Friday, August 31, 2012

ನೀನು ಇಂಜಿನಿಯರ್ ಆದ್ರೆ, ನಾವು ಸೂಪರ್ ಇಂಜಿನಿಯರ್ಸ - ಅಂದಿದ್ದರು ಇಸ್ರೇಲಿಗಳು

ಮೊದಲಿಂದ ಅವನು ಮೊಬೈಲ್ ಫೋನ್ ಉಪಯೋಗಿಸುವದು ಕಮ್ಮಿಯೇ. ಈಗಿತ್ತಲಾಗೆ ಶುರು ಮಾಡಿದ್ದ. ಲ್ಯಾಂಡ್ ಲೈನ್ ಟ್ರಾಪ್ ಆಗಿರುವ ವಿಚಾರ ಗೊತ್ತಿತ್ತು. ಹಾಗಾಗಿ ಹೆಚ್ಚು ಮಾತಾಡುತ್ತಿರಲಿಲ್ಲ. ಆದರೂ ವೃದ್ಧ ತಂದೆಯೊಂದಿಗೆ ವಾರಕ್ಕೆ ಒಂದು ಸಾರಿ ಮಾತಾಡುತ್ತಿದ್ದ. ಫೋನ್ ಇಟ್ಟ ತಕ್ಷಣ ಓಡುತ್ತಿದ್ದ. ಅದು ರುಟೀನ್ ಆಗಿತ್ತು. ಯಾಕೆಂದ್ರೆ ಅವನಿರುವ ಜಾಗ ಪೊಲೀಸರಿಗೆ 2-3 ನಿಮಿಷದಲ್ಲಿ ತಿಳಿದು, ಕಂಟ್ರೋಲ್ ರೂಮಿನಿಂದ ಅದು ಹತ್ತಿರದ ಪೋಲಿಸ್ ಚೌಕಿಗೆ ರವಾನೆಯಾಗಿ, ಅವರು ಬಂದು ಮುಟ್ಟುವ ಹೊತ್ತಿಗೆ ಇವನು ಪರಾರಿ. ಎಷ್ಟೋ ಸಲ ಅವರ ಮುಂದೆಯೇ ಬುರ್ಕಾ ಹಾಕಿದ ಮಹಿಳೆ ರೂಪದಲ್ಲಿ ಪರಾರಿಯಾಗಿದ್ದ ಭೂಪ ಅವನು.

ಇವತ್ತು ಯಾಕೋ ಮೊಬೈಲ್ ಫೋನ್ ಎತ್ತಿದ. ಅದೇ ಹಳೆ ಫೋನ್. ಒಂದು ಇಟ್ಟಿಗೆ ಸೈಜಿಗೆ ಇತ್ತು. ಆತ್ಮೀಯ ದೋಸ್ತ ಕೊಟ್ಟಿದ್ದ. ಸೇಫ್ ಅಂದಿದ್ದ. ಮತ್ತೆ ಜೊತೆಗೆ ತೆಗೆದುಕೊಂಡು ಓಡಬಹುದು. ಫೋನ್ ಬೂತಿನಿಂದ ಬೂತಿಗೆ ಓಡುವ ಜರೂರತ್ ಇಲ್ಲ.

ಅಪ್ಪನಿಗೆ ಫೋನ್ ಮಾಡಿದ. ಅಪ್ಪ ಎತ್ತಿದ ಆ ಕಡೆ. ಒಂದೆರಡು ನಿಮಿಷ ಮಾತಾಡಿರಬಹುದು. ಅಷ್ಟೇ. ಜಾಸ್ತಿ ಇಲ್ಲ. 

ಟಪ್ ಅಂತ ಒಂದು ಚಿಕ್ಕ ಸ್ಪೋಟ. ಫೋನ್ ಹಿಡಿದಿದ್ದ ಕಡೆಯ ತಲೆ ನೀಟಾಗಿ ಒಡೆದ ತೆಂಗಿನಕಾಯಿ ರೀತಿಯಲ್ಲಿ ಸೀಳಿ, ಮೆದಳು ಹೊರಗೆ ಬಂತು. ಧರೆಗೆ ಉರುಳಿದ. ಮಟಾಶ್. ಖೇಲ್ ಖತಂ.

ಇಂಜಿನಿಯರ್ ಎಂದೇ ಖ್ಯಾತನಾಗಿದ್ದ ಯಾಹ್ಯಾ ಅಯ್ಯಾಶ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿಯನ್ನು ಇಸ್ರೇಲಿಗಳು ಮೊಬೈಲ್ ಫೋನಿನಲ್ಲಿ ಸಣ್ಣ ಪ್ರಮಾಣದ RDX ಸ್ಪೋಟಕ ತುಂಬಿ, ಅದನ್ನ ರಿಮೋಟ್ ಕಂಟ್ರೋಲಿನಿಂದ ಸ್ಪೋಟಿಸಿ ಅವನಿಗೆ ಸ್ವರ್ಗದ ದಾರಿ ತೋರಿಸಿದ್ದರು. ಮರು ದಿವಸದ ಹೆಡ್ಲೈನ್ಸ್ - Engineer out engineered!

ಯಾಹ್ಯಾ ಅಯ್ಯಾಶ್ ತುಂಬ ಬುದ್ಧಿವಂತ ಹುಡುಗ. ಪ್ಯಾಲೆಸ್ಟೈನ್ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ ಬೆಳೆದಿದ್ದ. ಅಂತಹ ವಾತವರಣದಲ್ಲಿ ಬೆಳೆದಿದ್ದರೂ ಕಷ್ಟಪಟ್ಟು ಓದಿ ಇಂಜಿನಿಯರ್ ಡಿಗ್ರಿ ಮಾಡಿಕೊಂಡಿದ್ದ. ಇಲೆಕ್ಟ್ರೋನಿಕ್ಸ್ ನಲ್ಲಿ. ಮುಂದೆ ಹೊರ ದೇಶಕ್ಕೆ ಹೋಗಿ ಓದುವ ಆಸೆ. 

ಆಗಿನ್ನೂ ಗಾಜಾ ಪಟ್ಟಿ, ವೆಸ್ಟ್ ಬ್ಯಾಂಕ್ ಎರಡೂ ಕಡೆ ಇಸ್ರೇಲಿಗಳ ಆಡಳಿತ. ಅವರು ಎಕ್ಸಿಟ್ ಪಾಸ್ ಕೊಟ್ಟರೆ ಮಾತ್ರ ಹೊರಗೆ ಹೋಗಬಹುದು. ಇಲ್ಲಾಂದ್ರೆ ಇಲ್ಲ. ಅವರು ಕೊಡಲಿಲ್ಲ. ನಂತರ 'ಯಾಕೆ ಕೊಡಲಿಲ್ಲವೋ' ಅಂತ ಅವರಿಗೇ ಅನ್ನಿಸಿರಬೇಕು. ಆ ತರಹದ ಖತರ್ನಾಕ್ ಉಗ್ರಗಾಮಿಯಾಗಿ ತಯಾರ್ ಆಗಿ ಬಿಟ್ಟ ಯಾಹ್ಯಾ ಅಯ್ಯಾಶ್.

ಕೊತ ಕೊತ  ಉರಿಯುತ್ತಿದ್ದ  ಯಾಹ್ಯಾ ಅಯ್ಯಾಶ್ ಹೋಗಿ ನಿಂತಿದ್ದು ಆಗತಾನೆ ಎದ್ದು ನಿಲ್ಲುತ್ತಿದ್ದ 'ಹಮಾಸ್' ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಬಾಗಿಲಲ್ಲಿ. ಅವನಿಗೆ ಅಲ್ಲಿ ಸ್ವಾಗತವೇ ದೊರೆಯಿತು. ಪೂರ್ತಿ ಹಿಂಸಾತ್ಮಕ ಅವರ ರೂಟ್. ದೊಡ್ಡ ಮಟ್ಟದ ಬಾಂಬ್ ತಯಾರಕನಾಗಿ ರೆಡಿ ಆದ ಯಾಹ್ಯಾ ಅಯ್ಯಾಶ್. ಸೂಸೈಡ್ ಬಾಂಬಿಂಗ್ ಎಂಬ ಖತರ್ನಾಕ್ ಟೆಕ್ನಿಕ್ ಅನ್ನು ಸಿಕ್ಕಾಪಟ್ಟೆ ಇಂಪ್ರೂವ್ ಮಾಡಿಬಿಟ್ಟ ತನ್ನ ಆವಿಷ್ಕಾರಗಳಿಂದ.

ಮೊದಲೆಲ್ಲ ಸೂಸೈಡ್ ಬಾಂಬರ್ಗಳು ದೊಡ್ಡ ದೊಡ್ಡ ಬಾಂಬ್ ಬೆಲ್ಟ್ ಇತ್ಯಾದಿ ಕಟ್ಟಿಕೊಂಡು ಹೋಗಬೇಕಾಗಿತ್ತು. ಎದ್ದು ಕಾಣುತ್ತಿತ್ತು. ಇಸ್ರೇಲಿಗಳು ಹುಷಾರಾಗಿ ಬಿಟ್ಟಿದ್ದರು. ದಪ್ಪ ದಪ್ಪ ವೇಷ ಹಾಕಿಕೊಂಡ ಡೌಟ್ ಬಂದ ಜನರೆಲ್ಲರ ಅಂಗಿ ಚಡ್ಡಿ ಬಿಚ್ಚಿ ತಪಾಸಣೆ ಮಾಡಿಯೇ ಇಸ್ರೇಲ್ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಅರಬ್ ಮಹಿಳೆಯರನ್ನೂ ಬಿಡುತ್ತಿರಲಿಲ್ಲ.

ಯಾಹ್ಯಾ ಅಯ್ಯಾಶ್ ಬಹಳ ಕಾಂಪಾಕ್ಟ್ ಆಗಿ ಸೂಸೈಡ್ ಬೆಲ್ಟ್ ತಯಾರ್ ಮಾಡಿದ. ಸೈಜ್ ಕಮ್ಮಿ ಹೊಡೆತ ಜಾಸ್ತಿ. ಒಳ್ಳೆ ಜಪಾನೀಸ್ ತರಹ. ಮಿನಿಯೇಚರೈಸೆಶನ್ ಅಂತಾರಲ್ಲ. ಹಾಗೆ.

ಈ ತರಹ ತಯಾರ್ ಮಾಡಿದ ವಿಧವಿಧದ ಸೂಸೈಡ್ ಬೆಲ್ಟ್ ಹಾಕಿಕೊಂಡು ಹೋಗುತ್ತಿದ್ದ ಕಟ್ಟರ್ ಪ್ಯಾಲೆಸ್ಟೈನ್ ಹುಡುಗರು ಇಸ್ರೇಲ್ ಒಳಗೆ ಹೋಗಿ ದೊಡ್ಡ ಮಟ್ಟದ ವಿಧ್ವಂಸಕಾರಿ ಕೃತ್ಯ ಮಾಡುತ್ತಿದ್ದರು. ಕಡಿಮೆ ಕಡಿಮೆ ಅಂದರೂ 15-20 ಇಸ್ರೇಲಿಗಳು ಖಲಾಸ್. ಅದಕ್ಕೆ ಹಮಾಸ್ ದೊಡ್ಡ ಮಟ್ಟದ ಪಬ್ಲಿಸಿಟಿ ಕೊಡುತ್ತಿತ್ತು. ಅದರಿಂದ ಮತ್ತೊಂದಿಷ್ಟು ಮಂದಿ ತಯಾರ್ ಆಗುತ್ತಿದ್ದರು. ತಮ್ಮನ್ನು ತಾವೇ ಸ್ಪೋಟಿಸಿಕೊಳ್ಳಲಿಕ್ಕೆ ಮತ್ತು ಜೊತೆಗೆ ಮ್ಯಾಕ್ಸಿಮಮ್ ಇಸ್ರೆಲಿಗಳನ್ನು ಕೊಲ್ಲಲಿಕ್ಕೆ.

ಇಸ್ರೇಲಿಗೆ ದೊಡ್ಡ ತಲೆನೋವು. ಅರಬರಿಗೆ  ಬರಲೇ ಬೇಡಿ ಅನ್ನುವ ಹಾಗಿಲ್ಲ. ಯಾಕಂದ್ರೆ ಅವರೂ ಬೇಕು ಇಸ್ರೇಲಿ ಎಕೊನೊಮಿ ಮುಂದೆ ಹೋಗಲು. ಆದ್ರೆ ಕೆಲವರು ಈ ಪರಿ ಸೂಸೈಡ್ ಬಾಂಬ್ ಬೆಲ್ಟ್ ಕಟ್ಟಿಕೊಂಡು ಬರುತ್ತಾರೆ. ಕಂಡು ಹಿಡಿಯುವದೂ ಕಷ್ಟ. ಈ ಯಾಹ್ಯಾ ಅಯ್ಯಾಶ್ ಎಂತಹ ಜಾಣ ಅಂದ್ರೆ ಸೂಸೈಡ್ ಬೆಲ್ಟ್ ಕಿಟ್ಸ್ ತಯಾರ್ ಮಾಡಿದ್ದ. ಕಿಟ್ ತೊಗೊಂಡು ಹೋಗಿ ಆನ್ ಡಿಮಾಂಡ್ ಚಕಚಕ ಅಂತ ಅಸ್ಸೆಂಬಲ್ ಮಾಡಿಕೊಳ್ಳಬಹುದು. ಇದು ಇನ್ನೂ ದೊಡ್ಡ ತಲೆನೋವಾಗಿತ್ತು.

ಇದು ಇಸ್ರೇಲಿ ಇಂಟರ್ನಲ್ ಪ್ರಾಬ್ಲೆಮ್. ಹಾಗಾಗಿ ಶಿನ್-ಬೆಟ್ ಎಂಬ ಪೋಲಿಸ್ ಸಂಸ್ಥೆ ಡಿಟೇಲ್ ಆಗಿ ವಿಚಾರಣೆ ಶುರು ಮಾಡಿತು. ಹಿಂದೆ ಇರುವ ಕಾಣದ ಕೈ ಯಾಹ್ಯಾ ಅಯ್ಯಾಶ್ ಎಂಬವನದು ಅಂತ ಬೇಗ ತಿಳಿಯಿತು. ಆದ್ರೆ ಅವನನ್ನು ಹಿಡಿಯುವದು ಮಾತ್ರ ತುಂಬಾ ಕಷ್ಟವಾಗತೊಡಗಿತು.

ಹಮಾಸ್ ಅವನನ್ನು ತುಂಬಾ ಜಾಗರೂಕತೆಯಿಂದ ಕಾಯುತ್ತಿತ್ತು. ಅವರಿಗೆ ಅವನ ವ್ಯಾಲ್ಯೂ ಗೊತ್ತಾಗಿತ್ತು. ಅವನಿಂದಲೇ ಹಮಾಸ್ ಅಂದ್ರೆ ಇಸ್ರೇಲ್ ಬೆಚ್ಚಿ ಬೀಳುವ ಹಾಗೆ ಆಗಿತ್ತು. ಹಾಗಾಗಿ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿತ್ತು.

ಗಾಜಾ ಪಟ್ಟಿ ಅಥವಾ ವೆಸ್ಟ್ ಬ್ಯಾಂಕಿನಲ್ಲೇ ಇದ್ದುಕೊಂಡು ಕಿತಾಪತಿ ಮಾಡುವ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್ ಉಪಯೋಗಿಸುವ ಟೆಕ್ನಿಕ್ ಅಂದ್ರೆ ಸಂಬಂಧಿಗಳನ್ನು ಹಿಡಿದು ಅವರಿಗೆ ಕೊಡಬಾರದ ಕಾಟ ಕೊಟ್ಟು ಅವರ ಮೂಲಕ ಮಾಹಿತಿ ತೆಗೆಯುವದು.

ಉದಾಹರಣೆಗೆ ನೀವು ಒಬ್ಬ ಕಿತ್ತಳೆ ಬೆಳೆಗಾರ ಅಂದುಕೊಳ್ಳಿ. ಪೀಕು ರೆಡಿ ಇದೆ. ಕಿತ್ತಿ, ಪ್ಯಾಕ್ ಮಾಡಿ, ಇಸ್ರೇಲ್ ಮೂಲಕ ಹೊರಗೆ ರಫ್ತು ಮಾಡಬೇಕು. ಟೈಮ್ ಗೆ ಸರಿ ಮಾಡಲಿಲ್ಲ ಅಂದ್ರೆ ಪೂರ್ತಿ ಬೆಳೆ ಕೊಳೆತು ಹೋಗುತ್ತದೆ. ರಫ್ತು ಮಾಡಲು ಇಸ್ರೇಲಿ ಪರ್ಮಿಟ್ ಬೇಕು. ಹೋಗಿ ಕೇಳುತ್ತೀರಿ. ಪರ್ಮಿಟ್ ಬೇಕು ಅಂದ್ರೆ ನಿಮ್ಮ ಸಂಬಂಧಿಯಾದ ಆ ಉಗ್ರಗಾಮಿ ಬಗ್ಗೆ ಮಾಹಿತಿ ಕೊಡಿ ಅಂತ ಡೀಲ್ ಮಾಡುತ್ತಾನೆ ಆ ಕಡೆ ಕೂತ ಇಸ್ರೇಲಿ ಅಧಿಕಾರಿ. ಏನು ಮಾಡುತ್ತೀರಿ? ಮಾಹಿತಿ ಕೊಟ್ಟರೂ ರಿಸ್ಕ್ ಇದೆ. ಕೊಡಲಿಲ್ಲ ಅಂದ್ರೆ ಊಟಕ್ಕೆ ಗತಿ ಇಲ್ಲ. ಹೆಚ್ಚಿನ ಜನ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪುತ್ತಾರೆ. ಅಂಥವರು ಕೊಟ್ಟ ಮಾಹಿತಿ ಎಲ್ಲ ಕೂಡಿ ಹಾಕಿ ಇಸ್ರೇಲಿಗಳು ಉಗ್ರಾಗಾಮಿಗಳನ್ನು ಹಿಡಿದು ಮಟ್ಟ ಹಾಕುತ್ತಾರೆ. ಒಮ್ಮೊಮ್ಮೆ ಇದು ಹೊರಬಂದು ಮಾಹಿತಿ ಕೊಟ್ಟವರನ್ನು ಹಮಾಸ್ ತರಹದ ಸಂಘಟನೆಗಳೇ 'ಗದ್ದಾರ್' ಅಂತ ಬ್ರಾಂಡ್ ಮಾಡಿ ಕೊಲ್ಲುತ್ತವೆ. ಬೇರೆಯವರಿಗೆ 'ಹುಷಾರ್' ಅನ್ನೋ ವಾರ್ನಿಂಗ್ ಕೊಟ್ಟ ರೀತಿಯಲ್ಲಿ.

ಇದೇ ಟೆಕ್ನಿಕ್ ವೇರಿಯೇಶನ್ ಅಂದ್ರೆ ಆಮಿಷ ಒಡ್ಡುವದು. ಗಾಜಾ ಪಟ್ಟಿ, ವೆಸ್ಟ್ ಬ್ಯಾಂಕ್ ನಲ್ಲಿ ನಿರಾಶ್ರಿತರ ಜೀವನ ಮಾಡಿ ಸಾಕಾದವರಿಗೆ ಎಲ್ಲೋ ಅಮೆರಿಕಾದಲ್ಲೋ, ಕೆನಡಾದಲ್ಲೋ ಸೆಟಲ್ ಮಾಡಿ ಕೊಡುತ್ತೀವಿ ಅಂದ್ರೆ ದೊಡ್ಡ ಮಟ್ಟದ ಸೀಕ್ರೆಟ್ ಬಿಚ್ಚುತ್ತಾರೆ. ಎಷ್ಟೋ ಮಂದಿಯನ್ನು ಇಸ್ರೇಲ್ ಈ ತರಹ ಉಪಯೋಗಿಸಿಕೊಂಡು ಕೊಟ್ಟ ಮಾತಿಗೆ ತಪ್ಪದಂತೆ ನೆಡದುಕೊಂಡಿದೆ. ಕೆಲವೊಮ್ಮೆ ಹೊರಗೆ ಹೋದವರೇ, ಹುಟ್ಟು ಭೂಮಿ ಮೇಲಿನ ಪಾಶ ತಡಿಯಲಾಗದೆ ವಾಪಸ್ ಬರುವ ತಪ್ಪು ಮಾಡಿ, ಬಂದಾಗ ಉಗ್ರಾಗಮಿಗಳ ಕೈಗೆ ಸಿಕ್ಕು ಸಾಯಬಾರದ ಸಾವು ಸತ್ತಿದ್ದಾರೆ. ಎರಡು ದೊಡ್ಡ ಕೇಸಗಳನ್ನು ಓದಿದ್ದು ನನಗೇ ನೆನಪಿದೆ. ಅದರ ಸುದ್ದಿ ಮತ್ತೊಮ್ಮೆ.

ಇನ್ನೊಂದು ಟೆಕ್ನಿಕ್ ಅಂದ್ರೆ ಉಗ್ರಗಾಮಿಗಳಿಗೆ ಬೇಕಾದವರನ್ನು ಹಿಡಿದು ಅವರನ್ನು ಅಮುಕ ಬಾರದ ರೀತಿಯಲ್ಲಿ ಅಮುಕಿ ಅದು ಉಗ್ರವಾದಿಗಳಿಗೆ ತಿಳಿಯುವಂತೆ ಮಾಡುವದು. ತಮ್ಮನನ್ನೋ, ತಂಗಿಯನ್ನೋ, ಹೆಂಡತಿಯನ್ನೋ ಕರೆದುಕೊಂಡು ಬಂದು ಇಸ್ರೇಲಿಗಳ ಸ್ಪೆಷಾಲಿಟಿ ಥರ್ಡ್ ಡಿಗ್ರೀ ಟಾರ್ಚರ್ ಶುರು ಮಾಡಿ ಉಗ್ರಗಾಮಿಗೆ ಸುದ್ದಿ ಮುಟ್ಟಿಸಿದರೆ, ಎಂತವರೂ ಡೀಲಿಗೆ ಬಂದು ಕೂಡುತ್ತಾರೆ. ನಿಮಗೆ ನೆನಪಿರಬಹುದು. 1994-96 ರ ಮಾತು. ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಕಿಡ್ನಾಪ್ ಆದ ವಿದೇಶಿಯರಲ್ಲಿ ಕೆಲವು ಇಸ್ರೆಲಿಗಳೂ ಇದ್ದರು. ಭಾರತ ಮತ್ತು ಇತರ ದೇಶಗಳು ತಮ್ಮ ತಮ್ಮ ದೇಶದ ಪ್ರಜೆಗಳನ್ನು ಹೇಗೆ ಬಿಡಿಸಿಕೊಳ್ಳಬೇಕು ಅಂತ ಯೋಚಿಸುತ್ತಿದ್ದರೆ, ಇಸ್ರೇಲ್ ಆಗಲೇ ಮಾಹಿತಿ ತೆಗೆದು ಆ ಉಗ್ರರಿಗೆ ಹೇಗೋ ಬೇಕಾಗಿದ್ದ, ಸಂಬಂಧಪಟ್ಟಿದ್ದ ಮಂದಿಯನ್ನೋ, ವ್ಯಾಪಾರವನ್ನೋ ಹಿಡಿದು ಸರಿಯಾಗಿ ತಿಕ್ಕುತ್ತಿತ್ತು. ಅರಬ್ ಕೊಲ್ಲಿಯ ಸುತ್ತ ಮುತ್ತ ಎಲ್ಲೋ ಬಿಸಿ ಮಾಡಿದ್ದರೆ, ಇಲ್ಲಿ ಕಾಶ್ಮೀರದಲ್ಲಿ ಬೆಣ್ಣೆ ಕರಗುತ್ತಿತ್ತು. ಹಾಗೆ ಮಾಡಿಯೇ ತಮ್ಮ ಪ್ರಜೆಗಳನ್ನು ಇಂಡಿಯಾ ಅಥವಾ ಪಾಕಿಸ್ತಾನಕ್ಕೆ ಕಾಲಿಡದೆ ಬಿಡಿಸಿಕೊಂಡವರು ಇಸ್ರೇಲಿಗಳು. ಆಮೇಲೆ ಬೇರೆ ದೇಶದವರ ಪರವಾಗಿಯೂ ಅವರೇ ಸಂಧಾನ ಮಾಡಿ ಬಿಡಿಸಿಕೊಟ್ಟರು ಅಂತ ಸುದ್ದಿ ಆಗಿತ್ತು. ಅದು ಇಸ್ರೇಲಿಗಳ ಕರಾಮತ್ತ್. ಅದು ಅವರ ಹಿಮ್ಮತ್. ಅದು ಅವರ ಕ್ಯಾಪಾಸಿಟಿ. ಹಾಟ್ಸ್ ಆಫ್!

ಇದೇ ಟೆಕ್ನಿಕ್ ಉಪಯೋಗಿಸಿದರು ಈ ಯಾಹ್ಯಾ ಅಯ್ಯಾಶ್ ನನ್ನು ಹಣಿಯಲು.

ಯಾರೋ ಒಬ್ಬ ಪ್ಯಾಲೆಸ್ಟೈನಿ ಸಿಕ್ಕ. ಅವನ ಸಂಬಂಧಿಯೊಬ್ಬ  ಯಾಹ್ಯಾ ಅಯ್ಯಾಶ್ ನ ಖಾಸಮ್ ಖಾಸ್ ಗೆಳೆಯ. ಈ ಸಂಬಂಧಿಗೆ ಗಾಜಾ ಪಟ್ಟಿ ಬಿಟ್ಟು ಬೇರೆ ಎಲ್ಲೋ ಹೊರಗೆ ಸೆಟಲ್ ಆಗಬೇಕಿತ್ತು. ಇಸ್ರೇಲಿಗಳು ಆಗಲಿ ಅಂದರು. ಅದಕ್ಕೆ ಪ್ರತಿಯಾಗಿ ನಾವು ಒಂದು ಮೊಬೈಲ್ ಕೊಡುತ್ತೇವೆ. ಅದನ್ನು ಯಾಹ್ಯಾ ಅಯ್ಯಾಶ್ ಗೆ ಮುಟ್ಟಿಸಬೇಕು ಅಂತ. ಅವನು ಓಕೆ ಅಂದ.

ಈ ಕಡೆ ಗದ್ದಾರ್ ಪ್ಯಾಲೆಸ್ಟೈನಿ ಮತ್ತು ಅವನ ಕುಟುಂಬವನ್ನು ಹೊರಗೆ ಸಾಗಿಸುವ ಕೆಲಸ  ಇಸ್ರೇಲಿಗಳು ಶುರು ಮಾಡಿದರು. ಮತ್ತೊಂದು ಕಡೆ ಇಸ್ರೇಲಿ ಇಂಜಿನಿಯರ್ ಗಳು ಒಂದು ಮೊಬೈಲ್ ಫೋನ್ ತಂದು ಅದನ್ನು ರಿಮೋಟ್ ಕಂಟ್ರೋಲ್ ಬಾಂಬಾಗಿ ಪರಿವರ್ತಿಸುವ ಕಾರ್ಯ ಶುರು ಮಾಡಿದ್ದರು. ಎಲ್ಲೆಲ್ಲೋ ಬಾಂಬ್ ಫಿಟ್ ಮಾಡುವ ಅವರಿಗೆ ಅದು ದೊಡ್ಡ ಮಾತಾಗಿರಲಿಲ್ಲ. ಅಷ್ಟೇ ಕಾಣಬಾರದು ಹಿಂದಿನ ಕವರ್ ತೆಗೆದರೆ. ಆಗಿನ ಕಾಲದ ಮೊಬೈಲ್ ಫೋನ್ ಗಳು ಸ್ವಲ್ಪ ದೊಡ್ಡ ಸೈಜಿನವು ಇರುವದು ಒಳ್ಳೆಯದೇ ಆಯಿತು.

ಏನೋ ಪೊರಪಾಟಿನಲ್ಲಿ ಅಂತೂ ಇಂತೂ ಫೋನ್ ಹೋಗಿ ಮುಟ್ಟಿತು. ಯಾಹ್ಯಾ ಅಯ್ಯಾಶ್ ಅದನ್ನು ಉಪಯೋಗಿಸಲು ಶುರು ಮಾಡಿದ. ಬೇಕಂತಲೇ ಅವನ ಮೇಲಿನ ಕಾರ್ಯಾಚರಣೆ ಸ್ವಲ್ಪ ಕಮ್ಮಿ ಮಾಡಲಾಯಿತು. ಅವನಿಗೂ ಅನ್ನಿಸಬೇಕು - ಈ ಫೋನ್ ಸೇಫ್ - ಅಂತ. ಅವನಿಗೇನು ಗೊತ್ತಿತ್ತು ತನ್ನ ಫೋನೇ ತನಗೆ ಮುಳುಗಡೆ ತರಲಿದೆ ಅಂತ.

ಮುಹೂರ್ತದ ದಿನ ಬಂದೇ ಬಿಟ್ಟಿತು. ವಾಡಿಕೆಯಂತೆ ತಂದೆಯೊಂದಿಗೆ ಮಾತಾಡುತ್ತಿದ್ದ. ಕಾಲ್ ಆಲಿಸುತ್ತಿದ್ದರು ಇಸ್ರೇಲಿಗಳು. ಯಾಹ್ಯಾ ಅಯ್ಯಾಶ್ ಅಂತ ಖಚಿತ ಮಾಡಿಕೊಂಡವರೇ ಅದರಲ್ಲಿದ್ದ ಅತಿ ಚಿಕ್ಕ RDX ಬಾಂಬನ್ನು ರಿಮೋಟ್ ಕಂಟ್ರೋಲ್ ಮುಖಾಂತರ ಸ್ಪೋಟಿಸಿಯೇ ಬಿಟ್ಟರು. ಚಿಕ್ಕ ಟಪ್ಪ್ ಅಂತ ಶಬ್ದ. ಫೋನ್ ಹಿಡಿದ ಕಡೆಯ ತಲೆಯ ಭಾಗದಲ್ಲೊಂದು ದೊಡ್ಡ ದೊಗರು. ಭೇಜಾ ಬಾಹರ್. ಆದ್ಮಿ ಊಪರ್. ಖೇಲ್ ಖತಂ.

ಈ ಕಡೆ ಫೋನ್ ಕೊಟ್ಟು ಗದ್ದಾರಿ ಮಾಡಿದವ ಕುಟುಂಬ ಸಮೇತ ಟೆಲ್-ಅವಿವ್  ನಲ್ಲಿ ಅಂತರಾಷ್ಟ್ರೀಯ ವಿಮಾನ ಹತ್ತುತ್ತಿದ್ದ. ಕೊಟ್ಟ ಮಾತು ಉಳಿಸಿಕೊಂಡಿದ್ದರು ಇಸ್ರೇಲಿಗಳು. ಮುಂದೆ ಸಿಟ್ಟಿಗೆದ್ದ "ಹಮಾಸ್" ಅವನ ಮೇಲೆ ಸುಪಾರಿ ಕೊಟ್ಟಿತ್ತು. ಏನಾಯಿತೋ ಗೊತ್ತಿಲ್ಲ.

ಹೀಗೆ - ನೀನು ಇಂಜಿನಿಯರ್ ಆದ್ರೆ, ನಾವು ನಿಮ್ಮಪ್ಪನಂತಹ ಇಂಜಿನಿಯರ್ ಗಳು - ಅಂತ ಇಸ್ರೇಲಿಗಳು ಕರೆಕ್ಟಾಗಿ ಟಾಂಗ್ ಕೊಟ್ಟಿದ್ದರು.

ಯಾಹ್ಯಾ ಅಯ್ಯಾಶ್ ಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕಿನಲ್ಲಿ ದೊಡ್ಡ ಮಟ್ಟದ ಸಪೋರ್ಟ್ ಇತ್ತು. ಅವನು ಒಂದು ಕಲ್ಟ್ ಫಿಗರ್ ತರಹ ಆಗಿಹೋಗಿದ್ದ. ಅವನ ಅಂತ್ಯಕ್ರಿಯೆಗೆ ಲಕ್ಷಾಂತರ ಜನ ಸೇರಿದ್ದರು. ದೊಡ್ಡ ದೊಡ್ಡ ಪ್ಯಾಲೆಸ್ಟೈನ್ ನಾಯಕರು ಬಣ ಭೇದ ಮರೆತು ಬಂದಿದ್ದರು. ಯಬಡೇಶಿ  ಯಾಸೀರ್ ಅರಾಫತ್ ಕೂಡ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ ಮಂಗ್ಯಾ ಆದರು. ನೀವು ಒಂದು ಕಡೆ ಶಾಂತಿ ಶಾಂತಿ ಅನ್ನುತ್ತೀರಿ. ಇನ್ನೊಂದು ಕಡೆ ಯಾಹ್ಯಾ ಅಯ್ಯಾಶ್ ನಂತಹ ಪಕ್ಕಾ ಉಗ್ರಗಾಮಿ ಸತ್ತರೆ ನಿಮಗೇ ವೈಧವ್ಯ ಬಂದಂತೆ ಅಳುತ್ತೀರಿ. ಡಬಲ್ ಸ್ಟ್ಯಾಂಡರ್ಡ್ ನಿಮ್ಮದು - ಅಂತ ಇಸ್ರೇಲ್, ಅಮೇರಿಕಾ, ಬ್ರಿಟನ್ ಅರಾಫತ್ ಅವರಿಗೆ ಝಾಡಿಸಿದವು. ದೇಶಾವರಿ ನಗೆ ಹುಳ್ಳಗೆ ನಕ್ಕರು ಅರಾಫತ್. ಮನೆಗೆ ಬೆಂಕಿ ಹತ್ತಿದರೆ ಅದರಲ್ಲಿ ಬೀಡಿ ಹಚ್ಚೋ ಕೆಲಸ ಅವರಿಗೆ ಹೇಳಿ ಕೊಡಬೇಕಿಲ್ಲ. ಎಕ್ಸ್ಪರ್ಟ್ ಅವರು. ಯಾಹ್ಯಾ ಅಯ್ಯಾಶ್ ನನ್ನು ದೊಡ್ಡ ಹುತಾತ್ಮ ಅಂತ ತೋರಿಸಿ ತಮ್ಮ ಬೇಳೆ ಮತ್ತೊಂದು ಬೇಯಿಸಿಕೊಳ್ಳುವ ಇರಾದೆ ಅವರದು.

ಯಾಹ್ಯಾ ಅಯ್ಯಾಶ್ ಹೆಸರಿನಲ್ಲಿ ರೋಡು, ಬಡಾವಣೆ  ಎಲ್ಲ ಆದವು. ಹಮಾಸ್ ಮುರಕೊಂಡು ಬಿದ್ದು ಒಂದೆರಡು ತಿಂಗಳಲ್ಲಿ 60-70 ಇಸ್ರೇಲಿಗಳನ್ನು ಸೂಸೈಡ್ ಬಾಂಬಿಂಗ್ ಗಳಲ್ಲಿ ಕೊಂದಿತು. ಅದು ಎಂದೂ ಮುಗಿಯದ ಕಲಹ.

ಹೆಚ್ಚಿನ ಮಾಹಿತಿಗೆ:

ಯಾಹ್ಯಾ ಅಯ್ಯಾಶ್

The Hunt for the Engineer by Samuel Katz - ಸಕ್ಕತ್ ಪುಸ್ತಕ. ಕಾರ್ಯಾಚರಣೆಯ ಫುಲ್ ಡಿಟೆಲ್ಸ್ ಇವೆ. ಒಳ್ಳೆ ಥ್ರಿಲ್ಲರ್ ಕಾದಂಬರಿ ತರಹ ಓದಿಸಿಕೊಂಡು ಹೋಗುತ್ತದೆ.

ಒಂದು ಸಿನೆಮಾ ಕೂಡ ಬಂದಿತ್ತು. ಸಣ್ಣ ಬಜೆಟ್ಟಿನದು. ಓಕೆ ಅನ್ನುವ ಹಾಗಿತ್ತು. youtube ಮೇಲೆ ಸುಮಾರು ವಿಡಿಯೋಸ್ ಇವೆ. ಬೇಕಾದ್ರೆ ನೋಡಿ.

No comments: