈಗ ತಿಳೀತು ನೀ ಏನು ಕೇಳಿದಿ ಅಂತ. ನಾ ಒಂದು ಮಿನಿಟ್ ನಮ್ಮ ಹವ್ಯಕ ಭಾಷಾ ಫ್ಲಾಶ್ ಬ್ಯಾಕ್ ಹೋಗಿಬಿಟ್ಟೆ ನೋಡಲೇ ಚೀಪ್ಯಾ. ಅದಕ್ಕೆ ಇಬ್ಬರು ಮಾವಂದಿರು ಇದ್ದರು ಅಂದೆ. ಅಂದ್ರ ಇಬ್ಬರು ಸ್ವಾದರಮಾವಂದಿರು ಇದ್ದರು ಅಂತ. ನಾವು ಮಾಮಾ ಗೀಮಾ ಅನ್ನಂಗಿಲ್ಲ. ಎಲ್ಲಾರಿಗೂ ಮಾವ ಅಂತನೇ ಅಂತೇವಿ. ನಾ ಸಣ್ಣವ ಇದ್ದಾಗ ನಿಮ್ಮ ಸ್ವರ್ಗವಾಸಿ ಅಪ್ಪಗೂ ಮಾವಾ ಅಂತಿದ್ದೆ ಮಾರಾಯಾ. ನೀವು ಹಾಪ್ ಬಯಲಸೀಮಿ  ಮಂದಿ ಸ್ವಾದರಮಾವಗ  ಮಾಮಾ ಅಂತೀರಿ. ಹೆಂಡ್ತಿ ಅಪ್ಪಗ ಮಾವಾ ಅಂತೀರಿ ಅಂತ ಕಾಣಸ್ತದ. ಹೋಗಿ ಹೋಗಿ ಅಕ್ಕನ ಗಂಡಗೂ  ಮಾಮಾ ಅಂತೀರಲ್ಲಲೇ ಹಾಪಾ! ಮಾಮಾಜಿ ಯಾರೋ ಭಾವಾಜಿ ಯಾರೋ ಅಂತ ಅಕ್ಕನ ಗಂಡಗ ಫುಲ್ confusion. ಅಪ್ಪಗ ಅಣ್ಣಾ ಅಂತೀರಿ. ಏನಲೇ  ಅವತಾರ ನಿಮ್ಮದು? ಮೊದಲು ನಿಂದು ನೋಡಿಕೋ.  ಆ ಮ್ಯಾಲೆ ನನ್ನ ಮಾವಾ, ಬಾಯಾಗ ಹಾಕ್ಕೊಂಡ ಡ್ರೈ ಮಾವಾ ಬಗ್ಗೆ ಮಾತಾಡಿಯಂತ. ಓಕೆ? - ಅಂತ ಝಾಡಿಸಿದೆ.

ಹಾಳಾಗಿ ಹೋಗು ! - ಅಂದ  ಚೀಪ್ಯಾ ಅಷ್ಟಕ್ಕ ಬಿಟ್ಟಾ.

ಚೀಪ್ಯಾ, ಅಲ್ಲೆಲ್ಲೋ ಮಠಕ್ಕ ಪ್ರವಚನಾ ಕೇಳಲಿಕ್ಕೆ ಹೋಗಿದ್ದಿ ಅಂದಿ. ಏನು ಪ್ರವಚನಾ ಕೇಳಿ ಬಂದಿ? ಸಂಕ್ಷಿಪ್ತವಾಗಿ ಹೇಳು. ನೋಡೋಣ - ಅಂತ ಕೇಳಿದೆ.

ಜ್ಞಾನಯೋಗ ಮಾಡಲಿಕ್ಕೆ ಹೋದ್ರ ಮಂಗ್ಯಾನ ಮರಿ ಆಗಿ ಹೋಗ್ತೀರಿ. ಭಕ್ತಿಯೋಗ ಮಾಡಲಿಕ್ಕೆ ಹೋದ್ರ ಬೆಕ್ಕಿನ ಮರಿ ಆಗ್ತೀರಿ. ಬೆಕ್ಕಿನ ಮರಿ ಆಗೋದು ಒಳ್ಳೇದು. ಅದಕ್ಕ ಎಲ್ಲರೂ ಭಕ್ತಿಯೋಗ ಮಾಡಿ ಮುಕ್ತಿ ಸಂಪಾದಿಸಿರಿ. ಸಿಕ್ಕೇ ಸಿಗ್ತದ. ಜ್ಞಾನಯೋಗ ಮಾಡಿದರೂ ಮುಕ್ತಿ ಸಿಗಬಹುದು. ಆದರ ಮಂಗ್ಯಾನ ಮರಿ ಆಗವರೇ ಜಾಸ್ತಿ. ಅದಕ್ಕ ಜ್ಞಾನಯೋಗ ಬ್ಯಾಡ್ರೀಪಾ. ಇದು ಸ್ವಾಮಿಗಳ ಪ್ರವಚನದ summary ನೋಡಪಾ, ಅಂದ ಚೀಪ್ಯಾ.

ಏನು!? ಜ್ಞಾನಯೋಗ ಮಾಡವರು ಮಂಗ್ಯಾನ ಮರಿ ಆಗ್ತಾರ?! ಭಕ್ತಿಯೋಗ ಮಾಡವರು ಬೆಕ್ಕಿನ ಮರಿ ಆಗ್ತಾರ?! ಏನಲೇ ಇದು ವಿಚಿತ್ರ ಅದ? ಹಾಂ? ಯಾವ ವೇದ, ಶಾಸ್ತ್ರ, ಉಪನಿಷತ್ತು ಇದನ್ನ ಹೇಳ್ತದ? ಹಾಂ? ಅದನ್ನ ಸ್ವಾಮಿಗಳು ಹೇಳಲಿಲ್ಲ ಏನು? - ಅಂತ

ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ! - ಅಂತ ಚೀಪ್ಯಾ ಏನೋ ಎರಡು ಸಂಸ್ಕೃತ ಬಾಂಬ್ ಒಗೆದು ಭೀಮ್ಯಾನ ಅಂಗಡಿ ಮುಂದ ಹೊಂಟಿದ್ದ ಆಂಟಿಗಳನ್ನ ಮತ್ತ ಅವರ ಸಣ್ಣ ಚಿಗರಿ ಮರಿಯಂತಹ ಹುಡಿಗ್ಯಾರನ್ನ ನೋಡಿಕೋತ್ತ ನಿಂತ. ಅಧ್ಯಾತ್ಮ ಪ್ರವಚನ ಕೇಳಿ ಬಂದವನ ಪರಿಸ್ಥಿತಿ ಇದು!

ಕ್ಯಾ!? ಮಾರ್ಕೆಟ್ ಕಿಶೋರ್? ಹಮಕೋ ಪತಾ ಹಾಯ್ ಸಾಬ್. ಅವನೇ ಅಲ್ಲಾ ಬ್ಲ್ಯಾಕಿನಲ್ಲಿ ಸಿನೆಮಾ ಟಿಕೆಟ್ ಮಾರ್ತಾನೆ. ಯಾವದು ಸಿನಿಮಾದ್ದು ಟಿಕೆಟ್ ಬೇಕು ಸಾಬ್? ಹೇಳಿ. ಆದ್ರೆ ನಿಮ್ಮದೂಕಿ ಸ್ವಾಮೀಜೀ ಯಾಕೆ ಮಾರ್ಕೆಟ್ ಕಿಶೋರ ಹೆಸರು ತೊಗೊಂಡ್ರು? ಅವರಿಗೂ ಸಿನೆಮಾ ನೋಡುದು ಅದೆ ಕ್ಯಾ? - ಅಂತ ಕೇಳಿಬಿಟ್ಟ ಕರೀಮ.

ಸುಮ್ಮ ಕೂಡಲೇ ಸಾಬ್!! ಮರ್ಕಟ ಕಿಶೋರ ಅಂದ್ರ ಮಾರ್ಕೆಟ್ ಕಿಶೋರ ಅಂತ! ನಮ್ಮ ಸ್ವಾಮಿಗಳು ಯಾಕ ಸಿನೆಮಾ ನೋಡ್ತಾರ? ಹಾಂ? ಏನರೆ ಕೇಳಿಸ್ಕೊಂಡು ಏನೇನೋ ಹಚ್ಚ್ಯಾನ. ಹಾಪಾ! - ಅಂತ ಬೈದ ಚೀಪ್ಯಾ ಕರೀಮಗ.

ಕರೀಮಾ ಸಪ್ಪ ಮಸಡಿ ಮಾಡಿದ.

ಮರ್ಕಟ ಕಿಶೋರ ಅಂದ್ರ ಮಂಗ್ಯಾನ ಮರಿ. ಮಾರ್ಜಾಲ ಕಿಶೋರ ಅಂದ್ರ ಬೆಕ್ಕಿನ ಮರಿ. ತಿಳೀತ? - ಅಂತ ಚೀಪ್ಯಾ ನಮ್ಮಿಬ್ಬರನ್ನು ನೋಡಿ ಹೇಳಿದ.

ಜ್ಞಾನಯೋಗ ಮಾಡೋದು ಅಂದ್ರ ಮಂಗ್ಯಾನ ಮರಿ ಆಗೋದು ಅಂತ. ಭಕ್ತಿಯೋಗ ಮಾಡೋದು ಅಂದ್ರ ಬೆಕ್ಕಿನ ಮರಿ ಆಗೋದು ಅಂತ. ಹ್ಯಾಂಗ ಏನು ಎತ್ತ ಅಂತ ನನ್ನ ಕೇಳಬ್ಯಾಡ. ಸ್ವಾಮಿಗಳು ಹೇಳಿದ್ದನ್ನ ಹೇಳಿಬಿಟ್ಟೆ. ಅಷ್ಟೇ - ಅಂತ ಚೀಪ್ಯಾ ಹೇಳಿದ.

ಹಾಂಗಿದ್ದರ ಚೀಪ್ಯಾ ನೀ ಯಾವ ಯೋಗಾ ಮಾಡ್ತೀಪಾ? - ಅಂತ ಕೇಳಿದೆ.

ಏ....ನಾ ದಿನಾ ಹಠಯೋಗ ಮಾಡ್ತಿನೋ. ಏನಂತ ತಿಳಕೊಂಡೀ? ಅದಕ್ಕ ಇಷ್ಟು ಸ್ಲಿಮ್ ಅಂಡ್ ಟ್ರಿಮ್ ಆಗಿ ಇದ್ದೇನಿ, ಅಂದಾ ಚೀಪ್ಯಾ.

ಹಾಂ! 'ಹಟ'ಯೋಗ ಮಾಡ್ತೀಯಾ? ಲೇ ಮಂಗ್ಯಾನಿಕೆ, ನಾಲವತ್ತು ವರ್ಷದ ಕ್ವಾಣ ಆಗಿ. ಇನ್ನೂ ಹಟ ಮಾಡೋದು ಬಿಟ್ಟಿಲ್ಲ? ಹಾಂ? ಯಾರ ಮುಂದ ಹಟಾ ಮಾಡ್ತೀ?ನಿನ್ನ ಹೆಂಡ್ತೀ ರೂಪಾ ವೈನಿ ಮುಂದ? ಏನಂತ ಹಟಾ ಮಾಡ್ತೀ? ಕೊಡ ಕೊಡ ಕೊಡ ಕೊಡ ಕೊಡ ಅಂತ ಒಂದೇ ಸವನ ಹಟಾ ಮಾಡ್ತೀ ಏನಲೇ? ಭಾಳ ಹಟಾ ಮಾಡಿದರ harassment ಅಂತ ರೂಪಾ ವೈನಿ ಕಂಪ್ಲೇಂಟ್ ಕೊಟ್ಟರು ಅಂದ್ರ ಜೈಲ್ ಸೇರಿಕೋತ್ತಿ ನೋಡ್ಕೋ ಮತ್ತ! - ಅಂತ ಹೇಳಿದೆ.

ಲೇ!!! ಹಾಪಾ!!! ನಾನು ಹಠಯೋಗ ಅಂದ್ರ ಆಸನ, ಪ್ರಾಣಾಯಾಮ ಅದು ಇದು ಅಂದ್ರ ಹಟಾ ಮಾಡೋ ಹಟ ಯೋಗ ಅಂತಿ ಅಲ್ಲಲೇ?! ತಲಿ ಇಲ್ಲದವನ! - ಅಂತ ಚೀಪ್ಯಾ ಬೈದಾ.

ಗೊತ್ತದಲೇ ಚೀಪ್ಯಾ. ಸುಮ್ಮನೇ ಚ್ಯಾಸ್ಟೀ ಅಷ್ಟೇ. ರೂಪಾ ವೈನಿ ಹಟಾ ಗಿಟಾ ಮಾಡಿದ್ರ ಜಗ್ಗೋ ಪೈಕಿ ಅಲ್ಲ ಅಂತ ನಮಗ ಗೊತ್ತದ ತೊಗೋ, ಅಂತ ಹೇಳಿದೆ.

ಇಲ್ಲಿ ತನಕಾ ಎಲ್ಲೋ ತಲಿ ಇಟ್ಟುಗೊಂಡು ಕೂತಿದ್ದ ಕರೀಮ ಒಮ್ಮೆಲೇ ಹಾಂ! ಅಂದ. ಏನಾತಪಾ ಅಂತ ನೋಡಿದಿವಿ.

ಏನು ಚೀಪ್ಯಾ ನೀವು ಹಾಥ್ ಯೋಗಾಗೆ ಮಾಡ್ತೀರಿ ಕ್ಯಾ? ಕ್ಯೂ? ಹಾಂ? ಹಾಥ್ ಯೋಗಾ ಯಾಕೆ? - ಅಂತ ಕೇಳಿಬಿಟ್ಟ ಕರೀಮ.

ಸುಮ್ಮ ಕೂಡಪಾ ಕರೀಮಾ. ಆವಾ ಮಾಡೋದು ಹಠ ಯೋಗ. ಹಾಥ್ ಯೋಗಾ ಅದು ಇದು ಮಾಡವರು ಅಲ್ಲೆಲ್ಲೋ ಜಗನ್ನಾಥ ಪುರಿ ಕಡೆ ಇದ್ದಾರಂತ ನೋಡು. ಅಲ್ಲೆ ಹೋಗಿ ಕೇಳು ಹಾಥ್ ಯೋಗಾ ಅಂದ್ರ ಏನು ಅಂತ. ಓಕೆ? - ಅಂತ ಈ ಹಾಪ್ ಕರೀಮನ್ನ ಅಷ್ಟಕ್ಕೇ ಬಂದ ಮಾಡ್ಸಿದೆ. ಇಲ್ಲಂದ್ರ......

ಯಾರು ಪುರಿ ಜಗನ್ನಾಥ ಅವರಾ ಸಾಬ್? ಫಿಲ್ಲಿಂ ಡೈರೆಕ್ಟರ್ ಕ್ಯಾ? ಅವರು ಪೂರಿ ಜಗನ್ನಾಥ ಹಾಥ್ ಯೋಗಾಗೆ ಮಾಡ್ತಾರೆ ಕ್ಯಾ? - ಅಂತ ಕೇಳಿಬಿಟ್ಟ ಸಾಬಾ.

ಹೋಗ್ಗೋ ಇವನ! ಪೂರಿ ಜಗನ್ನಾಥನೂ ಅಲ್ಲ, ಬಾಜೀ ಜಗನ್ನಾಥನೂ, ಬಾಸುಂದೀ ಜಗನ್ನಾಥನೂ ಅಲ್ಲ. ಪುರಿ ಜಗನ್ನಾಥ ಅಂದ್ರ ದೊಡ್ಡ ದೇವರಲೇ. ಸುಮ್ಮ ಕೂಡು, ಅಂತ ಸುಮ್ಮನಾಗಿಸಿದೆ.

ಸಾಬ್! ಈ ಚೀಪ್ಯಾ ಏನೋ ಕೇಳಿಕೊಂಡು ಬಂದು ಮಂಗ್ಯಾಂದು ಬಚ್ಚಾ, ಬಿಲ್ಲಿದು ಬಚ್ಚಾ ಅಂತ ಏನೇನೋ ಹೇಳ್ತಾ ಐತೆ.  ಏನು ಸಾಬ್ ಅರ್ಥಾ? - ಅಂತ ಕೇಳಿದ ಕರೀಮ.

ಅರ್ಥಾ ಹೇಳಲೇ, ಅನ್ನೋಹಾಂಗ ಚೀಪ್ಯಾನ ಕಡೆ ನೋಡಿದೆ. ನನಗೇನು ಗೊತ್ತು? ಅನ್ನವರ ಹಾಂಗ ಚೀಪ್ಯಾ ತಿರುಗಿ ನೋಡಿ ಹೇಳಿದ.

ಜ್ಞಾನಯೋಗ ಮಾಡೋದು ಅಂದ್ರ ಮರ್ಕಟ ಕಿಶೋರ ನ್ಯಾಯ ಅಂದ್ರ ಮಂಗ್ಯಾನ ಮರಿ ನ್ಯಾಯ. ಯಾಕಂದ್ರ ಜ್ಞಾನಯೋಗ ಮಾಡವರು ಒಂದು ತರಹದ abstract concept ಆದ ವಿಶ್ವಚೈತನ್ಯ 'ಬ್ರಹ್ಮನ್' ಮೇಲೆ ಧ್ಯಾನ ಮಾಡ್ತಾರ. ಓಂ ಓಂ ಅಂತ ಧ್ಯಾನ ಮಾಡ್ತಾರ. ಎಲ್ಲಾದರ ಹಿಂದ ಇರೋದು ಓಂ ಎಂಬ ಬ್ರಹ್ಮನ್ ಮಾತ್ರ ಅಂತ ಹೇಳಿ ಹೇಳಿ, ನನ್ನಲ್ಲಿರುವ ಆತ್ಮ  ಬ್ರಹ್ಮನ್, ಎಲ್ಲದರ ಪ್ರಜ್ಞಾಶಕ್ತಿ ಕೂಡ ಬ್ರಹ್ಮನ್, ನಾನು ಕೂಡ ಬ್ರಹ್ಮನ್, ನೀನು ಸಹಾ ಅದೇ ಬ್ರಹ್ಮನ್ - ಅಂತ ನಾಲ್ಕು ಮಹಾವಾಕ್ಯಗಳಲ್ಲಿ ಬ್ರಹ್ಮನ್ ಬ್ರಹ್ಮನ್ ಅಂತ ನಿರಾಕಾರ, ನಿರ್ಗುಣ, ನಿರ್ವಿಶೇಶ ಬ್ರಹ್ಮನ್ ಮೇಲೆ ಧ್ಯಾನ ಮಾಡಿ, ಜ್ಞಾನ ಪಡಕೊಂಡು, ಅಜ್ಞಾನ ದೂರ ಮಾಡಿಕೊಳ್ಳೋದು ಜ್ಞಾನಯೋಗಿಗಳ ಪ್ರಯತ್ನ. ಇದು ಒಂದು ತರಹದ ಮಂಗ್ಯಾನ ಮರಿ ಪ್ರಯತ್ನ ಇದ್ದಂಗ ನೋಡಪಾ. ಯಾಕಂದ್ರ....ತಾಯಿ ಮಂಗ್ಯಾವನ್ನು ಘಟ್ಟಿಯಾಗಿ ತಬ್ಬಿ ಹಿಡ್ಕೋಳ್ಳೋದು ಮಂಗ್ಯಾನ ಮರಿಯ ಜವಾಬ್ದಾರಿ. ತಾಯಿ ಮಂಗ್ಯಾ ಅಲ್ಲೆ ಇಲ್ಲೆ ಜಿಗಿಯುವಾಗ ಮರಿ ಎಲ್ಲರೆ ಕೈ ಬಿಡ್ತು ಅಂದ್ರ ಅಷ್ಟೇ. ಕೆಳಗ ಬಿದ್ದು ಸಾಯ್ತದ. ತಾಯಿ ಮಂಗ್ಯಾ ಏನೂ ಮಾಡೋದಿಲ್ಲ. ಮರಿ ಸತ್ತರ ಅತ್ತೀತೆ ಹೊರತು ಮತ್ತೇನಿಲ್ಲ. ಜ್ಞಾನಯೋಗ ಮಾಡೋದು ಅಂದ್ರ ಹಾಂಗೇ. ದೇವರಿಗೆ ಯಾವದೂ ರೂಪ ಇಲ್ಲ, ಆಕಾರ ಇಲ್ಲ, ಅದು ಕೇವಲ ಒಂದು ತರಹದ ಶಕ್ತಿ, ಚೈತನ್ಯ ಅಂತ abstract concept ಇಟ್ಟುಗೊಂಡು ಜ್ಞಾನಯೋಗ ಮಾಡಿದರ ಹಾಂಗೇ. ತಾಯಿ ಸಮಾನವಾದ ಬ್ರಹ್ಮನ್ ಜ್ಞಾನಯೋಗಿಗಳನ್ನ ಮಂಗ್ಯಾನಮರಿ ಹಾಂಗೆ ಇಲ್ಲಿಂದ ಅಲ್ಲಿಗೆ ಮುಟ್ಟಿಸ್ತದ. ಆದ್ರ ಏನೂ ಸಹಾಯ ಮಾಡೋದಿಲ್ಲ. ಎಲ್ಲಾ ಜವಾಬ್ದಾರಿಯನ್ನು ನಮ್ಮ ಮ್ಯಾಲೆ ಹಾಕಿ ಬಿಡ್ತದ. ಜ್ಞಾನಯೋಗ ಮಾಡವರು ಘಟ್ಟೆ ಹಿಡಕೊಂಡು, ಕೈ ಬಿಡದೆ, ಕೆಳಗ ಬೀಳದೆ ಮುಕ್ತಿ ಪಡಕೊಂಡರು ಓಕೆ. ಇಲ್ಲಂದ್ರ ಬಿದ್ದು ಸಾಯ್ತಾರ. ತಿಳಿತೇನ್ರೋ? - ಅಂತ ಕೇಳಿದೆ.



ವಾಹ್!ಮಂಗೇಶ! ಮಸ್ತ ಜ್ಞಾನ ಇಟ್ಟಿ ಬಿಡಪಾ. ಮೊದಲಿಂದ ಮಂಗ್ಯಾನ ಮರಿ ಹಾಂಗ ಇದ್ದು ಈಗ ಹೊನಗ್ಯಾ ಗೊರಿಲ್ಲಾ ಆಗಿ. ನೀನೂ ಸಹ ಜ್ಞಾನಯೋಗ ಮಾಡವನೇ ಇರಬೇಕು ಬಿಡು, ಅಂತ ಅಂದಾ ಚೀಪ್ಯಾ.

ದೊಡ್ಡ ಮಾತು! ದೊಡ್ಡ ಮಾತು! ಜ್ಞಾನಯೋಗ ಅದು ಇದು ಎಲ್ಲ ನಮ್ಮ ಪರಮ ಗುರುಗಳಾದ ಆದಿ ಶಂಕರಾಚಾರ್ಯರಿಗೆ ಮಾತ್ರಪಾ. ನಮ್ಮಂತ ಹುಲು ಮಾನವರಿಗೆ ಅಲ್ಲ, ಅಂತ ಹೇಳಿದೆ.

ಕ್ಯಾ ಸಾಬ್? ರಾಸ್ತೇ ಮೇಲೆ ನಿಂತು ಹುಲ್ಲು ಮಾನವರು ಅಂತೀರಲ್ಲಾ?! ಹಾಂ? - ಅಂದಾ ಕರೀಮ.

ಹೋಗ್ಗೋ!! ಸಾಬ್ರಾ!!! ನಾನು ಅಂದಿದ್ದು ಹುಲು ಮಾನವ ಅಂತ. ಹುಲ್ಲು ಮಾನವ ಅಲ್ಲ. ಹುಲ್ಲಿನ ಮ್ಯಾಲೆ ನಿಂತಿಲ್ಲ. ಖರೆ. ಹುಲು ಮಾನವ ಅಂದ್ರ ಆಮ್ ಆದಮೀ ಅಂತ. ತಿಳಿತ? -ಅಂತ ಹೇಳಿದೆ.

ಆಮ್ ಆದಮೀ ಮತಲಬ್ ಅರವಿಂದ ಕ್ರೇಜೀವಾಲ್ ಕ್ಯಾ? ಅವರದ್ದು ಪಾರ್ಟಿ ಹೆಸರು ಆಮ್ ಆದಮೀ ಪಾರ್ಟಿ ಅಂತಾ ಅಲ್ಲಾ? ಆ ಕ್ರೇಜಿ ಅಂದ್ರೆ ಹುಚ್ಚ ಹಾಗೆ ಕಾಣೋ ಕ್ರೆಜೀವಾಲಗೆ ಮತ್ತೆ ಮಂಗ್ಯಾನ ಮರಿಗೆ ಮತ್ತೆ ಜ್ಞಾನದು ಯೋಗಾಗೆ ಏನು ಸಂಬಂಧ ಸಾಬ್? - ಅಂದ ಕರೀಂ.

ಸ್ವಚ್ಚ ಹಾಪ ಆಗಿ ಅಲ್ಲಲೇ ಸಾಬಾ!? ಹುಲು ಮಾನವ ಅಂದ್ರ ಆಮ್ ಆದಮೀ ಅಂದ್ರ ಶ್ರೀ ಸಾಮಾನ್ಯ ಅಂದ್ರ ಅದನ್ನ ಅರವಿಂದ ಕೆಜ್ರೀವಾಲನ ಆಮ್ ಆದಮೀ ಪಾರ್ಟಿಗೆ ತೊಗೊಂಡು ಹೋಗಿ ಲಿಂಕ್ ಮಾಡ್ತಿಯಲ್ಲೋ ಹಾಪಾ! - ಅಂತ ಬೈದೆ.

ಅವನ್ನ ಬಿಡಪಾ ನೀನು. ಈಗ ಭಕ್ತಿಯೋಗ ಮಾಡವರು ಬೆಕ್ಕಿನಮರಿ ಹ್ಯಾಂಗ ಅನ್ನೋದನ್ನ ಹೇಳು, ಅಂತ ಚೀಪ್ಯಾ ಕೇಳಿಕೊಂಡ.

ತಾಯಿ ಬೆಕ್ಕು ತನ್ನ ಮರಿ ಹ್ಯಾಂಗ ತೊಗೊಂಡು ಹೋಗ್ತದ ಅಂತ ನೋಡಿರೀ ಏನು? ಹಾಂ? ತಾಯಿ ಬೆಕ್ಕು ತನ್ನ ಮರೀನ ನಾಜೂಕಾಗಿ ಕುತ್ತಿಗಿ ಹಿಡದು ಎತ್ತಿ, ಬಾಯಿಯೊಳಗ ಮರಿಗೆ ಸ್ವಲ್ಪೂ ನೋವಾಗದ ಹಾಂಗ ಕಚ್ಚಿಕೊಂಡು ಆ ಕಡೆಯಿಂದ ಈ ಕಡೆ ಇಟ್ಟು ಬರ್ತದ. ಬೆಕ್ಕಿನ ಮರಿ ಮಾಡಬೇಕಾಗಿದ್ದು ಏನೂ ಇಲ್ಲ. ಕಣ್ಣು ಮುಚ್ಚಿ, ತಾಯಿ ಮೇಲೆ ಪೂರ್ತಿ ನಂಬಿಕೆ ಮತ್ತು ಭರೋಸಾ ಇಟ್ಟು, ಎಲ್ಲಾ ನಿನ್ನ ಮ್ಯಾಲೆ ಹಾಕಿ ಬಿಟ್ಟೇನಿ ಅವ್ವಾ, ನೀನೇ ನನ್ನ ಕಾಪಾಡಬೇಕು, ಅಂತ ಹೇಳಿ ಬೆಕ್ಕಿನಮರಿ ಏನೂ ಮಾಡದೇ ಇದ್ದು ಬಿಡ್ತದ. ತಾಯಿ ಬೆಕ್ಕು ಎಲ್ಲಾ  ಜವಾಬ್ದಾರಿ ತೊಗೊಂಡು, ಬೆಕ್ಕಿನ ಮರಿಯನ್ನ ಆ ಕಡೆಯಿಂದ ಈ ಕಡೆ ಮುಟ್ಟಿಸೋ ಕೆಲಸಾ ಮಾಡಿ ಮುಗಸ್ತದ. ಭಕ್ತಿಯೋಗ ಮಾಡೋ ಭಕ್ತರು ಅಂದ್ರ ಬೆಕ್ಕಿನಮರಿ ಇದ್ದಂಗ. ತಮಗೆ ಇಷ್ಟವಾದ ರೂಪದಲ್ಲಿ ದೇವರನ್ನ ಭಕ್ತಿಯಿಂದ ಪೂಜಿಸ್ತಾರ. ರಾಮ, ಕೃಷ್ಣ, ವಿಷ್ಣು, ಶಿವಾ, ದೇವಿ, ಹನುಮಂತ, ಗಣಪತಿ, ಶನಿ, ಆ ದೇವರು, ಈ ದೇವಿ, ಯಾವದು ಬೇಕಾದರೂ ಓಕೆ. ಭಕ್ತಿ ಇರಬೇಕು. ಪೂರ್ತಿ ಶ್ರದ್ಧೆ ಇರಬೇಕು. ಒಂದು ರೂಪವಿರುವ, ಒಂದು ಆಕಾರವಿರುವ, ಬೇರೆ ಬೇರೆ ತರಹದ ದೈವಿ ಶಕ್ತಿಗಳಿರುವ ದೇವರುಗಳನ್ನ ಪೂಜಾ ಮಾಡೋದು ಸಹ ಒಂದು ನಮೂನಿ ಸರಳ ನೋಡು. ಅದಕ್ಕೇ ಅಂತ ಬೇಕಾದಷ್ಟು ಮಂತ್ರ ಅವ, ಪೂಜಾ ಪದ್ಧತಿ ಅವ, ಎಲ್ಲಾ ಅವ. ಹೀಂಗ ಅಚಲ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ಮುಕ್ತಿ ಹೊಂದೋದು ಭಕ್ತಿಯೋಗ. ದೇವರು ಇಂತಹ ಭಕ್ತರನ್ನ ತಾಯಿ ಬೆಕ್ಕು ತನ್ನ ಮರಿಯ ಸಂಪೂರ್ಣ ಜವಾಬ್ದಾರಿ ತೊಗೊಂಡ ಹಾಂಗ ದೇವರು ಎಲ್ಲಾ ಜವಾಬ್ದಾರಿ ತೊಗೊಂಡು ಭಕ್ತಿಯೋಗ ಮಾಡುತ್ತಿರುವ ಸಾಧಕನನ್ನು ಈ ಲೋಕದಿಂದ ಆ ಲೋಕದ ತನಕ ನಾಜೂಕಾಗಿ ಹೋಗಿ ಮುಟ್ಟಿಸ್ತಾನ ಅಂತ ಹೇಳ್ತದ ಈ ಮಾರ್ಜಾಲ ಕಿಶೋರ ನ್ಯಾಯ. ಎಲ್ಲಾ ದೇವರ ಮ್ಯಾಲೆ ಹಾಕ್ರೀ. ಭಕ್ತಿಯೊಂದು ನೀವು ಮಾಡ್ರೀ ಅಂತ ಅರ್ಥ. ತಿಳೀತ? - ಅಂತ ಕೇಳಿದೆ.
 


ಓಹೋ! ಹೀಂಗ ಅನ್ನು. ಭಾರಿ ಅದ ಬಿಡಪಾ. ಜ್ಞಾನಯೋಗ ಅಂದ್ರ ಫುಲ್ self service. ಮತ್ತ ಭಕ್ತಿಯೋಗ ಅಂದ್ರ God assisted living ಇದ್ದಂಗ ಅನ್ನು. ಅದಕ್ಕೆ ಇರಬೇಕು, ಸ್ವಾಮಿಗಳು ಭಕ್ತಿಯೋಗ ಮಾಡ್ರೀ, ಭಕ್ತಿಯೋಗ ಮಾಡ್ರೀ ಅಂತ ಹೇಳಿದ್ದು, ಅಂದಾ ಚೀಪ್ಯಾ.

ಸಾಬ್! - ಅಂದ ಕರೀಮ ತಲಿ ಕೆರಕೊಂಡ. ಇವಾ ಹೀಂಗ ತಲಿ ಕೆರಕೊಂಡ ಅಂದ್ರ ಡೇಂಜರ್.

ಸಾಬ್....ನಮ್ಮದೂಕಿ ಧರ್ಮದ ಆದಮೀ ಒಬ್ಬರು ಸಿಕಂದರ್ ಭಕ್ತ ಅಂತಾ ಇದ್ದರು. ಅವರು ಯಾವದೇ ಯೋಗ ಮಾಡಿದರು ಅದು ಭಕ್ತಿ ಯೋಗ ಆಗ್ತದೆ ಕ್ಯಾ? ಅವರೇ ಹೆಸರೇ ಭಕ್ತ ಇದ್ದ ಮ್ಯಾಲೆ ಅವರು ಮಾಡೋ ಯೋಗ ಭಕ್ತಿಯೋಗ ಆಗಲಿಕ್ಕೇ ಬೇಕು ಅಲ್ಲಾ? ಕ್ಯಾ ಬೋಲ್ತಾ? ಈ ರಾಜಾದು ಮಂದಿ ಮಾಡೋ ಯೋಗಾ ರಾಜಯೋಗ ಆದ ಮ್ಯಾಲೆ ಸಿಕಂದ್ರ ಭಕ್ತ ಮಾಡೋದು ಭಕ್ತಿಯೋಗ ಆಗ್ತದೆ ಅಲ್ಲಾ? - ಅಂತ ಕರೀಮ ಇಲ್ಲದ ಕಿತಬಿ ಮಾಡಿದ.

ಲೇ!ಹಾಪಾ! ಅವರು ಸಿಕಂದರ ಭಕ್ತ ಬಿಜೆಪಿ ಒಳಗ ಇದ್ದ ಒಬ್ಬ ನಿಮ್ಮ ಧರ್ಮದ ನಾಯಕರು. ಈಗ ಏನು ಮಾಡಿಕೋತ್ತ ಇದ್ದಾರೋ ಯಾರಿಗೆ ಗೊತ್ತು? ಮತ್ತ ರಾಜಯೋಗ ಅಂದ್ರ ರಾಜರು ಮಾಡೋ ಯೋಗ ಅಲ್ಲ. ಧ್ಯಾನ, ಮೆಡಿಟೇಶನ್ ಮ್ಯಾಲೆ ಜಾಸ್ತಿ ಒತ್ತು ಕೊಟ್ಟಿರುವ ಅಧ್ಯಾತ್ಮಿಕ ಪದ್ಧತಿಗೆ ರಾಜಯೋಗ ಅಂತಾರ. ಏನೇನರೆ ಊಹಾ ಮಾಡಿಕೊಂಡು ಇಲ್ಲದ್ದು ಹೇಳಬ್ಯಾಡ. ತಿಳೀತ? - ಅಂತ ಹೇಳಿದೆ.

ಐಸಾ ಕ್ಯಾ? ಅಚ್ಚಾ ಜೀ - ಅಂತ ಸುಮ್ಮನಾದ ಕರೀಮ.

ಚೀಪ್ಯಾ...ಚೀಪ್ಯಾ.... ಏಕ ಬಾತ್ ಬತಾವೋ....ನಿಮ್ಮದೂಕಿ ಸ್ವಾಮಿಜೀ ಕರ್ಮಾದು ಯೋಗಾ ಬಗ್ಗೆ ಏನೂ ಹೇಳಲಿಲ್ಲ ಕ್ಯಾ? - ಅಂತ ಕೇಳಿದ.

ಏನ್ರೀ ಸಾಬ್ರಾ? ಭಾರಿ ಆತಲ್ಲ. ಕರ್ಮಯೋಗದ ಬಗ್ಗೆ ಸಹಿತ ತಿಳ್ಕೊಂಡು ಬಿಟ್ಟಿರೀ. ಕರ್ಮಯೋಗದ ಬಗ್ಗೆ ಮತ್ತ ಯಾವಗರೆ ಹೇಳತೇನಿ ಅಂತ ಹೇಳಿದರು ಸ್ವಾಮಿಗಳು. ಕರೀಮಾ, ನಿನಗ ಗೊತ್ತಿದ್ದರ ನೀನೇ ಹೇಳಿಬಿಡು ಕರ್ಮ ಯೋಗದ ಬಗ್ಗೆ, ಅಂತ ಚೀಪ್ಯಾ ಕರೀಮಗ ಹೇಳಿದ.

ಕ್ಯಾ ದೋಸ್ತ ಚೀಪ್ಯಾ.......ಏನು ಹೇಳ್ತಾ ಐತೆ ನೀವು? ನಮ್ಮದೂಕೆ ಹೆಸರೇ ಕರೀಂ ಐತೆ. ಕರೀಮಾದಾ ಯೋಗಾನೇ ಕರಮ್ ಯೋಗಾ. ಹಾ!ಹಾ! - ಅಂತ ಕರೀಮಾ ಜೋಕ್ ಹೊಡೆದ.

ನೋಡು ಚೀಪ್ಯಾ. ಕರ್ಮಾ ಯೋಗಾ ಭಾಳ ಸಿಂಪಲ್. ನಮಗೆ ನೋಡು. ನಾವು ಮುಜಾನೆ ಎದ್ದಾಗಿಂದ ರಾತ್ರಿ ಮಲಗೋ ತನಕಾ ಒಂದಾದ ಮೇಲೆ ಒಂದರಂತೆ ಕಾಮ್ ಮಾಡ್ತೇವೆ. ಕಾಮ್ ಅಂದ್ರೆ ಕೆಲಸ ಅಂದ್ರೆ ಕರ್ಮ. ಓಕೆ? ನಂತರ ರಾತ್ರಿ ಊಟ ಮಾಡ್ಬಿಟ್ಟಿ, ಬೀವಿ ಪಕ್ಕ ಹೋಗಿಬಿಟ್ಟಿ ಯೋಗಾ ಮಾಡ್ತೇವೆ. ಮುಂಜಾನೆಯಿಂದ ಸಂಜೆ ತನಕ ಕರ್ಮ ಅಂದ್ರೆ ಕೆಲಸ ಮಾಡೋದು. ರಾತ್ರಿ ಬೀವಿ ಪಕ್ಕ ಹೋಗಿ ಯೋಗಾ ಮಾಡೋದು. ಕರ್ಮ+ಯೋಗ = ಕರ್ಮಯೋಗ ಆಯಿತು. ಅಲ್ಲಾ? ಕ್ಯಾ ಬೋಲ್ತಾ? - ಅಂದು ಬಿಟ್ಟ ಕರೀಮ.

ಹೋಗ್ಗೋ ಇವನ! ಕರ್ಮ ಅಂದ್ರ ಕೆಲಸಾ ಮಾಡಿ ನಂತರ ಯೋಗಾ ಮಾಡಿಬಿಟ್ಟರ ಕರ್ಮ ಯೋಗ ಆತಂತ. ಭಾರಿ ಅರ್ಥ ಬರೋ ಹಾಂಗ ಹೇಳ್ತಾನ ನಮ್ಮ ಕರೀಮ.

ಲೇ ಹಾಪ್ ಕರೀಂ! ಹೆಂಡ್ತಿ ಬಾಜೂಕ ಹೋಗಿ ಏನು ಯೋಗಾ ಮಾಡ್ತೀಲೆ? ಅದೂ ರಾತ್ರಿ? ಅಂತಾ ಹೊಲಸ್ ಹೊಲಸ್ ಕೆಲಸಕ್ಕ ಯೋಗಾ ಅಂತ ಬ್ಯಾರೆ ಕರೀತಿಯಲ್ಲಲೇ ಹೇಶಿ ಮಂಗ್ಯಾನಿಕೆ! ಥೂ! - ಅಂತ ಚೀಪ್ಯಾ ಕರೀಮಗ ಬೈದಾ.

ಯಾಕೆ ಚೀಪ್ಯಾ ಬೈತೀ ನಮಗೆ? ನೀನೂ ಕೂಡ ರಾತ್ರಿ ಬೀವಿ ಮಗ್ಗುಲಾಗೆ ಯೋಗಾ ಮಾಡೋದಿಲ್ಲ ಕ್ಯಾ? ಮಾಡ್ತೀ ಮಾಡ್ತೀ - ಅಂದಾ ಕರೀಂ.

ನಾ ಏನ್ ಮಾಡ್ತೆನಲೇ? ಸುಮ್ಮನ ಹೋಗಿ ಬಾಜೂಕ ಮಲ್ಕೊತ್ತೇನಿ ಅಷ್ಟೇ. ಮತ್ತೇನು ಯೋಗಾ ಮಾಡ್ತೇನಿ? - ಅಂತ ಕೇಳಿದ ಚೀಪ್ಯಾ.

ಅದೇ ಚೀಪ್ಯಾ ಯೋಗಾ. ಮಲ್ಕೊಳ್ಳೋದು ಅಂದ್ರೆ ಯಾವ ಆಸನ ಹೇಳು? ಶವಾಸನ. ಅದೂ ಒಂದು ಆಸನ. ಗೊತ್ತೈತೆ ಕ್ಯಾ?
ಶವಾಸನ ಹಾಕಿದರೆ ಯೋಗ ಆಯ್ತು ಅಲ್ಲಾ? ದಿನಾ ಪೂರ್ತಿ ಕರ್ಮಾ ಅಂದ್ರೆ ಕೆಲಸಾಗೆ ಮಾಡ್ಬಿಟ್ಟಿ ರಾತ್ರಿ ಬೀವಿ ಬಾಜೂಕೆ ಶವಾಸನ ಹಾಕಿ ಬಿಟ್ಟರೆ ಕರ್ಮಾದು ಯೋಗ ಆಗಲಿಲ್ಲ ಕ್ಯಾ? ಕ್ಯಾ? - ಅಂತ ಕರೀಮ ಫುಲ್ ತಾನು ಕರೆಕ್ಟ್ ಇದ್ದೇನಿ ಅನ್ನವರಂಗ ಕೇಳಿದ.

ಹೋಗ್ಗೋ ಸಾಬಾ! ಭಾರಿ ಅದ ಬಿಡಪಾ ನಿನ್ನ ವಿವರಣೆ. ಹೆಂಡ್ತಿ ಬಾಜೂಕ ಶವಾಸನ ಹಾಕಿ ಸತ್ತ ಹೆಣದ ಹಾಂಗ ಬಿದ್ದುಕೊಳ್ಳೋದ ಭಾಳ ಮಂದಿ middle age ಗಂಡಸೂರ ಹಣೆಬರಹ ನೋಡಪಾ. ಹಾಂಗಾಗಿ ನಾನೂ ಸಹಿತ ನಿನ್ನ ಹಾಂಗ ಒಂದು ತರಹದ ಕರ್ಮಯೋಗಿನೇ ನೋಡಪಾ ಕರೀಮ - ಅಂತ ಚೀಪ್ಯಾ ಒಪ್ಪಿಕೊಂಡ.

so  ಚೀಪ್ಯಾ, ಕರೀಮಾ...ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮೂರೂ ತಿಳಕೊಂಡು ಬಿಟ್ಟಿರಿ. ಇನ್ನೂ ಮಂತ್ರಯೋಗ, ರಾಜಯೋಗ, ತಂತ್ರಯೋಗ, ಕುಂಡಲಿನಿಯೋಗ ಅಂತ ಮತ್ತೂ ಹಲವಾರು ತರಹದ ಯೋಗಗಳು ಅವ. ಅವುಗಳ ಬಗ್ಗೆನೂ ತಿಳಿದುಕೊಳ್ಳರೋ. ಯೋಗ ಅಂದ್ರ ಜೋಡಿಸು ಅಂತ ಅಷ್ಟೇ. ದೇವರ ಜೋಡಿ ನಮ್ಮನ್ನು ಜೋಡಿಸೋದು ಎಲ್ಲಾ ಯೋಗಗಳೇ. diffrent paths leading to the same destination! - ಅಂತ ಹೇಳಿದೆ.

ಓಕೆ! ಓಕೆ! ಸಾಕು ಈಗ. ರಾತ್ರಿ ಭಾಳ ಆತು. ಮನಿಗೆ ಹೋಗಿ ಶವಾಸನ ಹಾಕಿ ಬಿಡ್ತೇನಿ. ನನಕಿಂತ ಮೊದಲೇ ಸತ್ತ ಹೆಣಕ್ಕೂ ಹೆದರಿಕಿ ಬರೋ ಹಾಂಗ ಶವಾಸನ ಹಾಕಿ ನನ್ನ ಹೆಂಡ್ತಿ ಉರ್ಫ್ ನಿನ್ನ ರೂಪಾ ವೈನಿ ಮಲಗಿ ಬಿಟ್ಟಿರತಾಳ. ನಿದ್ದಿಗಣ್ಣಾಗೂ ಜಾಡಿಸಿ ಒದಿತಾಳ ಮಾರಾಯಾ ಅಕಿ. ಕೇಳಿದರ sleep walking ಇದ್ದಂಗ ಇದು sleep kicking ಅಂತ ಕಿಸಿ ಕಿಸಿ ನಗ್ತಾಳ ಮಾರಾಯಾ ನಿಮ್ಮ ರೂಪಾ ವೈನಿ. ಕೆಟ್ಟ ಬುದ್ಧಿ ಅಂದ್ರ, ಕೇಳಬ್ಯಾಡ ಅಕಿದು, ಅಂತ ಮಂಚ ಹತ್ತಿದ ಕೂಡಲೇ ಒದಿಕಿ ಬೀಳ್ತಾವ ಅಂತ ಚೀಪ್ಯಾ ಸೂಕ್ಷ್ಮವಾಗಿ ಹೇಳಿದ. ಪಾಪ ಅನ್ನಿಸ್ತು.

ಹೋಗಿ ಬರ್ರಿಲೆ ಹಾಂಗಿದ್ದರ. ಮತ್ತ ಸಿಗೋಣ. ಸಾಬ್ರಾ ಖುದಾ ಹಾಫಿಜ್ರೀಪಾ. ಬರೆ ಶವಾಸನ ಯಾಕ್ರೀ? ಒಂದು ದಿವಸ ಸಿದ್ಧಾಸನ ಹಾಕ್ರೀ, ಅಂತ ಕಣ್ಣು ಹೊಡೆದು ಚ್ಯಾಸ್ಟಿ ಮಾಡಿದೆ.

ಸಿದ್ಧಾಸನ ಮತ್ಲಬ್? ಕ್ಯಾ? ಅದನ್ನು ಕಲಿಲಿಕ್ಕೆ ಸಿದ್ಧಾರೂಢ ಮಠಕ್ಕೆ ಹೋಗಬೇಕು ಕ್ಯಾ? - ಅಂತ ಕೇಳಿ ಮತ್ತ ತಲಿ ತಿನ್ನಲಿಕ್ಕೆ ರೆಡಿ ಆದ ಕರೀಮಾ.

ಸುಮ್ಮನ ಹೋಗಪಾ. ಹೋಗಿ ಯಾವದಾರೆ ಆಸನ ಹಾಕ್ಕೊಂಡು ಬಿದ್ಕೋ. ತಲಿ ತಿನ್ನಬ್ಯಾಡ, ಅಂತ ಹೇಳಿ ನಾ ಓಡಿ ಬಂದೆ.

** ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ - ಸ್ವಾಮಿ ಮುಕುಂದಾನಂದರು ಬರೆದ ಭಗವದ್ಗೀತೆಯ ಮೇಲಿನ ಪುಸ್ತಕದಿಂದ ಎತ್ತಿದ್ದು. ಹನ್ನೆರಡನೆಯ ಅಧ್ಯಾಯ, ಭಕ್ತಿಯೋಗದ, ಐದನೇಯ ಶ್ಲೋಕದಲ್ಲಿ ಭಗವಾನ ಕೃಷ್ಣ ಅರ್ಜುನನಿಗೆ ಜ್ಞಾನಯೋಗ ಎಷ್ಟು ಕಷ್ಟವಾದದ್ದು ಎಂಬುದನ್ನು ವಿವರಿಸುತ್ತಾನೆ. ಅದನ್ನು ವಿವರಿಸಲು ಮುಕುಂದಾನಂದರು  ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ ಉದಾಹರಣೆ ಆಗಿ ಉಪಯೋಗಿಸುತ್ತಾರೆ.